Jul 232012
 

“ಗುರುಪತ್ನಿಯ ಕೋರಿ  ಧನ್ಯನಾದನು ಶಿಷ್ಯನ್”
ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ.

ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ

  67 Responses to “ಪದ್ಯಸಪ್ತಾಹ – ೩೦ – ಸಮಸ್ಯೆ”

  1. ಮರುಕ೦ ಪುಟ್ಟುವೊಲಿಹ ತಾ೦
    ತಿರುಗಲ್ ದೇಶವಮನಾಥ ವಿದ್ಯಾರ್ಜನೆಗ೦
    ಶರಣಾಗತಿಯ೦ ಪೊರೆವಾ
    ಗುರುಪತ್ನಿಯ ಕೋರಿ ಧನ್ಯನ್ ಆದನು ಶಿಷ್ಯನ್

  2. ವರನಾ ಮೂರ್ಖತೆಯ೦ ತಾ೦
    ಪರಿಪರಿ ವಿಧದೊಳ್ಗೆ ತಿದ್ದಲಾ ಸತಿ, ಪತಿಯು೦
    ಸರಿಯೇ೦ ತಪ್ಪೇನೆ೦ಬುದ
    ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

    ಗುರುಪತ್ನಿ – ಗುರುವೇ ಪತ್ನಿ

    • ಪ್ರೇಮಭಕ್ತಿಮಯಂ ವಾಕ್ಯಂ ಭ್ರಾಮಕಂ ಸೋಮಪೂರಣಂ

    • ಇದನ್ನು ಇನ್ನೊಂದು ರೀತಿಯಲ್ಲಿಯೂ ಅರ್ಥಮಾಡಿಕೊಳ್ಳಬಹುದು: ಗುರುಪತ್ನಿ = overweight wife! ಹಾಗಾಗಿ ಅವಳ ಮಾತು intimidatingಆಗಿಯೂ, ನಿರ್ಣಾಯಕವಾಗಿಯೂ ಇರುತ್ತದೆ. ಇವನಿಗೆ ಅವಳನ್ನು ಕೋರಿ/ಬೇಡಿಕೊಂಡು ಅವಳ ಕೃಪಾಕಟಾಕ್ಷದಲ್ಲಿರದೆ ವಿಧಿಯಿಲ್ಲ.

  3. ಗುರುವಿಂದಜ್ಞಾನ ಕಳೆದು
    ಗುರುತರದಾಜ್ಞೆಯನು ಪಡೆದು ಪೊರಡುವ ಮುನ್ನಂ|
    ಗುರುಪುತ್ರಿಯ ಗೆದ್ದ ಬಿಡದೆ
    ಗುರುಪತ್ನಿಯ ಕೋರಿ, ಧನ್ಯನಾದನು ಶಿಷ್ಯನ್||

    • ಸೊಗಸಾದ ಪರಿಹಾರ. ಪದ್ಯಶಯ್ಯೆಯೂ ಚೆಲುವಾಗಿದೆ.

    • ಗುರುಪುತ್ರಿಯನ್ನವನ್ ಗೆ –
      ಲ್ದರು ಮತ್ತಾ ತಾಯ ಕೋರ್ದನೇ ಆ ಭಂಡನ್ ?

      🙂

      • ಅಯ್ಯಯ್ಯೋ! ಸಂಜೆಯೊಳಗೆ
        ನೆಯ್ಯಲೆಳಸೆ ಮೂರು ಮಾರದಾಗುವುದಿಂತೇ!

        *ಗುರುಪುತ್ರಿಯ ಪಡೆದ ಬಿಡದೆ

  4. ಪ್ರಕೃತಸಮಸ್ಯೆಯನ್ನು ಹಲವು ಬಗೆಗಳಲ್ಲಿ ಬಿಡಿಸಬಹುದಷ್ಟೆ; ಇಲ್ಲಿ ಒಂದೆರಡು ಪ್ರಯತ್ನಗಳು:

    ಚಿರಪರಿಚಿತಮಲ್ತೆಮಗಂ
    ಪುರಾಣಕಥೆ ಚಂದ್ರ-ತಾರೆ-ಸುರದೇಶಿಕರಾ|
    ಒರೆಯುವುದೇನಿನ್ನದರಿಂ
    ಗುರುಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ!!!

