Aug 102011
 

ಗೆಳೆಯರೇ ಇನ್ನೊಂದು ಸಮಸ್ಯೆ 🙂



ಭಾಮಿನಿ ಷಟ್ಪದಿಯ ಕೊನೆಯ ಸಾಲು ಕೊಟ್ಟಿದ್ದೇನೆ, Aug 15ರೊಳಗೆ ಪರಿಹಾರವನ್ನು(ಗಳನ್ನು) ಎದಿರು ನೋಡಬಹುದೇ?

ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

  14 Responses to “ಸಮಸ್ಯಾಪೂರ್ಣ ೨”

  1. ಎರಡುರೀತಿಯಲ್ಲಿ ಸಮಸ್ಯೆ ಅರ್ಧಪದ್ಯಗಳಲ್ಲಿ ಪೂರ್ಣವಾಗಿ, ಎರಡೂ ಭಾಗಗಳ ಏಕಾರ್ಥತೆಯನ್ನೂ ಗಮನಿಸಬಹುದು.

    ಕ್ಷೋಣಿ ವೈರಿ ನಿಕರದ ಕೊನೆಯವ
    ಪ್ರಾಣಬಿಡೆ, ಸಹಗಮನದಾತನ
    ರಾಣಿ ಯಗ್ನಿಯೊಳುರಿಯೆ, ರಾಜನು ಮುದದಿ ಮಲಗಿದನು
    ಕ್ಷೀಣಕಾಂತಿಯ ತನ್ನ ನಿಜದು
    ಗ್ರಾಣ ಘಮದಲಿ ತುಂಬುತಿಹ ಸಾಂ-
    ಬ್ರಾಣಿ ಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

  2. ಮೌಳಿಯವರೇ,

    ೨ ಪರಿಹಾರಗಳು ಬಿಡಿಯಾಗಿದ್ದರೂ ಇದಿಯಾಗಿಯು ಅರ್ಥ ತಂದಿದ್ದೀರಿ. ತುಂಬಾ ಚೆನ್ನಾಗಿದೆ.

    ನಾನು ಸಾಂಬ್ರಾಣಿಯನ್ನು ನಂಬಿದ್ದೆ, ಈಗ ಬೇರೆ ದಾರಿ ಹಿಡೀತೀನಿ 🙂

  3. ಜಾಣಮಂತ್ರಿಗಳೊಡನೆ ಮಂತ್ರಿಸಿ
    ಪ್ರಾಣಪುತ್ರಗೆ ಪಟ್ಟ ಕಟ್ಟುವ
    ಶಾಣೆ ನಿರ್ಣಯ ಮಾಡಿ ದಶರಥ ನಡೆದ ನಿದ್ರಿಸಲು|
    ಪ್ರಾಣಸಖಿಕೈಕೇಯಿರಾಣಿಗೆ
    ತಾನು ಪೇಳಲು, ಮನದೊಳಗೊಳಗೆ
    ರಾಣಿಯಗ್ನಿಯೊಳುರಿಯೆ, ರಾಜನು ಮುದದಿ ಮಲಗಿದನು||

    [This is not in sync with Original Ramayan. Here, we can assume that, Kaikeyi knew about Dasharatha's plans by now, but she is hiding her intentions…swalpa adjust maadi :)]

  4. ೫ನೇ ಸಾಲನ್ನು
    ತಾನು ಪೇಳಲುದರದೊಳಗೊಳಗೆ
    ಅಂತೂ ಮಾಡಬಹುದು.."ಹೊಟ್ಟೆಕಿಚ್ಚು" ಅಂಬ ಅರ್ಥದಲ್ಲಿ.

  5. ಗಾಣದೆತ್ತಿನ ತೆರದಿ ಸೊರಗಿದ
    ಸಾಣೆಕಟ್ಟಿನ ರಾಜ ನೊಂದನು
    ದೇಣಿಗೆಯ ತೆತ್ತಿದನು ಬಲು ವಿಚ್ಛೇದನದ ಬಳಿಕ |
    ಪ್ರಾಣವಾಕೆಯ ಬಿಟ್ಟ ಸುದ್ದಿಯು
    ತ್ರಾಣ ತಂದುದು ಮನ ನಿರಾಳಿಸಿ
    ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು ||

  6. ಹೊಳ್ಳ,
    ಚೆನ್ನಾಗಿದೆ ಪರಿಹಾರ, ದಶರಥನೆನಾದರು ಕೈಕೇಯಿಗೆ ರಾಮ ಪಟ್ಟಾಭಿಷೇಕದ ವಿಷಯವ ಹೇಳಿದ್ದರೆ ಹೀಗೆ ಆಗುವ ಸಾಧ್ಯತೆ ಇದ್ದೇ ಇತ್ತು. ಡಿ.ವಿ.ಜಿ ಹೇಳುವಹಾಗೆ ಪಾಶಗಳು ಹೊರಗೆ ಕೊಕ್ಕೆಗಳು ನಮ್ಮೊಳಗೇ… ಮಂತರೆ ನಿಮಿತ್ತ ಮಾತ್ರ 🙂

    ರಾಮ್,
    ನಿಮ್ಮ ಪರಿಹಾರ ಚೆನ್ನಾಗಿದೆ, ರಾಜನಿಗೆ ಹೀಗಾದರೂ ಸಮಧಾನವಾಯ್ತಲ್ಲ 🙂

  7. ಕಾಣಲಸದಳ ರೂಪ ರಾಶಿಯ
    ಮಾನಿನಿಯ ರಂಗಾದ ಮಾಟವ
    ತಾನೆ ಬಯಸಿದ ಉದಧಿ ರಾಜನು ಕರವ ಚಾಚಿದನು |
    ದೀನ ಕರೆ ಮನ್ನಿಸದೆ ಗರ್ವದಿ
    ಬಾನಪತಿ ಕರಪಿಡಿಯೆ ಸಂಧ್ಯಾ
    ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು ||

