Apr 132013
 
ಸಮುದ್ರ ಮತ್ತು ಸೂರ್ಯ

ಸಮುದ್ರ ಮತ್ತು ಸೂರ್ಯ
(ಚಿತ್ರ ಕೃಪೆ : ಅಂತರ್ಜಾಲ)

 

ಈ ಚಿತ್ರಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸುಗಳಲ್ಲಿ ಪದ್ಯಗಳನ್ನು ಬರೆಯಿರಿ

  83 Responses to “ಪದ್ಯಸಪ್ತಾಹ – ೬೬ : ಚಿತ್ರಕ್ಕೆ ಪದ್ಯ”

  1. ಸೂರ್ಯನನ್ನು ಕಂಡ ಅಲೆಯು ತಮ್ಮಿಬ್ಬರ ಭೇದವನ್ನು ಹೇಳುವ ನೆವದಿಂದ ಧ್ವನಿತವಾಗುವ ಒಂಡು ಅನ್ಯೋಕ್ತಿಯನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ. ನೀರಿನ ಹನಿಯಲ್ಲಿ ಹೊಕ್ಕ ರವಿಕಾಂತಿಯು ಇಂಡ್ರಚಾಪವರ್ಣದಿಂದ ಕಂಗೊಳಿಸುವುದೂ ಸೂರ್ಯನಲ್ಲಿ ಸೇರಿದ ನೀರು ಆವಿಯೇ ಆಗಿ ಸೀದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದೂ ಇಲ್ಲಿ ಗೆಳೆಯರಿಬ್ಬರು ಒಬ್ಬರ ಮನೆಗೊಬ್ಬರು ಬಂದಾಗ ಆತಿಥ್ಯದಲ್ಲಿ ಆಗುವ ವ್ಯತ್ಯಾಸಗಳನ್ನು ಸೂಚಿಸುವಂತೆ ಬಳಕೆಯಾಗಿದೆ. ಇದರ ಚಾರುತ್ವಾಚಾರುತ್ವಕ್ಕೆ ಸಹೃದಯರೇ ಪ್ರಮಾಣ.

    ಎನ್ನೊಳ್ ಪೊಕ್ಕೊಡೆ ನೀಂ ನಿರಸ್ತರುಚಿಯೇ! ಚಂಡಾಂಶುವೇ! ನೀಗುತುಂ
    ನಿನ್ನ ಕ್ರೌರ್ಯಮನಾಂಪೆಯಲ್ತೆ ಸೊಗಸಿಂ ಸಲ್ವೆಲ್ಲ ಬಣ್ಣಂಗಳಂ |
    ನಿನ್ನಂ ನಾಂ ಪುಗೆ ಮಿತ್ರನೆಂದಕಟ ನೀಂ ತಿಂಬಯ್ ಮಮಾಸ್ತಿತ್ವಮಂ
    ಭಿನ್ನಂ ನಮ್ಮನುರಾಗಮೆಂದುಲಿಗುಮೀ ಕಲ್ಲೋಲಮುಲ್ಲಾಸದಿಂ ||

    • ಗಣೇಶ್ ಸರ್,
      ಇಂತಹ “ಶಾರ್ದೂಲವಿಕ್ರೀಡಿತ” ಸ್ನೇಹಬಂಧ ತಂದ ನೀವೇ ಮಾನ್ಯರು, ಕಂಡ ನಾವೇ ಧನ್ಯರು.

    • ಪ್ರಿಯ ಗಣೇಶರೆ

      ನೀವು ಹಾಕಿದ ಅತಿ ಸೊಗಸಾದ ಪದ್ಯದದ ಮೇಲ್ಪಂಕ್ತಿಯನ್ನು ಅನುಸರಿಸಿ ಉಳಿದ ಪದ್ಯಪಾನ ಮಿತ್ರರು ಅದ್ಭುತವಾದ ರಚನೆಗಳನ್ನು ಟಂಕಿಸುತ್ತಿದ್ದಾರೆ. ನಿಮ್ಮೆಲ್ಲರಿಗೂ ಹಾರ್ದಿಕ ಅಭಿನಂದನೆಗಳು

    • ಗಣೇಶ್ ಸರ್,

      ಮನೆಗಂ ನೇಹದಿ ಬರ್ಪ ಕಲ್ಪನೆಯ ತರ್ಕಂ ಚಂದದಿಂ ತೋರ್ಗುಮಯ್

      ಐಡಿಯಾ ಬಹಳ ಹಿಡಿಸಿತು 🙂

    • ವಾರತರಂಗವದೇಳ-
      ಲ್ಕೀ ರಸಗರ್ಭಿತಸಮುದ್ರದೆ ಭಳಿರೆ ನೀಮೀ
      ಸಾರೋಕ್ತಿಯ ಸೂರ್ಯನವೊಲ್
      ತೂರುವ ಕರದಿಂ ಪ್ರದೀಪ್ತವಾಯ್ತೀ ಪಾನಂ

      ಒಂದು ಸಂದೇಹ: ’ಆಂಪೆ’ ಎನ್ನುವುದರ ಬಳಕೆ ಹೇಗೆ?

  2. ನೀರ ಮಸೂರದೆ ನೀಲಿಯ ಸೂರನು
    ನೇರದೆ ನೋಡಿರೆ ತಾನರನು
    ತೀರವ ಸೇರಲು ತೂರಿಹ ತೆರೆಯೊಳು
    ತೋರುತ ತೇಲಿಹ ನೇಸರನು ॥

    (ಚಿತ್ರದ ಅಲೆಯು ಮಸೂರವಾಗಿ ಕಂಡ ಕಲ್ಪನೆಯಲ್ಲಿ)

    • ಕಲ್ಪನೆ ಸೊಗಸಾಗಿದೆ.

