Jun 292014
 

‘ಮರುಳಾಗಿಪೋದೆಂ’ ಎನ್ನುವ ಪಾದಾಂತ್ಯವನ್ನು ಬಳೆಸಿ ವಸಂತತಿಲಕ ಛಂದಸ್ಸಿನಲ್ಲಿ ಪದ್ಯರಚನೆಮಾಡಿರಿ

  78 Responses to “ಪದ್ಯಸಪ್ತಾಹ ೧೧೫: ಪದ್ಯಪೂರಣ”

  1. ಈ ಪದ್ಯಪಾನದತಿಲೋಕಮನೋಜ್ಞಮೈತ್ರೀ-
    ಸ್ವೋಪಜ್ಞಕಾವ್ಯಕಲನೋತ್ಸವಕೇಳಿಯೊಳ್ ಸ-
    ಲ್ಲಾಪಂಗಳೊಳ್ ದಿನದಿನಂ ನಲವೇರುತನ್ಯ-
    ವ್ಯಾಪಾರದೂರನೆನೆ ನಾಂ ಮರುಳಾಗಿವೋದೆಂ ||

    • ನನ್ನಂಥರೊಲ್ ಮುಗುದರಂ ಸೆಳೆದೊಯ್ವ ನಿಮ್ಮೀ
      ಬನ್ನಂ ಇದೇನಿದೆನುತುಂ ಬಗೆಗೊಳ್ವೆ ನಾನುಂ|
      ಬೆನ್ನನ್ನಿದೇರಿಹುದು ನಿಮ್ಮಯ ಪೂರ್ವಕರ್ಮಂ
      ಇನ್ನೆಂತು ನೀಂ ಮರುಳದಾಗದೆ ಪೋಗದಿರ್ಪೈ|| 🙂

      I request that this verse should be read along with my verse under Sl. No.3 below

      • ನಿಮ್ಮ ಆದರಾಭಿಮಾನಗಳಿಗಾಗಿ ಧನ್ಯವಾದಗಳು.
        ಈ ಪದ್ಯದಲ್ಲಿ ಕೆಲವೊಂದು ವಿಸಂಧಿದೋಷಗಳಿವೆ. ಶನಿವಾರ ಮುಖತಃ ಅವನ್ನು ಸವರಿಸಿ ತಿಳಿಸುವೆ.

    • ಬಹಳ ಚೆನ್ನಾಗಿದೆ ಸರ್

  2. ಅಷ್ಟಾವಧಾನವದುವುಂ ಪದದಾಟವಲ್ಲಂ,
    ಮೃಷ್ಟಾನ್ನಭೋಜನದವೊಲ್, ರಸಕಾವ್ಯ ತಾನುಂ
    ಶಿಷ್ಟಾರ್ಥದೊಳ್ ಸ್ಪುರಿಸೆ ನಾಂ ಮರುಳಾಗಿಪೋದೆಂ
    ಸಾಷ್ಟಾಂಗವಂದಿಪೆನಿದೋ ಘನವಾಣಿಗಾನುಂ ।।

    • ವಾಣಿ ಮಾತ್ರ‘ನಿಜ’ಕಲ್ಲಮೆಲ್ಲರಿಂಗಂತೆ ಸೇರ್ದುದಲ್ತೆಲ್
      ಕೇಣಮಂ ತೊರೆದುದಾರತೆಯಿನಿಂದೆ ಹಂಚಿಕೊಂಡೊಡೊಳಿತೌ| 🙂

      • ಪ್ರಸಾದ್ ಸರ್,
        ಕೆಲವೊಂದು ಸಂದೇಹಗಳು (ನಿಘಂಟು ನೋಡಿಬಂದದ್ದು !)
        ಮರುಳಾಗು = ಪರವಶಗೊಳ್ಳು, ಸಂಭ್ರಮಗೊಳ್ಳು,ಮನಸೋಲು ಎಂಬ ಅರ್ಥದಲ್ಲಿ ಬಳಸಬಹುದಲ್ಲವೇ?
        ನಿಜವಾಣಿ = “ಸಾಕ್ಷಾತ್ ಸರಸ್ವತಿ”ಗೆ ವಂದಿಸುವೆ ಎಂದಾಗದೇ?

