Nov 222013
 

albetros

 

ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಈ ಚಿತ್ರಕ್ಕೆ ಪದ್ಯಗಳನ್ನು ಬರೆಯಿರಿ

 

  116 Responses to “ಪದ್ಯ ಸಪ್ತಾಹ ೮೮: ಚಿತ್ರಕ್ಕೆ ಪದ್ಯ”

  1. ಸರಸಿನೊಳಿಹ ಸಾರಸ, ಹೇ,
    ತರವೇನೀ ಬಗೆಯ ವಿರಸ? ಸೇರುವೆ ಮಿಗೆ ಬೇ
    ಸರವೇಂ? ಅಭಿಸಾರಿಕೆಯೀ
    ಕೆ ರತಕೆ ಬಂದೊಡನೆ ನೀನು ಕರಗವುದೇಕೈ?

    • Good interpretation – the image vanishes as the object approaches the reflecting surface.
      ಸರ>ಸರದೊಳಿಹ OR ಸರಸ್ಸು>ಸರಸ್ಸಿನೊಳಿಹ. ‘ಸರಸಿನೊಳಿಹ’ ಸಾಧುರೂಪವೆ ತಿಳಿಯದು.

  2. ಬಣ್ಣಂ ಬೆಡಂಗುಮನೆಣ್ಣುತೆ ಬಿಂಬಮಂ
    ತಣ್ಣನೆ ಕೊಳನೊಳ್ ನಿರುಕಿಪಯೋ ಪಕ್ಕಿ
    ಯುಣ್ಣಲುಂ ಮರೆತು ಕಿರುಮೀನಂ

  3. “ಪಕ್ಕಿಯ ಕೊಕ್ಕಿಗೆ ಸಿಕ್ಕಿದೆ-
    ನಕ್ಕಟ ನಾಂ ತಿರುಗಿ ನೀರೊಳಾಡೆನೆ” ಎಂದಾ
    ಚಿಕ್ಕ ಜಲಜಮಳೆ ನೀರಂ-
    ಬೊಕ್ಕು ಸಮಾಧಾನಗೊಳಿಪುದೇಂ ಪ್ರತಿಬಿಂಬಂ?

    ಜಲಜ- ಮೀನು

    • idea is very good. ಕೊನೆಯ ಶಬ್ದವನ್ನು ’ಪ್ರತಿಬಿಂಬದಿಂ’ ಎಂದು ಓದಿಕೊಳ್ಳಬೇಕೆ?

      • ಥ್ಯಾಂಕ್ಸ್ ಪ್ರಸಾದು. ಪ್ರತಿಬಿಂಬಂ ಪ್ರಥಮಾವಿಭಕ್ತಿಯಲ್ಲೇ ಇರಬೇಕು.

  4. ತೋರುತೆ ಹಗಲೊಲು ನೀಲಾಕಾಶದೆ
    ಹಾರಿರೆ ಕಾಲದ ಹಕ್ಕಿಯದುಂ |
    ನೀರೊಳು ಕಂಡಿರಲಿರುಳೊಲು ಬಿಂಬವು
    ಸೇರುತೆ ಕಾಲದ ಲೆಕ್ಕವನುಂ ||

  5. ಹೊತ್ತುತಂದಿಹೆನೀಗಳೇ ನಿನ್ನಕೊಕ್ಕಿನಿಂ
    ಕಿತ್ತುಕೊಂಡೊಂದನುಂ ಕೃಮಿ ನೇಹನೆ|
    ಮತ್ತೊಂದ ಕುಡಲೆನಗೆ ನೀನೆ ತಂದಿರುವೆಯೇ-
    ನೆತ್ತಣಿನ ಬಂಧುವೋ ನೀ ದಯಾಳು||

    • ಒಳ್ಳೆಯ ಕಲ್ಪನೆ. “ಕೃಮಿ ನೇಹನೇ” ಎಂದರೇನು?

      • ನೇಹನೆ=ಸ್ನೇಹಿತನೆ.
        “ಈಗತಾನೆ ನಿನ್ನ ಕೊಕ್ಕೊನಿಂದ ಒಂದು ಮೀನನ್ನು ಕಿತ್ತುತಂದೆ. ಮತ್ತೊಂದನ್ನು ನೀಡುತ್ತಿರುವೆಯಲ್ಲ, ಎಂಥ ದಯಾಮಯನಪ್ಪ ನೀನು!” ಅದು ತನ್ನ ಪ್ರತಿಬಿಂಬ ಎಂದು ಆ ಪಕ್ಷಿಗೆ ಗೊತ್ತಿಲ್ಲ ಎಂಬ ಕಲ್ಪನೆ.

  6. ಬಲ್ವೆಳ್ಪ ಪುಕ್ಕದಿಂ ಚೆಲ್ವೆಂತುಟಿರ್ದೊಡೇಂ
    ಕೊಲ್ವುದಂ ಬಿಡಯೋ ಬೆಳ್ವಕ್ಕಿ ಇದಕೆ ನೀರ್
    ನಿಲ್ವುಗನ್ನಡಿಯಂ ಪಿಡಿವುದೆ!

  7. The medium of reflection viz., the blue tinged water surface distorts the image and prohibits proper comprehension.
    ಅಸ್ಪಷ್ಟದ ದ್ವೈತ ತೋರ್ವುದೆಲ್ಲೆಡೆ ಇಂತು
    ಸುಸ್ಪಷ್ಟಮಿರದ ಮಾಧ್ಯಮದಿನೆಂದುಂ|
    ವಿಸ್ಪಷ್ಟದದ್ವೈತ ಸಿದ್ಧಿಪುದು ನಿರುಕಿಸ
    ಲ್ಕಾಸ್ಪದಂ ಬ್ರಹ್ಮದಾದರ್ಶಮಾಗಲ್||

  8. ಕೊಳನೊಳ್ ಮಿಂದು ಬೆಳರ್ಪುಗುತ್ತಿರುತಿರಲ್ ಪಕ್ಷಂಗಳಗ್ರಂಗಳೊಳ್
    ಕೊಳೆಗಪ್ಪಿರ್ಪುದತೇತಕೋ ಅಡಿಗಳೊಳ್ ಮತ್ತಂ ಕೊಳರ್ವಕ್ಕಿಯೇ!
    ತಿಳುಗೆಂಪೇರ್ದಪುದೇತಕೆಂದೆಣಿಸಲಾಹಾ! ಹೇತುವಂ ಕಂಡೆನಯ್
    ಎಳಮೀನಂ ಪೊಡೆದುಂಬ ಪಾಪದಕಳಂಕಂ ರಕ್ತವರ್ಣಂ ಕಣಾ

    ಕೊಳರ್ವಕ್ಕಿ- ನೀರಿನ ಹಕ್ಕಿ

  9. ನಿನ್ನೆ ಬೆಳಿಗ್ಗೆ ಚಿತ್ರ ನೋಡಿ ಕಂದಪದ್ಯ ರಚಿಸಿದ್ದೆ.ಕೆಲಸದೊತ್ತಡದಿಂದ ಪದ್ಯಪಾನಕ್ಕೆ ಟಂಕಿಸಲಾಗಲಿಲ್ಲ.ಈಗ ನೋಡಲು,ಉಷಾ ಅವರು ಸ್ವಲ್ಪ ಕಲ್ಪನಾಸಾಮ್ಯವುಳ್ಳ ಪದ್ಯ ಬರೆದಿರುತ್ತಾರೆ! ನನ್ನ ಪದ್ಯ, ಬೇರೆ ಛಂದಸ್ಸಿನಲ್ಲಿಯೂ, ತುಸು ಭಿನ್ನವಾದ ಕಲ್ಪನೆಯಿಂದಲೂ ಇರುವುದರಿಂದ,ಬಂಧುಗಳ ಗಮನಕ್ಕೆ ತಂದರೆ ತಪ್ಪಾಗಲಾರದೆಂದುಕೊಂಡಿರುವೆ.

    ನಭದೊಳ್ ವಿಹಗಂ ವಿಹರಿಪ
    ಶುಭಸಮಯದೊಳಂದು ಕಂಡು ಸಾಗರಜಲಮಂ |
    ರಭಸದೊಳಿಳಿದಿರೆ ಕೆಣಕಿತು
    ಲಭಿಸಿದ ಬಿಂಬಮನೆ ಭೂರಿವಿಸ್ಮಯದಿಂ ತಾನ್ ||

    • ಚೆಲುವಾಗಿದೆ ಶಕುಂತಲಾರವರೆ

      • ಶ್ರೀಕಾಂತ ಸರ್, ಧನ್ಯವಾದ.

