May 182015
 

ಗಾಂಧಾರಿಯ ಪಾತ್ರದ ಯಾವುದಾದರು ಪ್ರಸಂಗವನ್ನು ಕುರಿತು ಕಥನ ಕವನ ರಚಿಸಿರಿ.

ವಿ. ಸೂ: ಮುಕ್ತಕಗಳನ್ನು ಕೂಡ ಹಂಚಿಕೊಳ್ಳಬಹುದು

  69 Responses to “ಪದ್ಯಸಪ್ತಾಹ ೧೫೧: ಕಥನ ಕವನ”

  1. ಬಟ್ಟೆಯಂ ಬಿಗಿದೆಯೌ ಕಂಗಳ್ಗಮಂತೆಯೇ
    ಬಟ್ಟೆಯಂ ಬಿಗಿದೆಯೇಕೌ ಅರಿವಿನಾ|
    ಕಟ್ಟೆಯಂ ಕಟ್ಟಿದೌ ದಿಟ್ಟಿ ಸಾಗದ ರೀತಿ
    ಕೆಟ್ಟೆಯಲ ತಾಯೆ! ಶಪಿಸುತೆ ಗುರಿಯನೇ!!

    (ಇಲ್ಲಿ ಗುರಿ ಎಂದರೆ ಶ್ರೀಕೃಷ್ಣ ಎಂದು ತಾತ್ಪರ್ಯ)

    • ಚೆನ್ನಾಗಿದೆ ಸರ್, ನಿಮ್ಮ ಐಡಿಯಾ ಇಂದ ಕೆಳಗಿನ ಪದ್ಯ ಬರೆಯುವ ಪ್ರೇರಣೆಯಾಯಿತು

  2. ಕಡೆಗುಂ ಶ್ಯಾಮಲಮನೆ ನೀಂ
    ತೊಡುತುಂ ತಾಮಸಿಕ ಬಾಳ್ಮೆಯೊಳೆ ಸುಯ್ದೆ, ಮನಂ
    ಕಡೆಗಣಿಸಿದೊಡಂ ಶ್ಯಾಮನ
    ಪಡೆದುದದೇನೌ? ಕುಪುತ್ರಸಂತತಿ ನಾಶಂ!

  3. ಸರ್ ಗೆ ಒ೦ದಾಯಿತು, ಸೋಮರಿಗೊ೦ದಾಯಿತು ಎ೦ಬ ಮತ್ಸರಕ್ಕೆ ಒಳಗಾಗಿ ಬಗೆಬಗಿದುಕೊ೦ಡು ಏಕಕಾಲಕ್ಕೆ ಎರಡನ್ನು ಹೊರತ೦ದೆ 🙂

    ಜೊತೆಯಿರ್ಪ೦ದ೦ ಗಡ ಮೂ-
    ರ್ಖತೆಯಜ್ಞಾನಕ್ಕಮಾದೆ ನೀ೦ ಧೃತರಾಷ್ಟ್ರ೦-
    ಗತಿಸಹಜಮಿದೌ, ಜನ್ಮಾ೦-
    ಧತೆಯೊ೦ದು, ತಿಳಿತಿಳಿದಪ್ಪಿದ೦ಧತೆಯೇಕೌ?!

    ಬೆಳಕ೦ ಕಾಣದೆಯಿರ್ಪನ೦ಬಿಕೆಯ ಪುತ್ರ೦ ಕ೦ಡು ನೀನೊದ್ದೆಯೌ
    ಕುಲದೀಪರ್ಗದು ಕಳ್ತಲಾಗಲಕಟಾ, ಪುತ್ರರ್ ಗಡಿ೦ತಾಗುವರ್
    ಖಳರ೦ ನೋಳ್ಪುದನೊಲ್ಲದೇ ಬಿಗಿದೆಯೇ೦ ಕಣ್ಗಳ್ಗೆ ನೀ೦ ಬಟ್ಟೆಯ೦?
    ತಿಳಿಯಲ್ಬಾರದು ನಿನ್ನ ಮೋಹಮೆನಲೇ೦ ಪಾಲ್ಪೀರ್ವ ಮಾರ್ಜಾಲದೊಲ್?

  4. ಮತ್ತೆರಡು…

    ಒಡಲೊಳ್ ಪುಟ್ಟಿದವರ್ ಕುಲಾರ್ಕರೆನೆ ಕೆಟ್ಟರ್ ಬಟ್ಟೆಯ೦ ಬಿಟ್ಟು ತಾವ್
    ಕಿಡಿಗಳ್ ಸಾರ್ದು ಕಿಡಲ್ ಯುಧಿಷ್ಠಿರನಖ೦ ನೀ೦ ಬಿಟ್ಟೊಡ೦ ಬಟ್ಟೆಯ೦
    ನುಡಿದಿರ್ಕು೦ ಬಗೆಯೆನ್ನದೀಯೆರಡನು೦ ಗಾ೦ಧಾರಿ ತಾಯ್ ನೀನಿರಲ್-
    ಕುಡುತಿರ್ದೆ ತ್ವದಧೀನಮಾಗೆ ಸಕಲ೦ ಕಣ್ಕಟ್ಟದಿರ್ದಾದೊಡ೦

    ನೋಡಲ್ಕೊ೦ದು ಮೊಗ೦ ಮಾ-
    ತಾಡಲ್ಕೊ೦ದು ಮನಮಿರ್ದೊಡ೦ ಭಾವ೦ಗಳ್
    ಕೇಡಿರದೆ ಪ್ರವಹನಗೊ೦-
    ಡಾಡಲ್ ನೋಳ್ಪ ನುಡಿಯಾಡುವ ಕಲೆಯುಳಿದೆಯೌ

  5. ಮಗುದೊ೦ದು…

    ಬಲದಿ೦ದಲ್ತೆ ವಿವಾಹಮಾದೆ ವಿಕಲಾಕ್ಷ೦ಗ೦ ಸ್ವಗರ್ಭಾ೦ಕುರ೦-
    ಗಳನು೦ ಮೇಣ್ ಬಲದಿ೦ದೆ ನೀ೦ ಕೆಡೆದೆಯೌ ವೈಚಿತ್ರ್ಯಮೇನಿರ್ಪುದೀ
    ಕುಲಪುತ್ರರ್ ಗಡತೀವಮೋಹಬಲದಿ೦ದ೦ ವೃದ್ಧಿಯ೦ ಪೊ೦ದಲೇ-
    ನೊಲವ೦ ಕಲ್ತು ಗಡಾರೊಳೇನೊಲವನು೦ ತೋರ್ದರ್ ಬಲಾ೦ಧರ್ ಖಳರ್

  6. ಮಹಾಭಾರತಕಥಾಂತ್ಯದಲ್ಲಿ ಗಾಂಧಾರಿಯು ಕಣ್ಬಟ್ಟೆಯನ್ನು ಬಿಚ್ಚಿದ್ದ ಕಾಲ:
    ಧೃತರಾಷ್ಟ್ರಂ ಸತಿಯೊಂದಿಗೊಂದುದಿವಸಂ ಸಲ್ಲಾಪಿಪಾಗೊಮ್ಮೆಗೇ
    ಅತಿಯಾಗಲ್ ಜಲಬಾಧೆಯಾಗ ಕರೆದನ್ ಯಾವಾಗಿನಾ ದಾಸಿಯಂ|
    ಸತಿ ಎಂದಳ್ “ನಡೆ ನಾ ಬಹೆಂ ಗಡ ಬಹಿರ್ದೇಶಕ್ಕಮೇಕೀಗವಳ್?”
    ಧೃತರಾಷ್ಟ್ರ ಉವಾಚ:
    “ದ್ಯುತಿಯಲ್ತೇಂ ಭವದಕ್ಷಿಯೀಗಳದರಿಂ ನೀ ಬೇಡ ಸೈ ದಾಸಿಯೇ||”
    – ಶ್ರೀ ಎಸ್. ಎಲ್. ಭೈರಪ್ಪನವರ ’ಪರ್ವ’ದಿಂದ 😀