    (ಕಾಕುವಿನ ಬಲದಿಂದ ಹೊಮ್ಮುವ ವ್ಯಂಗ್ಯವಿಲ್ಲಿ ಅಭಿಪ್ರೇತ)

    ಪುರುಷೋತ್ತಮಮಾಸವ್ರತ-
    ಧುರಂಧರಂ ವಿವಿಧದಾನದಕ್ಷಂ ರತ್ನಾ-
    ಭರಣಪ್ರದಾನಕೆನುತುಂ
    ಗುರುಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ||

    (ಅಧಿಕಮಾಸವ್ರತದಲ್ಲಿ ನಾನಾವಿಧದ ದಾನಗಳನ್ನೀಯುವಾಗ ಮಿಗಿಲಾದ ದಾನಗಳಿಗೆಂದು ಗುರುಪತ್ನಿಯನ್ನು ಆಯ್ದ ಶಿಷ್ಯನ ಭಕ್ತಿಯಿಲ್ಲಿ ವಿವಕ್ಷಿತ)

    ಗುರುವಿಂ ದಕ್ಕಿದ ಶುಚಿರುಚಿ-
    ಭರಕಾವ್ಯದ ಪಾಠಕೌಶಲಮನೇನೆಂಬೆಂ?
    ಪರಿಮಳಿಸುತ್ತಿರೆ ಮನೆಯನ-
    ಗುರು, ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ!

    (ಶುಚಿ = ಶೃಂಗಾರ, ರುಚಿ = ರಸ, ಅಗುರು = ಪರಿಮಳಕಾರಕದ್ರವ್ಯ)

    • ಪೌರಾಣಿಕವದು- ಬೀಜಂ
      ಪೂರಣ ಶಾಸ್ತ್ರೀಯ ದಾನ – ತರುವೋಲ್ ಬೆಳೆದುಂ
      ಮೂರೆನೆಯದಲ್ತೆ – ಫಲಮದು
      ಕೋರೈಸಿಹುದೈ ತ್ರಿನೇತ್ರ ರಾಗಚ್ಛವಿಯಿಂ

      • ಪ್ರಾಯಃ ಪ್ರತ್ಯಯಮಾಧತ್ತೇ ಸ್ವಗುಣೇಷೂತ್ತಮಾದರಃ (ಕಾಳಿದಾಸ)”

        ಎಮ್ಮ ಗುಣಂಗಳೊಳೆಮಗಂ
        ಸುಮ್ಮಾನಮೆನಿಪ್ಪುದಲ್ತೆ ಮೆಚ್ಚೆ ಬುಧರದಂ|

  5. ಮರುಳನ್, ನಸುಕಿನ ನಿದ್ರೆಯೊ
    ಳಿರುವಗೆ ಕನಸೊಳ್ಗನೇಕ ವಧುಗಳ ಸಾಲ್ಗಳ್ |
    ಬಿರಿವೆದೆ, ತೆಳು ಸೊಂಟದೆಳೆ ಚಿ –
    ಗುರು ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||

    • ರಾಮ್,
      ಈ ಪದ್ಯ direct speechನಲ್ಲಿದ್ದಂತಿದೆ. ಅವನು ಯಾರದೋ ಶಿಷ್ಯನಾಗಿರದೆ, ನಿಮ್ಮ ಶಿಷ್ಯನೇ ಆಗಿದ್ದಾನೆ ಅಲ್ಲವೆ? ‘ಧನ್ಯನಾದಂ ಶಿಷ್ಯಂ’ ಎನ್ನುವುದು ‘ಧನ್ಯನೆನ್ನಯ ಶಿಷ್ಯಂ’ ಎಂದೇ ವೇದ್ಯವಾಗುತ್ತದೆ 😉

    • Splitting the keyword into a new one is amazingly good – the usual differentiator of Ram

    • ಪದ್ಯವಿದಿರಲೇನ್ ದಿಟದನ
      ವದ್ಯಂ, ನಿಜಶಿಷ್ಯ ನಲ್ತೆ ರಸಿಕವರನ್ ತಾಂ|
      ಮದ್ಯಪ-ಚಂಡಾಲ ಮಠಿಯ
      ಸದ್ಯ ಪೊಗಳಲೇಕೆ ಚೋರಗುರುವೊಲ್ ರಾಮಾ!