    • ಶಕುಂತಲಾ ಅವರೆ, ನಿಮ್ಮ ಪದ್ಯವೇ ಚಿತ್ರಕ್ಕೆ ಹೆಚ್ಚು ಸೂಕ್ತವಾಗಿದೆ. ಕಂದ ಪದ್ಯವೂ ಚನ್ನಾಗಿದೆ. ನಾನೂ ಮೊದಲು ಕಂದದಲ್ಲೇ ಪ್ರಯತ್ನಿಸಿದ್ದು. ಜಗಣ ಬರದೆ, ಹಳೆಗನ್ನಡ ಒದಗದೆ ಚೌಪದಿಯ ಮೊರೆಹೋದದ್ದು.
      ಹಾರುತ್ತಿರುವ “ಕಾಲ”ದ ಹಕ್ಕಿ – ಮೇಲೆ (ಬಿಳಿ)ಹಗಲು ಮತ್ತು ಬಿಂಬದಲ್ಲಿ (ಕಪ್ಪು)ಇರುಳಿನಂತೆ ಕಂಡು, ಅವೆರಡೂ ಒಟ್ಟಿಗೆ ಕಾಲದ ಲೆಕ್ಕವನ್ನು ಕೂಡಿವೆ, ಎಂಬ ಅರ್ಥದಲ್ಲಿ ಬರೆದದ್ದು. ಸರಿಬಂದಿಲ್ಲ. ಮತ್ತೆ ಪ್ರಯತ್ನಿಸುತ್ತೇನೆ.

      • ಉಷಾ ಅವರೆ, ನನ್ನ ಪದ್ಯವನ್ನು ಮೆಚ್ಚಿದ್ದಕ್ಕೆ ಧನ್ಯವಾದ. ನಿಮ್ಮ ಪದ್ಯವೂ ಸೊಗಸಾಗಿದೆ.

  10. ಬಾನಾಡಿಯಾಗಿ ವಿಹರಿಸು
    ವೆನಗೇ ನೀ೦ಕರೆಯುತಿರ್ಪೆಯೆ೦ದೊಯ್ಯನೆ ಬ೦
    ದೇನೆ೦ದು ಝ೦ಕಿಸುತಿರ್ಪ
    ವನನೇ ಝ೦ಕಿಸುತಿರುತಿದೆ ಜಲದೊಳಖಗಮು೦

    • ನಾರಾಯಣಮೂರ್ತಿಗಳಿಗೆ ಪದ್ಯಪಾನಕ್ಕೆ ಸ್ವಾಗತ. ಪದ್ಯತಾತ್ಪರ್ಯ ಚೆನ್ನಾಗಿದೆ.
      ಮೊದಲ ಸಾಲು: ಅದು ಬಾನಾಡಿಯೇ ಆಗಿರುವುದರಿಂದ, ’ಬಾನಾಡಿಯಾಗಿ’ ಎನ್ನುವುದು ಸರಿಯಾಗದು.
      ಎರಡನೆಯ ಸಾಲು: ’ಎನಗೇ’ ಸರಿಯಾಗದು, ’ನನ್ನನ್ನೇ’ ಎಂಬ ಅರ್ಥ ಬರುವಂತಿರಬೇಕು. ’ಎನನೇ/ಎನನುಂ’ ಸರಿಯಾದೀತು.
      ಮೂರನೆಯ ಸಾಲು: ಕೊನೆಯ ಗಣ ಜಗಣವಾಗಿದೆ.
      ನಾಲ್ಕನೆಯ ಪಾದ: ಮಧ್ಯಗಣವು ಸರ್ವಲಘುವಾಗಿದ್ದಾಗ, ಮೊದಲ ಅಕ್ಷರದ ನಂತರ ಯತಿಯಿರಬೇಕು. ಉಳಿದಂತೆ ಸರಿಯಾಗಿದೆ. ದಯವಿಟ್ಟು ಸವರಿಸಿ. ನಿಯತವಾಗಿ ಕವನಿಸಿ.

    • ನಾರಾಯಣಮೂರ್ತಿಗಳೆ- ನಮ್ಮಕೂಟಕ್ಕೆ ಸ್ವಾಗತ. ಪದ್ಯರಚನೆಯಮೇಲೆ ನಿಮಗೆ ತ್ಕ್ಕಮಟ್ಟಿಗೆ ಹಿಡಿತವಿದೆ ಅನ್ನಿಸುತ್ತಿದೆ. ಅಭ್ಯಾಸದಿಂದ ಇನ್ನೂ ಸಿದ್ಧಿಸುವುದು. ದ್ವಿತೀಯಾಕ್ಷರಪ್ರಾಸವನ್ನು ನಾಲ್ಕೂ ಪಾದಗಳಲ್ಲಿ ಕಾಪಾಡಬೇಕು. ಅಂದಮೇಲೆ ಪಾದದ ಮೊದಲನೆಯ ಅಕ್ಷರ ಸರ್ವತ್ರ ಒಂದೇ ಅಳತೆಯದಾಗಬೇಕು- ಅಂದರೆ ಎಲ್ಲವೂ ಲಘು ಅಥವಾ ಎಲ್ಲವೂ ಗುತುವಾಗಬೇಕು. ಬೆರೆಸುವಹಾಗಿಲ್ಲ. ನಿಮ್ಮ ಪದ್ಯದಲ್ಲಿ ಸಮಪಾದಗಳಲ್ಲಿ ಪ್ರಾಸಮೈತ್ರಿಯಿದೆ. ಹಾಗೆಯೇ ವಿಷಮಪಾದಗಳಲ್ಲಿಯೂ ಇದೆ. ನಾಲ್ಕನ್ನೂ ಒಂದೇ ರೀತಿಯಾಗಿ ತಿದ್ದಿರಿ.

      ಕಂದದ ವಿಷಯವಾಗಿ ಪ್ರಸಾದು ಹೇಳಿರುವುದನ್ನು ಗಮನಿಸಿ.

    • ಶ್ರೀಕಾಂತಮೂರ್ತಿಗಳೆ,
      ಕಂದದ ಸಮಪಾದಗಳನ್ನು ಜಗಣದಿಂದ ಆರಂಭಿಸಬಹುದು. ಬೆಸಪಾದಗಳ ಆರಂಭಲ್ಲಿ ಅದು ಲಗಾದಿಯಾಗುತ್ತಾಗಿ ನಿಷಿದ್ಧ. ಹಾಗಾಗಿ, ಅಪವಾದವಾಗಿ, ಕಂದದಲ್ಲಿ ಗಜ-ಸಿಂಹಾದಿ ಪ್ರಾಸಗಳ ಸಂಕರಕ್ಕೆ ಆಸ್ಪದವಿದೆಯೇನೋ. ಹಾಗಾಗಿ ನಾನು ಅದನ್ನು ಹೇಳದೆಹೋದೆ. ನಾನೇ ಹಿಂದೊಮ್ಮೆ ಹೀಗೆ ರಚಿಸಿದ್ದೇನೆ. ಸರಿಯೇ, ಇಲ್ಲಿ (ಸಮಪಾದಾದಿಯಲ್ಲಿ) ಅವರು ಜಗಣ ಬಳಸಿಕೊಳ್ಳದಿರುವುದರಿಂದ ಗಜ-ಸಿಂಹಸಂಕರವಾಗಿಸುವ ಅಗತ್ಯವಿರಲಿಲ್ಲ.
      ನಿಮ್ಮ ನಾಮಾಖ್ಯರು (ನಾಮಾಖೈರರು) ಆದಿಪ್ರಾಸವನ್ನು ಕಾಯ್ದುಕೊಂಡಿದ್ದಾರಲ್ಲ.
      ನನಗೆ ತಿಳಿದಂತೆ ಸವರಿದ್ದೇನೆ. ನಾರಾಯಣರೂ ಪ್ರಯತ್ನಿಸಲಿ:
      ಬಾನಲ್ಲೆಲ್ಲುಂ ವಿಹರಿಸಿ
      ಪ ನನ್ನ ನೀ ಕರೆಯುತಿರ್ಪೆಯೆ೦ದೊಯ್ಯನೆ ಬ೦
      ದೇನೆನುತೆ ಝ೦ಕಿಸಿರ್ಪಾ
      ತನನ್ನೆ ಝ೦ಕಿಸುವ ವೋಲದೊ ಜಲದ ಖಗಮು೦||

    • ಪ್ರಸಾದರೆ- ಬಾನಾಡಿ ಮತ್ತು ಏನೆಂದು ಪದಗಳಿಗೆ ಎನಗೆ ಮತ್ತು ವನನೇ ಪದಗಳು ಹೇಗೆ ಪ್ರಾಸವಾದಾವು? ಅದು ಸರಿಯಲ್ಲ. ಅಂದಹಾಗೆ ನೀವು ಸೂಚಿಸಿರುವ ಎನನೇ/ಎನನುಂ ರೂಪಗಳೂ ನನಗೆ ತಿಳಿದ ಮಟ್ಟಿಗೆ ತಪ್ಪೆ.

