Aug 302014
 

ಎಲ್ಲಾ ಪದ್ಯಪಾನಿಗಳೂ ಗೌರೀ-ಗಣೇಶ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿರುತ್ತೀರೆಂದು ನಂಬಿದ್ದೇನೆ 🙂

ಚಂಪಕೋತ್ಪಲ ಮಾಲೆಯ ಪಾದಾಂತ್ಯಕ್ಕೆ ಹೊಂದುವ “ಮೆರುಗೇಂ ಗಣೇಶನಿಂ” ಬಳೆಸಿ ಪದ್ಯರಚನೆಯನ್ನು ಮಾಡಿರಿ

  26 Responses to “ಪದ್ಯಸಪ್ತಾಹ ೧೨೪: ಪದ್ಯಪೂರಣ”

  1. ಗೋಮಯಗುಪ್ತಿಯಾಗಿ ಮಿಗೆ ಮಣ್ಣಿನ ಮೂರ್ತಿಯ ರೂಪನಾಂತು ದೂ-
    ರ್ವಾಮಹಿತಾತ್ಮನಾಗಿ ಮಿಗಿಲರ್ಕದ ಪತ್ರಮೆನುತ್ತೆ ಮರ್ತೆ ನಿ-
    ಸ್ಸೀಮತೆಯಿಂದೆ ಮುಮ್ಮೊದಲ ಪೂಜೆಯನೋಜೆಯನಾಂತನಲ್ತೆ ನಿ-
    ಷ್ಕಾಮತೆಯಿಂದೆನುತ್ತೆ ಪರಿಕಿಪ್ಪೊಡೆ ಕೇಳ್! ಮೆರುಗೇಂ ಗಣೇಶನಿಂ!!

    • ಪ್ರಿಯ ಗಣೇಶ್, ಪತ್ರ, ದೂರ್ವಾಲಂಕೃತನಾದ ಸಗಣಿಯ, ಮಣ್ಣಿನ ರೂಪದ, ನಿಷ್ಕಾಮನೆಂಬಂತೆ ಮೊದಲ ಪೂಜೆಯನ್ನು ಪಡೆಯುವ ಗಣೇಶನ ಮೆರುಗು ಬಹಳ ಸುಂದರವಾಗಿ ಚಿತ್ರಿತವಾಗಿದೆ.

      • ಇದೋ, ಸ್ವದೇಶಕ್ಕೆ ಬಂದೊಡನೆಯೇ ಮೊತ್ತಮೊದಲ ಕೃತಜ್ಞತಾಂಜಲಿ:-)

        • ಬಹಳ ಸಂತೋಷ, ಸ್ವಾಗತ ಗಣೇಶ್ ಸರ್ 🙂
          ಸುಧಾರಿಸಿಕೊಳ್ಳಿರಿ, ಶನಿವಾರ ಭೇಟಿಮಾಡುತ್ತೇನೆ 🙂

  2. ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆನಾಚೆಗೀಚೆಗಂ
    ಭಾರದೊಳೌಂಕಿರಲ್ಲಿಲಿಯಧೊಪ್ಪೆನೆಬಿದ್ದುದ ನೋಡೆ ಸೈಪಿನಿಂ
    ಪೋರನವೊಲ್ನಗಲುಚಂದಿರಗೊಮ್ಮೆಲೆ ಶಾಪವಿತ್ತನೀ
    ಧೀರನಪಾಡುತುಂ ನಮಿಸುವಾ ಧರೆಯೊಳ್ ಮೆರುಗೇಂ ಗಣೇಶನಿಂ

    • 3rd line corrections needed.
      ಪೋರನವೊಲ್ನಗುತ್ತಿರಲುಚಂದಿರಗೀಗಳೆ ಶಾಪವಿತ್ತನೀ

      • ಮತ್ತೊಂದು typo – ಮೊದಲನೆಯ ಸಾಲು ಹೀಗಿರಬೇಕಿತ್ತು – “ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆಯನಾಚೆಗೀಚೆಗಂ”

