Jun 222015
 

vyasapeetha

  136 Responses to “ಪದ್ಯಸಪ್ತಾಹ ೧೫೬: ಚಿತ್ರಕ್ಕೆ ಪದ್ಯ”

  1. ಪರಿಪರಿ ವಿಷಯಂಗಳ ಪೊ
    ತ್ತಿರೆ ನಿನ್ನೊಳ್ ಙಾನ ದೇವತೆಯೆ ನೆಲೆಸಿದರುಂ|
    ಮರೆತ ಪಳೆಯ ಪುಟಗಳನೀಂ
    ತೆರೆದ ಕರಗಳಿಂದತೋರದಾಗಿಹೆಯಲ್ತೇ|

    • ಪದ್ಯದ ಭಾವ ತುಂಬ ಸೊಗಸಾಗಿದೆ, ಸ್ವೋಪಜ್ಞವಾಗಿಯೂ ಇದೆ. ಹಳಗನ್ನಡದ ನಿಟ್ಟಿನಿಂದ ಸ್ವಲ್ಪ ಸವರಿಸಬಹುದು.
      ………………………..
      ………………………….ನೆಲಸಿದೊಡಂ|
      ಮರೆತ ಪಳೆವಾಳೆಗಳನೇಂ (ಪಳೆಯ ಹಾಳೆಗಳ್ =ಪಳೆವಾಳೆಗಳ್)
      ತೆರೆದ ಕರದೆ ತೋರದಾದೆಯೇತಕೆ ಪೇಳೌ !

  2. ಆವುದುಮೀ ಕುಣಿತದ ಬಗೆ
    ಯೋ? ವಾಲಿಸುತಿರ್ಪುಗುಂ ಸರಸ್ವತಿಯಂ,ಬಲ್!
    ಜೀವವಿರೆ ಬ್ರಹ್ಮನೊಳೇ,
    ನೇವರಿಸುತ್ತೆ ಸನಿಹಕ್ಕೆ ಕರೆಯುತೆ ಸಖಿಯಂ!
    (ಪೀಠವೇ, ನಿನ್ನಾವ ನಾಟ್ಯದ ಭಂಗಿಯು, ಬ್ರಹ್ಮನಲ್ಲೇ ಜೀವವಿಟ್ಟಿರುವ ಸರಸ್ವತಿಯನ್ನೇ ಕೈಬೀಸಿ ಕರೆದಿದೆ)

  3. ಆರಂದು ಪೇಳ್ದೊಡನರಿಯದರೇ ಪೋದೆಯೇಂ-
    ಚಾರುತರ ಫಲಗಳಂ ಸತ್ಸಂಗದಾ!
    ಶಾರದೆಯ ಸಂಪರ್ಕದಿಂ ಪೀಠಮೇರ್ದೊಡಂ
    ಜಾರಿದೆಯೆ ಮನಮರಳಿ ,ನಡುಬಾಗಿ ನೀಂ!

  4. ಪತ೦ಗಮಿದು ನೋಳ್ಪುದಯ್ ವರಕವೀ೦ದ್ರಭಾಸ್ವ೦ತಖ-
    ದ್ಯುತಿದ್ಯುತಿಕರ೦ಗಳಿ೦ ಬಿರಿದ ಕಾವ್ಯಪುಷ್ಪಾ೦ಗನ-
    ಕ್ಕೆ ತೀವಿದ ರಜಃಕಣ೦ಗಳೊಳು ಮೈಯನದ್ದುತ್ತೆ ಸ-
    ಲ್ಲುತು೦ ಸಹೃದಯರ್ಕಳೊಳ್ ನಲಿದು ನಲ್ಮೆಯಿ೦ದಾಳ್ದುದಯ್

    (ಪಕ್ಕ ಬಿಚ್ಚಿದ ಪತ೦ಗದ೦ತೆ ಕಾಣುತ್ತಿದೆಯಾದ್ದರಿ೦ದ) ಆವಾವುದೋ ಕವಿಸೂರ್ಯರ ಬೆಳಕಿನ ಕಿರಣಗಳಿ೦ದ ಅರಳಿದ ಕಾವ್ಯಪುಷ್ಪಗಳ ಮೈಯ ಪರಿಮಳದ ಧೂಳನ್ನು ಅ೦ಟಿಸಿಕೊ೦ಡು ಈ ಪತ೦ಗವು ಸಹೃದಯರ ಜೊತೆಯಲ್ಲಿ ನಲಿಯುತ್ತ ಸುಖಿಸುತ್ತಿರುವುದು.

    • ಪೃಥ್ವೀವೃತ್ತದ ಸೊಗಸು ಮೆಚ್ಚುವಂತಿದೆ. ಆದರೆ ವ್ಯಾಸಪೀಠದಿಂದ ಕಲ್ಪನೆ ತುಂಬ ದೂರಸರಿದಿದೆ. ಮೊದಲ ಸಾಲಿನಲ್ಲಿ “………..ಭಾಸ್ವನ್ನಭೋ………….” ಎಂದು ತಿದ್ದಿದರೆ ವ್ಯಾಕರಣರೀತ್ಯಾ ಯುಕ್ತ.

      • ಧನ್ಯವಾದಗಳು ಸರ್. ಸದ್ಯಕ್ಕೆ ದಕ್ಕಿದ ಕಲ್ಪನೆ ಅಷ್ಟು 🙂 ಮತ್ತೆ ನೋಡುತ್ತೇನೆ….

  5. ಮಸ್ತಕವಿಹುದೈ ಮನುಜನಿಗದರಿಂ
    ವಿಸ್ತರವಿದೆ ಬೆನ್ನಿನ ಹುರಿಯು (33 ಮೂಳೆಗಳು)|
    ಪುಸ್ತಕಮಾತ್ರವು ನಿನ್ನೊಳಗದರಿಂ
    ಗ್ರಸ್ತವು ನೀನಹೆ, ಬರಿ ನಾಲ್ಕೇ (ಬೆನ್ನಮೂಳೆ)||

  6. ಡಿವಿಜಿಯವರ ಕ್ಷಮೆಕೋರಿ
    ಪುಸ್ತಕದಿ ದೊರತರಿವು ರಕ್ತಗತಮಾಗದಿರೆ
    ದುಸ್ತರವು ಚಲನಶೀಲತೆಯುಮಲ್ತೆ|
    ಸುಸ್ತಿನಿಂ ನಿಂದಿಹುದು, ನಾಲ್ಕಿದ್ದರೂ ಕಾಲು
    ವಿಸ್ತಾರದೊಳ್ ವ್ಯಾಸಪೀಠ ಚರಮೇಂ?|

  7. ಮಾನವನಹಂತೆಯಿಂ ಗಣಕಯುಗದೊಳ್ ಕೊರ್ವಿ
    ಹೀನನಹನದಕೆ ಚಿರಸಾಕ್ಷಿ ಪೀಠಂ|
    ಗೋನಾಳಿಯನು ಬಗ್ಗಿಸುತಲೋದಿದವನೀಗ
    ವೈನಾಗಿ ನೋಡೆ ನೇರಂ ಫಲಕಮಂ (Computer monitor)||

    • ಪ್ರಸಾದು, ವಿಲಕ್ಷಣ-ವಿನೂತನಕಲ್ಪನೆಗಳನ್ನು ಮಾಡಿದ್ದೀರಿ; ಧನ್ಯವಾದ. ಪದ್ಯಬಂಧವೂ ಹೃದ್ಯವಾಗಿದೆ.