        ಆಗಲಿ, “ನಿಜವಾಣಿ”ಯನ್ನು “ಘನವಾಣಿ” ಎಂದು ಬದಲಾಯಿಸೋಣ.

        • ಚೆನ್ನಾಗಿದೆ; ನಿಜವಾಣಿ ಎಂದರೆ ನಮ್ಮದೇ ಮಾತು ಎಂದು ಅರ್ಥ. ಅಂದರೆ ಇಲ್ಲಿ ನೀವು ನಿಮ್ಮ ಮಾತಿಗೇ ನಮನ ಸಲ್ಲಿಸುತ್ತಿದ್ದೀರಿ.ಸದ್ಯ! ನನಗೆ ಮುಜುಗರ ಕಳೆಯಿತು!! 🙂

          • 🙂

          • ಅಯ್ಯಯ್ಯೋ !! ದಯವಿಟ್ಟು “ನಿಜವಾಣಿ”ಯನ್ನ ಮೂಲದಲ್ಲೇ ಸರಿಪಡಿಸಿ ಪ್ರಸಾದ್ ಸರ್

          • ಉಷಾ ಅವರೇ ನಿಮ್ಮ ಇಚ್ಛೆಯಂತೆ ಘನವಾಣಿಯೆಂದು ಮೂಲದಲ್ಲಿ ಸರಿಪಡಿಸಿದ್ದೇನೆ

      • I have no powers. I hereby relay your request to Ramachandra/ Soma/ Srisha/ Holla despite being aware that none of them is inclined to effect such corrections 😉 You too will get to know the reason if you visit this page six months from now.

  3. ಎಂದಾರೆ ಯೋಚಿಸಿರಲಕ್ಕುಮೆ ಪದ್ಯಮಂ ನಾ-
    ನೊಂದಾರೆ ಚಂದಬರೆವೆಂ ನಿಜದೀ ಬದುಂಕೊಳ್|
    ಇಂದಾರೆ ಸಾಧ್ಯಮದುಮಾಗಿರೆ ವಂದಿಸುತ್ತೆಂ-
    ದೆಂದೆಂದಿಗಾ ಪರುಷಕಂ ಮರುಳಾಗಿಪೋದೆಂ||
    (ಪರುಷಮಣಿ – ಶ್ರೀ ರಾ.ಗ.ರು)

    • ಆಹಾ!! ಹೂಗಳಿಕೆಯ ಶಾಲಿನ ಒಳಗೆ ತಿವಿತದ ಜೋಡೂ ಇದೆ:-)
      ಪರುಷ ಎಂದರೆ harsh ಎಂದು ಸಹ ಅರ್ಥವಲ್ಲವೇ!!

      • 🙂
        A relative of mine has christened his newborn son ’ಹರ್ಷ್’. He better not spell it in English.

  4. ಮತ್ತಾರುನೋಡರೆನುತುಂ ಬಹುಧೈರ್ಯದಿಂದಂ
    ಕತ್ತೆತ್ತದಂತೆಮರೆಯಿಂ ತುಸುನಿದ್ರಿಸಿರ್ಪೆಂ
    ಗೊತ್ತಾದಮಿತ್ರರುಗಳೆನ್ನನೆ ಟೀಕಿಸಿರ್ಪರ್
    ಪೊತ್ತಾದಮೆಲರಿತೆನಾಂ ಮರುಳಾಗಿಪೋದೆಂ

  5. ಎಲ್ಲಕ್ಕುನಾನೆ ಮಿಗಿಲೆನ್ನುತೆ ಜೀವಿಸಿರ್ಪೆಂ
    ಸುಳ್ಳನ್ನೆಪೇಳುತೆಸದಾ ಬಹುಮೋಸಗೈಯ್ದೆಂ
    ಪೊಳ್ಳಾದಜೀವನಕೆನನ್ನನೆ ದೂಡಿಕೊಂಡಿ-
    ನ್ನಿಲ್ಲೇತಕಿರ್ಪೆನೆನುತುಂ ಮರುಳಾಗಿಪೋದೆಂ

