Feb 182013
 

ಈ ಸಮಸ್ಯೆಯ ಉಳಿದ ಸಾಲುಗಳನ್ನು ಒದಗಿಸಿ ಸಮಸ್ಯೆಯನ್ನು ಪರಿಹರಿಸಿ

ಸಂಸ್ಕೃತದಲ್ಲಿ

दश भवन्ति मनोभवसायकाः   (द्रुतविलम्बिता)

ಕನ್ನಡದಲ್ಲಿ ಪೂರಣ ಮಾಡಬಯಸುವವರಿಗೆ

ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ

ಅಥವಾ

ಮನ್ಮಥನ ಬಳಿ ಹತ್ತುಬಾಣಗಳಿರುವುದೇ ನಿಜವೈ  (ಭಾಮಿನೀ ಷಟ್ಪದಿ)

 

Nov 042011
 

ರಾಮಾಯಣ, ಮಹಾಭಾರತ, ಕಾಳಿದಾಸನ ಮಹಾಕಾವ್ಯಗಳೆಲ್ಲವನ್ನೂ ಮೂಲದಲ್ಲಿ ಓದಿ ಮುಗಿಸಿದ ಗೆಳೆಯನ ಕುರಿತು ಬರೆದ ಪದ್ಯಗಳು ::

ಮೇಲೆ ತೇಲುತ ಸಾಗರಂಗಳ
ಮೂಲೆಯಲ್ಲಳುಕುತ್ತ ಮೆರೆಯದೆ
ಆಳಗಳನೆಲ್ಲವನು ಶೋಧಿಸಿ ಮಥಿಸಿದಾ ಶೂರ |
ಮೂಲ ಗ್ರಂಥಂಗಳ ಪಠನವೀ
ಕಾಲಗಳಲಪರೂಪವಾಗಿರೆ
ಪಾಲು ಕದಳೀ ಫಲದವೋಲ್ ಕಳೆದಿರ್ಪನೀ ಧೀರ ||

ಪರುಠವಿಸುತ ಕುಶಾಗ್ರಮತಿಯ -
ನ್ನರಸಿ ಸತ್ಯಾಂಶಂಗಳೆಳೆಗಳ -
ನೆರಕವೆರೆದಿಹ ತರ್ಕಗಳ ಚಿರ ತತ್ವಗಳ ಬೆಳಗಿ |
ಸರಸ  ಹಾಸದ ಸರಳ ಸಖ ಸುಮ -
ಧುರ ಸರಾಗ ಗುಣಂಗಳಾ ಗಣಿ
ಹರಳೊ ಮುತ್ತಿನ ಮಣಿಯೊ ಹವಳದ ಶಿಲೆಯೊ ನಾನರಿಯೆ ||

Oct 262011
 

ಚತುರ್ವಿಧ ಕಂದವೆಂದರೆ, ಒಂದೇ ಕಂದಪದ್ಯವನ್ನು ವಿವಿಧ ರೀತಿಗಳಲ್ಲಿ ವಿಭಜಿಸಿ ಅರ್ಥಭಂಗವಾಗದಂತೆ ಮತ್ತಷ್ಟು ಕಂದಪದ್ಯಗಳನ್ನು ರಚಿಸುವ ಪ್ರಕ್ರಿಯೆ.

ಇಲ್ಲಿ ಮೊದಲಪದ್ಯವೇ ಕೀಲಕ. ಮೊದಲಪದ್ಯದಲ್ಲಿ (೧), ಘನಶಾಸ್ತ್ರ ವೆಂಬ ಎರಡನೆಯ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ಎರಡನೆಯ ಕಂದಪದ್ಯವನ್ನೂ, ಸ್ಫುರಧೀ ವೆಂಬ ಮೂರನೇ ಸಾಲಿನ ಮೊದಲ ಪದದಿಂದ ಪ್ರಾರಭಿಸಿ ಮೂರನೇ ಕಂದಪದ್ಯವನ್ನೂ,  ದಿನಕರ ಎಂಬ ನಾಲ್ಕನೇ ಸಾಲಿನ ಎರಡನೆಯ ಪದದಿಂದ ಪ್ರಾರಭಿಸಿ ನಾಲ್ಕನೇ ಕಂದಪದ್ಯವನ್ನೂ ಬಿಡಿಸಿ ರಚಿಸೆದೆ. ಮೊದಲ ಪದ್ಯದಲ್ಲಿನ ಪದಗಳೇ ನಾಲ್ಕೂಪದ್ಯಗಳಲ್ಲಿ ಪುನರಾವೃತ್ತಿಯಾಗದೆ,  ಬೇರೆ ಪದಗಳನ್ನು ಸೇರಿಸದೆ ರಚನೆಯಾಗಿರುವುದು ವಿಶೇಷ.

