Mar 132016
 

ಪೃಥ್ವೀ ಛಂದಸ್ಸಿನ ಕೆಳಗಿನ ಸಾಲನ್ನು ಬಳೆಸಿ ಸಮಸ್ಯಾಪೂರಣವನ್ನು ಮಾಡಿ:

ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ

  147 Responses to “ಪದ್ಯಸಪ್ತಾಹ ೧೯೩: ಸಮಸ್ಯಾಪೂರಣ”

  1. ಶಿರಸ್ಥಸುರಗಂಗೆಯೇ ಪ್ರವಹಿಸಿರ್ದು ಮೈಯಾಂತು ಶಂ-
    ಕರಂ ಸ್ಥಗಿತನಪ್ಪವೋಲ್ ಕುಳಿತಿರಲ್ಕೆ ತತ್ಪುತ್ರನಾಂ,
    ಬರಂ ಬಲಕದೇಂ ಕಣಾ ಎನಗೆ, ತಂದೆಗಾಂ ಪಾತ್ರನಯ್
    ಕರಂಗೆನೆನುತುಂ ಗಡಂ ಜಲದೊಳಿರ್ದ ವಿಘ್ನೇಶ್ವರಂ

    ಆಶುಕವಿತಾಗೋಷ್ಠಿಯಲ್ಲಿ ಪೂರೈಸಿದ್ದು, ಸ್ವಲ್ಪ ಬದಲಾವಣೆಗಳೊಂದಿಗೆ (ಮರೆತಿದ್ದರಿಂದ) 🙂
    ತಲೆಯ ಮೇಲಿಂದ ಮೈತುಂಬಾ ಹರಿಯುತ್ತಿರುವ ಗಂಗೆಯೇ ಇರಲು, ಶಂಕರನು ಸ್ತಬ್ಧನಾಗಿ ಕೂತಿರುವಾಗ, ಅವನ ಮಗ ನಾನೇನು ಕಮ್ಮಿ ಎಂದು…

    • ನೀಲಕಂಠರೆ, ಕಲ್ಪನೆ ಚೆನ್ನಾಗಿದೆ. ಮೊದಲನೇ ಪಾದವು “… ಪ್ರವಹಿಸಿರ್ಪ ಮೈಗೊಂಡ ..” ಆದಲ್ಲಿ ಒಳಿತೆ ? ಎರಡನೇ ಪಾದದಲ್ಲಿ-“…ಸ್ಥಗಿತನಪ್ಪವೋಲ್..”-“.. ಸ್ಥಗಿತನಾಗುತುಂ..” ಆಗಬೇಕೆ ? ಮೂರನೇ ಪಾದ- “ಬರಂ ಬಲಕದೇಂ ಕಣಾ ಎನಗೆ.. ” ಅರ್ಥವಾಗಲಿಲ್ಲ. “ಕಣಾ ಎನಗೆ”- ವಿಸಂಧಿದೋಷವಾಗುವುದಿಲ್ಲವೆ ?ಸಮಸ್ಯಾಪಾದವನ್ನು ಸ್ವಲ್ಪ ಬದಲಾಯಿಸಿದ್ದೀರಲ್ಲಾ ! 🙂

      • ಧನ್ಯವಾದಗಳು ಮೇಡಮ್. ಮೊದಲೆರಡು ಪಾದಗಳನ್ನು ತಿದ್ದಿಕೊಳ್ಳುತ್ತೇನೆ. ವಿಸಂಧಿದೋಷವೇನೂ ಇಲ್ಲ. ಕಣಾಯೆನಗೆ ಆಗುತ್ತದೆ ಸಂಧಿ ಮಾಡಿದರೂ. ಕಣಾ ಸಂಬೋಧನೆ ಅಲ್ಲವೇ? ನನಗೆ ಬಲಕ್ಕೇನು ಬರ?! ತಂದೆಗೆ ತಕ್ಕ ಮಗ.. ಎಂದರ್ಥ. ಸಮಸ್ಯಾಪಾದ ಹೀಗೆಯೇ ಇತ್ತು, ಗೋಷ್ಠಿಯಲ್ಲಿ ಗಣೇಶ್ ಸರ್ ಕೊಟ್ಟಿದ್ದು. ಸುಮ್ಮನೇ ಕಾಪಿ ಮಾಡಿ ಹಾಕಿದ್ದು 🙂

    • ಘನವಾದ ಕಲ್ಪನೆ! ಆದರೆ ಒಂದೇ ವ್ಯತ್ಯಾಸ.
      ಶರ್ವ ನಲುಗದೆಲಿರ್ದ ಸುರಿವ ಗಂಗಾಜಲಕೆ
      ಸರ್ವಕಾಲಕು ಶುದ್ಧಿಯಿಂದಿರ್ಪನೈ|
      ಸೇರ್ವ ಪಂಕವನು ಪೊರಬಂದೊಡನೆಯೇ ಕಡೆಗ-
      ಖರ್ವನಿದ್ದೇಂ ನೀರೊಳೆನಿತೊ ಕಾಲಂ||
      (ಅಖರ್ವ=giant. ಭದ್ರಾಕೃತಿಯೊಳೊಪ್ಪುವ ಸಮಸ್ತಸಿದ್ಧಿಪ್ರದಾಯಕ ವಿನಾಯಕ -ಲಕ್ಷ್ಮೀಶ)

  2. “ನರೋತ್ತಮರ ಭಕ್ತಿಗಂ ಕರಗುವೆಂ ಗಡಾನೇಗಳುಂ,
    ಪರಾಙ್ಮುಖದ ಭಕ್ತಿಗಾನೊಲಿಯೆನ್, ಅರ್ತಿಕಾಪಟ್ಯಕಂ|
    ಕರಂಗೆನ್”ಎನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ,
    “ಶರೀರಮನೆ ದ್ರಾವಿಪೆಂ ಬದಲಿಗೆನ್ನದೇ ಕಾಣಿರೈ”||

    • ಹಾದಿರಂಪರೆ,ಪದ್ಯವು ತುಂಬ ಚೆನ್ನಾಗಿದೆ.” ಗಡಾನೇಗಳುಂ”- “ಏಗಳುಂ “ಎಂದರೆ ಯಾವಾಗಲೂ ಎಂದರ್ಥವೆ ? “ಆವಗಂ” ಎಂದಾಗಬೇಕೆ ?
      ” ದ್ರಾವಿಪೆಂ”-” ದ್ರವಿಪೆಂ”ಆಗಬೇಕೆ ? “ಬದಲಿಗೆನ್ನದೇ”-“ಬದಲಿಂಗೆನ್ನದೇ” ಆಗಬೇಕೆ ? (ಛಂದಸ್ಸು ಕೆಡುವುದು)

      • ಧನ್ಯವಾದಗಳು. ಹೌದು, ಏಗಳುಂ=ಯಾವಾಗಲೂ. ಕಿಟ್ಟೆಲ್-ಏ5ನಲ್ಲಿ ಅಸ್ಪಷ್ಟವಾದ ವಿವರಣೆಯಿದೆ. ಆದರೆ ಕಾವ್ಯದಲ್ಲಿ ಇದು ಪ್ರಯುಕ್ತವಾಗಿದೆ ಎಂದು ಶ್ರೀ ಕೊಪ್ಪಲತೋಟರಿಂದ ತಿಳಿದುಕೊಂಡೆ.
        ಬದಲಿಂಗೆ ಸರಿಯಿರಬಹುದು. ಪರಿಶೀಲಿಸುವೆ.
        ದ್ರವಿಪೆಂ=ಕರಗುವೆ ಹಾಗೂ ದ್ರಾವಿಪೆಂ=ಕರಗಿಸುವೆ ಅಲ್ಲವೆ?

  3. ಪರಂಪರೆಯ ಹಬ್ಬಮಂ ನದಿಯ ತೀರದೊಳ್ ಮಾಡಿರಲ್
    ಪುರೋಹಿತನು ಬಿಂಬದೊಳ್ ಕಂಡ ದೈವಕುಂ ಪೂಜಿಸಲ್
    ತರಂಗಗಳೆ ಮೂಡುತುಂ ನಡುಗುತಿರ್ದವೋಲ್ ಕಂಡರುಂ
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ

    • LoL. When two are in the same tumultuous state, mutually they seem perfectly normal
      ನದ್ಯೂರ್ಮಿಗಳ ದಾಳಿಗಂ ಸಿಲುಕಿಹನುಮಲ್ತೆ
      ವಿದ್ಯಾಗಣಪನೊಂದಿಗೆ ವಿಪ್ರನುಂ|
      ಹೃದ್ಯಗಣಪನ ಕಂಪಮೆಂತೈ ಪುರೋಹಿತಗೆ
      ವೇದ್ಯ ಪೇಳ್ ನಿಜಕಂಪನದ ಕಣ್ಣಿಗಂ??