  8. ಸಾಂಗತ್ಯ|| ನಿನ್ನಂತೆ ನಾನೂವೆ ರಕ್ಸಾಪುಟವ ಮಾತ್ರ
    ಇನ್ನೂವೆ ಓದ್ತಿವ್ನಿ ಅದಕೇ|
    ಖಿನ್ನತೆಯಿಂ ಕುಂತ್ನಿ ಏಳ್ನೆ ಇಯತ್ತೇಲೆ
    ಉನ್ನತಿಯಾದಾತು ಎಂಗೆ?|

    ವಾಚಕಮಹಾಶಯನೇ,
    ಇಂತಾವ್ನು ಎಂಗ್ಬಂದ ಏಳ್ರ್ಗಂಟ ಅನ್ಬ್ಯಾಡ
    ಅಂತೋ ಇಂತೋ ಏನೂ ಅಲ್ಲ|
    ಚಿಂತೇನೆ ಇಲ್ದೇನೆ ಬಂದ್ಬುಟ್ಟೆ ಇಲ್ಗಂಟ
    ಕುಂತಿsರೆ ಪೀಠ್ದಾಗಪ್ಪಯ್ಯ|| (ಪೀಠ ಎಂದರೆ ವ್ಯಾಸಪೀಠವಲ್ಲ, ಉನ್ನತ ಸರಕಾರೀ ಸ್ಥಾನ)

  9. ವ್ಯಾಸಪೀಠವನ್ನು ಪ್ರಶಂಸಿಸಿ ಒಂದು ವೃತ್ತ:

    ಭವ್ಯಾರ್ಥಯುಕ್ತಚಿರಪುಸ್ತಕರಾಜಲೋಕ-
    ಕ್ಕವ್ಯಾಜಕೇಸರಿವರಾಸನದಂತೆ ಸಲ್ವೀ|
    ಶ್ರೀವ್ಯಾಸಪೀಠಮಿದು ದಲ್ ಪರಮಾರ್ಥಸತ್ಯಂ
    ಕಾವ್ಯಾದಿಗಳ್ ಸರದಿಯಂದದೆ ಸಾಗುತಿರ್ಕುಂ||

    ವ್ಯಾಸಪೀಠವನ್ನು ಹಳಿದೊಂದು ಅನ್ಯೋಕ್ತಿ:

    ಎನಿತೆನಿತು ಕಾವ್ಯರಸಮಯ-
    ಘನಕೃತಿಗಳ್ ನಿನ್ನ ಮಡಿಲೊಳಾಡುತ್ತಿರ್ದುಂ |
    ತನುವಿದು ಕೊರಡಾಗಿಯೆ ನಿ-
    ರ್ಮನಮಾದತ್ತೇಕೆ ವ್ಯಾಸಪೀಠಮೆ ನಿನ್ನಾ ||

    • ಸರ್ ಕಡೆಯ ಸಾಲಿನಲ್ಲಿ ಶಿಥಿಲದ್ವಿತ್ವವೇ

    • ರಿಕ್ತಮಂತಾಯ್ತೇಕೆ ವ್ಯಾಸಪೀಠವದೆನ್ನೆ
      ಸಕ್ತರಿಂಗೆಲ್ಲ ಸಾಹಿತ್ಯಮನ್ನುಂ|
      ಭಕ್ತಿಯಿಂದರ್ಪಿಸುತೆ ಮಗುಳಿಂದೆ ಗಳಿಕೆಗು-
      ದ್ಯುಕ್ತಮಾಗಿರ್ಪುದದು ದಾನಗೈಯಲ್||

    • ಕವಿಗಿರ್ಪ ಬಲ್ಮೆಯನೆ ಪೇಳ್ದಪಿರಲ್ತೆ ನೋಡಲ್
      ತವೆ ಶಂಸಿಪಂದದೊಳೆ ನಿಂದಿಪುದುಂ ಸಲಲ್ಕೀ
      ಛವಿಯಿಂದೆ ಸಂದಕವಿತಾಯುಗಳಕ್ಕೆ ಮತ್ತಂ
      ಸವಿಯಪ್ಪುದಕ್ಕೆ ಪದಿನೊಂಬತಕಂ(comment #19) ನಮಿಪ್ಪೆಂ!!

  10. ಆಪಾಟಿ ಪುಸ್ತಕವನೋದೋಕೆ ಸಾಕೇನು
    ಕಾಪಿಟ್ಟ ಎರಡೇನೆ ಕಣ್ಣು?
    ಈ ಪೀಠಕದಕೇನೆ ಮೊಗವೆರಡರೊಳಗೊಟ್ಟು
    ಮೋಪಾದ ಮೂವತ್ತು ಕಣ್ಣು||

    ವಾಚಕಮಹಾಶಯನೇ,
    “ಕಾಲೊಳಗೂ ಕಣ್ಣೈತೆ ಕಾಣೆಯ?” ಎನಬ್ಯಾಡ
    ದೌಲಿನ ಬ್ರುಗುಮುನಿಯದುವೆ (ಆ ಪೀಠ)?
    ಲೀಲೆಯೊಳ್ ಸಿವನ ಕೇಳ್ ಯಾರ್ಯಾರ್ಗೊ ಇರುವಂಥ
    (ಬಹು)ಬೋ ಲೋಚನಂಗಳ ಕಾಣ್ಯ?|

    • ಆಹಾ! ಒಳ್ಳೆಯ ಸಾಂಗತ್ಯಗಳು; ಮತ್ತೂ ಒಳ್ಳೆಯ ಕಲ್ಪನೆಗಳು. ಆದರೆ ಮೊದಲ ಪದ್ಯದ ಪ್ರಥಮಪಾದದಲ್ಲಿ ಸ್ವಲ್ಪ ಸವರಣೆ ಬೇಕು:
      ” ಆ ಪಾಟಿ ಪುಸ್ತಕ ವೋದೋಕ್ಕೆ ಸಾಕೇನು?”

  11. ಎಲೆ ಪೀಠಮೆ! ನೀಂ ಪಕ್ಷಿಯ-
    ವೊಲೆ ಪಕ್ಷದ್ವಯದಿನಂತು ರಾಜಿಸಿಯುಂ ಮೇಣ್
    ಚಲಿಸಲ್ಕಾರದೆ ಪೋದಯ್!
    ಭಲೆ! ಅಂತುಂ ಪೊತ್ತೆಯೆಲ್ಲ ಲೋಕದ ತಿಳಿವಂ! !
    ( ಎಲೆ ವ್ಯಾಸಪೀಠವೇ, ಪಕ್ಷಿಗಳ ಹಾಗೆ ಎರಡು ಪಕ್ಷ(-ರೆಕ್ಕೆ) ಇದ್ದರೂ ನೀನು ಚಲಿಸಲಾರದೇ ಹೋದೆ! ಭಲೆ! ಅಂತಾದರೂ ಲೋಕದ ಎಲ್ಲ ತಿಳಿವನ್ನು ಹೊತ್ತೆಯಲ್ಲ! )

