Jul 292012
 

“ವಿಷ, ಶೂಲ, ಗಲ್ಲು, ಗನ್ನು “ ಈ ಪದಗಳನ್ನುಪಯೋಗಿಸಿ, ದುಷ್ಯಂತ, ಶಕುಂತಲೆಯರ ಭೇಟಿಯನ್ನು  ಛಂದೋಬದ್ಧ ಕವಿತೆಯಲ್ಲಿ ವರ್ಣಿಸಿರಿ

 

  34 Responses to “ಪದ್ಯಸಪ್ತಾಹ – ೩೧ – ದತ್ತ ಪದಿ”

  1. ಸುಕವಿಷಟ್ಪದಿಯಂತೆ ಕಾಡಿರೆ
    ವಿಕಟಮಧುಕರನಾಕೆಯಂ ಮೇ-
    ಣಕಟ! ಮನ್ಮಥನೆಸೆಯುವಾಶೂಲಪಜಮಪಜಯಕಂ|
    ಪ್ರಕಟಮೇನ್? ಅವನಾರ್ಯರತಿಹಾ-
    ಟಕಕದೆಲ್ಲೊರೆಗಲ್ಲು? ರಸನಾ-
    ಟಕಮಿದೇ ತ್ರಿಜಗನ್ನುತಂ ಕವಿಕುಲಗುರುವಿರಚಿತಂ||

    ಇದರ ಆದ್ಯಂತ ಅಲಂಕಾರವಕ್ರತೆಯು ಇದ್ದೇ ಇರಬೇಕೆಂಬ ಇರಾದೆಯ ಕಾರಣದಿಂದ ಸಾಕಷ್ಟು ಕಷ್ಟಕರಶೈಲಿಯಲ್ಲಿ ರಚಿತವಾದ ಈ ಪದ್ಯದ ಸರಳಾರ್ಥ ಹೀಗೆ:
    ಗಿಡ-ಬಳ್ಳಿಗಳಿಗೆ ನೀರೆಯುತ್ತಿದ್ದ ಶಕುಂತಲೆಯನ್ನು ತುಂಬಿಯೊಂದು ಸುಕವಿಯ ಷಟ್ಪದಿಯು ಕಾಡುವಂತೆ ಕಾಡಿತು. ಮನ್ಮಥನ ತೀವ್ರವಾದ ಸುಮಬಾಣಗಳಿಗೆ (ಆಶು+ಉಲಪ+ಜ = ತೀವ್ರವಾದ, ಬಳ್ಳಿಯಲ್ಲಿ ಜನಿಸಿದ > ಹೂವು) ಅಪಜಯವೆಲ್ಲಿ?
    ದುಷ್ಯಂತನ ಆರ್ಯವಾದ ಒಲವೆಂಬ ಹೊನ್ನಿಗೆ (ಆರ್ಯರತಿ+ಹಾಟಕ) ಒರೆಗಲ್ಲು ಎಲ್ಲಿದೆ?
    ಇಂತು ಮೂಜಗವು ಮೆಚ್ಚುವ ಈ ಜೋಡಿಯ ಒಲುಮೆಯ ರಸನಾಟಕವನ್ನು ಕಾಳಿದಾಸನು ರಚಿಸಿದನು.

    • ಹಿಂದೊಮ್ಮೆ ಇದನ್ನು ನಾಟಕೀಯವಾಗಿ ಹೇಳಿದ್ದೆ. ಈಗ ನೈಜಭಾವದಿಂದ ಮತ್ತೆ ಅದನ್ನೇ ಹೇಳುತ್ತಿದ್ದೇನೆ.

      ಕಿಮಲ್ಪಪ್ರಯತ್ನವೇದ್ಯಂ ನು
      ಪದ್ಯಮೇತದ್ಭತ್ಕೃತಮ್?
      ತದ್ಗದ್ಯಾರ್ಥಪಪಿ ಜ್ಞಾತುಮ್
      ನಾಲಂ ಜನ್ಮಚತುಷ್ಟಯಮ್!