    • ಚೀದಿಯವರೆ, ಒಳ್ಳೆಯ ಕಲ್ಪನೆಯ ಪೂರಣ. ಹಬ್ಬಮಂ- ಪರ್ಬಮಂ, ಪುರೋಹಿತನು-ಪುರೋಹಿತನೆ, ತರಂಗಗಳೆ- ತರಂಗಂಗಳೆ ಆಗಬೇಕಿರುವುದರಿಂದ, ತರಂಗಮಿರೆ, ನಡುಗುತಿರ್ದವೋಲ್-ನಡುಗುತಿರ್ಪವೋಲ್ , ಕಂಡರುಂ-ಕಂಡೊಡಂ- ಆಗಬೇಕೆ ?

  4. ಸರಾಗದೆ ನಿವೇದಿಸಲ್ ವಿವಿಧ ಭಕ್ಷ್ಯ ಭೋಜ್ಯಂಗಳಂ
    ಧರಾತಲದೆ ನೀಂಗಳೇ ಪ್ರಿಯಮದಾಗಿರಲ್ಕೆಂದಿಗುಂ

    ಕರಂಗಳೊಳಗಲ್ಲದಾಂ ನೆಲೆಸಿರಲ್ಕೆ ನಿಮ್ಮಾತ್ಮದೊಳ್,
    ಕರಂಗೆನೆನುತಿರ್ಪನಯ್, ಜಲದೊಳಿರ್ಪ ವಿಘ್ನೇಶ್ವರಂ

    • ಒಳ್ಳೆಯ ಕಲ್ಪನೆ ಕಾಂಚನಾ. ಆದರೆ, ಮೊದಲನೇ ಪಾದದಲ್ಲಿ ಛಂದಸ್ಸು ತಪ್ಪಿದೆ. “ಸರಾಗದೆ ನುತಿಸುತ್ತುಮೇ ಕೊಡಲು ಭಕ್ಷ್ಯಭೋಜ್ಯಂಗಳಂ”- ” ಸರಾಗದೆ ನಿವೇದಿಸಲ್ ವಿವಿಧಭಕ್ಷ್ಯಭೋಜ್ಯಂಗಳಂ ” ಎಂದು ಸವರಬಹುದೆ ?ಅಂತೆಯೇ, ಮೂರನೇ ಪಾದದಲ್ಲಿ, “ಕರಂಗಳೊಳಗಲ್ಲದೇ”- “ಕರಂಗಳೊಳಗಲ್ಲದಾಂ” ಆದಲ್ಲಿ ಒಳಿತೆ ?

  5. ಶಿರಂಗಳನೆ ಬಾಗಿಸುತ್ತೆ ನಟಿಸಿರ್ಪೊಡೇಂ ಭಕ್ತಿಯಂ!
    ದುರಾತ್ಮರನನೊಪ್ಪೆನೈ! ತಿಳಿವೆ ಮಿಥ್ಯಸತ್ಯಂಗಳಂ,
    ಹರೋದ್ಭವನೆ ಸಂದಿರಲ್, ಬರಿದೆ ತೋರ್ಕೆಯಾವೇಶಕಂ
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ!

    • ಭಾಗಿಸುತ್ತೆ- ಬಾಗಿಸುತ್ತೆ, ಧುರಾತ್ಮ-ದುರಾತ್ಮ ಎಂದಾಗಬೇಕು.
      ದುರಾತ್ಮರನನೊಪ್ಪೆನೈ- ದುರಾತ್ಮಕರನೊಪ್ಪೆನೈ- ಆಗಬೇಕೆ ?
      ತಿಳಿವೆ- ತಿಳಿವೆಂ ಆದಲ್ಲಿ ಒಳಿತು . ಛಂದಸ್ಸಿಗೆ ಹೊಂದದ ಕಾರಣ , ತಿಳಿಯೆ ಎಂದು ಸವರಬಹುದೆ?
      ಹರೋಧ್ಬವನೆ ಸಂದಿರಲ್- ಏನೆಂದು ಅರ್ಥವಾಗಲಿಲ್ಲ.

      • ಬಹಳವಾದುವು ತಪ್ಪುಗಳು:-) ತಿದ್ದಿರುವದಕ್ಕೆ ಧನ್ಯವಾದಗಳು.ಹರನಿಂದ ಜನಿಸಿದವನೆಂದು ಹರೋ..ವನ್ನು ಬಳಸಿದೆ 🙂

  6. ಕರಂಗಳಿನೆ ಕೆತ್ತಿರಲ್,ಪಡೆಯೆ ಶಿಲ್ಪಿಗಂ ಕಲ್ಲಿನಿಂ,
    ಸರೋವರದೆ ಕಾಡಿನೊಳ್ ಮೆರೆಯೆ ಪೀಠದೊಳ್ ಸ್ಥಾಪಿಸಲ್,|
    ಸರಂಗೊಳುತೆ ಪೂಗಳಿಂದೆಸೆವ ಭಕ್ತಪಾಲಾಗ್ರಗಂ,
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ ||

    • ಮೇಡಮ್, ಏನು ತಾತ್ಪರ್ಯ? ಮೂರನೇಯ ಸಾಲಿನ ಅರ್ಥವಾಗಲಿಲ್ಲ.

      • ಪದ್ಯದ ತಾತ್ಪರ್ಯ : ಶಿಲ್ಪಿಯು ಕೈಗಳಿಂದಲೆ ಕೆತ್ತಿ ಕಲ್ಲಿನಿಂದ ಪಡೆದಿರಲು, ಕಾಡಿನ ಸರೋವರದಲ್ಲಿ ಮೆರೆಯಲೆಂದು ಪೀಠದಲ್ಲಿ ಸ್ಥಾಪಿಸಿರಲು,ಹೂಗಳಿಂದ ಸರವನ್ನು ಹೊಂದಿ ಶೋಭಿಸುವ,ಭಕ್ತರನ್ನು ಪಾಲಿಸುವ ನಾಯಕನಾದ ,ನೀರಿನಲ್ಲಿರುವ ವಿಘ್ನೇಶ್ವರನು ಕರಗೆನೆಂದು ಹೇಳುತ್ತಿರುವನು
        ಮೂರನೇ ಪಾದ: ಪೂಗಳಿಂ ಸರಂಗೊಳುತೆ ಎಸೆವ ಭಕ್ತಪಾಲಾಗ್ರಗಂ
        ಅಗ್ರಗ= ನಾಯಕ

    • ’ಶಿಲ್ಪಿ’ಶಬ್ದಕ್ಕೆ ಶಿಲ್ಪಿಕ/ಶಿಲ್ಪಿಗ ಎಂಬ ರೂಪಗಳಿರುವುದು ಮಜವಾಗಿದೆ. ಮೋಲ್ನೋಟಕ್ಕೆ ಶಿಲ್ಪಿಗ ಎನ್ನುವುದು slang ಎನಿಸುತ್ತದೆ – ಮೂರ್ತ್ಗ, ರಾಮ್ಗ ಇದ್ದಂತೆ. ಇದಕ್ಕೆ ದಾಯಾದಿಯೆನಿಸುವ ’ಕಬ್ಬಿಗ’ಶಬ್ದವಿರುವುದು ಇನ್ನೂ ಮಜವಾಗಿದೆ. ’ಕಬ್ಬಿಗ’ದಿಂದ ’ಕಬ್ಬಿ’ಯನ್ನು ಬೇರ್ಪಡಿಸಲಾಗದು! ಅಥವಾ, ’ಕಬ್ಬಿಗ’ದ ಸ್ತ್ರೀಲಿಂಗವಾಗಿ ’ಕಬ್ಬಿಗಿ’ ಎನ್ನುವುದಕ್ಕಿಂತ ’ಕಬ್ಬಿ’ ಎಂದರೆ, ’ಬಿಗಿ’ತವನ್ನು ಕಳೆದುಕೊಂಡು ಕಬ್ಬಿನಂತೆ ಸಿಹಿಯಾಗುತ್ತದೆಯೆ/ತ್ತಾಳೆಯೆ 🙂

      • ಹಾದಿರಂಪರೆ, ನೀವು ಪದಸಂಶೋಧನೆಗೆ ತೊಡಗಿರುವಂತಿದೆ. “ಕಬ್ಬೀ… ” ಎಂದು ಕಬ್ಬಿಗದ ಸ್ತ್ರೀಲಿಂಗವಾಗಿ ಕರೆದಾಗ ಕೆಲವರು ಕಬ್ಬಿಣದಂತೆ ಬಿಗಿಯಾಗಬಹುದು. ಮತ್ತೆ ಕೆಲವರು ಕಬ್ಬಿನಂತೆ ಸಿಹಿಯಾಗಲೂಬಹುದು. ಸಂಶೋಧನೆಯನ್ನು ಪ್ರಾಯೋಗಿಕವಾಗಿ ನೀವು ಮಾಡಿದಲ್ಲಿ, ಪರಿಣಾಮವನ್ನು ನೋಡುವವರಿಗೆ ಇನ್ನೂ ಮಜವಾಗಬಹುದು. 🙂

        • “ಹಾದಿರಂಪ” ಎಂಬ ನಾಮಧೇಯವು ಚಾಲ್ತಿಗೆ ಬಂದಿರುವದರ ಪರಿಣಾಮವಿದೆಂಬ ಗುಮಾನಿ,ಶಕುಂತಲಾ! 🙂

        • ಶ್ರೀ ಬಿ.ಎಂ.ಶ್ರೀ.ಯವರ ಮಾತಿಲ್ಲಿ ಸ್ಮರಣೀಯ. ಅದನ್ನು ಅವರ ಶಿಷ್ಯ ಶ್ರೀ ಬಿ.ಜಿ.ಎಲ್. ಸ್ವಾಮಿಯವರು ಉಲ್ಲೇಖಿಸಿರುವುದು ಇಂತಿದೆ:
          ನೀವು ತಮಿಳರ ತಮಿಳುತನವನ್ನು ಗಮನಿಸಬೇಕು. ಎನ್ ಕರುಂಬೇ, ಎನ್ ತೇನೇ ಎಂದರೆ ಎಷ್ಟು ಇನಿದಾಗಿರುತ್ತದೆ. ಅದೇ ಕನ್ನಡದಲ್ಲಿ ಎನ್ನ ಕಬ್ಬೇ ಎನ್ನ ಜೇನೇ ಎಂದರೆ ಜೇನುಹುಳುವಿನಿಂದ ಕಚ್ಚಿಸಿಕೊಂಡ ಅನುಭವವಾಗುತ್ತದೆ!