    • ತೆರೆಯ ಮಸೂರದೆ ಬಾನಿನವೀಕ್ಷಣೆ
      ತರಣಿಯ ತಾರಣಮೇ ಚಂದಂ

      ಬಹಳ ಸೊಗಸಾಗಿದೆ

    • ಧನ್ಯವಾದಗಳು ಗಣೇಶ್ ಸರ್,ಸೋಮ ಸರ್,
      ಛಂದಸ್ಸಿನ ಆಯ್ಕೆಯ ವಿಷಯದಲ್ಲಿ ಸ್ವಲ್ಪ ತೊಡಕಾಗುತ್ತಿದೆ.
      ಇದೇ ಕಲ್ಪನೆಯನ್ನು ವೃತ್ತದಲ್ಲಿ ತರುವ ಇಚ್ಚೆ ಇದೆ.

    • ತೆರೆನೊರೆಯುಪ್ಪಿನಪ್ಪಿನಲಿ ತನ್ಮಯ ಭಾವವು ತುಂಬೆತಾನರಂ
      ತೆರೆಮೆರೆಯುಬ್ಬುತಗ್ಗಿನಲಿ ನೀರಮಸೂರದೆ ಕಂಡ ನೇಸರಂ
      ತೆರೆಮೊರೆಯಿಂಪತಂಪಿನಲಿ ಪೆಂಪಿನ ಕಂಪವ ತಂದು ಸಾಗರಂ
      ತೆರೆತೆರೆಯಂದಚಂದದಲಿ ಕಂಗಳು ಕಂಡಿಹ ನೇಹ ಸಂಗಮಂ ॥

  3. ಸೇರೆ ಋತಕಾರ್ಯಕ್ಕೆ ಬೇಯ್ವುದೇ ನೈಜವಿಧಿ ಸೂರ್ಯನೇ ಮೂದೇವರಾಟಕಿಳಿಯೆ
    ನೀರಲೆಯಹಂಕುಸಿದು ಕಾವಿಗೆಲ್ಲವಬಸಿದು ಜೀವನದ ಸಾರ್ಥ್ಯಕ್ಯ ಹಸಿದು ಬೆಸೆಯೆ
    ವಾರಿ ಸಂಸಾರಿ ತೆರೆಯಾಗುತ್ತ ಮೇಲೆದ್ದು ಚಕ್ರಾಸನವಗೈವ ಚಿತ್ರಭಾಗ
    ಬೇರು ನಿನ್ನದೆ ತಂದೆ, ಸೇರೆ ನಿನ್ನನು ಬಂದೆ, ಹೀರೆನ್ನನ್ ಎಂದರ್ಘ್ಯಮಿಟ್ಟ ಯೋಗ

    ನಾನಿದಲೆಯೆಂಬ ಮಿಥ್ಯೆ ಕಳೆದಾವಿಯಾಗಿ
    ಸ್ಥಾನವರಿತೇನೆ ಬೆರತೇನೆ ವಿಶ್ವವಾಗಿ?
    ಧ್ಯಾನದೊಳಗಿನಲೆಯಳಿದಾಗಲುಳಿವ ನಾನು
    ತಾನು ಬೇರಲ್ಲ ಬೇರಿಲ್ಲವೆನುವುದೇನು?

    ’ಅಗ್ನೇರಾಪ:” ಆಗ್ನಿಸ್ವರೂಪ, ಸೂರ್ಯನ ಮಗ ನೀರು. ಅದನ್ನು ಆತ, ಶೈತ್ಯದ ಕಾಠಿನ್ಯದಿಂದ ಬಿಡುಗಡೆಮಾಡಿ, ಆವಿಯಾಗಿಸಿ ಜೀವನ(ಮೋಡ)ಕೊಟ್ಟು ಜೀವನಾಧಾರ ವಾಗಿಸುತ್ತಾನೆ. “ ಹಿಮ-ಜಲ-ಆವಿ” ಗಳಾಗಿ ಮತ್ತೆ ಆ ಆವಿ ನೀರಾಗುವ ಸಾತತ್ಯ, ಸೃಷ್ಟಿ-ಸ್ಥಿತಿ-ಲಯಗಳ ತರಂಗಚಕ್ರದಂತೆ. ಜಗಚ್ಚಕ್ಷುವಿನ ಈ ಋತಕ್ರಿಯಲ್ಲಿ ಭಾಗಿಯಾಗಿ, ’ಜೀವನಾಧಾರ’ ದ ಪದವಿ ಪಡೆಯಲು, ’ ನನ್ನನ್ನು” ಆವಿಯಾಗಿ ರೂಪಾಂತರಗೊಳಿಸು ! ಎನ್ನುತ್ತ ಅಲೆ, ಚಕ್ರಾಸನದಲ್ಲಿ ಬಾಗಿ ಅರ್ಘ್ಯಪ್ರದಾನ ಮಾಡುತ್ತಿದೆಯೇ ಎಂಬ ಭಾವ. ಹಾಗೆಯೇ ಅದರ ಸಮನ್ವಯದಿಂದಾಗುವ ಅಂತರ್ಭಾವ ವಾಚ್ಯವೇ ಆಗಿದೆ.

    • ತುಂಬ ಪ್ರೌಢವಾದ ಕಲ್ಪನೆ..!