    • ನಿಲ್ಲಲೇಂ ಪೀಠವದು ಚಲಿಸದೆಲೆ ಊನಮೇಂ
      ತಲ್ಲಜನೆ ಸಲ್ಲಿಸಿಹೆ ಮಾನಮದಕೆ|
      ಗೆಲ್ಲದೆಲೆ ಮುಂದರಿದು, ನಿಂತಲ್ಲೆ ನಿಂತಿರ್ಪ
      ಚಲ್ಲುಕಬ್ಬಿಗನಲ್ತೆ ಹಾದಿರಂಪಂ||

  12. ಚಿಣ್ಣನಾಡದಿಪ ಪೆಣ್ಮಡಿಲಿನಂತೇ
    ಪಣ್ಣುಪೂವಳಿದ ವೃಕ್ಷದವೋಲೇ
    ಬಣ್ಣಮೇ ಸಲದ ಚಿತ್ತದವೋಲೇ
    ಅಣ್ಣ!ನಾಂ ಕಳೆಯಲೇಂ ದಿನಮಿನ್ನುಂ?
    (ಯಾರೂ ನನ್ನನ್ನು ಬಳಸದಿರುವದರಿಂದ.._)

    • ಪದ್ಯಭಾವವು ತುಂಬ ಮಾರ್ಮಿಕವಾಗಿದೆ; ಧನ್ಯವಾದ.

  13. The vyāsapīṭha is an enduring thing. If the wood had remained in the tree, its life would be limited to the life of the roots viz., the lifespan of the tree. So the tree (wood) thanks man for finding a noble way of bestowing longevity on it.
    ದೀರ್ಘಾಯುವಾನುಮಿರುತುಂ, ಬಹುಮೋಹದಿಂದಂ
    ನಿರ್ಘಾತಕೀಡಿರುತಿಹಾ ತರುಮೂಲದಿಂದಂ|
    (move away) ಚರ್ಘಂಗೊಳರ್ದೆ ದಿನಮಿನ್ನೆಗಮೇಣಿಸೀಗಾಂ (count days – last days)
    ಅರ್ಘಾರ್ಹಮಾನವನ ಸಂಗದೆ ಬಂಧಮುಕ್ತಂ||

    • ಒಳ್ಳೆಯ ಪದ್ಯಭಾವ; ಒಳ್ಳೆಯ ಬಂಧವಿನ್ಯಾಸ. ವಿಶೇಷವಾಗಿ ದುಷ್ಕರವಾದ ಪ್ರಾಸದ ನಿರ್ವಾಹವು ಮತ್ತೂ ಮನೋಹರವಾಗಿದೆ.

  14. ಹೊರಿಸುತ್ತೆ ಪುಸ್ತಕಗಳಂ
    ಭರಿಸಿರ್ದೊಡನಮಿತ ಸಂಗತಿಗಳಂ ನಿನ್ನೊಳ್,
    ಮರುಳಾಗದವೊಲ್ ನಿಂತೀ
    ಪರಿಗಂ, ಶರಣಾಗದಿರ್ಪರಿರ್ಕೇಂ ಭುವಿಯೊಳ್?

  15. ಕರಕೊಂದು ಕರದವೊಲ್ ಕೊರದರೈ ನನ್ನನ್ನು
    ನರಕುಲದ ಪಾಮರರ್ , ನೋವೀಯುತುಂ
    ಶಿರವಾಗಿ ನಮಿಪರೈ ಭಕ್ತಿಯಿಂ ಮೇಣೀಗ,
    ಬರುವುದೇಂ ಸುಖಕಾಲ,ಕಷ್ಟಾಂತದೊಳ್?

    • Chennagide 🙂 paapa vyaasapeetha !!
      sukhagaala – eradoo sanskrit padagalu, kannadada aadeshasandhi maadabahude?

      • ಹೌದು; ಸುಖಕಾಲ ಎಂದರೆ ಸಾಕು. ಆದರೆ ಪದ್ಯಭಾವವು ತುಂಬ ಸೊಗಸಾಗಿದೆ.

  16. त्वां व्यासपीठं प्रणमामि मूर्ध्ना
    त्वय्येव निक्षिप्य सुपुस्तकानि ।
    वाल्मीकिरामयणमादिकाव्यम्
    पठामि भक्त्यानुदिनं क्रमेण ॥

  17. ಹೊತ್ತಗೆಯನೆತ್ತಲೆನೆ ಕೈ
    ಯೆತ್ತಿರ್ದುದು, ಮರದ ಕೆತ್ತನೆಯೊಳು ಬೆಸೆದು ಮೈ
    ವೆತ್ತಿರ್ದುದು, ವರ್ಣಿಸೆ “ಪೈ”
    ವೊತ್ತಿರ್ದ “ವ್ಯಾಸಪೀಠ”ಮಿದು ಗುರುತಾಯ್ತೈ ।।

    ವ್ಯಾಸಪೀಠದ ಕಾಲುಗಳು ” π ” (= 22/7 =3.14 ~ ತಿಗುಣಾತೀತ !!)ನಂತೆ ಕಂಡ ಕಲ್ಪನೆಯಲ್ಲಿ

    • ಹೊತ್ತಗೆಯನೆತ್ತಲೆನೆ ಕೈ
      ಯೆತ್ತಿರ್ದುದು, ಮರದ ಕೆತ್ತನೆಯೊಳು ಬೆಸೆದು ಮೈ
      ವೆತ್ತಿರ್ದುದು, ವರ್ಣಿಸೆ “ವೀ”
      ವೊತ್ತಿರ್ದ “ವ್ಯಾಸಪೀಠ”ಮಿದು ಗುರುತಾಯ್ತೈ ।।

      ವ್ಯಾಸಪೀಠದ ಕೈಗಳು ”V” ನಂತೆ ಕಂಡ ಕಲ್ಪನೆಯಲ್ಲಿ 🙂

      • ವಿಸ್ತರಿಸೆ “ವೀ”ವುತ್ತಿರ್ದುದು(ಉತ್ತ+ಇರ್ದುದು) ಅಲ್ಲವೇ? ನೀಲಕಂಠ !!

        • ಆಹಾ! ಪೈ ಮತ್ತು ವಿ ಗಳ ವಿನ್ಯಾಸವಿನೋದ ಚೆನ್ನಾಗಿದೆ.

          • ಪೈ-ವಿಲಾಸ ಮೆಚ್ಚಿದ್ದಕ್ಕೆ ಧನ್ಯವಾದಗಳು ಗಣೇಶ್ ಸರ್ !!

  18. ಇಂದ್ರವಜ್ರಂ|| ದಾಂಪತ್ಯದೃಷ್ಟಾಂತಮಿದೀ ಸುಪೀಠಂ
    ಲಾಂಪಟ್ಯಗೈಯಲ್ಕಿರದಾಸ್ಪದಂ ಮೇಣ್|
    ಸಂಪತ್ನಿಸಂಗಂ ಗೊಳದೈ ವಿಯೋಗಂ
    ರಂಪೇತರರ್ಗರ್ಥಮಿದಾಗದೇಂ? ಧಿಕ್!!