        • ಈ ವಿಷಯದಲ್ಲಿ ’ಪ್ರಯೋಗ’ವೆಂದರೆ ಹಲವು ’ಕಬ್ಬಿ’ಗಳನ್ನು ಆಶ್ರಯಿಸುವುದು. ಆಗ, ನೀವು ಹೇಳಿದಂತೆ ’ಪರಿಣಾಮವನ್ನು ನೋಡುವವರಿಗೆ ಇನ್ನೂ ಮಜ’ವಾಗಿರುತ್ತದೆ. ಅದಕ್ಕೆ ಅವಕಾಶವನ್ನು ಕೊಡಲಾರೆ Ms. Sadist!

  7. ನಿರಾಕರಿಸಿಲೊಪ್ಪ್ವರೇಂ! ಕೊಳುವರಲ್ತೆ ಕಾಂಚಾಣದಿಂ
    ತರಾತುರಿಯೊಳಿರ್ದಿರಲ್ ಜನತೆಯಿಂದು,ವೈಯಾರಕಂ!
    ಸರಾಗದಿನೆ ಮಣ್ಣಿನೊಳ್ ಕಡಯಲೊಲ್ಲದಾಗಿರ್ದರಿಂ
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ!

  8. ವಿರಾಗಮನೆ ತಾಳ್ದಿರಲ್ ನಿಜದ ಬಂಧ ಸಂಬಂಧದೊಳ್,
    ಸರಾಗಮನೆ ಮೇಣ್ ,ದಿಟಂ ನಿರುತಲೋಕ ಕಲ್ಯಾಣದೊಳ್!
    ಸುರಾಂಗನೆಯೆ ಬಂದೊಡಂ ವರಿಸೆ!ನಾರ ಮಾತಿಂಗುಮಾಂ
    ಕರಂಗೆನೆನುತಿರ್ಪನೈ !ಜಲದೊಳಿರ್ಪ ವಿಘ್ನೇಶ್ವರಂ!

    • ತುಂಬ ಚೆನ್ನಾಗಿದೆ 🙂 ತಾಳಿರಲ್- ತಾಳ್ದಿರಲ್ ಆದಲ್ಲಿ ಒಳಿತು.

    • ಒಳ್ಳೆ ಕೀಲಕ 🙂 ಆದರೆ ಜಲದೊಳಿರ್ಪ ಎನ್ನುವುದಕ್ಕೆ ಏನೂ ಸಮರ್ಥನೆ ಸಿಕ್ಕುವುದಿಲ್ಲ..

      • ತಾನು ಒಂದುಕಡೆ ನಿಲ್ಲುವನಲ್ಲ!ಒಂದೇ ರೀತಿ ಸಲ್ಲುವನಲ್ಲ! ಸಂಸಾರಿಯಾದರೆ ಹೇಗೆ ?ಎನ್ನುತಾ.. ಸ್ಥಿತ್ಯಂತರಗೊಳುತಿರ್ಪಾಗ ಹೇಳಿರುವದೆಂದು ತಿಳಕೊಳ್ಳಿ,ನೀಲಕಂಠರೇ 🙂

    • hhahha ಚೆನ್ನಾಗಿದೆ

  9. ಪರಂ ಪ್ರಕೃತಿಯಿಂತಿರಲ್ ಜನರದೆಂತೊ ತಂದೆನ್ನನೀ-
    ಸರಸ್ಸಲಿಲದೊಳ್ ಧುಡುಮ್ಮೆನುತೆ ಬೀಳ್ಗುಡುತ್ತುಂ ಮುದಾ-
    ತಿರೇಕದೊಳಗಾಡೆ, ನೀರ್ ಕಿಡದಿರಲ್ಕಿದೋ ಮೈಮೆಯಿಂ
    ಕರಂಗೆನೆನುತಿರ್ಪನಯ್ ಜಲದೊಳಿರ್ದ ವಿಘ್ನೇಶ್ವರಂ

    ಕರಗಿ ಮೈಮೇಲಿನ ಬಣ್ಣ, ಪ್ಲಾಸ್ಟಿಕ್ ಮಾಲೆ ಇತ್ಯಾದಿ ನೀರಲ್ಲಿ ಹರಡಿ ಮಾಲಿನ್ಯವಾಗ್ತದೆ ಅಂತ, ತನ್ನ ಮಹಿಮೆ ಕರಗದೇ ಕೂತುಬಿಟ್ಟ. 🙂

    • ಕರಗದೆ ಕೂಡುವುದು ಎಂದು ನಿರ್ಧರಿಸಿದಮೇಲೆ, ಬಣ್ಣ, ಪ್ಲಾಸ್ಟಿಕ್ ಮಾಲೆ ಇತ್ಯಾದಿಗಳನ್ನು ತನ್ನ ಮೈಮೇಲೆಯೇ ಉಳಿಸಿಕೊಂಡಿದ್ದರಾಗಿತ್ತು. ಮಾಲಿನ್ಯವು ತಪ್ಪುತ್ತಿತ್ತು 🙁

      • ಹೌದು, ಅವನ್ನು ಹಿಡಿದುಕೊಂಡು ಉಳಿಸಿಕೊಳ್ಳಲೆಂದೇ ಕರಗದೇ ಇದ್ದ.

  10. ಶ್ರಾಮಣಮಾಸದಲ್ಲಿ ಬೀದಿಬೀದಿಯಲ್ಲಿ ಕೂಡಿಸಿದ ಗಣೇಶ – ಬಯಲಿನಲ್ಲಿ ಸೂರ್ಯನು ಅವನನ್ನು ಬೇಯಿಸಿದ
    “ಧರಾಪಥದೊಳಲ್ಲಿಯುಂ ಮಗುಳೆ ಇಲ್ಲಿಯುಂ ನೋಡಿರೈ
    ಗಿರೀಶಸುತನೆನ್ನ ಶ್ರಾವಣದೆ ಪೂಜಿಪರ್ ಪೋರರೈ|
    ದುರಾತ್ಮನೆ ಗಡೆಂತು ನೀಂ ಸುಡುವೆ ಈಗ ನಾಂ ನೋಳ್ಪೆ,” ಭಾ-
    ಸ್ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ||
    (ಎನೆನು = ಹೇಳಿ ಹೇಳಿ…)

  11. ಗಣೇಶನು ಈಗ ಮುಳುಗಿರುವ ಸಮುದ್ರವು ಚಂದ್ರನ ಮನೆ. ಚಂದ್ರನಿಗೆ ಹೇಳುತ್ತಾನೆ, “ಈಗೇನಾನ ನಕ್ಯೋ, ಒಂದ್ ಕೈ ನೋಡ್ಕಂತೀನಿ. ನಿನ್ ಮನ್ಯಾಗೇ ಕಾಯ್ಕೊಂಡ್ ಕುಂತಿವ್ನಿ ಬಾ.”
    ಪರಾಕ್ರಮಮನಂದು ನೀಂ ಮೆರೆದವೋಲ್ ಗಡೀಗಳ್ ವಲಂ
    ಕರಾಲಮುಖ! ನಕ್ಕೆಯಾದೊಡೆ, ನಿಜಾಲಯಕ್ಕೈದುತುಂ(ಚಂದ್ರನ)
    ಪರಾಭವವ ಪೊಂದುವೈ ತವನಿರೀಕ್ಷಕಂ ನಾಂ,” ವಿಭಾ-
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ||
    (ಎನೆನು = ಎನು+ಎನು emphasis)

  12. ಕರಂಗಳನೆ ತಟ್ಟುತುಂ ನಗುತುಮಿರ್ಪೊಡೇಂ,ಗೊಳ್ಳನೇ,
    ಸರೋವರದೆ ಬಿದ್ದೊಡಾಂ, ಬಿಡದೆ ಚಂದ್ರಲೋಕಾಧಿಪಂ!
    ನಿರೋಧಿಪುದು ಗೊತ್ತಿರಲ್, ಬಗೆಯ ವೃತ್ತಿಯಂ,ಕೋಪದೊಳ್
    ಕರಂಗೆನೆನುತುಮಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ!