    • ಪ್ರಿಯ ಚಂದ್ರಮೌಲಿಯವರೇ

      ಬಹಳ ಸೊಗಸಾಗಿವೆ ನಿಮ್ಮ ಪದ್ಯಗಳು. Really enjoyed them. ಅಭಿನಂದನೆಗಳು

    • Dear Chandramowly Sir,

      Very brilliant and wonderful Dhwani in your poem.. 🙂

    • ಋತಚಕ್ರಮಂ ಬಲ್ಮೆಯಿಂ ಪೊಂದಿಸುತೆ ಪದ್ಯದೊಳ್ ನೀಡಿದರ್ಘ್ಯಮನು ಸ್ತುತಿಪೆನೆಂತು

      ಬಹಳ ಚೆನ್ನಾಗಿದೆ ಚಂದರ್ಮೌಳಿಯವರೇ 🙂

      • ಧನ್ಯವಾದಂ ಮಾನ್ಯ ಸೋಮಾಖ್ಯ ಚತುರಾಗ್ರ ರಸಶೋಧ ನಿರ್ಮಲಿನ ಪ್ರತಿಫಲನಕಂ

    • ಧನ್ಯವಾದಗಳು ಚಂದ್ರಮೌಳಿ ಸರ್,
      ಪದ್ಯ ತುಂಬಾ ಇಷ್ಟವಾಯಿತು. ವಿಶೇಷವಾಗಿ “ಬೇರು ನಿನ್ನದೆ ತಂದೆ, ಸೇರೆ ನಿನ್ನನು ಬಂದೆ … “,
      “ತಾನು ಬೇರಲ್ಲ ಬೇರಿಲ್ಲ … ” ಸಾಲುಗಳು

  4. When the sun sears at noon, the ripples are subdued, for they are usurped by the heat of the sun. At sunset when the sun is no more hot, the ripples conduct themselves in gay abandon.
    ಮಹಾಸ್ರಗ್ಧರಾ||
    ನೆರೆದಿರ್ದಾಗಳ್ ರವೀಶಂ ಗಗನಶಿಖರದೊಳ್ ನಮ್ರ ನೀನಿರ್ಪೆಯೆಂತೋ
    ಮೊರೆಯಲ್ ನೀನಾವಿಯಾಗಳ್ ಬಿಸಿಲಝಳಕೆ ನೀಂ ಸೋಲ್ವೆ ಸುಮ್ಮಾನದಿಂದಂ|
    ಸರಿದಾಗಾ ಸೂರ್ಯತೇಜಂ ಪಡುವಣತುದಿಗಂ ತಾಪ ನೀಗುತ್ತಲಾಗಲ್
    ಮೆರೆಯೈ ಕಲ್ಲೋಲರಾಜನ್ ಹೊರಳುತುರುಳುತಲ್ ನಿತ್ಯವೀ ಖೇಲಲೀಲಂ||

    • ಪ್ರಖರಂ ಶಾಂತಸ್ವಭಾವಂ ಶರಧಿಯನುಭವಕ್ಕೀವ ಪದ್ಯಂ ವಿಶಿಷ್ಟಂ

      ಬಹಳ ಚಿನ್ನಾಗಿದೆ ಪ್ರಸಾದು 🙂

      • ಸೋಮ,
        ಶಿಖರಂ ಪದ್ಯಾಂಗಣಕ್ಕಂ| ಭವದಭಿಮತಗಳ್| ಮಿಂದೆ ನಾನಿಂದು ಧನ್ಯನ್

    • ಕಲ್ಪನೆಯೂ ಮಹಾಸ್ರಗ್ಧರೆಯ ಹಾಸು-ಬೀಸುಗಳಿಂದ ಧ್ವನಿತವಾಗುವ ವಸ್ತುವಿಸ್ತೃತಿಯೂ ಸೊಗಸಾಗಿವೆ. ಭಾಷಾದೃಷ್ಟಿಯಿಂಡ ಕೆಲವೊಂದು ಸವರಣೆಗಳಷ್ಟೇ ಬೇಕಿವೆ. ಇವನ್ನು ಮುಖತಃ ಹೇಳುತ್ತೇನೆ.

    • ಮಾ,
      ಕೃತಜ್ಞತೆಗಳು. ಭಾಷಾಸವರಣೆಗಳು ಬೇಕಿವೆ ಎಂದಷ್ಟೇ ಗೊತ್ತು ನನಗೆ. ಯಾವುವು ಎಂಬುದು ನೀವು ಹೇಳಿದಮೇಲೇ ತಿಳಿಯುವುದು.

      • ಭಾಷಾ ಸವರಣೆಯ ಕುರಿತು ಮಾತು ಬಂದದ್ದರಿಂದ ಕೇಳುತ್ತಿದ್ದೇನೆ :: ಗಣೇಶರನ್ನು ‘ಮಾ’ ಎಂದೇಕೆ ಸಂಬೋಧಿಸುತ್ತಿರುವಿರಿ ಎಂದು ತಿಳಿಯುತ್ತಿಲ್ಲ 🙂

      • ಅದು ನಮ್ಮ ನಡುವಿನ ಮಿಂಚೆಗಳಲ್ಲಿ ಬಳಸುವ ಸಂಬೋಧನೆಯ ಹ್ರಸ್ವರೂಪ. ನಾನು ಅವರನ್ನು ಮಾ(ನನೀಯ) ಎನ್ನುತ್ತೇನೆ, ಅವರು ನನ್ನನ್ನು ಆ(ದರಣೇಯ) ಎನ್ನುತಾರೆ.

        • ನಿಮ್ಮ ನಡುವಿನ ಸಂಬೋಧನಾ ಸೂಕ್ಷ್ಮಗಳನ್ನು ತಿಳಿಯುವುದು ಸಾಮಾನ್ಯರಾದ ಜನರಿಗೆ ಸಾಧ್ಯವಿಲ್ಲ. ಅವು ಜನಪ್ರಿಯವಾದ ಅಂಕಿತಗಳಾಗಿದ್ದಲ್ಲಿ ಒಪ್ಪುತ್ತೇವೆ. ಇಲ್ಲದಿದ್ದರೆ ನಮ್ಮ ಮನಸ್ಸಿಗೆ ಕಂಡಂತೆ ಅರ್ಥೈಸಿಕೊಳ್ಳುತ್ತೇವೆ 🙂
          [ ನಾವು ಅಂದರೆ ನಾನೊಬ್ಬನೇ ಅಲ್ಲ 🙂 ]

        • ಉಳಿದವರದು ಅಂತಿರಲಿ. ನಿಮ್ಮ ಸ್ವಂತಕ್ಕೆ ತೋರಿದ ಒಂದು ಅರ್ಥವನ್ನು ಹೇಳೋಣವಾಗಲಿ.