    ಅತಿಸಹಜವಾದ ಆಧುನಿಕದಾಂಪತ್ಯವಿದು!
    ದ್ರುತಪದ|| ಬಳಸಲೆನ್ನುತಲಿ ಬಿಚ್ಚಿಡಲಾಗಳ್
    ಹಳಸಿಕೊಂಡ ತೆರನಾಡುವರೀರ್ವರ್|
    ಕೊಳೆಯಲೆನ್ನುತಲಿ ಮುಚ್ಚಿಡಲಾಗಳ್
    ತಳಕುಗೊಂಬರಲೆ ಸಾಜದೆ ಯುಗ್ಮರ್||

    • ಈ ಬಾರಿ ಹಾದಿರಂಪರ ಲೇಖನಿಯಲ್ಲಿ ಶಾರದೆಯು settle ಆಗಿದ್ದಾಳೆಂದು ತೋರುತ್ತಿದೆ. ಅಭಿನಂದನೆಗಳು.

      • ಭವದಭಿಶಂಸೆಯೊಳ್ ಮಿಂದೆಂ. ಕೃತಾರ್ಥನಾಂ.

      • ಹೌದು ತುಂಬಾ ಸಟಲ್ಲೂ (subtle) ಆಗಿಬಿಟ್ಟಿದ್ದಾಳೆ !! ಅಭಿನಂದನೆಗಳು ಪ್ರಸಾದ್ ಸರ್

      • ಹರಿಯ ಕರೆತ೦ದು ಕ೦ಭದೊಳೆ ಸಿಲುಕಿಸಿದನಾ
        ತರಲ ಪ್ರಹ್ಲಾದನೌದ್ಧತ್ಯದಿ೦ದೆ!
        ಬರೆಯೆ ಪದ್ಯಗಳನೀ ಕ್ರೂರ ಪಾನಿ ಪ್ರಸಾ-
        ದರಲ ಲೇಖನಿಯೊಳಿಟ್ಟರ್ ವಾಣಿಯ೦!!

      • ಅತ್ತಲವಧಾನದೊಳ್ ಚಿತ್ರಕ್ಕೆಪದ್ಯಕಂ
        ಹೊತ್ತಿಸಿರ್ದರ್ ಹೊತ್ತಿಗೆಯ ಹೊತ್ತುಕೊಂಡುಂ ।
        ಇತ್ತಲೀಹೊತ್ತಿನೊಳ್ ವ್ಯಾಸಪೀಠವನಿಂತು
        ಬಿತ್ತರಿಸುತೆತ್ತೆ ಹತ್ತೆಯವಾದುದೆಂತುಂ ?!

        ಅಂದು ಅವಧಾನದಲ್ಲಿ ಚಿತ್ರಕ್ಕೆ ಪದ್ಯಕ್ಕೆ – “ಉರಿಯುತ್ತಿರುವ ಗ್ರಂಥ”ವನ್ನು ಸಮಸ್ಯೆಯಾಗಿ ನೀಡಲು, ಹೊತ್ತಿಗೆಯನ್ನು ಹೊತ್ತೊಯ್ದಿದ್ದ ರಂಪರು, ಇಂದು ವ್ಯಾಸಪೀಠವನ್ನೂ ಅಪಹರಿಸಿ (ಗುರುಮನಕೆ) ಪ್ರಿಯರಾದುದೆಂತು ?!

        • ಅಪಹರಣಕಲೆಯನ್ನು ಕಲಿತುದು
          ಎಪರತೊಪರಾ ಕಾಂಜಿಪೀಂಜಿಗ-
          ಳುಪವಸತಿಯೊಳೆ? (ಅಲ್ಲ,) ಭಾಗ್ಯದಿಂ ದೊರೆ-
          ತಪರವ್ಯಾಸರ ಸಂಗದೊಳ್|| 🙂

    • ದಿಟದಿನಾಂ ಗೈದಿಹೆನು ನೀಂ ಪೇಳ್ದ ಕಜ್ಜಮನೆ
      ಖಟಖಟಿಸೆ ಸಹಪಾನಿಗಳು ಕಂಭಮಂ (ಲೇಖನಿ)|
      ಪಟಪಟನೆ ಉದುರುವುವು ಕಬ್ಬಗಳು ತಾವಾಗ
      ನಿಟಿಲಾಕ್ಷನೆ ಹಿರಣ್ಯಕಶಪುವಾಗು||

      • ಆ ಕೆಡುಕ ಮೃಗಜನ್ಮದಿ೦ ನಿಮ್ಮ ಬಿಡಿಸುವೊಡೆ
        ಬೇಕಲ್ತೆ ನಿಟಿಲಾಕ್ಷನೆ ಶರಭದೊಲು?!!

  19. ತೆರೆದಿರಿಸಿರಲಂತರಂಗಮಂ ಬಂ-
    ದೆರಗುವುದಲ್ತೆ ಸಮಸ್ತಕಾವ್ಯಶಾಸ್ತ್ರ-
    ಸ್ಫುರಣಮ್; ಎರ್ದೆಯು ಮುಚ್ಚಿರಲ್ಕೆ ಮೇಧಾ-
    ಮರಣಮದೆಂಬವೊಲಿರ್ಪುದಲ್ತೆ ಪೀಠಂ !

    (ವ್ಯಾಸಪೀಠವು ತೆರೆದಿರುವಂತಿದ್ದಾಗಲೇ ಅಲ್ಲಿ ಎಲ್ಲ ಬಗೆಯ ಗ್ರಂಥಗಳಿಗೂ ಅವಕಾಶ. ಅದು ಮುಚ್ಚಿಕೊಂಡಿದ್ದಾಗ ಯಾವೊಂದಕ್ಕೂ ಎಡೆಯಿಲ್ಲವಷ್ಟೆ! ಈ ತತ್ತ್ವವನ್ನು ಪರಿಭಾವಿಸಿದಾಗ ನಾವಾದಾರೂ ಮನ ಬಿಚ್ಚಿದ್ದಾಗ ಮಾತ್ರ ಅರಿವಿಗೆ ಪಾತ್ರರಾಗುತ್ತೇವೆ; ಇಲ್ಲವಾದಾಗ ಅದಕ್ಕೆ ಎರವಾಗುತ್ತೇವೆ ಎಂಬ ತಥ್ಯವು ಸ್ಫುರಿಸುತ್ತದೆ. ಇದನ್ನಾಧರಿಸಿ ಪ್ರಕೃತಪದ್ಯವಿದೆ.)

  20. ಮನ್ನಾಮಪೂರ್ವಮಿದಮಾಸನಮದ್ಯ ರಿಕ್ತo
    ಸಾರ್ಥಗ್ರಹಂ ಪಠತಿ ಕೋsಪಿ ನ ಮನ್ನಿಬಂಧಾನ್ l
    ವ್ಯಾಸೋ ವಿಷೀದತಿ ನಿರಾಶತಯೋರ್ಧ್ವಬಾಹುಃ
    ಪೀಠಚ್ಛಲಾತ್ ಕಲಿವಿಲಾಸಮಿವೇಕ್ಷಮಾಣಃ ||

    • ಕೇಯೂರಕಲ್ಪಿತಮಹೋ ಬಹುಹೃದ್ಯಪದ್ಯ೦!

