Dec 212013
 

ಮದಪ, ಸರಿಸ, ನಿಸದ, ಪಮಗ ಪದಗಳನ್ನು ಬಳಸಿ ಯಾವುದಾದರೂ ಸಂಗೀತೇತರ ವಸ್ತು ಆಧಾರಿಸಿ ಪೂರಣಗಳನ್ನು ನೀಡಿರಿ

  85 Responses to “ಪದ್ಯಸಪ್ತಾಹ ೯೧: ದತ್ತಪದಿ”

  1. (ಸಂಸ್ಕೃತಪೂರಣೆಗಳನ್ನೂ ಮಾಡಬಹುದಾದರೆ )
    ಭೂಪಾಲನೋನ್ಮದ-ಪರಾಕ್ರಮ-ಪೂರಿತೋಸೌ (ಮದಪ)
    ಬದ್ಧಾಂ ಚ ಕೇಸರಿಸಮೀಪಮವೇಕ್ಷ್ಯ ಧೇನುಮ್ | (ಸರಿಸ)
    ಭೂತೇಷು ಭೂಮ್ನಿ ಸದಯಃ ಶಿಖಿಲಗ್ನಹಸ್ತೋ (ನಿಸದ)
    ವೇಗಾನಿಲೋಪಮಗತಿಶ್ಚಲಿತುಂ ನ ಶಕ್ತಃ || (ಪಮಗ)

    ನಂದಿನೀವರಪ್ರಸಂಗವನ್ನು ಸ್ಮರಿಸಿ –
    ಭೂಪಾಲನಸ್ಯ ಉನ್ಮದಃ ಪರಾಕ್ರಮಃ – ತಾಭ್ಯಾಂ ಪೂರಿತಃ ಅಸೌ ರಾಜಾ ದಿಲೀಪಃ ಕೇಸರಿಸಮೀಪಂ ಬದ್ಧಾಂ ಧೇನುಮ್ ಅವೇಕ್ಷ್ಯ ( ವೀಕ್ಷ್ಯ ) ಭೂಮ್ನಿ (ಭೂಮ್ಯಾಮ್) ಭೂತೇಷು ಸದಯಃ ಶಿಖಿಲಗ್ನಹಸ್ತಃ (ಬಾಣೇ ಯಸ್ಯ ಹಸ್ತಃ ಸಂಲಗ್ನಃ) ವೇಗಾನಿಲೋಪಮಗತಿಃ (ವಾಯುಸದೃಶಗತಿಃ ಸನ್ನಪಿ) ಚಲಿತುಂ ನ ಶಕ್ತಃ.

    • ರಮಣೀಯೋsಯಂ ಪದ್ಯೋಪಹಾರಃ | ವಿಶಿಷ್ಯಾತ್ರ ದತ್ತಪದಾನಿ ನಿರರ್ಥಕಾನ್ಯಪಿ ಸುತರಾಂ ಸಾಹಜಿಕಭಾವೇನ ಪದ್ಯಕುಕ್ಷೌ ಸಲೀಲಂ ನಿಕ್ಷಿಪ್ತಾನಿ | ನೂನಂ ತಮಾಮಭಿನಂದನೀಯಃ ಕಿಲಾಸ್ಮಾಕಂ ವಯಸ್ಯವರೋ ನರೇಶಮಹೋದಯಃ |

      • ಯೂಯಂ ತುಷ್ಟಾ ವಯಂ ತುಷ್ಟಾ, ನ ತತ್ರ ಕೋಽಪಿ ಸಂಶಯಃ | ಪರಂ ಮಹೋದಯಾಖ್ಯಾತಂ ಮುಕುಟಂ ಮಸ್ತಕೇ ಶಿಶೋಃ !

        • ಸಖೇ ನರೇಶ! ಯುಜ್ಯತೇ
          ತ್ವದೀಯಮಿಂಗಿತಂ ಪರಮ್ |
          “ನ ತತ್ರ ಕೋsಪಿ ಸಂಶಯಃ”
          ಪ್ರಮಾಣಿಕಾಗತೌ ಸ್ಥಿತಾ:-)
          (ನಾನುಷ್ಟುಭೀಮಿಯಂ ಧತ್ತೇ
          ಗತಿಮಾರ್ಷೇಯಮಾಧುರೀಮ್ |
          ಅತೋ ನಿವೇದ್ಯತೇ ತುಭ್ಯಂ
          ನ ಪುರೋಭಾಗಿತಾ ಮಮ 🙂

          • ಯೂಯಂ ತುಷ್ಟಾ ವಯಂ ತುಷ್ಟಾ ನಾಸ್ತ್ಯೇವ ಕೋಽಪಿ ಸಂಶಯಃ |
            ತಥೋಕ್ತೇ ಕಿಂ ಭವೇದ್ಗತ್ಯಾಂ ವರ್ಣಾನಾಂ ಸುಲಭಾಸಿತಮ್ ?
            ಭವಾದೃಶಾಂ ಪುರೋಭಾಜಾಮಭಾವೇ ವರ್ಧನಂ ಕುತಃ?
            ಉಪಗ್ರಹಃ ಕಥಂ ಗಚ್ಛೇದ್ ಭೂಮ್ಯಾ ವಿನಾ ನು ಮಂಗಲಮ್ |

            (ಇಸ್ರೋ ಮಂಗಲಯಾನಸ್ಯ ಭೂಪ್ರದಕ್ಷಿಣಾನಿ)

    • ಬಹಳ ಚೆನ್ನಾಗಿದೆ ನರೇಶರೆ

  2. ಸುಮದ ಪರಿಮಳಂ ಪಸರಿಸ-
    ಲಮಮಾ! ಛುಪಮಗಮನಾರ್ದುದಾಃ ಕವನಿಸದಾನ್
    ದ್ರುಮದಂತೀವರಮಿರ್ದೆನ್
    ಭ್ರಮೆ ಕಳೆದೀಗೆನ್ನ ರಸನೆ ಪದ್ಯಮನೊರೆಗುಂ

    ಛುಪ- ಗಾಳಿ; ಅಗ- ಮನೆ

    • ಪದ್ಯಬರೆಯುವ ಪರಿಸ್ಥಿತಿಯನ್ನೇ ಪದ್ಯಪೂರಣಕ್ಕಾಗಿ ಬಳಸಿದ ಜಾಣತನದ ಪದ್ಯ, ಚೆನ್ನಾಗಿದೆ ಶ್ರೀಕಾಂತರೆ 🙂

  3. ಸುಮದ ಪರಿಮಳಕಿಲ್ಲಿ ಸರಿಸಮವದಿಲದಿಲ್ಲ
    ರಮಿಸಿ ತಣಿಪಂತೆಯಳಿ ಗಳನುಸೆಳೆದು,
    ತಮವದುಂಬಿದ ರಜನಿ ಸದರದಿಂ ರಮಣನೆಡೆ
    ರಮಣಿಗನುಪಮಗಮನ ವಿತ್ತಿಲ್ಲವೇ?