    • “ಅಕಟ! ಮನ್ಮಥನೆಸೆಯುವಾಶೂಲಪಜಮಪಜಯಕಂ” – ಬಹಳ ಚೆಲುವಾದ ಯಮಕಾಲಂಕಾರದ ಸಾಲು. ಗಟ್ಟು ಮಾಡಿ ನೆನಪಿನಲ್ಲಿಡಬೇಕಾದ್ದು

      ಮೊದಲ ಪದ್ಯವೇ ಈ ದತ್ತ ಪದಿಯ ಪರಿಹಾರವನ್ನು ಬಹಳ ಮೇಲ್ಮಟ್ಟಕೆತ್ತಿದೆ. ಇದರ ಪಕ್ಕದಲ್ಲಾದರೂ ನಿಲ್ಲಬೇಕದರೆ, ನಮ್ಮೆ ಪದ್ಯಗಳಲ್ಲಿ ಬಹಳಷ್ಟು ಶ್ರಮ ಬೇಕಾದೀತು.

      • ಮೆಚ್ಚುಗೆಗಾಗಿ ಧನ್ಯವಾದಗಳು. ನಿಜವಾಗಿ ಹೇಳಬೇಕೆಂದರೆ ಈ ಪದ್ಯಕ್ಕಾಗಿ ನಾನೂ ಸ್ವಲ್ಪ ಶ್ರಮಿಸಿದೆ:-). ಮೊದಲಿಗೆ ಚಂಪಕಮಾಲೆಯಲ್ಲಿ ಬಳಿಕ ಉತ್ಪಲಮಾಲೆಯಲ್ಲಿ ಚಿಂತಿಸಿ ಅನಂತರ ಶಾರ್ದೂಲವಿಕ್ರೀಡಿತ-ಮತ್ತೇಭವಿಕ್ರೀಡಿತಗಳನ್ನು ಇಲ್ಲಿ ಬಳಸಲೇಬಾರದೆಂಬ ಹಠಮಾಡಿಕೊಂಡು
        ಕಡೆಗೆ ಕೆಲಮಟ್ಟಿಗೆ ಸುಲಭವಾದ ಆದರೆ ಒಡಲು ಚಿಕ್ಕದೆನಿಸುವ ಕಾರಣ ತುಸುಮಟ್ಟಿಗೆ ತೊಡಕೂ ಆದ ಭಾಮಿನಿಯನ್ನು ಆಯ್ದುಕೊಂಡೆ. ವಾರ್ಧಕವು ತೀರ ಹಿರಿದಾಗಿ ವ್ಯರ್ಥಪದಗಳನ್ನು ಗಿಡಿಯಬೇಕಾದೀತೆಂಬ ಅಳುಕಿನಿಂದ ಅದನ್ನೂ ದೂರವಿರಿಸಿದ್ದೆ:-). ಹೀಗೆಯೇ ಛಂದಃಕ್ಲೇಶವೂ ಶೂಲವನ್ನು ತರುವಲ್ಲಿ ವ್ಯಾಕರಣ-ನಿಘಂಟುಗಳ ಬಾಧೆಯೂ ನನ್ನನ್ನು ಸ್ವಲ್ಪ ಕೆಣಕಿದ್ದವು. ಆದುದರಿಂದ ನನಗೆ ಮಿಗಿಲಾದ ಮೆಚ್ಚುಗೆ ಸಲ್ಲಿಸಬೇಕಿಲ್ಲ:-)

    • ರಾಮಬಾಣದ ಕಾವ್ಯವೀತೆರ
      ಪಾಮರರು ಕುಳಿತೆಡೆಗೆ ನುಗ್ಗಿರೆ
      ನೇಮವಿಲ್ಲದೆ ತೆವಳುವೆಮಗಿನ್ನೆಲ್ಲಿ ಮಾರ್ಗವದು ?
      ಸ್ವಾಮಿನಿಷ್ಠೆಯ ತೋರದಿದ್ದರು
      ಕಾಮಿತಾರ್ಥದ ಕಾವ್ಯಕಲೆಯನು
      ಪ್ರೇಮದಲಿ ಕಲಿಸಿರ್ಪ ಗುರುವೆ ನೀವೆ ತೋರುವುದು !

