Dec 222014
 

image1

  70 Responses to “ಪದ್ಯಸಪ್ತಾಹ ೧೩೦: ಚಿತ್ರಕ್ಕೆ ಪದ್ಯ”

  1. The bird is standing on a broad leaf spread out on the floor. It says thus to her:
    ಮಾಗಿಯೊಳು ತಣ್ಣನೆಯ ನೆಲದ-
    ಮ್ಯಾಗೆ ಯಾತಕೆ ನಿಂದೆ ನೀನೌ|
    ಹೋಗಿ ತಾ ಸುಂದರಿಯೆ ಕಾಲಡಿ-
    ಗೀಗ ಬೆಚ್ಚನೆ ಕಟ(mat)ಮನುಂ||

    • ನಿಮ್ಮ ಶೈಲಿಗೆ ಸವರದಾರೈ!
      ಕೆಮ್ಮಿದಳೆ ತಾನಂತು ಶೀತಕೆ?
      ಕಮ್ಮಗಿರ್ಪಳ ಕಾಲ-ಚಿಂತೆಯೆ
      ನಿಮ್ಮ ಚಿಂತೆಯ ಕಾಲಮೇ!

      • ಹ್ಹಹ್ಹ
        ಕಾಲ ಚಿಂತೆ ~ ಚಿಂತೆ ಕಾಲ; ಕೆಮ್ಮಿದಳೆ~ಕಮ್ಮಗಿಹಳ್: ಚೆನ್ನಾಗಿದೆ
        ಅವಳ ಕಾಲಿನ ಚಿಂತೆಯೆನಗೇಂ?
        ತಿವಿದು ಕವಿಯನು ಪಾತ್ರಪೇಳಿದ
        ಕವಿನಿಬದ್ಧದ ಪ್ರೌಢದುಕ್ತಿಯ
        ಶಿವಶಿವಾ ನೀಂ ಕಾಣೆಯೇಂ||

      • ಕಾಲೆಳೆದ / ಕಾಲ್ತೆಗೆದ – “ಕವಿಗಾಲ” ಚೆನ್ನಾಗಿದೆ !!

  2. (ರವಿವರ್ಮನ ದಮಯಂತಿಯ ಚಿತ್ರ-ಎಂಬುದನ್ನೇ ತೆಗೆದುಕೊಂಡು)
    ಮನಮೆಂಬ ಪಟದೆ ರಾಗದೆ
    ಮನೋಜನಿಭನಲನ ಚಿತ್ರಣಂಗೆಯ್ದಪಳಂ
    ಮನದೊಳ್ ಕಲ್ಪಿಸಿ ಚಿತ್ರಿಪ
    ನನುಪಮನಜರಾಮರಂ ದಲಾದಂ ರವಿ ತಾಂ||

    ಕರಹೀನಂ ಹಂಸಂ ದಿನ-
    ಕರನಂದದೆ ಭೈಮಿಯಾ ವದನಮೆಂಬಬ್ಜಾ
    ಕರಮನರಳಿಸಲ್ ತಗುಳ್ದುದು
    ಕರಮಾಯ್ತೈ ಪಾದದಿಂದೆ ಚಿತ್ರಿಸೆ ನಲನಂ||

    ಧ್ಯಾನಿಪ ಬಗೆಯಂ ಕಲಿತಳ್
    ಮಾನಿನಿ ಗುರು-ಹಂಸವಾಣಿಯಿಂ ದೀಕ್ಷಿತೆ ಸ-
    ನ್ಮಾನಿಸಲಿತ್ತಳೆ ಪದಪಿಂ
    ದಾ ನೀರಜಪತ್ರಮೆಂಬ ರಾಂಕವಮಂ ಮೇಣ್||

    ಸುವದನೆ ಪೇಳ್ವೆನಾಂ ನಲನ ಗಾಥೆಯನೆಂದೊಡೆ ಚಂಚಲಾಕ್ಷಿಯಾ
    ನವಕಮಲಾಭನೇತ್ರಮದೊ ನಿಶ್ಚಲಮಾದುದು, ಮಂದಮಾರುತಂ
    ತವೆ ಬರುವಾಗಳಪ್ಪ ತೆರೆ ನಾರಿಯ ಸೀರೆಯೊಳತ್ತ ತೋರ್ದೊಡಂ
    ಸವಿಯುತೆ ನಿಂದುದೇಂ ಭ್ರಮಿಸಿ ನಾರಿ ಸರೋವರಮೆಂದು ಹಂಸಕಂ|| (ಹಂಸಕ=ಹಂಸ)

    ಎಲೆ ಪೇಳೈ ಕಲಹಂಸ! ನಿನ್ನ ವಚನಂ ಪೀಯೂಷಸಂಪೂರಿತಂ
    ನಲನಾಖ್ಯಾನಪಯೋಧಿಮಂಥನರತಂ ಪುಟ್ಟಲ್ ವಿಯೋಗಂ ವಿಷಂ!
    ಸಲೆ ನೀಂ ಪೋಪುದು ಮಾಣೆನಲ್ಕೆ ದಮಯಂತಿ ಪ್ರೇಮಯುಕ್ತಾತ್ಮೆ ಕೇಳ್
    ನಲನಂ ಸಾರ್ದನಲಾಭಕಂ ವಿರಹಕಂ ತಣ್ಪೀವೆನೆಂತೆಂದುದೇ!

    • ಅಮಮಾ! ಕೊಪ್ಪಲತೋಟನ
      ಕಮನೀಯಮನೋಜ್ಞಶೈಲಿಕಲ್ಪನಹಂಸಂ|
      ಸಮೆದುದೊ ಸಂದೇಶಮನೀ
      ಕ್ರಮದೊಳ್ ಪೇಳ್ ಪದ್ಯಪಾನಭೈಮಿಗೆ ನಲವಿಂ!!

    • ಆಹಾ ಕೊಪ್ಪಲತೋಟಾ ಕಳೆದ ಕಂತಿನದನ್ನೂ ಬಡ್ಡಿಯ ಸಮೇತ ಮೊದಲನೆಯ ಪದ್ಯದಲ್ಲಿ ತೋರಿಸಿರುವ ಪರಿ ಚೆನ್ನಾಗಿದೆ…

    • ಸಪ್ಪೆಯದೊಪ್ಪಂ, ಕವಿತೆಯ
      ತುಪ್ಪದಿನುಪ್ಪಿಟ್ಟಗೈವ ಚಾತುರ್ಯಮಲಾ
      ಒಪ್ಪಿಸಿದೈ ’ಚಿತ್ರಚಲನ’
      ಜಪ್ಪಿಸೆಮನ ಭಪ್ಪರೆಭಳಿ ಕೊಪ್ಪಲತೋಟಾ

    • ಎರಡನೆಯ ಪದ್ಯವಂತೂ ತುಂಬ ಚೆನ್ನಾಗಿದೆ. ಸದ್ಯದಲ್ಲಿ ನಾವು ಅಧ್ಯಯನಗೈಯುತ್ತಿರುವ ನಾಗವರ್ಮನ ಕಾವ್ಯಶೈಲಿಯನ್ನು ಕೊಂಡಿದೆ. ನಾಲ್ಕನೆಯ ಪದ್ಯದ ಕೊನೆಯ ಪಾದವನ್ನು ವಿವರಿಸಿ ತಿಳಿಸುವಿರ?