    • ಪ್ರಸಾದು,

      ಎಳೆಚಿಗುರು ಪತ್ನಿಯನೆ ತಾ
      ನೆಳಸಿದ ಮರುಳನ್ನದೆಂತು ಮೆಚ್ಚದೆ ತಡೆವೆಂ ?
      ಬಳುಕುವ ಕನ್ಯೆಯ ಸಂಗವ
      ಬೆಳೆಸಿರೆ ಪಾಪ ಕನಸೊಳ್ಗದೇಕೆ ಕಳವಳಂ ?

      • ಕನಸೊಳ್ ಕಂಡುದ ಭಾಗ್ಯ
        ವೆನಲಕ್ಕುಮೆ, ಸುಖವದೆಂದಿಗೂ ಶಾಶ್ವತವೇ?
        ವಿನಿಪಾತವ ನೀ ಕಾಣೆ ಲ
        ಲನೆಯ ಬದಲು, ದೀರ್ಘಜೀವಿ ನೀನೆಂಬರಲಾ!
        (ವಿನಿಪಾತ = ಸಾವು)

        • ಕನ್ಯೆಯು ಕನಸೊಳ್ ದಕ್ಕಿರೆ
          ಧನ್ಯತೆಯುಂ ಸ್ವಪ್ನ ಸೀಮಿತವದಾಗಿಹುದೈ
          🙂

        • ಎನ್ನಾಕ್ಷೇಪಂ ಕನಸಿನ
          ಬನ್ನಕೆ ತಾನಲ್ಲ,ವೆಚ್ಚರದ ಟಿಪ್ಪಣಿಗಂ||

    • ಸೊಂಟಂ ಬಳ್ಳಿಗೆ ಪೋಲ್ತಿರೆ
      ನಂಟೊಪ್ಪುಗುಮಲ್ತೆ, ಚಿಗುರಿಗೆಂತುಪಮಿಪುದಯ್?
      ಕಂಟಕಮೇಮ್ ಕವಿಸಮಯಂ?
      ತಂಟೆಯನೆಸಗಿದೆನೆನುತ್ತೆ ಬೇಸರಿಸದಿರಿಮ್:-)||

      ಸೊಂಟವೇ ಚಿಗುರಾದರೆ ಚಿಗುರಿಗೆ ಹೋಲಿಕೆಯಾಗುವ ಬೆರಳುಗಳಿಗೋ ತುಟಿಗೋ ಉಪಮೆಯಿಲ್ಲದೆ ಸಂಚಕಾರ ಬರದೇ?:-)
      ಈ ಕವಿಸಮಯದ ಸಮಯಾಸಮಯವೆಂತೇ ಇರಲಿ, ಪರಿಹಾರದ ಕ್ರಮ ಮತ್ತು ಕೀಲಕಪದದ ಮುರಿತದಲ್ಲಿಯ ಚಮತ್ಕಾರ ಮಾತ್ರ ತುಂಬ ಸೊಗಸು. ಬೇಕಿದ್ದಲ್ಲಿ
      “ಬಿರಿವೆದೆ, ಬಡನಡು, ತುಟಿಯ ಚಿ-
      ಗುರು, ಪತ್ನಿ………” ಎಂದು ಸವರಿಸಿಕೊಳ್ಳಲೂ ಬಹುದು