  8. ಕಾಂಚನ ಅವರೇ :),
    ಬಾನಪತಿ ಉದಧಿರಾಜನಿಂದ ಸಂಧ್ಯಾರಾಣಿಯನ್ನು ಕಸೆದಿರುವ ಪರಿಹಾರ ಬಹಳ ಮನೋಹರವಾಗಿದೆ… ತುಂಬಾ ಅದ್ಭುತವಾದ ಊಹೆ

  9. ಮೌಳಿ, ಹೊಳ್ಳ, ರಾಮಚಂದ್ರ, ಸುನೀತ, ಕಾಂಚನ ಅವರಿಗೆ ಒಳ್ಳೆಯ ಪರಿಹಾರವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು :).
    ಉಳಿದ ಪರಿಹಾರದ ಮುಂದೆ ನನ್ನ ಪರಿಹಾರ ಸಪ್ಪೆ ಅನ್ನಿಸುತ್ತಿದೆ. ಆದರೂ ಪ್ರಕಟಿಸುತ್ತಿದ್ದೇನೆ 😉

    ಪರಿಹಾರ ೧:
    ಕಾಣೆಯಾಗಿರೆ ಶಾಂತಿಯಧಿಪಗೆ
    ಕಾಣಿಸಲು ಪ್ರತಿರಾತ್ರಿ ಕನಸೊಳ್-
    ತಾಣಗೈದಿಹ ವಿಷದಸರ್ಪಗಳಮಿತ ಪರಿವಾರ
    ಜಾಣಮಂತ್ರದೆ ಸ್ವಪ್ನದೊಳ್ ಪರಿ-
    ಪೂರ್ಣ ಸಂತತಿಯೊಡನೆ ಹಾವಿನ-
    ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

    ಜಾಣಮಂತ್ರದೆ -> intelligent counseling

  10. ಪರಿಹಾರ ೨:
    ಜಾಣನೀತನು ಗೂಢಚರ್ಯದೆ
    ತಾಣವನ್ತಃಪುರವನರಸಿ ಸು-
    ಷೇಣ ಹೊರಟನು ಶತ್ರುವಧಿಪನ ವಧಿಸೆ ನಿದ್ರೆಯೊಳು
    ಕಾಣಿಸದೆ ಕತ್ತಲೊಳು ಬೀಳಲು
    ಪ್ರಾಣವಳೆಯಿತು ಬೆನ್ನಿರಿದ ಬಿದಿ-
    ರಾಣಿಯಗ್ನಿಯೊಲ್ ಉರಿಯೆ, ರಾಜನು ಮುದದಿ ಮಲಗಿದನು

  11. ಪರಿಹಾರ ೨ ರಲ್ಲಿ
    ಬಿದಿರಾಣಿ -> ಬಿದಿರಿನ ಆಣಿ

  12. ಸೋಮರವರೇ, ಒಬ್ಬರಿಗಿಂತ ಇನ್ನೊಬ್ಬರು ಒಳ್ಳೆಯ ಪರಿಹಾರಗಳನ್ನು ಸೂಚಿಸಿದ್ದೀರಿ. ಅಗ್ನಿ ಎಂದೊಡನೆ ನನ್ನ ಮನದಲ್ಲಿ ಇದ್ದುದ್ದು ಸಾಮನ್ಯ ಅರ್ಥದಲ್ಲಿ ನಾವು ಉಪಯೋಗಿಸುವ ಬೆಂಕಿ, ಎರಡನೆಯದಾಗಿ ವಿರಹಾಗ್ನಿ ಮತ್ತು ಜಠರಾಗ್ನಿ. ಇವಲ್ಲದೆ ಇನ್ನೂ ವಿಶೇಷ ರೂಪಗಳು ನಿಮ್ಮೆಲ್ಲರ ಪದ್ಯಗಳಲ್ಲಿ ಬಿಂಬಿತವಾಗಿವೆ. ವಿರಹಾಗ್ನಿಯಲ್ಲಿ ರಾಣಿ ಬೆಂದ ಬಗ್ಗೆ ಅಥವಾ ಅಜೀರ್ಣದಿಂದ ಉಂಟಾದ ಜಠರಾಗ್ನಿಯ ದಿಕ್ಕಿನಲ್ಲೂ ಒಂದೆರಡು ಕಾವ್ಯಗಳನ್ನು ಹೊಸೆಯಬಹುದೆನಿಸುತ್ತದೆ. ಚಂದ್ರಮೌಳಿ, ರಾಮಚಂದ್ರ, ರವೀಂದ್ರ ಮತ್ತು ಕಾಂಚನ ಅವರಿಗೆ ನನ್ನ ಅಭಿನಂದನೆಗಳು!

  13. i liked the parihaara of smt kaanchana very much for it has original solution and better structure…even the multiple attempts of Ram and Soma are good…

  14. ಭಾನುವರ್ಮನು ರಾಜನಾದನು
    ಜಾಣತನದೊಳ್ ರಾಜ್ಯವಾಳಲು
    ತಾನು ನಾಡಿನ ಕಷ್ಟ ತಿಳಿಯಲು ತಿರುಗತೊಡಗಿದನು
    ಭಾನುರಾಜ್ಯವ ಸರ್ಪ ಹಿಂಸಿಸೆ
    ಕಾಣದಂತೆಯೆ ಸುಡಲು ಹಾವಿನ
    ರಾಣಿಯಗ್ನಿಯೊಳುರಿಯೆ ರಾಜನು ಮುದದಿ ಮಲಗಿದನು

Leave a Reply to Raveendra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)