    • ಎಲ್ಲಕ್ಕುನಾನೆ, ಸುಳ್ಳನ್ನೆಪೇಳುತೆಸದಾ, ಪೊಳ್ಳಾದಜೀವನಕೆನನ್ನನೆ ಎಂಬಲ್ಲೆಲ್ಲ ಪ್ರತ್ಯಯವಿರುವ ಪದಗಳಿಂದ ಮುಂದಿನದನ್ನು ಬೇರ್ಪಡಿಸಿ ಬರೆಯುವುದೊಳ್ಳೆಯದು: ಎಲ್ಲಕ್ಕು ನಾನೆ, ಸುಳ್ಳನ್ನೆ ಪೇಳುತೆ ಸದಾ, ಪೊಳ್ಳಾದ ಜೀವನಕೆ ನನ್ನನೆ.

      ಬಹುಮೋಸಗೆಯ್ದೆಂ (’ಗೈಯ್ದೆಂ’ ತಪ್ಪು) ಎಂಬಲ್ಲಿ ಬಹು ಪದಕ್ಕಾಗಲೀ, ಮೋಸ ಪದಕ್ಕಾಗಲೀ ಪ್ರತ್ಯಯವಿಲ್ಲ. ಹಾಗಾಗಿ ಸೇರಿಸಿ ಬರೆದಿರುವುದು ಸರಿಯಾಗಿದೆ.

      ಈ ಪದ್ಯ ಚೆನ್ನಾಗಿದೆ

      • ಧನ್ಯವಾದಗಳು ಪ್ರಸಾದು, ನಿಮ್ಮ ಸೂಚನೆಗಳನ್ನು ಇನ್ನುಮುಂದೆ ಗಮನಿಸುವೆ…

        • ಪ್ರಿಯ ಚೀದಿ, ಮೊದಲ ಪ್ರಯತ್ನ ಚೆನ್ನಾಗಿಯೇ ಇದೆ. ಆದರೆ ಹಳಗನ್ನಡದ ಹದ ಮಿಗಿಲಾಗದೆ ವಸಂತತಿಲಕವು ಶಿಶಿರತಿಲಕವಾದೀತು:-)

  6. ತಾನೀಯೆ ಬಿಜ್ಜವೆಳಕಂ ಸಖರಾಜಿಯಿಂದುಂ
    ಎನ್ನಾತ್ಮ ತೈರಮನುರ್ಚುತೆ ಬಲ್ಮೆಯಿಂದಂ,
    ಚೆನ್ನಾದ ಸಂಗದೊಳೆ ನಾಂ ಮುದದಲ್ಲಿ ಮಿಂದೀ
    ಭೂನಾಕದೊಳ್ ನಲಿಯುತುಂ ಮರುಳಾಗಿವೋದೆಂ.

    • ಮೊದಲನೇ ಸಾಲಿನಲ್ಲಿ -> ಬಿಜ್ಜೆಯವೆಳಕಂ – ‘ಯ’ ತೆಗೆದರೆ ಸರಿಹೋಗುತ್ತದೆ.. ಬಿಜ್ಜೆವೆಳಕಂ

    • ಪದ್ಯದಲ್ಲಿ ಹಳಗನ್ನಡ ಸೊಗಯಿಸಿದೆ. ಆದರೆ ಅಲ್ಲಲ್ಲಿ ಅರಿಸಮಾಸಗಳಾಗಿವೆ.

    • ಪಾದಾದಿಯ ಅಕ್ಷರಗಳಲ್ಲಿ ಗಜ-ಹಯಗಳ ಸಂಕರವಾಗಿದೆ. ಕೊನೆಯ ಸಾಲಿನಲ್ಲಿ ಪ್ರಾಸ ತಪ್ಪಿದೆ.

      • ಓ! ತಪ್ಪಿನ ರಾಶಿಯ ನಡುವೆಯೂ ಹಳಗನ್ನಡ ಸೊಗಯಿಸಿದೆಯಲ್ಲಾ! ಹೀಗಾಗಿ ಸಮಾಧಾನ 🙂
        ಇದೀಗ ಗಣೇಶರಿಂದ ತಿಳಿದು ಪದ್ಯವನ್ನು ತಿದ್ದಿದ್ದೇನೆ.