      • ಧನ್ಯವಾದಗಳು…
        ನಾಲ್ಕನೆಯ ಪದ್ಯದಲ್ಲಿ-.. ಹಂಸವು ‘ನಾನು ನಿನಗೆ ನಲನ ಗಾಥೆಯನ್ನು ಹೇಳುತ್ತೇನೆ’ ಎಂದಾಗ ಅವಳ ಚಂಚಲವಾದ ಕಣ್ಣುಗಳು ನಿಶ್ಚಲವಾದ ಕಮಲಗಳಂತೆ ನಿಂತವು, ಮಂದಮಾರುತದಿಂದ ಏಳುವ ಅಲೆಗಳು ಅವಳ ಸೀರೆಯಲ್ಲಿ ಆದವು, ಆ ಕಾರಣದಿಂದ ಅದು ದಮಯಂತಿಯನ್ನೇ ಒಂದು ಸರೋವರವೆಂದು ಭ್ರಮಿಸಿ ಸವಿಯುತ ನಿಂತಿತು.

      • ಪ್ರಸಾದುರವರೆ, “ಸದ್ಯದಲ್ಲಿ ನಾವು ಅಧ್ಯಯನಗೈಯುತ್ತಿರುವ ನಾಗವರ್ಮನ ಕಾವ್ಯಶೈಲಿಯನ್ನು ಕೊಂಡಿದೆ” ಎಂದಿರುವಿರಲ್ಲ. ಹಳಗನ್ನಡದ ಪಾಠಗಳೇನಾದರೂ ನಡೆಯುತ್ತಿವೆಯೇ.. ನಾವೂ ಪಾಲ್ಗೊಳ್ಳಬಹುದೇ?

    • ಒರೆಯಲ್ ಕೊಪ್ಪಲತೋಟನಿಂತು ಸತತಂ ತಾಣಕ್ಕೆ ಸಾರ್ಥಕ್ಯಮೈ 🙂

      ತಾಣ – ಪದ್ಯಪಾನ

  3. ಐರೋಪ್ಯಶೈಲಿಯನುಕೃತಿ-
    ಯೀ ರವಿವರ್ಮೀಯಚಿತ್ರಚಯದೊಳಗೆಂದಿ-
    ನ್ನಾರೋಪಮಿರ್ಕೆ; ಗುಣಕಾರ್
    ಮಾರಾಗರೊ? ಹಂಸ-ಭೈಮಿ ಚಿತ್ರೋತ್ತಂಸಂ||

    ಎನಿತೆನಿತು ಶಿಲ್ಪಿ-ಚಿತ್ರಕ-
    ಜನಮೀ ಭಾರತದೆ ಪಿಂತೆ ಕಲೆಗೊಲಿದಿಲ್ಲಂ?
    ಮನನೀಯಹಂಸದೌತ್ಯ-
    ಧ್ವನಿಯಂ ಮತ್ತಾರ್ ಮೊದಲ್ ಸಮೆದರೋ ಕಣ್ಗಂ?

    ಕ್ಯಾಲೆಂಡರ್ ಕೆಲೆ ನಿನ್ನದು
    ಸೋಲೆಂದರ್ ಭಾರತಾಸ್ಮಿತೆಗೆ; ಬಹುಧೀರರ್|
    ಕಾಲಮೆ ನಿನ್ನಯ ಕೌಶಲ-
    ಕೀಲಾಲದೆ ಕೀರ್ತಿಹಂಸಮಂ ಕರೆದುದಲಾ!!

    ಅಂಚೆಯ ನುಡಿಯಂ ಕೌತುಕ-
    ದಂಚಿಂದಾಲಿಸುತಲಿರ್ಪ ಕಾಂತೆಯ ವೊಲ್ ನಿ-
    ರ್ವಂಚನೆಯಿಂ ನಮ್ಮ ಜನಂ
    ಸಂಚಯಿಸಿರ್ದರ್ ತ್ವದೀಯಕಲೆಯಂ ಬಲಮಂ||

    • ಅರರೇ ಕಂದಚತುಷ್ಟಯ
      ಭರಿತಂ ಭವದೀಯವಾಣಿ, ವಾಣಿಯ ವೀಣಾ
      ಸ್ವರದಂತಿರೆ ತಂತ್ರಿಯ
      ತೆರದಿಂ ಪದ್ಯಂಗಳಿಲ್ಲಿ ತೋರ್ಕುಂ ನಾಲ್ಕುಂ||

    • ಐರೋಪ್ಯಶೈಲಿ ಯಾದರೇನು, ಕ್ಯಾಲೆಂಡರ್ ಕಲೆಯೆಂದು ಜರಿದರೇನು, ಕಾಲವು ಗುಣವನ್ನು ಗ್ರಹಿಸಿ ಇಂದಿಗೂ ಈ ಚಿತ್ರಗಳಿಗೆ ಮರುಳಾಗುವ ರಸಿಕರಿದ್ದಾರೆಂಬ ಪದ್ಯಗಳು ಚೆನ್ನಾಗಿದೆ ಸರ್.

    • ಚಿತ್ರದ ವಿಚಾರಮದುಮಾನುಷಂಗಿಕಮಾಗಿ
      ಮಾತ್ರನಾಲ್ಕರೊಳಿಹುದ(4th verse) ಹೊರತುಪಡಿಸಿ|
      ನೇತ್ರಗೋಚರನಿರದ ಚಾರುಸತ್ಸಾರಕನ(artist)
      ಗಾತ್ರಮನೆ ಬಣ್ಣಿಪ ಚಮತ್ಕೃತಿಯಿದೇಂ!!