    • ಕಡೆಯ ಸಾಲಿನ ಇಂಗಿತವೇನೋ ತಿಳಿಯಲಾಗಲಿಲ್ಲ. ಉಳಿದಂತೆ ಪದ್ಯದ ಭಾವವೂ ಬಂಧವೂ ಹೃದ್ಯವಾಗಿವೆ.

      • ಧನ್ಯವಾದಗಳು, ಗಣೇಶ್ ಸರ್. ಪದ್ಯದಲ್ಲಿ ತಿದ್ದುಪಡಿಯನ್ನು ಮಾಡಿದ್ದೇನೆ.
        ಪರಿಮಳಭರಿತ ಸುಮವು ಅಳಿಗಳಿಗೆ ಒಳ್ಳೆಯ ಕಾಲವನ್ನು ನೀಡುವಂತೆ ಕತ್ತಲು(ಅಧಿಕ) ತುಂಬಿದ ರಾತ್ರಿಯು ತರುಣಿಗೆ(ಪ್ರಿಯೆಗೆ)
        ಸಕಾಲವನ್ನು ಒದಗಿಸುತ್ತಿಲ್ಲವೇ?

        • ಧನ್ಯವಾದ. ಆದರೆ “ಅನುಪಮಗಳಿಗೆ” ಅರಿಸಮಾಸ:-) ಅದನ್ನು ಅನುಪಮಘಟಿಕೆ ಎಂದೋ ಅನುಪಮಕ್ಷಣ ಎಂದೋ ಸವರಿಸಬಹುದು.

          • ಘಟಿಕೆ ಯಾದರೆ ನನಗೆ ಬೇಕಾದ ಪಮಗ ಸಿಗುವದಿಲ್ಲ.
            ಹೀಗಾಗಿ ಮತ್ತೊಮ್ಮೆ ತಿದ್ದುಪಡಿ 🙂

  4. ಮೃಗಮದ ಪಣೆ ಸಮ್ಮದಪದ
    ಸೊಗಸೈ ಸರಿ ಸಕಲ ಪಿಂಛವುಂ ಸರಿಸರಿ ದೇ-
    ವಗಿನಿಸದನಿಸದಲ ರತಿಪ
    ಮಗನೆಂತೈಯನುಪಮಗತಿ ಗುಟ್ಟೇಂ ಕೃಷ್ಣಾ !

    ದತ್ತಪದಗಳನ್ನು ಎರಡೆರಡು ಸಲ ತರುವ ಆಟಕ್ಕೆ ಈ ಬಾಲಂಗೋಚಿ ಅನಿವಾರ್ಯವಾಯಿತು. 🙂

    (ರುಕ್ಮಿಣಿ ಏಕಾಂತದಲ್ಲಿ ಶ್ರೀಕೃಷ್ಣನಿಗೆ ಅಲಂಕಾರ ಮಾಡುತ್ತಿರುವಾಗ “ದೇವಾ, ಕಸ್ತೂರಿ ತಿಲಕದ ನಿನ್ನ ಹಣೆ ನನ್ನ ಮುಖದ ಹತ್ತಿರ ಬಂದಾಗ ಸಂತೋಷದ ಪದವಿಯನ್ನೇ ಕೊಡುತ್ತಿದೆ. ಸಕಲ ಅಲಂಕಾರಗಳೂ ಸರಿಯಾಗಿದೆ, ಕಿರೀಟದ ಮೇಲಿನ ನವಿಲುಗರಿ ಅತ್ತಿಂದಿದ್ದ ಓಲಾಡುತ್ತಾ ನಿನ್ನ ಸೌಂದರ್ಯ “ಸರಿ ಸರಿ” ಎಂದಿದೆ. ನಿನ್ನ ಈ ಶೃಂಗಾರಸಾಮ್ರಾಜ್ಯ ಚಕ್ರವರ್ತಿತ್ವದಲ್ಲಿ ಒಂದು ಸಂದೇಹ” ದೇವಗೆ ಇನಿಸು ’ಅದು” ಅನಿಸದಲಾ ದೇವಗೆ+ಇನಿಸು+ಅದು+ಅನಿಸದಲ ! ಆ ದೈಹಿಕಭಾವನೆಯ ವ್ಯಕ್ತಿಶವಾದ ಅದು ’ಕಾಮ” ಇನಿಸೂ ಅನ್ನಿಸದ ಸರ್ವಾತ್ಮನಾದ ನಿನಗೆ, ಕಾಮಾಧಿಪನಾದ ಮನ್ಮಥ ಹೇಗ ಮಗನಾದ?ಇದು ಅಪರೂಪವಾದ ಪ್ರಕ್ರಿಯೆ ಏನಿದರ ರಹಸ್ಯ? ಎಂದಳು)

    • 🙂

      ಪೊಂದಿಸಲೊರ್ಮೆಪದಗಳಂ
      ನಿಂದೆನು ಶೀರ್ಷಾಸನಕ್ಕೆ ಪೋಲುವ ಬಗೆಯೊಳ್
      ಚಂದದೊಳೆರೆಡೆರೆಡೆಂಬುವ
      ಸುಂದರ ಪೂರಣಕೆ ಮಣಿದಪೆಂ ಕವಿವರ್ಯಾ

  5. ಸರಿಸಮದ ಪದಮದ ನಿಸದ
    ಗರಿಗರಿ ಗಮಗಮ ಪಸರಿಪ ಪದಪದ ಪರಿದಾ
    ನಿರಿನಿರಿ ಮರಿಮರಿ ಪದ ದನಿ
    ದರಿ-ಪುಲಿಗುಪಮಗತಿ ಪದ್ಯಪಾನೋದ್ಯಾನಂ

    • ದತ್ತಪದಿಯೆ ಕಷ್ಟವೆಷ್ಟನೋ ನೀಡಲ್ಕೆ
      ಧುತ್ತನೆರಗೆ ನೀವಿದೇನು ಚಿತ್ರಂ!
      ಬಿತ್ತರಿಸುತಲಿರ್ಪಿರಕ್ಕಟಾ! ಚಿತ್ರಕಾ-
      ವ್ಯೋತ್ತರಪ್ರಕಾರವಾಗಿ ಚಂದ್ರ!!