  7. ಸಂಗಾತಿಯಂತೆನಟಿಸಿರ್ಪಳುಮಾಯೆಯಿಂದಂ
    ಬೆಂಗಾವಲಂತೆಬರುತೆಲ್ಲವನೀಕ್ಷಿಸಿರ್ಪಳ್
    ರಂಗಾದಜೀವನಕೆಬಂದಿವಳಿತ್ತಮುತ್ತೇ
    ಬಂಗಾರಮೆಂದರಿತುನಾಂ ಮರುಳಾಗಿಪೋದೆಂ

    • ಒಪ್ಪಾದುದಲ್ತೆ ಕಮನೀಯಕವಿತ್ವಮೀಗಳ್
      ತಪ್ಪೊಂದುಮಿಲ್ಲದೆ ರಸಾರ್ದ್ರಪದಂಗಳಿಂದಂ |

  8. ಪತ್ತಾರು ಪೆರ್ಬಯಕೆಯಂ ಮನಸೋಕ್ತ ವೊಲ್ಡುಂ,
    ಮತ್ತೇರುತೆನ್ನನೆಣಿಸಲ್ ನವಯೌವನಂ ತಾಂ
    ಚಿತ್ತಾಂತರಂಗಮನೆ ಮುರ್ಚುತೆ ಲೋಕದಿಂದಾಂ
    ತುತ್ತಾಗಿ ನೋವಸುಳಿಗಂ,ಮರುಳಾಗಿಪೋದೆಂ

    ಮತ್ತೆ+ಏರುತ+ಎನ್ನ=ಮತ್ತೇರುತೆನ್ನ
    ಲೋಕ=ಸುತ್ತಲಿನ ಜನತೆ
    ಮನಸೋಕ್ತ=ಮನಬಂದಂತೆ

    • ಕೆಲವೊಂದು ಸವರಣೆಗಳು ಬೇಕಿವೆ. ನಾಳೆ ಕಾದಂಬರೀವ್ಯಾಸಂಗಗೋಷ್ಠಿಯಲ್ಲಿ ತಿಳಿಸುವೆ.

      • ಪದ್ಯದ ಸವರಣೆಯನ್ನು ಮಾಡಿಕೊಟ್ಟಿರುವದಕ್ಕೆ ಧನ್ಯವಾದಗಳು .

  9. ನಾಕಾಣುತುಂ ಜಗದೊಳೀಪರಿ ತಾರತಮ್ಯಂ
    ಎಕಾಂತದೊಳ್ ಮರುಗುತುಂ ಮರುಳಾಗಿಪೋದೆಂ ।
    ಜೋಕಾಲಿ ಜೀಕಿದುವುದಾವಿಧಿಯಾಟವೇನಂ ?
    ಸಾಕಲ್ಯ ಕಾರಣವಿದೇನವನಿತ್ತ ಜೀವಂ ?

    (ಜಗದಲ್ಲಿ ಕಂಡ ಬಡವ-ಬಲ್ಲಿದ, ಮೇಲು-ಕೀಳು…. ಭೇದಭಾವದ ಬಗ್ಗೆ ಹೀಗೊಂದು ಜಿಜ್ಞಾಸೆ)

    • ಪದ್ಯ ತುಂಬ ಚೆನ್ನಾಗಿದೆ. ಆದರೆ ಎರಡನೆಯ ಸಾಲಿನ ಮೊದಲಿಗೆ ಸಂಧಿ ಮಾಡಬೇಕಿತ್ತು. ಇದೊಂದು ಸವರಣೆಯಾದಲ್ಲಿ ಪದ್ಯವು ಸುತರಾಂ ಅನವದ್ಯ.