      • ಗಣೇಶ್ –

        ನಿಮ್ಮ ಸಲಹೆಗಳಿಗದೆಂದು ಬೇಸರವಿಲ್ಲೈ

        ನನ್ನ ಮನದಲ್ಲಿದ್ದ ಉಪಮೆ :: “ಎಳೆ ಚಿಗುರಿನಂಥ ಪತ್ನಿ”. ಚಿಗುರಿನ ಉಪಮೆ ಬರಿ ತುಟಿಗೋ, ಬೆರಳಿಗೋ ಅಲ್ಲ; ಇಡಿಯ ಪತ್ನಿಗೆ 🙂
        ಆದರೆ ಅದು ಸೂಕ್ತವಾದ ಅರ್ಥ ಸ್ಪಷ್ಟತೆಯೊಡನೆ ಹೊರಬಂದಿಲ್ಲವೆನಿಸುತ್ತದೆ 🙁

    • ಬಹಳ ಚೆನ್ನಾಗಿದೆ ಕಲ್ಪನೆ ರಾಮ್ 🙂

  6. ಗುರುಕುಲದಧ್ಯಯನದೊಳಾ
    ಪೊರೆದವಳ೦ ಮನವಹರ್ನಿಶ೦ ನೆನೆನೆನೆಯಲ್
    ಮರುಜನ್ಮದೆ ತಾಯಾಗೆನೆ
    ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

    • One of the best pooranams. Congrats Soma.

      • ಒಡನೊಡನೆಯೆ ಚೆಲುವೆಸೆಯುವ
        ನುಡಿಯೊಡತಿಯ ನೇವುರಂಗಳಂತೆವೊಲುಲಿವಾ|
        ಕಡವರದಂತಪ್ಪ ಕವಿತೆ-
        ಯೊಡಲಂ ಮೆಚ್ಚುತ್ತೆ ಪಡಿನುಡಿವ ನೀಂ ಧನ್ಯರ್!!

    • clap clap

    • ಅತ್ಯದ್ಭುತಮೀ ಪರಿಹೃತಿ-
      ಕೃತ್ಯಂ ಸಮುದಾತ್ತಭಾವಭಾಸುರನೃತ್ಯಂ|
      ಸತ್ಯಮಿದೋ ನುಡಿವೆಂ ಸಾಂ-
      ಗತ್ಯಂಗೊಂಡಿರ್ಪಳಲ್ತೆ ಸರಸತಿ ನಿಮ್ಮೊಳ್||

    • ಗಣೇಶ್ ಸರ್, ಚ೦ದ್ರಮೌಳಿಯವರೇ, ಪ್ರಸಾದು

      ನಿಮ್ಮೆಲ್ಲರ ಮೆಚ್ಚುಗೆ ನನಗೆ ಪದ್ಯ ಬರೆಯಲು ಬಹಳ ಧೈರ್ಯ ಕೊಡುತ್ತದೆ ಧನ್ಯವಾದಗಳು. ಗಣೇಶ್ ಸರ್ ಪದ್ಯಕ್ಕೆ ಧನ್ಯೋಸ್ಮಿ:-)

    • ತುಂಬ ಚೆನ್ನಾಗಿದೆ, ಸೋಮ.

    • ಹಾರಮಿದೌ ಸೋಮೌ ಪರಿ-
      ಹಾರಕಿದೌ, ಸಾರಸಂಗತಂ ಗಡ ಪಾಕಾ-
      ಹಾರಕಿದೌ, ಸಮವಿಭವವಿ-
      ಹಾರಕಿದೌ, ರುಚಿರಪೂಜ್ಯನೀ ಒಳವಿಗಿದೌ
      [ಒಳವು = ಅಂತರಂಗ]

      • ಜೀವೆ೦, ಹೊಳ್ಳ,

        ಧನ್ಯವಾದಗಳು:)

      • Ravindra,

        ಕವಿ ಸೋಮನಲ್ಲದೆ ಸ್ತ್ರೀ,
        ರವಿ ನಿನ್ನಯ ನುತಿಗೆಪಾತ್ರಳಾಗಿಹಳಾವಳ್?
        ಇವರೀರ್ವರಲ್ತೆ ’ಔ’ವೆ
        ನ್ನುವ ಪುರುಷರು: ಶಕ್ತಿ-ಜಗ್ಗರು ವಿದೂಷಕರ್+ಐ||

        ‘ಔ’ ಸ್ತ್ರೀಲಿಂಗವಾಚಕ. ’ಐ’ ಪುಲ್ಲಿಂಗವಾಚಕ. ಔ ಎನ್ನುವ ಪುರುಷರಿಬ್ಬರೇ – ಶಕ್ತಿಕಪೂರ್ ಮತ್ತು ಜಗ್ಗೇಶ್.