  13. ಸರೋವರದ ಮಧ್ಯಭಾಗದೊಳಗುದ್ಭವಂಗೊಂಡವಂ
    ಪರಂಪರೆಯೊಳಿಂದಲರ್ಚನೆಯಗೊಂಡು, ಭಕ್ತಾದಿಗಂ
    ವರಂಕುಡುತೆ ತಾಂ ಗಡಾ ತಣಿಯೆ, “ಕಾನಿಪಾಕಂ”ನೊಳುಂ
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ!

    ಕೋಲಾರದ ಸಮೀಪದಲ್ಲಿರುವ “ಕಾನಿಪಾಕಂ”ನ “ಸ್ವಯಂಭು” ವಿನಾಯಕನ ದಿವ್ಯ ಸ್ಮರಣೆಯಲ್ಲಿ

    • ಆಹಾ, ಒಳ್ಳೆ ಕಲ್ಪನೆ ಮೇಡಮ್. ಕೆಲವು ತಿದ್ದುಗೆಗಳು.. ಪೃಥ್ವಿಯು ಯತಿಪ್ರಬಲವಾದ್ದರಿಂದ ಮಧ್ಯದೊಳ್ ಮಹಿಮೆಯುದ್ಭವಂ.. ಎಂದು ಮಾಡಬಹುದು. ಪರಂಪರೆಯ ಪೂಜೆಯಂ ಕೊಳುತೆ ನೀತಭಕ್ತಾಳಿಗಂ. ಭಕ್ತಾದಿಗಂ ಎಂದು ಏಕವಚನದಲ್ಲಿ ಹೇಳುವುದು ಕೇಳಿಲ್ಲ. ಆದ್ದರಿಂದ ಭಕ್ತಾಳಿ ಮಾಡಿದೆ. ಗಡಾ ನಿವಾರಣೆಗೋಸ್ಕರ ಸರ್ವದಾ ಹಾಕಬಹುದು. 🙂

      • ಧನ್ಯವಾದಗಳು ನೀಲಕಂಠ. (ಸವರಣೆಗಳನ್ನು ಗಮನಿಸಿಕೊಂಡಿದ್ದೇನೆ).

        ಸರೋವರದ ಮಧ್ಯದೊಳ್ ಮಹಿಮೆಯುದ್ಭವಂಗೊಂಡವಂ
        ಪರಂಪರೆಯ ಪೂಜೆಯಂ ಕೊಳುತೆ ನೀತಭಕ್ತಾಳಿಗಂ.
        ವರಂಕುಡುತೆ ಸರ್ವದಾ ತಣಿಯೆ, “ಕಾನಿಪಾಕಂ”ನೊಳುಂ
        ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ!

  14. ನರಂಮೆರಕದಿಂ ಗಣೇಶಮೂರುತಿ ಲೋಹದಿಂ ನಿರ್ಮಿಸಲ್
    ಕರಂ ಮುಗಿದು ಪರ್ವವಂ ಮುಗಿಸಲು ಗೌರಿಯಾ ಪುತ್ರನಂ
    ಸರಾಗದಲಿ ಗಂಗೆಯೊಳ್ ಮುಳುಗಿಸೆ, ಲೋಹದೊಳ್ ಮಾಡಿರಲ್
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ

    • Ankita, ಛಂದಸ್ಸು ತಪ್ಪಿದೆ ಬಹಳ ಕಡೆ. ನರಂ ಎರಕದಿ ನರನೆರಕದಿ ಆಗುತ್ತದೆ.

      • ಹೌದು ಸರ್, ಅನೇಕ ಕಡೆ ಛಂದಸ್ಸು ತಪ್ಪಿದೆ. ಪರೀಕ್ಷೆಗೆ ಹೋಗುವ ಭರದಲ್ಲಿ ಮತ್ತೊಮ್ಮೆ ನೋಡಲೇ ಇಲ್ಲ !

        • ಇದು ಪರೀಕ್ಷೆಯಲ್ಲವೆ?

          • ಹೌದು, ಈ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ !

          • ಪ್ರಯತ್ನವನ್ನು ಪಾಸು-ಫೇಲುಗಳಿಂದ ಅಳೆಯಲಾಗದು. ನನ್ನ ಕಾಮೆಂಟಿನ ಅರ್ಥವೇ ಬೇರೆ. ಶಾಲೆಯ ಆರು ಪಾಠ್ಯಪುಸ್ತಕಗಳು ಬಹಳವೇನಲ್ಲ. ವರ್ಷಾರಂಭದ ಬೇಸಗೆರಜೆಯಲ್ಲಿಯೇ ಸುಲಭದಲ್ಲಿ ಓದಿಮುಗಿಸಬಹುದಾದವು. ಇನ್ನೆಷ್ಟನ್ನೋ ಹೀರಿಕೊಳ್ಳುವ ಸಾಮರ್ಥ್ಯವು ನಿನ್ನ ಬುದ್ಧಿಮನಸ್ಸುಗಳಿಗಿವೆ. ಸಾಹಿತ್ಯದಲ್ಲಲ್ಲದೆ ಇತರ ಒಂದೆರಡು ಕಲೆಗಳಲ್ಲಿ ತೊಡಗಿಕೊಳ್ಳುವುದು ಈಗ ನಿನಗೆ ಭಾರವೇನಾಗುವುದಿಲ್ಲ.

  15. ಪರಾಶ್ರಯಕೆ ನನ್ನನೊಪ್ಪಿಸಿಹರಯ್ಯ ಪರ್ವಾಂತ್ಯದೊಳ್
    ಶರಾವತಿಯ ನೀರೊಳಾನುಸಿರುಗಟ್ಟುತುಂ ಸಾಯಲೇಂ|
    ಚರಾಚರವಿಧಾತೃವೇ! ಸುತನನೋವೆಯೇನೆಂದು ಶಂ-
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ||

    • ಸರ್, ಮೂರನೆಯ ಚರಣದಲ್ಲಿ ಪ್ರಾಸ ತಪ್ಪಿತಲ್ಲ !

      (ಹಾದಿರಂಪ ಎನ್ನುವುದು ಯಾರ ಕಾವ್ಯನಾಮ ಎಂದು ತಿಳಿಯಲಿಲ್ಲ ! )

      • ಓ ಹೌದು ಒಮ್ಮೊಮ್ಮೆ ಹೀಗಾಗುತ್ತದೆ. ’ಭವಾರಿಯಿರೆ ವಿಶ್ವಕಂ …………..’ ಎಂದು ತಪ್ಪಾಗಿ ರಚಿಸಿದ್ದ ಮೂರನೆಯ ಪಾದವನ್ನು ಸವರಿದ್ದೇನೆ.
        ರಂ.ಪ.=ರಂಗನಾಥ್ ಪ್ರಸಾದ್ (prasAdu). ‘ರಂಪ’ಕ್ಕೆ ‘ಹಾದಿ’ಯನ್ನು prefix ಮಾಡಿ ’ಮಂಕುತಿಮ್ಮ’ನಂತೆ ’ಅಂಕಿತ’ವಾಗಿಸಿಕೊಂಡಿದ್ದೇನೆ! ನನ್ನ ಕೆಲವೊಂದು ಪಂಚಮಾತ್ರಾಪದ್ಯಗಳಲ್ಲಿ ಈ ಅಂಕಿತವಿದೆ. ಶ್ರೀ ಗಣೇಶರಲ್ಲದೆ ಇತರ ಪಾನಿಗಳೂ ಹೀಗೆಂದು ನನ್ನನ್ನು ಸಂಬೋಧಿಸುತ್ತಾರೆ ಕೂಡ.
        ’ಕಾವ್ಯನಾಮ’ (ಕಾವ್ಯಕ್ಕೆ ನಾಮವಿಡುವವನು) ಎಂದೆಲ್ಲ ಹಂಗಿಸಬಾರದು ನೀನು ನನ್ನನ್ನು! ಇರಲಿ, ’ಹಾದಿರಂಪ’ರನ್ನು ಸರ್ ಎಂದೇಕೆ ಸಂಬೋಧಿಸಿದೆ? ಸ್ತ್ರೀಲಿಂಗದಲ್ಲಿ ಅದು ಹಾದಿರಂಪಿ ಎಂದಾಗುತ್ತದೆಯೆ? 🙂

        • *ನೋವದೇನೆಂದು ಅಥವಾ ನೋವುಯೇನೆಂದು ಮತ್ತು *ಶಂಕರಂಗೆಯೆನುತಿರ್ಪನಯ್ ಎಂದಾದರೆ ಸೂಕ್ತವಲ್ಲವೇ ?