ಒದ್ವೇಟಿ ವೆಂಕಟಕೃಷ್ಣಯ್ಯ ಎಂಬ ಕವಿ, ಆಗಿನ ಗದ್ವಾಲ್ ಪ್ರಭು, ಸೀತಾರಾಮ ಭೂಪಲನನ್ನು ಕುರಿತ ರಚನೆಯ ಸ್ಪೂರ್ತಿಯಿಂದ, ಮೂಡಿದೆ ಈ  ಚತರ್ವಿಧ ಕಂದ.  ಕಂದ ಪದ್ಯದ ವಸ್ತು ನಮ್ಮ ಗಣೇಶರೇ. ಅವರೇ ಹೇಳಿದಂತೆ ಇಂಥ ಚಿತ್ರಕವಿತ್ವ, ದೀಪಾವಳಿಯ ನಾಲ್ಕುಸುತ್ತಿನ ಪಟಾಕಿಯಾದರೂ, ಸರ್ಕಸ್ಸಿನ ಕ್ಷಣಿಕಲಾಭ ಇದ್ದದ್ದೇ.

ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ
ಸ್ಫುರಧೀ
ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ  (೧)

ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವಧಾನೇಶ್ವರಗಂ
ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ  (೨)

ಸ್ಫುರಧೀ ಶತಾವಧಾನೇ
ಶ್ವರಗಂ ದಿನಕರ ಸುತೇಜ ನಮನಂ ನಿನಗೈ
ವರವಾಣಿ ವಿಭವ ಲಕ್ಷಣ
ಭರಿತಾ ಘನಶಾಸ್ತ್ರ ವೇದ್ಯ ವರಜನ ವಿನುತಾ (೩)

ದಿನಕರ ಸುತೇಜ ನಮನಂ
ನಿನಗೈ ವರವಾಣಿ ವಿಭವ ಲಕ್ಷಣ ಭರಿತಾ
ಘನಶಾಸ್ತ್ರ ವೇದ್ಯ ವರಜನ
ವಿನುತಾ ಸ್ಫುರಧೀ ಶತಾವ ಧಾನೇ ಶ್ವರಗಂ (೪)

Oct 242011
 

ಕಂದವ ರಚಿಸಲ್ ಯತ್ನಿಸಿ

ಚಂದದಿ ಭಾಮಿನಿಯ  ತನ್ನ ಮನದೊಳ್ ಮೊದಲೊಳ್

ಕುಂದಿರದೆಯೆ ನಿಲಿಸಿರಬೇ

ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್

 

the above one is with corrections from ganesh sir.

it was earlier as

ಕಂದವ ರಚಿಸಲ್ ಯತ್ನಿಸಿ
ಚಂದದಿ ಭಾಮಿನಿಯ ಪೂರ್ವದಲಿ ತನ್ನ ಮನದ
ಬಂದನದೊಳು ನಿಲಿಸಿರಬೇ
ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್
Oct 202011
 

ಕಂದ ಛಂದಸ್ಸಿನ ಸಮಸ್ಯಾಪದ್ಯದ ನಾಲ್ಕನೆಯ ಸಾಲು ಹೀಗಿದೆ ::

ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

ಮೊದಲ ಮೂರು ಸಾಲುಗಳನ್ನು ಪೂರೈಸಿರಿ.

ವಿ.ಸೂ ::‌ ಈ ಸಮಸ್ಯೆಯು ಗಣೇಶರಿಂದ ಸಿಕ್ಕದ್ದು

Oct 162011
 

ಕೆಳಗಿನ ಸಾಲು ಕಂದ ಪದ್ಯದ ಕೊನೆಯ ಸಾಲು. ಮೇಲಿನ ಮೂರು ಸಾಲುಗಳನ್ನು ಪೂರೈಸಿರಿ ::

ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ!