  7. ವರನು ವಧುವಂ ಪೊತ್ತು
    ವರ ನವ ವಧುವಂ ಪೊತ್ತುದೆ
    ಗಿರಿಯೇರಿ ಗುಡಿಯೆಡೆಗೋಡುವೀ ಪರಿಪಾಠಂ |
    ಹರಕೆಯ ಹೊರೆಗೆ ಬೆದರ್ದು ಹ –
    ಗುರು ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||

    [ ಪತ್ನಿಯನ್ನು ಹೊತ್ತು ಬೆಟ್ಟವೇರುವ ಹರಕೆ (ref: ಮುಂಗಾರು ಮಳೆ) ಹೊತ್ತಿದ್ದ ಶಿಷ್ಯ, ಹಗುರು (light) ಪತ್ನಿಗಾಗಿ ಕೋರಿದ 🙂 ]

    • ಭಾರ್ಯಾ – ಭರ್ತೃ ಎನ್ನುವುದು ಇದಕ್ಕೇಯೆ 🙂

    • ಮೊನ್ನಿನ ಎಲ್ಲೋರ ಯಾತ್ರೆಗೆ ತಮ್ಮ ಪತ್ನಿಯನ್ನು ಕರೆದುಕೊಂಡುಬರದೆ, ರಾಮ್ ಈ ಮಾತು ಆಡಬಾರದಾಗಿತ್ತು!

      • ಪ್ರಸಾದು,

        ಅತಿ ಮನೋಹರ ಯಾತ್ರೆಯೊಳು ನೀವ್
        ಸತಿಯಗೂಡಿಯೆ ಬಂದಿರೈ ದಿಟ –
        ವತುಲ ನೆನಪನೆ ಪೊತ್ತು ಮೇಣ್ ಗಿರಿಯೇರುತೆನ್ನವೊಲು

        [ ಪತ್ನಿಯೊಡನೆ ಬಂದರೂ, ನನ್ನಂತೆಯೇ ಬರಿಯ ಪತ್ನಿಯ ಅತುಲವಾದ ನೆನಪನ್ನು ಹೊತ್ತು, ಕೋಟೆ ಕೊತ್ತಲಗಳೆಡೆಗೆ ಒಂಟಿಯಾಗಿ ಏರಿದ್ದೀರಿ. ಇದು ಶ್ಲಾಘನೀಯವೇ ಹೌದು ]
        🙂

        • ಎಲ್ಲೆಡೆಗೆ ‘ನಾ ಬತ್ತೆ, ನಾ ಬತ್ತೆ’ ಎಂಬುವವ
          ಳಲ್ಲಿ ನನ್ನೊಬ್ಬನನ್ನೇ ಮಲೆಯನು|
          ಹಲ್ಲಿಯಂದದೆ ಹತ್ತಿ ಹಾಳಾಗಿಹೋಗೆನ್ನೆ
          ಗಲ್ಲು ತಪ್ಪಿದನಿತೇ ಖುಷಿಯದಾಯ್ತೈ||

          • ಪ್ರಸಾದು,

            ಅತ್ತೆಯಾ ಮಗಳನ್ನು ಪದ್ಯಪಾನಿಗಳೆದುರು
            ಎತ್ತಾಡಿಕೊಂಡಿರೇ! ಧೈರ್ಯ ನಿಮದು.
            ಕುತ್ತಿಗೆಯು ಬಿಡುವಾಗಿ ಬೆಟ್ಟ ಹತ್ತಿದಿರಂದು
            ಕುತ್ತು ಬಂದಿದೆ ರಾತ್ರಿಯೂಟಕಿಂದು