      • ತ್ವಾಂ ಧನ್ಯವಾದಕುಸುಮಾಂಜಲಿಭಿರ್ನಮಾಮಿ |

        • ಕೇಯೂರ! ಮಿತ್ರವರ! ಕಿಂ ನು ಚಿರಾಯ ದೃಷ್ಟಃ
          ಕಿಂ ತೇ ಸುಖಮ್? ಕವನಮೇತದನರ್ಘಮೇವ ||

          • ಆಹ! ಇದು ಪದ್ಯ ಎಂದರೆ ಪದ್ಯ; ಆಡುಮಾತು ಎಂದರೆ ಆಡುಮಾತು.

          • ಸರಳವಾದ ಮಾತಿನ ಛ೦ದಸ್ಸನ್ನೂ ವ್ಯಾಕರಣವನ್ನೂ ಸರ್ ಗೆ ನಾವೆಲ್ಲ ಸೇರಿ ಕಲಿಸಬೇಕು 🙂

          • ಕುಶಲo ಮೇ ಭವತೋsಪಿ ಸೌಖ್ಯಮಥ ಭೋಃ ಪೃಚ್ಛಾಮಿ ಕಾರ್ತಜ್ಞಹೃತ್

          • ಅಹ, ಒ೦ದು ಕಡೆ ವಸ೦ತಕ್ಕೆ ಕಾಡಿಗೆಯ ತಿಲಕದ೦ತಿರುವ ಕೋಗಿಲೆಯಿ೦ಚರ, ಇನ್ನೊ೦ದು ಕಡೆ ಮತ್ತೇಭವಿಕ್ರೀಡಿತ!!

          • ಪ್ರಿಯ ನೀಲಕಂಠ, ವಸಂತಕ್ಕೆ ಕೋಗಿಲೆಯು ಕಾಡಿಗೆಯಾಗುವಂಥ ನಿಮ್ಮ ಕಲ್ಪನೆ ತುಂಬ ಚೆನ್ನಾಗಿದೆ. ಅಭಿನಂದನೆಗಳು.

  21. ತೆರೆದಿರ್ದ ಪುಸ್ತಕದ ತೆರ-
    ನಿರುವ ಗುರುತರ ಕರಪಾತ್ರಮೀ ಗುರುಪೀಠಂ ।
    ನಿರುತ ಜ್ಞಾನಾರ್ಜನಕನ-
    ವರತ ಪುಟವಿಟ್ಟ ದಿಟದಮರ ಕೋಶಂ ಕಾಣ್ ।।

    ಅನಂತ ಪುಟಗಳ ಮರದ ಪುಸ್ತಕ !?

  22. ಎರಗುವರೇಕೈ ಪೊತ್ತಿಗೆಮಣೆ ನಿನ
    ಗರಿಯೆಂ ಗುಟ್ಟಂ ತಿಳಿಪೆನಗಂ
    ಅರಿವೆಯ ಗಂಟಂ ಪೇರಿದನಗಸಂ
    ಮರುಗರದಾರುಂ ಕತ್ತೆ ಬರಲ್

    • ಕತ್ತೆಗೆ ಪೀಠವ ಪೋಲಿಪ ಮಾತದು
      ಮುತ್ತಂತಿಹುದೈ ಬಾೞ್ ನೀನು|
      ಹೊತ್ತೊಯ್ಯುವವೋಲ್ ಘಾಟಿಗೆ ಕತ್ತೆಯು
      ಉತ್ತಮಕೊಯ್ವುದು ನಿನ್ನನಿದು (ವ್ಯಾಸಪೀಠ)|| 😉

      • ಪ್ರಿಯ ಜಿವೆಂ; ಒಳ್ಳೆಯ ಕಲ್ಪನೆಯ ಅನ್ಯೋಕ್ತಿಯೇ ಹೊಮ್ಮಿದೆ. ಧನ್ಯವಾದ.

        • ಧನ್ಯವಾದವೆಲ್ಲ ನಿಮಗೇ ಸಲ್ಲಬೇಕು – ಧನ್ಯೋಸ್ಮಿ.

  23. ನೇಸರ ಚಂದ್ರ,ಭುವನಮೇ
    ನ್ಯಾಸನಿಧಿಯವೋಲಿರಲ್ ವಿಧಿಯ ಕರದೊಳ್,ನಾಂ
    ಬೇಸರಿಪನೇಂ, ಬರಿದೆ ಕೈ-
    ಗೂಸಾದೆನಲಾ, ಪಂಡಿತರ,ಬಿಡುತುಮೆಲ್ಲಮನೆಂದುಂ !

    (ಪಂಡಿತರ ಕೈಗೂಸಾದೆನೆಂದು ನಾನೇಕೆ ಬೇಸರಿಸಲಿ? ನೇಸರ,ಚಂದ್ರ,ಭೂಮಿ…ಇವರುಗಳೇ ವಿಧಿಯ ಕರದಲ್ಲಿ ನಿಧಿಯಂತೆ ಇರುವಾಗ)

  24. Books that are read by holding them in hand deteriorate soon.
    ಆರಾಮಕುರ್ಜಿಯವೊಲಿರ್ಪುದು ವ್ಯಾಸಪೀಠಂ
    ಏರುತ್ತೆ ಪುಸ್ತಕವು ಚಾಚಲು ಬೆನ್ನಿಗಿಂಬೇಂ!
    ನೂರಾರು ಕಾಲದವರಂ ಸುಟಿಯಾಗಿ ಗ್ರಂಥಂ
    ಸಾರಸ್ವತಕ್ಕುಸಿರದುಂಬುತಲಿರ್ಪುದೆಂತೋ||

  25. The traditional vyāsapīṭha just holds the books. Amazon Kindle, besides holding them, has memorized them all.
    ಹಲಗೆ ತಾನಿರುತಿರ್ದೊಡಲ್ಲಿಯೆ ವೃಕ್ಷಭಾಗದೊಳಿನ್ನೆಗಂ
    ಫಲವ ಪುಷ್ಪವನೀವ ಊರ್ಜೆಯ ಪೊಂದಿ ಗರ್ವದಿ ಬಾಳ್ವುದುಂ|
    ಫಲಕಮಾದೊಡಮೂರ್ಜೆವೊಂದಿಹ ದಕ್ಷಧಾರಿಣಿ ಕಿಂಡಲೈ (Kindle)
    ಪಲವುಸಾಸಿರ ಗ್ರಂಥಮಂ ಧರಿಸುತ್ತೆ ಮೇಣ್ ವರಿಸಿರ್ಪುದುಂ||

  26. ಹುಳುಕು ಕೊಳಕಂ,ಪಿರಿದು ಕಿರಿದಂ,
    ಬಳಸಿ ನೋಳದೆ ,ತೆರೆದ ಮನದಿಂ
    ದುಳಿದು ಕಂಡೆಯ ಪೊತ್ತಿಗೆಗಳಂ ,ಸಮತೆಯಿಂದಲೆ ನೀಂ!
    ಅಳೆಯಲೆಂತುಂ ,ವ್ಯಾಸದೃಷ್ಟಿಯ
    ನೊಳಗೆ ತಳೆದೀ ನಿನ್ನ ಬಲ್ಮೆಯ
    ಕಳೆಯ ಕಟ್ಟುತುಮೆಲ್ಲ ಪಾತ್ರಕು ಜೀವ ತುಂಬಿಸಿದ!