      ಅಭಿನಂದನೆಗಳು

      • ನಿಂತಗಡಿಯಾರಮುಂ ದಿನಕೆರಡುವೇಳೆಯಂ
        ಸಂತತಂ ತೋರ್ಪಾಗ ಬರ್ದುಕಿರ್ದುಂ
        ಇಂತಿಷ್ಟು ಗಲಭೆಯಂ ಮಾಡದಿರೆ ತಕ್ಕುದೇ
        ನಂತಷ್ಟೆ. ಮೆಚ್ಚುಗೆಗೆ ಧನ್ಯವಾದಂ

        • ಸೊಗಸಾದ ಪ್ರತಿಕ್ರಿಯಾಪದ್ಯ:-)

          • ಚಂದ್ರಮೌಳಿಯವರೇ ಬರಿಯ ಸಂಗೀತದ ಸ್ವರಗಳನ್ನ ಹೊಂದಿಸಿ ಬಹಳಚೆನ್ನಾಗಿದೆ ಪದ್ಯ. ಸಂಪೂರ್ಣವಾಗಿ ಅರ್ಥವಾಗಲಿಲ್ಲ ತಾತ್ಪರ್ಯವನ್ನು ತಿಳಿಸಿರಿ. ನಿಮ್ಮ ಮತ್ತು ಗಣೇಶರ ಸಂವಾದ ಬಹಳ ಚೆನ್ನಾಗಿದೆ 🙂

    • ವಾಹ್! ಚಂದ್ರಮೌಳಿ. ಸೊಗಸಾದ ಯತ್ನ ಮತ್ತು ಎಕ್ಸಿಕ್ಯೂಷನ್. ವಸ್ತುವನ್ನು ತಿಳಿಸಿ. ಅರ್ಥೈಸಬಹುದು.
      ಕೆಲುವು ವರ್ಷಗಳ ಹಿಂದೆ ನಾನೂ ಹೀಗೆ ರಚಿಸಿದ್ದೇನೆ. ಇಡೀ ವರ್ಣವನ್ನು (ಸಂಗೀತ ರಚನೆ) ನನ್ನ ಮುದ್ರೆಯನ್ನು ಹೊರತಾಗಿ ಸ್ವರಾಕ್ಷರದಲ್ಲಿ ಕನ್ನಡದಲ್ಲಿ ರಚಿಸಿದ್ದೇನೆ.

      • ಪ್ರಿಯ ಸೋಮ, ಶ್ರೀಕಾಂತ್, ಧನ್ಯವಾದಗಳು

        ಪದ್ಯಪಾನವೆಂಬ ಉದ್ಯಾನದಲ್ಲಿ ಪದ್ಯರಚನೆಯ ಆಟಪಾಟ ಏಳುಬೀಳುಗಳ ಕೃಷಿ: ಉಪಯೋಗಿಸಿರುವ ಪದಗಳಲ್ಲಿ ಸರಿಯಾವುದು? ಸಮವೇ? (ಸರಿಸಮದ), ಯಾವುದು ಸರಿ ತಪ್ಪು ಹೆಚ್ಚು ಕಡಿಮೆ ಎಂಬ ಪದ-ಮದದ ’ಶಬ್ದದ’ ಸತ್ಯಾಸತ್ಯಗಳು (ನಿಸದ). ಕೆಲವೊಮ್ಮೆ ಗರಿಗರಿಯಾದ ಹೊಸ ಪದಗಳ ಜನನ. ಹೊಸ ಪದಗಳು ನಿರಿನಿರಿಯಾಗಿ ಗಮಗಮಿಸುತ್ತಾ ಭಾವಸೌರಭವನ್ನು ಹರಡುತ್ತವೆ, ಅತ್ತಿಂದಿದ್ದ ಪದಗಳು ಸಾಲಿನಿಂದ ಸಾಲಿಗೆ ಹರಿಯುವಾಗ, ಚಿಕ್ಕಚಿಕ್ಕ ಮರಿಪದಗಳ ಅಂತರ್ಧ್ವನಿಗಳು (ಪದ ದನಿ) ಪರಸ್ಪರ ಕಾದಾಟಕ್ಕೂ ಕಾರಣವಾಗುವುದುಂಟು (ಪದ್ಯದೊಳಗೂ – ಹೊರಗೂ!). ಛಂದಸ್ಸಿನ ನಿಯಮ, ವ್ಯಾಕರಣದ ಕಟ್ಟು, ಈ ಮಧ್ಯೆ ಭಾವಪ್ರವಾಹದ ಇಕ್ಕಟ್ಟು, ಅತ್ತ ಪುಲಿ ಇತ್ತ ದರಿ ಎಂಬಂತೆ ಅರ್ಥ ಸೊರಗಿಹೋಗುವುದೂ ಉಂಟು. ಒಟ್ಟಿನಲ್ಲಿ ಪದ್ಯಪಾನೋದ್ಯಾನ ಹೆಚ್ಚಾಗಿ ಸೊಗಸಾದ ಪ್ರೌಢಪುಷ್ಪಗಳಿಂದ, ಇನ್ನೂ ಸ್ವಲ್ಪ ಕಳೆಯಳಿಯಬೇಕಾದವುಗಳಿಂದ, ಹೀಚು, ಮೊಗ್ಗುಗಳಿಂದ, ಅಲ್ಲಲ್ಲಿ ಅಂದಕುಂದಿದರೂ, ಸೌರಭಸೂಸುವ ಮರುಗಪತ್ರದಂತೆಯೂ ಅಭಿರಾಮವಾಗಿದೆ, ಎಂದೂ ಊಹಿಸಬಹುದು !!

        • ಸರಿ-ಸಗದ ಮಗಮದ ನಿಸದ
          ಗರಿ-ಗಮ ಸರಿಸಮ ಪಸರಿದ ಸರಿಸಪಧಮನಿ |
          ಪರಿಪಗ-ಮರಿಮಮ ಮರಿ-ಮಗ
          ನಿರಿ-ನಿಗದ ನಿಮ-ದನಿ ನಿಸ(ಜ)-ಸನಿ ಸರಿಗಮಪಧನಿ ||

          ಧನ್ಯವಾದಗಲು ಚಂದ್ರಮೌಳಿ ಸರ್.

          • “ಬದುಕು” – ಸಪ್ತ ಪದದ ಭಾವಗೀತಿ “ಸರಿಗಮಪಧನಿ” – ಸುಪ್ತ ಮನದ ಭಾವನೀತಿ “ಸರಿಗಪಧಮನಿ” ಅಲ್ಲವೆ?

        • ಧನ್ಯವಾದಗಳು ಮೌಳಿಯವರೇ

        • Thanks Srikath, Good attempt.
          A profound krithi which I remember is by Dr. M.Balamurali ‘ mA mAnini’ and one onother superb piece penned by Dr Ganesh. Luckilly, I have not saved a copy of few such attempts of mine 🙂

        • Thanks chandramowly. There are several such works dating from at least the nineteenth century- in telugu and tamil. Not all of them have the “gEya guNa”. Some are merely a circus of swaras. Those which can be sung, albeit with effort can be seen in the sangIta sampradAya pradarSini.

          When I composed mine about 10 years ago, I was not aware of any such compositions in kannaDa.

          Balamuralikrishna has composed another composition with lot of swaraksharas ( not entirely)- sadA tavapAda sannidhim kuru in shaNmukhapriya.