          • ‘ಮಾ’ ಎಂದುಶುರುವಾಗುವ ಅನೇಕ ಸಂಬೋಧನೆಗಳಿವೆ. ಪಂಚತಂತ್ರದಲ್ಲಿ ‘ಮಾಮ’ ಎಂದು ಉಪಯೋಗ ಬಹಳಷ್ಟಿದೆ. ಮಕ್ಕಳು ತಾಯಿಯನ್ನು ‘ಮಾ’ ಎಂದು ಕರೆಯುತ್ತಾರೆ.
            ಸಂಬೋಧನರ್ಥವಲ್ಲದೆ, ಬೇಡ ಎಂದೂ ಅರ್ಥವಗುತ್ತದೆ (ಉದಾ: ಹೊಡೆಯಬೇಡ, ಬೈಯಬೇಡ,…)

        • ನಾನು “ಮಾ”ಸ್ಟರ್ ಎಂದು ಊಹಿಸಿದ್ದೆ .

    • I have honed the 3rd line:
      ಸರಿಯಲ್ಕಾ ಸೂರ್ಯತೇಜಂ ಪಡುವಣದಡಿಗಂ ತಾಪ ನೀಗುತ್ತಲಾಗಳ್

  5. ತರಣಿಶರಧಿಯ ಯುದ್ಧಮಂ ತೋರ್ಗುಮಲ್ತೇ

    ಹರಹಿರ್ಪಂಬುಧಿಯಂ ವಿಕರ್ತನಕರಂಗಳ್ ಕ್ಷೀಣಿಸಲ್ ಸಂತತಂ
    ತೆರೆಯಾಳ್ಗಂ ಬಲವರ್ಧಿಸುತ್ತೆ ಲವಣೋದಂ ಪೂಡಿದಾ ರಕ್ಷೆಯಂ
    ತರಣಿ ಕ್ರೌರ್ಯತೆಯಿಂದೆ ಗೆಲ್ವುದಕೆ ತಾಂ ಪರ್ಯಾಯಮಂ ಗಯ್ಯುತುಂ
    ತಿರೆಗಂ ಧಾವಿಸಿ ಭೇದಿಸುತ್ತೆ ತೆರೆಯಂ ಸಂತಾಪಮಂ ನೀಳ್ದನಯ್

    ಹರಹು – ಹರಡು
    ವಿಕರ್ತನ,ತರಣಿ = ಸೂರ್ಯ
    ತೆರೆಯಾಳ್ = ತೆರೆಯೆಂಬ ಯೋಧ
    ಅಂಬುಧಿ,ಲವಣೋದ = ಸಮುದ್ರ

    • ಪರಿಪೂರ್ಣಂ ನುಡಿಗಟ್ಟಿನಿಂದೆಸೆವುದೀ ಮತ್ತೇಭವಿಕ್ರೀಡಿತಂ
      ಮೆರುಗಾಗಳ್ ಸುವಿಶಿಷ್ಟಸಂಸ್ಕೃತಪದವ್ಯಾಸಜ್ಜನಂ ಸಜ್ಜನಂ |
      ಸರಸಂ ವಾಚಕನೊಲ್ದು ಮನ್ನಿಸನೆ? ಮೇಣ್ ಮಾರ್ತಂಡಗೀ ವೀಚಿ ನಿರ್-
      ಭರಸುಪ್ರೀತಿಯ ವಂದನಂಗಳಿಡುವಂದಂ ಬಾಗನೇಂ ಹ್ಲಾದದಿಂ?

    • ಚೆನ್ನಾದ ಹೊಸ ಕಲ್ಪನೆಗೆ ಸೋಮ ಮುದ್ರಿತ ಬಿಗಿಬಂಧ !

    • ತುಂಬಾ ಚನ್ನಾಗಿದೆ ಸೋಮ, ಧನ್ಯವಾದಗಳು . ಬಹಳಷ್ಟು ಹೊಸಪದಗಳನ್ನು ಕಲಿತಂತಾಯಿತು. ಪದ್ಯವನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಿದ್ದೇನೆ.

  6. ಗಣೇಶ್ ಸರ್, ಚಂದ್ರಮೌಳಿಯವರೇ, ಧನ್ಯವಾದಗಳು

  7. ನೇಸರಂ ಜಗಕೆ ಮೀಸಲೆಂಬುದುಂ
    ಮಾಸಿ ಪೋಗಿಹುದು ಬಾನ್ಗೆ ಖಂಡಿತಂ
    ತ್ರಾಸಿನಿಂ ಹೆಣೆದಳೂರ್ಮಿಮಾಲೆಯಂ
    ಹಾಸಿ ಹಾಸವನು ದಿಗ್ದಿಗಂತಕಂ

    [ಮುಗಿಲು ರವಿ ತನನ್ನು ವರಿಸಲು ಬಂದಿರುವನೆಂಬ ಬಗೆಯಲ್ಲಿ ಊರ್ಮಿಮಾಲೆಯನ್ನು ತರುತ್ತಿದ್ದಾಳೆ]

  8. The waves are flowing southward (w.r.t. to the sun receding in the west). South is the destination of hell. The wave says, “The Sun may have sinned, wherefore he sets. I have done nothing to earn hell. I won’t go southward.” Hence it makes a U-turn.

    ರಥೋದ್ಧತ||
    ಅಸ್ತಮಾನವು ಗಡೀಗ ಸೂರ್ಯಗಂ
    ಗ್ರಸ್ತ ತಾನಹನೆ ಪಾಪದಿಂದೆ ತಾಂ|
    ಶಿಸ್ತಿನಿಂ ತೊನೆಯುವಾನು ಪೋಗುಗೇಂ
    ರಸ್ತೆಯಂ ಪಿಡಿದು ಕುಂಭಿಪಾಕದಂ?

  9. A retreating wave loses mass and ends up as droplets. In the given pic, there is no such tapering. In fact it has become more dense. My surmise is that this is an insensitive exercise in Photoshop software.