      • ಜೀವೆಂ,

        ಉಪವಾಸ ವನವಾಸವೇನಲ್ಲವಪರೂಪ
        ಕಪಟವಾಡದಿರಿ ಸಂಸಾರಿಗರು ನೀವ್!
        ದುಪಟವಾಗಿರಲೆನ್ನ ಕಟಿಭಾಗ, ವರವಲ್ತೆ
        ಲುಪವಾಸವಿರುವುದಾಗೀಗಲೊಮ್ಮೆ||

        • Honed:
          ಉಪವಾಸ ವನವಾಸವೇನಲ್ಲವಪರೂಪ
          ಕಪಟವಾಡದಿರಿ ಸಂಸಾರಿ ನೀವೂ!
          ದುಪಟವಾಗಿರಲೆನ್ನ ಕಟಿಭಾಗ, ಲೇಸಲ್ತೆ
          ಲುಪವಾಸವಿರುವುದಾಗೀಗಳೊಮ್ಮೆ||

    • ವರನು ವಧುವಂ ಪೊತ್ತು…The line needs a laghu

    • ಮೊದಲ ಸಾಲಿನಲ್ಲಿ ಛಂದಸ್ಸು ಎಡವಿದೆ; ಹಗುರುಪತ್ನಿ ಎನ್ನುವುದು ಅರಿಸಮಾಸ!:-)
      ವೈನೋದಿಕಪರಿಹಾರವಾಗಿ ಚೆಲುವೆನಿಸಿದೆ.

    • ಛಂದದೆಡವಿಗೆ ಮನ್ನಿಸೆನ್ನುತ
      ಮುಂದೆ ಹಳಿಯುತಲರಿಸಮಾಸವ
      ತಂದಿರುವೆ ನಾ ಧನ್ಯವಾದವನೆಲ್ಲ ನುಡಿಗಳಿಗೆ
      ಚೆಂದದಾ ಪರಿಹಾರವೀಯುತ
      ಬಂಧುರದ ಭಾವಗಳ ನೇಯುತ
      ಗಂಧ, ಚಂದನಗಳನೆ ಪೂಸಿದ ಧೀರರಿಗೆ ಮಣಿವೆ

  8. ಪ್ರಯತ್ನ :

    ವರಕವಿ ಪೂರ್ವದಿ ತವರಲಿ
    ಮರುಗುತ ರಿಕ್ತತೆಗೆ ಗಮ್ಯವ ನೆನೆದು ಸೋತನ್
    ಬರಿಗೈ ಗುರುಮನೆಗೊಯ್ಯುತ
    ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

    • ಕಲ್ಪನೆ ಹೊಸತಾಗಿರುವಂತೆ ತೋರುತ್ತಿದೆ. ಆದರೆ ಅರ್ಥಸ್ಪಷ್ಟತೆಯಾಗುತ್ತಿಲ್ಲ. ದಯಮಾಡಿ ವಿಶದೀಕರಿಸಿ ಬರೆಯಿರಿ ಭಟ್ಟರೇ!

      • ೨ನೇ ಹಂತ :

        ಸಂದುದು ಬಾಲ್ಯವು ಕಷ್ಟದಿ
        ಮಂದಸ್ವರದಿಂ ಕಾಣ್ಕೆಗಸಹಾಯ ನಾಗಿಹೆ
        ನೆಂದೆನುತ ಪ್ರಾರ್ಥಿಸಿ ನಮಿಸಿ
        ಗುರುಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

  9. ಬಿರುಸಾಗಲವರ ಬಂಧಂ
    ಮೊರೆಯಿಡೆ ಪಿರಿಯಂಗೆ ಪತಿಯು ಸಂಕಟದೊಳ್ಗಂ |
    ಪರಿಹರಿಸಿದನೈ ಕಲಹವ
    ಗುರು, ಪತ್ನಿಯನೆಳಸಿ ಧನ್ಯನಾದಂ ಶಿಷ್ಯಂ ||

  10. ಗುರುಕಾಣಿಕೆ ಯೆಂದಾತಂ
    ಅರಿದಾದುದನೆಸಗಿ ಯೊಪ್ಪಿಸಲ್ ತಿರುವಡಿಯೊಳ್
    ವರ ಬೇಡಿತ್ತೆನೆನಲ್ಕಾ
    ಗುರು, ಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