      ನಿತ್ಯಮುಮೀಪರಿಯೊರೆಯದೆ-
      ಲತ್ಯಂತಸರಳದಿನೇಕನಿಬರಿಂಗಂ ಪೇಳ್|
      ಇತ್ಯರ್ಥಮೆನ್ನಿಸದವೊಲ್
      ದೈತ್ಯಗ್ರಂಥಗಳನಾವಗಂ ಪೇಳ್ವಿರೊ ನೀಂ!! 🙂

  4. ಸಂತಸದ ಘಳಿಗೆಗಳ್ ತುಂಬಿ ಪೆರೆಯಂದದಲಿ
    ನಂತರದೆ ಮಾನಿನಿಯ ಹಸಿತಮಾಯ್ತೇಂ?
    ಅಂತರಂಗದ ಭಾಷೆಯರಿಯಲೆಂದೇ ಅಂಚೆ
    ಕಾಂತೆಯೊಡನಿಂದುತಾ ಗೆಳೆಯನಾಯ್ತೇಂ?

  5. ರಾಗರಹಿತಪತ್ರಿಯಿನನು-
    ರಾಗದ ದೌತ್ಯಮನೆ ಸವೆದ ಬಾವುಕಚಿತ್ತಂ
    ತೂಗಿಪುದುಯ್ಯಲೆಯೊಲ್ ಸ್ಥಿರ-
    ಮಾಗಿಪುದೇಂ ಪಾರ್ವ ವಿಹಗಭಾವಂ ಮನದೊಳ್

  6. ಚಿಂತಿಸುತಿನಿಯನ ಮನದೊಳ್
    ಕಾಂತೆಯು ತನ್ನಂತರಾಳಮಂ ಪೊಕ್ಕುತಲಿ-
    ನ್ನೆಂತೀ ವಿರಹಕೆ ಕೊನೆಯೆಂ-
    ದಂತಃಕರಣವನು ಪಕ್ಷಿಯಿಂದೀಕ್ಷಿಪಳಾ?

    • ಚೆನ್ನಾಗಿದೆ 🙂 ಎರಡನೇ ಸಾಲಿನಲ್ಲಿ ಪೊಕ್ಕುತಲಿ— ಎಂದಾಗುವುದಿಲ್ಲ..”ತನ್ನಂತರಾಳಮಂ ಪುಗುತುಂ ಮ|ತ್ತೆಂತೀ…” ಎಂದು ಮಾಡಬಹುದು

      • ಚೀದಿ ಚೆನ್ನಾಗಿದೆ, ಕೊಪ್ಪಲತೋಟನ ಸವರಣೆ ‘ನಿನ್ನಂತರಾಳಮಂ ಪೊಕ್ಕಿತೇಂ’? 🙂

  7. ಇದು ನಳನಿಗೆ ಪತ್ರ ಬರೆಯಲು ಹೊರಟ ದಮಯಂತಿಯ ಚಿತ್ರವಾದ್ದರಿಂದ, ಹೀಗೊಂದು ಭಾಮಿನಿ ಷಟ್ಪದಿ:

    ಮಂಚದಿಂದೆದೇಳುತಲಿ ತಾ ಜರಿ
    ಯಂಚು ರೇಸಿಮೆ ಸೀರೆಯುಟ್ಟಳು
    ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ
    ಹೊಂಚಿನಲಿ ಮನದಳವ ತಿಳುಹಲು
    ಮುಂಚೆ ನಳನಿಗೆ ಓಲೆ ಬರೆಯುವೆ
    ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ

    • ಮೊದಲ ಪಾದವನ್ನು ಸವರಬೇಕು (ಮಂಚದಿಂದೆದ್ದೇಳುತಲಿ ಜರಿಯಂಚ)

      • ಮತ್ತೂ “ಪಾದದ” ಚಿಂತೆಯೇ?! ಪ್ರಸಾದ್ ಸರ್,
        (ಚಿತ್ರವಾದ್ದರಿಂದ) “ಕುಂಚದಿಂದೆದ್ದವಳು ತಾ ಜರಿ-ಯಂಚ ….. ” ಅಂದರೆ ಸರಿಯಾಗುವುದಲ್ಲವೇ?

        ಮತ್ತೆ ಅಂಚೆ / ಓಲೆ – ಎಂಬಲ್ಲಿ ಸಂಧಿ ಯಾಗಬೇಕಲ್ಲವೇ? ಹಂಸಾನಂದಿಯವರೆ
        ಸೀರೆಯುಟ್ಟಿಹ-ಳಂಚೆ ನಡುಗೆಯ / ನಳಗೆಂದೋಲೆಯಂ ಬರೆ-ದಂಚೆವಕ್ಕಿಯಕೂಡೆ ಕಳುಹುವೆ … ಎಂದು ಸವರಬಹುದು.

        • ಸವರಣೆಯೊಡನೆ:

          ಮಂಚದಿಂದೇಳುತಲಿ ತಾ ಜರಿ
          ಯಂಚು ರೇಸಿಮೆ ಸೀರೆಯುಟ್ಟಳು
          ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ
          ಹೊಂಚಿನಲಿ ಮನದಳವ ತಿಳುಹಲು
          ಮುಂಚೆಯೋಲೆಯ ಬರೆವೆ ನಳನಿಗೆ
          ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ

  8. ಮನಹಂಸಿನಿಯ ಪ್ರತಿತಾ
    ನಿನಿಯನನರಸಲೆನೆ ಪಾರಲನುವಾದುದರಿಂ
    ದಿನಿತು ನಗುವರಳ್ದ ಮೊಗಂ
    ಬನಿಯೆ, ಸರಮುಕುರದೆ ಕಮಲಮಾಗಿಯೆ ತೋರ್ತೇಂ?
    ಬನಿ=ತೇಜಸ್ಸು

  9. ಆಕೆಗೆ ಮನಸ್ಸಿನಲ್ಲಿ ಈ ರೀತಿ ಅನ್ನಿಸಿರಬಹುದು….

    ಗಳದೊಳಗಿಲ್ಲ ಮುತ್ತಿನ ತೊಡರ್ಪುಗಳೊಂದರ ತಿಣ್ಣು ಮೆಯ್ಯೊಳ-
    ಗ್ಗಳದ ದುಕೂಲವಿಲ್ಲ ವೆಱಳುಂಗುರ ಕಾಲ್ಬಳೆ ಪೊನ್ನ ಕಂಕಣಂ-
    ಗಳ ಸುೞಿವಿಲ್ಲಮಾದೊಡಮದೇಂ ಗಡ! ಚೆಲ್ವದು ನಿನ್ನ, ನಿನ್ನ ಕಂ-
    ಗಳ ಕರಕಾಂತಿಯಂ ಬಿಡದೆ ಕೊಂಡುದು ತೊಟ್ಟತೊಡರ್ಗಳೆನ್ನಯಾ

    ಗಳ(ಕೊರಳು)ದೊಳಗಿಲ್ಲ ಮುತ್ತಿನ ತೊಡರ್ಪುಗಳೊಂದರ ತಿಣ್ಣು(ಭಾರ),
    ಮೆಯ್ಯೊಳ್ ಅಗ್ಗಳದ ದುಕೂಲವಿಲ್ಲ,
    ವೆರಳುಂಗುರ, ಕಾಲ್ಬಳೆ, ಪೊನ್ನ ಕಂಕಣಗಳ ಸುಳಿವಿಲ್ಲಂ,
    ಆದೊಡಂ ಅದೇಂ ಚೆಲ್ವದು ನಿನ್ನ!.
    ನಿನ್ನ ಕಂಗಳ ಕರಕಾಂತಿಯಂ, ಬಿಡದೆ ಕೊಂಡುದು ತೊಟ್ಟ ತೊಡರ್(ಒಡವೆ)ಗಳ್ ಎನ್ನಯಾ.