          ನಾನೂ ಶಂ -ಕರಂಗೆ ಎಂದು ಒಂದು ಪದ್ಯ ರಚಿಸಿ , ಆಮೇಲೆ ನನ್ನ ಹಳೆಗನ್ನಡ ಮಹಾತ್ಮೆಯಿಂದಾಗಿ ಅದನ್ನು ಕೈ ಬಿಟ್ಟೆ . ಅದರಲ್ಲಿ -ಯೆನುತಿರ್ಪನ್ ಎಂದು ಬರೆದಿರುವುದರಿಂದ ನನಗೀ ಸಂದೇಹ

          • ಅಲ್ಲಿ ನೋವೇ ಇಲ್ಲ. ಸುತನನೋವೆಯೇನೆಂದು=ಸುತನನು+ಓವೆಯೇನು(ಸಲಹದಿಹೆಯೇನು)+ಎಂದು.
            ಶಂಕರಂಗೆಯೆನುತಿರ್ಪನಯ್ ಎಂದು ಸಮಸ್ಯಾಪಾದವನ್ನು ಬದಲಿಸುವ ಸ್ವಾತಂತ್ರ್ಯ ಪಾನಿಗಿಲ್ಲ. ಈ ಹಿಂದೆಯೇ ಸ್ಪಷ್ಟೀಕರಿಸಿರುವಂತೆ ಎನು+ಎನು=ಎನೆನು ಎಂಬ ದ್ವಿರುಕ್ತಿಯಾಗಿ (emphasis/ repeated utterance) ಬಳಸಿದ್ದೇನೆ.

          • ಹಾದಿರಂಪರಿಗೆ ಧನ್ಯವಾದಗಳು .

  16. ಕರ೦ಗಿಸುವೆ ಕೊಬ್ಬನುಂ ಗಣಪ ಕಾಯಮಮ್ ಯೆಂದು ತಾ
    ನ್ನಿರೋಧಿಸುತೆ ತಿ೦ಡಿಯಂ ಜನನಿಯು೦ ಫಲಾಹಾರಕೆ೦I
    ದರಣ್ಯದೆಡೆ ಪೋಪುದಂ ನುಡಿದು, ಕಾರ್ತಿಕೆಯಂ ನಗಲ್
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ II

    ಗಣಪನ ಕೊಬ್ಬು ಕರಗಿಸಲು ಪಾರ್ವತಿ ಹಣ್ಣುಗಳನ್ನು ತರಲು ಅರಣ್ಯಕ್ಕೆ ಹೋಗಿರುವಳೆಂದು ಗಂಗಾನದಿಯಲ್ಲಿ ಸ್ನಾನಕ್ಕಿಳಿದ ಗಣಪನನ್ನು ಕಾರ್ತಿಕೇಯ ಪರಿಹಾಸ್ಯ ಮಾಡುತ್ತಿರುವುದು

    • ’ಕಾಯದಲ್ಲಿನ ಕೊಬ್ಬು’ ಅಥವಾ ’ಕಾಯದಿಂದ ಕೊಬ್ಬನ್ನು’ ಎಂದು ಸ್ಪಷ್ಟವಾಗಿ ಹೇಳಬೇಕು.
      ತಾನ್ನಿರೊಧಿಸುತೆ ಸಾಧುವಲ್ಲ. ತಾಂ ನಿರೋಧಿಸುತೆ ಎಂದು ಸವರಬಹುದು.
      ಅಷ್ಟಾದರೂ ’ಕರಂಗೆನ್’ ಎಂದು ಗಣಪ ಹೇಳಬೇಕಾದರೆ, ಅದು ’ನಮ್ಮಜ್ಜಿಯ ಏಕಾದಶಿ’ಯಂತೆಯೇ ಸೈ!

      • ಧನ್ಯವಾದಗಳು .

        ಕರ೦ಗಿಸುವೆ ಕೊಬ್ಬಿದಾ ಗಣಪ ದೇಹವ೦ ಯೆಂದು ತಾ
        ನಿರೋಧಿಸುತೆ ತಿ೦ಡಿಯಂ ಜನನಿಯು೦ ಫಲಾಹಾರಕೆ೦I
        ದರಣ್ಯದೆಡೆ ಪೋಪುದಂ ನುಡಿದು, ಕಾರ್ತಿಕೆಯಂ ನಗಲ್
        ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ II

    • ಹಹಾ.. ಚೆನ್ಭಾನಾಗಿದೆ. ಭಾಲರೇ. ಕಾಯಮಮ್ ಎಂದು ಆಗುತ್ತದೆ. ಯೆಂದು ಅಲ್ಲ. ಆವಾಗ ಕಾಯಮನೆಂದು ಎಂದು ಸಂಧಿಯಾಗ್ತದೆ.

      • ಭಾಲರೇ ಎಂಬುದನ್ನು ಸಂಬೋಧನೆಯಾಗಲ್ಲದೆ ಒಂದು ಏಕಶಬವಾಕ್ಯವಾಗಿಸಿದ್ದೀರಿ. Spelling mistake. ಭಲರೇ ಎಂದಾಗಬೇಕು 😉

      • ನೀಲಕಂಠರಿಗೆ ಧನ್ಯವಾದಗಳು (ಈ ಸಲ ಹೆಸರನ್ನು copy & paste ಮಾಡಿದೆ ) 😉

  17. ಸರೋವರದೊಳಿರ್ಪವೊಲ್, ಮುಳುಗಿ,ತಸ್ಕರಂ ಮಿತ್ರತ
    ಸ್ಕರಂಗೆನೆ!,ಎನುತಿರ್ಪನಯ್,ಜಲದೊಳಿರ್ಪ ವಿಘ್ನೇಶ್ವರಂ-
    “ಪರಾಂಬರಿಸಿ!ವಿದ್ಯೆಯಂ ತ್ಯಜಿಸಿರಿನ್ನು!ಪಿಂದಿಂತೆಯೇ,
    ದುರಾತ್ಮ ಕುರುರಾಯನುಂ ಸೆರೆಗೆ ಸಂದದಂ ಬಲ್ಲಿರೇಂ!”

    (ಕಳ್ಳನೊಬ್ಬನು ತನ್ನ ಮಿತ್ರನಿಗೆ ಸರೋವರದಲ್ಲಿ ಬಂದು,ಅಡಗುವಂತೇ ಕೇಳುತ್ತಿರುವಾಗ,ಪಕ್ಕದಲ್ಲೇ ಇದ್ದ ಗಣಪನು ಹೀಗೆ” “ಉಪದೇಶಿಸಿದ:-))

    • ಚೆನ್ನಾಗಿದೆ ಕಲ್ಪನೆ ಮತ್ತು ಕೀಲಕ 🙂

      • ಹಾದಿರಂಪರ ಹಾದಿ….:-)

        • ಕಲ್ಪನೆ ಚೆನ್ನಾಗಿದೆ. ಅದೆಷ್ಟೋ ಕೀಲಕಪದಗಳನ್ನು ಪಟ್ಟಿಮಾಡಿಟ್ಟುಕೊಂಡಿದ್ದೇನೆ. ’ತಸ್ಕರ’ ತಪ್ಪಿಸಿಕೊಂಡಿದ್ದ. ಅಭಿನಂದನೆಗಳು.
          ಹಾದಿರಂಪನ ಹಾದಿಯಾತನದೆ ಪೇಟೆಂಟು
          ಮೇದಿನಿಯೊಳಾರ್ಗಮಿನ್ನುಚಿತಮಲ್ಲಂ|
          ಬಾದರಾಯಣ(ಸಂ)ಬಂಧಮಿಹ ಪದ್ಯಗಳು ಬರಿದೆ
          ಬೀದಿರಂಪಂ, ಅವಲ್ತು ಹಾದಿರಂಪಂ|| 😀

          • ‘ತಸ್ಕರ’ ನೀರಲ್ಲಿ ಮುಳುಗಿದ್ದರಿಂದ ,ಸಿಗಲಿಲ್ಲವೇನೋ!

          • ನೀರಿನಲ್ಲಿ ಮುಳುಗಿದ್ದವನು ತಸ್ಕರನಲ್ಲ, tuskಅರ!

  18. Having collected funds for my festival, you have helped yourselves to good clothes, goggles, shoes etc. But you have draped me in just paint!
    “ದುರಾಸೆಯೆನಿತಯ್ಯ ಬಂಡವಳಮಾಗಿಸುತ್ತೆನ್ನನುಂ
    ನರಾಧಮನೆ ಚಶ್ಮಮಂ ಬಹಳವಸ್ತ್ರಮಂ ಕೊಂಡೆಯೈ|
    ಅರೋಚಕದ ವಸ್ತ್ರಮೇನೆನಗೆ ಬಣ್ಣದಿಂ ಮಾತ್ರ” ಕಿಂ-
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ||
    (ಜಲದೊಳಿರ್ಪ is redundant. ಹೊಲದೊಳಿರ್ಪ ಎಂದೂ ಓದಿಕೊಳ್ಳಬಹುದು)

  19. “ನಿರಕ್ಷರರುಮೆನ್ನನುಂ ಮುಳುಗಿಸಿರ್ಪರೈ ಕೂಪದೊಳ್
    ನಿರೀಕ್ಷೆಯೆನದೈ ಸಹಾಯ್ಯಮದು ಬರ್ಪುದೀಗೆನ್ನುತುಂ|
    ಸರಾಗದೊಳು ನೀರ ಪೀರಿ ಬಿಡೆಸೆನ್ನನುಂ,” (cloud)ವಾರಿತ-
    ಸ್ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ||

  20. ಚರಾಚರ ವಿಶಿಷ್ಟ ಜೀವಜಡ ವಾಸ್ತು ವಿನ್ಯಾಸದೊಳ್
    ತರಾವರಿಯ ಗಾಜ ಗೊಂತಿನಲಿ ಮೀನ ನೀರಾಟಮಂ ।
    ಪರಾಂಬರಿಸಲಾನೆ ಸೊಂಡಿಲವೊಲಿರ್ಪುದಾಕಾರಮಂ
    “ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ” !!

