Jun 152015
 

ರಾಮಂ ಗೋಹತ್ಯೆ ಗೆಯ್ದು ಯಾತ್ರಿಕನಾದಂ

  68 Responses to “೧೫೫ ಪದ್ಯಸಪ್ತಾಹ: ಸಮಸ್ಯಾಪೂರಣ”

  1. ಕ್ಷೇಮ೦ ತಾನಲ್ತೆನೆ ರಣ-
    ಭೂಮಿಯೊಳಿದಿರಾಗಿ ನಿಲ್ಲುವೊಡೆ ತನ್ನಣ್ಣ೦
    ಕಾಮಪಿತೃಮಾಯೆಯಿ೦ ಬಲ-
    ರಾಮ೦ ಗೋಹತ್ಯೆಗೈದು ಯಾತ್ರಿಕನಾದ೦

    • ಒಳ್ಳೆಯ ಪರಿಹಾರ; ಪದ್ಯಶೈಲಿಯೂ ಚೆನ್ನಾಗಿದೆ. ಅಭಿನಂದನೆಗಳು. ಆದರೆ ಕಾಮಪಿತೃ ಎಂದು ತಿದ್ದಿಕೊಳ್ಳಬೇಕು.

  2. ಕಾಮಕ್ರೋಧಂಗಳಿರಲ್
    ರಾಮನಸಾಕೇತದೊಳ್ರಕುತದೋಕುಳಿಯಿಂ|
    ದೀಮಹಮದನೌರಂಗ ಹ
    ರಾಮಂ ಗೋಹತ್ಯೆ ಗೈದು ಯಾತ್ರಿಕನಾದಂ|

  3. ಭಾಮಿನಿಗಿತ್ತೊಡೆ ನುಡಿಯ
    ನ್ನಾಮಗನಂಕಾಡಿಗಟ್ಟಿ ಪೋಗೆನ್ನುತಿರಲ್|
    ರಾಮಂ ತಾಂ ಪಡೆಯದೆಯೆ ವಿ
    ರಾಮಂ, ಗೋಹತ್ಯೆ ಗೈದು ಯಾತ್ರಿಕನಾದಂ|

    ಗೋಹತ್ಯೆ ಗೈದು – ಮಾತನ್ನಾಡದೆ

    • ಗೋಹತ್ಯೆಗೆ ಕಲ್ಪಿಸಿದ ಅರ್ಥವು ದೂರಾನ್ವಿತವಾದರೂ ಚೆನ್ನಾಗಿದೆ.
      ಗೋ ಎಂದರೆ ಮಾತು ಎಂಬರ್ಥವನ್ನು ಬಳಸಿಕೊಂಡ ಪರಿ ಸ್ತುತ್ಯ.

  4. “ಈ ಮರುಳರಹಿಂಸೆ, ಭಕುತಿ
    ಯಾ ಮೆರೆದುಂ, ಮಾಂಸಮಂ ತಿನಗೊಡರ್”ಜರೆದುಂ
    ಗ್ರಾಮಿಗರಂ ,ಮರೆಯಿಂದೇ
    ರಾಮಂ ಗೋಹತ್ಯೆ ಗೈದು, ಯಾತ್ರಿಕನಾದಂ

    • ತಾತ್ಪರ್ಯ ಏನು ಮೇಡಮ್?

      • ( ಗೋಹತ್ಯ್ಯನ್ನು ನಿಷೇಧಿಸಿದ್ದ ..)ಗ್ರಾಮದ ಜನತೆ, ಅಹಿಂಸೆ,ಭಕಿಯನ್ನು ನಟಿಸುತ್ತಾ, ಗೋವನ್ನು ಕೊಲ್ಲುವದಿಲ್ಲವೆಂದು ಜರೆಯುತ್ತ ಅವರಿಗೆ ವಿರುದ್ಧವಾಗಿ ,ಮರೆಯಿಂದ, ಗೋವಧೆಯನ್ನು ಮಾಡಿ, ಯಾತ್ರಿಕನಾದ(ಓಡಿಹೋದ?)

        • ಮೊದಲ ಪಾದದಲ್ಲಿ ಒಂದು ಮಾತ್ರೆಯಷ್ಟು ಕಡಮೆಯಾಗಿದೆ.ಉಳಿದಂತೆ ಪದ್ಯಭಾವವು ಅಷ್ಟಾಗಿ ಸ್ಫುಟವಾಗಿಲ್ಲ.