  2. ವಿವರಣೆ ಅಗತ್ಯ:
    ಅವಿಷಾಣಪಾಶುಕ = ಕೊಂಬಿಲ್ಲದ ಜಿಂಕೆಜಾತಿ
    ಕುಂತೆ = ಶಕುಂತಲೆ
    ಕೊನೆಯ ಪಾದ = ಮೃಗವು ತನ್ನ ಕೊನೆಗಾಲದ ದುರ್ದೆಶೆಯನ್ನು ಮೆಟ್ಟಿ (ಅಣಂಗಿ) ತೋರಿಸಿತು (ದುಷ್ಯಂತನಿಗೆ ಶಕುಂತಲೆಯನ್ನು)

    ನಿಶಾನೆ ತಾನಾಗವಿಷಾಣಪಾಶುಕಂ
    ತ್ರಿಶೂಲ ದುಷ್ಯಂತನದಿಂದೆ ವೇಧಿತಂ
    ವಿಶಾಲಜಂಗಲ್ಲು ತುಳಿರ್ದು ಕುಂತೆಯಂ
    ದಶಾಂತ-ರಂಗನ್ನು ಅಣಂಗಿ ತೋರಿತೈ
    (ವಂಶಸ್ಥ)
    ಕೊನೆಯ ಪಾದದಲ್ಲಿ ವಿಸಂಧಿದೋಷವಿದೆಯೆ?

    • ಪ್ರಿಯ ಪ್ರಸಾದು,
      ತುಂಬ ಇಕ್ಕಟ್ಟಾದ ವೃತ್ತದಲ್ಲಿ ಯತ್ನಿಸಿದ್ದೀರಿ. ಈ ಸಾಹಸಕಾಗಿ ಅಭಿನಂದನೆಗಳು. ಇಲ್ಲಿಯ ಕೆಲವೊಂದು ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ಮೊದಲ ಸಾಲಿನಲ್ಲಿ ತಾನಾಗವಿಷಾಣ…ಎನ್ನುವಾಗ ಸಂಧಿ ಹೇಗೆ ಸಾಧ್ಯವಾಗಿದೆಯೆಂಬುದು ತಿಳಿಯಲಿಲ್ಲ. ಎರಡನೆಯ ಪಾದದ ಅರ್ಥವಾಗಲಿಲ್ಲ. ಜಂಗಲ್ಲು ಎಂಬ ಪದದ ಬಳಕೆ ಹಿತವಾಗದು. ನೀವೆಂದಂತೆ ಕೊನೆಯ ಸಾಲಿನಲ್ಲಿ ವಿಸಂಧಿದೋಷವಿದೆ.

      ಇನ್ನು ನಮ್ಮೆಲ್ಲರಿಗೂ ಅನ್ವಯಿಸುವ ಹಾಗೂ ಪದ್ಯರಚನೆಯ ಕಾಠಿನ್ಯ-ಸಾರಳ್ಯ ಗುಣಗಳಿಗೆ ಸಂಬಂಧಿಸಿದಂತೆ ಒಂದು ಮಾತು: ಯಾವುದೇ ಪದ್ಯವು ಕಠಿನಪದಗಳ ಪ್ರಯೋಗದಿಂದ ಪ್ರೌಢಭಾಷಾಪ್ರಯೋಗದಿಂದ ಕಷ್ಟವಾಗುವುದೂ ಅದಕ್ಕೆ ವಿವರಣೆ ನೀಡುವುದೂ ಬೇರೆ; ಕವಿಯ ವಿವಕ್ಷಿತಾರ್ಥವು ಆತನ ಸರಳ/ಕಠಿನಭಾಷೆ-ಶೈಲಿಗಳಿಗೆ ನಿರಪೇಕ್ಷವಾಗಿಯೂ ತೊಡಕಾಗುವುದು ಬೇರೆ. ಮೊದಲನೆಯದು ಅವ್ಯುತ್ಪನ್ನರಿಗೆ ನೆರವಾಗಲೆಂದು ಬಂದರೆ ಎರಡನೆಯದು ವ್ಯುತ್ಪನ್ನರಿಗೂ ಒಗಟಾಗುತ್ತದೆ.