    “ಅಕ್ವೇರಿಯಂ”ನಲ್ಲಿ ಕಂಡ ಕಲ್ಪನೆಯ ಗಜಾನನ !!

  21. ನರಂ ಗಣಪ -ಗೌರಿಯಂ ಜಲದೊಳಿಟ್ಟೊಡಂ, ಸಾಗಿಹರ್
    ಹರಸ್ಥಳಕೆ, ಪೋಗುವಾ ಪಥದಿ ಮೋದಕಂ ನೀಡಲೈ
    ಸರಾಗದಲಿ ಸೊಂಡಿಲಲ್ಲಿಡಲು ಬೇಗ ಕೈಯೊಡ್ಡುತಂ
    “ಕರಂಗೆ” ಎನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ

    (ಕೈಲಾಸಕ್ಕೆ ಹೊರಡುವಾಗ ತಾಯಿಯು ಗಣೇಶನ ಸೊಂಡಿಲಿನಲ್ಲಿ ಮೋದಕವಿಡಲು, ತಿಂಡಿಪೋತ ಗಣೇಶ ಮತ್ತೊಂದು ಮೋದಕವನ್ನು ಕೈಯಲ್ಲಿಡು ಎನ್ನುತ್ತಿದ್ದಾನೆ.)

    • ಚೆನ್ನಾಗಿದೆ 🙂 ನೀಡುತುಂ ಎಂದರೆ ಹೊಂದುತ್ತದೆ. ನರರ್ ಎಂದರೆ ಹೆಚ್ಚು ಉಚಿತವಾದೀತು.

    • ಕೀಲಕಾನುಕಲನ ಚೆನ್ನಾಗಿದೆ. ಸಮಸ್ಯಾಪಾದದಿಂದ ಒಂದು ವ್ಯಂಜನವನ್ನು ಲುಪ್ತಗೊಳಿಸಿದ್ದರೂ (ನ್), ಮೂಲಾರ್ಥವು ವ್ಯತ್ಯಯವಾಗದಿರುವುದರಿಂದ ಸಾಧು.
      ೧) ಜಲದೊಳಿಟ್ಟಿರಲ್ (’ಇಟ್ಟೊಡಂ’ ಎಂದರೆ ’ಇಟ್ಟರೂ’ ಎಂದಾಗುತ್ತದೆ)
      ೨) ’ಮೋದಕಮಂ’ ಎನ್ನುವುದು ಮೇಲು. ’ಪೋಗುವಾ ಪಥದಿ ಮೋದಕಂ’ – ’ದಾರಿಯೊಳ್ ಕಡುಬ ಪುತ್ರಗಂ’ ಎಂದು ಸವರಬಹುದು.
      ೩) ನೀಡಿಹಳ್, ಸರಾಗದಲಿ ಸೊಂಡಿಲೊಳ್ವಡೆದು ಬೇಗ ಕೈಯೊಡ್ಡುತುಂ

      • Prasadu,
        “’ಇಟ್ಟೊಡಂ’ ಎಂದರೆ ’ಇಟ್ಟರೂ’ ಎಂದಾಗುತ್ತದೆ” ಎಂದು ಹೇಳಿದ್ದೀರಿ
        ಇಟ್ಟೊಡನೆ ಎಂಬರ್ಥ ಬರುತ್ತದೆಯಲ್ಲವೆ?

        • ತತ್ಕ್ಷಣ ಎಂಬರ್ಥವಿಲ್ಲ (ಒಡಂ not = ಒಡನೆ). ’ಇಟ್ಟರೂ’ ಎಂದಲ್ಲದೆ ’ಇಟ್ಟಾಗ/ಇಟ್ಟರೆ’ ಎಂಬೊಂದು ಅರ್ಥವೂ ಇದೆ. ಇದನ್ನೂ ನಾನು ಹೇಳಬೇಕಾಗಿತ್ತು. ಆದರೆ ಈ ಎರಡೂ ಅರ್ಥಗಳು ಇಲ್ಲಿ ಪ್ರಶಸ್ತವೆನಿಸವೇನೋ.

    • ನೀಲಕಂಠರೆ, ಹಾದಿರಂಪರೆ,

      ಕರಂಗೆ ಎಂಬ ಪದಪ್ರಯೋಗವು ಕೈಗೆ ಎಂಬರ್ಥದಲ್ಲಿ ಸರಿಯಾಗುವುದೆ? ಕರಕೆ ಅಥವಾ ಕರಕ್ಕೆ ಎಂಬುದು ಸರಿಯಲ್ಲವೆ ? ಹೆಚ್ಚಿನ ತಿದ್ದುಗೆ ಬೇಡವೆಂದು ಇದನ್ನು ಪರಿಗಣಿಸಿಲ್ಲವೆ ?

      • ಓಹ್, ಕರಂಗೆ ಎನ್ನುವುದನ್ನು ಕರಕ್ಕೆ ಎಂಬರ್ಥದಲ್ಲಿ ಬಳಸಿದ್ದಾಳೆ ಎಂದುಕೊಳ್ಳಲಿಲ್ಲ. ಇಷ್ಟಕ್ಕೇ ತೃಪ್ತನಾಗಲಾರೆ ಎಂಬ ಅರ್ಥದಲ್ಲಿದೆ ಎಂದುಕೊಂಡೆ. ಅಂಕಿತಾ, ನಿನ್ನ ಗಮನಕ್ಕೆ…

      • ನಿಮ್ಮ ಮೂರನೆಯ ಪ್ರಶ್ನೆ ಸಾಧು.

      • “ಕರಂಗೆ” ಎನ್ನುವುದನ್ನು ಬಾಲಗಣಪನ “ತೊದಲುನುಡಿ” ಎಂದೆಣಿಸಿದರೆ ಸೊಗಸಾದ ಪೂರಣ !!

        • ’ಕೈಯೊಡ್ಡುತುಂ’ ಎಂದು ಆಗಲೇ ಹೇಳಿರುವುದರಿಂದ ಕರಂಗೆ=ಕರಂ-ಕುರುಂಗೆ (ಕೈಚಾಚಿದ) ಎನ್ನಬಹುದೇನೋ!

  22. ಹರಾಮರರೆ!ಪರ್ವದೊಳ್, ತೊಡಿಸಿ ಕಂಡ ವೇಶಂಗಳಂ,
    ಪುರಾತನ ರೀತಿಯಂ ಮರೆಸೆ ಬಧ್ಧರಾಗಿರ್ಪರೈ!
    ಚಿರಂ ,ಮೊದಲಿನಂದಮನ್ನೆಳಸಲೆನ್ನ ತಾಯ್,ನೈಜದಾಂ
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ!
    (ಬೇರೆ ಬೇರೆ ರೀತಿಯ ವೇಶವನ್ನು ತೊಡಿಸಿ,ಮೂಲರೂಪವನ್ನು ಮರೆಸುತ್ತಿರೆ ಜನರು,ತನ್ನ ತಾಯಿಯ ಇಚ್ಚೆಯಂತೇ ಕರಗದೇ(ಬದಲಾಗದೇ) ,ಇದ್ದಹಾಗೇ ಇರುವೆ!)

  23. ಕರ೦ಗಳೊಳು ಮೋದಕಂಬಡೆದು ಚೌತಿಯ೦ದುಂಡು ಬ –
    ರ್ಪರಿಂಜಯನ ಮೂಷಿಕಂ ತಡೆಗೆಡಲ್ ಕೆಸರ್ವೊಂದಿ ಬಿ –
    ದ್ದರೆಕ್ಷಣಕೆ ಚಂದಿರಂ ಕಿಸಿದು ಹಾಸ್ಯ ಗೈಯಲ್ ಸುಧಾ –
    -ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ II

    • ಅರ್ಥ ಆಯಿತು, ಆದರೆ ತಾತ್ಪರ್ಯ ಏನು? ಸಮಸ್ಯೆಗೆ ಹೇಗೆ ಪೂರಣವಾಯಿತು? ಅರೆಕ್ಷಣ ಅರಿಸಮಾಸವಾಯಿತು.