          • ಸ್ವಲ್ಪ ಸರಿಪಡಿಸಲು ಯತ್ನಿಸಿರುವೆ ,ಸರ್.

        • Madam, second line aadipraasa is not matching with other lines.

  5. ನಾಮಸ್ಮರಣೆಯಿನತಿ ಧನ
    ಕಾಮುಕರೀ ಲೋಕದೊಳ್ ಸುಖಿಪುದಂ ಕಂಡಂ!
    ನೇಮಮನೆ ಮುರಿದು ,ಮರ್ತಂ
    ರಾಮಂ ಗೋಹತ್ಯೆ ಗೈದು ,ಯಾತ್ರಿಕನಾದಂ

    (ಎಲ್ಲದಕ್ಕೂ ,ಈ ಲೋಕದಲ್ಲಿ ಪರಿಹಾರ!ಧನದಾಹಿಗಳು (ಮೋಸದಿಂದ ಸಂಪಾದಿಸಿದವರು),ದೇವರ ಸ್ಮರಣೆಯನ್ನು ಮಾಡುವದನ್ನು ಕಂಡು, ತಾನೂ ಗೋಹತ್ಯೆಯನ್ನು ಮಾಡಿ (ತಿನ್ನುವದಕ್ಕೆ), ಪರಿಹಾರಾರ್ಥವಾಗಿ ಯಾತ್ರೆಯನ್ನು ಕೈಗೊಂಡ)

  6. ನೇಮದೆ ಬಾಳದೆ,ತಿನ್ನಲ್
    ಕಾಮಿಸಿ ಮಾಂಸಮನೆ,ಪಾರ್ಬನರಿಯಲ್ ಬಳಿಕಂ |
    ತಾಮಸವ, ತಿಳಿಸೆ ಕನಸೊಳ್
    ರಾಮಂ, ಗೋಹತ್ಯೆಗೈದು ಯಾತ್ರಿಕನಾದಂ ||

    ( ನೇಮದಿಂದ ಬಾಳದೆ ಮಾಂಸವನೆ ತಿನ್ನಲು ಬಯಸಿ ಗೋಹತ್ಯೆಗೈದ ಬ್ರಾಹ್ಮಣನು ಬಳಿಕ ಕನಸಿನಲ್ಲಿ ರಾಮನಿಂದ ತಾಮಸವನ್ನು ತಿಳಿದು, (ಪಾಪಪರಿಹಾರಕ್ಕಾಗಿ) ತೀರ್ಥಯಾತ್ರೆಯನ್ನು ಕೈಗೊಂಡ. )

    • ಆಹಾ! ತುಂಬ ಸೂಗಸಾದ ಪರಿಹಾರ; ಕಲ್ಪನೆ, ಪದ್ಯಶಿಲ್ಪ ಮತ್ತು ಕೀಲಕ ಎಲ್ಲ ಚೆನ್ನಾಗಿದೆ.

      • ಧನ್ಯವಾದಗಳು ಸೋದರರೆ.

  7. ಎನಿತಿರ್ದೇ೦ ಕರಕ೦ಟಕ೦ಗಳಿದೊ ನೋಡೆನ್ನೀ ಕುಠಾರಪ್ರಹಾ-
    ರನಿತಾ೦ತಕ್ಕಳವೇನಿಳಾತಳದೊಳು೦ ನೂರ್ಸಾಸಿರ೦ ಮೇಣಿರ-
    ಲ್ಕೆಣೆಯೇ೦ ಮತ್ತಮತ೦ಗದುತ್ಕಟಪದಾಘಾತಕ್ಕೆ ನೀಳ್ದ೦ಟುಗಳ್
    ಕೊನೆಯ೦ಗಾಣಿಸಿ ಕಾರ್ತವೀರ್ಯಕುಲಕ೦ ನಾ೦ ಬರ್ಪುದ೦ ನೋಳ್ಪುದೌ

    ಇ೦ತಾ ಭಾರ್ಗವ೦ ಪ್ರತಾಪೋತ್ಕ೦ಠಿತನಾಗಿ ನುಡಿದು ಪತಿಮರಣಶೋಕಾಕುಲಳಾಗಿದ್ದ ತಾಯ ಮನಕ್ಕೆ ತಾಗುವ೦ತೆ ಮತ್ತಿ೦ತೆ೦ದು ಪೂಣ್ಮೆಗೆಯ್ದ೦,