  7. ಭಾಮಿನಿ ಷಟ್ಪದಿಯಲ್ಲೊಂದು ಪ್ರಯತ್ನ:

    ಕೆಟ್ಟ ಹಣೆಬರಹವಿರಲೇನದು
    ಸುಟ್ಟ ಮೋರೆಯ ಕುರುಡುಗಂಡನ
    ನೆಟ್ಟ ನೋಟದಿ ನೋಡೆನೆನ್ನುವ ಮುಡಿವು ತಾಳುತಲಿ
    ಕಟ್ಟಿಕೊಂಡಳು ಕಣ್ಣುಗಳ ತಾ-
    ನುಟ್ಟ ಸೀರೆಯ ಸೆರಗಿನಲಿ ತಂ-
    ದಿಟ್ಟ ವಿಧಿಯನು ಮನದೊಳಗೆ ಗಾಂಧಾರಿ ಹಳಿಯುತಲಿ

    ಎಲ್ಲರಿಗೂ ಗೊತ್ತಿರುವ ಸಂಧರ್ಭವೇ. ಮದುವೆಯು ಧೃತರಾಷ್ಟ್ರನ ಜೊತೆ ನಡೆಯುತ್ತದೆಂದು ಕೇಳುತ್ತಲೇ ಅವನನ್ನು ನೋಡೆನೆನ್ನುವ ಭಾವವನ್ನು ತಾಳುತ್ತಾ ( ಅವನಿಗೆ ಇಲ್ಲದ ದೃಷ್ಟಿ ತನಗೆ ಬೇಡವೆಂದು ಅಲ್ಲ!), ಸೆರಗು ಹರಿದು ಪಟ್ಟಿ ಕಟ್ಟಿಕೊಂಡಳು.

    (ಇದು ಭೈರಪ್ಪನವರ ಪರ್ವದ ಗಾಂಧಾರಿಯ ಚಿತ್ರಣವನ್ನು ಹೋಲುತ್ತೆ ಅಂತ ಇಟ್ಟುಕೊಳ್ಳಬಹುದು)

    • ಚೆನ್ನಾಗಿದೆ. ಕುರುಡುಗ೦ಡ ಸರಿಯೆ? ಕುರುಡ ಎನ್ನುತ್ತೇವಲ್ಲ. ಕುರುಡುಗಣ್ಣು ಸರಿ.

    • ಕಣ್ಣೆರಡು ದೃಷ್ಟಿಹೀನಮದಿದ್ದೊಡೇನು ಬಲ್
      ಹಣ್ಣಾದ ಬುದ್ಧಿಯಿದ್ದೊಡೆ ಸಾಲದೇಂ?
      ನಾಣ್ಣುಡಿಯ ’ಕಣ್ಣಾಗು ಮೆಯ್ಯೆಲ್ಲ’ಮಂ ಮೀರಿ
      ಕಣ್ಣೆಲ್ಲಮಂ ಮುಚ್ಚೆ ’ಕುರುಡುಗಂಡಂ’||

      • ಕಣ್ಣೆರಡು ಕಮಲಗಳ೦ತೆ, ಮು೦ಗುರುಳು ದು೦ಬಿಗಳ೦ತೆ…. ನೆನಪಾಯಿತು 🙂

  8. ಕುರುಕುಲದ ಸೊಸೆಯಾಗಿ ಗಾಂಧಾರ ದೇಶದಿಂ
    ಕರುಣಾಳು ಗಾಂಧಾರಿವಂದಿರ್ದೊಡಂ,
    ಕುರುಡುಪತಿ ಧೃತರಾಷ್ಟ್ರನನುಕರಿಸುತೊಲ್ಮೆಯಿಂ
    ಕುರುಡಾದಳೇಂ ಋತಕೆ,ವಿಧಿಯಿಲ್ಲದೇ

    • ಲೆಕ್ಕಿಸಲ್ ಕುರುಕುಲದನ್ ಆನುಂ
      ಪಕ್ಕೆಗಳೊಳಗೆ ಹಿಂದುಮುಂದುಂ
      ಪಕ್ಕದಾಗಿಹೆ ವಾರದಿಂ ಬಲ್
      ಚಿಕ್ಕಚಿಕ್ಕ ಕುರುಗಳಿಗಂ||

  9. ಪೆತ್ತಳೇನ್ಕೊಂತಿಕಾನನದೊಳ್ಸು ಪುತ್ರನಂ?
    ಸತ್ತಪಂ ಪಾಂಡು ತಾಂ ಕೂಡಲ್ ಸಪತ್ನಿಯೊಳ್
    ಮಿತ್ತುಗೊಂಡಿಲ್ಲನವನಂ ಪಾದರದ ಹುಟ್ಟೊ ಮೇಣ್ ದೈವಗಳ್ ಪೊರೆದುವೋ?
    ಪೊತ್ತು ಕಣ್ಮಿಂಚಿ ಪೋಯ್ತರಮಗನನೆನ್ನೊಡಲು
    ಪೆತ್ತುಕಾಣ್ದುದುದಿಲ್ಲ ದೊರೆಯಾಳ್ತನಂ ಪೋಯ್ತು
    ಬತ್ತಿತೇಂ ಬಸಿರೆನ್ನದಿರ್ಕಣ್ಗಳಂತೆವೊಲ್, ರಿಸಿ ಕೊಟ್ಟನಿಲ್ಲ ಗರ್ಭಂ

    ಧೃತ ರಾಷ್ಟ್ರ : ” ಪೆತ್ತಳೇನ್ ಕೊಂತಿ ಕಾನನದೊಳ್ ಸುಪುತ್ರನಂ..?”
    ಗಾಂಧಾರಿ : “ಸತ್ತಪಂ ಪಾಂಡು ತಾಂ ಕೂಡಲ್ ಸಪತ್ನಿಯೊಳ್.!!”
    ಧೃತರಾಷ್ಟ್ರ : “ಮಿತ್ತುಗೊಂಡಿಲ್ಲನವನಂ!”
    ಗಾಂಧಾರಿ : “ಪಾದರದ ಹುಟ್ಟೋ..?”
    ಧೃತರಾಷ್ಟ್ರ : “..ಮೇಣ್, ದೈವಗಳ್ ಪೊರೆದುವೋ…?.. ಹೊತ್ತು ಕಣ್ಮಿಂಚಿ ಪೋಯ್ತ್!”.
    ಗಾಂಧಾರಿ : “ಅರಮಗನಂ ಪೆತ್ತು ಕಾಣ್ದುದುದಿಲ್ಲ ಈ ಒಡಲ್”.
    ಧೃತರಾಷ್ಟ್ರ : “ದೊರೆಯಾಳ್ತನಂ ಪೋಯ್ತು..”
    ಗಾಂಧಾರಿ : ಬತ್ತಿತೇಂ ಬಸಿರೆನ್ನದು ಇರ್ಕಂಗಳಂತೆವೊಲ್ ?..
    ಧೃತರಾಷ್ಟ್ರ : (ಸಿಟ್ಟಿನಿಂದ) ರಿಸಿ ಕೊಟ್ಟನಿಲ್ಲ ಗರ್ಭಂ!.