          • ಶ್ರೀಕಾಂತರೆ ಚೆನ್ನಾಗಿದೆ ಪ್ರಯತ್ನ, ನಿಮ್ಮ ‘ಸರಿ ಹೋಗಿ ಬರಲೇಂ’ ಧ್ವನಿ ಮುದ್ರಿಕೆಯ ಹಿನ್ನೆಲೆಯಲ್ಲಿ, ಇದಕ್ಕೂ ಧ್ವನಿಮುದ್ರಿಕೆಯನ್ನ ಹುಡಿಕಿದೆ ಸಿಗಲಿಲ್ಲ. ಅಪ್ಲೋಡ್ ಮಾಡಿಬಿಡಿ. ಕೇಳೋಣ 🙂

          • ಧನ್ಯವಾದಗಳು ಸೋಮ

            ಅಪ್ಲೋಡ್ ಮಾಡಿದ್ದೇನೆ.

            http://www.tunescoop.com/play/323535383936/visesha-varna-kalyani-adi-shrikaanth-wma

            ಪಕ್ವಫಲವನ್ನು ಪ್ರಯತ್ನ ಎಂದು ಬಿಟ್ಟಿರಿ ಅದೊಂದೇ ಪಿಚ್ಚೆನಿಸುತ್ತಿರೋದು 🙂

          • ಪ್ರಕೃಷ್ಟಂ (superior , distinguished , eminent) ಯತ್ನಂ. ತಪ್ಪೇನು?

          • ಪ್ರಿಯ ಶ್ರೀಕಾಂತರೇ,

            ವಿರಳಂ ಕಬ್ಬಿಗರದಕುಂ
            ವಿರಳಂ ವಾಗ್ಗೇಯಕಾರರದಕುಂ ವಿರಳಂ
            ಸ್ವರಾಕ್ಷರದ ಗೇಯಗುಣಾ-
            ದ್ವರಕೃತಿ ರಚಿಪರ್ ವಿಶೇಷಮೀ ‘ಪಕ್ವಫಲಂ’!

            ನಿಮ್ಮ ಧ್ವನಿ ಕೇಳುವುದಕ್ಕೆ ಬಹಳ ಸಂತೋಷವಾಗುತ್ತದೆ, ನಿಮ್ಮ ವಾಗ್ಗೇಯಪ್ರತಿಭೆಯು ಅಚ್ಚರಿ ಮೂಡಿಸುತ್ತದೆ. ಉತ್ಕೃಷ್ಟವಾದ ಕೃತಿಯನ್ನು ನೀಡಿದುದಕ್ಕಾಗಿ ಧನ್ಯವಾದ 🙂

          • ಸರಳಂ ನಿನ್ನೀ ಹೃದಯಂ
            ಸರಳಂ ನಿನ್ನಯ ಪೊಗಳ್ಕೆ ಸವಿಯಾದ ಫಲಂ
            ಮರಲಂತೇ ಮಗಮಗಿಕುಂ
            ತರಲಂ ಗಳಸರಕೆ ಪಡೆದು ಧನ್ಯನೆನ್ ಆಪ್ತಾ!

    • ನನ್ನಿಂದ ದತ್ತಪದಿ ಸಾಧ್ಯವೋ ಇಲ್ಲವೋ ಎಂಬ ತೊಳಲಾಟದಲ್ಲಿದ್ದೇನೆ. ಇಷ್ಟು ಸಲೀಸಾಗಿ ಮಾಡಿರುವುದನ್ನು ನೋಡಿದರೂ ತೊಳಲಾಟ ತಪ್ಪಿಲ್ಲ. ಅಂತರ ತುಂಬ ಇದೆ! ಮೊದಲ ಬಾರಿಗೆ ಇಲ್ಲಿನ ಪದ್ಯಗಳಿಂದ ದತ್ತಪದಗಳನ್ನು harvest ಮಾಡಿ ರಚಿಸಲು ಯತ್ನಿಸುತ್ತೇನೆ; ಅದಕ್ಕಾಗಿ ಇನ್ನಷ್ಟು ಕಾಯುತ್ತೇನೆ. ಈ ನಿಘಂಟುವೀರನಿಗೆ ಮೋನಿಯರ್ ಮಹಾಶಯನಿಂದ ಅತಿಕನಿಷ್ಟ ಪ್ರಯೋಜನವಾದದ್ದು ಈ ಬಾರಿಯೇ.

      • ಮುನ್ನಮೆ ನಾನರಿತಿರ್ದೆನ್
        ಸನ್ನುತನೈಘಂಟುಕವ್ರತಂ ಫಲಿಸದಲಾ|
        ನಿನ್ನದೆನುತೆ ಪ್ರಸಾದೂ!
        ಇನ್ನೀ ದತ್ತಪದಿಯೊಳ್; ಅದಾದುದೆ ಸತ್ಯಂ!! 🙂

      • ಮಜಲು Vs ಮೆಟ್ಟಿಲು:

        ಒಪ್ಪಿದೆಯಾದೊಡಮೆಂದಾನ್
        ಟಿಪ್ಪಣಿಗೈದಿರ್ದೆ ’ಮಜಲು’ (ನಿ)ಘಂಟುಮೆನುತ್ತುಂ?
        ಚಪ್ಪರಿಪೊಲು ನೀಂ ಬೆನ್ನಂ
        ಬಪ್ಪನ್ನೆಗಮೆನಗೆ ಪನ್ನತಿಕೆ, ’ಮೆಟ್ಟಿಲ್’ ಇದುಂ|| 😉

  6. ಸ್ಮರಿಸಲಿಲ್ಲವು ದೇವ ನಿನ್ನನು
    ಸರಿಸವಲ್ಲವಿದೆನ್ನ ಸದಮದ
    ಪರಿಯ ನೀ ಪರಿಹರಿಸಿ ನಿಸದವ ತೋರುವೆನಗಿಂದು |
    ಅರಿವು ಮೂಡುಸಿ ನಿನ್ನ ನಿರುಪಮ
    ಗರಿಮೆಯೆಲ್ಲವದೆನ್ನ ಮನದಲಿ
    ಹರಸು ನೀ ಕನಿಕರಿಸಿ ದುಗುಡವ ನೀಗುವೆನಗಿಂದು ||

    (ಸರಿಸ = ಯೋಗ್ಯವಾದ, ಸದಮದ = ಉನ್ಮತ್ತತೆ, ನಿಸದ = ಸತ್ಯ)

    • ಪದ್ಯವೇನೋ ಚೆನ್ನಾಗಿದೆ. ಆದರೆ ಸದಮದ ಎಂಬುದಕ್ಕೆ ನೀವು ಹೇಳಿದ ಅರ್ಥ ಹೇಗೆಂದು ಸ್ಫುಟವಾಗುತ್ತಿಲ್ಲ.

      • ಗಣೇಶ್ ಸರ್, “ಸದಮದ” – ಇದು ಕನ್ನಡ ಸಾಹಿತ್ಯ ಪರಿಷತ್ತಿನ “ಸಂಕ್ಷಿಪ್ತ ಕನ್ನಡ ನಿಘಂಟಿ”ನಲ್ಲಿ ಸಿಕ್ಕ ಪದ. ಅದಕ್ಕೆ ಅತಿಯಾದ ಮದ, ಉನ್ಮತ್ತತೆ ಎಂಬ ಅರ್ಥಗಳಿವೆ. ನಮ್ಮ ತಾಯಿ ಹೇಳುವ ಯಾವುದೋವೊಂದು ದೇವರನಾಮದಲ್ಲಿ ಈ ಪದ ಕೇಳಿದ ನೆನಪು. ಸರಿಯಾಗಿ ನೆನೆಪಿಗೆ ಬರುತ್ತಿಲ್ಲ. ಸರಿಯೋ,ತಪ್ಪೋ ತಿಳಿಯುತ್ತಿಲ್ಲ.