    ನೇಮದೊಳಾ೦ ಗೆಯ್ಯದೊಡೆ ಪಿ-
    ತಾಮಹನಾಣೆ ಹರನಾಣೆ ಹರಿಯಾಣೆ ಕಣೌ
    ನೀಮಿ೦ತು ಮೇಣ್ ತಿಳಿವುದೌ
    ರಾಮ೦ ಗೋಹತ್ಯೆಗೆಯ್ದು ಯಾತ್ರಿಕನಾದ೦

    ಆ ಕಾರ್ತವೀರ್ಯಾರ್ಜುನನಿಗೆ ಇರುವ ಸಾವಿರ ಕರಗಳೆ೦ಬ ಮುಳ್ಳಗಳು ನನ್ನ ಕೊಡಲಿಗೆಣೆಯೇ? ಮದ್ದಾನೆಯ ಕಾಲ್ತುಳಿತಕ್ಕೆ ನೂರು ಸಾವಿರ ದ೦ಟುಗಳೀಡೆ? ಅವನ ಕುಲವನ್ನು ನಾಶಮಾಡಿ ಬರದಿದ್ದರೆ ತಿಳಿ, ರಾಮ ಗೋಹತ್ಯೆಗೈದು ತಲೆಮರೆಸಿಕೊ೦ಡ ಎ೦ದು. (ಮಾತಿಗೆ ತಪ್ಪಿದರೆ ಆ ಪಾಪ ನನಗೆ ಬರಲಿ)

  8. ಕಾಮಂ ಯಾತ್ರೆಯ,ಕಾಡಲ್,
    ಸಾಮಾನ್ಯದ ಕೂಡು ಬಡಮನೆಯೊಳಾ ದಿನದೊಳ್,
    ವಾಮಪಥಮೊಂದೆಯೆನುತುಂ
    ರಾಮಂ, ಗೋಹತ್ಯೆ ಗೈದು ಯಾತ್ರಿಕನಾದಂ

    (ಬಡಕುಟುಂಬದಲ್ಲಿ(ಅವಿಭಕ್ತ ) ಯಾತ್ರೆಗೆ ಅವಕಾಶವನ್ನು ಒದಗಿಸದಾಗ,ಗೋಹತ್ಯೆಯನ್ನು ಮಾಡಿ,ಯಾತ್ರೆಯನ್ನು ಗಿಟ್ಟಿಸಿಕೊಂಡ)

    • ayyayyo, rAmanivanaltu, rAvaNam gaDA, bheebhatsa bheekaramappa AchAram, vichAram gaDA!!

      • ಪೆಸರಿಂದ ಮಾತ್ರಮೀತಂ ರಾಮಂ ಗಡಾ!
        ತಮ್ಮೊಳಿತಂ ಕಾಪಿಡಲ್ಕೊಲೆಯನೇ(ಮಾನಸರ,ಬಂಧುಗಳ) ಗೈವವರೆಲ್ಲ ಕಾಲಕುಂ ಸಲಲ್ಕಿದೇಂ !
        ಈ ಪರಿಯ ಜನರಿರ್ಪವರೆಗುಮೆನ್ನಯೀ ಪೂರ್ಣಂ ಸಲ್ಗುಮಲ್ತೇ!

    • ಮತ್ತಮಾ ಬಡಪಾರುವ೦ಗೆತ್ತಣ೦ ದಕ್ಕಿದುದೊ ಹಸುವೊ೦ದು ಕೊಲ್ಲಲ್ಕೆ?! ಹಿಟ್ಟಿನಾಕಳಮ೦ ಮಾಡಿ ಕೊ೦ದಿಟ್ಟನೊ!!

