Feb 262012
 

ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::

  52 Responses to “ಪದ್ಯಸಪ್ತಾಹ – ೯ – ಚಿತ್ರಕ್ಕೆ ಪದ್ಯ”

  1. ಈ ಚಿತ್ರದಲ್ಲಿರುವುದು (ಬಹುತೇಕ) ಸೀ ಗಲ್ ಎಂಬೊಂದು ಪಕ್ಷಿ. ಸಮುದ್ರದ ತಡಿಯಲ್ಲಿ ಇದರ ಆವಾಸ. ಮೀನು ಏಡಿ ಮುಂತಾದವುಗಳೆ ಇದರ ಆಹಾರ. ಈ ಹಕ್ಕಿಯನ್ನು ಬಕಕ್ಕೆ ಸಮೀಕರಿಸಿ ಮತ್ಸ್ಯಾವತಾರದ ಸಂದರ್ಭಕ್ಕೆ ಹೊಂದಿಸಿ ಈ ಪದ್ಯವನ್ನು ಕಟ್ಟಿದ್ದೇನೆ.

    ಮೀರೆ ಮನುವಿನ ಬೊಗಸೆಯಳವನು
    ದಾರ ಗಾತ್ರದ ಮತ್ಸ್ಯ ರೂಪನ
    ಸೇರು ತೊಟ್ಟಿಯನೆನುತ ಕುವರನು ದಯದಿ ಕರೆತರಲು
    ಹಾರಿ ಬಂದನು ನಿಖಿಲವೇದಾ
    ಗಾರನನು ಆಶಾತುರನು ಅಪ
    ಹರಿಸಿ ಆರೋಗಿಸಲು ತವಕದಿ ಆ ಬಕಾಸುರನು

    • ತಮಗೆ ಸ್ವಾಗತ.

      ಪದ್ಯಗತಿಯೂ ಕಲ್ಪನೆಯೂ ಸೊಗಸಾಗಿವೆ. ಕೇವಲ ಕಡೆಯ ಸಾಲಿನಲ್ಲೆ ಮೊದಲಿಗೆ ಗಜಪ್ರಾಸ ಬರಬೇಕಿದ್ದುದು ಸಿಂಹಪ್ರಾಸವಾಗಿದೆ. ಅದನ್ನು ಸ್ವಲ್ಪ ಸವರಿಸಿದರಾಯಿತು:

      ಗಾರನನು ಭಕ್ಷ್ಯಾತುರನದೋ
      ಹಾರಿಸುತ್ತಾರೋಗಿಸಲು ತವಕದಿ ಬಕಾಸುರನು

      • ಮಹಾಭಾರತದ ಬಕಾಸುರನು ಮಹಾತಿಂಡಿಪೋತ – ಭಕ್ಷ್ಯಾತುರನೆಂದದ್ದು hitting the nail on the head. ಮೇಲಾಗಿ, ‘ಅದೋ’ ಎಂದದ್ದು changes the tone of the verse from that of a report to one of a running commentary and, in my humble opinion, mirrors the movement in the picture infinitely better. But then, ಗುರುವಲ್ತೆ ನೀಂ?

        ನಿಮ್ಮ ಮೆಚ್ಚುನುಡಿಯೆನ್ನ ದಾರಿದೀವಿಗೆ. ಮಣಿದಪೆಂ.

  2. ಮ೦ದಿಗಳ್ ಪಸಿವ ನೀಗಿಸಲ್ಕೆ ಕಾ-
    ಳೊ೦ದನು೦ ನೆಲಕೆ ಬೀಳಲೊಲ್ಲರು೦
    ನಿ೦ದಿಪರ್ ಕೆಲವರನ್ನವನ್ನು ತೇ-
    ಗೊ೦ದರಿ೦ ರವವ ಮಾಡುತಿರ್ದರು೦

    ಕೆಲವರ್ ಅನ್ನವನ್ನು

    • ಕಲ್ಪನೆ ಸೊಗಸಾಗಿದೆ. ಆದರೆ ವ್ಯಾಕರಣದ ಹದ ಸ್ವಲ್ಪ ಬೇಕು:-)
      ಬೀಳಲೊಲ್ಲರುಂ ಎನ್ನುವಲ್ಲಿ ತಪ್ಪಾಗಿದೆ. ಅದು ಪ್ರೇರಣಾರ್ಥಕವಾಗಬೇಕು. ಬೀಳಿಸಲೊಲ್ಲರ್ ಎನ್ನುವುದು ಸಾಧುರೂಪ. ಆದರೆ ಛಂದಸ್ಸು ಸ್ವಾಗತದತ್ತ ಸಾಗುತ್ತದೆ. ಅಡ್ಡಿಯಿಲ್ಲ, ನಾಲ್ಕನೆಯ ಸಾಲನ್ನೂ ಹೀಗೆಯೇ ತಿದ್ದಿದರೆ ಆದೀತು:-):
      …………..ಮಾಡುತಲಿರ್ಪರ್!! ಇದು ಈಗ ರಥೋದ್ಧತಾ-ಸ್ವಾಗತವೃತ್ತಗಳ ಮಿಶ್ರಣವಾದ ಒಂದು ಉಪಜಾತಿವರ್ಗವಾಗುವುದು. ಅಥವಾ ಇದನ್ನೊಂದು ಅರ್ಧಸಮವೃತ್ತವೆಂದೂ ಹೇಳಬಹುದು. ರತೋದ್ಧತಾ ಎಂದೋ ಗತೋದ್ಧತಾ ಎಂದೋ ಹೆಸರಿಸಬಹುದು.