    ಪತ್ನಿ ಅರ್ಥಾತ್ ಮದುವೆಗೆ ಅಪ್ಪಣೆ

    • ಸೊಗಸಾದ ಕಲ್ಪನೆ. ಆದರೆ ಎರಡನೆಯ ಪಾದದ ಮೊದಲಿಗೆ ವಿಸಂಧಿದೋಷ ಬಂದಿದೆ. ತಿರುವಡಿ ಎಂಬ ಪದಪ್ರಯೋಗವು ತಮಿಳನ್ನು ಅನುಕರಿಸಿದರೂ ಸಂದರ್ಭಕ್ಕೆ ತಕ್ಕಂತಿದ್ದು ಸೊಗಸಾಗಿದೆ:-) ಮೂರನೆಯ ಪಾದದ ವ್ಯಾಕರಣವೂ ಶೋಧನೀಯ.

      • ಧನ್ಯೋಸ್ಮಿ. ಸವರಿದ್ದೇನೆ; ದಾರಿಯಲ್ಲಿ ಅರ್ಥವೂ ಕೊಂಚ ಮಾರ್ಪಟ್ಟಿದೆ

        ಗುರುಕಾಣಿಕೆಯೆಂದಾತಂ
        ಗರಿದಪ್ಪುದನೆಸಗಿ ಯೊಪ್ಪಿಸಲ್ ತಿರುವಡಿಯೊಳ್
        ವರಮಿತ್ತೆ ಬೇಡೆನಲ್ಕಾ
        ಗುರು, ಪತ್ನಿಯ ಕೋರಿ ಧನ್ಯನಾದನು ಶಿಷ್ಯನ್

  11. ವಾಲ್ಮೀಕಿಯ ಬಗ್ಗೆ

    ಬೆರಗ೦ ಪೊ೦ದಿದ ಹರಿಜಪ-
    ನಿರತ೦ ಗಯ್ವನ ವಿಚಿತ್ರ ತರ್ಕದೆ, ಪಾಪ೦
    ಪೊರುವಿರೆ ಭೋಕ್ತೃಗಳೆನುತಲಿ
    ಗುರು, ಪತ್ನಿಯ ಕೋರಿ ಧನ್ಯನಾದo ಶಿಷ್ಯನ್

    ಭೋಕ್ತೃಗಳೆನುತಲಿ = ಭೋಕ್ತೃಗಳೆ ಎನುತಲಿ
    ಗುರು – ತ೦ದೆ

  12. ಮರಣಿಸಿದ ಮಾತೆಯ ನೆನಪು
    ಚಿರವಾಗಿರೆ ಮಾತೃಪೂಜೆ ನಿರತವು ಸಾಗಲ್
    ವರುಷದ ನೋಂಪಿಯ ಮೊದಲಿಗೆ
    ಗುರುಪತ್ನಿಯನೆಳಸಿ ಧನ್ಯನಾದನು ಶಿಷ್ಯನ್

    ಗುರು ದಕ್ಷಿಣೆ ತಾನೊಲ್ಲೆನೆ
    ಪರಿಹಾರವೆ ಕಾಣದಾಗೆ ಋಣಮೋಚನಕಂ
    ಚರಣಾಶ್ರಿತನಾಗಿ, ಕೃಪೆಗೆ
    ಗುರುಪತ್ನಿಯನೆಳಸಿ, ಧನ್ಯನಾದನು ಶಿಷ್ಯನ್

    ಗುರು-ತಂದೆಯು ; ಶಿಷ್ಯನೆ ಮಗ
    ನರೆವರ್ಷದ ಕಂದ ನಳುತ ಪಸಿವದು ಪೆರ್ಚಲ್
    ತ್ವರೆಯಿಂ ಪಾಲನ್ನೂಡಿಸೆ
    ಗುರುಪತ್ನಿಯನೆಳಸಿ, ಧನ್ಯನಾದನು ಶಿಷ್ಯನ್