        • “ಸದಮದ” ಸತ್ ಅಮದ ಆಗತ್ತದೆಯೇ ಹೊರತು ಉನ್ಮತ್ತತೆ ಆಗದು. ನಿಮ್ಮ ಪದ್ಯದಲ್ಲಿನ ಈ ಪದಪ್ರಯೋಗವನ್ನು ತಿದ್ದಿ. ಜಡಮದ ಆಗಬಹುದು. ನೀವು ನೆನಪಿಸಿಕೊಳ್ಳುವ ಹಾಡಿನಲ್ಲಿ ಬರುವ ಪದ, ಸದಮಲ ಇರಬಹುದು. ಅಂತರ್ಜಾಲ ನಿಘಂಟಿನಿಲ್ಲೂ ಸದಮದ ಎಂಬ ಪದ ಇಲ್ಲ. ಪದಪಾಂಡಿತಿ ನನ್ನದಲ್ಲ. ಆದರೆ ವಿಜ್ಞರಾದ ಶತಾವಧಾನಿ ರಾಗರು ಕೆಲವೊಮ್ಮೆ ನಯವಾಗಿ ಸೂಚಿಸುವರು. ಅದನ್ನು ಗಮನಿಸಿ ತಿದ್ದಿಕೊಂಡಲ್ಲಿ ನಮಗೆ ಲಾಭ. ಈ ನಮ್ಮ ಕೆಲವು ನಿಘಂಟುಗಳಿಗಿಂತಲೂ ರಾಗರಂಥ ಅನುಭವಿಗಳ,ಶಾಸ್ತ್ರವೇತ್ತರ ಅರಿವಿನ ಗಂಟು ನನಗೆ ಶಿರೋಧಾರ್ಯ.

          • ಧನ್ಯವಾದಗಳು ಚಂದ್ರಮೌಳಿ ಸರ್,
            ಆ ಹಾಡು “ನೀಡಮ್ಮ ಕುಸುಮಾವನು, ಬೇಡುವೆ ನಾನು…
            ಹದಿಬದೆಯೆನಿಸುತ್ತ……ಸದಮದ ವೈಕುಂಠದ ಪದವಿಯ ನೀಡಮ್ಮ..” ಅದು “ಸದಮಲ”ವೆ ಸರಿ. ನಾವು ತಪ್ಪಾಗಿ ಹಾಡುತ್ತಿರುವೆವು. “ಜನುಮದ ಪರಿಯ” ಎಂದರೆ ಸರಿಯಾಗುವುದೇ?

          • Good. That is the way we learn. “ಜನುಮದ ಪರಿಯ” Fits in.

  7. ತಮದ ಪರದೆಯ ಸರಿಸ ಬ೦ದಿರೆ
    ಗಮನಿಸದ ನಾಯಕರು ಸುಕವಿಗೆ
    ನಮನ ಸಲ್ಲಿಸಲೆ೦ದು ರಜೆಯನು ಸಾರುತೊರಗಿಹರು
    ಉಮೆಯ ರಮಣನ ಪೆಸರ ಪೊತ್ತಿ
    ರ್ಪ ಮಗ ಭವಬ೦ಧನವ ಕಳಚುತ
    ಲಮರನಾಗಿಹರೆ೦ಬ ಧನ್ಯತೆಯನ್ನು ಮರೆಯುತಲಿ

    ಭಾಷೆಯ ಬಿಗುವಿಲ್ಲದ ಶಿಥಿಲ ಪೂರಣವಾದರೂ ರಾಜ್ಯದ ಸತ್ಪ್ರಜೆಗಳನ್ನೆಲ್ಲಾ ನಿರುದ್ಯೋಗಿಗಳನ್ನಾಗಿಸಿವ ನಮ್ಮ ನಾಯಕರ ಮ೦ಕುಬುದ್ಧಿಯನ್ನು ನೋಡಿ ಬೇಸರದಿ೦ದ ಬರೆದ ಶಬ್ದಗಳ ಸರ್ಕಸ್ ಎ೦ದು ಕ್ಷಮಿಸಿ.

    • ನಿಮ್ಮ ಪದ್ಯಪಾಟವಪೇಲವತೆಗೆ ನೀವೇನೂ ಬೇಸರಿಸಬೇಕಿಲ್ಲ. ವಸ್ತುತಃ ನಿಮ್ಮ ಈ ಪದ್ಯವು ಚೆನ್ನಾಗಿಯೇ ಇದೆ. ಮಾತ್ರವಲ್ಲ, ತುಂಬ ಸಮಯೋಚಿತವೂ ಸಾರ್ಥಕಪದಗುಂಫಿತವೂ ಆಗಿದೆ.:-)

    • ಮುಳಿಯರೆ ಚೆನ್ನಾಗಿದೆ ಪದ್ಯ

    • very nice and timely reaction- well done

  8. ರಾಜಕಾರಿಣಿಗಳ ಅಂತ್ಯೇಷ್ಟಿಯಲ್ಲಿ ದುರಾಡಂಬರ ಹೆಚ್ಚಿದ್ದು ನಿಜವಾದ ಶೋಕವಿಲ್ಲದಿರುವ ಹಿನ್ನಲೆಯಲ್ಲಿ

    ಸುಮದಪರಾಧಮೇನಗಲ್ದ ನೀಚನಲಂಕೃತಿ ಸಲ್ಲ ಗಾಂಧಿಕ-
    ದ್ರುಮದಹಿಸಲ್ಕದೇಂ ಸರಿಸಮಕ್ಕುಮೆ ಪಾತಕಕೃತ್ಯದೊಳ್ ಜಗಂ
    ಗಮನಿಸದಾಂತುದೇಂ ವಿರಸಭಾವಮನೀಪರಿ ಶೋಕಕದ್ಭುತೋ-
    ಪಮಗಜದಂತಮಲ್ತೆ ಪೊರಗೊಂದೊಳಗೊಂದಿರೆ ಭೇದವೃತ್ತಿಯೊಳ್

    ಸತ್ತ ದುಷ್ಟನನ್ನು ಹೂವಿನಿಂದ ಅಲಂಕರಿಸುವುದರಲ್ಲಿ ಹೂವಿನಪರಾಧವೇನು? ಅವನನ್ನು ಗಂಧದೊಡನೆ ಸುಡಲಿಕ್ಕೆ ಗಂಧವೂ ಅವನ ಪಾತಕಗಳಲ್ಲಿ ಭಾಗಿಯೇ? ಜಗತ್ತು ಸರಿಯಾಗಿ ಗಮನಿಸದೆ ಈ ರೀತಿ ವಿರಸಭಾವವನ್ನು ಹೊರುವಪರಿಯೇನು? ಲೋಕದ (ದುಷ್ಟನಗಲಿಕೆಯ) ಶೋಕಾಚರಣೆಯನ್ನು ಹೊರಗೊಂದು ಒಳಗೊಂಡು ಇರುವ ಆನೆಯದಂತದೊಡನೆ ಹೋಲಿಸಬಹುದು ಅಲ್ಲವೇ

    ಅಗಲ್ದು – ಶಿಥಿಲದ್ವಿತ್ವ
    ಸರಿಸ – equal

    • Beatiful imagination and message

    • ಬಹಳ ಚೆನ್ನಾಗಿದೆ ಸೋಮ

      • ಸೋಮಾ! ನಿನ್ನಯ ಕಲ್ಪನೆ
        ಸೀಮಾತೀತಾನುಭೂತಿಭಾಸುರಮಲ್ತೇ!
        ಧೀಮದ್ಧ್ವನಿಗಂಭೀರಂ
        ಶ್ರೀಮದ್ರಸಭರಿತಮೇಘಮಾಲೆಯವೊಲಲಾ!!