      • ಧನ್ಯವಾದಗಳು ಗಣೇಶ್ ಸರ್,
        ಸಂಧಿಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ
        * ಮೂಕಾಗುತುಂ, ಮರುಗುತುಂ ಮರುಳಾಗಿಪೋದೆಂ ।

  10. ||ವಸಂತತಿಲಕ ವೃತ್ತ,ಉಪಮಾಲಂಕಾರ,ರೂಪಕಾಲಂಕಾರ||

    ಸಾರುತ್ತೆ ಚಿಟ್ಟೆಯಿರೆ ಬಳ್ಳಿಯ ನೀಲಿವೂವಂ,
    ತೋರುತ್ತೆ ಬಣ್ಣದೊಡಲಂ,ಬೆಡಗಿಂದೆ ಕಾಡೊಳ್,|
    ನಾರೀಜನಂಗಳವೊಲೇ ನಸುನಾಣ್ಚಿರಲ್,ಕ-
    ಣ್ಕೋರೈಪ ಚಲ್ವ ಕಣಿಗಾಂ ಮರುಳಾಗಿವೋದೆಂ ||

    • ಪೂವಿಂದೆ ಪೂವಿಗಡಿಯನ್ನಿಡುವರ್ ಪುಮಾಖ್ಯರ್
      ದೇವರ್ಕಳೋವದಿರಲೆಮ್ಮನು ಕಾವರಿನ್ನಾರ್?
      ತೀವುತ್ತಲೀಪರಿಯ ಸೊಲ್ಗಳನೀವರಂ ನೀಂ
      ತಾವಾದಿರೇಂ ನಿಜದಿನಾ ಬಗೆಚಿಟ್ಟೆಯೀಗಳ್|| 🙂

      • ಶಕುಂತಲಾ ಅವರ ಪದ್ಯವೂ ಅದಕ್ಕೆ ಪ್ರತಿಕ್ರಿಯೆಯಾಗಿ ಬಂದ ಪ್ರಸಾದು ಅವರ ರಚನೆಯೂ ಉತ್ತಮವಾಗಿವೆ. ಮುಖ್ಯವಾಗಿ ಉಭಯತ್ರ ಒಳ್ಳೆಯ ಹಳಗನ್ನಡದ ಹದ ಕಂಡಿದೆ. ಮೊಳೆಯಾರರಿಗಿದು ಸಹಜಮಾರ್ಗ. ಅವರು ಈ ದಿಸೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಆದರೆ ಪ್ರಸಾದು ಅವರು ತಮ್ಮ ವಕ್ರೋಕ್ತಿಮಾರ್ಗದಲ್ಲಿ ಪದೇ ಪದೇ ನಡು(ಕ)ಗನ್ನಡ-ತುಡು(ಗು)ಗನ್ನಡಗಳನ್ನೂ ಹಾಯ್ದು ಬರುತ್ತಿರುತ್ತಾರೆ:-)

        • ಪದ್ಯಪುಷ್ಪಮಕರಂದಪಾನದಲ್ಲಿ ತೊಡಗಿರುವ ನನ್ನಂಥ
          ಮರಿಚಿಟ್ಟೆಯನ್ನು ಹಿರಿಯಮಾತುಗಳಿಂದ ಹುರಿದುಂಬಿಸುವ ಹಿರಿಯಣ್ಣನವರಿಗೆ ಎಷ್ಟು ಕೃತಜ್ಞತೆಗಳನ್ನು ಹೇಗೆ ಸಲ್ಲಿಸಲಿ ?

        • ಬಡಬಡಿಸಿರ್ಪರ್ವಿಧವಿಧ
          ನಡು-ಬಡ-ಪಳೆ-ಪೊಸ-ಜನಪದ ಕನ್ನಡನುಡಿಯೊಳ್
          ನಡುಕನು ತುಡುಗನು ಪೋಣಿಸೆ
          ಬೆಡಗಿನತಾಯ್ಬಾಯಲುಬ್ಬಿಪೊರಗಿವೆ ಪಲ್ಗಳ್ !! 😉

      • ಪ್ರಸಾದರ ಪ್ರೋತ್ಸಾಹದಾಯಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

    • ಬಹಳ ಚೆನ್ನಾಗಿದೆ ಶಕುಂತಲಾ ಅವರೆ

      • ಸೋಮರಿಗೆ ಧನ್ಯವಾದಗಳು.