  3. ಚರಣಮನಾಂತು ನೆಚ್ಚದರ ಜೀವನದೊಳ್ ಬೆಳಕಾಗಿ ಬಂದುತಾಂ
    ಹರಿಸುತೆ ಸರ್ವ ದುಃಖ ನಿಚಯಂ ಮಿಗೆ ನಿಂದಿರೆ ಪೂರ್ವ ಕಾಲದಿಂ,
    ಪರಿವ ಶರಾವತಿಪ್ರಯುತ ಸಾಗರಕಂಠದ ಪಚ್ಚೆ ಬೀಡಿರಲ್
    ಪುರವಿಡಗುಂಜಿಯುಂ ತಳೆದ ನಿಚ್ಚದ , ಪೆರ್ಮೆರುಗೇಂ ಗಣೇಶನಿಂ!!
    (ಗಣೇಶರ ಸಲಹೆಯಂತೆ ಪದ್ಯದಲ್ಲಿ ಸವರಣೆ ಮಾಡಿರುವೆ 🙂 )

  4. ನರ್ತನ ಭಂಗಿಯಲ್ಲಿದ್ದ ಧಾರವಾಡದ ಸಾರ್ವಜನಿಕ ಗಣೇಶ ವಿಗ್ರಹವೊಂದನ್ನು ನೋಡಿದಾಗ ಬರೆದ ಪದ್ಯ.. ಕೊಟ್ಟಿರುವ ಪದ್ಯಪೂರಣವನ್ನು ಬಿಟ್ಟು ಬೇರೊಂದು ಪದ್ಯ ಬರೆದಿರುವುದಕ್ಕೆ ಕ್ಷಮೆಯಿರಲಿ….

    ನಾನಾಮೋದಕಖಾದ್ಯಗಂಧಸುರಸಾಸ್ವಾದಪ್ರಸನ್ನಾನನ-

    ಸ್ತಾನಾಲಾಪವಿತಾನಗಾನಗಮಕೈಃ ಸಂಗೀತಕೈರ್ನoದಿತಃ |
    ಭೃತ್ಯೈರ್ಭಾವಿತಪಾವನಾಂಘ್ರಿಯುಗಲೋ ನಿತ್ಯಂ ಸ್ತುತೋ ಯಃ ಸುರೈಃ
    ನೃತ್ಯನ್ನೋ ನಟರಾಜಸೂನುರನಿಶಂ ಪಾಯಾತ್ ಸದಾ ಸಂಕಟಾತ್ ||

    • ಅಡ್ಡಿಯಿಲ್ಲ, ಒಳ್ಳೆಯ ಪದ್ಯವೇ ನಮ್ಮ ಕೈಸೇರಿದೆ…..ಅಂದಹಾಗೆ ಬಹಳ ದಿನಗಳಿಂದ ಕಾಣೆಯಾದಿದ್ದೀರಲ್ಲಾ! ಕುಶಲ ತಾನೆ?

      • ಕುಶಲವಾಗಿದ್ದೇನೆ ಸರ್. ಅದು…… ಈ ತಿಂಗಳು ಕನ್ನಡ ಎಂ. ಎ. (external – ಎಮ್ಮೆ) ಪರೀಕ್ಷೆ ಬರೆಯಲಿದ್ದೇನೆ. ಹಾಗಾಗಿ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ದಲ್ಲಿ ತೊದಗಿದ್ದೇನೆ. ಆದಷ್ಟು ಬೇಗ ಮತ್ತೆ ಪದ್ಯರಚನಾಭ್ಯಾಸದಲ್ಲಿ ತೊಡಗಿಕೊಳ್ಳುವೆ… ಧನ್ಯವಾದಗಳು

  5. ಚೀದಿ ಮತ್ತು ಕಾಂಚನ ಅವರ ಪದ್ಯಗಳಲ್ಲಿ ಸ್ವಲ್ಪ ಸವರಣೆಗಳು ಬೇಕಿವೆ. ಅದನ್ನು ನಾನು ಊರಿಗೆ ಬಂದೊಡನೆ ಮುಖತಃ ಕಂಡಾಗ ತಿಳಿಸುವೆ. ಅಂದಹಾಗೆ, ಈ ಬಾರಿ ಅದೇಕೆ ಜಿ ಎಸ್ ರಾಘವೇಂದ್ರ ಇನ್ನೂ ಸಂಸ್ಕೃತಸಮಸ್ಯೆಯನ್ನು ಪದ್ಯಪಾನದಲ್ಲಿ ಹಾಕಿಲ್ಲ? ಹೊಸ ತಿಂಗಳು ಬಂದಿತಲ್ಲ!!