  10. ಶ್ರೀರಮಣಿತಾಂ ದಿನದೊಳುಂ
    ಪಾರುತಲಂಚೆಯನು ಕೆಂಚನಂಚಲದೊಳ್ ಸಿಂ-
    ಗಾರಿಸುದವಳ್ ಕನಸುಣಿದು
    ಪೂರೈಸಿಹಳೆ ಗೌರ ವಸನದೊಳಿನಿಯನಿರವಂ !!

    (ಹಂಸವನ್ನು ಕಂಡು – ಬಿಳಿಯ ಉತ್ತರೀಯ ಧರಿಸಿದ ತನ್ನ ಇನಿಯನನ್ನು ಕಲ್ಪಿಸಿಕೊಂಡಳೇ !?)

    • ಭಾವ ಚೆನ್ನಾಗಿದೆ. ‘ಸಿಂಗಾರಿಸುದವಳ್’ ಪ್ರಯೋಗ ಸರಿಯೇ? ಹಾಗೆಯೆ ಕಡೆಯ ಪಾದದ ಎರಡನೆ ಗಣ ತಪ್ಪಿದೆ ಗಮನಿಸಿರಿ

      • ಧನ್ಯವಾದಗಳು ಸೋಮ.
        ಸಿಂಗ(ಗಾ)ರಿಸುದವಳ್ =ಅಲಂಕೃತವಾದ+ಅವಳು ಎಂದಾಗುವುದಿಲ್ಲವೇ? ತಿಳಿಯುತ್ತಿಲ್ಲ.
        ಕಡೆಯ ಪಾದ (ಗಮನಿಸಿರಲಿಲ್ಲ) ಹೀಗೆ ತಿದ್ದುವೆ : **ಪೂರಿಸಿಹಳೆ ಗೌರ ….. “

  11. ಮನದಳಲೆಂತೊ ಸಾರ್ವುದಲೆ ಭೈಮಿಯಳಂ ಘನಮಿರ್ದಿರಲ್ ದಲಾ
    ಇನಿಯನ ಭಾವಮೆಂತೊ, ನೆಪಮಾತ್ರಮೆ ಪ್ರೇಷಕೆ ಹಂಸಪಕ್ಷಿಯೈ|
    ಅನಿಬರಿಗಿಂತುಮಲ್ತೊಲಿಯುತುಂ ದಿವರೆಂತೊ ಪವಾಡಗೈಯುವರ್
    ಬನದೊಳಗಂದು ಯಕ್ಷಗೆ ಪಯೋದವು ಸಂದವೊಲಂತೆ (ಮೇಘ)ದೂತದೊಳ್||
    (ಇನಿಯನ, ಬನದೊಳಗಂದು ಯಕ್ಷಗೆ ಪಯೋದವು – ಈ ಎರಡನ್ನು ಕಾಲಕ್ರಮದಲ್ಲಿ ತಿದ್ದುವೆ. ಸದ್ಯಕ್ಕೆ ದಯವಿಟ್ಟು ಒಪ್ಪಿಸಿಕೊಳ್ಳಿ)

  12. ನಳನ ವಿರಹದಿ೦ದ ಸೊರಗುತ್ತಿರುವ ದಮಯ೦ತಿಗೆ ಹ೦ಸವಿದು ತನ್ನ ಬ್ರಹ್ಮಲೋಕದ ಮಿತ್ರ ತನಗೆ ತಿಳಿಸಿದ ಸ೦ಗತಿಯೊ೦ದನ್ನು ತಿಳಿಸುತ್ತಿದೆ…

    ಭಾಮಿನಿಯದೇಕಿ೦ತು ಸೊರಗುವೆ
    ತಾಮರಸರುಹನ೦ದು ನಿನ್ನೀ
    ಕೋಮಲಲತಾ೦ಗನಿಚಯವ ರಚಿಸಿ ಮಿಗೆ ಭಾಳದಲಿ
    ಕ್ಷೇಮದಿ೦ದೀಕೆಗೆ ನಳನೆನುತ
    ನೇಮಿಸಿದನೋದಿದೆನೆನುತವನ
    ವಾಮಭಾಗಿನಿಯೊರೆದುದನು ಕೇಳೆನ್ನ ಸಖನೊರೆದ

    • ಆಶಯ ಚೆನ್ನಾಗಿದೆ, ಆದರೆ ಕೆಳಗಿನ ಗಣವಿಭಾಗ ಗತಿಯನ್ನು ತೊಡರಿಸುತ್ತದೆ, ಗಮನಿಸಿರಿ:

      |ಕೆ ಸೊರ|
      |ಲ ಲತಾ೦|

  13. ಮರುಗ ಬೇಡವೆ ಜಾಣೆ ಭಾಮಿನಿ !
    ಕೊರಗು ನೀಗಲು ಬಂದೆ ನಾನಿ
    ನ್ನರಸನನು ಕಂಡಿರುವೆ ರೂಪದೊಳವನು ಬಾಹುಕನು I
    ಪುರದ ಜನರನು ಮತ್ತೆ ನಿನ್ನನು
    ತೊರೆದ ನಳನನು ಹುಡುಕಿರುವೆಯಲ!!
    ಬಿರುದು ತೊಡಿಸುವೆ ”ಹಂಸ”ನಿನ್ನೊಳಗಿರಲಿಯೆಂದೆ೦ದು II

    ತನ್ನ ತವರು ಮನೆಯಲ್ಲಿರುವ ದಮಯಂತಿ ನಳನಿರುವನೆಂದು ಖಚಿತ ಪಡಿಸಿಕೊಂಡು ಸ್ವಯಂವರವನ್ನು ಏರ್ಪಡಿಸಿ ತಳಮಳದಲ್ಲಿರುವಂತಹ ಒಂದು ಸಂದರ್ಭ . ಒಂದು ಪಕ್ಷ ಅವನು ನಳನೇ ಆಗಿರಿದೇ ಹೋದರೆ ಮುಂದಿನ ಹೆಜ್ಜೆಯೇನು ? ಎಂಬ ತಳಮಳ ಅವಳಲ್ಲಿ . ಆಗ ಮತ್ತೊಮ್ಮೆ ಹ೦ಸದ ಪ್ರವೇಶ ಮತ್ತು ಜಳ್ಳಿನಿಂದ ಕಾಳನ್ನು ಬೇರ್ಪಡಿಸುವ ( ಹಂಸ ನೀರನ್ನು ಬಿಟ್ಟು ಹಾಲನ್ನು ಮಾತ್ರ ಹೀರ ಬಲ್ಲುದು ಎಂಬ ರೂಢಿ ಮಾತನ್ನು ಆಧರಿಸಿ ) ‘ಹಂಸ’ ಎನ್ನುವ ಬಿರುದು ದಮಯ೦ತಿಗಿರಲಿ ಅನ್ನುವ ಹಂಸದ ಉದಾರತೆ ಈ ಕಲ್ಪನೆಯ ಸಾರ .