    ಎಲರನ್ನೆದುರ್ಗೊಂಡು ಮೇಳವಿಸಿ ತೊನೆಯುತ್ತ
    ಲಲೆ ವರ್ತುಲಾಕಾರಮಾದೊಡಿಂತುಂ|
    ಖಿಲಮಾಗದೆಲೆ ತುಂತುರೊಳಗಷ್ಟರೊಳಗಿಂತು
    ಬಲಿಯುವುದು ಫೋಟೊಶಾಪಿನೊಳಗಲ್ತೆ||

  10. The river Ganga is black. Even the brilliance of the sunset cannot light her up. Why?

    ವನಮಯೂರ||
    ಪಾಪಿಗಳು ತಾವೆನಿತೊ ಗಂಗೆಯೊಳು ಮೀಯಲ್
    ಕೋಪಿಸದೆಲೆಲ್ಲರನು ಪಾವನವ ಗೈವಳ್|
    ಭಾಪಿನಿಳಿಸೂರ್ಯದ್ಯುತಿಯುಂ ಬೆಳಗದಂದಂ
    ಪಾಪಗಳ ಹೊತ್ತುನಡೆದಾಕೆ ಬಹು ಧನ್ಯಳ್||

  11. ಭೋಗನಿದ್ರೆಯ ಜಗದಲೀಪರಿ
    ಯೋಗಮುದ್ರೆಯ ಸೊಗವು ಕಂಡಿರ
    ಲಾಗ ನೇಸರ ನಲಿಯುತಿಹನೈ ನಿತ್ಯ ಸಂಭ್ರಮದಿಂ।
    ತಾಗಿ ತರಣಿಯನಾಗ ಸಾಗರ
    ಬಾಗಿ ಬಂದಲೆಯುಂಗುರದೊಳನು
    ರಾಗ ಬೆಸೆದಿಹ ಬೆರಗದೇನಿದು ಸೃಷ್ಟಿ ಸಂಭವವೈ ॥

    ( ಚಿತ್ರದ ಅಲೆಯ ಬಾಗು ಪ್ರಕೃತಿಯ ಯೋಗಮುದ್ರೆ(ಚಿನ್ಮುದ್ರೆ)ಯಂತೆ ಕಂಡ ಕಲ್ಪನೆಯಲ್ಲಿ)

  12. ಏಸುತಾನಲೆದರುಂ ನಭದೆಕನ್ನಡಿಯಿಲ್ಲ
    ಹಾಸಿರ್ಪ ನೀರ ದರ್ಪಣವ ಕಂಡು|
    ಕೇಸರಿಯ ಯು ತನ್ನಮೊಗಮಂ ಕಾಣೆ ನೀರಿನೊಳ್
    ನೇಸರನು ತಾನಗುತ ಬಂದಿರ್ಪನೇಂ|

    ಕಲ್ಪನೆ: ಸೂರ್ಯನು ಎಲ್ಲಿಯೂ ತನ್ನ ಮುಖವನ್ನು ನೋಡಿಕೊಳ್ಳಲಾಗದೆ,ಭೂಮಿಯ ಕಡೆ ನೋಡಿ ಸಮುದ್ರದ ನೀರಿನಲ್ಲಿ ತನ್ನ ಮುಖ ನೋಡಿ ಸಂತಸಗೊಂಡ

    • ಇಲ್ಲಿ ಕೇಸರಿ ಬೇರೆ ವ್ಯಕ್ತಿ, ನೇಸರ ಬೇರೆ ವ್ಯಕ್ತಿ ಎಂದು ಬೋಧೆಯಾಗುತ್ತದೆ.
      ಕೇಸರಿ ಎಂದರೆ ಸೂರ್ಯವೆ?

      • ಪ್ರಸಾದು ಅವರೆ, ಅಲ್ಲಿ ಕೇಸರಿಯ ಎಂದು ಆಗಬೇಕಿತ್ತು… ಕೇಸರಿ ಬಣ್ಣದ ಮುಖವನ್ನು ಎಂಬ ಅರ್ಥದಲ್ಲಿ

  13. ಕಡಲಂ ನುಂಗುತೆ ರವಿತಾ
    ನೆಡದಿಂ ಬಲದಿಂ ಪ್ರಹಾರಮಂಗೈಯುತಿರಲ್
    ಬುಡದಿಂದೆಬ್ಬಿರಲಲೆಗಳ್
    ಪೆಡೆಯನ್ನೆತ್ತುತೆ ಮರೀಚಿಯಂ ಪೆದರಿಸಿದಂ

    ಎಡದಿಂ, ಬಲದಿಂ (ಸೂರ್ಯನು ಉದಯಿಸುವಾಗ ಮತ್ತು ಮುಳುಗುವಾಗ)

    • adbhuta kalpane…
      ಎಬ್ಬಿರಲಲೆಗಳ್, ಪೆಡೆಯನ್ನೆತ್ತುತೆ ಎಂಬ ಎರಡು ಪ್ರಯೋಗಗಳೂ ಒಂದನ್ನೇ ಹೇಳುತ್ತಿರುವುದರಿಂದ ಒಂದನ್ನು ತೆಗೆಯಬಹುದು. ಮತ್ತು ಕರ್ತೃವನ್ನು ಸ್ಪಷ್ಟಪಡಿಸಲು, ಕಡಲನ್ನು ಉತ್ತರಾರ್ಧದಲ್ಲೂ ಸಂಭೋದಿಸಬಹುದು.
      ಉದಾ: ಬುಡದಿಂ ಸಾಗರನಲೆಗಳ
      ಪೆಡೆಯನ್ನೆತ್ತುತೆ….
      ಎಂದು ಬದಲಿಸಬಹುದೋ?