    (ಎಲ್ಲ ಪಾತ್ರಗಳಿಗೂ ಸಮನಾಗಿ ಜೀವ ತುಂಬಿಸಿದ (ಸಮತೆಯನ್ನು ತಳೆದ)ವ್ಯಾಸರ ದೃಷ್ಟಿಯನ್ನು ನೀನು ತಳೆದಿದ್ದೀಯ!ಅದಕ್ಕೆ ಎಲ್ಲ ಹೊತ್ತಿಗೆಗಳನ್ನೂ ತೆರದಮನದಿಂದ ಸ್ವಾಗತಿಸಿದ್ದೀಯಾ!)

    • ಆಹಾ! ಅದ್ಭುತವಾದ ಕಲ್ಪನೆ! ಸುಂದರವಾದ ಪದ್ಯ! ನಿಜಕ್ಕೂ ವ್ಯಾಸರ ವಿಶಾಲೋದಾರದೃಷ್ಟಿಗೆ ಹಿಡಿದ ನೀರಾಜನಜ್ಯೋತಿ!!

      • ವ್ಯಾಸಸೃಷ್ಟಿಯಂ,ಮನ:ಪಟಲಗಳೊಳ್ ಚಿತ್ರಿಪ ಮಾಂತ್ರಿಕ ಚಿತ್ರಕಾರರ್ಗೆ ನಮನಂ ಸಲ್ಗುಂ

    • Ahahaa, tumba tumba chennagide kalpane! 🙂

  27. ಇದಿರು ನೋಡುವೆಯ? ಒಣಗಿ ಕಾಯುವೆಯ? ಮತ್ತೆ ಆತನನ್ನು?
    ಕದನ ಸಾರುವೆಯ?ಚಕ್ರವಾಕದೊಡೆ,ವಿರಹದಲ್ಲಿ ನೀನು!
    ಕದಲಿ ಪೋಗಿರಲು ಸೊತ್ತು ನಿನ್ನೊಳೇ, ಪ್ರೀತಿ ತೋರ್ವನೇನು?
    ಹುದುಗಿ ಕಾಡಿದೀ ಭ್ರಾಂತಿಯೇಕೆ?ಅವ,ಮನುಜನಲ್ಲವೇನು!

    (ಪುಸ್ತಕ(ಸೊತ್ತು)ಇದ್ದಾಗ ಮಾತ್ರ,ಬಳಿಗೆ ಬರುವನಾತ 🙂 )

    • Intent not got clearly madam. Please explain.

      • ಎಲೇ ಪೀಠವೇ, ಓದುಗ ಬರುವನೆಂದು ನೀನು ವಿರಹಿಯಂತೆ ಕಾಯುತ್ತಿದ್ದೀಯಾ, ನಿನ್ನಲ್ಲಿ ಸೊತ್ತು ಇರದಾಗ ,ಆತ ಬಳಿಗೆ ಬರುವನೇ? ಎಷ್ಟಾದರೂ ಆತ ಮನುಷ್ಯನಲ್ಲವೇ? (ತನಗೆ ಲಾಭವಿದ್ದರೆ,ಬರುವನಲ್ಲವೇ 🙂 )

  28. ನಿನ್ನಂತಿನ್ನಾವುದೊ ಪೇಳ್ !
    ಉನ್ನತಸುಸ್ಮಾರಕಂ ಸರಲಮರ್ಥಯುತಂ|
    ಸನ್ನುತನೇ! ಚಿರಕಾಲಂ
    ನನ್ನಿಯ ಚೆಲ್ವಿಂಗೆ ನೋಂತು ನಿಂದಯ್ ಜಗದೊಳ್ ||

    (ವ್ಯಾಸಪೀಠಕ್ಕಿಂತ ಅರ್ಥಪೂರ್ಣವಾದ ಸರಲಸಮರ್ಥಸ್ಮಾರಕವು ಮತ್ತಾವ ಕವಿಗೂ ಈ ಜಗದಲ್ಲಿಲ್ಲವೆಂಬ ತತ್ತ್ವವಿಲ್ಲಿದೆ.)

    • ಈಗಾಗ್ಲೆs ಕೊಂಡ್ಕಂಡಿ ತ್ಯಾಗsದs ಪೀಠsವs
      ಸಾಗಾಕಿದ್ದೀವಿs ಗೋಖsಲೆಗೆ|
      ಸಾಗಾಕಿದ್ದೀವಿs ಗೋಖಲೆಗೆs ಇಷ್ಟ್ರಾಗೆs
      ರಾಗಯ್ಯs ಕೊಡ್ತೀವ್ ನಿನಗsದs||

      • ಕೊಟ್ಟರೆ ತ್ಯಾಗವೋ ಬಿಟ್ಟರೆ ತ್ಯಾಗವೋ
        ಚಟ್ಟಂತ ಹೇಳಿ ರಂಪಣ್ಣ ಗುಟ್ಟನ್ನ
        ರಟ್ಟಾಗಿಸಿದರೆ ಹೇಗಣ್ಣ?

  29. ವ್ಯಾಸ ಪೀಠದ ಸ್ವಗತ –

    ಎಸಕಂಗಾಯಲ್ ತಕ್ಷಕ
    ನೆಸಗಿದ ಕುಸುಕಮಿದೆನಗೆಸಕಂ ನೀಳ್ದುದು ಮೇಣ್ I
    ನಸುವೆಳಗು ಪುಗಲ್ ಸರಸತಿ-
    ಯೆಸಕಂ ಸದ್ ಗ್ರಂಥ ವಾಚನದೊಳದೆಳಸದೇ೦?II
    ಕರ್ತವ್ಯನಿರತನಾದ ಬಡಗಿಯ ಕುಸುರಿ ಕೆಲಸದಿಂದ ನಾನು ಈ ರೀತಿ ಶೋಭಿಸುತ್ತಿದ್ದೇನೆ ಮಾತ್ರವಲ್ಲ ಬೆಳಕು ಹರಿದಾಗ ನನ್ನಲ್ಲಿ ಸದ್ ಗ್ರಂಥ ಗಳನ್ನಿಟ್ಟು ಓದುವವರ ಜ್ಞಾನವು ನನ್ನಂತೆ ಶೋಭಿಸಿ ವ್ಯಾಪಿಸದೇ?

  30. ವ್ಯಾಸೇನ ಕಲ್ಪಿತೋsಹ೦ ತು ವಾಲ್ಮೀಕಿಮುನಿನಾ ನ ಹಿ
    ರಾಮಾಯಣ೦ ಕರಗ್ರಾಹ್ಯ೦ ಭಾರತೋ ಭಾರತೋ ನ ಚ

    ನನ್ನನ್ನು ವ್ಯಾಸನ ಹೆಸರಿನಿ೦ದಲೇ ಏಕೆ ಕಲ್ಪಿಸಿಕೊಳ್ಳುತ್ತಾರೆ? ವಾಲ್ಮೀಕಿಯಿ೦ದ ಏಕಲ್ಲ?
    ರಾಮಾಯಣನ್ನು ಕೈಯಲ್ಲಿ ಹಿಡಿದು ಓದಬಹುದು. ಭಾರದಿ೦ದಾಗಿ ಭಾರತಕ್ಕೆ ನಾನು ಬೇಕಾಗುತ್ತೇನೆ.