    • ದಮಯಂತಿಯು ನಳಾನಳನ್ಯಾಯವನ್ನು ಅಪೇಕ್ಷಿಸುತ್ತಿದ್ದಾಳೆ ಎನ್ನೋಣವೇ, ಬಹಳ ಚೆನ್ನಾಗಿದೆ

      • ಧನ್ಯವಾದಗಳು. ಹಂಸ ಯಾವ ನ್ಯಾಯವೆಂದು ” tweet ” ಮಾಡಿಲ್ಲ 🙂

  14. ||ಉ|| ಸಾರಸ ಖೇಚರಂ ಮುಕುಳನೀರಜದಂ ಪುಗೆ ಜೀವನಾಮನೋ-
    ಸಾರಸಮಂ, ರಜಂ ಕವಿದಜೀವನದಂ ಸಲೆ ನಿಂತು ನೋಡೆ ನಿ-
    ಸ್ಸಾರಮಿದೀ ಜಗಂ ತಿಳಿಯದಿರ್ದೊಡದಂ ಜಗದಂತರಂಗನಂ
    ಸಾರನಮೆಂದದಂ ಬಗೆದು ಭಾವಿಸಿತೇಂ ದೊರೆವೆಣ್ಣರೂಪಿನೊಳ್ ||

    ಸಾರಸ ಖೇಚರಂ(ಹಂಸ ಪಕ್ಷಿ),ಮುಕುಳ ನೀರಜದಂ (ಕಮಲದ ಮೊಗ್ಗು), ಪುಗೆ ‘ಜೀವ’ ನ ಆ ಮನೋಸಾರಸಮಂ(ಮನಸೆಂಬ ಸಾಗರವನ್ನು), ರಜಂ ಕವಿದ(ರಜೋಗುಣಾವೃತ) ಜೀವನ್ ಅದಂ ಸಲೆ ನಿಂತು ನೋಡೆ, ನಿಸ್ಸಾರಮಿದು ಈ ಜಗಂ, ತಿಳಿಯದಿರ್ದೊಡೆ ಅದಂ(ಆತ್ಮತತ್ವ), ಜಗದಂತರಂಗನಂ, ಸಾರನಂ, ಎಂದದಂ ಬಗೆದು ಭಾವಿಸಿತೇಂ ದೊರೆವೆಣ್ಣ(ಅರಸಿಯ) ರೂಪಿನೊಳ್.

    ಹಂಸವು ವಿಶ್ವದ ಶ್ವಾಸವನ್ನೂ(Cosmic breath), ಅರಳುತ್ತಿರುವ(ಮೊಗ್ಗು) ಕಮಲವು ಜೀವಾತ್ಮದ ಜಾಗ್ರತಾವಾಸ್ಥೆಯನ್ನೂ, ತೊಟ್ಟ ಕೆಂಪು ಉಡುಗೆಯು ರಜೋಗುಣವನ್ನು ಹೇಳುವುದಾದರೆ.. ಈ ಕೆಳಗಿನ ಅರ್ಥದಲ್ಲಿ ಪದ್ಯವನ್ನು ಬರೆದಿದ್ದೇನೆ.

    ಎದುರಿಗೆ ಕಾಣುತ್ತಿರುವ ಹಂಸ ಹಾಗು ಬಳಿಯಲ್ಲಿನ ಕಮಲವು ರಜೋಗುಣ ಸಂಪನ್ನನಾದ ಜೀವಾತ್ಮನಲ್ಲಿ ” ಆತ್ಮ ತತ್ವವನ್ನು ತಿಳಿಯದಿರ್ದೊಡೆ, ಜಗತ್ತು ನಿಸ್ಸಾರಂ” ಎಂದು ಭಾವಿಸುವ ಹೆಣ್ಣಿನ ರೂಪಿನಲ್ಲಿ ಕಾಣಿಸಿದೆ..

  15. That is Naḷa himself guised as a bird. They make a typically contrasting couple – White her face is, but in him the body is (white). Red his face (beak) is, but in her the body is (red)!
    ಪೃಥ್ವೀಭರಂ|| ಸ್ವತಃ ನಳನೆ ಬಂದಿಹನ್ ವಿಹಗವೇಷದೊಳ್, ನೋಡೆ ಸ-
    ರ್ವತಃ ಪತಿಯೆ, ಲಕ್ಷಣಂಗಳನು ಒಪ್ಪವಿಟ್ಟೀಕ್ಷಿಸಲ್|
    ಲತಾಂಗಿಯ ಮುಖಾರವಿಂದವು ಸಿತಂ, ನಳಂ ಮೈಯೊಳೈ (ಸಿತಂ)
    ಕ್ಷಿತೀಶನರುಣಾನನಂ, ರುಧಿರೆ ಕಾಯದೊಳ್(dress) ಭೈಮಿಯಳ್||
    All is well 😉

  16. (ನೀಂ)ಕದಪಿಂದಿತ್ತಿರೆ ಕಾಂತಿಯಂ,ಕಮಲತಾಂ ಸಂಗಾತಿಯೋಲಾಗುತುಂ,
    ಮೆದುವಾಗಿರ್ದಧರಂಗಳಿಂದ ಮಧುವಂ ತಾತಂದು ಕಾಪಿಟ್ಟಿತೇಂ?
    ಮುದದಿಂ ಚಿತ್ತದ ಶುಭ್ರ ತೊಟ್ಟಿರೆ,ಖಗಂ ನಿಷ್ಟಾಪ್ತ ತಾನಾದುದೇಂ?
    ಪದಪಂ ಮೀಂಟುತೆ ಗೆದ್ದುಕೊಂಡಿಪ ಸಖಂ ಸಾರರ್ದೊಡಂ ಚಿಂತೆಯೇಂ?