  11. ಗೋಪಾಲಬಾಲನೊಲುವೆನ್ನವ ಗೋಳಹೊಯ್ಯಲ್,
    ನೇಪಥ್ಯದೊಳ್ ಕುಪಿತಗೊಂಡಿರುವೋಲಿರಲ್ ನಾಂ,
    ಕಾಪಾಲವಂ ಸವರುತುಂ ಕಡುತುಂಟನೆನ್ನಂ
    ನೈಪುಣ್ಯದಿಂದೊಲಿಸಿರಲ್, ಮರುಳಾಗಿ ಪೋದೆಂ ।।

    • ’ಬಾಲನೊಲುವೆನ್ನವ’ ಇದರ ವಿಗ್ರಹ ಹೇಗೆ – ಬಾಲನೊಲುವ/ವಿ/ವು/ವೆ/ವೊ+ಎನ್ನವ? ’ಬಾಲನೊಲುಮೆನ್ನವ’ ಎಂದರೆ ’ಬಾಲನೊಲುಂ+ಎನ್ನವ’ ಎಂದು ಸರಿಯಾದೀತು.

      ಗೋಳುಹೊಯ್ಯಲ್ – ಆಡುಮಾತಿನ ಭಾಷೆಯಲ್ಲವೆ?

      ’ಕುಪಿತಗೊಂಡಿರುವೋಲಿಹೆನ್ನಂ….. ಕಡುತುಂಟನಾಗಳ್’ ಎಂದರೆ ಇನ್ನೂ ಸೊಗಯಿಸೀತು.

      ಪ್ರಸಂಗವು ದೃಗ್ಗೋಚರವಾಗುವಂತಿದೆ ಪದ್ಯ.

      • ಧನ್ಯವಾದಗಳು ಪ್ರಸಾದ್ ಸರ್,
        ಕೊಂಬುಮೂಡಿಸಿ(ವೆ – ಮೆ) ಸವರಿದ್ದಕ್ಕೆ!! ಅಲ್ಲ,ಅಲ್ಲ ಸವರಿ ಕೊಂಬುಮೂಡಿಸಿದ್ದಕ್ಕೆ!!
        ತಿದ್ದಿದ ಪದ್ಯ:
        ಗೋಪಾಲಬಾಲನೊಲುಮೆನ್ನವ ಪೀಡಿಸಲ್ಕುಂ,
        ನೇಪಥ್ಯದೊಳ್ ಕುಪಿತಗೊಂಡಿರುವೋಲಿಹೆನ್ನಂ,
        ಕಾಪಾಲವಂ ಸವರುತುಂ ಕಡುತುಂಟನಾಗಳ್
        ನೈಪುಣ್ಯದಿಂದೊಲಿಸಿರಲ್, ಮರುಳಾಗಿ ಪೋದೆಂ ।।
        (ಯಶೋದೆಯ ಭಾವದಲ್ಲಿ ಬಂದ ಪದ್ಯ)

    • ಮತ್ತೊಮ್ಮೆ ತೀಡಿದ ಪದ್ಯ :

      ಗೋಪಾಲಬಾಲನವೊಲೆನ್ನನೆ ಪೀಡಿಸಲ್ಮೇಣ್ ,
      ನೇಪಥ್ಯದೊಳ್ ಕುಪಿತಗೊಂಡಿರುವೆನ್ನನಯ್ಯೋ,
      ಸೈಪಿಂದೆ ಕೆನ್ನೆಸಮರುತ್ತದೊ ತುಂಟನಾಗಳ್
      ನೈಪುಣ್ಯದಿಂದೊಲಿಸಿರಲ್, ಮರುಳಾಗಿ ಪೋದೆಂ ।।

      ಸವರಣೆಗಾಗಿ ಧನ್ಯವಾದಗಳು ಗಣೇಶ್ ಸರ್.