    • ದುಷ್ಯಂತ-ಶಕುಂತಲೆಯರ ಭೇಟಿಗೆ, ಅವನು ಬೇಟೆಯಾಡಿದ ಜಿಂಕೆಯೇ ಅನುವಾಯಿತು ಎಂದು ತಾತ್ಪರ್ಯ. ಅವನಿಂದ ಘಾಯಗೊಂಡು ಅದು ಆಶ್ರಮದೆಡೆಗೆ ಓಡುತ್ತ, ಅವನು ಅದನ್ನು ಹಿಂಬಾಲಿಸುತ್ತ, ತನ್ನ ದುಸ್ಥಿತಿಯಲ್ಲೂ ಅವನನ್ನು ಅವಳಲ್ಲಿಗೆ ಕೊಂಡೊಯ್ದಿತು.
      1) ನಿಶಾನೆ ತಾನಾಗಿ+ಅವಿಷಾಣಪಾಶುಕವು
      2) ದುಷ್ಯಂತನ ತ್ರಿಶೂಲದಿಂದೆ ಘಾಸಿಗೊಂಡು
      3) ಜಂಗಲ್ಲು ಪದವನ್ನು ಕನ್ನಡಕಸ್ತೂರಿ.ಕಾಮ್‍ನಿಂದ ಅನಾಮತ್ತಾಗಿ ತೆಗೆದುಕೊಂಡೆ. I was also not sure about its correctness.

      Lots of mistakes! I will attempt again. Thanks for the lengthy clarification, especially about the absolute and relative complexities of literary expression 😉

  3. ಗಲ್ಲು ಗೆಲ್ಲೆನುತಿರುವ ಹೆಜ್ಜೆಯ
    ಹುಲ್ಲೆ ನಡಿಗೆಯ ಚೆಲುವೆ ತುರುಬಿನ
    ಮಲ್ಲೆ ಹೂವಲೆ ಹುಡುಕಿ ಸವಿ ಷಟ್ಪದಿಯು ಬೆಂಬತ್ತೆ
    ಬಲ್ಲಿದನು ದುಷ್ಯಂತ ರಾಜ ತಾ-
    ನಲ್ಲೆ ನುಗ್ಗುತ ಹಿರಿದು ಶೂಲವ
    “ನಿಲ್ಲು ನೀ, ಹಿಗ್ಗನ್ನು ಕಳೆವರ ನಾನುಳಿಸೆ”ನೆಂದ !

    • ಸೊಗಸಾದ ಪದ್ಯ.

      ತೋರದಂತೆಯೆ ದತ್ತ ಪದಿಗಳ
      ಕೂರಿಸಿಯೆ, ಸರಳತೆಯ ಸೊಬಗಲಿ
      ಜಾರುತಲೆ ನಾಲಿಗೆಯ ಮೇಲ್ಗಡೆ ತೇಲಿಹುದು ಮುದದಿ

      ೪ನೆಯ ಸಾಲಿನ ಕೊನೆಯ ಗಣದಲ್ಲಿ ಒಂದು ಮಾತ್ರೆ ಹೆಚ್ಚಾಗಿದೆ. “ರಾಜ” ನ ಬದಲು “ನೃಪ” ಎಂದು ಮಾಡಿದರೆ ಸರಿಯಾದೀತು.