      • Yes, Prasaadu Sirkanth is right:-)

      • ನಾನು ಮೇಲೆ (8.57 pm) ಹೇಳಿರುವ ಸಂಕರದ ವಿಷಯದಲ್ಲಿ ದಯವಿಟ್ಟು ಸ್ಪಷ್ಟೀಕರಣ ನೀಡಿ. ಸಮಪಾದಗಳ ಮೊದಲ ಗಣದಲ್ಲಿ ಜಗಣ ಬಳಸಿದರೆ, ಬೆಸಪಾದಗಳ ಮೊದಲ ಗಣದಲ್ಲಿ ನನನನ/ನನನಾ ಮಾತ್ರ ಬಳಸಬೇಕೆ? ನಾನಾ/ನಾನನ ಬಳಸಲಾಗದೆ?

    • ಮೂರ್ತಿದ್ವಯರಿಗೂ ಶ್ರೀ ರಾಗರಿಗೂ ಇದೋ ತಪ್ಪೊಪ್ಪಿಗೆ. ಕಂದಪದ್ಯದ್ದು ಅನನ್ಯ ಗಣವಿನ್ಯಾಸ, ಸಿಂಹ-ಗಜಾದಿ ಪ್ರಾಸಸಂಕರ ಇಲ್ಲಿ ಸಲ್ಲುವುದು ಎಂದು ತಪ್ಪಾಗಿ ಗ್ರಹಿಸಿದ್ದೆ. ಯಶೋಧರಚರಿತೆ ಹಾಗೂ ಕವಿರಾಜಮಾರ್ಗಗಳಲ್ಲಿ ಕಣ್ಣುಹಾಯಿಸಿದೆ. ಸಮಪಾದಗಳ ಆದಿಯಲ್ಲಿ ಜಗಣ ಬಳಸಿದಾಗ ಬೆಸಪಾದಗಳಲ್ಲಿ ಸಿಂಹಪ್ರಾಸವನ್ನೇ ಬಳಸಿದ್ದಾರೆ. ನಾರಾಯಣಮೂರ್ತಿಗಳಿಂದಾಗಿ ಇದೊಂದು ಪರಿಹಾರವಾಯಿತು. ಪ್ರಾಯಶ್ಚಿತ್ತವಾಗಿ ಅವರ ಪದ್ಯವನ್ನು maximum ಜಗಣ ಬಳಸಿ ಸವರಿದ್ದೇನೆ:
      ಅನವರತಮಾಗಸದೊಳಿ
      ರ್ಪನನ್ನೆ ಕರೆದಿಹೆಯೆನುತ್ತೆ ಬಂದೊಯ್ಯನೆ ನಾಂ|
      ತೊನೆದಾಡುತಲ್ ವಿಚಾರಿಸಿ-
      ದನನ್ನೆ ಝ೦ಕಿಸುತಲಿರ್ಪೆಯೇಂ ಜಲಖಗ ನೀಂ||

  11. ನೆಳಲೆಂದಿಗಾದೊಡಂ ತನ್ನಂತೆ ತಾಂ ಚಲಿಸ-
    ದೊಳದದೇಂ ಗೆಯ್ವುದೋ ಬಿಂಬಿಕುಮದಂ
    ಒಳದೈ ಸುಪರ್ಣಮದೆ ಸತ್ಯಮೈ ನಿತ್ಯಮೈ
    ನೆಳಲದರ ದರ್ಶನದೆ ನಿಜಮನರಿಗುಂ

    ನೆಳಲು- ಜೀವಾತ್ಮ; ಒಳದು- ಪರಮಾತ್ಮ; ಸುಪರ್ಣ- ಒಳ್ಳೆಯ ರೆಕ್ಕಗಳ ಪಕ್ಷಿಯೂ ಹೌದು, ಪರಬ್ರಹ್ಮವೂ ಹೌದು
    ಹಳಗನ್ನಡವನ್ನು ಪಂಚಮಾತ್ರೆಯ ಚೌಪದಿಗೆ ಅಳವಡಿಸಿದ್ದೇನೆ.

  12. ಗುರಿ ಸೇರ್ವ ನಿನ್ನ ಛಾತಿಯ,
    ಭರದೊಳ್ ಸ್ಥಿರವಾಗಿಸಲ್ಕೆ ನಿನ್ನಾಟಗಳಂ
    ಮರೆಯೊಳ್ ನಿಂದರೆಚಣದೊಳ್
    ಸೆರೆಪಿಡಿದಿಟ್ಟಾ ಕಲಾವಿದಗೆ ನೀ ಧ್ಯೇಯ೦ ||

    • Good idea and the focus is beautifully shifted from the bird to the lens-man!

      • ಸರ್ ,
        ತಮ್ಮ ಅಭಿಪ್ರಾಯ ವೀಡಿಯೊ ಶೂಟಿಂಗ್ ನಡೆಸಿದಂತೆ ಮತ್ತಷ್ಟು ಚೆನ್ನಾಗಿದೆ ! ಧನ್ಯವಾದಗಳು .

  13. ಮರೆತು ನಿನ್ನಿರವ, ಜಲಮುಕುರದೊಳ್ಮೊಗಮಿಟ್ಟು
    ತರವೇಂ ಪ್ರಶಂಸೆಯೊಳ್ ಮುಳುಗಿರ್ಪುದು?
    ಮೆರೆದುನೀಯೇರುವುದನಾದರಿಪ ಲೋಕವಿದು
    ಸರಿಯೇಂ ಮನುಜನಂತೆ ನೀನರ್ಪುದುಂ?

    • ನಿನ್ನ ಅಸಾಮಾನ್ಯತೆಯನ್ನು ನೀಗಿಕೊಂಡು ಸಾಮಾನ್ಯವಾಗಲೇಕೆ ಎಂಬ ಒಳ್ಳೆಯ ಐಡಿಯ.
      ೨ ಟೈಪೊ: ಮೆರೆದುನೀಯೇರುವುದನಾದರಿಪ, ನೀನಿರ್ಪುದುಂ.
      ಕೊನೆಯ ಸಾಲು: /ಸರಿಯೇಂ ಮ/ ’ತರಮೇನು ಲೋಗರೊಲ್ ನೀನಿರ್ಪುದುಂ’ (ಲೋಕವಿದು~ಲೋಗರೊಲ್)

  14. The image is bereft of mass, soul, sound etc.
    ಶುದ್ಧಬ್ರಹ್ಮದೊಳುಳಿದಿ
    ನ್ನೌದ್ಧತ್ಯದಿನರಸದಿರ್ ಸ್ವರೂಪಮನೆಲ್ಲುಂ|
    ಉದ್ಧರಣ ಸಚ್ಚಿದಾನಂ
    ದಾದ್ಧಾತಮರಹಿತ ಮಾತ್ರರೂಪ-ಪೆಸರಿನೇಂ||
    (ಅದ್ಧಾತಮ – manifest)

  15. The descent of the image is directly proportional to the rise of the flier.
    ಏರಿದೆನೇರಿದೆನೆಂಬೆಯ
    ಜಾರಿದೆ ಕಾಣಲ್ಲಿ ಬಿಂಬ*ಮನಿತೇ ಅಕಟಾ|
    ಮೇರುವೊಳಿರಲೇಂ ಲಕ್ಷ್ಯಂ
    ಬೀರೆಲ್ಲೆಡೆ ದಿಟ್ಟಿಯಂ, ನಯನಮಿರಲೆಲ್ಲುಂ|| (ಮೈಯೆಲ್ಲ ಕಣ್ಣಾಗಿರು)
    *some aspect of you

  16. ಗರಿಗೆದರಿ ಹಾರಿದೆಯೊ
    ತಿರುಮುರುಗು ತೇಲಿದೆಯೊ
    ತರತರದೆ ತೋರಿಹುದು ನೋಡಹಕ್ಕಿ |
    ಕರಿಬಿಳಿದೆ ಕಂಡಿದೆಯೊ
    ಗುರಿಬಿಡದೆ ಕೊಂಡಿದೆಯೊ
    ಸರಸರದೆ ಸಾಗಿರಲು ತಾನು ಹೆಕ್ಕಿ ||

    • oLLeya shailiya sogasaada padya. dhanyavaada

      • ಇಂತಹ ಸರಳ ಪದ್ಯಗಳನ್ನೂ ಮೆಚ್ಚಿ ಪ್ರೋತ್ಸಾಹಿಸುವ ನಿಮ್ಮ ಔದಾರ್ಯಕ್ಕೆ ನಮನಗಳು ಗಣೇಶ್ ಸರ್,
        ಒಂದು ಚಿಕ್ಕ ಸವರಣೆ:
        * ಗರಿಗೆದರುತೇರಿದೆಯೊ

  17. ಗರಿಸಿ ರೆಕ್ಕೆಯ ಮನವು ಹಾರಿತು
    ತೊರೆದ ಬಾಲ್ಯದ ಜಗಕೆ ಮತ್ತೆ
    ಸ್ಮರಿಸಿಯಂದಿನ ಚಣವನಾಗುತ ಹೊಸತರೊಳ್ ಹೊಸತು
    ತೊರೆಯ ಜಲದೊಳ್ ಕುಣಿದು ಜಿಗಿಯುತ
    ಧರೆಯ ಫಲಗಳ ಕಚ್ಚಿ ಮೆಲ್ಲುತ
    ಗರಿಗಳಿರದೇ ನಿನ್ನ ತೆರದಲಿ ಕಳೆದ ಸವಿಗತಕೆ