      • ಗಣೇಶ್ ಸರ್,
        ಸರಿಪಡಿಸಿದ್ದೇನೆ

        ಮ೦ದಿಗಳ್ ಪಸಿವ ನೀಗಿಸಲ್ಕೆ ಕಾ-
        ಳೊ೦ದನು೦ ನೆಲಕೆ ಬೀಳಿಸಲೊಲ್ಲರ್
        ನಿ೦ದಿಪರ್ ಕೆಲವರನ್ನವನ್ನು ತೇ-
        ಗೊ೦ದರಿ೦ ರವವ ಮಾಡುತಲಿರ್ಪರ್

        ರಥೋದ್ದತದ ಮತ್ತು ಸ್ವಾಗತದ ಮಿಶ್ರಣ ಬಹಳ ಚೆನ್ನಾಗಿ ಕೇಳಿಸುತ್ತದೆ:)

  3. ನೆಳಲು ಬೆಳಕಿನ ಮಂದ ಲಾಂದ್ರ
    ದೊಳಡಗಿ ಹುಡುಕಲು ಚಹರೆ ಹತ್ತದು
    ಘಳಿಗೆ ಸೈರಿಸೆಯಾದರೊಮ್ಮೆಗೆ ಗುರುತು ಹಿಡಿದಪೆನು |
    ನಳಿನಮುಖಿಯಳ ಬೊಗಸೆಕೈ
    ಗಳಲಿರುವ ಹಾರವ ತಿನ್ನಬಂದೆಯೆ ?
    ಮೊಳಗುವೆನ್ನಯ ಮಾತನಾಲಿಸಿ ಬೆದರದೆನ್ನುವೆನು ||

    • ಕಲ್ಪನೆ ಪರವಾಗಿಲ್ಲ ಭಟ್ಟರೆ, ಆದರೆ ಮೊದಲ, ನಾಲ್ಕನೆಯ ಹಾಗೂ ಐದನೆಯ ಸಾಲುಗಳಲ್ಲಿ ಛಂದಸ್ಸು ತಪ್ಪಾಗಿದೆ. ದಯಮಾಡಿ ಸವರಿಸಿರಿ

      • ಓದುವಾಗ ಸರಿಯಿರುವಂತಿದೆ. ಆದರೆ ಆದಿಪ್ರಾಸಕ್ಕಾಗಿ ಹಿಂದಿನ ಸಾಲಿನ ಕೆಲವು ಮಾತ್ರೆಗಳನ್ನು ಮುಂದಿನ ಸಾಲಿಗೆ promote ಮಾಡಿದಂತಿದೆ 🙂
        ಮೊದಲೆರಡು ಸಾಲು ಹಾಗು ೪,೫ ನೆಯ ಸಾಲುಗಳಲ್ಲು ಇದೇ ಆಗಿದೆ.

      • ಧನ್ಯವಾದಗಳು,
        ಬೇರೇ ಕೆಲಸದ ಒತ್ತಡಗಳ ಮಧ್ಯೆ ಬರೆದ ಪದ್ಯಗಳು ಕೆಲವೊಮ್ಮೆ ಗತಿತಪ್ಪುತ್ತವೆ ಎಂಬುದಕ್ಕೆ ನಿನ್ನೆಯ ನನ್ನ ಪ್ರಯತ್ನಗಳು ಉದಾಹರಣೆ. ಮತ್ತೊಮ್ಮೆ ಪ್ರಯತ್ನಿಸಿದ್ದೇನೆ, ದಯವಿಟ್ಟು ಪರಿಶೀಲಿಸಿ:

        ನೆಳಲುಬೆಳಕಿನ ಹುದುಗುದೀಪ-
        ದೊಳಡಗಿ ಹುಡುಕಲು ಚಹರೆ ಹತ್ತದು
        ಘಳಿಗೆ ಸೈರಿಸೆಯಾದರೊಮ್ಮೆಗೆ ಗುರುತು ಹಿಡಿದಪೆನು |
        ನಳಿನಮುಖಿಯಳ ಹೊಳೆವಕರ-
        ಗಳ ಹಾರ ತಿನ್ನಲು ಹಾರುತೀಕಡೆ
        ಮೊಳಗುವೆನ್ನಯ ಮಾತನಾಲಿಸಿ ಬೆದರದೆನ್ನುವೆನು ||

        • ಭಟ್ಟರೆ,
          ಭಾಮಿನಿಯ ಬಂಧಕ್ಕೆ ಇನ್ನೂ ಹೊಂದಿದಂತಿಲ್ಲ ::
          ೩ + ೪ + ೩ + ೪
          ನೆಳಲು + ಬೆಳಕಿನ + ಹುದುಗು + ದೀಪ (ಇಲ್ಲಿ ಕೊನೆಯ ಗಣದಲ್ಲಿ ಒಂದು ಮಾತ್ರೆ ಲೋಪವಾಗಿದೆ)
          ದೊಳಡಗಿ + ಹುಡುಕಲು + ಚಹರೆ + ಹತ್ತದು (ಮೊದಲ ಗಣದಲ್ಲಿ ಒಂದು ಮಾತ್ರೆ ಅಧಿಕವಾಗಿದೆ)