    (ನಿನ್ನಿಂದ ಚೆಲುವನ್ನು,ಮಧುವನ್ನು ಪಡೆದ ಕಮಲವು & ನಿನ್ನ ಚಿತ್ತದಿಂದ ಬಿಳಿಯನ್ನು ಪಡೆದ ಹಕ್ಕಿಯೂ ನಿನ್ನೊಂದಿಗಿದ್ದಿರಲು.. ನಿನ್ನ ಪ್ರೀತಿಯನ್ನು ಗೆದ್ದುಕೊಂಡ ಸಖನೋರ್ವ ,ಬಳಿಯಿಲ್ಲವೆಂಬ ಚಿಂತೆಯೇನು?)

    • ಮೇಡಂ, ತುಂಬಾ ಚೆನ್ನಾಗಿದೆ. ಆದರೆ ‘ದ’ ಕ್ಕೆ ‘ಧ’ ಆದಿಪ್ರಾಸ ತರುವ ಹಾಗಿಲ್ಲವಲ್ಲ. 🙂

  17. ಪಲ್ಲವ|| ಕೆಂಪುಸೀರೆಗೆ ಪಿಂಕಿಗಿಂತಲು
    ಪೆಂಪು ತಾನಲೆ ಕಪ್ಪುಕುಪ್ಪಸ|
    ಸೊಂಪಿನಿದೆ (black colour) ಅಂಚು-ಸೆರಗುಗಳೊಳು
    ರಂಪ ಕಾಣನೆ ತಥ್ಯಮಂ|| 🙂

    • ||ದೋಧಕ||
      ಗಂಡುಡುಪಲ್ತದು ಪೊಂದಿಸೆ ಬಣ್ಣಂ
      ಖಂಡಿಸಲೊಪ್ಪದು ಪೆಣ್ಣಿನ ಚಿತ್ರಂ
      ಕಂಡುದಪೇಳ್ವೆನು ಕೆಂಪಿಗೆ ಕರ್ಪುಂ*
      ಖಂಡಿತಮಾಗದು ಬಾಲೆಗಮೆಂದುಂ ||

      ರಂಪರ್ ಕಾಣರ್ ಸತ್ಯಮಂ 🙂

      *(Considering traditional dressing)
      * (ಹಾಸ್ಯಕ್ಕಾಗಿ ಅಷ್ಟೇ) 🙂

    • Red-black dress combination is not apt for a female? So, does it look good on a male?
      ಗಂಡಸದಾದೊಡೆ ಒಮ್ಮೆ ತೊಡಿಂ ನೀಂ
      (Cricket)ಚೆಂಡಿನ ಬಣ್ಣದಿಜಾರವ(Trousers) ಮೇಣಿಂ|
      ಕೆಂಡವದಾರಿದ ಬಣ್ಣದ ಚೋಲಂ(ಚೋಲವಂ=shirt)
      “ಪುಂಡನ ನೋಡಿರಿ” ಎಂಬರು ಎಲ್ಲರ್|| 🙂

      • 🙂 ಹಾಗಲ್ಲ ಪ್ರಸಾದುರವರೆ, ಹುಡುಗರು ಶರ್ಟು ಪ್ಯಾಂಟು ಒಂದೇ ಬಣ್ಣದ್ದನ್ನ ಧರಿಸಿದರೆ ಅದು ಶನಿವಾರದ ಯೂನಿಫಾರ್ಮ್ ಡ್ರೆಸ್ಸ್ ಹಾಗೆ ಕಾಣುತ್ತೆ. ಅದಕ್ಕಾಗೆ ಹುಡುಗರು ಪ್ಯಾಂಟು ಶರಟನ್ನ ಬೇರೆಬೇರೆ ಬಣ್ಣದ್ದಾಗೆ ಸೆಲೆಕ್ಟ್ ಮಾಡ್ತಾರೆ.. ಆದರೆ ಸಾಂಪ್ರದಾಯಿಕ ಉಡುಗೆಗೆ ಬಂದರೆ ಸಾಮಾನ್ಯವಾಗಿ ಸೀರೆಯ ಬಣ್ಣವೇ ಬ್ಲೌಸ್ ಕೂಡ ಇರುತ್ತದಲ್ಲವೆ. ಕಪ್ಪು ಬ್ಲೌಸಿಗೆ ಕೆಂಪು ಸೀರೆ ತೊಟ್ಟ ಯಾವ ನೀರೆಯನ್ನು ನಾನು ನೋಡಿಲ್ಲ. 🙂

  18. अपि सन्ति जनाः सौख्ये ? डयन्ते बान्धवाश्च ते ? ।
    स्मरन्त्यपि कथां नौ ते संतोषेणाद्य भारते ? ॥ १ ॥

    पप्रच्छ दमयन्ती तं हंसं स्वैरविहारिणम् ।
    कायकम्पेन निर्नीरो दृष्टं वक्तुं प्रचक्रमे ॥ २ ॥

    एधन्ते ते प्रगतिमनसा कार्यबाहुल्यकृष्टा
    नित्यं भिन्नं भवतु न इति न्यस्तपादा विदग्धाः ।
    एवं भूते कथमिव सखि श्रावयेयं नु तथ्यं
    योऽहं पूर्वं स नलकथया दत्तवान् कर्णतोषम् ॥ ३ ॥

    खगस्य तूष्णीं भवतः शिवाङ्गना
    गृहीतशाटीवसनान्तपल्लवा ।
    समाहिता स्तम्भककूर्पराऽवदत्
    ब्रवीतु सत्यं, न पलायनं ततः ॥ ४ ॥

    धावन्त्येते विविधविषये क्षिप्रनावीन्यनीता
    ह्यश्चेद्यातं, पुनरपि नवं नाशनेनैव कुर्मः ।
    मन्यन्ते ये भण कथमहो त्वत्कथां वा स्मरेयुः
    सूर्यं ध्यायेन्मधुरचयने या रता किं पिपीली ॥ ५ ॥

    प्रत्यक्षं न हि भावयन्ति सुहृदो दूरेक्षणानन्दिता
    अन्योन्यं गणयन्ति नैव सततं हस्तार्कपुष्पेक्षणाः ।
    विस्मृत्य स्वहिता वचो निरुपमं लक्ष्मीक्षणायातुराः
    यान्ति क्वापि समं विमर्शरहितं सूर्ये निरूढेक्षणाः ॥ ६ ॥

    इत्थं ब्रुवाणः स्मरणेन भूयः ; चित्रं जनानां चरितं स हंसः ।
    नेत्रद्वये रागमवाप तूर्णं ; शाटीसमानं पुरतः स्थितायाः ॥ ७ ॥