        ಪಳಗನ್ನಡದೊಂದೂರ್ಜಾಫಲಮಂ ಸವಿಯಯ್ ಸದಾ|
        ಪಳಗಲ್ ಶಕ್ಯಮಾಗಳ್ ಕೇಳ್ ವಿಲಸತ್ಪದ್ಯಪಾಟವಂ ||

        • ಗಣೇಶ್ ಸರ್,

          ಎರಡನೆಯ ಪದ್ಯದ ಛಂದಸ್ಸು ಯಾವುದು?

          • This clear anushtup rope when used in kannada scares us as a serpent

          • ಗಣೇಶ್ ಸರ್, ಕ್ಷಮಿಸಿರಿ ಅನುಷ್ಟುಪ್ ಅಲ್ಲವೇ ಸರಿಯಾಗಿ ಗಮನಿಸಲಿಲ್ಲ… ನಾನು 4 ಮಾತ್ರಾಗತಿಯಲ್ಲಿ ಓದಿಕೊಳ್ಳುತ್ತಿದ್ದೆ.

            ಮೌಳಿಯವರೇ ಧನ್ಯವಾದಗಳು

      • ಧನ್ಯವಾದಗಳು ಗಣೇಶ್ ಸರ್, ಶ್ರೀಕಾಂತರೆ

  9. ಮದ ಪತ್ತಿದ ದ್ವಿಪಮಗಮ-
    ನದಟಿಂದಲೆಯುತಿರಲಲ್ಲಿಗೈದಿದ ನಿಸದಂ
    ಪೆದೆಗಂಬಂ ಪೂಡಿಯಿಸ-
    ಲ್ಕೆದೆನೆತ್ತರನೊಸರಿ ಸತ್ತುದಿಭಮಾಹ್ ಬಿಸದಂ

    ದ್ವಿಪ-ಆನೆ; ಬಿಸದ- ವಿಷಾದ; ನಿಸದ- ನಿಷಾದ

    • ತದ್ಭವಂಗಳನದೆಂತು ಜಾಣ್ಮೆಯಿಂ
      ಚಿದ್ಭವೋಕ್ತಿಯ ನಿಯುಕ್ತಿಗಾನುತುಂ |
      ಮುದ್ಭರಂಗೊಳಿಸುತಿರ್ಪಿರಯ್ ನಿಜಂ
      ಹೃದ್ಭರಂ ಭವದುದಾರಪದ್ಯದಿಂ ||

    • ಮತ್ಪ್ರಸೂತ ಕವನಕ್ಕೆ ನೇಹದಿಂ
      ತ್ವತ್ಪ್ರಶಂಸೆಯಿದು ಹೃತ್ಪ್ರಮೋದಕಂ
      ಚಿತ್ಪ್ರಚೋದಕಮಹ ಪ್ರಬೋಧಕಂ
      ಸತ್ಪ್ರಕಾಶಕಮಹೋ ರಥೋದ್ಧತಂ

  10. ಸೀಮಿತ ಪದಗಳಲ್ಲಿ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನಪಿಸುವ ಪ್ರಯತ್ನ ….

    ಮನಗಾಣುತನುಪಮ ಗಹನ ತತ್ವದ ಮಹಿಮೆಯ
    ಜನಮನದ ತಮದ ಪರದೆಯನು ಸರಿಸುತ್ತ
    ಮನುಕುಲದಿ ಸರ್ವ ಧರ್ಮಗಳು ಸರಿಸಮವೆಂದ
    ಅನುಭಾವಿಯ ಧ್ಯಾನಿಸದವರಾರು?

    • ಪದ್ಯದ ಭಾವೋದ್ದೇಶಗಳು ಚೆನ್ನಾಗಿವೆ. ಮೊದಲ ಸಾಲಿನಲ್ಲ್ಲಿ ಮಾತ್ರ ಛಂದಸ್ಸು ಎಡವಿದೆ. ಅದನ್ನು ಹೀಗೆ ಸವರಿಸಬಹುದು:
      …………………………………ಗಭೀರತತ್ತ್ವಂಗಳಂ

      • ಸರ್ , ತಾವು ತಿದ್ದಲು ಉಪಯೋಗಿಸಿದ ಅಮೂಲ್ಯ ಸಮಯಕ್ಕೆ ಆಭಾರಿಯಾಗಿದ್ದೇನೆ . ‘ಗಭೀರ ‘ ಅನ್ನುವ ಪದ ನನಗೆ ಹೊಸತು . ನನಗೆ ಬೇರೆಲ್ಲಾದರೂ ಈ ಪದ ದೊರಕುವುದು ದುರ್ಲಭವೇ ಆಗಿತ್ತು . ಪಂಚ ಮಾತ್ರಾ ಚೌಪದಿಯಲ್ಲಿ ಛ೦ದಸ್ಸು ಎಡವಿದ್ದು ಕೂಡಾ ಮನದಟ್ಟಾಯಿತು . ಮತ್ತೊಮ್ಮೆ ಧನ್ಯವಾದಗಳು .

        ಮನಗಾಣುತನುಪಮ ಗಭೀರತತ್ವ೦ಗಳಂ
        ಜನಮನದ ತಮದ ಪರದೆಯನು ಸರಿಸುತ್ತ
        ಮನುಕುಲದಿ ಸರ್ವ ಧರ್ಮಗಳು ಸರಿಸಮವೆಂದ
        ಅನುಭಾವಿಯ ಧ್ಯಾನಿಸದವರಾರು?

    • 3-4 ಪಾದಗಳ ನಡುವೆ ವಿಸಂಧಿಯಾಗಿದೆ. ಹೀಗೆ ಸವರಬಹುದು:
      ……………………………ಸರಿಸಮವದೆಂ
      ದನುಭಾವಿಯನದಾರು ಮನ್ನಿಸದರು?

      • ‘ಮನ್ನಿಸು ‘ ಅನ್ನುವುದೇ ಅಲ್ಲಿ ಸೂಕ್ತ ಪದವಾಗಿತ್ತು . ಆ ಸಂದರ್ಭದಲ್ಲಿ ನೆನಪಿಗೆ ಬಂದಿಲ್ಲ .ಸರ್ , ಧನ್ಯವಾದಗಳು .