          ನಳಿನ + ಮುಖಿಯಳ + ಹೊಳೆವ+ ಕರ- (ಕೊನೆಯಲ್ಲಿ ೨ ಮಾತ್ರೆಗಳ ಲೋಪ)
          ಗಳ ಹಾರ + ತಿನ್ನಲು+ ಹಾರು + ತೀಕಡೆ (ಮೊದಲ ೨ ಮಾತ್ರೆಗಳ ಆಧಿಕ್ಯ)

          ವಾಸ್ತವದಲ್ಲಿ, ಅಧಿಕವಾಗಿರುವ ಮಾತ್ರೆಗಳನ್ನು ಹಿಂದಿನ ಸಾಲಿಗೆ ಕೂಡಿಸಿದಲ್ಲಿ, ಮಾತ್ರಾ ಗಣಗಳ ಸಾಧುತ್ವ ಬರುತ್ತದೆ. ಆದರೆ ಆದಿಪ್ರಾಸ ತಪ್ಪುತ್ತದೆ.

          • ಹಳೇಮನೆಯ ರಿಪೇರಿಗಿಂತ ಹೊಸದನ್ನು ಕಟ್ಟುವ ಒಂದು ಯತ್ನ ಕೆಲಸಗಳ ನಡುವೆಯೇ ನಡೆಯಿತು :
            ———————-

            ದಾರಿದೀಪದ ದೂರನೋಟದಿ
            ತೋರಿಬರುತಿಹ ಹಾರುವಿಗಹವೆ
            ನೀರೆಬೀರಿದ ಕಾಳತೆರನಾಹಾರ ಕಾಣುತಲಿ |
            ಮಾರುದೂರದಿ ಗುರುತು ಸಿಗದ-
            ಪಾರ ಬೆಳಕಿರೆ ಹೆಸರಪೇಳುವೆ
            ಕೂರು ಅರೆಚಣ ವೇಗದಲಿ ಸಾರುವೆನು ಸಾಗುತಲಿ ||

          • ವಿಹಗ ಎಂಬುದು typo ಆಗಿ, ವಿಗಹ ಆದಂತಿದೆ

            “ಸಿಗದ” ಎಂಬುದು “ಸಿಕ್ಕದ” ಎಂದಾಗಬೇಕೆ?

            ದೋಷಗಳನ್ನೇ ಹುಡುಕಿದ್ದಕ್ಕೆ ಕ್ಷಮೆಯಿರಲಿ 🙂

  4. ಕಾಯುತ್ತಿರ್ದೆನು ಕಾಳ ಕೂಳ ಸಮಯಂ ಪೆಣ್ಣೇ ನಿಜಾನಂದಕಂ
    ಪ್ರೇಯಸ್ಸೀರ್ವುದು ನಿನ್ನ ದಾನ ತರಳೇ ನಿಂಗಿರ್ಪುದೆನ್ನಾಶಯಂ |
    ಬಾಯಲ್ಲಿಟ್ಟುದದನ್ನು ತಲ್ಪಿಸುವೆನಾಂ ನಿನ್ನಜ್ಜಿ ಮುತ್ತಜ್ಜಿಗುಂ
    ಮಾಯಾಲೋಕಮಿದಲ್ಲಮೇ ಕುಸುಮಳೇ ಇಂತಿರ್ಪುದಾಲಂಬನಂ ||

    [ಛಂದಸ್ಸು :: ಶಾರ್ದೂಲ ವಿಕ್ರೀಡಿತ]

    • ಕಲ್ಪನೆ ಸೊಗಸಾಗಿದೆ. ಆದರೆ ಕೆಲವೊಂದು ಪದಗಳ ವ್ಯಾಕರಣ ಸಡಲಿದೆ. ದೂರವಾಣಿಯಲ್ಲಿ ವಿವರಿಸಬಲ್ಲೆ:-)

      • ದೂರವಾಣಿಯ ನಂತರ ಸವರಿಸಿದ ಪದ್ಯ ::

        ಕಾಯುತ್ತಿರ್ದೆನು ಕಾಳ ಕೂಳ ಸಮಯಂ ಪೆಣ್ಣೇ ನಿಜಾನಂದಕಂ
        ಪ್ರೇಯಸ್ಸೀವುದು ನಿನ್ನ ದಾನ ತರಳೇ ಎಂಬಾಶಯಂ ಸಂದುದೌ |
        ಬಾಯಲ್ಲಿಟ್ಟುದದನ್ನು ತಲ್ಪಿಸುವೆನಾಂ ನಿನ್ನಜ್ಜಿ ಮುತ್ತಜ್ಜಿಗಂ
        ಮಾಯಾಲೋಕಮಿದಲ್ಲಮೇ ಸುಮನಸೇ ಇಂತಿರ್ಪುದಾಲಂಬನಂ ||