      • ಊರೊಳಿರಲ್ ನೂರಾರು ,ಅವನೇಕೆ ಚಿಂತಿಪನ್ ಹಿಟ್ಟಿನಿದಂ! ಅದೇನಿದ್ದರೂ ನಿಮಗೇ 🙂

  9. ಸೋಮ ಎಂಬ ಭೃತಕಯೋದ್ಧನೊಬ್ಬನು (mercenary), ಹರಿ-ರಾಮ ಇತ್ಯಾದಿ ಹೆಸರಿನ ಒಬ್ಬಾನೊಬ್ಬ ಪುಢಾರಿಗಾಗಿ ಸುಪಾರಿಕೊಲೆಗೈದು…
    ಪಾಮರಪುಢಾರಿಹರಿಗೋ
    ರಾಮಂಗೋ ಹತ್ಯೆಗೆಯ್ದು ಯಾತ್ರಿಕನಾದಂ|
    ಸೋಮಂ, ಸಾರ್ದಂ ಸೆರಯಂ
    ಜಾಮೀನ್ ದಕ್ಕದೆ ಪರಪ್ಪನಗ್ರಾರದೊಳಂ||

    • Hhahahhahhhaaa
      ನಿಜವಾದ ಪೂರಣ ಅ೦ದ್ರೆ ಇದೇ! 🙂

    • sakkat neevu…

    • ಅಬ್ಬಾ!! ಇದೀಗ ಪದ್ಯಪಾನಕ್ಕೆ ಒಂದು ಖಳೆ, ಖದರು ಬಂತು!!!…..ಇಂಥ ಲಲಿತಲಾಘವವಿಲ್ಲದೆ ಬರಿಯ ಘನಗಂಭೀರಪೂರಣಗಳಿಂದ ಪದ್ಯಪಾನವು ತೀರಾ ತೀರಾ ವದ್ಯಪಾನವಾಗ್ತಾ ಇತ್ತು…..ಅಭಿನಂದನೆಗಳು ಹಾದಿರಂಪ!

    • ಆಹಾ … ! ಒಳ್ಳೆ “ಗೋ-ಗಲ್ಲು” (google) ಪರಿಹಾರ!!

    • ನಾಲ್ವರಿಗೂ ಹೃತ್ಪೂರ್ವಕಧನ್ಯವಾದಗಳು

  10. ನೇಮಂ ಮೈದಾಳಿರಲಾ
    ರಾಮಪುರದೆ ದನಗಳೇಳ್ಗೆಗೆನುತೆ,ಮುರಿದದಂ,
    ರಾಮಾ! ಕಾರಾಗೃಹಕಂ
    ರಾಮಂ ಗೋಹತ್ಯೆ ಗೈದು ಯಾತ್ರಿಕನಾದಂ!

  11. ತುಂಬ ಹಿಂದೆ ನನ್ನ ಅವಧಾನವೊಂದರಲ್ಲಿ ಶ್ರೀ ಶ್ರೀ ಕುಮಾರನಿಜಗುಣಸ್ವಾಮಿಗಳು ಒಡ್ಡಿದ ಈ ಸಮಸ್ಯೆಯನ್ನು ಪ್ರಕೃತ ಮಿತ್ರ ಸೋಮ ಇಲ್ಲಿ ಸಹಪದ್ಯಪಾನಿಗಳೊಡನೆ ಹಂಚಿಕೊಂಡಿದ್ದಾರೆ. ಇದಕ್ಕೆ ನನ್ನ ಅಂದಿನ ಪರಿಹಾರ ಹೀಗಿತ್ತು:

    ಧೀಮಂತಂ ಗೌತಮಮುನಿ
    ನೇಮಮಿರಲ್ ಸೈರಿಸಲ್ಕೊದವದ ಮುನೀಶರ್ |
    ಸ್ತೋಮಿಸಿ ವಂಚಿಸೆ ಸುಗುಣಾ-
    ರಾಮಂ ಗೋಹತ್ಯೆಗೆಯ್ದು ಯಾತ್ರಿಕನಾದಂ||