(ಕಮಲ ಮತ್ತು ಚಂದ್ರರಿಗೆ ಹೊಂದಿಕೆಯಿಲ್ಲವೆಂಬ ಕವಿಸಮಯವನ್ನು ಆಧರಿಸಿದ ಸಮಸ್ಯೆಯಿದು)

ವಿ.ಸೂ ::‌ ಇದು ಗಣೇಶರು ನೀಡಿದ ಸಮಸ್ಯೆ

ಕಂದ ಪದ್ಯದ ಛಂದಸ್ಸಿನ ವಿವರಣೆ ಇಲ್ಲಿದೆ

Oct 112011
 

ಕಂದ ಛಂದಸ್ಸಿನ ಪದ್ಯದ ಕೊನೆಯ ಸಾಲು ಹೀಗಿದೆ ::

ಫಲಮಂ ತಿನಲಪ್ಪುದೇಂ ರಸಾಲಫಲದವೊಲ್?
(ರಸಾಲ= ಮಾವು)

ಮೊದಲ ೩ ಸಾಲುಗಳನ್ನು ಪೂರೈಸಿರಿ

ಕಂದ ಪದ್ಯದ ಛಂದಸ್ಸಿನ ಸ್ವರೂಪ ಇಲ್ಲಿದೆ

ವಿ.ಸೂ :: ಇದು ಗಣೇಶರು ಕೊಟ್ಟ ಸಮಸ್ಯೆ

Oct 042011
 

ಈ ದ್ರಕಾರವಿದೇನು? ಈ ಸಮಸ್ಯೆಯದೇನು?
ಕ್ಷುದ್ರವೋ ರಸಯುತವೊ ತಿಳಿಯದಾಯ್ತು
ಅದ್ರಿಜೆಯೆ ಸಾಕ್ಷಿ ನಾ ಪೂರಣವಗೈದಿಲ್ಲ
“ಭದ್ರಕಾಳಿಯು ಬೆದರಿ ಮಾಯವಾದಳ್”

Oct 012011
 

ಹುಲ್ಲುಕಲ್ಲುಗಳೇನು? ಅದುಕೂಡ ಹೂರಣದಿ!
ಗುಲ್ಲನೆಬ್ಬಿಸದೆಯೇ ಬಿಡುವರೇನು?
ಬಲ್ಲಿದರೆ, ಸೊಲ್ಲನಡಗಿಸುವಿರೇ? – “ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು”

ಸ್ನೇಹಿತರೆ, ೩ನೆಯ ಸಾಲನ್ನೂ ಸ್ವಲ್ಪ ತಿಂದಿದ್ದೇನೆ. ೩ನೇ ಸಾಲು “ಹೂರಣದಿ” ಮುಗಿವಂತೆ, ೪ನೇ ಸಾಲು “ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು” ಎಂಬುದಾಗಿ ಬರುವಂತೆ ಪರಿಹರಿಸಿ.

Sep 292011
 

ಅನುರೂಪದಾ ಪಂಚಮಾತ್ರೆಗಳ ಚೌಪದಿಯ -
ಲನುಭಾವದಿಂದೀ ಸಮಸ್ಯೆ ಬಿಡಿಸಿ |
ತನುವಿಶೇಷದೊಳಿರುವುದಶ್ಲೀಲತೆಯೆ ಭಾಸ

“ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ||

ಇದು ಸದ್ಯದಲ್ಲಿ ನಡೆದ ಅಷ್ಟಾವಧಾನದಲ್ಲಿ ಕೊಟ್ಟ ಸಮ್ಮಸ್ಯೆ.. ಅಶ್ಲೀಲದಂತೆ ತೋರುವ ಮೇಲಿನ ಸಾಲಿನ (ಕೊನೆಯ ಸಾಲು) ಹಿಂದಿನ ೩ ಸಾಲುಗಳನ್ನು ಪೂರೈಸಿರಿ.

ಪದ್ಯ ಓದುವ ಧಾಟಿ