  12. ಕತ್ತೆತ್ತಿನೋಡೆ ನಭದೊಳ್ ಮುಗಿವರ್ಪ ಭಾವಂ
    ಸುತ್ತುತ್ತಲಿರ್ಪ ದಿನಪಂ ಮರೆಯಾಗೆ ಚಂದ್ರಂ|
    ಬಿತ್ತಿರ್ದ ಚುಕ್ಕಿಬೆಳೆ ತಾನ್ ಫಸಲಿತ್ತ ಮೌನಂ
    ಪೊತ್ತಿರ್ಪರಾರೆನುತಲಾಂ ಮರುಳಾಗಿವೋದೆಂ||

    • ಮೇಲೇಕೆ ನೋಡುವೆಯೊ ನೀ ಬಹು ಮೋಜುಗೊಳ್ಳು
      ತ್ತಾಲೋಚಿಸಿರ್ದೊಡೊಳಿತುಂ ಗಡ ತಥ್ಯಮನ್ನುಂ| (ತಥ್ಯ>reality>down to earth>below your feet)
      ಜೂಲಾಡದೊಲ್ ಪೊರದೆಲಿರ್ದಿರೆ ದೇವ ನಿನ್ನಂ
      ನೀಲಾಂಬರಂ ಶಿರದಮೇಲೆರಗರ್ದೆಲೇನೈ|| 🙂

      • ಏನೀ ಪ್ರಸಾದುರಚಿತಂ ಶರವೇಗಪದ್ಯಂ!
        ನೀನೇ ವಸಂತತಿಲಕಂ ಸರಿ ಪದ್ಯಪಾನ-
        ಕ್ಕಂ ನೇಮದಿಂ ನುಡಿದೆ ನೀಂ ದಶದಿಕ್ಕಿನೊಳ್ಗಂ
        ಮಾನೀಯಮಪ್ಪ ಸೊಗಮೇ ಕಲಪದ್ಯನಾದಂ||

        • dhanyavAdagaLu hoLLaM. ಮೂರನೆಯ ಪಾದದಲ್ಲಿ ವೃಷಭಸಂಕರವಾಯಿತಲ್ಲ!

          • ಹೌದಲ್ಲ!! ನಾನು ಗಮನಿಸಿಯೇ ಇರ್ಲಿಲ್ಲ!!!

      • ರಾಗಾನುರಾಗಕಮುಷಮ್ಮಗಿದೋ ನಮಸ್ತೇ

    • ವಸಂತತಿಲಕದೊಂದಿಗೆ “ಜರುಗಿದ” ದೀಪ / ದೀಪಾರತಿ ಕಂಡು ನಾ “ಮರುಳಾಗಿ ಪೋದೆಂ”!!

    • ತುಂಬ ಸೊಗಸಾದ ಕಲ್ಪನೆ ಹಾಗೂ ರಚನೆ. ಹೊಳ್ಳ! ಅಭಿನಂದನೆಗಳು.

    • ತನ್ತ್ರಾಂಶಕ್ಷೇತ್ರದರು (software) ಕೇಳಿರಿ ಸೂರ್ಯವಂಶರ್! (late to rise)
      ನಾನ್ತ್ರಂ (Eulogy to you) ರವೀಂದ್ರವರ ನೀ ರಚಿಸಿರ್ಪೆ ಪ್ರಾತ- (ಶಿ.ದ್ವಿ)
      ರ್ಮನ್ತ್ರಪ್ರಕಾರಮಿದನೇಳುತಲೆಂಟಕೇನೇ (8 am)
      ತನ್ತ್ರಪ್ರಕರ್ತೃ ಗಡ ನೀ ಸಲೆ ಕಮ್ಮಿಯೇನೈ!! (ತನ್ತ್ರಪ್ರಕರ್ತೃ= ತನ್ತ್ರಗಾರ) 🙂

      • ಪದ್ಯಕ್ಕೆಪದ್ಯವಿಡುತಲ್ ತರುತಾಂಗ್ಲಕೋಶಂ
        ವಿದ್ಯುಕ್ತನಪ್ಪೆ ಮುದದಿಂ ನವತಂತ್ರದಿಂದಲ್|
        ಸದ್ಯಕ್ಕೆ ಬಿಟ್ಟು ಬಿಡು ಕಾಲ್ಪಿಡಿವೆಂ ಪ್ರಸಾದೂ!
        ಚೋದ್ಯಪ್ರಚಾರಚತುರಾ! ಮರುಳಾಗಿವೋದೆಂ||

    • Very Nice kalpane HoLLa, liked it very much… 🙂
      ನಿನ್ನೀ ಪ್ರಯತ್ನಮತಿಸುಂದರಮಿರ್ಪುದಯ್ಯಾ