    क्षणं समननं स्थिता भणति सा कुशाग्रेक्षणा
    शुभेक्षण न मुञ्च ते धृतिविवेकधैर्याणि हि ।
    डयस्व तदितस्तथा रमय तान् यथावाञ्छितं
    स्मरन्ति वचनामृतं प्रबलवासनासंस्थितम् ॥ ८ ॥

    प्राप्यानुज्ञां ततो हंसः सकुटुम्बं धृतिं धरन् ।
    क्रीडाव्याजेन सत्वरं दूरवाणीर्विवेश ह ॥ ९ ॥

    ತೀರ ಉದ್ದ ಆಯ್ತು ಪದ್ಯ. ಕ್ಷಮೆಯಿರಲಿ. ಪದ್ಯಶಃ ಸಾರಾಂಶ ಹೀಗಿದೆ –
    ೧. “ಜನರು ಸುಖದಿಂದ ಇದ್ದಾರೆಯೋ? ನಿನ್ನ ಬಂಧುಗಳು ಸುಖವಾಗಿ ಹಾರಾಡುತ್ತಿರುವರೋ? ನಮ್ಮ ಕಥೆಯನ್ನು ಇಂದಿಗೂ ಸ್ಮರಿಸುತ್ತಾರೋ?”
    ೨. ಹೀಗೆಂದು ದಮಯಂತಿ ಸ್ವತಂತ್ರವಾಗಿ ಹಾರಾಡುವ ಹಂಸವನ್ನು ಕೇಳಿದಳು. ಅದು ಮೈಮೇಲಿದ್ದ ನೀರುಹನಿಗಳನ್ನು ಕಂಪನದೊಂದಿಗೆ ಹೋಗಲಾಡಿಸಿ ಉತ್ತರ ನೀಡಿತು.
    ೩. ಮುಂದೆ ಬರಬೇಕೆಂದು ನಾನಾ ಕಾರ್ಯಗಳಲ್ಲಿ ಮಗ್ನರಾಗಿ ಬಹುವಿಧ ಯತ್ನಗಳನ್ನು ಮಾಡುವರು. ಅಂದು ನಳನ ಗುಣಗಾನ ಮಾಡಿ ನಿನಗೆ ಸಂತೋಷ ನೀಡಿದ ನಾನು ಹೇಗೆ ಈಗಿನ ಸುದ್ದಿ ಹೇಳಲಿ?

    ೪. ಹಂಸದ ಮಾತುಗಳನ್ನು ಕೇಳುತ್ತಲೇ ಸೆರಗಂಚನ್ನು ಹಿಡಿದ ಅವಳು ಸಮಚಿತ್ತಳಾಗಿಯೇ, ಸ್ತಂಭದಲ್ಲಿ ಕೈ ಊರಿ, “ಪರವಾಗಿಲ್ಲ, ಹೇಳು. ಸತ್ಯದಿಂದೇನು ಪಲಾಯನ?” ಎಂದಳು.
    ೫. ಹಂಸ ಹೇಳಿತು. ಬೇರೆ ಬೇರೆ ವಿಷಯಗಳ ಹಿಂದೆ ಜನರು ಓಡುವರು. ನಿನ್ನೆಯದು ಹಳೆದು. ಬೇರೇನಾದರು ಹೊಸದನ್ನು ಮಾಡುವ ಎಂದು ಹೇಳು ವಿನಾಶದಲ್ಲಿ ಹೊಸತನವನ್ನು ಹುಡುಕುವರು. ಇಂತಹವರು ನಿನ್ನ ಪ್ರಾಚೀನ ಕಥೆ ಸ್ಮರಿಸುವರೆ? ಸಕ್ಕರೆಯನ್ನು ಕೂಡಿಹಾಕುವುದರಲ್ಲಿ ನಿರತವಾದ ಇರುವೆ ಸೂರ್ಯನ ಮಹತ್ತ್ವದ ಬಗ್ಗೆ ಯೋಚಿಸುತ್ತದೆಯೇ?

    ೬. ಹಾಗೆಯೇ – ಪ್ರತ್ಯಕ್ಷವಾಗಿ ಆತ್ಮೀಯರನ್ನು ಕಾಣುವುದಿಲ್ಲ (ಫೇಸ್ ಬುಕ್ ಸಾಕು). ಕತ್ತೆತ್ತಿ ಒಬ್ಬರನ್ನೊಬ್ಬರು ನೋಡುವಿದಿಲ್ಲ (ಕೈಯಲ್ಲಿ ಹಿಡಿದ ಸೆಲ್ಫೋನ್ ಸಾಕು. ಅದಕ್ಕೆ ಸೂರ್ಯಕಾಂತಿಯಾಗಿರುವರು). ಪರಂಪರೆಯಿಂದ ತಮ್ಮಲ್ಲಿರುವ ಸರಸ್ವತಿಯನ್ನು ಮರೆತು ಮಿತಿಮೀರಿ ಲಕ್ಷ್ಮಿ ಚಪಲರು. ಹೀಗೆ ಏನೋ ಮಾಡುತ್ತಾ ಸೂರ್ಯನಲ್ಲಿ ಗುರಾಯಿಸುವರಾಗಿ (ಅಂಧರಾಗಿ) ಎಲ್ಲಿಗೋ ಹೋಗುತ್ತಾರೆ.

    ೭. ಹೀಗೆ ಹೇಳುತ್ತ, ಮತ್ತೆ ಸ್ಮರಿಸುತ್ತ ಹಂಸ ಕೋಪ ಮಾಡಿಕೊಂಡಿತು. (ಸೀರೆ ಬಣ್ಣ ಕಣ್ಣಲ್ಲಿ ಕಾಣಿಸಿತು).
    ೮. ಆಗ ಅವಳು, “ಭಯ ಪಡಬೇಡ. ಧೈರ್ಯದಿಂದಿರು. ಮತ್ತೆ ಹಾರಿ ಹೋಗಿ ಅವರು ಇಚ್ಛೆಪಡುವ ಸ್ಥಾನದಲ್ಲಿಯೇ ಅವರನ್ನು ಆಕರ್ಷಿಸು. ಅವರಲ್ಲಿ ಈ ಪರಿಯ ವಾಸನೆ ಅಡಗಿದೆ.” ಎಂದಳು.

    ೯. ಅದಕ್ಕಾಗಿಯೇ ಪರಿವಾರ ಸಮೇತವಾಗಿ ಹಂಸವು ಬಂದು ಸೆಲ್ಫೋನ್ ಗಳಲ್ಲಿ ಆಟದ ವ್ಯಾಜದಿಂದ ಕೂತಿದೆ!