  5. ಪೆಣ್ಣೇನೀ ಕಾಳsನುs ತರದಿದ್ದsರೇ‌ಈಗs
    ಹಣ್ಣಾಗುತ್ತಿತ್ತೆನ್ನs ಉದರs
    ಉಣ್ಣsದೆs ಮಲಗಿರ್ದs ಸಂಕsಟs ಕರಗಿsತುs
    ಕಣ್ಣಿsನs ಕರುಳಿsನs ದಯದೀ

    [ಅಂಶ ಛಂದಸ್ಸು :: ಸಾಂಗತ್ಯ]
    [ಮೊದಲ ಅಂಶ ಛಂದಸ್ಸಿನ ರಚನೆ. ತಪ್ಪುಗಳಿದ್ದಲ್ಲಿ ದಯಮಾಡಿ ತಿಳಿಸುವುದು]

    • ಭಲರೇ ಭಲರೇ! ಪರಾಕ್ರಮಕಂಠೀರವ!! ಸೋಮ, ನೈಕಚ್ಛಂದೋವಿಭವ!!
      ಮೊದಲ ಸಾಂಗತ್ಯವೇ ಅನವದ್ಯಪದ್ಯವಾಗಿ ವಿಶುದ್ಧಿಯ ಸಾಂಗತ್ಯವನ್ನು ಗಳಿಸಿದೆ:-)

    • ಕ್ಷಮಿಸಿರಿ!! ರಾಮ ಎಂಬುದು ಸೋಮ ಎಂದು ತಪ್ಪಾಗಿ ಟಂಕಿತವಾಗಿದೆ…
      ಇರಲಿ, ಈ ಸ್ಫೂರ್ತಿಯಿಂದ ಸೋಮನೂ ಸಾಂಗತ್ಯವನ್ನು ಬರೆದರೆ ಒಳಿತು:-)

      • ರಾಮs ನಿ೦ ಸಾ೦ಗತ್ಯ ಪದ್ಯsವು ಸ್ಫುರಿಸsಲು
        ಸೋಮs ನು ಕೀರ್ತಿಯ ಗಳೆಸೆ
        ನಾಮsದ ವ್ಯತ್ಯsಯಕೆ೦ದಿದೊ ಗುರುಗsಳೆ
        ನೇಮsವು ತಿಳಿಯsದು ನನಗೆ

      • ಸಂದಿರ್ಪs ಕೀರ್ತಿsಯುs ಸೋಮಂಗೆs ಸರಿಯಲ್ತೆs
        ಬಂದಿದ್ದsರೂಕೊಂಚs ತಡೆದುs
        ಛಂದsದs ಬಂಧsದೊsಳೆಂತೆಷ್ಟೊs ರಚಿಸಿರ್ಪs
        ಚೆಂದsದs ಪದ್ಯsವs ಗೆಣೆಯs

  6. ಸೂರೊ೦ದನ೦ ಮನುಜ ತಾ೦ ರಚಿಸಲ್ಕೆ ಸ್ವಾರ್ಥೀ
    ನೂರಾರು ಜೀವಿಗಳ ಮಾರಣಹೋಮ ಗೈವ೦
    ತೋರಲ್ಕೆ ತಾ೦ ಪ್ರಕೃತಿ ಮಾತೆಗೆ ಬದ್ಧನೆ೦ದು೦
    ಕಾರುಣ್ಯವ೦ ತೃಣದಗಾತ್ರದೆ ಗೈಯುತಿರ್ಪ೦

    • ಸ್ವಾರ್ಥೀ ಎಂಬಲ್ಲಿ ದೀರ್ಘ ಬೇಡ. ಆದಾರೆ ಆಗ ಛಂದಸ್ಸು ಸಡಲುತ್ತದೆ:-)
      ಲುಬ್ಧಂ ಎಂದು ಸವರಿಸಬಹುದು

      • ಗಣೇಶ್ ಸರ್,

        ಸರಿಪಧಿಸಿದ್ದೇನೆ
        ಸೂರೊ೦ದನ೦ ಮನುಜ ತಾ೦ ರಚಿಸಲ್ಕೆ ಲುಬ್ಧಂ
        ನೂರಾರು ಜೀವಿಗಳ ಮಾರಣಹೋಮ ಗೈವ೦
        ತೋರಲ್ಕೆ ತಾ೦ ಪ್ರಕೃತಿ ಮಾತೆಗೆ ಬದ್ಧನೆ೦ದು೦
        ಕಾರುಣ್ಯವ೦ ತೃಣದಗಾತ್ರದೆ ಗೈಯುತಿರ್ಪ೦

  7. ಸ್ವಾಗತಾ||

    ನೋಡಿವಕ್ತ್ರದೊಳು ಚಂದ್ರನಬಿಂಬಂ|
    ಮೋಡಿವಸ್ತ್ರದೊಳು ಕಾರ್ಮುಗಿಲೋಟಮ್||
    ದೂಡಿರೆಕ್ಕೆಯನು ಮೋಹಿಸಿಬಂತೇ|
    ಓಡಿಶೀಕರವ ಬಾಯೊಳಹಾಕಲ್||

    • ಪ್ರಸಾದ್ – ಬಹಳ ಒಳ್ಳೆಯ ಕಲ್ಪನೆ. ನೀವು ಪದ್ಯ ರಚನೆ ಶುರುಮಾಡಲು ತಡಮಾಡಿದ್ದೇಕೆ ಎಂದೇ ಅರ್ಥವಾಗುತ್ತಿಲ್ಲ. 🙂

      • adbhuta prasad:)

        bahaLa chennagide nimma padyagaLu

        • ಸೋಮ (ಸ ಉಮಾ) ಶೇಖರ – ಶಬ್ದಾರ್ಥ ರೂಪಿಗಳನ್ನೇ (ಶಿವ-ಶಕ್ತಿ)ತಲೆಯಮೇಲಿರಿಸಿಕೊಂಡ ಕಾವ್ಯಾರಾಧಕ ನೀನು,
          ಅದರ ಪ್ರಸಾದವನ್ನು ತಿನ್ನುವವ ನಾನು.