    ಪ್ರಸ್ತುತ ಪೂರಣವು ಗೌತಮಮಹರ್ಷಿಯ ಬಾಳನ್ನು ಆಧರಿಸಿದೆ. ಕ್ಷಾಮಪೀಡಿತರಾದ ಮುನಿಗಳಿಗೆ ತನ್ನ ತಪೋಮಹಿಮೆಯ ಕಾರಣ ಸಮೃದ್ಧವಾಗಿದ್ದ ಹೊಲ-ಗದ್ದೆಗಳ ಮೂಲಕ ಆಹಾರವನ್ನಿತ್ತ ಗೌತಮಮುನಿಯಲ್ಲಿ ಅಸೂಯೆಯನ್ನು ತಾಳಿದ ಜನರು ಒಂದು ಕಪಟಗೋವನ್ನು ಸೃಜಿಸಿ ಹೊಲಗದ್ದೆಗಳ ಮೇಲೆ ಮೇಯಲು ಬಿಟ್ಟರು. ಆಗ ಅದನ್ನು ದೂರ ಓಡಿಸುವ ಭರದಲ್ಲಿ ಗೌತಮನು ಚೆಲ್ಲಿದ ನೀರೇ ಆ ಹಸುವಿನ ಸಾವಿಗೆ ಕಾರಣವಾಯಿತು. ಇದರಿಂದ ಬಂದೊದಗಿದ ಪಾತಕವನ್ನು ನೀಗಲು ಅವನು ತೀರ್ಥಯಾತ್ರೆಗೆ ತೆರಳಿ ಶಿವನಿಂದಲೇ ಗಂಗೆಯನ್ನು ಪಡೆದು ಆ ಮೃತಗೋವಿನ ಮೇಲೆ ಚೆಲ್ಲಿ ತನ್ನ ಪಾಪವನ್ನ್ನು ಕಳೆದುಕೊಂಡನಂತೆ. ಹೀಗೆ ಅಂದು ಬಿದ್ದ ಗಂಗೆಯೇ ಗೌತಮೀ (ಗೋದಾವರೀ) ನದಿಯಾಯಿತೆಂದು ಪುರಾಣಕಥೆ. ಇದು ಈ ವರೆಗೆ ಯಾರೂ ಇಲ್ಲಿ ಕಲ್ಪಿಸದ ಪರಿಹಾರವಾದ ಕಾರಣ ಕೆಲವರಿಗಾದರೂ ಸವಿಯೆನಿಸೀತೆಂದು ನಿವೇದಿಸುತ್ತಿದ್ದೇನೆ.
    ಇದರೊಟ್ಟಿಗೆ ಪೂಜ್ಯ ಸ್ವಾಮಿಗಳ ಪೂರಣವನ್ನೂ ಗಮನಿಸಬಹುದು:

    ಶ್ಯಾಮಾಂಗಂ ಹಲಧಾರಿಯ
    ಸಾಮರ್ಥ್ಯಂ ಕೌರವಂಗೊದಗದೋಲ್ ಮಾಯಾ-
    ಗೋಮಾತೆಯಂ ಸೃಜಿಸೆ,ಬಲ-
    ರಾಮಂ ಗೋಹತ್ಯೆಗೆಯ್ದು ಯಾತ್ರಿಕನಾದಂ ||

    ನಮ್ಮ ಗೆಳೆಯ ನೀಲಕಂಠ ಅವರು ಹೆಚ್ಚುಕಡಮೆ ಇದೇ ಜಾಡಿನಲ್ಲಿ ಪರಿಹರಿಸಿದ್ದಾರೆಂಬುದು ಮುದಾವಹ.

  12. ಪಾಮರ, (ಶಾತಂಪಾಪಂ)
    ನೇಮದೆ ಗೋಪೂಜೆ ಗೆಯ್ದ ಸಾತ್ವಿಕತಾನುಂ ।
    ಗೋಮುಖವೇಷಂ, ಕಾಣ್ ಅಹ!
    ರಾಮಂ, ಗೋಹತ್ಯೆ ಗೆಯ್ದು ಯಾತ್ರಿಕನಾದಂ ।

  13. ಧಾಮದ ಸೆರೆಯಿಂದೋಡೆ
    ರಾಮಂ,ವನರಾಜತಾಂ, ತಲುಪಿದಂ ನಾಡಂ|
    ಪ್ರೇಮಿಸುತೆ ಮೊದಲ ಬಲಿಯಂ
    ರಾಮಂ ಗೋಹತ್ಯೆ ಗೈದು ಯಾತ್ರಿಕನಾದಂ||

    (ಅರಣ್ಯಧಾಮವೊಂದರಿಂದ ತಪ್ಪಿಸಿಕೊಂಡ ರಾಮನೆಂಬ ಸಿಂಹ ವು ನಾಡನ್ನು ತಲುಪಿದಾಗ ಸಿಕ್ಕ ಹಸುವನ್ನು ಕೊಂದು,ತನ್ನ ಸಂಚಾರವನ್ನು ಮುಂದುವರೆಸಿತು 🙂 )