      • ಅಯ್ಯಾ ರವೀಂದ್ರವರ ನೀ ಮರೆಯಾಗಬೇಡೈ
        ಕಯ್ಯನ್ನು ಕೊಟ್ಟೆಮಗೆ ನೀ ಬರುತಾಗಳೀಗಳ್|
        ಮುಯ್ಯನ್ನು ಮಾಡುವೆವು ನಿನ್ನಯ ಪದ್ಯಕಂ ಮೇಣ್
        ಚುಯ್ಯೆಂಬ ದೋಸೆಯನು ’ಮಯ್ಯ’ದೊಳೂಡಿಸಾವ್ಗಳ್||
        (ಮುಯ್ಯಿ ಮಾಡುವುದು = ಪದ್ಯಕ್ಕೆ ಪ್ರತಿಪದ್ಯ ನೀಡುವುದು. ಮಯ್ಯ = ಮಯ್ಯ ರೆಸ್ಟುರಾ)

    • ಬಹಳ ಚೆನ್ನಾಗಿದೆ ಹೊಳ್ಳ

  13. ದ್ರಷ್ಟಾರವಾದಿಶರು ಮಾತ್ರರೆ ವೇದಕಾಲರ್?
    ದೃಷ್ಟಾಂತಗಳ್ ವಿರಲಮಾದೊಡಮಿರ್ಪರೆಂದುಂ| (ಎಂದುಂ=ಯಾವತ್ತೂ)
    ಸಷ್ಟಿಪ್ರಗಲ್ಭರೊರುವರ್ ನಿಜಕಾಲಭೂತರ್!
    ದೃಷ್ಟಿಪ್ರಸಾದಿಸಲವರ್ ಮರುಳಾಗಿವೋದೆಂ||

    • ಪ್ರಸಾದು ದ್ರಷ್ಟಾರವಾದಿಶರು ಎಂದರೆ ಏನರ್ಥ

      • ವಾದಿಶ=ಋಷಿ. ದ್ರಷ್ಟಾರರ್ಷಿಗಳು ವೇದಕಾಲದಲ್ಲಿ ಮಾತ್ರ ಅಲ್ಲ, ನಂತರವೂ ಆಗಿದ್ದಾರೆ. ಅಂಥವರೊಬ್ಬರನ್ನು ನಮ್ಮ ಜೀವಿತದಲ್ಲಿ ಸಂಧಿಸಿದ್ದು ನಮ್ಮ ಭಾಗ್ಯ ಎಂದು ತಾತ್ಪರ್ಯ.

  14. ಧೀರಾಂತರಂಗದಿರುತುಂ ಸುಮನೋಗಣಕ್ಕಂ
    ಪೇರೊಲ್ಮೆಯಿಂ ನವನವೋನ್ಮಿಷಿತಂಗಳಿಂ ಸಂ-
    ಸಾರಪ್ರಕೃಷ್ಟರಸಮಂ ಸೊಗಸಿಂದೆ ತೋರ್ವ
    ಸಾರಸ್ವತೌಜಕೆ ಕರಂ ಮರುಳಾಗಿಪೋದೆಂ ||

  15. ಆಡಾಡುತಿರ್ದ ಯುಗಳರ್ ಬಹುಕೂರ್ಮೆಯಿಂದಂ
    ಕೂಡಿರ್ದೆವಲ್ತೆ, ನವಮಾಸಗಳೋಡಿ ಪೋಗಲ್
    ಮೂಡಿರ್ದುದೆನ್ನ ಶಶಿಸೂರ್ಯರಗೆಲ್ವಚೆಂದಂ
    ನೋಡುತ್ತೆ ಜೀವದೊಲವಂ ಮರುಳಾಗಿ ಪೋದೆನ್ ||

    • ತುಂಬ ಒಳ್ಳೆಯ ಕಲ್ಪನೆ. ಆದರೆ ಏಕಿಷ್ಟು ತಡವಾಗಿದೆ? ಈಗ ಚಂದ್ರೋದಯದ ಹೊತ್ತು ರಾಮಚಂದ್ರ ! 🙂

Leave a Reply to ಶಕುಂತಲಾ ಮೊಳೆಯಾರ ಪಾದೆಕಲ್ಲು Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)