  13. ಗುರು ಸ೦ಸಾರದಿ ಮೂಡಿಹ
    ಬಿರುಕ೦ ಕ೦ಡು ಗುರುದೋಷಮ೦ ಸೂಚಿಸಿರಲ್ |
    ಕಿರಿಯನ ದೆಸೆಯಿ೦ ಕ್ಷಮೆಯ೦
    ಗುರು, ಪತ್ನಿಯ ಕೋರಿ ಧನ್ಯನಾದನ್ ಶಿಷ್ಯನ್ ||
    (ಕೊನೆಯೆರಡು ಸಾಲಿನ ಅನ್ವಯ – ಕಿರಿಯನ ದೆಸೆಯಿ೦ ಗುರು, ಪತ್ನಿಯ ಕ್ಷಮೆಯ೦ ಕೋರಿ, ಶಿಷ್ಯನ್ ಧನ್ಯನಾದನ್)

    • ಪರಿಹಾರಕ್ರಮಕೋಟಿ ಬಂದ ಬಳಿಕಂ ಮತ್ತೊಂದು ನೂತ್ನಕ್ರಮಂ
      ಸ್ಫುರಿಸುತ್ತಾ ಸ್ಫುರಣಂ ರಸಾರ್ದ್ರಗತಿಯಿಂ ಪದ್ಯಾತ್ಮಮಂ ತಾಳಿ ಬಂ-
      ದುರುಸಂತೋಷಮನೀವ ಸಾಧ್ಯತೆಯೆ ದಲ್ ಶ್ರೀಶಾ! ಭವತ್ಪ್ರಾತಿಭಾ-
      ಕರಣಂ ನಾನಿದನಲ್ತೆ ಮೆಚ್ಚಿದಪೆನೀ ಜಾಣಿರ್ಕೆ ನಿನ್ನೊಳ್ ಸದಾ||

    • Shreesha, good parihaara 🙂

    • ರಂಧ್ರಾನ್ವೇಷಣ:

      ’ಕೋರಿ’ ಎಂಬುದನ್ನು ’ಕೋರೆ’ ಎಂದು ಮಾಡಿದಾಗ ಬರುವ ಅರ್ಥಸ್ಪಷ್ಟತೆಯನ್ನು, ’ಕೋರಿ’ಯನ್ನು ಉಳಿಸಿಕೊಂಡು ಹೀಗೆ ಮಾಡಬಹುದೆ:

      ಗುರು-ಸ೦ಸಾರದಿ ಮೂಡಿಹ
      ಬಿರುಕ೦ ಕ೦ಡು ಮಠಿ ದೋಷವಂ ಸೂಚಿಸಿರಲ್|
      ಸರಿಗೊಳೆ ಗೇಹ ಕ್ಷಮೆಯಂ
      ಗುರು ಪತ್ನಿಯ ಕೋರಿ, ಧನ್ಯನಾದನ್ ಶಿಷ್ಯನ್||

      • ಧನ್ಯವಾದಗಳು ಗಣೇಶ್ ಸರ್ ಮತ್ತು ಸೋಮಣ್ಣ.

        ಪ್ರಸಾದು,
        ನೀವು ಹೇಳಿರುವುದು ಸೂಕ್ತವಾಗಿದೆ…ಕಾರ್ಯ-ಕಾರಣ ಭಾವ ಬ೦ದರೆ ’ಕೋರೆ’ ಎ೦ಬುದರಿ೦ದ ಅರ್ಥಸ್ಪಷ್ಟತೆ ಹೆಚ್ಚು…
        ’ತ್ವಾ೦ತ’ ಅವ್ಯಯದ೦ತೆ sequence of events ಹೇಳಿದಾಗ(ಕಾರ್ಯ ಕಾರಣ ಭಾವ ಸ್ಫುಟವಾಗದೇ) ಅರ್ಥಸ್ಪಷ್ಟತೆ ಕಡಿಮೆಯಾದರೂ ಇಲ್ಲಿರುವ ರೂಪವನ್ನೇ ಉಳಿಸಿಕೊಳ್ಳಬಹುದು…

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)