  14. ಕೋಮು ಗಲಭೆಯೆಬ್ಬಿಸಲೆಂ
    ದೀಮತಿಗೆಟ್ಟಿರ್ಪಬುದ್ಧಿಜೀವಿ ನುಡಿವನೈ|
    “ರಾಮನ ನೆನೆಯದಿರೆಂದುಂ
    ರಾಮಂ ಗೋಹತ್ಯೆ ಗೈದು ಯಾತ್ರಿಕನಾದಂ”|

  15. “…ಸ್ವಾಮಿಯ ಪಟ್ಟಮನೇರ್ದಂ
    ರಾಮಂ!ಗೋಹತ್ಯೆ ಗೈದು ಯಾತ್ರಿಕನಾದಂ-
    ತಾ ಮಹಿಪನಾದನೆ ಪಿರಿಯ?
    ಸೋಮಾ ! ನೀನರಿತು,ನಡೆವುದು, ಮಗಾ !” ಎಂದಂ

    ಪಿರಿಯ=ಶ್ರೇಷ್ಠ
    (ಮಗನಿಗೆ ತಂದೆಯ…)

  16. ಚೋಮಂಗೆ ಬೇಂಟೆಯೊಳಮಿತ-
    ಕಾಮಮಿರಲ್,ತಿರಿಗಿ ಪುಡುಕಿ ಮೂಕಮೃಗವ ನಿ-
    ರ್ನಾಮವ ಮಾಡಲ್ಸಿಗಲಾ-
    ರಾಮಂ, ಗೋಹತ್ಯೆಗೈದು ಯಾತ್ರಿಕನಾದಂ ||

    (ಆರಾಮ=ಸಂತೋಷ , ಗೋಹತ್ಯೆಗೈದು ಯಾತ್ರಿಕನಾದಂ – ಗೋಹತ್ಯೆಗೈದು ಇತರ ಪ್ರಾಣಿಹತ್ಯೆಗಾಗಿ ಸಂಚರಿಸಿದನು )

    • ಒಳ್ಳೆಯ ಕೀಲಕವುಳ್ಳ ಸ್ವೋಪಜ್ಞಪೂರಣಕ್ಕಾಗಿ ಅಭಿನಂದನೆಗಳು.

      • ಧನ್ಯವಾದಗಳು ಸಹೋದರರೆ.

  17. ಸೀಮೋಲ್ಲಂಘನ ಗೈದವ
    ನೀಮಟ್ಟಕುಪೋಪನೆಂಬುದಂ ಕೇಳಿದಿರೇಂ!!
    ನಾಮದೆ ಸನಾತನಿಯಿವಂ
    ರಾಮಂ,  ಗೋಹತ್ಯೆ ಗೈದು ಯಾತ್ರಿಕನಾದಂ

    ರಾಮ ಎಂಬ ಸನಾತನ ಹೆಸರಿನವ ವಿದೇಶಕ್ಕೆ  ಹೋದೊಡೆ ಗೋಮಾಂಸ ಭಕ್ಷಿಸುವುದನ್ನರಿತ ಜನರು ಈಪರಿ ಮಾತನಾಡಿದರೆಂಬ ಕಲ್ಪನೆ…

    • ಪೂರಣ ತುಂಬ ತುಂಬ ಚೆನ್ನಾಗಿದೆ.
      ….ನೀ ಮಟ್ಟಕೆ ಪೋಪನೆಂಬುದಂ……. ಎಂದು ಸವರಿಸಿದರೆ ಭಾಷೆಯ ನಿಟ್ಟಿನಿಂದ ಮತ್ತೂ ಸೊಗಸಾದೀತು.

  18. ಮೈಮರೆವಿಂ ಮೋಸದೆ ಬಲ-
    ರಾಮಂ ಗೋಹತ್ಯೆಗೆಯ್ದು ಯಾತ್ರಿಕನಾದಂ|
    ಶ್ಯಾಮಂ ಗೈಯುತೆ ಮಾರಣ-
    ಹೋಮವ ಪರಲೋಕಯಾತ್ರೆಗಟ್ಟಿದನರಿಯಂ||

    • ಆಹಾಹಾ… ಅದೇ ವಸ್ತು, ಆದರೆ ಎಷ್ಟೊ೦ದು ಭಿನ್ನವಾಗಿ ವ್ಯ೦ಗ್ಯವಾಗಿ ಚಿತ್ರಿಸಿದ್ದೀರಿ. ತು೦ಬ ಚೆನ್ನಾಗಿದೆ! ಅದೇಕೋ ಗೋಹತ್ಯೆಯಲ್ಲಿ ತಮ್ಮ ಪ್ರತಿಭೆ ಎದ್ದು ಕುಣಿಯುತ್ತಿದೆ  🙂

      • ಆಶ್ಚರ್ಯವೇನಿಲ್ಲ. ನನಗೆ ಗೊತ್ತಿರುವುದು ಅದೊಂದೇ – (ಮಾತು)ಗೋಹತಿ!