    • Good one NK. But isn’t the first ಭಾರತೋ Telugu? 😀

      • ಯತ್ಕಿ೦ಚಿತ್ ಕನ್ನಡವೊ೦ದುಳಿದು ಬೇರೆ ಭಾಷೆ ಎನಗೆ ಬಾರದು 🙁

    • ಚೆನ್ನಾಗಿದೆ. ಆದರೆ “ಭಾರತೋ ಭಾರತಂ ನ ತು” ಎಂದು ಸವರಿಸಿದರೆ ಯುಕ್ತ. ಭಾರತಂ ಎಂಬುದು ನಪುಂಸಕಲಿಂಗದಲ್ಲಿದ್ದಾಗ ಮಹಾಭಾರತಕಾವ್ಯವಾಗುತ್ತದೆ. ಇಲ್ಲವಾದರೆ (ಭಾರತಃ ಎಂದಾದಲ್ಲಿ) ಭರತವಂಶದ ಯಾವನಾದರೂ ಆದಾನು.

  31. ಏಕಾಂಡರೂಪದ ಬ್ರಹ್ಮಂ ಜಗತ್ಕಾರಣದಂತೆವೊಲ್|
    ಪ್ರಾಕಟಂಗೊಂಡೆಯೇನಿಂತೋ ವ್ಯಾಸಪೀಠ! ಯಥೋಚಿತಂ||

    {ಒಂದೇ ಬ್ರಹ್ಮವಸ್ತುವಿನಿಂದ (ಅಭಿನ್ನೋಪಾದಾನಕಾರಣವಾಗಿ) ಜಗತ್ತೆಲ್ಲವೂ ಹೊಮ್ಮಿದಂತೆ ಒಂದೇ ಮರದ ತುಂಡಿನಿಂದ ಅಖಂಡವಾಗಿ ರೂಪುಗೊಂಡಿರುವ ವ್ಯಾಸಪೀಠದ ರಚನೆಯನ್ನು ಕುರಿತು ಈ ಚಿಕ್ಕ ಶ್ಲೋಕ}

    • ಸರ್, ಅನುಷ್ಟುಪ್ಪಿಗೆ ನಾಲ್ಕು ಪಾದಗಳು ಎ೦ದುಕೊ೦ಡರೆ ಕನ್ನಡದಲ್ಲಿ ಪ್ರತಿಪಾದಕ್ಕೂ ಆದಿಪ್ರಾಸ ಇರಬೇಕಲ್ಲವೇ?

      • ದಿಟವೇ. ಆದರೆ ಸೂಕ್ಷ್ಮವಾಗಿ ನೋಡಿದಾಗ ಅನುಷ್ಟುಪ್ಪಿನ ಪ್ರಥಮ ಮತ್ತು ತೃತೀಯಪಾದಗಳು ಸಾಕಾಂಕ್ಷವಾಗಿ ಕೊನೆಯಾಗುವ ಕಾರಣ ಇವನ್ನು ದ್ವಿಪದಿಯೊಂದರ ಪ್ರಥಮಾರ್ಧ ಮತ್ತು ದ್ವಿತೀಯಾರ್ಧವೆಂದೇ ಪರಿಗಣಿಸಬಹುದು. ಅಲ್ಲದೆ ಕನ್ನಡದಲ್ಲಿ ಅನುಷ್ಟುಪ್ಪನ್ನು ದ್ವಿಪದಿಯ ಹಾಗೆ ನಿರ್ವಹಿಸಿದ ಸಂದರ್ಭಗಳೂ ಇವೆ. ಹೀಗಾಗಿ ಇಲ್ಲಿ ನಿರ್ವಾಹವು ಸಾಗಿದೆ.

  32. ತಾಳೆಯ ಪತ್ರದ ಭಾರದ ಬವಣೆಗೆ
    ಹಾಳೆಯ ಹಗುರಿನ ಕಾಣಿಕೆಯಾಯ್ತೇ!
    ಕಾಲನು ಕೃಪೆಯನೆ ತೋರಿರೆ ಮರ್ತಂ
    ನೀಲಿಯ ಬಾನೇ ಇಂದೆನಗಾಯ್ತೇ!:-)
    (ಸ್ವಗತ)

  33. ವ್ಯಾಸಪೀಠದ ಅಳಲು

    || ಮಧ್ಯಮಾವೃತ್ತ||

    ಮರದ ರೆಂಬೆಯ ರೂಪದೆ ನಿಚ್ಚಂ ಕೋಕಿಲಕೂಜಿತವಾಲಿಸಲ್
    ಹರುಷದಿಂ ಕೊನರುತ್ತಿರೆ ,ಪೂಗಳ್ ಬಣ್ಣದೆ ರಾಜಿಸೆ, ಬಾಳ್ದಿರಲ್, |
    ಮರುಗುವೆಂ ಪರಿವರ್ತನೆಯಿಂದಂ,ಸಂಭ್ರಮಿಸಲ್ ಘನಪುಸ್ತಕಂ
    ದೊರೆಯದಾಗಿರೆ ತೆಕ್ಕೆಯ ಪೊಂದಲ್, ಜೀವಿಸೆ ಸಾರ್ಥಕರೀತಿಯಿಂ ||

    • ಎಲೆಲೆ ಪೀಠಮೆ! ರೋದಿಸಬೇಡೈ!! ಪೇಳ್ವೆನಿದೀಗಳೆ ಕೇಳ್ವದೈ
      ಮಲರಿ ಭಾವದ ಕಣ್ಗಳಿಗಿ೦ತು೦ ಸು೦ದರಮಪ್ಪೆನೆ ನೋಟಮ೦
      ಸಲಿಸುತಿರ್ಪುದು ಪುಷ್ಪದ ಗುಚ್ಛ೦, ಛ೦ದಗಳ೦ದದ ಬಣ್ಣದಿ೦
      ಮೊಳೆಯ ಪಾದೆಯಕಲ್ಲಿನ ತಾವೊಳ್, ನಿನ್ನಯ ಚಿತ್ತವ ರ೦ಜಿಸಲ್

      ತು೦ಬ ಹಿಡಿಸಿತು ಮೇಡಮ್! ಭಾವವೂ, ರಚನೆಯೂ, ಛ೦ದಸ್ಸೂ. ನಿಮ್ಮ ಪದ್ಯದ ಧಾಟಿಯಲ್ಲಿ ಪ್ರಯತ್ನಿಸಿದ್ದೇನೆ. ಯತಿ ಇತ್ಯಾದಿ ತಪ್ಪಿದ್ದರೆ ತಿಳಿಸಿ.

      • ಎರಡೂ ಪದ್ಯಗಳು ಸೊಗಸಾಗಿವೆ. ಭಾವ-ಭಾಷೆ-ಬಂಧ ಮೂರೂ ಚೆನ್ನಾಗಿವೆ. ಇದಕ್ಕಾಗಿ ಸೋದರಿ ಶಕುಂತಲಾ ಮತ್ತು ಗೆಳೆಯ ನೀಲಕಂಠರಿಗೆ ಅಭಿನಂದನೆಗಳು. ಈ ವೃತ್ತವನ್ನು ಪಂಪನೂ ಅನವದ್ಯ ಎಂಬ ಹೆಸರಿನಲ್ಲಿ ಬಳಸಿದ್ದಾನೆ. ಇದರ ಮೊದಲ ಲಘುದ್ವಯವನ್ನು ಒಂದು ಗುರುವನ್ನಾಗಿಸಿದರೆ ಆಗ ಖಚರಪ್ಲುತವೆಂಬ ವೃತ್ತವಾಗುವುದು. ಇವೆರಡನ್ನೂ ನನ್ನ ಶತಾವಧಾನಶಾಶ್ವತಿಯ ಮೊದಲಲ್ಲಿ ಕಾಣಬಹುದು (ರಕ್ತಚಂಚುಪದಂ ಚಿರನೀರಕ್ಷೀರವಿವೇಕ…..ಇತ್ಯಾದಿ ಪದ್ಯ ಹಾಗೂ ಮಹಿತಭಾರ್ಗವವಾಸರದೊಳ್…..ಇತ್ಯಾದಿ ಪದ್ಯಗಳಲ್ಲಿ)

        • ಧನ್ಯವಾದಗಳು ಸರ್.