      • ರಾಮಚಂದ್ರ ಅವರೆ,

        ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಹೀಗೆ ತಿದ್ದಿರುವೆ ನೋಡಿ:

        ಗಲ್ಲು ಗೆಲ್ಲೆನುತಿರುವ ಹೆಜ್ಜೆಯ
        ಹುಲ್ಲೆ ನಡಿಗೆಯ ಚೆಲುವೆ ತುರುಬಿನ
        ಮಲ್ಲೆ ಹೂವಲೆ ಹುಡುಕಿ ಸವಿ ಷಟ್ಪದಿಯು ಬೆಂಬತ್ತೆ
        ಬಲ್ಲಿದನು ದುಷ್ಯಂತ ತಾ ಭರ-
        ದಲ್ಲಿ ನುಗ್ಗುತ ಹಿರಿದು ಶೂಲವ
        “ನಿಲ್ಲು ನೀ, ಹಿಗ್ಗನ್ನು ಕಳೆವರ ನಾನುಳಿಸೆ”ನೆಂದ !

        • ಪದ್ಯಮಂ ಸೊಗಸಾಗಿರ್ಪ ಹೃದ್ಯಮಂಗಲವೇದ್ಯಮಂ|
          ಆದ್ಯೋಪಹಾರಮಂ ಗೆಯ್ದಾವೇದ್ಯರ್ಗೆ ಧನ್ಯವಾದನಂ||

  4. ಕೂಲುವವಿಷ ವೈದ್ಯಂಗದೌಷಧವು, ಕವಿಗೊ? ದುಷ್ಟಪ್ರಸಂಗವಲ ರಸವಿಷಯಬೀಜ
    ಮಲಿನಗುಣ ಶಾಪಶೂಲದಿ ಮರೆವೆಯಂತಾಗೆ, ವಿರಹಾವಮಾನಗಳ ಶೂಲ ಜಾಲ
    ನುಲಿಯೆ ಪ್ರೇಮಿಗಳ ಸಂಕಷ್ಟ ನೀರ್ಗಲ್ಲು ಕರಗಲು ತಾಳ್ಮೆಯೊರೆಗಲ್ಲು ಬೆರೆಯುವನಕ
    ನಲಿವ ಪೂಸೊಬಗನ್ನು ಆರಡಿಯಬೆರಗನ್ನು ಪ್ರೇಮಾಂಕುರಕೆ ತಂದು ಸಗ್ಗವನ್ನು

    ಸ್ರವಿಸಿಳೆಗೆ ಮೊಳೆಸಿ ಕಾವ್ಯಕಲ್ಪದ್ರುಮವನು
    ಕವಿಕುಲಗರು ಶುಕ್ಲಾಂಗಿಗಂ ಸ್ವರ್ಣ ವರ್ಣ
    ಚ್ಛವಿಯತಂದನೆ ನವಬ್ರಹ್ಮ, ರಸದ ಯಾನ
    ಬುವಿಯ ರಸಿಕರ್ಗೆ ದಂದುಗವ ದಾಟಿ ನಲಿಯೆ

    • ಸೀಸಪದ್ಯದೆ ನಿಸ್ಸೀಮೋಲ್ಲಾಸದಿಂ ದತ್ತಪದ್ಯಮಂ|
      ಲೇಸೆನಲ್ ರೂಪಿಪೀ ಬಲ್ಮೆ ಭಾಸುರಂ ವೀಪ್ಸೆಯೀಪ್ಸಿತಂ||

  5. ೨ ದಿನಗಳಿಂದ ಪದ್ಯಪಾನಮಾಡಿ ನಾನೂ ಎಕೆ ಕವಿತಾರಚನೆಗೆ ಪ್ರಯತ್ನಿಸಬಾರದೆಂದೆನಿಸಿ ಈಗ ನನ್ನ ಸ್ಥಿತಿ कवयामि वयामि यामि ಆಗಿದೆ. ಚಿಂತೆಯಿಲ್ಲ. ಆಸ್ವಾದನೆಗೇನೂ ಅಡ್ಡಿಯಿಲ್ಲ. ಆದ್ರೂ ಒಂದು ವಿಷಯದಲ್ಲಿ ಸಂಶಯ-
    ಮದ್ಯಪಾನದಿ ಜನರು ಸುಖದ ನಿದ್ದೆಯ ಸವಿಯೆ(ಎನಗೆ ಅನುಭವವಿಲ್ಲ)
    ಪದ್ಯಪಾನದಿ ದಿಟಕು ಅದು ಹಾರಿಹೋಯ್ತು