    • ಆಗಲಿ ಸರ್, ನನ್ನ ಗಮನಕ್ಕೆ ಬಂದ ತಪ್ಪುಗಳನ್ನು ಮೇಲೆ ಸವರಿಸಿದ್ದೇನೆ..

      After correcting 1st and 3rd line..

      ತೋರುತಸೊಂಡಿಲಂ ಬಳುಕಿಸುತ್ತಿರೆಪೊಟ್ಟೆಯನಾಚೆಗೀಚೆಗಂ
      ಭಾರದೊಳೌಂಕಿರಲ್ಲಿಲಿಯ,ಧೊಪ್ಪೆನೆಬಿದ್ದುದ ನೋಡೆ ಸೈಪಿನಿಂ
      ಪೋರನವೊಲ್ನಗುತ್ತಿರಲುಚಂದಿರಗೀಗಳೆ ಶಾಪವಿತ್ತನೀ
      ಧೀರನಪಾಡುತುಂ ನಮಿಸುವಾ ಧರೆಯೊಳ್ ಮೆರುಗೇಂ ಗಣೇಶನಿಂ

      • ಪ್ರಿಯ ಚೀದಿ,
        ಮುಖತಃ ಗಣೆಶರಿಂದ ಸಲಹೆ ಪಡೆಯುವ ಯೋಜನೆ ಸಾಗುತ್ತಿರಲಾಗಿ, ಒಂದೆರಡು ನನಗೆ ತೋಚಿದ ವೆಷಯಗಳನ್ನು ಇಲ್ಲಿ ಟಂಕಿಸುತ್ತೇನೆ :

        ಔಂಕಿರಲ್ + ಇಲಿ = ಔಂಕಿರಲಿಲಿ. ಆದ್ದರಿಂದ “ಔಂಕಿರಲ್ಕಿಲಿ” ಮಾಡಬಹುದೆನಿಸುತ್ತದೆ.
        “ನಮಿಸುವಾ ಧರೆಯೊಳ್” ಬದಲು “ನಮಿಸುವೀ ಧರೆಯೊಳ್” ಆದರೆ ದೀರ್ಘಕ್ಕೆ ಸಾರ್ಥಕತೆ ಬಂದೀತು
        ಹಲವೆಡೆ ಲಘುಗಳ ಅವಶ್ಯಕೆತೆಯಿದ್ದಲ್ಲಿ, ಭಾಷೆ ಹೊಸಗನ್ನಡವಾಗಿದೆ [ನಾನೂ ಹೀಗೇ ಮಾಡಬಹುದೇನೊ 🙂 ]
        ‘ರ’ ಕಾರ ಪ್ರಾಸ ಚೆನ್ನಾಗಿ ಹಿಡಿದಿದೆ 😉

  6. ಕರೆದು ತಿಂಡಿಯ ಸುರಿವ ಭಕ್ತರೆಲ್ಲರ ಮನೆಯೊ
    ಳರೆ ಗಳಿಗೆಗಿಳಿದು ವಾಹನವನೇರುತಬರಲು
    ಸರಿದ ಹಾವನು ಕಂಡು ಗಣಪನನು ಹೊತ್ತ ಮೂಷಕವು ಮುಗ್ಗರಿಸಲಲ್ಲಿ I
    ಬಿರಿದ ತನ್ನುದರಕಾಗಲೆ ಗೌರಿಸುತ ಚತುರ
    ಹರಿದೋಡಿದುರಗವನೆ ಮತ್ತೆಳೆದು ಸುರುಳಿ ಸುಂ
    ದಿರಲು ಮೂಷಕವನಂಜಿಸಿ ಸರ್ಪಕೊದಗಿದಾ ಮೆರುಗೇಂ ಗಣೇಶನಿಂದ II