      • ಕಡಲಂ ನುಂಗುತೆ ರವಿತಾ
        ನೆಡದಿಂ ಬಲದಿಂ ಪ್ರಹಾರಮಂಗೈಯುತಿರಲ್
        ಬುಡದಿಂ ಸಾಗರದಲೆಗಳ್
        ಪೆಡೆಯನ್ನೆತ್ತುತೆ ಮರೀಚಿಯಂ ಪೆದರಿಸಿದಂ

        • ಧನ್ಯವಾದಗಳು ಶ್ರೀಶ, ನಿನ್ನ ಸವರಣೆಯಂತೆ ಸರಿಪಡಿಸಿದ್ದೇನೆ 🙂

      • ಶ್ರೀಶ,
        ಯಃಕಶ್ಚಿತ್ ಕಾಗುಣಿತದೋಷವನ್ನು ಎತ್ತಿ ತೋರಿಸಲಾರೆ 😉

  14. ಆಗಸಕ್ಕೇಳುವೀ ಊರ್ಮಿಮಾರ್ತಾಂಡನಂ
    ತಾಗಲುಂ ಶಾಶ್ವತಂ ಘೋರಮಂಧಃತಮಂ
    ನೀಗು ಸಂತಾಪಮಂ ನೇಸರೆನೀಸನೇಂ?
    ಸಾಗರಂ ಗರ್ತದೊಳ್ ಜಾನುಮಾತ್ರಂ ಗಡಾ

    • You should have posted this in the previous post.
      ನಾಲ್ಕನೆಯ ತರಗತಿಗೆ ಬಂದೆಯೇಕೋ ಛಾತ್ರ
      ಬಾಲ್ಕನಿಗೆ ಪೋಗಿ ನೋಡೈ ಫಲಕವಂ|
      ಶುಲ್ಕವನು ತೆತ್ತಿರುವೆ ಮೂರನೆಯ ತರಗತಿಗೆ
      ಕಲ್ಕಿಕಾಲದವಿಂತವಾಂತರಂಗಳ್||

      • ಎಲ್ಲಿದ್ದರೇನಂತೆ ಪದ್ಯ ತಾನೇ? ಜೊತೆಗೆ
        ಅಲ್ಲಿ ಸಲ್ಲುವುದಿಲ್ಲಿಗೂ ಸಲ್ವುದೈ
        ಇಲ್ಲಿ ಸಲ್ಲುವುದಾದರಲ್ಲಿಗೋ ಸಲ್ಲದೈ
        ಅಲ್ಲಿಯೂ ಹಾಕಿರುವೆ ವಿಜಿತಪಂಪ

        (ಹಾದಿರಂಪ ನಿಮ್ಮ ಅಂಕಿತ; ವಿಜಿತಪಂಪ ಮಿಕ್ಕ ನಮ್ಮೆಲ್ಲರ ಅಂಕಿತ, ನಿಮ್ಮನ್ನು ಕುರಿತು ಪದ್ಯ ಬರೆಯುವಾಗ)

  15. ಉರಿಯುಗುಳಿ ಬಸವಳಿಯುತರುಣನು
    ಕಿರಣ ಶರಗಳ ಧರಿಸಿ ಮಗುಳಲು
    ತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿ
    ತಿರುತಿರುಗಿ ಹಾರುತಿರೆ ಶರಧಿಯ
    ತೆರೆಗಳಪ್ಪಳಿಸುತಲಿ ತೊನೆಯುತ
    ಲುರ‍ವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ

    • ಮಾತ್ರಾದೋಷವನ್ನು ತಿದ್ದಿದೆ.

      ಉರಿಯುಗುಳಿ ಬಸವಳಿಯುತರುಣನು
      ಕಿರಣ ಶರಗಳ ಧರಿಸಿ ಮಗುಳಲು
      ತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿ
      ತಿರುತಿರುಗಿ ಹಾರುತಿರೆ ಶರಧಿಯ
      ತೆರೆಗಳಪ್ಪಳಿಸುತಲಿ ತೊನೆಯುತ
      ಲುರ‍ವಣಿಯಲದೊ ಸುತ್ತುವರಿದಿವೆ ಸನಿಹಕೈದಿದನ

  16. ಇರುಳೊಳ್ ನಲ್ಲನ ಕೂಡುತೆ
    ಮೆರೆದಳ್ ಜಗಮನ್ನುಪೇಕ್ಷಿಸುತೆ ಕಾಮಿನಿ ತಾಂ
    ಹುರುಪಂ ನಂಬಲೆಸಗುಮೇ
    ಬಿರಿಯುತ್ತಲೆಗರೊ ಪಿಪಾಸೆ ಪೊಸ ಜಾರ ಬರಲ್ ?
    [ರಾತ್ರಿಯೆಲ್ಲಾ ಚಂದ್ರನೊಡನೆ ಕಳೆದು, ಈಗ ಹೊಸ ಜಾರ (ಸೂರ್ಯ) ಬರಲು, ಎದ್ದು ಕುಣಿಯುವ ಅವಳ ದಾಹದ ಬಗ್ಗೆ]

  17. ತೆರೆಯ ಮರೆಯಲ್ಲಿ ತೊರೆಯಾಚೆಗಡಗಿರ್ದರೂ
    ಪರಿವುದೈ ದಿಟ್ಟಿ ಬೆಳಕನೀವನಲ್ಲಿ
    ತಿರೆಯೊಳಗೆ ಮನುಜ ಪರರುಪಕಾರಿಯಾಗಿರಲು
    ಸೆರೆಯಾಗನೇಂ ಜನದ ಮನಸಿನಲ್ಲಿ

  18. ಅಂಬ್ರ ಸಾಲ್ದನ್ತೆಂಡ್ರಿಗ್ಬೇಕಂತ್ರೇಷ್ಮೆ ಸೀರೆ ಉಡಲು
    ಮುತ್ತು ರತ್ನ ಬೇಡ್ವಂತವರ್‍ಗೆ ತುಂಬಿದ್ರೂನೂ ಒಡಲು
    ಚಿನ್ನದ್ದುಂಗ್ರ ಬೇಕಂತಣ್ಣ ಮನೇಲ್ಗುಡ್ಗು ಸಿಡ್ಲು
    ಅಂತ ದುಃಖ ತೋಡ್ಕೊಂತೈತಾ ಸ್ನೇಹಿತ್ನತ್ರ ಕಡಲು ?