  10. ಯುಧಿಷ್ಠಿರನ ಉಗುರುಗಳು ಸುಟ್ಟ ಸ೦ದರ್ಭ…

    ತು೦ಬಿರ್ದೊಳಗುದಿಯ ಕಳವಳದಿಣುಕಾಸೆಗಳ
    ಹೊ೦ಬಿಸಿಲು ಸೋ೦ಕದಿಹ ಮನದ ಶಾ೦ತಿಯ ತ೦ಪಿ-
    ಗಿ೦ಬಿರದ ಬಗೆಬಗೆಯ ದುಗುಡಗಳ ಕೆಸರೆದ್ದ ಬಗೆಯ ಗಾ೦ಧಾರಿ ತನ್ನಾ
    ಕ೦ಬನಿಗಳಿ೦ದರಮನೆಯ ವಿಗತಸ೦ಭ್ರಮಗ-
    ಳ೦ಬುಧಿಯ ವೇಲಾಕುಲಕ್ರೀಡೆಯಡಗಿರ್ದ
    ತು೦ಬಿರದ ನೀರ ಗರ್ತವನು ತು೦ಬುವಳೆ೦ಬ ತೆರದಿ೦ದೆ ಬಿಕ್ಕುತಿರಲು

    ಅಳುಕಿನಿ೦ದೊಳಹೊಕ್ಕನಮಲಾ೦ಗ ಧರ್ಮಜನು
    ಸುಳುಹಿರದ ಮೆಲ್ಲಡಿಯ ನಡೆಯೊಳಗೆ ಜೊತೆಗೂಡಿ
    ನಳಿನಮುಖಿಯಗ್ನಿಜೆಯ ಭೀಮಾರ್ಜುನರ ಮಾದ್ರಿಯರ್ಭಕರ ಕೆಲಬಲದಲಿ
    ಬಲವನೂಡುತೆ ಮತಿಗೆ ಪ೦ಚೇ೦ದ್ರಿಯ೦ಗಳಿಗೆ
    ಸಲುವ ಜೀವಾತ್ಮನ೦ದದಲಿದ್ದ ಮು೦ಬದಿಗೆ
    ನಲಿವಳಲುಗಳ ಗೆಲುವುಸೋಲುಗಳಿಗ೦ಟಿರದ ನಳಿನಮುಖ ಶೌರಿಯೊಡನೆ

    ಮಣಿಯದಿಹರಾರಳಲಿಗೀ ಜಗದೊಳೆ೦ಬವೊಲೆ
    ಮಣಿದರಾ ಘನದುಃಖವಿಗ್ರಹದ ಪಾದವಿಡಿ-
    ದೆಣಿಸದಲೆ ಪಿರಿಯಬ್ಬೆಯೊಡಲ ಕಡಲ ಬಡಬಾನಲದ ಕಟ್ಟುಗ್ರತೆಯನು
    ವ್ರಣವನುಪ್ಪಿನ ಕೈಲಿ ಮುಟ್ಟಿದ೦ತಾದುದುಲ-
    ವನಿಪನ ವೆರಲ್ ಸೋ೦ಕೆ, ಹೊಟ್ಟೆಯುರಿ ಭುಗುಭುಗಿ-
    ಲ್ಲೆನಲುಕ್ಕಿ ಕಿಡಿಬೀಳೆ ಸೀದು ಕಪ್ಪಿಟ್ಟವಾ ಬೆರಳುಗುರ ಪಲ್ಲವಗಳು

    ಹಾಲಾಹಲವ ಹೀರಿದ ಹರನ ಕೊರಳ ಕಪ್ಪೊ,
    ಹಾಲ ಬೆಳಕೂಡಿ ಕತ್ತಲೆಯ ನು೦ಗಿದ ಶಶಿಯ
    ಕಾಲವರ್ಣದ ಮಚ್ಚೆಯಿದೊ, ಬಸಿರ ಕಿಚ್ಚ ಕೊಚ್ಚೆಯನು ತೆಗೆದೊಗೆದ ಕೊಳೆಯು
    ಭೂಲಲಾಮನ ತುದಿವೆರಲಿಗ೦ಟಿದ೦ತೆ ದು-
    ರ್ಲೀಲೆಯಾದುದು ನಸುವೆ ದೃಷ್ಟಿಪಾತದಲಿ ಕ-
    ಣ್ಣಾಲಿಗಳು ಹೊರಳೆ ನೆಲದೆಡೆ ಬಿಗಿದ ಬಟ್ಟೆಯ೦ಚಲಿ ನೋಡೆ ಗಾ೦ಧಾರಿಯು

    (ಇಷ್ಟು ದಿನ ಬರಿ ಮುಕ್ತಕಗಳನ್ನು ಬರೆದು ರೂಢಿಯಿದ್ದು, ಈಗ ಕಥನಕವನ ಬರೆವ ಕಷ್ಟದ ಅರಿವಾಯಿತು. ಘಟನೆಯ ಒ೦ದು ಜಾಡನ್ನು ಹಿಡಿದು ಅದರಲ್ಲೇ ಅಲ೦ಕಾರ ಎಲ್ಲ ಮಾಡುತ್ತ ಮು೦ದುವರಿಯುವುದು ಒ೦ದು ರೀತಿ trecking ಮಾಡಿದ ಅನುಭವ ಕೊಟ್ಟಿತು 🙂 ಸೋಮರಿಗೆ ಧನ್ಯವಾದಗಳು)

  11. ಆಹಾ! ನೀಲಕಂಠ, ಹೃದಯರಾಮ, ಹಂಸಾನಂದಿ, ಕಾಂಚನ, ಪ್ರಸಾದು, ಸೋಮ ಮುಂತಾದವರೆಲ್ಲರ ಕವಿತೆಗಳನ್ನು ಕಂಡು ನಿಜಕ್ಕೂ ಮನಸ್ಸು ಮೋದಾರ್ಣವದಲ್ಲಿ ತೇಲಿದೆ. ಮುಖ್ಯವಾಗಿ ಹೃದಯರಾಮರ ಸಂವಾದಸೌಂದರ್ಯವನ್ನು ಹೂಮ್ಮಿಸಿದ ಪದ್ಯವೂ ನೀಲಕಂಠರ ಗುಣ-ಗಾತ್ರ-ವೈವಿಧ್ಯಮಯಪದ್ಯಪುಂಜಗಳೂ ನನಗೆ ತುಂಬ ಪ್ರಿಯವಾದುವು. ನಿಜ, ಹಲಕೆಲವರ ಪದ್ಯಗಳಲ್ಲಿ ಅಲ್ಲೋ ಇಲ್ಲೋ ಹಲಕೆಲವು ಲೋಪದೋಷಗಳು ಸುಳಿದಿವೆ. ಆದರೆ ಇವುಗಳ ಪ್ರಮಾಣ ಗೌಣ. ಮುಖತಃ ಸಿಕ್ಕಾಗ ಆಯಾ ಮಿತ್ರರಿಗೆ ವಿಸ್ತರಿಸುವೆ. ಮುಖ್ಯವಾಗಿ ಮೆಚ್ಚುಗೆಯನ್ನಂತೂ ಮನಬಿಚ್ಚಿ ಹೇಳಬೇಕು.