          ಧನ್ಯವಾದಗಳು.

      • ರಾಮಚಂದ್ರರು ನನ್ನ ಕವಿತೆಗೆ ಅರ್ಧಚಂದ್ರ ಪ್ರಯೋಗ (ಕತ್ತು ಹಿಡಿದು
        ಹೊರಹಾಕುವುದು ) ಮಾಡದೇ ಪೂರ್ಣಚಂದ್ರರಂತೆ ಪರಮಾಹ್ಲಾದಕರ
        ನುಡಿಗಳನ್ನಾಡಿದ್ದಕ್ಕೆ ಪದ್ಯದ ಮುಖಚಂದ್ರ ಆನಂದಗೊಂಡಿದೆ.

        Thanks Very Much.

    • ಉಪಜಾತಿ||

      ಜಲೇನಿಮಗ್ನಾಮ್ ತರುಣೀಮ್ ಸಮೀಕ್ಶ್ಯ|
      ಶಿಲಾತಲೇತಂಡುಲಪಾತಶಂಕೀ||
      ಸಂಪ್ರಾಪ್ತುಕಾಮಃ ಕಣರೂಪಧಾನ್ಯಾನ್|
      ಪಕ್ಷೀಪುರೋಗಚ್ಹತಿ ಲಾಭಮಿಚ್ಛುಃ ||

      ( ತರುಣಿ ನೀರನ್ನು ಚೆಲ್ಲುತ್ತಿರುವುದನ್ನು ನೋಡಿ , ವರ್ಣ ಹಾಗೂ ರೂಪ ಸಾಮ್ಯದಿಂದ ಅಕ್ಕಿಯಕಾಳು ನೆಲದಮೇಲೆ ಚಲ್ಲಲ್ಪಡುತ್ತಿದೆ ಎಂದು ಭ್ರಮೆಗೊಂಡ ಹಕ್ಕಿಯು ಅದನ್ನು ಆರಿಸಿಕೊಳ್ಳಲು ಬರುತ್ತಿದೆ).

      • enappa idu…..true classical kalpane….nanage kalpane baralla baralla antha heltaa kaala taltiddiddu sullaaytu….innu aa kaaraNa koDuva haagilla….ubhayabhaaShaa kavige namO namaH… 🙂

        • ನುಡಿವೆಣ್ಣಿನ ರಾಜ್ಯದಲ್ಲಿ ಕಬ್ಬದ ದಿಬ್ಬದ ಮೇಲೆ ಕೂರ ಬಲ್ಲವ

          ಒಬ್ಬನೇ ಈಶಸಾಮಂತ ಅವನೇ ಶ್ರೀಶಕಾರ೦ತ

    • ಪ್ರಸಾದ್, ನಿಮ್ಮ amorous ಚಕೋರನ ಪಕ್ಕ ನನ್ನ desperate ಚಾತಕನನ್ನು ಕೂರಿಸಬಹುದೇ?

      ಮೋಡಂಬಂದೊಡೆಯೆನ್ನನೀರಡಿಕೆಯಂ ಚೆನ್ನಾಗಿ ತಾ ನೀಗನೇ
      ಮೋಡಂಬಂದಿರಲೆನ್ನಮಿತ್ರ ಸುರಿಯಂ ಸದ್ದೊಂದನೇ ಮಾಳ್ಪನೇ
      ಮೋಡಾ ನಂಬಿದೆ ಮೋಸಹೋದಪೆನಲಾ ನೀನೆನ್ನ ವೈರೀ ಕಣಾ
      ನೋಡಾಮಾನಿನಿ ನೀರತಂದಳವಳೇ ಲೇಸೆಂದುದಾಚಾತಕಂ

  8. Dear Prasad,
    I am very happy that you have come-out with most beautiful and chaste poems both in Kannada and Sanskrit. I also second the view of Ram:-)
    Pl do write more frequently and profusely!!

    • Dear Sir,

      ಧನ್ಯೋಸ್ಮಿ , ಸರಸ್ವತೀ ಪುತ್ರನೇ ಬೆನ್ನು ಚಪ್ಪರಿಸಿದಲ್ಲಿ ಎಂತಹಾ ಕುಂಟು

      ಕುದುರೆಯೂ ಬೇರೆ ಕುದುರೆಗಳ ಸಮವಲ್ಲದಿದ್ದರೂ, ಓಡಲು ಬಾರದಿದ್ದರೂ

      ಮೇಲೆದ್ದು ಹೇಷಾರವ ಮಾಡಬಲ್ಲದು , ಆದ್ದರಿಂದ

      “ನನ್ನ ಸಂಪದವೆಲ್ಲ ನಿಮ್ಮ ಪ್ರಾಪ್ತಿ”

  9. ಚೆಲ್ಲಿsದs ರಸವsನುs ಮೆಲ್ಲsಲುs ಬಂದೆsನುs
    ಬೆಲ್ಲsದs ಸವಿಯುs ಎನಗೇಕೆs – ಎಳೆಬಾಲೆs
    ಮಲ್ಲೆsಯs ಮೊಗವs ನೀ ತೋರುs

    [ತ್ರಿಪದಿ]

    • Cool!! ತ್ರಿಪದಿ ಚೆನ್ನಾಗಿದೆ. ಒಳ್ಳೆಯ ರಸಿಕ ಹಕ್ಕಿಯಯನ್ನೆ ಹುಡುಕಿದ್ದೀರಿ.