  18. ಗೆಲುವಿಂದಾಗಸದೊಳ್ಗೆ ಪಾಡುತಿರೆಕುಯ್ಕುಯ್ಯೆನ್ನುತುಂ ಪಕ್ಕಿಯಂ
    ತಲೆದೂಗುತ್ತಿರೆ ರೆಕ್ಕೆಯಂ ಬಡಿಯುತುಂ ಕಾಣಲ್ಕೆ ತಾ ಮತ್ಸ್ಯಮಂ
    ಜಲದೊಳ್ ವೇಗದಿ ತಿನ್ನಲೆಂದಿಳಿದಿರಲ್ ನೋಡಿರ್ಪುದಂ ಮೌಢ್ಯದಿಂ
    ದಲೆಯೊಳ್ ತನ್ನಯ ಬಿಂಬಕಂ ಪೆದರುತುಂ ಮೇಲಕ್ಕೆ ಮತ್ತೋಡಿತೈ

    I know this is a poor one… 🙁

    • You mean, the bird is a poor one? 🙂 Well, the idea is good enough.
      ಕುಯ್ಕುಯ್ 🙂
      ಪಕ್ಕಿಯುಂ (’ಯಂ’x)
      ಕಾಣಲ್ಕೆ~ನೋಡಿರ್ಪುದಂ – Duplication.
      ನನ್ನ ಸವರಣೆ:
      ಗೆಲುವಿಂದಾಗಸದೊಳ್ಗೆ ಪಾಡುತುರುಬಿರ್ಪಾನಂದದಿಂ ಪಕ್ಕಿಯುಂ
      ತಲೆದೂಗುತ್ತಲಿ ಪಕ್ಕೆಯಂ ಬಡಿಯಲಾಗಲ್ ಕಾಣಲಾ ಮತ್ಸ್ಯಮಂ|
      ಜಲಮಂ ವೇಗದೆ ಸೇರಿ ಸೇವಿಸಲೆನುತ್ತುಂ ಬಾನಿನಿಂ ಜಾರಿತೇ
      ನಲೆಯೊಳ್ ತನ್ನಯ ಬಿಂಬಕಂ ಪೆದರುತುಂ ಮೇಣೇರಿತೇಂ ಮೌಢ್ಯದಿಂ||

    • Dear Cheedi, oLge is not as grammatically prefered usage. Plchange it. I have seen this being some times used by SomaNNa. Perhaps this would have triggered to use it. I also vaguely remember to have seen the alram of Dr.Srikanth on th usage of this word. However, is spite of it, ‘oLge’ padyapaanda “oLage” baMdide:-)

    • Thanks sir and sorry cheedi. That line may be modified thus:
      ಗೆಲುವಿಂ ಬಾನೊಳು ಪಾರಿ ಪಾಡುತುರುಬಿರ್ಪಾನಂದದಿಂ ಪಕ್ಕಿಯುಂ

    • oLge –
      ಇವ್ವೊತ್ತಿಗ್ ತಿಳ್ದಿವ್ನಿನ್ ಯಾವ್ವೊತ್ಗೂ ತೆಪ್ದಂಗೆನ್
      ಅವ್ವನ್ಮ್ಯಾಗಾಣೆ ಮಾಡೇನ| ಗಣದೀಸ
      ದೆವ್ವ ಬಡ್ಕೊಂಡಿತ್ ಒಳ್ಗೊಳ್ಗೆ 😉

  19. ತಂದುದೇಂ ತಾಂಕಡಲು “ಶಂಖ”ವಂ ಮೇಲೆತ್ತಿ
    ಸಂದುದೀಯೋಂಕಾರ ರೂಪವಂ ಕಾಣ್ |
    ಹೊಂದುತೀ ಸಾಕಾರ ಬಿಂಬವಂ ಸಂಧಿಸಲ್
    ಬಿಂದುವುಂ ಸೇರುದೇಂ ಸಿಂಧುವಂ ತಾಂ ||

    ( ಚಿತ್ರದ ಹಕ್ಕಿ “ಶಂಖ”ದಂತೆ ಕಂಡು, ಆ ಶಂಖ “ಓಂ”ಕಾರದಂತೆ ಕಂಡು, ಆ “ಓಂ”ಕಾರ ರೂಪ ತನ್ನ ಬಿಂಬವನ್ನು ಸಂಧಿಸಿದಾಗ – ಎರಡು “ಓಂ”ಕಾರಗಳ ನಡುವಿನ ಒಂದೇ “ಬಿಂದು” ಸಾಗರವನ್ನು ಸೇರಿದಂತೆ ಕಂಡ ಕಲ್ಪನೆಯಲ್ಲಿ )

  20. banalli bellakki neeralli karihakki, prithiya alathe meerade mutha kooidu
    dhareyage haniserpa pariyen sogasu.

    • nimage aadarada svaagata. dayaviTTu chandassinna paaThagaLannella cennaagi aritu aa baLika nimm bhaavanegaLannu barehakkiLisi padyapaanakke kaLuhiri

  21. ಸಬಳಂ ಕೊಕ್ಕಿರೆ ರೆಂಕೆ ಬಿಲ್ಲಿನವೊಲಾ ಬಾನಾಡಿಗಂ ಮತ್ಸ್ಯದಿಂ-
    ದೆ ಬದುಂಕಿರ್ದಪುದಲ್ತೆ ಬೇಂಟೆಗೆನೆ ತಾನೊತ್ತಂಬರಂಗೆಯ್ದು ಕೂ-
    ಳ್ನಿಬಿಡಂ ತೋರ್ದಪ ಮೀನ್ಗಳಿಕ್ಕೆಗೆರಗಲ್ ಸಾರಸ್ಯದಾದರ್ಶದಿಂ-
    ದೆ ಬೆರಂಗಾಗುತೆ ಕಾಂಬ ಬೇಳುವೆಯನುಣ್ಬಾ ಚಿತ್ರಮುತ್ಕೃಷ್ಟಮಯ್

    ಸಬಳಂ – ಬಾಣ
    ರೆಂಕೆ – ರೆಕ್ಕೆ
    ಬೇಂಟೆ – ಬೇಟೆ
    ಒತ್ತಂಬರ – haste
    ಇಕ್ಕೆ – dwelling
    ಸಾರಸ್ಯದಾದರ್ಶ – reflection of lake
    ಬೇಳುವೆಯನುಣ್ಬಾ – (ಮೀನುಗಳನ್ನು ಕಾಣದೆ ತನ್ನನ್ನೇ ಕಂಡು) ಮಂಕುಭೂದಿಯನ್ನು ತಿನ್ನುವಾ

  22. ಅಹಹ ಸುಂದರರೂಪಮಿತೀರಿತಂ
    ಪಯಸಿ ಲೋಕಯತಾ ವಚಸಾ ವಿನಾ |
    ಸ್ವನುತಿನಾ ಜಲವಾಸಕಚಂಚುನಾ
    ಗಮಯತಾ ಪ್ರತಿಭಾಲಲಿತೈಕತಾಮ್ ||
    (ಅನ್ವಯ – ಪಯಸಿ ಲೋಕಯತಾ ಜಲವಾಸಕಚಂಚುನಾ ಪ್ರತಿಭಾಲಲಿಲೈಕತಾಂ ಗಮಯತಾ “ಅಹಹ ಸುಂದರರೂಪಮ್” ಇತಿ ವಚಸಾ ವಿನಾ ಸ್ವನುತಿನಾ ಈರಿತಮ್.)

    ಭಾವಾರ್ಥ– ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ’ಆಹ ಸುಂದರಾಂಗ’ ಎಂದು ಆತ್ಮಪ್ರಶಂಸೆಯೊಂದಿಗೆ ಸದ್ದುಮಾಡದೆ, ಬಾಯಿಯಲ್ಲಿ ಮೀನು ಹಿಡಿದ ಆ ಹಕ್ಕಿಯು ಹೇಳಿತು. ಹೀಗೆ ಚಾತುರ್ಯದ ಹಾಗೂ ಲಾಲಿತ್ಯದ ಸಹಸ್ಥಿತಿಯನ್ನು ತೋರಿಸಿತು.