      • ಅರ್ಥವಾಯಿತಲ್ಲಾ . ಅಷ್ಟೇ ಸಾಕು .ಸಾಧ್ಯವಾದರೆ ಸರಿ ಮಾಡುತ್ತೇನೆ . ಗಣಪ ನುಡಿಯುತ್ತಿರುವುದನ್ನು ಒಬ್ಬ ಇನ್ನೊಬ್ಬನಿಗೆ ಹೇಳುವಂತೆ ನನ್ನ ಕಲ್ಪನೆ .
        ನಿಮ್ಮ ಎರಡೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಒಂದೇ ಆಗಿರುವುದು — ನನ್ನ ಹಳೆಗನ್ನಡ ‘ಪಾಂಡಿತ್ಯ’ಕ್ಕೆ ಕೀಲಕಪದದೊಂದಿಗೆ ಬರೆಯಲು ಸಾಧ್ಯವಿದೆಯೇ ಎಂದು ಪ್ರಯತ್ನಿಸಿರುವುದು . 🙂

        • ನೀಲಕ೦ಠ ರೇ ,

          ಬಿ- -ದ್ದಿರಲ್ ಚಣದೆ ಎಂದು ಬರೆದರೆ ಸರಿಯಾಗುವುದೇ ? ಮೇಲೆ ಕೊಟ್ಟ ‘ರ ‘ಕಾರ ಪ್ರಾಸಕ್ಕೆ ‘ರಲ್’ ಎಂಬ ಪ್ರಾಸ ಹೊಂದಿಕೆಯಾಗುದಿಲ್ಲ ಎಂದೆಣಿಸಿಕೊಂಡಿದ್ದೆ . ಶಕುಂತಲ ಅವರು ಬರೆದ ಪದ್ಯದಲ್ಲಿ ಆ ತರದ ಪ್ರಾಸವಿರುವುದರಿಂದ ಸರಿಯಾಗಿರಬಹುದು ಅಂದು ಕೊಳ್ಳುತ್ತಿದ್ದೇನೆ .

    • ಕರ೦ಗಳೊಳು ಮೋದಕಂಬಡೆದು ಚೌತಿಯ೦ದುಂಡು ಬ –
      ರ್ಪರಿಂಜಯನ ಮೂಷಿಕಂ ತಡೆಗೆಡಲ್, ಕೆಸರ್ವೊಂದಿ ಬಿ –
      ದ್ದಿರಲ್ ಚಣದೆ ಚಂದಿರಂ ಕಿಸಿದು ಹಾಸ್ಯ ಗೈಯಲ್ ಸುಧಾ –
      -ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ II

  24. ಕರಾಳಬಿದಿಯಾಟದೊಳ್ ನೆಲವ ನುಂಗಿ ನೀರಾಗಿರಲ್
    ಪರಾಭವಮನೂಡಿರಲ್ ಪುರುಷಶಕ್ತಿಸಾಮರ್ಥ್ಯಮುಂ
    ತರಂಗಭರವಾಹಮಂ ಬರಿದೆ ನೋಡುತುಂ ಸಾಕ್ಷಿಯೋಲ್
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ
    [ಪ್ರವಾಹದಲ್ಲಿನ ಗಣೇಶನ (ಕಲ್ಲಿನ) ಮೂರ್ತಿಯನ್ನು ಕಲ್ಪಿಸಿಕೊಳ್ಳುವುದು]

    • ಸರ್ ಚೆನ್ನಾಗಿದೆ. ಕರಾಳಬಿದಿ ಅರಿಸಮಾಸವಲ್ಲವೇ? ಳಕಾರದಿಂದಾಗಿ ಸಾಧುವಾಯಿತೇ? ಕರಾಲವಿಧಿ ಅಂತಲೂ ಮಾಡಬಹುದು.

      • _/\_ ಕರಾಳ ಕನ್ನಡ, ಕರಾಲ ಸಂಸ್ಕೃತ. ಆದ್ದರಿಂದ ಕರಾಳಬಿದಿ ಅರಿಸಮಾಸವಲ್ಲ ಅನ್ನಿಸುತ್ತದೆ

    • ಊಡು= to join/put/apply, a support ಎಂಬ ಧನಾತ್ಮಕ ಅರ್ಥಗಳಿವೆ. ಇಲ್ಲಿ ’(ಸೋಲನ್ನು) ಹೊಂದಿರಲು’ ಎಂಬ ಅರ್ಥದಲ್ಲಿ ಬಳಸಿರುವಿರ?

  25. ಕರಾವಳಿಯ ಮೋದಮೇಂ? ವಿತತವಾರಿಯೊಳ್ ಬಲ್ಮೆಯೇಂ?
    ತರಂಗಕುಲವಾಹಮೇಂ? ತರಳರಾಸದುತ್ಥಾನಮೇಂ?
    ನಿರಾಕರಣಗೊಂಡುವೈ ದಡಕೆ ಕೂಗುವಾಲಾಪಗಳ್
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ
    [ವಿಘ್ನೇಶ್ವರ ಎಂಬವನು ಕರೆದರೂ ನೀರಿನಿಂದ ಮೇಲೆ ಬರದಿರುವುದರ ಕುರಿತು]

    • !!! ಸರ್, ಯಾವ ಛಂದಸ್ಸು?

      • ಪೃಥ್ವೀ ಅಲ್ಲವೇ 🙂
        [ಪ್ರತಿ ಸಾಲುಗಳ ಎರಡೂ ಕಡೆಗಳಲ್ಲಿ ವ್ಯತ್ಯಾಸವಾಗಿತ್ತಲ್ಲವೇ? ಈಗ ಸರಿಯಾಗಿರಬೇಕು 🙂 ]

  26. ಕರಂಗಳಿನೆ ಮಣ್ಣನೇ ಕಲಸಿ ರೂಪಿಸಲ್ ಮೂರ್ತಿಯಂ,
    ವರಂಗಳನಪೇಕ್ಷಿಸುತ್ತೆ ಜನರೆಲ್ಲರುಂ ಪೂಜೆಗೈ-|
    ದಿರಲ್, ವಿಧಿಯಿರಲ್, ವಿಸರ್ಜಿಸಿರೆ ಪಳ್ಳದೊಳ್,”ಭಕ್ತಿಗಂ
    ಕರಂಗೆನೆ”ನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ ||

    ಪದ್ಯದ ಅರ್ಥ: ಕೈಗಳಿಂದಲೆ ಮಣ್ಣನೇ ಕಲಸಿ ಮೂರ್ತಿಯನ್ನು ರೂಪಿಸಿರಲು, ಜನರೆಲ್ಲರೂ ವರಗಳನ್ನಪೇಕ್ಷಿಸುತ್ತ ಪೂಜೆಗೈದಿರಲು, ವಿಧಿಯಿರಲು, ಹಳ್ಳದಲ್ಲಿ ವಿಸರ್ಜಿಸಿರಲು, “ಭಕ್ತಿಗೆ ಕರಗೆನೆ “? ಎಂದು ನೀರಿನಲ್ಲಿರುವ ವಿಘ್ನೇಶ್ವರನು ಹೇಳುತ್ತಿರುವನು.

    ಕರಂಗೆನೆನುತಿರ್ಪನೈ= ಕರಂಗೆನೆ + ಎನುತಿರ್ಪನೈ

    • ಆಹಾ, ಚೆನ್ನಾಗಿದೆ ಮೇಡಮ್ 🙂

    • ಬಹಳ ಒಳ್ಳೆಯ ಪೂರಣ ಶಕುಂತಲಾರವರೆ.

      • ನೀಲಕಂಠರಿಗೆ ಹಾಗೂ ರಾಮಚಂದ್ರರಿಗೆ ಧನ್ಯವಾದಗಳು.

    • ’ಎ’ಸ್ವರದ ಮುಂದೆ ಸ್ವರವು ಬಂದರೆ, ಯಕಾರಾಗಮವಾಗುತ್ತದೆ: ಮನೆ+ಅಲ್ಲಿ/ಇಲ್ಲಿ/ಉಂಟು/ಎಲ್ಲಿ/ಒಲ್ಲೆ=ಮನೆಯಲ್ಲಿ/ಯಿಲ್ಲಿ/ಯುಂಟು/ಯೆಲ್ಲಿ/ಯೊಲ್ಲೆ. ಹಾಗಾಗಿ ಕರಂಗೆನೆ+ಎನುತಿರ್ಪನೈ=ಕರಂಗೆನೆಯೆನುತಿರ್ಪನೈ ಆಗುತ್ತದಲ್ಲವೆ?
      ಕರಂಗೆನೆನುತಿರ್ಪನೈ=ಕರಂಗೆನು/ನ್+ಎನುತಿರ್ಪನೈ. ಬೇರೆ ಸಾಧ್ಯತೆಗಳಿವೆಯೆ?

      • ನಾನು ತಿಳಿದಂತೆ, ಎಕಾರದ ಮುಂದೆ ಯಾವುದೇ ಸ್ವರವು ಬಂದಾಗ, ಯಕಾರಾಗಮಸಂಧಿಯೇ ಆಗಬೇಕೆಂಬ ನಿಯಮವೇನಿಲ್ಲ.ಲೋಪಸಂಧಿಯನ್ನೂ ಮಾಡಬಹುದು.

        ಉದಾಹರಣೆಗೆ, ಕ್ರಮದೆ+ಆಯ್ತು= ಕ್ರಮದಾಯ್ತು, ಇಂದ್ರಂಗೆ+ಐರಾವತಂ= ಇಂದ್ರಂಗೈರಾವತಂ, ನೆಲದಿಂದೆ+ಉಣ್ಬಂ= ನೆಲದಿಂದುಣ್ಬಂ,ಲೇಸಿಂಗೆ+ಒಡೆಯಂ=ಲೇಸಿಂಗೊಡೆಯಂ, ಮುಡಿಗೆ+ಇಕ್ಕಿದಂ= ಮುಡಿಗಿಕ್ಕಿದಂ, ಪೊಲದೆ+ಎಳ್ತಂದಂ=ಪೊಲದೆಳ್ತಂದಂ….