    • ಕಳೆದು ನಿದ್ರೆಯ ಕಾಡುತುಣಿಸನು
      ಬೆಳೆಸುತಮಲನು ಮೋಡಿಗೈವುದು
      ಮಳೆಯೊಲಂತುಟೆ ತಂಪನೆರೆವುದು ಮತಿಗೆ ಪದ್ಯಗಳು

      ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯಗಳನ್ನು ಎದುರು ನೋಡುತ್ತೇವೆ. ಛಂದಸ್ಸಿನ ಬಗ್ಗೆ ಅಥವಾ ಪದ್ಯ ರಚನೆಯ ಬಗ್ಗೆ ಸಂಶಯಗಳಿದ್ದಲ್ಲಿ ಈ ತಾಣದಲ್ಲೇ ಮೇಲೆ (in the menu) ಸಿಗುವ ಪಾಠಗಳನ್ನು ಗಮನಿಸಿರಿ.

    • ಪದ್ಯಪಾನಕ್ಕೆ ಸ್ವಾಗತ. ಮದ್ಯಪಾನ Vs ಪದ್ಯಪಾನ:

      ಎರಡುಮೊಂದೆಂಬೆಮ್ಮರಿವ ಸುಳ್ಳೆನಿಸಿ ತೋರಿ
      ದಿರಿ ಮೋಜಿನ ವ್ಯತ್ಯಯವನು ನೀವು|
      ಇರದಿರ್ದೊಡಾದೊಡನುಭವವು ನಿಮಗೆಂತದೆ
      ಮ್ಮರಿವ ತಪ್ಪಿಸಲಾಯ್ತು ನಿಮಗೆ ಪೇಳಿ||

      ಪಂಚಮಾತ್ರಾಗಣ ಅರ್ಥಪದ್ಯ. ಎರಡನೆ ಸಾಲಿನ ವಿಸಂಧಿ ಹಾಗೂ ಗಣಿತ ದೋಷಗಳನ್ನು ಹೀಗೆ ಸವರಬಹುದೇನೋ: ಪದ್ಯಪಾನದಿ ಹಾರಿಹೋಯ್ತದು ದಿಟಂ|

    • यामि ಎಂದಿರುವುದು ಸರಿಯಾಗಿಯೇ ಇದೆ. ಅದೆಷ್ಟೋ ಯಾಮದವರೆಗೆ ಎಚ್ಚರಾಗಿರುವವರನ್ನು ಯಾಮಿ ಎನ್ನಬಹುದೇನೋ 🙂

      • ಧನ್ಯವಾದಗಳು ಪ್ರಸಾದ್ ಹಾಗೂ ರಾಮಚಂದ್ರರಿಗೆ. ಇನ್ನು-

        ಪದ್ಯಕಟ್ಟುವ ಮುನ್ನ ಪಳೆಯದೆಲ್ಲವನ್ದೋದಿ
        ಹೃದ್ಯವಾಗಿಪುದದುವೆ ಒಳಿತೆಂದು ಬಗೆದೀ-|
        ಗದ್ಯಮೂ ಪದ್ಯಮೂ ಅಲ್ಲದೀ ಶೈಲಿಯಿಂ
        ಸಧ್ಯದಲೆ *ವಿರಮಿಸುವೆ ಗೃಹಕೃತ್ಯಕಾಗಿ||

        *ವಿರಾಮ ಪದಪ್ರಯೊಗದ ಇಲ್ಲಿ ಶುದ್ಧವಾ ಗೊತ್ತಿಲ್ಲ.