        ಮನಗಾಣುತನುಪಮ ಗಭೀರತತ್ತ್ವ೦ಗಳಂ
        ಜನಮನದ ತಮದ ಪರದೆಯನು ಸರಿಸುತ್ತ
        ಮನುಕುಲದಿ ಸರ್ವ ಧರ್ಮಗಳು ಸರಿಸಮವದೆಂ
        ದನುಭಾವಿಯನದಾರು ಮನ್ನಿಸದರು ?

  11. ಮಾನಿನಿ ಸದಾ ಪದಪಮಗ
    ನೀನೀ ಮದ ಪರಿದ ಮದಗಮನಿ ಮಾ ಸಾಮಾ
    ಮಾನಿಸದರಿಗರಿದಾದಪ
    ಸಾನೀ ದಮದಾನಿ ಪಾಪ ಸರಿಸಸಮಾನೀ

    ಮಾನಿನಿ ಸದಾ ಪದಪು (ಪ್ರೀತಿ, ಸೊಗಸು) ಅಮಗನ್ (ರಕ್ಷಣೆ, ತುಷ್ಟಿ) ಈ (ಕೊಡು) ನೀ ಮದ ಪರಿದ ಮದಗಮನಿ ಮಾ ಸಾಮಾ
    ಮಾನಿಸದರಿಗೆ ಅರಿದು (ಅಪರೂಪ) ಆದಪ ಸಾನೀ (ಸ್ವಾಮಿನಿ) ದಮದಾನಿ ಪಾಪ ಸರಿಸು ಅಸಮಾನೀ

  12. ಹಿಮದ ಪದರಮನಿಳೆಗೆ ಸರಿಸ- (ಮದಪ,ಸರಿಸ)
    ಲ್ಕಮಿತಶೋಭೆಯ ಭಾನುಕಿರಣಂ
    ದ್ರುಮದ ಮೇಲ್ಗಡೆಯಂದದಿಂ ಕುಂದದೆಯೆ ಪಸರಿಸಿರೆ,|
    ಗಮನಿಸದ ದುಂಬಿಯದು ಸುಮನನು- (ನಿಸದ)
    ಪಮಗತಿಯನೈದಿರೆಲೆ ಕಂಡಿರೆ (ಪಮಗ)
    ಗಮಿಸಿ ಮಧುವಂ ಪೀರುತಿಪ್ಪುದು ನಲಿದು ಸಂತಸದಿಂ ||

    ಮಂಜಿನ ಪದರವನ್ನು ಸರಿಸಲು ಅಮಿತಶೋಭೆಯ ಸೂರ್ಯಕಿರಣವು ಮರದ ಮೇಲೆ ಕುಂದದೆ, ಅಂದವಾಗಿ ಹರಡಿರಲು,ಮಂಜು ಮುಸುಕಿದ್ದರಿಂದ ಹೂವನ್ನು ಮೊದಲು ಗಮನಿಸದ ದುಂಬಿಯು, ಮಂಜನ್ನು ಕಳೆದುಕೊಂಡು ಅನುಪಮಗತಿಯನ್ನು ಹೊಂದಿದ್ದರಿಂದ ಕಂಡು,ಬಳಿಸಾರಿ,ಸಂತಸದಿಂದ ನಲಿದು ಮಧುವನ್ನು ಹೀರುತ್ತಿದೆ.

    • ಸುಮನು+ಅನುಪಮಗತಿಯನು+ಐದಿರೆಲೆ: ಸುಮನು (ಪುಲ್ಲಿಂಗ)? ಅನುಪಮಗತಿ? ಐದಿರೆಲೆ? ತುಸು ವಿವರಿಸಿ.

      • ……ಸುಮಮನುಪಮಗತಿ… ಎಂಬುದಾಗಿ ಸವರಬೇಕು.ಅವಸರದಲ್ಲಿ ಬರೆದ ಬಳಿಕ ಗಮನಿಸದಿರುವುದಕ್ಕಾಗಿ ವಿಷಾದಿಸುತ್ತೇನೆ.ತಪ್ಪನ್ನು ತೋರಿದ ಪ್ರಸಾದರಿಗೆ ನನ್ನ ಪ್ರಶಂಸೆ ಮತ್ತು ಧನ್ಯವಾದ.

  13. ಸೋದರಿಯರ ಭಾಮಿನಿ ಷಟ್ಪದಿಯೂ ಪೂರಣಗಳಿಗೆ ಚೆನ್ನಾಗಿ ಒದಗಿಬರುತ್ತಿದೆ. ಬಳುಕುವ ಭಾಮಿನಿ ನರ್ತಕನ ಅಭಿನಯವನ್ನೂ ಹಿಡಿದಿಡಬಲ್ಲಳು….

    ಸಮದ ಪದಗತಿ ಸರಿಸಮದ ಗಜ
    ಗಮನ ಸದಮಲ ಸೌಷ್ಟವಕೆ ಸಂ
    ಪದಮೆನಿಸಲಾಡುತಿರೆ ಭಾವಕೆರೂಪ ದನಿ ರಸಮುಂ
    ಗಮನದೊಡಮೂಡಿರಲು ತಕಝಣು
    ಧಿಮಿಯೆನಲು ನೋಟಕರಮಿಡಿವೆದೆ
    ಯಮಮ ವರ್ಣಿಪ ಮಗನದಾವನು ಭರತಗೋತ್ರಜನಾ

  14. ಸಮದ ಪರಾಕ್ರಮದಿಂದಿಕ್
    ಭ್ರಮೆಯಂ ಮೂಡಿಸುತೆ ತಾನೆ ಸರಿ ಸರಿ ಎನ್ನಲ್
    ಶ್ರಮವೆನಿಸದ ರೀತಿಯವೊಲ್
    ಗಮಿಸಿದರಣರಂಗದಿಂದನೃಪಮಗ ನೀಗಳ್

    ಒಬ್ಬ ಶೂರನಾದ ರಾಜಕುಮಾರ ರಣರಂಗದಲ್ಲಿ ಚೆನ್ನಾಗಿ ಹೋರಾಡಿ ಕಡೆಗೆ ಯಾರಿಗೂ ತಿಳಿಯದಹಾಗೆ ಮೃತನಾಗುತ್ತಾನೆ

    • ಚೀದಿಯವರೇ. ಪದ್ಯಪ್ರಯತ್ನ ಸ್ತುತ್ಯ.’ ನೃಪಮಗ ‘ ಪ್ರಯೋಗ ಅರಿಸಮಾಸ ಸಲ್ಲದು
      . ಪಮಗ.. ತರಬೇಕು ಯತ್ನಿಸಿ. ನಿಮ್ಮ ಪದ್ಯಗಳನ್ನು ನೋಡಿದ್ದೇನೆ. ಸರಿಯಾದ ಪೂರಣ ನಿಮಗೆ ಸಾಧ್ಯ.

      • ಧನ್ಯವಾದಗಳು ಚಂದ್ರಮೌಳಿ ಸಾರ್. ಗಮಿಸಿರ್ಪಮಗನುಮಜೇಯನಾಗಿರ್ದಪನೈ ಎಂದು ಮಾಡಬಹುದೇ.