    • Thank you sir!

    • ನೀಲಕಂಠರದಾಯ್ತು, ಇನ್ನು ಸರದಿಯೊಳಿಹರು
      ಗೋಲದಾಚೆಯೊಳಿರ್ಪ ಹೃದಯರಾಮರ್|
      ಮೌಲಿನತರಾಗೆ ಹಂಸಾನಂದಿ-ಕಾಂಚನರ್
      ಕಾಲಿಗೆರಗುವೆವಾಗ ರಂಪ-ಸೋಮರ್||

    • ಧನ್ಯವಾದ ಆತ್ಮೀಯರೇ..

  12. ತಾನಿ೦ತು ರಣ೦ಬುಗುವ ಸನ್ನಾಹ೦ಗೈದು ಸೇನಾಮುಖರ್ಗಣಿಯಾಗಿರಲ್ ನೇಮಿಸಿ, ತಾಯ ಮೊಗವನ್ನೊಮ್ಮೆ ಕ೦ಡು ಪಾದಕ್ಕರಗಿ ಶುಭಾಶಿಷ೦ಗಳ೦ ಪೊತ್ತು ಬರ್ಪುದೆ೦ದೆನುತೆ ಸುಯೋಧನ೦ ಗಾ೦ಧಾರಿಯಿರ್ದೆಡೆಗೈತರಲು, ಆತನ ಪದ೦ಗಳ ಸ೦ಘಟ್ಟರವದಿ೦ದಲೆ ಮಗನ ಬರವ ತಿಳಿದಾಕೆ ಬಾ ಎ೦ದಪ್ಪಿ ಮು೦ದಲೆಯ ನೇವರಿಸಿ ಕಾಣದಾವುದೋ ಬೆಳಕ ತುಣುಕಿಣುಕುವ ಭಾಸದೊಳಾಸೆಯ೦ ಮಗುಳೆ ಮಿಗೆ ಕ೦ಡು, ಎದೆಯೊಳಗೆ ತು೦ಬಿರ್ದ ಮಾತುಗಳ ಪೊರದೆಗೆದು,

    ಕುವರ, ಕಿವಿಗುಡೈ, ಕೇಳ್, ಆರಿಗೇ೦ ಸಲ್ವುದಿರ್ಕು೦
    ಲವದನಿತನುಮಾರು೦ ಬಚ್ಚಿಡಲ್ಕಾಗದೈ ನೀ೦
    ಸವಿನಯಮೆನೆ ನೀಡೈ ಭಾಗಮ೦ ಪಾ೦ಡವರ್ಗ೦
    ಸುವಿಹಿತಮನೆ ಬಾಳೈ, ಎ೦ದು ಗಾ೦ಧಾರಿಯೆ೦ದಳ್

    ಎತ್ತೆತ್ತಲು೦ ಪೊರಳ್ದೊಡ-
    ಮತ್ತತ್ತಲೆ ಗು೦ಯ್ಗುಡುತ್ತೆ ಬಹ ಸೊಳ್ಳೆಯವೋಲ್
    ಒತ್ತುವುದೀ ಮಾತೆನುತು೦
    ಕತ್ತೆಗೆ ಪಾಳ್ಗೋಡೆಯೆ೦ಬ ತೆರದಿ೦ದೆ೦ದ೦

    ಸ೦ಧಾನಕ್ಕೊಪ್ಪದಿರ್ಪೆ೦ ಬಲುಹಿನೊಳೆ ಗಡಾ೦ ಪಾ೦ಡುಪುತ್ರರ್ಗಮೆ೦ದು೦
    ಬಾ೦ಧವ್ಯಕ್ಕೆ೦ದು ನೀಡೆ೦ ತುಣುಕುನೆಲಮನು೦ ಬರ್ಪುದೇನಾದೊಡೇನೌ
    ಸಿ೦ಧುತ್ವ೦ ಸಲ್ವುದೀಗಳ್ ಕದನದ ಕಣದೊಳ್ ವೀರಗ೦ ಯುದ್ಧಮಲ್ತೇ೦
    ಸ್ಕ೦ಧ೦ಗಳ್ಗೆ ಪ್ರತಾಪ೦ ಸಹಜಗುಣಮೆನಲ್ ಜೈಸಲೆ೦ದೆನ್ನ ಪಾಡೌ

    ಧರ್ಮಜನ ಕೂಡೆನಲು ಯಮ-
    ಧರ್ಮನ ಕೂಡುವೊಡೆ ಸಲ್ವ ನುಡಿಯೊಡೆದಿರ್ಪ೦
    ಧರ್ಮವನೆ ನಾ೦ ಗಡರಿಯೆನ-
    ಧರ್ಮವನು೦ ಶಿವ ಶಿವಾಯೆನುತೆ ಕಣ್ಗೆಡುತು೦

    ಬಿಸಿಯುಸಿರಿಟ್ಟು ಕಣ್ಬಿಗಿದ ಬಟ್ಟೆಯ ತೋಯಿಸೆ ಕಣ್-ಕಣ೦ಗಳೇ-
    ನೆಸಗಿದೆನೋ ಪುರೋಭವಿತ ಜನ್ಮದೊಳಾ೦ ಕುಟುಕುತ್ತುಮಿರ್ಪುದೈ
    ಬಸಿರ ಕರುಳ್, ಕೆಣ೦ಕುತಿರೆ ನೀತಿನಯ೦ಗಳ ಬುದ್ಧಿ, ದೇವ ನೀ-
    ನೆಸಗಿದ ರೀತಿಯೆ೦ದು ಜಯಮಕ್ಕೆ ಕಣಾ ನಿಜಧರ್ಮಕೆನ್ನುತು೦

    ಬೀಳ್ಗೊಟ್ಟು ಮಗನನಿತ್ತಲ್
    ಬಾಳ್ಗುಡದ ದುಗುಡದ ಕಡಲ ನಡುವಡಸುತ್ತು೦
    ಬೆಳ್ಗೊಡೆಯಾಸೆಯಿದು ಗಡಾ
    ತಳ್ಗುಮಿದೆತ್ತಣಕೆನುತ್ತೆ ಮರುಗುತ್ತಿರ್ದಳ್

    • ಆ ಗದ್ಯಮೊ! ಮೇಣಿನ್ನಾ-
      ಗೀಗಳ್ ಗುಂಯ್ಗುಡುವ ಪದ್ಯಪಾಟವಮದುಮೋ!
      ಬೀಗಿದು ನೀಸಲ್ ನಮ್ಮಿಂ-
      ದಾಗದು, ಭಗ್ನೋದ್ಯಮಂ ದಿಟದಿನಿದು ಕೇಳೈ||

      • ಧನ್ಯವಾದಗಳು! ರ೦ಪಪಾಟವಮನಾ೦ (ರ೦ಪಾಟಮನಾ೦) ಕ೦ಡಿಲ್ಲವೇ?!! 🙂

    • ಪ್ರಿಯ ನೀಲಕಂಠರೇ! ನಿಮ್ಮ ಚಂಪೂಖಂಡವು ತುಂಬ ಪ್ರೌಢವಾಗಿದೆ; ಅರ್ಥಭರಿತವಾಗಿದೆ. ಆದರೆ ಅಲ್ಲಲ್ಲಿ ಸ್ವಲ್ಪ ಹಳಗನ್ನಡದ ಹಾದಿಯಿಂದ ಜಾರಿದೆ. ದಯಮಾಡಿ ಸವರಿಸಿಕೊಳ್ಳಿರಿ,ಅಭಿನಂದನೆಗಳು.