    • ಪೂರಣ ಚೆನ್ನಾಗಿದೆ… ಹಳೆಯ ಕಲ್ಪನೆಯನ್ನೇ ಹೊಸತಾಗಿಸಿದ ಬಗೆ ಸೊಗಸಾಗಿದೆ.

    • ಭೀಮಂ ಪಂಚಾಂಶಪುಮಾನ್,
      (Hanuman)ರಾಮಾಧೀನಮವಿವಾಹಿತಂ, ಮೇಣ್ ಗರುಡಂ|
      ವಾಮಂ (gay dependent on Vishnu). ನೀಲಗ್ರೀವನೆ,
      ತೇಮಾನಂ ತರವೆ ಎನ್ನ ಪ್ರಕೃತಿಯೊಳಿಂತುಂ?!

  19. ಆಹಾಹಾ… ಅದೇ ವಸ್ತು, ಆದರೆ ಎಷ್ಟೊ೦ದು ಭಿನ್ನವಾಗಿ ವ್ಯ೦ಗ್ಯವಾಗಿ ಚಿತ್ರಿಸಿದ್ದೀರಿ. ತು೦ಬ ಚೆನ್ನಾಗಿದೆ! ಅದೇಕೋ ಗೋಹತ್ಯೆಯಲ್ಲಿ ತಮ್ಮ ಪ್ರತಿಭೆ ಎದ್ದು ಕುಣಿಯುತ್ತಿದೆ 🙂

  20. ಕಾಮನೆಯಂ ಪೂರೈಸಲ್
    ಶ್ರೀಮಾರಿಗೆ ಬಲಿಯನಿತ್ತು ಪೂಜಿಸೆ ಮೂಢಂ,|
    ಭಾಮೆಯನಿಚ್ಛಿಪ ವಿರಹಿತ-
    ರಾಮಂ, ಗೋಹತ್ಯೆಗೈದು ಯಾತ್ರಿಕನಾದಂ ||

    ( ಹೆಣ್ಣನ್ನು ಬಯಸುವ ,ಮೂಢನಾದ ರೂಪಹೀನನು (ವಿರಹಿತರಾಮನು ) ತನ್ನ ಬಯಕೆಯನ್ನು ಪೂರೈಸಲು ಶ್ರೀಮಾರಿಗೆ ಬಲಿಯನ್ನಿತ್ತು ಪೂಜಿಸಲೆಂದು ಗೋಹತ್ಯೆಗೈದು ತೀರ್ಥಯಾತ್ರೆಯನ್ನು ಮಾಡಿದನು. )

  21. A certain Rama injured (ಹತ್ಯೆ) a cobra and went into exile for 12 years – the duration of a cobra’s hate.
    First line of the verse needs explanation: Unlike a lackadaisical tortoise, a cobra will be on the alert for a lengthy period to avenge.
    ಆಮೆಯವೋಲ್ (amphibian)ದ್ವಿಗಮಿರಲೇಂ,
    (Reduction)ತೇಮಾನಂ ಪಾವ (hate)ಗರ್ಹಮಹುದೇಂ ಸುಲಭಂ?
    ನೇಮಂ ದ್ವಾದಶವರ್ಷಂ!
    ರಾಮಂ (cobra)ಗೋಹತ್ಯೆಗೆಯ್ದು ಯಾತ್ರಿಕನಾದಂ||

  22. ಗ್ರಾಮದಿ ಸೌದಿಯ ಸಾಬಿಯು
    ಜಾಮದಿ ಪಶುವೊಂದಕೂಡಿ ಹಜ್ಜಿಗೆ ಪೊರಟಂ |
    ತಾಮಸಿಯುಣ್ಣಲು ಪಡೆದು ವಿ-
    ರಾಮಂ, ಗೋಹತ್ಯೆಗೈದು ಯಾತ್ರಿಕನಾದಂ

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)