    ರೇಡಿಯೊಲಿ ಹೇಳಿದ ಹಾಗೆ ಟಿವಿ ಕಾಮೆಂಟ್ರಿಲಿ ಎಲ್ಲ ವರ್ಣಿಸಬಾರದಂತೆ.
    ಆದಕ್ಕೆ ನಾನು ಪದ್ಯದಲ್ಲಿ ತುಂಬ ವರ್ಣಿಸಿಲ್ಲ.
    ಅಲೆಯು ಜರಿ ರ್‍ಏಷ್ಮೆ ಸೀರೆ ತರಹ, ಚಿನ್ನದ ಉಂಗುರದ ತರಹ ಇದೆ ಅಂತ ಭಾವ.
    (ಪದ್ಯದಲ್ಲಿ ಆಲಂಕಾರ ಇರಬೇಕಂತೆ. ನನಗೆ ಗೊತ್ತಿರುವ ರೇಷ್ಮೆ ಸೀರೆ, ಮುತ್ತು, ರತ್ನ, ಚಿನ್ನದ ಉಂಗುರ ಎಲ್ಲ ತಂದಿದ್ದೀನಿ. ಇನ್ನೇನೂ ಕೇಳಬೇಡಿ 🙂 )

    • ತುಂಬ ಸೊಗಸಾದ ಕಲ್ಪನೆ ಮತ್ತು ಒಳ್ಳೆಯ ವೈನೋದಿಕಭಾಷೆ. ಇದು ಸಂಪೂರ್ಣವಾಗಿ ಬ್ರಹ್ಮಗಣಘಟಿತವಾದ ವಿನೂತನಚ್ಛಂದಸ್ಸು. ಇದನ್ನು ಜಿ.ಪಿ. ರಾಜರತ್ನಂ ಅವರು ಬಳಸಿ ಪ್ರಸಿದ್ಧಿಗೆ ತಂದರು.

    • ತಂದ್ಬಿಟ್ ಯಾಕೆ ಕೊರಗ್ತಾಐತೆ ನಿಮ್ಮತ್ರಾನೆ ಕಡ್ಲು?
      ಒಳ್ಳೇ ದೋಸ್ತ ಸಿಕ್ಕ್ಬಿಟ್ಟವ್ನೆ ಕಡ್ಲಿಗಿಂದು ಅಳ್ಲು
      ಹೆಣ್ತೀರ್ ಸುದ್ದಿ ಯೇಳೊದೆಂದ್ರೆ ಯೆಲ್ಲಕ್ಕಿಂತಾ ಮಿಗ್ಲು
      ಸುದ್ದಿ ಕಟ್ಟೇಲ್ ತುಂಬವ್ರಂತೆ ಗಂಡುಸ್ರೇನೆ ಹಗ್ಲೂ
      🙂

    • ಸುಧೀರ್ ಸರ್, ಕಾಂಚನ,
      ನಿಮ್ಮ ಕಡ್ಲು,ಸಿಡ್ಲು,ಅಗ್ಲು,ಮಿಗ್ಲು ಎಲ್ಲ ತುಂಬಾ ಇಷ್ಟ ಆಯ್ತು. ಇಂಥ ಪದ್ಯ ನಾನ್ ಓದಿದ್ದು ಇದೇ ಮೊದ್ಲು! ಗುಡುಗಿದರೂ, ಮಳೆಸುರಿದರೂ ಕಡಲೊಡತಿಗೆ ಅಲೆಯದೇ ನೆರಿಗೆ-ಸರಿಗೆ ಅಲ್ಲವೇ ?

  19. इन्द्रस्य चापरचनोपहुतीं कदानां
    तां स्वीकृतस्य नृपतेरुदधेः कृताज्ञां |
    सूर्यामुखे ह्यनुचराः परिसेवितुं ते
    शीर्षासने जलतरङ्गभटा निमग्नाः ||

    कदानां इन्द्रस्य तां चापरचनोपहुतीं स्वीकृतस्य नृपतेः कृताज्ञां परिसेवितुं उदधेः अनुचराः ते जलतरङ्गभटाः शीर्षासने निमग्नाः (सन्ति)

    “ಕಾಮನ ಬಿಲ್ಲನ್ನು ರಚಿಸು ನೋಡೋಣ” ಎಂಬ ಮೋಡಗಳ ಸವಾಲನ್ನು ಸ್ವೀಕರಿಸಿರುವ ಸಮುದ್ರ ರಾಜನ (ಕಾಮನ ಬಿಲ್ಲನ್ನು ರಚಿಸಿರಿ ಎಂಬ) ಆಜ್ಞೆಯನ್ನು ಪರಿಪಾಲಿಸಲು ಅವನ ಅನುಚರರಾದ ಅಲೆಗಳೆಂಬ ಭಟರು ಸೂರ್ಯನೆದುರಲ್ಲಿ ಶೀರ್ಷಾಸನ ಹಾಕುತ್ತಿದ್ದಾರೆ (ತಲೆ ಕೆಳಗೆ ಕಾಲು ಮೇಲೆ ಮಾಡಿ ಒಟ್ಟಿನಲ್ಲಿ ಹೇಗಾದರೂ ತರಲೇಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾರೆ) ಎಂಬ ಅನಿಸಿಕೆ/ಆಶಯ.