  23. ಕವಿಯೇ! ತ್ವನ್ಮತಿಕಾಂತಿಯಿಂದನಿಮಿಷರ್ಗೆಂತಾದುದಾಕರ್ಷಣಂ!
    ಸವಿದೋರ್ದಯ್ ಮಿಗೆ ನೀರಸಾರಿ, ಬಳಿಕಂ ಸಂಸ್ಪರ್ಶಿಸಲ್ ಪಾದದಿಂ
    ಭವಿಸಿರ್ಕುಂ ಜಡದೊಳ್ ತರಂಗಮಯಚಾಂಚಲ್ಯಂ ವಲಂ ರಾಗದಿಂ
    ತವವಕ್ತ್ರಸ್ಥವಿಚಿತ್ರಲೀಲೆಯೆ ಸೊಗಂ ಮಂದಸ್ಮಿತಾನಂದದಂ||

    (ಶ್ಲೇಷದಲ್ಲಿ ಮೂರು ವಿಷಯಗಳನ್ನು ತರುವ ಪ್ರಯತ್ನ ಮಾಡಿದ್ದೇನೆ. ಅಸಾಧು ಪ್ರಯೋಗಗಳನ್ನು ದಯವಿಟ್ಟು ತಿಳಿಸಿ. “ಕ್ಲೇಶಾಲಂಕಾರ” ಆಗದಿದ್ದರೆ ಸಾಕು!!)
    ೧. ನೀರಿನಲ್ಲಿ ವಿಹರಿಸುವ ಪಕ್ಷಿ- ಕವಿ- ಹೇ ಸಾರಸ ಪಕ್ಷಿಯೇ. ನಿನ್ನ ಮತಿಯ ಕಾಂತಿಯಿಂದ ಅನಿಮಿಷ(ಮೀನು)ಗಳಿಗೆ ಹೇಗೆ ಆಕರ್ಷಣೆಯಾಯಿತೋ! ನೀರ ಬಳಿಬಂದು (ನೀರ+ಸಾರಿ(ಸಾರ್=ಬರು) ವಿಭಕ್ತಿ ಪಲ್ಲಟ) (ಅನಿಮಿಷಗಳ!!) ಸವಿ ತೋರಿಸಿದೆ. ಬಳಿಕ ಪಾದದಿಂದ ಸಂಸ್ಪರ್ಶಿಸಲು ನೀರಿನಲ್ಲಿ(ಜಡ) ತರಂಗಮಯ ಚಾಂಚಲ್ಯ ಸಂಭವಿಸಿತು.ಮಂದಸ್ಮಿತ(ಪಕ್ಷಿಯ ಮುಖ ನಗುತ್ತಿರುವಂತೆ ಕಾಣುವುದರಿಂದ?) ಆನಂದವನ್ನು ಕೊಡುವ, ಕೆಂಪು ಬಣ್ಣದಿಂದ (ರಾಗದಿಂ) ನಿನ್ನ ಮುಖದಲ್ಲಿರುವ ವಿಚಿತ್ರಲೀಲೆಯೆ ಸೊಗಸು. (ವಿಚಿತ್ರ=ವಿ+ಚಿತ್ರ “ಪಕ್ಷಿಯ ಬೆರಗಿನ” ಎಂದು ಬೇಕಾದರೂ ಅನ್ವಯಿಸಬಹುದು)
    ೨.ಬ್ರಹ್ಮ- ಹೇ ಕವಿಯೇ.. ನಿನ್ನ ಮತಿಯ ಕಾಂತಿಯಿಂದ ದೇವತೆಗಳಿಗೆ ಎಂತು ಆಕರ್ಷಣೆಯಾಯಿತೋ. ನೀರಸಗಳ (ನೀರಸ+ಅರಿ) ಶತ್ರುವೇ (ರಸದ) ಸವಿ ತೋರಿಸಿದೆ. ಬಳಿಕ ನಿನ್ನ ಪಾದದಿಂದ ಸಂಸ್ಪರ್ಶಿಸಲು ಜಡವಾದದ್ದರಲ್ಲೂ ತರಂಗಮಯ ಚಾಂಚಲ್ಯ ಹುಟ್ಟಿತು. ಮಂದಸ್ಮಿತ ಆನಂದವನ್ನು ಕೊಡುವ ಪ್ರೇಮದಿಂದ(ರಾಗದಿಂ) ಇರುವ ನಿನ್ನ ವಾಣಿಯ (ಮುಖಸ್ಥ) ವಿಚಿತ್ರ ಲೀಲೆಯೆ ಸೊಗಸು.
    ೩.ಕಾವ್ಯವನ್ನು ಬರೆಯುವ ಕವಿ- ಹೇ ಕವಿಯೇ.. ನಿನ್ನ ಮತಿಯ ಕಾಂತಿಯಿಂದ ಅನಿಮಿಷ (ಆಶ್ಚರ್ಯಪಟ್ಟು- ಕಣ್ಣೆವೆಯಿಕ್ಕದವರು)ರಿಗೆ ಹೇಗೆ ಆಕರ್ಷಣೆಯಾಯಿತು! ನೀರಸಗಳ ಶತ್ರುವೇ! (ರಸದ) ಸವಿ ತೋರಿಸಿದೆ. ನಿನ್ನ ಪದ್ಯದ ಪಾದದಿಂದ ಸಂಸ್ಪರ್ಶಿಸಲು ಜಡವಾದ ವಸ್ತುಗಳಲ್ಲಿಯೂ ತರಂಗಮಯ ಚಾಂಚಲ್ಯ ಹುಟ್ಟಿತು.ಮಂದಸ್ಮಿತ ಆನಂದವನ್ನು ಕೊಡುವ ರಾಗದಿಂದ ಇರುವ ನಿನ್ನ ಮುಖಸ್ಥ ವಾಣಿಯ ಲೀಲೆಯೇ ವಿಚಿತ್ರ ಸೊಗಸು.

    • Wow!! Real good poem,quite scholarly too. I am much impressed by both the diction and content. I see no klEsha in this shlESha:-) asth great poet BaaNabhaTta says: shlEShO’kliShTaH
      But I feel that the second type of meaning (with that of Brahman) is not that impressive.

      • ಧನ್ಯವಾದಗಳು ಸರ್:-)
        ಕ್ಲೇಶವಾಗಿ ಸಾಕಪ್ಪಾ ಸಾಕು(ಅಲಂ) ಅಂತ ಹೇಳುವ ಕ್ಲೇಶಾಲಂಕಾರ ಆಗಬಹುದು ಅಂದುಕೊಂಡಿದ್ದೆ.;-) 😛

  24. ಮಡಿದಾಗಿರ್ದಿಹಪಕ್ಕವಂಹರಡುತಂ ಬಾನಿಂದಬಂದಿರ್ಪುದುಂ-
    ಪಡೆಯಲ್ಕಾಸರದಿಂದಕೂಳನಿಜದಿಂ ದುತ್ಕಂಟದುತ್ಸಾಹದಿಂ
    ಬೆಡಗಂ ಚೆಲ್ಲುತ ಚಂದ್ರನಂತೆ ಭುವಿಯಾ ತಾನೀವುದಾನಂದಮಂ
    ಮಡುವಾಗಲ್ನೆಲಗದ್ದೆಹಕ್ಕಿಗಳಿಗಂ ಕಾರ್ಗತ್ತಲೆಲ್ಲಿರ್ಪುದುಂ?

  25. ಪುಟ್ಟ ಮೀನಂಕಂಡೊಡನೆ ಬೆ
    ನ್ನಟ್ಟಿಬಂದಿಪುದಿತ್ತ ಬಾಯ್ತೆರೆ
    ದಿಟ್ಟ ಗುರಿಯೆಂದೆಂದು ತಪ್ಪದುಮೆನುತ ಧುಮುಕಿರಲು|
    ಹುಟ್ಟಿನಿಂದೀಜುತಿರೆ ನೀರೊಳ್
    ಮುಟ್ಟುತಾಳದೊಳವಿತುಕೊಂಬಿರೆ
    ಕೊಟ್ಟಿತೈಕೈಯ್ಯನ್ನುಪಕ್ಕಿಗೆ ನೀರನುಣಿಸುತಲಿ|

    • An unsuccessful attempt by the bird well explained. ಕೊಂಬಿರೆ or ಕೊಂಡಿರೆ?

      • ಧನ್ಯವಾದಗಳು ಪ್ರಸಾದು ಅವರೆ.. ಕೊಂಬಿರೆ = ಕೊಂಡಿರೆ ಅಂತ ತಿಳಿದುಕೊಂಡಿದ್ದೆ… ಇದು ತಪ್ಪಿದ್ದಲ್ಲಿ ಕೊಂಡಿರೆ ಎಂದೇ ಮಾಡಿಕೊಳ್ಳುವೆ…

  26. ನೀಲಸಾಗದೊಡಲ ರಸವಿಂಗುತೇರಿದೆಯೆ
    ಹಾಲು ಬಣ್ಣದ ಹಕ್ಕಿ ರೂಪತಾಳೀ |
    ತೇಲುತಾಗಸದೆಡೆಗೆ ಪಸೆತುಂಬೆ ಸಾಗಿದುದು
    ಹೋಲುತಿಹುದೈ ಮುಗಿಲ ರೂಪಕಾಣೀ ||

  27. The mouth serves for both eating and speaking. The former is a simple affair (as in fauna). But the latter works in tandem with the arms to assail the opponent verbally and physically (as in homo sapiens).
    ದಾಹಗೊಳ್ಳಲ್ ಪೊಡೆಯು ಬಾಯೊಂದೆ ಸಾಕಲ್ತೆ
    ಲೀಹೆತೀರಿಸಲನಿತು ಸರಳದಂದಂ|
    ಆಹತಾನಾಹತದ ನಿರ್ವಚನಕಂ ಬೇಕು
    ಬಾಹುಗಳು ಮೂದಲಿಸಲೆದುರಾಳಿಯಂ||

  28. ತುಂಡಿಂ ಗ್ರಹಿಸಿರೆ ತುಂಡಂ
    ಕೊಂಡೋಡುತಿಹೆಯದನೇಕೆ ಬಲ್ ದೂರಕ್ಕಂ?
    ಕಂಡು ಬೆದರಿರ್ಪೆಯೆಂನೀ
    ಮಂಡೆ ಪಗೆಯದಂ ಸರೋವರದೊಳೀ ಕ್ಷಣದೊಳ್?