    ಚತುರಮತಿಯಾದ ಗಣೇಶ ತೊಂದರೆ ಕೊಟ್ಟ ಹಾವನ್ನೂ ತನ್ನ ಉದರಾಭರಣ ಮಾಡಿಕೊಂಡ ಅನ್ನುವ ತಾತ್ಪರ್ಯ . ( ಹಳೆಗನ್ನಡ ಹದವಾಗದೆ ಉತ್ಪಲ / ಚಂಪಕ ಮಾಲೆಯಲ್ಲಿ ಸಾಧ್ಯವಾಗಿಲ್ಲ )

    • ಆಹಾ! ಇದು ನಿಜಕ್ಕೂ ಸೊಗಸಾದ ಕಾವ್ಯಕಲ್ಪನೆ!!…ಅಭಿನಂದನೆಗಳು….ಅಲ್ಲದೆ ಪೂರಣಕ್ಕಾಗಿ ನೀಡಿದ ಪದ್ಯಪಾದಭಾಗವನ್ನು ತುಂಬ ಚತುರತೆಯಿಂದ ವಾರ್ಧಕದ ಗತಿಗೆ ಅಚ್ಚುಕಟ್ಟಾಗಿ ಅಳವಡಿಸಿರುವುದು ಮತ್ತೂ ಅಭಿನಂದನೀಯ. ದಿಟವೇ, ಹಳಗನ್ನಡದ ಹದವು ಕುದುರದೆ ವೃತ್ತ-ಕಂದಗಳ ನಿರ್ವಾಹ ಕಷ್ಟ. ಆದರೆ ಹಾಗೆಂದು ನೀವು ಸುಮ್ಮನೆ ಕೈ ಚೆಲ್ಲಿ ಕೂಡದೆ ಇಷ್ಟೊಂದು ಚೆನ್ನಾದ ಷಟ್ಪದಿಯನ್ನು ಒಳ್ಳೆಯ ಕಲ್ಪನೆಯಿಂದ ರೂಪಿಸಿದ್ದೀರಿ! ಧನ್ಯವಾದ.

      • ಸರ್ , ನನ್ನ ಅರಿವಿನ ಮಿತಿಯೊಳಗೆ ಮಾಡಿಕೊಂಡ ಅನುಕೂಲ ಶಾಸ್ತ್ರಕ್ಕೆ 🙂 (ವಾರ್ಧಕ ಷಡ್ಪದಿಗೆ )ಉತ್ತಮ ಬಹುಮಾನ ದೊರೆತಿರುವುದಕ್ಕೆ ಸಂತೋಷವಿದೆ .ಕೃತಜ್ಞತೆಗಳು . ಪದ್ಯ ಬರೆಯುತ್ತಾ , ಬರೆಯುತ್ತಾ ಹೊಸತನ್ನು ಹುಡುಕುವಲ್ಲಿ ಬುದ್ಧಿ ಚುರುಕಾಗುವುದoತು ಸತ್ಯ .

  7. ಮಂಜುಭಾಷಿಣೀ ||
    ಭರಿತಂ ಕಣಾ! ಭರತಭೂಮಿ ದುಷ್ಟಚಿ-
    ತ್ತರಿನೆಲ್ಲಮೂಲೆಯೊಳುಂ, ಈ ಮಹಾಜನರ್ |
    ಶಿರ ಕಾಯಲಕ್ಷಮನಿನೀ ಪ್ರಪಂಚಕಂ
    ಮೆರುಗೇಂ ಗಣೇಶನಿನೆನುತ್ತೆ ನಿಂದಿಪರ್ ||

    ಅಕ್ಷಮ – ಅಸಮರ್ಥ.

    • ಪೆಜತ್ತಾಯರೆ – ಪೂರಣವ ವಿಷಯವನ್ನು ಯಥಾವತ್ತಾದ ಅರ್ಥದಲ್ಲಿಯೇ, ಮಂಜುಭಾಷಿಣೀ ವೃತ್ತಕ್ಕೆ ಹೊಂದಿಸಿರುವುದು ಚೆನ್ನಾಗಿದೆ.