    ಎಂದಿನಂತೆ ಪದ್ಯದೊಂದಿಗೆ ಒಂದಿಷ್ಟು ಅನ್ವಯಕ್ಲೇಶ ಮತ್ತು ವ್ಯಾಕರಣ ದೋಷಗಳು free ಆಗಿ ಬಂದಿರುತ್ತದೆ. 😛

  20. ಈ ಬಾರಿ ಸಂಸ್ಕೃತದಲ್ಲಿ –

    ಭೂಮೌ ಸೃಷ್ಟೇ-ರ್ಮನುಕುಲ.ಮೃಗ.ದ್ರು.ಕೃಮೀನಾ-ಮಪಿ ಪ್ರಾ-
    ಗಾಸನ್ ಕಿಂಸ್ವಿತ್-ಸ್ತುತಿ.ಶುಚಿ.ವಿಧಿ.ಪ್ರಕ್ರಿಯಾಃ ಪ್ರಕೃತಿಸ್ಥಾಃ
    ಅಬ್ಧೌ ಸ್ನಾತುಂ ಪ್ರಖರ.ಕಿರಣೋ ಯಾತಿ ಮುಕ್ತೋಪರಾಗಃ
    ಸಾಯಂ.ಸಂಧ್ಯಾಂಜಲಿ.ವಿರಚನೇ ಧನ್ಯತಾಮೇತಿ ವಾರ್ಧಿಃ

    ಭೂಮಿಯಲ್ಲಿ ಮನುಷ್ಯ ಮೃಗ ಮರ ಕೃಮಿಗಳು ಬರುವ ಮುನ್ನವೂ ಪ್ರಕೃತಿಯಲ್ಲಿ ಸ್ತುತಿ ಶೌಚ ಗಳ ವಿಧಿಗಳು ಕಾಣಿಸುತ್ತಿತ್ತೆ? ನೋಡಿ – ಸೂರ್ಯನು ಗ್ರಹಣ ಬಿಟ್ಟ ಮೇಲೆ ಸಮುದ್ರ ಸ್ನಾನ ಮಾಡಲು ಇಳಿಯುತ್ತಿದ್ದಾನೆಯೇ? ಹಾಗೂ ಸಮುದ್ರವು ಸಾಯಂ ಸಂಧ್ಯೆಯಲ್ಲಿ ಅಂಜಲಿಯಲ್ಲಿ ನೀರು ಬಿಟ್ಟು ಧನ್ಯತೆಯನ್ನು ಅನುಭವಿಸುತ್ತಿದೆಯೇ?

  21. bhoosureya aasarege taasariva kaesarava soosiruva bhaasura
    eesaradhi melsaridu beesiruva kaiserege baasurane nesara

    kannadadalli aasakti ideyashte. kavite rachane iduvaregu maadilla. idu nanna modala prayatna. nanage yava chandassannu upayogisuvashtu pandityavilla. ee goshtiyalli chhandobaddhavallada kaviteya prayatna madabahude, illave? tilisiri. dhanyavaadagalu.

    • ** ee sharadhi

    • ಸುಜಾತರವರೆ,

      ಪದ್ಯಪಾನಕ್ಕೆ ಸ್ವಾಗತ. ಪದ್ಯ ರಚನೆಯನ್ನು ಶುರು ಮಾಡಿದ್ದೀರಿ. ಹೀಗೇ ಮುಂದುವರಿಸುತ್ತೀರೆಂದು ನಂಬುತ್ತೇನೆ.

      ಛಂದೋಬದ್ಧವಾಗಿ ಕವನಿಸಲು ಪಾಂಡಿತ್ಯವೇನೂ ಬೇಕಿಲ್ಲ. ಸ್ವಲ್ಪ ತಾಳ್ಮೆ ಬೇಕಷ್ಟೆ. ‘ಪದ್ಯ ವಿದ್ಯೆ’ ಎಂಬ ಶೀರ್ಷಿಕೆಯಡಿ ಇರುವ ವಿಡಿಯೋ ಪಾಠಗಳನ್ನು ನೋಡಿದರೆ, ರಚನೆ ಸುಲಭವಾಗುವುದು. ಇಲ್ಲಿನ ಅನೇಕರು (ನಾನೂ ಸೇರಿದಂತೆ) ಛಂದೋಬದ್ಧ ರಚನೆಯನ್ನು ಇಲ್ಲಿಯೇ ಕಲಿತವರು. ದಯವಿಟ್ಟು ಪ್ರಯತ್ನಿಸಿ.

      ಪದ್ಯಪಾನದಲ್ಲಿರುವ ಎಲ್ಲರೂ ಛಂದೋಬದ್ಧ ಕವಿತೆಯ ಪ್ರಿಯರು. ಈ ತಾಣ ಅಭಿಜಾತ ಶೈಲಿಯ (classical style) ಕವಿತಾ ರಚನೆಯ ಪ್ರೋತ್ಸಾಹಕ್ಕೆಂದೇ ಹುಟ್ಟಿಕೊಂಡಿದೆ. ಅಂದರೆ – ಛಂದಸ್ಸು, ವ್ಯಾಕರಣ, ಅಲಂಕಾರ – ಇವೆಲ್ಲಾ ಇಲ್ಲಿನ ಕವಿತೆಗಳಿಗೆ ಮೂಲಭೂತ ಸಾಮಗ್ರಿಗಳು. ಹಾಗಿದ್ದರೆ ಮಾತ್ರ ಓದುವವರು, ಬರೆಯುವವರು, ಪ್ರೋತ್ಸಾಹಿಸುವವರು ಇಲ್ಲಿ ಉಳಿಯುತ್ತಾರೆ ಎಂಬುದು ನಮ್ಮ ನಂಬಿಕೆ. ಈ‌ಉತ್ತರದಿಂದ ನಿಮಗೆ ಬೇಸರವಾಗಿಲ್ಲವೆಂದು ನಂಬುತ್ತೇನೆ.

      • KBS avare,

        khandita besaravilla. In fact your reply made me read through the tutorials and helped me know better. I also found that I could make some minor changes to what i wrote earlier. I believe now it fits the description of kusuma shatpadi, may be with a oonagana at the end. Now I would look forward to your comments on the vyaakarana and alankaara part. Thanks again.

        bhoosureya aasarege
        taasariva kaesarava
        maasirade soosiruva bhaasuramani
        eesharadhi melseragu
        beesiruva kaiserege
        neesaridu baasurane nesaragani

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)