  13. ಕುದಿಯೊಡಲಂ ಕಿವುಚಂತು ಶ-
    ತ ದುರುಳರಂಪೆತ್ತುವಿಂತು ಕುರುಡನರಸಿ ತಾಂ ।
    ಹದಿಬದೆಯುಂ, ಕಣ್ಕಟ್ಟೆ ಬಿ-
    ಗಿದರಿವೆಯೊಳ್ ಪಿಡಿಯೆ ನೀತಿ ತಕ್ಕಡಿ ತರವೇಂ ?

    “ತಕ್ಕಡಿ” ತಕ್ಕಪದವೇ ?!

    • ತಕ್ಕಡಿ ಪದವು ಅಯುಕ್ತವೇನಲ್ಲ. ಆದರೆ ಮತ್ತೂ ಹಲವೆಡೆ ಸ್ವಲ್ಪ ತಿದ್ದಿಕೊಳ್ಳಬೇಕಿದೆ. ನೀತಿ ತಕ್ಕಡಿ ಎಂಬುದು ನಯದ ತುಲೆಯಂ ಎಂದು ತಿದ್ದಿದರೆ ಒಳಿತು.

      • ಧನ್ಯವಾದಗಳು ಗಣೇಶ್ ಸರ್, ನನಗೂ ಸಮಾಧಾನ ವಿರಲಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಗಾಂಧಾರಿ “ನ್ಯಾಯ ದೇವತೆ”ಯಾದಳೇ ?ಎಂಬ ಜಿಜ್ಞಾಸೆಯನ್ನ ಪದ್ಯದಲ್ಲಿ ತರಲಾಗಲಿಲ್ಲ. ಆದಿಪ್ರಾಸ ಹೊಂದಿಸುವುದೇ ಕಷ್ಟವಾಗಿ
        ಚಂಪಕ ಮಾಲೆ – “ಕಂದ”ವಾಯಿತು. ಸರಿಪಡಿಸಿಕೊಳ್ಳುವೆನು.

    • ಉಷಾ ಮೇಡಮ್, ನಿಮ್ಮ ಕಲ್ಪನೆ ತು೦ಬ ಹಿಡಿಸಿತು. ಕವನಕುತೂಹಲದಿ೦ದ ನಿಮ್ಮ ಬಯಕೆಯ ಕಲ್ಪನೆಯನ್ನು ನೀವು ಬಯಸಿದ್ದ ಆದಿಪ್ರಾಸ, ಚ೦ಪಕಮಾಲೆಯಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. ಇಷ್ಟವಾದರೆ ನನಗೊ೦ದು ಚ೦ಪಾಕಲಿ 🙂

      ಕುದಿಯೊಡಲ೦ ತಡ೦ಕಿ ನಮೆಸುತ್ತಿರೆ ಮೋಹಮದೊ೦ದು ಪಕ್ಕೆಯೊಳ್
      ಪುದು ಮರನ೦ ಕುಟು೦ಕುವ ತೆರ೦ ಮಗುದೊ೦ದೆಡೆ ಲೋಕನೀತಿಗಳ್
      ಬಿದಿ ಬಗೆದಿರ್ಪ ಸ೦ಚೊ ಮಥಿಸುತ್ತೆಸಗಿರ್ದುದೊ ಲೋಕರೂಢಿಯೋ
      ಹೊದೆ ಹೊದಿಸಿರ್ದ ದೃಷ್ಟಿಯೊಳೆ ತೂಗುತುಮಿರ್ದಳೆ ಧರ್ಮತೋಲಮ೦?!

      • “ಚಂಪೂಕಲಿ”ಗೆ “ಚಂಪಾಕಲಿ”ಯ ಬಯಕೆಯೇ ?!!
        ನೀಲಕಂಠ, ನಿನ್ನ ಈ ಪರಿಯ ಕಾವ್ಯೋತ್ಸಾಹ ಅಚ್ಚರಿ ಮತ್ತು ಆನಂದ ತಂದಿದೆ. ನನ್ನ ಕಲಿಕೆಗೂ ಸಹಾಯಕ(ಸ್ಪೂರ್ತಿದಾಯಕ)ವಾಗಿದೆ. ನಿನ್ನ ಈ ಸುಂದರ ಚಂಪಕಮಾಲೆಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದ್ದೇನೆ. ಧನ್ಯವಾದಗಳು ಮತ್ತು ಶುಭ ಹಾರೈಕೆಗಳು.

        • ಕಲಿತನದುರ್ಕೆನಗಿಲ್ಲೌ
          ಕಲಿತೆನಿದೆಲ್ಲಮನೆ ನಾನವರಿವರೊಳೀಸೀ-
          ಸೊಲುಮೆಯೊಳೆ ನಿಮ್ಮವೋಲಿ-
          ರ್ಪೊಲುಮೆಯನೆಲ್ಲೆಡೆಗೆ ಚೆಲ್ಲುತಿರ್ಪರೊಳೆ ದಿಟ೦

          ಹಾರೈಕೆಗೆ ಧನ್ಯವಾದಗಳು 🙂

        • ಉಷಾರವರೆ, ನನಗೂ ಇದಕ್ಕೂ ಸಂಬಂಧವಿಲ್ಲ.

          • ಪ್ರಸಾದ್ ಸರ್,
            ದೇವರಾಣೆಗೂ ನಿಮ್ಮನ್ನು ತರುವ ಉದ್ದೇಶವಿರಲಿಲ್ಲ. ಪ್ರಸಾದದಲ್ಲಿ “ಸಂಪಿಗೆ ಹೂ” ಸಿಕ್ಕಷ್ಟು ಆನಂದದ ಅಭಿವ್ಯಕ್ತಿ ಅಷ್ಟೆ. ಅದರೂ ನೀವು ಪದ್ಯಪಾನದ “ಕೆಂಡ ಸಂಪಿಗೆ”ಯೇ ಬಿಡಿ !!