  15. ಮೇಲೆ ಹನ್ನೊಂದರಲ್ಲಿ ಅಂಬೆಗೆ ಆಯಿತು. ಈಗ ವಿಷ್ಣುವಿಗೆ ಮನವಿ.

    ಮಾಪಾ! ಮಾಮಗರೀ! ಮಮ
    ಪಾಪಮಗಾಧಮದನೀಗ ಪರಿ ಮದಪಾ! ನೀ
    ನೀ ಪರಿ ಸರಿಸಮದಾರಿಗ
    ಮಾಪದರಿದರಿದಮ! ದಾಮ! ನೀಸನಿಸ ದನೀ!

    ಮಾಪಾ (ಮಾಧವಾ) ಮಾಮಗೆ ಅರೀ ಮಮ ಪಾಪಂ ಅಗಾಧಂ ಅದನ್ ಈಗ ಪರಿ ಮದಪಾ (ಮದಪತಿ, ವಿಷ್ಣು) ನೀನ್
    ಈ ಪರಿ ಸರಿಸಂ ಅದು ಆರಿಗಂ ಆಪದು (ಆಗುವುದು) ಅರಿದು (ಅಸಾಧ್ಯ) ಅರಿದಮ ದಾಮ (ದಾನಿ) ನೀಸು (ನಿರ್ವಹಿಸು) ಅನಿಸ ದನೀ (ಧಣಿ)

  16. ದಿನಪ ಮಗಮಗಿಸುತಿರೆ , ಪನಿಸದ
    ಮನವ ತಳೆದುಂ,ಸುರಿವ ಜಲಧರ
    ನನುಸರಿಸ ಪೋದನವನಾರಂ? ಕಠಿಣದೆದೆಯಿಂದಂ?
    ಕನಕ ಕಿರಣದ ಸೊಗಮನುಂಡಿರೆ
    ಜಿನುಗಿ ಹೊಮ್ಮದ ಪನಿಗೆ ಹಂಬಲ
    ವಿನನ ಶೋಭೆಯ ತಳೆವುದಾಯ್ತೇಂ,ಕೀರ್ತಿಗೋಸುಗವೇ?

  17. Usually a dattapadi will be asked to be composed for a ‘given’ topic. If on the contrary, if it is asked to be composed for ‘any’ topic other than a given topic, compositions will be prolific (though it has proved to be enigmatic in my case), much like a tortoise that reaches out every which way.
    Well, I have maintained my virginity: Though I intended to, I haven’t harvested dattapada-s from the verses of other padyapaani-s.
    ಉತ್ಪಲಮಾಲೆ|| ನರ್ಮದಪದ್ಯಮಂ ಸಲಿಸಿ ಮಾತ್ರಮದೆನ್ನದೆ ವಸ್ತು’ವೊಂದ’ರೊಳ್
    ಮರ್ಮದೆ ತೀಡಿ ಮನ್ನಿಸದರಾರು ’ವಿಶಾಲ’ಮದಿರ್ದೊಡಂ ಪಟಂ(canvas)?
    ಕರ್ಮದೊಳೆಲ್ಲರುಂ ಸರಿಸಮರ್ ಮಿತಿಯಂ ತೆರಪಿಟ್ಟೊಡಿಂತು ನೀಂ (ಸೋಮ)
    ಕೂರ್ಮಮದದ್ಭುತೋಪಮ ಗಡಾ ನಿಜದಂಗಮನೆಲ್ಲು ಚಾಚುಗುಂ||

  18. ಬರಿದು ಮನದೊಳು ದೀಪಮಾಗ ಬಂದಿಹೆ ನಾನು
    ಸರಿಸಬೇಡವೊ ದೂರವೆನ್ನನೀಗ ।
    ಅರಿತು ಪ್ರೇಮದ ಪರಿಯ ಬೆಸೆದು ರಾಗದ ಸವಿಯ
    ನಿರುನಲ್ಲ ಬಳಿಯೆನ್ನ ಜೊತೆನೀ ಸದಾ ।।

  19. ಮಹಾದೇವನಿಗೊಂದು ಪ್ರಾರ್ಥನೆ.
    ಪೂರ್ವದ ಮೂರು ಪಾದಗಳಲ್ಲಿ ದತ್ತಪದಗಳು ಬರುವುದಲ್ಲದೆ ಕೊನೆಯ ಪಾದದಲ್ಲಿ ಮತ್ತೊಮ್ಮೆ ಎಲ್ಲ ದತ್ತಪದಗಳೂ ಬರುವಂತೆ ಬರೆದಿದ್ದೇನೆ.

    ಹೋಮಮೊಡರ್ಚಿಯೊಂದಿನಿಸದರ್ಕೆ ಹವಿಸ್ಸುಮನೆಂದುಮೋದಿಸೆಂ
    ನೇಮದೆ ನೆಯ್ಯ ದೀಪಮಗರುಣ್ಮುವ ಧೂಪಮನಾನ್ ನಿವೇದಿಸೆಂ
    ನಾಮದ ಪಾಟಮಂ ಸರಿಸದೆಂಬುದನಲ್ಲದೆ ಬೇರೆ ಸಾಧಿಸೆಂ
    ಪ್ರೇಮದಪಾಂಗದಿಂ ನಿಸದ! ಓಸರಿಸಪ್ಪ! ಮಗಂ ಮಗುಳ್ದೆನಾಂ

    ನಿಸದ- ನಿಷಾದ, ಈಶ್ವರ (ರುದ್ರದಲ್ಲಿ ಈಶ್ವರನಿಗೆ ಬರುವ ಹೆಸರು)
    ಓಸರಿಸು- ನೇವರಿಸು, ಸವರು

  20. ಭೂಪ ಮಗಳ ಸ್ವಯಂವರವ ನಡೆಸಿದನಂದು
    ಶ್ರೀಪ ಮದಪಂಚನಖದಂತೆ ಬಂದು
    ಚಾಪವನು ಕೋಲನಿಸದಲೆ ಮುರಿಯೆ ಸಿರಿ ಬಂದು
    ತಾ ಪತಿಯನೊಪ್ಪಿದಳು ಸರಿಸ ನಿಂದು

    ಪಂಚನಖ- ಆನೆ; ಕೋಲನಿಸದಲೆ- ಕೋಲನು+ಇಸದಲೆ- ಬಾಣವನು ಬಿಡದಲೇ

  21. ಭೂದೇವಿಯ ಸ್ತುತಿ

    ಜನನಿ ಸದಯೆ! ಸಾರ್ದ್ರೆ ಜೀವದಾತ್ರೀ
    ಅನುಪಮಗಂಧಿನಿ ಅನ್ನದೇ ಧರಿತ್ರೀ
    ಜನುಮದ ಪರಿಜಂ ಭರಿಪ್ಪ ಧಾತ್ರೀ
    ಸನೆ ನಿನಗಾರ್ ಸರಿಸಾಟಿ ಗೋಪಯಿತ್ರೀ

    ಪರಿಜು- ರೂಪ; ಸನೆ- ಪುರಾತನಿ

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)