  8. || ಉತ್ಪಲಮಾಲಾವೃತ್ತ, ಉಪಮಾಲಂಕಾರ ||

    ಚೌತಿಯ ಲಾಡುಚಕ್ಕುಲಿಗಳಂ ಸವಿಯುತ್ತಿರೆ ಚಿಣ್ಣರಿಚ್ಛೆಯಿಂ,
    ನೂತನವಸ್ತ್ರಮಂ ಧರಿಸಿ,ಕಂಗೊಳಿಸುತ್ತೆ ಸುಮಂಗಳಂತೆವೊಲ್,|
    “ಭ್ರಾತೃಗಜಾನನಂ ಕರಿಯ ಮೋರೆಯಿನಿರ್ಪನದೇತಕೆಂಬುದಂ-
    ತಾತನೆ ಪೇಳೆ”ನಲ್,ಕಥೆಗೆ ಸಂಭ್ರಮಿಸಲ್,ಮೆರುಗೇಂ ಗಣೇಶನಿಂ !! ||

  9. Dear Sri Ganesh, welcome back to India.

    ವಿಶ್ವದ ಪದ್ಯಪಾನಿಗಳಿಗಿತ್ತಿಹನೀತನನಂತಯೋಗಮ-
    ನ್ನಶ್ವದ ವೇಗದೊಳ್ ರಚಿಸೆ ಛಂದದಪದ್ಯಗಳಂ ಸಹಸ್ರದೊಳ್|
    ದಾಶ್ವವದೇನದೆಂಬೆನು ಸಖತ್ವದೊಳಾ ಮೆರುಗೇಂ? ಗಣೇಶನಿಂ-
    ದೀಶ್ವರರೂಪಿ ತಾನಿದೊ ಪದಾಬ್ಜಮನಿಟ್ಟಿಹನಲ್ತೆ ರಾಷ್ಟ್ರದೊಳ್||

  10. ಪದ್ಯಪಾನದ ಮೂಲಕ ಪದ್ಯವಿದ್ಯೆಯನ್ನು ಕಲಿಸುವ ಶ್ರೇಷ್ಠಶಿಕ್ಷಕರೂ,ಸಹೋದರರೂ ಆದ ಮಾನ್ಯಶತಾವಧಾನಿಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕಶುಭಾಶಯಗಳು.

    • ಮುಂದೊಮ್ಮೆ ತಮ್ಮ ಯಾವುದಾದರೂ ಸಾರ್ವಜನೀನ ಭಾಷಣವೋ ಇತರ ಕಾರ್ಯಕ್ರಮವೋ ಏರ್ಪಟ್ಟರೆ, ಅಲ್ಲಿ ನಿಮ್ಮನ್ನು ಸಭಾಸದರಿಗೆ ಹೀಗೆ ಪರಿಚಯಿಸಬಹುದು: ಇವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಮನೆಯಲ್ಲಿಯೇ ತಮ್ಮ ಸೋದರರಲ್ಲಿಯೇ ಪಡೆದುಕೊಂಡರು …. 🙂

      ಕಲಿಯುವರೆ ಮನೆಯವರ ಪಾಠಮನ್ನಾಸ್ಥೆಯಿಂ
      ಕಲಿತಂತೆ ಶಾಲೆಯೊಳ್ ಮೇಣ್ ಟ್ಯೂಶನಿನೊಳು|
      ಕಲಿಯಲೇಂ ಗುರುವೆಂದು ಭಾವಿಸೀ ಸೋದರನೊ- (ಶ್ರೀ ರಾ.ಗ.)
      ಳುಲಿದವೋ”ಲಪವಾದಮಾನು”ಮೆಂದುಂ|| 🙂

      • ಮನೆಯಿರಲ್ ಮೊದಲನೆಯ ಪಾಠಶಾಲೆಯವೊಲೇ,
        ಜನನಿಯಂತಿರೆ ಸೋದರರ್ ಬೋಧಿಸಲ್, |
        ಮನಕಾಗೆ ಸಂತಸಂ ಕಲಿಯುತಿರೆ ಶಿಶುವಂತೆ,
        ನನಸಾಗವೇಂ ತಮ್ಮ ರಮ್ಯೋಕ್ತಿಗಳ್ ? 🙂

    • ಧನ್ಯವಾದಗಳು:-)

Leave a Reply to ರಾಗ Ganesh R (रागः) Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)