  14. ಯುದ್ಧಾನಂತರ ಗಾಂಧಾರಿಯ ಭಾವನೆಗಳು

    ಕುಂತಿಯ ಬಗ್ಗೆ:
    ———
    ಕುಂತಿಯಣುಗರನಪಾಯದೆ
    ‘ಚಿಂತಸದಿರ್ ತಾಳ್ಗು’ಮೆಂದುಲಿದುಲಿಪಳಲ್ತೇ
    ಸ್ವಂತದ ಹಾನಿಯ ತಾಳ್ಪಳೆ
    ಶಾಂತಿಯದೆಂತು ಶತಪುತ್ರನಾಶದೆ ವಿಧಿಯೇ

    ಒರ್ವರನೊರ್ವರ್ ಪರಿಕಿಸೆ
    ಸರ್ವವಿಧದೊಳಾನೆ ಕುಂತಿಗುಂ ಮಿಗೆಯಕಟಾ
    ನೂರ್ವಗೆಯಾಯ್ತಾತುರದೆ ಬ-
    ಸಿರ್ವೊಂದಿರಲಯ್ವರಂ ಗೆಲದೆ ಪೋಪೆನೆ ಹಾ

    ದ್ರೌಪದಿ
    —–
    ದುರ್ಯೋಧನನಲ್ತು ಶಕುನಿ-
    ಸೂರ್ಯಜರಲ್ತು ಶತಸೂನುನಿಕರಮದಲ್ತು-
    ಕ್ರೌರ್ಯಕೆ ಗುರಿ ನಿನ್ನಾಣ್ಮರ
    ಶೌರ್ಯಕೆ ಗುರಿಯಾನೆ ಕೃಷ್ಣವರ್ತ್ಮಜೆ ಕೇಳೌ

    ಕೂರ್ಪಿನಣುಗರಗಲ್ದರ್ ಹಾ
    ತೋರ್ದಪೆಯೇಂ ನಿನ್ನ ಮಡಿಲ ಮಕ್ಕಳನೆನೆಗೆಂ-
    ದಿರ್ಪಳ್ ದು:ಶ್ಶಲೆ ನಿನಿಗಾ-
    ರಿರ್ಪರ್ ಪೇಳಗ್ನಿಯೊಡಲ ಕೆಚ್ಚಿನ ಪೆಣ್ಣೇ

    ದುರ್ಯೋಧನ
    ——–
    ಬಾಡಿದ ಕರುಳ್ವಳ್ಳಿಯೆ ನೀಂ
    ನೋಡಲ್ಕೆನ್ನನ್ನೆ ಪೋಲ್ವೆಯೆಂಬರ್ ಗಡ ನಾಂ
    ನೀಡಲ್ ವಜ್ರತೆಯಾಗಳೆ
    ಕಾಡಿದುದೇಂ ನಿನಗೆ ನಾಚಿದುದದೇಕಕಟಾ

    ಚೆನ್ನದಿನಬ್ಬೆಯ ಪೊರೆದವ-
    ನಿನ್ನೆಗುಮಾರಿಲ್ಲ ನಿನ್ನ ಬಿಟ್ಟೊಡಣುಗರೊಳ್
    ಚಿನ್ನಮೆ ನೀನೆನೆಗೆ ಜಗಮೆ
    ನನ್ನಿಯ ನುಡಿಯದೆನೆ ಪೋಗಲಾಂ ಕಿವಿಗೊಡೆನಯ್

    ಭೀಮ:
    —–
    ಪುಟ್ಟಿಂ ನೀನೆನ್ನಾತ್ಮಜ-
    ರೊಟ್ಟಸುಹೃತನವೊಲೆ ಬಾಳ್ದೆಯಯ್ ಒರ್ಮೆಯುಮಾಂ
    ಪೆಟ್ಟಂ ಕೊಟ್ಟಿಲ್ಲ ನಿನ್ನ
    ಪೊಟ್ಟೆಗೆ ರಸಭಕ್ಷ್ಯಮಿತ್ತೆ ನೀ ನೇಂ ಕೊಟ್ಟೆ?

    ಸದೆಯಲ್ ನೂರ್ಮಂದಿಯನಾ
    ಎದೆಯೊಳ್ ವೈರತ್ವಭಾವಕೇಂ ಸಮಮೀಯೆ-
    ನ್ನದಟನ ಕಿಚ್ಚಂ ಪೆರ್ಚೆನೆ
    ಬದಿ ದೂಡಿಪ ಜಗದ ಪಕ್ಷಪಾತಕೆ ಸಮಮೇಂ?

    ಕೃಷ್ಣ:

    ನೀನೊರ್ವಂ ಸಾರಥಿಯಿರ-
    ಲೇನಪ್ಪುದು ಸೇನೆ ಗಳಿಪೆನೆಂದವಗಂ ಹಾ-
    ನೀನೇ ಕಪಟಾಸ್ತ್ರಮೆಸಗೆ
    ಮೌನಂ ಗೆಯ್ದಪೆ ನಿರಸ್ತ್ರಕೈತವದುಲಿಗಂ

    ವ್ಯಾಸ:
    —-
    ಬೇರ್ಪಟ್ಟ ಪಿಂಡಖಂಡಂ
    ಸೇರ್ಪಟ್ಟುದು ನಿನ್ನ ಸಿದ್ಧಶಕ್ತಿಯ ಕೃತ್ಯಂ
    ನೇರ್ಪನ್ನಿನ್ನೊರ್ಮೆಯೆನಗೆ
    ತೋರ್ಪುದದೀಗಳ್ ಮರಳ್ದು ಕೆಚ್ಚಿಗೆ ಭಿನ್ನಂ

    • ಪ್ರಿಯ ಸೋಮಾ! ನಿನ್ನ ಕಂದಗಳ ಮೆರವಣಿಗೆ ಬಲುಸೊಗಸಾಗಿದೆ. ಎಲ್ಲ ಪದ್ಯಗಳ ಭಾವ-ಬಂಧಗಳೂ ಚೆಲುವಾಗಿವೆ. ಅಭಿನಂದನೆಗಳು.

  15. ಅರಸಿ ತಾನೆಂದೆಂಬ ತಾಪಮಂ ಬೀರುತುಂ
    ಪುರಹಸ್ತಿನಾವತಿಯೊಳಂದು ಗಾಂಧಾರಿ, ಮೇಣ್
    ಕೊರಗು ಕಷ್ಟಂಗಳಂ ಕಡೆಗಣಿಸೆ ಕುಂತಿಯಾ,ದಾಯಾದಿ ವೈರದಿಂದೆ,
    ಮರುಕ ಬೇವಸಗಳೇ ಕೊನರ್ದುವೆ ಕುಂತಿಯೊಳ್?
    ತೊರೆದಿರಲ್ ಪತಿಪಾಂಡುವಿಹಲೋಕಮಂ,ಪೆರ್ಚು
    ಕುರುಡು ದಂಪತಿಯೊಡಂ ಸಹಬಾಳ್ವೆ ಪೆಡಸಾಗೆ, ಬಾಡಿದಳೆ ಪೂವಂದದಿಂ?

  16. ತಾಳಧ್ವಜನಾಳ್ಗಳಿಗಾಳ್
    ನೀಳೆತ್ತರನೀಳಮೂಗು ಮೀನಾಕ್ಷಿಗಳಿಂ
    ಬಾೞಂ ನೆತ್ತಿಯೊಳೂರುತೆ
    ಕೇಳಲ್ ಗಾಂಧಾರರಾಜಕುವರಿಯ ಕರಮಂ

    ತೊರೆಮಗನನೆಪೋಲ್ವಂ ಸುಂ-
    ದರನೆನ್ನಕ್ಕಂಗೆ ತಕ್ಕ ವರನೆಂದೞಿಪಲ್
    ಕುರುದೊರೆಯಿರ್ಕಂಗಳಿರದ
    ಕುರುಡನ್ ಗಾಂಧಾರಿಗಾಯ್ತು ಬಿದಿಯಿಂ ಬನ್ನಂ

    ತಾಳಧ್ವಜನ್, ಆಳ್ಗಳಿಗೆ ಆಳ್, ನೀಳೆತ್ತರ, ನೀಳ ಮೂಗು, ಮೀನಾಕ್ಷಿಗಳಿಂ, ಬಾೞಂ ನೆತ್ತಿಯೊಳೂರುತೆ ಕೇಳಲ್ ಗಾಂಧಾರ ರಾಜಕುವರಿಯ ಕರಮಂ,

    ತೊರೆಮಗನನೆ ಪೋಲ್ವಂ ಸುಂದರನ್, ಎನ್ನಕ್ಕಂಗೆ ತಕ್ಕ ವರನ್ ಎಂದ್ ಅೞಿಪಲ್, ಕುರುದೊರೆ ಇರ್ಕಂಗಳಿರದ ಕುರುಡನ್, ಗಾಂಧಾರಿಗಾಯ್ತು ಬಿದಿಯಿಂ ಬನ್ನಂ.