  10. ನೀರೆ ನೀರನು ಬಿಟ್ಟು ಕುಡಿಯುತ್ತಲಿರಲೊರ್ಮೆ
    ತೀರಿತ್ತು ದಾಹವು ಕ್ಷಣದೆ|
    ಹಾರುತ್ತ ಬಂದಿತ್ತು ಬೇಸಿಗೆ ದಿನದಲ್ಲಿ
    ಸಾರಿಕೆಯಾ ನಳದೆಡೆಗೆ||

    ನೀರಿಗೆ ಬರವುಂಟು ನಾರಿಗೆ ಬರವುಂಟು
    ಹಾರುತ್ತ ಬಂದ ವಿರಳದ| ವಿಹಗವು
    ಸಾರಿಕೆ ನೋಡಿ ಮರುಗಿತ್ತು|

    (ತುಂಬಾ ತಡವಾಗಿ ಬರೆಯುತ್ತಿದ್ದೇನೆ. ಸಾಂಗತ್ಯ ಹಾಗೂ ತ್ರಿಪದಿಗಳಲ್ಲಿ ಒಂದೊಂದು ಪ್ರಯತ್ನ; ಬೇಸಿಗೆ ದಿನದಲ್ಲಿ ಬಾಯಾರಿಕೆಯಾಗಿ ಸಾರಿಕೆ ನಳದೆಡೆಗೆ ಬರುತ್ತಿತ್ತು ಎಂದು ಸಾಂಗತ್ಯದಲ್ಲಿನ ಕಲ್ಪನೆ ಹಾಗೂ ವಿರಳವಾಗುತ್ತಿರುವ ವಿಹಗ- ಸಾರಿಕೆ ನೀರಿಗೆ ಹಾಗೂ ನೀರೆಗೆ ಬರವಾಗುತ್ತಿರುವುದನ್ನು ನೋಡಿ ಮರುಗಿತು ಎಂದು ತ್ರಿಪದಿಯ ಭಾವ)

  11. “ದಾರಿ ಬಿಡಿ , ರೋಮನ್ , ಗ್ರೀಕ್ ಕವಿಗಳೇ !
    ಹೋಮರನ ಇಲಿಯಡ್ ಕಾವ್ಯಕ್ಕಿಂತಲೂ
    ಅತಿಶಯವಾದ ಕಾವ್ಯ ಬರುತ್ತಿದೆ ! ”
    – ಪ್ರಾಪರ್ತಿಯಸ್

    ವರ್ಜಿಲನ ಸಮಕಾಲಿಕನಾದ ಪ್ರಾಪರ್ತಿಯಸ್ ಎಂಬ ಕವಿಯು , ಈನಿಯಡ್ ಕಾವ್ಯದ ಬಗ್ಗೆ ಬರೆಯುತ್ತ ಹೀಗೆ ಹೇಳಿದನಂತೆ.
    ಪ್ರಸಾದ್ ಬಾಪಟ್ ರ ಎಂಟ್ರಿಯನ್ನು ಇದಕ್ಕೆ ಹೋಲಿಸಬಹುದೆನ್ನಿಸಿತು.

    • ಗಾಯತ್ರಿಯವರಿಗೆ ಧನ್ಯವಾದಗಳು ,

      ಆದರೆ ಅಂಬೆಗಾಲಿಡುವ ಮಗುವಿಗೂ ತ್ರಿವಿಕ್ರಮನಿಗೂ ಯಾವ ಸಾಮ್ಯ

      ಕೊಲೆವರಿಗೂ ಬ್ರಹ್ಮಗಾಯತ್ರಿಗೂ ಯಾವ ಸಾದೃಶ್ಯ

      ಈ ಹೋಲಿಕೆ ತರವೇ.

  12. ಫಿಸಿಕ್ಸ್ ನವರಿಗೆ ಮೈಕ್ರೋಕಾಸ್ಮ್ , ಮ್ಯಾಕ್ರೋಕಾಸ್ಮ್ ಗಳ ಬಗ್ಗೆ ತಿಳಿದೇ ಇರುತ್ತದೆ.