    • Honed:
      ಎರಡುಮೊಂದೆಂಬೆಮ್ಮ ಖಂಡಿಸಿದಿರಲ್ತರಿವ
      ಬೆರಗಿನೀ ವ್ಯತ್ಯಯವ ತೋರಿ ನೀವು|
      ಇರದಿರ್ದೊಡನುಭವವು ನಿಮ್ಮೊಳಿಂತೆಂತದೆ
      ಮ್ಮರಿವ ತಪ್ಪಿಸಲಾಯ್ತು ಪೇಳಿ ನೀವು||

  6. ದುಷ್ಯಂತ ಶಕುಂತಲೆಯರ ಮರು ಭೇಟಿಯ ಸಂದರ್ಭ ::

    ಮೆಲ್ಲ ಮಾತಿನ ರೂಪರಾಶಿಯ
    ಮಲ್ಲೆ ಸಂಪಿಗೆ ಪೋಲ್ವ ಬಾಲೆಯ
    ಲಲ್ಲೆಯರಗನ್ನುರಿಸಿ ಮುಗ್ಧತೆಯನ್ನೆ ಕರಿಗೈದೆ |
    ಸಲ್ಲಿಸುತ ಘೋರಾಪಮಾನವ
    ಸೊಲ್ಲಿನಲೆ ಕೊಲ್ಲುವೆಯೆ ಸತ್ವವ
    ಗಲ್ಲಿಗೆತ್ತುತ ವಿಷದ ಶೂಲವ ಗರ್ಭಕಿಕ್ಕಿದವೊಲ್ ||

    [ಕರಿಗೈದೆ = ಸುಟ್ಟು ಹಾಕಿದೆ]

    • ಚಂಪಕ > ಸಂಪಗೆ
      ಸತ್ವ x ಸತ್ತ್ವ _‍/

      • ಪ್ರಸಾದು,

        ಕ್ಲಿಷ್ಟದೀ ಸೂಚನೆಯನರಿಯಲು
        ಕಷ್ಟ ಗೈದರು ಸಿಗದ ಮರ್ಮದೆ
        ನಷ್ಟವಾದುದೆ ವಿಷಯ ಗಂಭೀರವೆನೆ ಕೌತುಕವು ||

      • ಸ್ಪಷ್ಟವಾಗುವುದೆಲ್ಲ ಮಾಡ
        ಲ್ಕಿಷ್ಟು – ’ಸತ್ವವ’ ಪದದೊಳಗೆರಡ
        ರಷ್ಟುಗೊಳಿಸಿ ’ತ’ಕಾರ, ಸಂ’ಪ’ಗೆಯಾಗೆ ಸಂ’ಪಿ’ಗೆ ಮೇಣ್||

  7. ವಿಷಯರೆಲ್ಲರು ತನ್ನ ಸಂತತಿಯದರಸೆ ಕಿ
    ಲ್ಬಿಷವಪ್ಪುದವರೊಳೇ ಸತಿಯ ರಾಜನ್|
    ಉಷೆಯರಸವಂಶನೃಪ ಕಾಲನಾ ಕೂಗನ್ನು
    ವಿಷಯವಾಸನೆಯಂತೆ ಹಿಂಬಾಲಿಸಲ್||

    ಆಶ್ರಮಂಗಳದಾವ ರಾಜ್ಯಕುಂ ಸೇರದಿರ
    ಲಾಶ್ರಯವು ಸರ್ವರಿಂಗಲ್ಲುಂಟು ಕೇಳ್|
    ಅಶ್ರಮದೆ ಕಣ್ವರಾ, ಶೂಲಪಾಣಿಯು ಹರಸೆ
    ವಿಶ್ರುತ ಶಕುಂತಲೆಯ ವರಿಪುದಾಯ್ತು||

    • ವಿಷಯ = subject = citizen
      ಉಷೆಯರಸವಂಶನೃಪ = ಸೂರ್ಯವಂಶದರಸ = ದುಷ್ಯಂತ

  8. ತಡವಾಗಿ ಹೀಗೆ ಬಂದೆ:

    ಭೇಟಿಯಾದ ಶಕುಂತಲೆಯ ತಾ
    ಬೇಟೆಮರೆಯುತಲಾದುಷ್ಯಂತ
    ನೋಟದಾಶೂಲವದು ಹೊಕ್ಕಿರೆ ಎದೆಯ ಝಲ್ಲೆನಿಸಿ |
    ಮೀಟಿ ಸಾವಿರ ವೀಣೆಯೊಮ್ಮೆಲೆ
    ಮೇಟಿನೀನೆನಗನ್ನುತಂದದಿ
    ಕೂಟವಿಷಯದಿ ಕುವರನೆದೆಯೊಳು ಗಲ್ಲು ಗಲ್ಲೆನಿಸಿ ||