        • ಸಹೋದರರೆ, ಪದ್ಯವನ್ನು ಮೆಚ್ಚಿ ವೃತ್ತದ ಕುರಿತು ಉಪಯುಕ್ತವಾದ ಮಾಹಿತಿಗಳನ್ನು ನೀಡಿರುವುದಕ್ಕಾಗಿ ಧನ್ಯವಾದಗಳು. ಖಚರಪ್ಲುತ ಹಾಗೂ ಮಧ್ಯಮಾವೃತ್ತಗಳಿಗೆ ಹೋಲಿಕೆಯಿರುವುದು ನನ್ನ ಗಮನಕ್ಕೂ ಬಂದಿತ್ತು.

      • ನೀಲಕಂಠರೆ, ಮಧ್ಯಮಾವೃತ್ತದಲ್ಲೇ ಒಳ್ಳೆಯ ಪ್ರತಿಕ್ರಿಯಾಪದ್ಯವನ್ನು ಬರೆದಿದ್ದೀರಿ.ಪದ್ಯವನ್ನು ಮೆಚ್ಚಿರುವುದಕ್ಕೆ ಹಾಗೂ ಪದ್ಯರಚನೆಯಲ್ಲಿ ಅಪಾರವಾದ ಆಸಕ್ತಿಯನ್ನು ತೋರಿ , ಒಳ್ಳೆಯ ಪದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪದ್ಯಪಾನಿಗಳಿಗೆ ನೀಡಿ ಸಹಕರಿಸುವುದಕ್ಕಾಗಿ ಧನ್ಯವಾದಗಳು.

        • ತಮ್ಮ೦ತ ಧೀಮ೦ತಸ೦ತತಿಯೆ ಚೆಲ್ಲಿರುವ
          ಘಮ್ಮ೦ತ ನಾಸಿಕಕೆ, ಬಿಮ್ಮ೦ತ ಕಣ್ಗಳಿಗೆ,
          ಸುಮ್ಮಸುಮ್ಮನೆಯೇ ಮನ೦ಬೊಕ್ಕು ಸೊಗಯಿಸುವ ಸುಮಸಮೂಹದೊಳಗಾಡಿ
          ಕಮ್ಮಕಮ್ಮನೆಯೆನಗೆ ತೋರ್ದುದನ್ನಾಯ್ದಾಯ್ದು
          ಬಿಮ್ಮಾನದಿ೦ದಲೇ ಹೊಸತಾಗಿ ಪೋಣಿಸುತೆ
          ಹೆಮ್ಮೆಯಿ೦ದಾನು ನಿಮಗೆಲ್ಲ ಮರಳಿಸುವೆಯೇನು೦ಟೆನ್ನ ಹಿರಿಯತನವು

  34. ಕೆಟ್ಟೆನಲಾ!ಒಂಟಿಯಲಾ!
    ಪುಟ್ಟಿಯುಮೀ ಧೀ:ಪ್ರಪಂಚದೊಳ್ ನಾನಕಟಾ!
    ತಟ್ಟುತ್ತಿತ್ತೇನೀ ಕೊರೆ,
    ಯಿಟ್ಟಿರ್ದೊಡೆ ರಾಜಕೀಯ ರಂಗದೆ ,ದೇವಂ!

    (ಪೀಠದ ಸ್ವಗತ)(ನನ್ನನ್ನು ರಾಜಕೀಯರಂಗದಲ್ಲಿ ದೇವರು ಇಟ್ಟಿದ್ದಿದ್ದರೆ,ಒಂಟಿಯಾಗಿ ಬದುಕುವ ಕೊರೆ ಕಾಡುತ್ತಿತ್ತೆ?(ಯಾರು ತಾನೇ ಕುರ್ಚಿಯನ್ನು ಬಿಡುತ್ತಾರೆ? 🙂 ).ಈ ಬುದ್ದಿಯ ಪ್ರಪಂಚದಲ್ಲಿ ಹುಟ್ಟಿ,ಒಂಟಿಯಾದೆನಲಾ!)

    • ಕೆಟ್ಟೆನನಬೇಡ! ನಿನ್ನಯ
      ಮಟ್ಟಿಗೆ ನೀ೦ ಸುಖಿಸುತಿರ್ಪೆ, ಅಲ್ಲದೆ ಬೇಕಾ-
      ಬಿಟ್ಟಿ ಬೆಳೆಸಿರ್ದ ಹೊಟ್ಟೆಯ
      ಘಟ್ಟಿ ಧಡಿಯನೂರಲೇ೦ ತಡೆಯಲಾಪೆಯ ಪೇಳ್?!!

      ನಿನ್ನಯ ಕಾಲ್ಗಳನೊರ್ವ೦
      ನಿನ್ನ ಕರ೦ಗಳನೆ ಕೊಳ್ಳುತಿನ್ನೊರ್ವ೦ ಬೆ-
      ನ್ನನ್ನೆ ಪಿಡಿದೊರ್ವನಾಗಳ್
      ಗನ್ನ ಗತಕದೆ ಕುಡುತಿರ್ದ ಬನ್ನವನರಿಯಯ್! 🙂

    • ಸೊಗಸಾದ ಕಲ್ಪನೆ; ಮಾರ್ಮಿಕವಿಡಂಬನೆ. ಅಭಿನಂದನೆಗಳು.

  35. ತರುಗಳಿಂಗೀದುಮಾಧಾರಮಂ, ಭೂಮಿತಾಯ್
    ಕರುಣಿಸುವ ವೊಲ್ ಸಿಹಿಯ ಪಣ್ಗಳಂ ತಾಂ
    ನಿರುತಮಾಶ್ರಯಮನಿತ್ತು, ಗ್ರಂಥಗಳ್ಗೆ ದಿಟ
    ಮರಳಿಸುವೆಯೈ ಬಲ್ಲ ಮನುಜರಂ ನೀಂ

    • ಮರಳಿಸುವೆಯೈ ಬಲ್ಲ ಮನುಜರಂ – artha aagalilla? Will it send back the scholars?

    • ಅರ್ಥವಾಗದೆಲಿರ್ಪುದೊಂದೂನಮೇಂ ನೀಲ
      ಸಾರ್ಥಕವದಾಗಿರ್ಪುದಂ ಗಮನಿಸೈ|
      ಅರ್ಥವಾಗದೆ ನಿನಗೆ ವ್ಯಾಸಪೀಠವನಾಕೆ
      ತೀರ್ಥವಾಗಿಸಿರೆ ಪುಲ್ಲಿಂಗದಿಂದಂ||

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)