  29. ಶುದ್ದದ ಜಲವದ
    ಕೊದ್ದಿರೆ ಕುಣಿಗಳು
    ಬಿದ್ದುಳಿದಿರುವುದದಚ್ಚರಿಯೆ |
    ಗದ್ದಲವಿಲ್ಲದೆ
    ಸದ್ದಡಗಿಸಿದೆಯೊ
    ಮುದ್ದಿನ ಮೀನಿನ ಶರದಂತೆ! ||

    ಕುಣಿ ಬಿದ್ದ ನೀರು ತನ್ನ ಸಮತಲ ಸ್ಥಿತಿಯನ್ನು ಕಾಯ್ದು ಕೊಳ್ಳುವ ಮೊದಲೇ ಹಕ್ಕಿ ಕೊಳ್ಳೆಯೊಂದಿಗೆ ಅಷ್ಟು ಮೇಲೇರ ಬೇಕಾದರೆ ಅದು ಶರವೇಗದಲ್ಲಿ ಹೊರಟಿರಬಹುದೋ ಎಂಬ ಕೌತುಕ .

    • “ಮೀನನು” ಎಂಬುದು ”ಮೀನಿನ” ಎಂದು ತಪ್ಪಾಗಿದೆ . ಕ್ಷಮಿಸಿ .

  30. ಕನ್ನಡ ಪದ್ಯ ಬರೆಯಲು ಶಕ್ತಿ ಸಾಲದೆ ಕಂದ ಪದ್ಯದ ವೇಷದಲ್ಲಿರುವ ಲಘು-ಪ್ರಚುರ ಗದ್ಯವನ್ನು ಬರೆಯುತ್ತಿದ್ದೇನೆ. ಭಾಗವಹಿಸಬೇಕೆಂಬ ಇಚ್ಛೆಯೇ ಹೊರತು ಮತ್ತೇನೂ ವಿಶೇಷವಿಲ್ಲ.

    ರಸಕವಿಯು ಕಾಣುವನು ಸಾ-
    ರಸವ ಸಹಜ-ಚಲನೆ-ಬಣ್ಣಗಳಿರುವ ನಿಜಮಂ |
    ಹೆಸರ ಬಯಸಿ ಬರೆದವ ನೀ-
    ರಸಕಾವ್ಯಗಳೋದಿ ಕಲಿತವ ಪ್ರತಿಬಿಂಬಂ ||

    The gifted poet sees the world in all its glory – in colour, with action, and in 3-D. The poetaster’s experience is not from observing the real world but from the image reflected in other dull books where the image is colourless, static, and in 2-D.
    That explains the difference between genius poets and other common aspirants.

    • ಆನಂದವರ್ಧನನು ಧ್ವನ್ಯಾಲೋಕದ ನಾಲ್ಕನೆಯ ಉದ್ಯೋತದಲ್ಲಿ ಸ್ವಂತಿಕೆಯೇ ಇಲ್ಲದೆ ಪೂರ್ವಕವಿಗಳ ಬಾಹ್ಯಾನುಕರಣೆಯಲ್ಲಿಯೇ ನೆರಳಿನಂತೆ ಬೆಳಕಿಲ್ಲದೆ ಬೀತುಹೋಗುವ ಕವಿಗಳ ಬಗೆಗೆ ತಿರಸ್ಕಾರವನ್ನು ತೋರುವ ಭಾಗವಿಲ್ಲಿ ನೆನಪಾಗುತ್ತದೆ. ಅವನು ಅಂಥ ಕಬ್ಬಿಗರ ರಚನೆಯು ಆಲೇಖ್ಯಪ್ರಾಯವೆಂದೂ ನಿರ್ಜೀವವೆಂದೂ ಸಾರುವುದು ಗಮನಾರ್ಹ.

  31. ಎರಗೆ ಹಕ್ಕಿಯು ಕೂಳ ಹೆಕ್ಕಲು
    ಬರಿದೆ ನೆಕ್ಕುತೆ ನಕ್ಕುದೇಂ |
    ಎರಕವುಕ್ಕಿರೆ ಹಾರೆ ಸೊಕ್ಕಲಿ
    ಮರೆತು ದಕ್ಕುದ ಕಕ್ಕುದೇಂ ||

    ಸರಿಕ ಪಕ್ಕನೆ ನೀರ ಹೊಕ್ಕುದ
    ನರಿತು ಕೊಕ್ಕಲೆ ಕುಕ್ಕುದೇಂ |
    ಎರಡು ಪಕ್ಕಿಗೆ “ಮೂರು” ರೆಕ್ಕೆಯು
    ಬೆರೆಗು ಸಿಕ್ಕುದು ತಕ್ಕುದೇಂ ||

  32. * ಬೆರಗು ಸಿಕ್ಕುದು ತಕ್ಕುದೇಂ ||

  33. ನಮಸ್ತೆ ಎಲ್ಲಾ ಪದ್ಯಪಾನಿಗಳಿಗೂ,

    ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ,

    ಸರಸಿಜಸಂಭವನಂ ನೆನೆ
    ದಿರೆ ಕಾಣಲ್ಕೆನ್ನಬಿಂಬವಂ ಸಾರಸದೊಳ್ ||
    ಸರಸಿಜಮಿತ್ರಜ ಕರುಣಿಸಿ
    ಪೊರೆಯಲ್ ಪೂಡಿದನೆ ಬಾಣವಂ ಸಾರಸದೊಳ್ ? ||

    (ಮೀನು ತನ್ನ ಜೀವಿತವನ್ನೆಲ್ಲಾ ನೀರಿನಲ್ಲಿಯೇ ಕಳೆದರು ತನ್ನ ಪ್ರತಿಬಿಂಬವನ್ನುನೀರಿನಲ್ಲಿ ಕಾಣಲಾಗುವುದಿಲ್ಲ,). ಅದು ಬ್ರಹ್ಮನನ್ನ ತಾನೂ ತನ್ನ ಪ್ರತಿಬಿಂಬವನ್ನ ನೀರಿನಲ್ಲಿ(ಸಾರಸದಲ್ಲಿ) ಕಾಣಬೇಕೆಂದು ಪ್ರಾರ್ಥಿಸುತ್ತದೆ. ಅದರ ಪ್ರಾರ್ಥನೆಯ ಪುಣ್ಯವೋ ಇಲ್ಲ ಪಾಪವೋ, ಮೀನಿನ ಜನ್ಮದಲ್ಲಂತೂ ಅದು ಸಾದ್ಯವಿಲ್ಲ ಎಂಬುದನ್ನರಿತ ಬ್ರಹ್ಮ , ಅದರ ಜನ್ಮವನ್ನ ಬದಲಿಸೋದಕ್ಕೆ ಯೋಚಿಸಿ ಯಮನನ್ನ ಕೇಳ್ತಾನೆ. ಯಮ ಸಾವಿನ ಬಾಣವನ್ನು ಸಾರಸ ಪಕ್ಷಿಯ ರೂಪದಲ್ಲಿ ಹೂಡುತ್ತಾನೆ. ಆದರೆ ದುರದೃಷ್ಟಕ್ಕೆ ಬಾಣದಂತಿರುವ ಸಾರಸ ಪಕ್ಷಿ ಮೀನನ್ನು ಕೊಕ್ಕಿನಿಂದ ಹಿಡಿದು ಮೇಲೆತ್ತಿದ ಕೂಡಲೇ ಮೀನಿಗೆ ತನ್ನ ಪ್ರತಿಬಿಂಬ ಕಾಣುತ್ತದೆ.. ಅದಕ್ಕೆ ಮರುಹುಟ್ಟಿನ ಅಗತ್ಯವೇ ಇರಲಿಲ್ಲ.