  19. ಕಾಳಿತಾನಿಂತು ಭವತಾರಿಣಿಯ ರೂಪವನು
    ತಾಳಿ ಬಂದಳೆ ಪರಮಹಂಸನೆಡೆಗೆ ।
    ನೀಳಗೊಂಡಿರುವರುಣನಿರಿಸಿಹಳೆ ಚಂದ್ರನೊಡೆ
    ಮೇಳವಿಸುತನುಪಮದ ಹಂಸನಡಗೆ ।।

    (ಹೀಗೆರೆಡು ಸಿಂಪಲ್ ಕಲ್ಪನೆಗಳು – ಸರಳ ಚೌಪದಿಯಲ್ಲಿ .
    ಚಿತ್ರದ ಪರಮಸುಂದರಿ ದೇವಿಯೇ – ಹಂಸವು ಪರಮಹಂಸರು ಎಂಬಕಲ್ಪನೆ / ಅರುಣೋದಯ ಸಮಯದಲ್ಲಿ ಅರುಣ(ತರುಣಿ) & ಚಂದ್ರ(ಹಂಸ)ರನ್ನ ಒಟ್ಟಿಗೆ ಕಂಡ ಕಲ್ಪನೆ)

  20. This pic is a depiction of anti-gravity in operation.
    ನೀರಮೇಲ್ಮೈಯಲ್ತೆ ಪತ್ರತಾಣವು ನೋಡ-
    ಲೇರಿ ತಾನಿಲ್ಲಿಹುದು ಸೂಚಕಮನುಂ (parapet)|
    ಜಾರದೆಲೆ ತಾನಿಹುದುಮೆಡದ ಮಣಿಬಂಧದಿಂ
    ಕಾರುಬಳೆ ಖಂಡಿಸುತೆ ಗೌರವಮನುಂ (gravity)|| 🙂

  21. (ಇದು ಮಾತ್ರಾ ಮಲ್ಲಿಕಾಮಾಲೆಯಲ್ಲಿ ಒಂದು ಪ್ರಯತ್ನ)

    ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್
    ತಾಲಪತ್ರವ ತಂದಿಹಳ್ ದಮಯಂತಿಯಿನಿಯನ ನೆನೆದಿಹಳ್
    ಹಾಲಬಣ್ಣದ ಅಂಚೆವಕ್ಕಿಯ ಮೊಗದೊಳೇ ನಳ ಕಂಡಿರಲ್
    ಮಾಲೆ ಮಾಡುತ ಕಣ್ಣ ನೋಟಗಳಲ್ಲೆ ಕೊರಳಿಗೆ ತೊಡಿಸಿದಳ್

    (ನಳನನ್ನೇ ನೆನೆವ ದಮಯಂತಿಗೆ ಹಂಸ ಪಕ್ಷಿಯ ಬದಲು ನಳನೇ ಕಂಡಂತಾಗಿ, ಕಣ್ಣ ನೋಟದಲ್ಲೇ, ಆ ಹಂಸದ ಕೊರಳಿಗೆ ಮಾಲೆ ತೊಡಿಸಿದಳೆಂಬ ಭಾವದಲ್ಲಿ)

  22. || ಶಾರ್ದೂಲವಿಕ್ರೀಡಿತವೃತ್ತ, ಉಪಮಾಲಂಕಾರ ||

    ರೂಪಾಧಿಕ್ಯದ ತನ್ವಿ,ಸತ್ಕಲೆಗಳೊಳ್ ನೈಪುಣ್ಯಮಂ ಪೊರ್ದಿ ನೀಂ,
    ತಂಪಂ ಕಣ್ಗಳಿಗೀವವೋಲ್ ಸೃಜಿಸಿದಾ ವೃಕ್ಷಂಗಳಿಂ ಹಂಸದಿಂ,|
    ಸೊಂಪಾಗಿರ್ಪರವಿಂದಸನ್ಮುಕುಲದಿಂ ಪರ್ಣಂಗಳಿಂ ಶೋಭಿಸಲ್,
    ಶ್ರೀಪದ್ಮಾಂಬಿಕೆಯಂತೆವೋಲೆ ಪಟದೊಳ್ ರಾಜಿಪ್ಪ ಸೌಶೀಲ್ಯೆಯೌ ||

  23. ದಮಯ೦ತಿ ಬರೆದ ಓಲೆ ಎ೦ಥದು? ಹ೦ಸವನ್ನೇ ಭೋಜಪತ್ರದ ಮೇಲೆ ಕುಳ್ಳಿರಿಸಿದ್ದಾಳೆ. ಪತ್ರದ ಒಕ್ಕಣಿಕೆ ಏನು ಇತ್ಯಾದಿಗಳ ವರ್ಣನೆ…

    ಏನ ಬರೆವುದು ನಲ್ಲ ಕೇಳೈ
    ನಾನದೇನ ಪರಿಯಲಿ ತಿಳುಹಲಿ
    ಮೌನ ನೋಟದಲುಳಿದು ಕಾಗುಣಿತಗಳ ಕಲಕಲದಿ
    ಮಾನನಿಧಿಯಿದನೊಪ್ಪಿಕೊಳ್ವುದು
    ಮಾನಸದ ಮದ್ರಸರಸೌಘದಿ
    ಧೇನಿಸುವ ಸುಪ್ರೇಮದ೦ಚೆಯ ಸಾರಿ ಕಳುಹಿಹೆನು

    ಅಕ್ಕರಗಳಿಲ್ಲವಿದು ಪತ್ರದೊ-
    ಳಕ್ಕರೆಯ ಕಳಕಳಿಯಿಹುದಿದೋ
    ಠಕ್ಕುಠಾಕಿಲ್ಲದೊಲುಮೆಯ ತಿಳಿ ಬೆಳ್ಪಿನೊಳಗಿದರ
    ಕೊಕ್ಕಿನೊಳ್ರ೦ಜಿಸುವ ರಾಗವ
    ರೆಕ್ಕೆಯಲಿ ಕಾಣ್ ಕಲ್ಪನೆಯ ಗರಿ-
    ಯುಕ್ಕುತಿಹ ಪ್ರೇಮದೊರತೆಯ ಮೇಣ್ ಮೈಯ ತೇವದಲಿ

  24. ಅರರೆ ! ದಮಯಂತಿ ನೀಂ ನಳಂಗಾಗಂಚೆಯಲಿ
    ಪರಿಪರಿಯ ಸಂದೇಶ ಕಳುಹಿಸುವೆಯೇಂ?
    ಅರಿಯದಿರೆ ಹಂಸೆಯುಂ ನಿನ್ನ ಪದಪುಂಜಗಳ
    ಸರಿಮಾಡುತಿರುವೆಯೇಮುಚ್ಚಾರವಾ?

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)