    ———————————-
    ಶಕುನಿಯ ಸ್ವಗತ :

    ಸುಂದರನಾದ ನೀಳೆತ್ತರದ, ನೀಳಮೂಗಿನ , ಚೆಲ್ವು ಕಂಗಳ ನದಿಸುತನು ತನ್ನ ಪರಾಕ್ರಮವನ್ನು ತೋರಿ ಗಾಂಧಾರಿಯನ್ನು (ಧೃತರಾಷ್ಟ್ರನಿಗಾಗಿ)ಬೇಡಿದ. ನದಿಸುತನನ್ನೇ ಅವನ ಪೌತ್ರನೂ ಹೋಲುತ್ತಾನೆ ಎಂದು ಆಸೆ ಪಟ್ಟರೆ, ಕುರುದೊರೆ ಎರಡೂ ಕಂಗಳಿರದ ಕುರುಡ. ವಿಧಿಯಿಂದ ಗಾಂಧಾರಿಗೆ ತೊಂದರೆ ಆಯಿತು.

    ಬನ್ನಂ – ಕೇಡು, ದುಃಖ

    • ನದಿಸುತನಾ ಚಿತ್ರ೦, ತ೦-
      ದಿದಿರೊಳ್ ನಿಲ್ಲಿಸಿದರೆ೦ಬವೊಲೆ ರ೦ಜಿರ್ಕು೦
      ಹೃದಯ೦ಗಮಮೆನಿಸಲ್ಕೆ ಸ-
      ಹೃದಯ ಹೃದಯರಾಮರೀ ಕವನದ ಮುಕುರದೊಳ್

      • ಕುರುಜಾಂಗಣದಾಹವದೊಳ್
        ದೊರೆಗುವರರ್ಮೇಣ್ ಸಹಸ್ರ ಸೈನಿಕರೞಿದರ್
        ಪಱಿದತ್ತು ನೆತ್ತರೆಲ್ಲೆಡೆ
        ತೊರೆಮಗನಬ್ರಹ್ಮಚರ್ಯೆಯಲ್ತೆ ನಿಮಿತ್ತಂ.

        ಕುರುಜಾಂಗಣದ ಆಹವದೊಳ್ ದೊರೆಗುವರರ್ ಮೇಣ್ ಸಹಸ್ರ ಸೈನಿಕರ್ ಅೞಿದರ್, ಪರಿದತ್ತು ನೆತ್ತರ್ ಎಲ್ಲೆಡೆ. ತೊರೆಮಗನ ಬ್ರಹ್ಮಚರ್ಯೆಯಲ್ತೆ ನಿಮಿತ್ತಂ?

        ಕುರುಕ್ಷೇತ್ರ ಯುದ್ಧಕ್ಕೂ ಭೀಷ್ಮರ ಬ್ರಹ್ಮಚರ್ಯೆಯೇ ಕಾರಣವಲ್ಲವೇ..? :).. ಭೀಷ್ಮರ ವಂಶದಲ್ಲಿ ಕೌರವರಂತಹ ಹುಳುಗಳು ಹುಟ್ಟಲು ಸಾಧ್ಯವಿತ್ತೇ..?

        • ಭೀಷ್ಮರ ತಪ್ಪಿಗೆ ನನಗೇಕೆ ಬೈಯುತ್ತಿದ್ದೀರಿ? 🙁

          • ಅಯ್ಯೋ ಹಾಗೇನಿಲ್ಲ… ಪದ್ಯದಲ್ಲಿ ಪದಬಳಕೆ ಅಷ್ಟು ಕಠಿಣವಾಗಿವೆಯೇ….. 🙂

          • You posted that padya as a reply to my comment, that is why.. 🙂

    • ಛಿಃ ಕುರುಡಾದಯ್ ದಲ್ನಿ-
      ನ್ನಾ ಕುರುಡಪ್ಪಂಗೆತಕ್ಕ ಪಿಳ್ಳೆಯತೆರದೊಳ್
      ಭೀಕರ ಕಾಳಗಮಂ ಮು-
      ನ್ನೀ ಕಾಣದೆ ಪೋದೆಕೇಳು ಭೀಮಶಪಥಮಂ..

      ವಿಧುರ, ವಸ್ತ್ರಾಪಹರಣದ ಸಂದರ್ಭದಲ್ಲಿ ಸುಯೋಧನನಿಗೆ ಹೇಳಿದ್ದು. “ಇದರ ಮುಂದಿನ ಭೀಕರ ಪರಿಣಾಮವನ್ನು ನೀನು ಕಾಣದೇ ಹೋದದ್ದರಿಂದ ನೀನು ಕುರುಡನೇ ಆಗಿದ್ದೀಯ..(ಕುರುಡಪ್ಪನಿಗೆ ತಕ್ಕ ಮಗನಾಗಿದ್ದೀಯ). ಈಗ ಭೀಮನ ಭೀಮ ಶಪಥಮಂ ಕೇಳು ”

      ಛಿ! ಕುರುಡಾದಯ್ ದಲ್, ನಿನ್ನ ಆ ಕುರುಡಪ್ಪಂಗೆ ತಕ್ಕ ಪಿಳ್ಳೆಯ ತೆರದೊಳ್. (ಏಕೆಂದರೆ) ಭೀಕರ ಕಾಳಗಮಂ ಮುನ್ ನೀ ಕಾಣದೆ ಪೋದೆ. (ಈಗ) ಕೇಳು ಭೀಮ ಶಪಥಮಂ.

  17. ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದ ತಾನು ಕೆಟ್ಟದ್ದನ್ನೂಗುರುತಿಸದಂಥೆ ಆಯಿತೇ?