    • Reflection Vs. Rebirth
      ಎರಡಿಹವು ತಾವಿಲ್ಲಿ ದರ್ಶನಂಗಳು ನೋಡೆ,
      ಸರಿಪೇಳಿಹಿರಿ ಬಿಂಬಮರ್ಮಮನ್ನುಂ|
      ಮರುವುಟ್ಟ ವಾರಿಸಲು ಜವದೆ ಮಡಿ ನೀನೆಂದು
      ಕರೆನೀಡಿರುವಿರಲ್ತೆ ಧ್ವನಿಮಾರ್ಗದಿಂ|| 😉

  34. ಕಾಂಚನಾ, ಪ್ರಸಾದು, ಸುಧೀರ್, ಉಷಾ, ಭಾಲ, ಮುಂತಾದವರೆಲ್ಲ ಒಳ್ಳೆಯ ಪದ್ಯಗಳನ್ನೇ ರಚಿಸಿದ್ದಾರೆ. ವಿಶೇಷತಃ ಕಾಂಚನಾ ಅವರ ಪದ್ಯಗಳಲ್ಲೀಗ ಹಳಗನ್ನಡದ ಪ್ರಾಚುರ್ಯ ಹೆಚ್ಚಿರುವುದು ಹರ್ಷಾವಹ. ವೃತ್ತ-ಕಂದ-ಚೌಪದಿ ಎಂದು ಎಲ್ಲ ಬಂಧಗಳನ್ನೂ ಬಳಸಿ ಗೆದ್ದಿದ್ದಾರೆ. ಸುಧೀರ್ ತನ್ನ ಎಂದಿನ ಸ್ವೋಪಜ್ಞತೆ-ನಾವಿನ್ಯಗಳನ್ನು ತಮ್ಮ ಎಲ್ಲ ಕಾಲದ ಮೀಸಲುಸೊತ್ತನ್ನಾಗಿ ಉಳಿಸಿಕೊಂಡೇ ಇದ್ದಾರೆ:-). ನರೇಶರ ಸಂಸ್ಕೃತಕವಿತೆಯೂ ಅನವದ್ಯವಾಗಿದೆ. ನನ್ನ ಅಂಕ್ಯದಲ್ಲಿ (lap-top) ಬರೆಹ-ತಂತ್ರಾಂಶವು ಲುಪ್ತವಾಗಿದ್ದ ಕಾರಣ ಆಂಗ್ಲವಾಣಿ-ಲಿಪಿಯಲ್ಲಿ ಚುಟುಕಾಗಿ ಪ್ರತಿಕ್ರಿಯಿಸುವುದಾಯಿತು; ದಯಮಾಡಿ ಮನ್ನಿಸುವುದು.

    • Thank you so much for your support, Ganesh sir 🙂

    • ವಸಂತತಿಲಕ|| ಧನ್ಯೋಸ್ಮಿಯೆಂದೆನಿದೊ ನಾಂ| ಅನುಸೂತಿಯಿಂದಂ (ಸರದಿ)
      ಮಾನ್ಯರ್ ಮೊದಲ್ ನಮಿಸಿಹರ್| ವರಕಾಂಚನಾ ತಾವ್
      ನಾನ್ಯರ್ ಸುಧೀರರಿದೊ ಬ|ರ್ಪರು ಮೂರನೇಯರ್
      ಸೈನ್ಯಂ ತುಡಿರ್ದಿಹುದು ಭಾ|ಲ-ಉಷಾದ್ಯರರ್ದೈ

  35. ಎಲ್ಲರೂ ನೂತನಕವಿತಾಸಾಧ್ಯತೆಗಳನ್ನು ಕೊಳ್ಳೆಹೊಡೆದ ಬಳಿಕ ನನ್ನ ಈ ಅಲ್ಪಯತ್ನ:
    ದೃತವಿಲಂಬಿತವೃತ್ತದಲ್ಲಿ ಒಂದು ಪುಟ್ಟ ಕವಿತೆ:

    ವಲಸೆವಕ್ಕಿಯೆ! ನಿನ್ನನಿದೀ ಕೊಳಂ
    ನಲುಮೆನೇಹಿಗನೆಂದೆಣಿಸುತ್ತುಮೀ |
    ನೆಳಲಿನಾಕೃತಿಯಿಂದೆ ನಿಜಾತ್ಮದೊಳ್
    ತಳರ್ದುದೇಂ? ಕೆಳೆಗೀ ಪರಿ ಸಲ್ವುದಯ್ ||

    (ಕಡೆಯ ಸಾಲಿನಲ್ಲಿ ಶಿಥಿಲದ್ವಿತ್ವವಿದೆ: ತಳರ್ದುದೇಂ)

    • very nice

    • ತುಂಬ ಚೆನ್ನಾಗಿದೆ.ಪುಟ್ಟ ಕವಿತೆಯಲ್ಲಿ ಅಪಾರವಾದ ಅರ್ಥವಡಗಿದೆ ! ಧನ್ಯವಾದ.

    • It is the first time here that the water has been assigned a conscious conscientious act, and not viewed as a mere reflector.
      ನೀರ ನಾಮೆಣಿಸಿಹೆವು ನಿರ್ಜೀವ ದ್ರವಮೆಂದು
      ತೋರುವುದು ಬರಿಯ ಬಿಂಬಮನೆನ್ನುತುಂ|
      ಮೀರಿದವರಲ್ತೆ ನೀಮೀ ಮಿತಿಗಳೆಲ್ಲಮನು
      ಭೂರಿವ್ಯಕ್ತಿತ್ವಮನ್ನದಕಿತ್ತಿರೈ||

  36. ಕೆಳೆತನವಂ ಬಣ್ಣಿಸಿರ್ಪ ಪರಿ ಬಲ್ಸೊಗಸು.

    • ಕಾಂಚನಾ,ಶ್ರೀಕಾಂತ್ ಮತ್ತು ಪ್ರಸಾದು ಅವರಿಗೆ ಧನ್ಯವಾದಗಳು:-)

  37. ಕೆಳೆತನಮೆಂದೊಡಮಿದೆ ಕಾ-
    ಣೊಳರೇಗಳುಮೊಂದಿ ಯುಣಿಸುಮಂ ಪಸುಗೊಳ್ವರ್
    ಕಳವೊಳುಮೊರ್ವರಿಗೊರ್ವರ್
    ಭಳಾ ಮರೆಯನಿತ್ತು ಕಾವ ಪರಿಯೇನ್ ಚಂದಂ!

    • ಒಟ್ಟು ತಾತ್ಪರ್ಯವಾಯಿತು – Accomplices in crime. ಚೆನ್ನಾಗಿದೆ. ಎರಡನೆಯ ಪಾದ ಸ್ಪಷ್ಟವಾಗಲಿಲ್ಲ.

    • ಧನ್ಯವಾದ ಪ್ರಸಾದು
      ಒಳರ್ ಏಗಳುಂ ಒಂದಿ ಉಣಿಸುಮಂ ಪಸುಗೊಳ್ವರ್

      ಯಾವಾಗಲೂ ಕೂಡಿಯೇಇರುವರು. ಉಣಿಸನ್ನೂ ಪರಸ್ಪರ ಹಂಚೊಕೊಳ್ವರು.

  38. ಕಂ| ಸ್ನಾನವ ಗೈದುಂ ಪಾವನಿ
    ನಾನೆಂಬೀ ಕಪಟಗರ್ವವನ್ ಬಿಡು ಖಗವೇ |
    ಮೀನದು ಸಿಲ್ಕದೆ ಜಾಲಕೆ(ಕೊಕ್ಕಿಗೆ)
    ಮಾನವು ನಿನ್ನಯ ಹರಾಜಿಗಾದುದ ಕಂಡೇ ||

    • ಕಂಡೆ=ಕಂಡೆನ್, ಕಂಡೆಂ ಅಲ್ಲವೆ?
      ‘ಕಂಡೇ’ ಎಂದರೆ ‘ನೋಡಿಯೇ …’ ಅಲ್ಲವೆ?