  13. ಬ೦ದಿರ್ಪಳ್ ಕಾಣ್ ವ್ಯಸನ ಕಳೆಯಲ್ ನಲ್ಲನಿ೦ದಗಲಿರಲ್ ತಾ೦
    ಸ೦ದಿರ್ಪ ಖ್ಯಾತಿಗಳ ನೆನೆದಳ್ ಪ್ರಾರ್ಥಿಸಲ್ ವೀರಗಲ್ಗ೦
    ಮ೦ದಾಕ್ರಾ೦ತಪ್ರಕಲಿತವಿರಲ್ ಮೆಟ್ಟಿನಿಲ್ಲಲ್ಕಶಕ್ತಳ್
    ಮು೦ದಿರ್ಪಾತ್ಮ೦ ವಿಹಗನೊಲು ತಾ೦ ಕ್ಷೋಭೆಯಿ೦ ಪಾರುತಿರ್ಪ೦

    • ಸೋಮ ಅವರೇ ,
      ಮೊದಲ ಸಾಲಿನಲ್ಲಿ (ಮಭನತ’ತ’ಗುಗು) 2ನೇ ತ ಗಣ ಬರಬೇಕಾದಲ್ಲಿ “ನಿಂದಗಲಿ” ಬಂದಿದೆ. ಒಂದು ಗುರುವಿನ ಬದಲು ಎರಡು ಲಘುಗಳು ಬಂದಿದೆ.

      • ಗಣೇಶ ಕೊಪ್ಪಲತೋಟ ಅವರೇ,
        ಧನ್ಯವಾದಗಳು ಸರಿಪಡಿಸಿದ್ದೇನೆ:)

        ಬ೦ದಿರ್ಪಳ್ ಕಾಣ್ ವ್ಯಸನ ಕಳೆಯಲ್ ನಲ್ಲನಿ೦ ಶೋಕತಪ್ತಳ್
        ಸ೦ದಿರ್ಪ ಖ್ಯಾತಿಗಳ ನೆನೆದಳ್ ಪ್ರಾರ್ಥಿಸಲ್ ವೀರಗಲ್ಗ೦
        ಮ೦ದಾಕ್ರಾ೦ತಪ್ರಕಲಿತವಿರಲ್ ಮೆಟ್ಟಿನಿಲ್ಲಲ್ಕಶಕ್ತಳ್
        ಮು೦ದಿರ್ಪಾತ್ಮ೦ ವಿಹಗನೊಲು ತಾ೦ ಕ್ಷೋಭೆಯಿ೦ ಪಾರುತಿರ್ಪ೦

    • ಸೋಮ – ವಿಹಗದ ರೂಪದಲ್ಲಿರುವ ನಲ್ಲ, ಅಗಲಿಕೆಯಿಂದ ಶೋಕಿಸಿರುವ ನಲ್ಲ; ಅಗಲಿಕೆಯ ದುಃಖ – ಕಲ್ಪನೆ ಸೊಗಸಾಗಿದೆ.
      fire hydrant ಗೆ ವೀರಗಲ್ಲಿನ ಹೋಲಿಕೆ ಕೊಟ್ಟಿದ್ದು ನಗೆ ತಂದಿತು 🙂

      • ರಾಮ್ :),

        ಚಿತ್ರದ ಭಾವವನ್ನು ಸ್ವಲ್ಪ ತಿರುಚಿದ್ದೇನೆ. ಮ೦ದಾಕ್ರಾ೦ತದ ಪ್ರಯತ್ನಕ್ಕೆ:)

  14. ಪದ್ಯಪಾನಕ್ಕೀಗ ದುರ್ಲಭರಾಗಿರುವ ಗೆಳೆಯರಿಬ್ಬರನ್ನು ಹುಡುಕಿ ತಾರೆಂದು ಸೀಗಲ್ ಹಕ್ಕಿಗೆ ಹಾಡು!!!

    ಎಲೆ! ಜಲಪಕ್ಷಿರಾಜ! ಬಲುದೂರಕೆ ಸಾಗುವ ನಿನ್ನ ಬಲ್ಮೆಯಂ
    ತಿಳಿದವಳಲ್ತೆ ನಾಂ; ಸಲಿಸಿ ಕಾಳ್ಗಳ ಬೋನಮನೊಲ್ದು ಕೇಳ್ದಪೆಂ|
    ನೆಲಮುಗಿಲಂಚಿಗೇಗಿ ತಡಕಯ್, ತಿಳುಪಯ್ ಮುಗುಳೆತ್ತ ಪೋದರಾ
    ಗೆಳೆಯರವರ್ ಗಡಂ ಸೊಗದ ಕಬ್ಬದ ಹೊಳ್ಳರು, ಮಂಜುನಾಥರುಂ||

  15. ಎಲೆ ಜಲ ಪಕ್ಷಿರಾಜ ಭಲರೇ ಭಲೆ ಮೆಚ್ಚಿದೆ ನಿನ್ನ ಜಾಣ್ಮೆಯಂ
    ಸುಲಭದಿ ನೀಗಿಕೊಂಡೆ ಗಣಪಂ ನಿನಗಿತ್ತ ಜವಾಬುದಾರಿಯಂ
    ಒಲಿಯುತೆ ರಾಮಚಂದ್ರನೊಲವಿಂ ಮೆರೆಯಲ್ ನಿನಗಂಚೆಯಾಳೆನಲ್
    ಬಲುಮೆಯಿದಲ್ತೆ ಭಕ್ತಿಗಿರದಾದನೆ ಮಾಧವ ಭಕ್ತಬಾಂಧವಂ