    • ಭಟ್ಟರೆ,

      ’ಕುವರ’ನೇಂ ದುಶ್ಯಂತ?ನಂತಿರ
      ಲವನದಂತಃಪುರಿಕ,ವಾಕೆಗೆ (ಶಕುಂತಲೆಗೆ)
      ಸವತಿಯರು ಹಂಸವತಿ ವಸುಮತಿಯರು ಪೂರ್ವದೊಳೆ|

      (ಅಂತಃಪುರಿಕ = Harem)

    • ’ಕು-ವರ’ನೆನಲೂ ಬಾರದಂದದೆ
      ಲವನು ರಕ್ಷಿತ ಧರ್ಮದಿಂ, ಕ್ಷಾ
      ತ್ರ ವರಿಸಿರ್ದೊಡೆ ಪಲವು ಪೆಣ್ಗಳ ಗರ್ವವೆನಿಪುದದು||

  9. ಪೆಚ್ಚಿಸಿರೆ ಮೆರಗನ್ನು ತೋಂಟದ
    ಮೆಚ್ಚುತಲೆ ಶಿಲೆಗಲ್ಲೆ ಆದನು
    ಬಿಚ್ಚು ನೋಟದೊಳರಳೆ ಚೆಲುವೆಯು, ಜಲಜ ನಾಚಿದವು |
    ಕಿಚ್ಚಿನ್ನಿಂ ಶಪಿಸಿದವು ಮಧುಕರ
    ಚುಚ್ಚಿತೋ ವಿಷ ಶೂಲವೆಂಬೊಲು
    ಮೆಚ್ಚಿದಾ ಸುಮವನ್ಯ ಪುರುಷನ ಪಾಲಿಗಾದುದಕೆ ||

    • punch-packed last line!

      ಮೆಚ್ಚಿ ನೃಪನಾದನರೆಗಲ್ಲುಂ*
      ಪೆಚ್ಚಿಸಿರೆ ಮೆರಗನ್ನು ತೋಂಟದ
      ಬಿಚ್ಚು ನೋಟದೊಳರಳಿ ಚೆಲುವೆಯು ಜಲಜ ನಾಚುವವೊಲ್|
      ಕಿಚ್ಚಿನ್ನಿಂ ಶಪಿಸಿದವು ಮಧುಕರ
      ಚುಚ್ಚಿತೋ ವಿಷಶೂಲವೆಂಬೊಲು
      ಮೆಚ್ಚಿದಾ ಸುಮವನ್ಯಪುರುಷನ ಪಾಲದಾದುದಕೆ||

      (’ಗಲ್ಲೆ’ ಬದಲು ’ಗಲ್ಲು’ ಎಂಬ ರೂಪವನ್ನೇ ಉಳಿಸಿಕೊಳ್ಳಲು ಹೀಗೆ ಮಾಡಬಹುದು)

  10. I could not provide my pUraNa for this earlier, attempting now… better late than never 🙂

    ದು೦ಬಿಯಾಗಲ್ಲುಣ್ಮುವಾಕರ್ಷಣಗೆ ಹೇತು
    ತ೦ಬೆಲರ್ ಸವಿ ಷಡ್ಜದಿ೦ ಪಾಡಲು
    ತು೦ಬಿದಾ ಕ೦ಗಳಿಮನ೦ಗ೦ ನುಸುಳಿಸಿರ್ದ-
    ದಿ೦ಬು ಶೂಲ೦ಗಳಿ೦ ಕ೦ಡವಲ್ತೇ

    ಅನ್ವಯ: ಅನ೦ಗ೦ ನುಸುಳಿಸಿರ್ದ ಶೂಲ೦ಗಳಿ೦ ಇ೦ಬು ಕ೦ಡವಲ್ತೇ

Leave a Reply to ಹಂಸಾನಂದಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)