  39. ಚೌ| ಚೆಲುವುನಿನದೆಷ್ಟೆಂದು ತಿಳಿಯಲ್ಕೆ ಪಾಳುಕೆರೆ-
    ಯಲಿಮಿಂದು ನಟಿಸಿದರೆ ಬಂದುದೇನು? |
    ಚಿಲಿಪಿಲಿಸು ಕವಿಕಲ್ಪನಾಸರೋವರದಬಳಿ,
    ತಿಳಿಸುವನು ನಿಜಬಣ್ಣ ರೂಪವನ್ನು ||

    • ಕವಿಯೆ ಸಾರುವನಲ್ತೆ ಖಗ-ಮಿಗದ ತಾಣಕಂ
      ರವಿ ಕಾಣದುದನು ಕಾಂಬಾಸೆಯಿಂದಂ|
      ಕವಿ(ಬ್ರಹ್ಮ)ಯಲ್ತೆ ಬಣ್ಣಿಸಿಹುದಾಯೆಲ್ಲ ಸೋಜಿಗವ
      ಕವಿ ಬರಿದೆ ಲಿಪಿಕಾರನಲ್ತೆಲೆಂದುಂ|| 😉

  40. ಪಾದದಿ ಮೀಟುತೆ ಜಲಮ೦
    ಮೋದದಿ ನೋಡಿತು ಜಲದೊಳು ಮತ್ಸ್ಯದ ಚಲನ೦
    ’ಕಾದಿಹ ಕ೦ದ೦, ಊಟಕೆ
    ಮೀರ್ದುದು ಸಮಯ೦’, ಎನುತಲಿ ಏರಿತು ವಿಹಗ೦

    ರೆ೦ಕೆಯನಗಲಿಸಿ ಹಾರಲ್
    ಅ೦ಕೆಯ ದಾಟುತಿಳಿಯುತಿರೆ ನೀರೊಳು ಬಿ೦ಬ೦
    ಟ೦ಕಿಸಿ, ಠಪ್ಪನೆ ರೆಕ್ಕೆಯ
    ಝ೦ಕಿಸಿ ಹಾರಲು ಸೆರಗಿನ ನೆರಗೆಯೆ ಪೋಲ್ಕು೦

    • ನಿಮ್ಮ ಎರಡೂ ಪದ್ಯಗಳ ಎರಡನೆಯ ಹಾಗೂ ನಾಲ್ಕನೆಯ ಪಾದಗಳಲ್ಲಿ ಯತಿಭಂಗವಾಗಿದೆ. ಮೊದಲ ಪದ್ಯದ ನಾಲ್ಕನೆಯ ಸಾಲಿನಲ್ಲಿ ಮತ್ತು ಎರಡನೆಯ ಪದ್ಯದ ಮೊದಲ ಸಾಲಿನ ಕೊನೆಯಲ್ಲಿ ಸಂಧಿಯಾಗದ ದೋಷವೂ ಇದೆ.ದಯಮಾಡಿ ತಿದ್ದಿಕೊಳ್ಳಿರಿ.

  41. ಮತ್ಸ್ಯಂ ಕಂಡುದು ಜಲದೊಳ್
    ಮಿಥ್ಯಂ ಮುನ್ನಡೆದ ಪಕ್ಷಿಕೂಟಂ ಬದಿಯೊಳ್ |
    ದ್ವಿತ್ವಂ ಕಂಡುದು ಕಡಲ ವಿ
    ಚಿತ್ರಂ ಕಣ್ಣಡಿಯ ಪಕ್ಷಿನೋಟಂ ಧರೆಯೊಳ್ ||

    • ಪ್ರಾಸವೆಲ್ಲಿ ಹೋಯಿತು ಉಷರವರೆ?

      • ಶ್ರೀಕಾಂತ್ ಸರ್,
        “ಶರಭ” ಪ್ರಾಸ ತಪ್ಪಿದೆಯಲ್ಲವೆ? ಸ್ವಜಾತಿ/ವಿಜಾತಿ ಸಂಯುಕ್ತಾಕ್ಷರಗಳನ್ನು ಬೆರೆಸಕೂಡದೆಂದು, ವಿಜಾತಿ ಸಂಯುಕ್ತಾಕ್ಷರಗಳನ್ನೇ ಹುಡುಕಿ ಬರೆದದ್ದು. ಎಲ್ಲವೂ ಒಂದೇ ಒತ್ತಕ್ಷರವಾಗಿರಬೇಕೆಂದು ಪ್ರಸಾದ್ ಸರ್ ರವರಿಂದ ಕೇಳಿ ತಿಳಿದೆ. ಸರಿಪಡಿಸಿಕೊಳ್ಳುತ್ತೇನೆ.
        ಈಗ ಅಪರಾಧ ಸಮರ್ಪಣೆ – ಈ ಚೌಪದಿಯೊಂದಿಗೆ:

        ನೀಲಿಯಾಗಸದೊಡನೆ ಲೀನವಾದುದು ಕಾಣ
        ನೀಲಮೊಗಕದೊ ಬಿಳಿಯ ದೃಷ್ಟಿಬೊಟ್ಟು |
        ತಾಲಮೇಳದೊಳೆದ್ದು ನೀಲಸಾಗರದಿಂದೆ
        ಮೇಲೆ ಕಂಡುದೆ ಬಿಳಿಯದೊಂದು ತೊಟ್ಟು ||

  42. ನೀಲ ಹಿನ್ನೆಲೆಯಲ್ಲಿ ದಿವ್ಯತ್ರಯರ ಚಿತ್ರ
    ಮೇಲೆ ಹಾರುದುಕಾಣ ಪರಮಹಂಸಾ ।
    ಕಾಲಿಯೊಡಮೂಡಿದುದು ಮಾತೆ ಶಾರದೆ ಪಾತ್ರ
    ಗಾಳಹಾಕಿದುದಾವಿವೇಕ ವಾಣೀ ।।

    (ನೀಲ backgroundನಲ್ಲಿ ಕಂಡ ದಿವ್ಯತ್ರಯರ ಕಪ್ಪು-ಬಿಳುಪು group photoದ ಹೋಲಿಕೆಯ ಕಲ್ಪನೆಯಲ್ಲಿ)

    • ಎರಡೂ ಅರ್ಧಗಳ ಕೊನೆಯ ಅಕ್ಷರವನ್ನು (ಸಾ, ಣೀ) ಹ್ರಸ್ವವಾಗಿಸಿ.
      ಕಾಲಿಯೊಡಮೂಡಿದುದು – ಸ್ಪಷ್ಟವಾಗಲಿಲ್ಲ.
      ಹಕ್ಕಿ-ಪಾತ್ರಗಳಿಗೆ ನೀಡಿರುವ ಉಪಮಾನಗಳು ಸ್ಪಷ್ಟವಾಗಿದೆ. ವಿವೇಕವಾಣಿಯನ್ನು ಯಾವುದಕ್ಕೆ ಹೋಲಿಸಿರುವಿರಿ ಎಂದು ಸ್ಪಷ್ಟವಾಗಲಿಲ್ಲ. ದಯವಿಟ್ಟು ತಿಳಿಸಿ.

  43. ಪುಲಸಾಗಿ ಪರಡಿರ್ಪ ಬಲುದೊಡ್ಡ ಕೊಳವಕೇ-
    ವಲವಕ್ಕಿ ತಾಂಕಲಂಕುತಿರಲದುವೇ
    ನಲಿವಮಡುವಾಗಿರ್ಪ ನರನಕಿರು ಹೃದಯವಂ
    ನಲಗಿಪುದು ಕಠಿನವೇಂ ಜನರ್ಗೆ,ಪೇಳಿಂ

    • ಹೋಲಿಕೆ ಚೆನ್ನಾಗಿದೆ. ವಿಷಯ ಸುಸ್ಪಷ್ಟವಿದೆ.
      Following suggestions are only to make the verse richer:
      1) ಪುಲಸಾಗಿ and ಬಲುದೊಡ್ಡ are almost synonymous. You may dispense with the latter.
      2) ಲದುವೇ
      My (unnecessary) ಸವರಣೆ:
      ಪುಲಸಾಗಿ ಪರಡಿರ್ಪ ಕೊಳವ ಸುಲಭದಿನೆ ಕೇ-
      ವಲವಕ್ಕಿ ತಾಂ ಕಲಂಕುತಿರಲಿನ್ನುಂ|
      ನಲಿವ ಮಡುವಾಗಿರ್ಪ ನರನ ಕಿರುಹೃದಯಮಂ
      ನಲಗಿಪುದು ಕಠಿನಮೇಂ ನರಗೆ ಪೇಳಿಂ||

  44. ಈಗೊಮ್ಮೆ ಕೊಕ್ಕಿನಿಂದಾಗೊಮ್ಮೆ ಪಂಜದೊಳ್
    ಸಾಗಿಸುವೆ ನೀ ನಿನ್ನ ಬೇಟೆಯನ್ನುಂ|
    ರಾಗವಾ ಕೊಕ್ಕು-ಪಾದಗಳವಾ ಕ್ರಿಮಿಯ ಮರು-
    ಳಾಗಿಸುವ ಸಾಧನಮೆ ಪೇಳು ನೀನು||
    (Is ಪಂಜ=Talon?)

  45. ಬೇಕು ಪಕ್ಕಿಗೆ ಕೂಳು ನರ್ಮದಿಂ(ಮೋಜಿನಿಂ)ದೊಯ್ವುದದು
    ಕೋಕಮುಂ (ಕಪ್ಪೆ) ಸಜ್ಜಹುದು ಕರ್ಮಮೆಂದುಂ|
    ಲೋಕದೀ ಕಜ್ಜಕಂ ನಿರ್ಮಮದಿನನುವಾಗು-
    ವೇಕದೀಕ್ಷೆಯ ಜಲಮೆ ಧರ್ಮದೈವಂ||
    (ವಿಷಮ ಅನುಪ್ರಾಸ ತರಲು ಪ್ರಯತ್ನಿಸಿದ್ದೇನೆ)

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)