    ಕ್ಷಮಿಸಿಂ ಪದ್ಯದ ಪಾನವಾಟಿಕೆಯೊಳೆನ್ನಾಟಂ ತೊಡರ್ಗೊಂಡುದಾ
    ಗಮಿಸಲ್ ನೂತನ ಕಾರ್ಯಭಾರ ಶಿರಮಂ ಜಗ್ಗಲ್ ಮನಂ ಕುಗ್ಗಿರಲ್
    ಸಮನೇಂ ನಿಮ್ಮಯ ನಲ್ಮೆಗಂ ನೆನೆಯುವಾ ಸಂಪ್ರೀತಿ ಸಂದೇಶಕಂ
    ನಮಿಪೆಂ ಶೀಘ್ರದೆ ಪದ್ಯಪಾನದಮಲೊಳ್ ತೇಲಾಳ್ವೆನೆಂಬಾಶೆಯೊಳ್

    ಮನೆಯೊಂದಂ ನೋಡುತಿರ್ಪೆಂ ಮನಕನುಗುಣಮಪ್ಪೊಂದ ಕಾಣೆಂ ನಿರಾಶಾ
    ಮನದಿಂದೀ ಬೆಂಗಳೂರೊಳ್ ಬದುಕುವ ಬಗೆಯೆಂತೆಂಬ ಭಾವಂ ಮುಸುಂಗಲ್
    ಕೊನೆಯೆಲ್ಲೈ ಪಕ್ಷಿರಾಜಾ ಮನಮುರಿಯುವ ಸಂಕ್ಷೋಭೆಗಂ ಪಾರದೋರೈ
    ಮನೆಯೊಂದಂ ನೋಡಿಪೇಳೈ ನೆಲ ಜಲ ಮುಗಿಲಂ ನೋಡಿ ಜಾಲಾಡಿ ಬಾರೈ

    • ಸಲಿಲವಿಹಂಗಮಾ! ಜವದೆ ತೋರಿದೆಯಲ್ತೆಲೆ! ಮಂಜುನಾಥರಂ,
      ತಲೆಗತಿಭಾರಮಪ್ಪ ಗೃಹವೀಕ್ಷಣವೇಧೆಯನೇನನೆಂಬೆನಾಂ?
      ಸುಲಲಿತಮಾಗಿ ನಿನ್ನವೊಲೆ ಗೂಡಿನ ನಿರ್ಮಿತಿಯಾಗದೆಮ್ಮ ಪಾ-
      ಲ್ಗೆ; ಲಸದುದಾರವಾಸ್ತುಪತಿ ವಾಸವನೊಲ್ದಿದೊ ನೀಳ್ಗೆ ವಾಸಮಂ||

  16. ಅದು ಹದ್ದು ಎಂದು ಪರಿಗಣಿಸಿ. ಮಂದಾಕ್ರಾಂತದಲ್ಲಿ:
    ಪಾಡುತ್ತಿತ್ತೈ| ಖಗಕುಲವು ತಾನ್| ನೀರನೆಲ್ಲೆಲ್ಲು ಕಂಡುಂ
    ತೋಡುತ್ತೆಷ್ಟೋ| ಕೊಳವೆಗಳನುಂ| ನೀರ ನೀ ಪೀರೆ ನೋಡೈ
    ಸೇಡಿಂ ನಿನ್ನಂ| ಸಿಗಿದು ಕುಡಿವುದೈ| ನೆತ್ತರಂ ತಾನಿದೀಗಳ್
    ಮಾಡಿದ್ದುಣ್ಣೋ| ಹುಲು ಮನುಜ ನೀ| ದೈವ ಸಂಕಲ್ಪ ಮೀರ್ದೈ

    • ಮಂದಾಕ್ರಾಂತಾಗತಿಯನೊಲಿದಾರಯ್ದು ಪದ್ಯಪ್ರಸೂತಿ-
      ಸ್ಪಂದಕ್ಕಿಂತು ಪ್ರಯತಿಸಿದ ನಿಮ್ಮೊಳ್ಪಿಗಾಂ ವಂದಿಸಿರ್ಪೆಂ||
      ಬಂದತ್ತೊಂದೇ ಲಘುವಧಿಕಮಾ ತಾರ್ತಿಯೀಕಾಂಘ್ರಿಯೊಳ್, ಮಿ-
      ಕ್ಕಂದಂ ಪೆರ್ಚಲ್ ಪಳನುಡಿಗಳೊಂದಾರ್ಪು ಕೂರ್ಪೀಗುಮಲ್ತೇ!

      (ಮೂರನೆಯ ಪಾದ ಎನ್ನುವ ಸರಳವಾದ ಮಾತಿಗೆ ಬದಲಾಗಿ ಬೇಕೆಂದೇ ಈ ಛಂದಸ್ಸಿನ ತೊಡಕನ್ನು ಬಿಂಬಿಸಲು ’ತಾರ್ತೀಯೀಕ+ಅಂಘ್ರಿ’ ಎನ್ನುವ ಪದವ್ನ್ನು ಬಳಸಿದ್ದೇನೆ:-). ಹೀಗಿರುವ ದುಷ್ಕರವೃತ್ತದಲ್ಲಿ ಪದ್ಯವನ್ನು ರಚಿಸಿದ ನಿಮಗೆ ಹಾರ್ದಿಕಧನ್ಯವಾದಗಳು)

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)