    ಜಗಕಂ ಮಾದರಿಯಾದಳ್
    ಬಗೆಯಂ ಕಾಣದವೊಲಕ್ಷುವಂ ಬಲಿಯಿತ್ತಳ್|
    ಹಗೆಯಂ ಪೋಷಿಸುತಿರ್ಪಳು
    ರಗದವೊಲಿರ್ದಪಸುಯೋಧನನಂಧತೆಯಿಂ|

    ದಿಟಮೇನೆಂಬುದನರಿತುಂ
    ಹಟದಿಂದಂತನ್ನಸೋದರರ ನೋಯಿಸೆ ದು-
    ಶ್ಚಟಿ ಪುತ್ರನ ಗೈಮೆಗಳಂ
    ಸ್ಫುಟಮಾಗೆಂದೆತ್ತು ತಪ್ಪ ತೋರಳುಮೇಕೈ

    ಅರಿವೆಯ ಕಟ್ಟುತಲಿರೆ ಕಣ್
    ಗರಿಯದೆಮೂಜದರಾಯನಂ ಬಳಿಗರೆದುಂ|
    ಹರಿಯಂ ದೂಷಿಪಳವನು-
    ತ್ತರದಿಂ ಪಾಂಡವರಪಕ್ಷಪಾತಿಯಿನಿಪ್ಪಳ್|

  18. ಪಡೆದೆಂ ನೂರ್ಮಕ್ಕಳನಾಂ
    ಪೆಡೆದೆಂ ಕಲಿಗಳನು ವೀರಭೂಮಿಯೊಳೆನಗೀ|
    ಕಡೆಗಾಲದೆ ಕಲ್ತಲೆಯೊಳ್
    ಪಿಡಿಯುವಾರಾರಿಲ್ಲರೀ ಕರಂಗಳನಕಟಾ|

  19. ಗಾಂಧಾರಿ, ಸಂಜಯ ಹಾಗೂ ವಿದುರನ ಸಂಭಾಷಣೆ:

    ಅರಿಸೈನ್ಯದ ದುರ್ಮರಣವ
    ಪರಿಪರಿಯಿಂ ಪೇಳ್ವ ಸಂಜಯನ ಸೊಲ್ಗಳ ಕೇ-
    ಳರಿಯದೆ ಸಂತಸದಿಂ ದಾ
    ಭರಣಂಗಳ ಕಿತ್ತು ಭಾಪೆನುತೆ ನೀಡುತಿರಲ್|

    ಇದು ಸರಿಯೇ? ಮಾತೆಯೆ ಪೇಳ್!
    ಕುದಿವ ಮನಕೆ ಶಾಂತಿಯಿತ್ತು ಚಿಂತಿಸು, ಕುರುವಂ
    ಷದ ಕೀರ್ತಿಯನೊರ್ಮೆಲೆ ತಾ
    ನೊದೆವೆನುಮೆನುತಿರ್ಪನತ್ತಲಾ ಮರುತಸುತಂ|

    ಮಾತೆಯೆನುತ್ತೆರೆ ದಿನಮುಂ
    ಮಾತೆತ್ತಿದರಾಡುತಿರ್ಪೆ ನೀತಿವಚನಮಂ|
    ಸೂತಕುಲದ ಪಿರಿತನದಿಂ
    ದೇತಕೆ ಗರುವದಲಿಬೋಧಿಸುವೆಯೆಮಗಯ್ಯಾ|

  20. ತೊಡೆಯಲಮೃತರಸವಂ ನೀಂ,
    ತೊಡಹಂ ಸರಿಸಲ್ಕೆ ನಾಚಿರಲ್ ಕುರುಪುತ್ರಂ ।
    ತೊಡೆಮುರಿದುಂ ಮೃತಿಸಿದುದೇಂ
    ಕಡೆಗುಂ ಸೆಣೆಸಾಟದೊಳ್ ಗಡಾ ಕುರುಪಾತ್ರಂ ।।

    ಪರಮಸತ್ತ್ವವ ನೀಡಲೊದಗಿದಾಕ್ಷಣದೊಳೀ
    ಪರಿ ವೇಷ(ಕೌಪ!) ತರವೇನು ಕೌರವಗೆ ಪೇಳ್।
    ಪರಮಾಪ್ತೆ ನಿನ್ನೆದುರೆ ತೆರೆದುಕೊಳದಾ ನೆಪಕೆ
    ಹರಿಕಾರ ಹರಿತಾನೆ ಕಾರಣನು ಕಾಣ್ ।।

    • ಚೆನ್ನೆನಿಸಿತು ಮೇಡಮ್.
      …….. ನಿನ್ನೆದುರೆ ತೆರೆದುಕೊಳದಾ ಮನವು
      ತೆರಕೊ೦ಬುದೇನು ಪರರಿ೦ಗೆ ಕೇಳೌ
      ಎ೦ದು ಮಾರ್ಪಡಿಸಿದರೆ ದುರ್ಯೋಧನನ ಸ್ವಭಾವದ ವ್ಯ೦ಗ್ಯ ಚಿತ್ರಣ ಬ೦ದೀತು ಎ೦ದೆನ್ನಿಸಿತು…

    • ಕುರುಪಾತ್ರ೦ ಎ೦ಬುದಕ್ಕೆ ಏನಾದರೂ ಅರ್ಥ ಇಟ್ಟಿದ್ದೀರಾ? ಅಲ್ಲದಿದ್ದರೆ ವೃಥಾ ಪುನರುಕ್ತಿ ಆದೀತು.
      …..ಗಡಾ ಹತಭಾಗ್ಯ೦
      ಎ೦ದರೆ ಅವನಿಗೆ ಕೈಗೆ ಸಿಕ್ಕಿದ್ದು ಬಾಯಿಗೆ ಬರಲಿಲ್ಲ ಎ೦ದಾದೀತು 🙂

    • ಧನ್ಯವಾದಗಳು ನೀಲಕಂಠ,
      – “ಹತಭಾಗ್ಯ೦” ಎಂಬುದು ಸೂಕ್ತವಾಗಿದೆ.

      ತೊಡೆಯಲಮೃತರಸವಂ ನೀಂ,
      ತೊಡಹಂ ಸರಿಸಲ್ಕೆ ನಾಚಿರಲ್ ಕುರುಪುತ್ರಂ ।
      ತೊಡೆಮುರಿದುಂ ಮೃತಿಸಿದುದೇಂ
      ಕಡೆಗುಂ ಸೆಣೆಸಾಟದೊಳ್ ಗಡಾ ಹತಭಾಗ್ಯ೦ ।।

      – ದುರ್ಯೋಧನನ ಸ್ವಭಾವದ ವ್ಯ೦ಗ್ಯ ಚಿತ್ರಣವೇನೋ ಸರಿ, ಆದರೆ ಈ ಉದ್ದೇಶಿತ ವೃತ್ತಾಂತದ ಹರಿಕಾರ “ಕೃಷ್ಣ”(ನೇ ಆಗಿದ್ದಲ್ಲಿ – ಖಚಿತವಾಗಿ ತಿಳಿಯದು)ನನ್ನು ತಂದತಾಗುವುದಿಲ್ಲ ಅಲ್ಲವೇ?

  21. ಧೃತರಾಷ್ಟ್ರನ ಮಡದಿ ಪಡೆದು
    ಶತಪುತ್ರರ, ಬಗೆಯ ಕಣ್ಣ ಕುರುಡಾಗಿಸುತುಂ,|
    ಹತಭಾಗ್ಯೆಯಾಗಿ ಬೆತಿಸಲ್,
    ಗತಭಾರತಕಥೆಯ ನೀತಿಯದ್ಭುತಮಲ್ತೇ ? ||

  22. ಧರಿಸಿಂತೀ ಕಣ್ಣಡದೊ-
    ಳ್ಗರಿಯದೆ ನೀಂ ನಿಜಪರಿಸ್ಥಿತಿಗಳೊಳ್ಗಿತ್ತಾ
    ವರ ಶಾಪಂಗಳ್ ಸಮಗೊಂ-
    ಡಿರೆ ದೊರಕಿದುದೇಂ ಸಮಸ್ಥಿತಿಯು, ಕಣ್ತೆರೆಯೌ ।।

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)