        ನಿನಗೆ+ಎಷ್ಟು=ನಿನಗೆಷ್ಟು,ಒಳಗೆ+ಎಲ್ಲಿ=ಒಳಗೆಲ್ಲಿ,ಕೆಳಗೆ+ಇರುವ=ಕೆಳಗಿರುವ,ಹೀಗೆ+ಅಂದು= ಹೀಗಂದು,ನನಗೆ+ಉಂಟು=ನನಗುಂಟು….

        ಆದರೆ ಅರ್ಥಪ್ರತೀತಿಗೆ ಭಂಗವಾಗುವಂತಿದ್ದಲ್ಲಿ ಮಾತ್ರ ಯಕಾರ ಅಥವಾ ವಕಾರದ ಆಗಮವಾಗಬೇಕಾಗುತ್ತದೆ. ಹೀಗಾಗಿ, ಕರಂಗೆನೆ+ಎನುತಿರ್ಪನೈ=ಕರಂಗೆನೆನುತಿರ್ಪನೈ ಎಂಬಲ್ಲಿ ಲೋಪಸಂಧಿಯನ್ನು ಮಾಡಬಹುದೆಂದು ನನಗೆ ಅನಿಸುತ್ತದೆ. “ಕರಂಗೆನೆಯೆನುತಿರ್ಪನೈ” ಎಂದು ಯಕಾರಾಗಮಸಂಧಿಯನ್ನು ಮಾಡುವುದು ಉಚಿತವೆನಿಸುವುದಿಲ್ಲ. ತುಂಬ ತಿಳಿದವರಿಂದ ನನ್ನ ಅನಿಸಿಕೆಗಳ ತಪ್ಪೊಪ್ಪುಗಳನ್ನು ನೀವು ತಿಳಿದುಕೊಳ್ಳಬಹುದು.

        • ನನಗೆ ಇಲ್ಲಿ ತೊಡಕಾದದ್ದು ಅರ್ಥಪ್ರತೀತಿನಿಯಮವೇ – ಇನ್ನಷ್ಟುಕಾಲ ಅದು ತೊಡಕಾಗಿ ಉಳಿಯುತ್ತೇನೋ! ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು.

        • ಶಕುಂತಲಾರ ಸ್ಪಷ್ಟೀಕರಣ – ಕರಂಗನೆನುತಿರ್ಪನೈ = ಕರಂಗೆನೆ + ಎನುತಿರ್ಪನೈ ಎಂದಾಗುದಾದಲ್ಲಿ, ಕೆಲವು ಪೂರಣಗಳ ಅರ್ಥವೇ ಬದಲಾಗಲಿದೆ !! (ವಿಶೇಷವಾಗಿ ನನ್ನ “ಕಾನಿಪಾಕಂ” ಗಣೇಶನ ಪದ್ಯ)

          • ಎಲ್ಲ ಪೂರಣಗಳೂ ಒಂದೇ ತೆರನಾಗಿಯೇ ಇರಬೇಕೆಂದೇನಿಲ್ಲವಲ್ಲ, ಉಷಾ!. ಹೀಗೆ ಕಿಲಕಪದವನ್ನು ವಿಭಜಿಸಿ,ಪೂರಣವನ್ನು ಮಾಡುವದು, ಒಂದು ಬಗೆಯ ಚಮತ್ಕಾರವಷ್ಟೇ!. ಇದು ಸಮಸ್ಯಾಪೂರಣದ ಶಬ್ದಚ್ಛಲ ಪೂರಣ ವಿಭಾಗಕ್ಕೆ ಹೊಂದಬಹುದು.

          • ಹೌದು ಕಾಂಚನ, ಕೀಲಕವಿಲ್ಲದೆಯೇ, ಸಮಸ್ಯೆಯ ಸಾಲು ವಿರುದ್ಧ ಅರ್ಥವೀಯುತ್ತಿರುವುದು ಚಮತ್ಕಾರವೇ ಸರಿ !!

  27. ಕರಂಗುತಲೆ ಭಕ್ತಿಯಿಂ ವಿತತಪೂಜೆಯಂ ಗೈದವರ್
    ವಿರಕ್ತವರಭಾವದಿಂ ಸೆಲೆ ಮುಳುಂಗಿಸಲ್ಕೊಯ್ದಿರಲ್
    ವಿರೂಪಗೊಳುವಂ ಗಡಾ ಎನುತೆ ಬಾಲಕಂ ರೋದಿಸಲ್
    ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ
    [ಕರಗಿ ವಿರೂಪಗೊಳ್ಳುತ್ತಾನೆ ಎಂದು ಅಳುತ್ತಿರುವ ಬಾಲಕನನ್ನು ಸಮಾಧಾನಿಸಲು ಗಣೇಶ ಕರಂಗೆನೆನುತಿರ್ಪನೈ]

    • ರೋದಿಸು ಅಲ್ಲವೇ? ಚೆನ್ನಾದ ಕಲ್ಪನೆ. ನಾನೂ ಚಿಕ್ಕವನಿದ್ದಾಗ, ಒಂದು ತಿಂಗಳು ಮನೆಯಲ್ಲಿ ನಮ್ಮ ಜೊತೆ ಇರುವ ಗಣಪನನ್ನು ವಿಸರ್ಜಿಸುವಾಗ ಅತ್ತದ್ದು ನೆನಪಾಯಿತು 🙂

      • ನಿಮಗೆ ಶೈಶವ್ಯದ / ಬಾಲ್ಯದ ನೆನಪು ತಂದುಕೊಟ್ಟಿದ್ದರೆ, ಪದ್ಯ ಸಾರ್ಥಕ್ಯ ಕಂಡಿತು ಎಂದುಕೊಳ್ಳುತ್ತೇನೆ.

    • ಗಣಪ ತನ್ನಯ ಮಾತನುಳಿಸಿಕೊಳಲೂ ಆರ-
      ನಣುಗನಿರಲೂ ಆರ ನಿದ್ದೆಗೆಟ್ಟು|
      ರಣರಣದ ಬಣ್ಣ ಕರಗುವವರೆಗು, ಆದ್ದರಿಂ
      ಗಣಿಸೆರಡನುಂ ದದ್ದ, ಹೊರಕೆ ಹಾಕು||
      (ವಿಸಂಧಿ-ಲಗಾದಿಗಳೇನೇ ಇದ್ದರೂ ಪರವಾಗಿಲ್ಲ ’ಗಣಿಸು ಎರಡೂ ದದ್ದ, ವರಿಕ್ಕಾಕು’ ಎಂದು ಓದಿಕೊಳ್ಳಿ 😀 )

      • ನಿಮ್ಮ ಪ್ರತಿಕ್ರಿಯಾ ಪದ್ಯದ ಆಶಯ ಸಂಪೂರ್ಣವಾಗಿ ಅರ್ಥವಾಗದಿದ್ದರೂ, ಪದ್ಯದ ಮೂಲ ಭಾವವನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ. ಇಲ್ಲಿ ಗಣಪ ಮಾತನ್ನುಳಿಸಿಕೊಳ್ಳುವ ಪ್ರಶ್ನೆಯಿಲ್ಲ. ಅಳುವ ಬಾಲನ ಸಮಾಧಾನಕ್ಕೆಂದು ಒಂದು ಸುಳ್ಳಾಡಿದನಷ್ಟೇ.

      • ನಾನು ಹೇಳಿರುವುದೂ ಅದನ್ನೇ: ಗಣೇಶನು ಸುಳ್ಳು ಹೇಳಿದ್ದಾನೆ, ಬಣ್ಣವು ಕರಗುವತನಕ ನಿದ್ದೆಗೆಟ್ಟು ಕುಳಿತಿದ್ದು ಬಾಲಕನು ಸತ್ಯವನ್ನು ಪರೀಕ್ಷಿಸಲೂ ಆರ. ನಿದ್ದೆಗೆಡುವ ಪ್ರಮೇಯವಿಲ್ಲ, ಮಾರನೆಯ ದಿನ ನೋಡಬಹುದು ಎಂಬ ಆಕ್ಷೇಪ ಸಲ್ಲದು. ಒಂದು ಗಾದೆಗೆ ದೃಷ್ಟಾಂತವಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಂಡಿದ್ದೇನೆ.

  28. If the third letter from last (a guru) in pRthvee is split (into 2 laghu-s), it fits into 1.5 lines of a jalOddhata! The monotony of the latter is absent in the former due to the yati.
    ಜಲೋದ್ಧತಗತಿಗಾಗಿ ಸಮಸ್ಯಾಪಾದವನ್ನು ’ಕರಂಗೆನೆನುತಿರ್ಪನಯ್ ಜಲಗತಂ ಕರೇಣುವದನಂ’ ಎಂದು ಬದಲಿಸಿಕೊಂಡಿದ್ದೇನೆ. (ಕರೇಣು=ಹೆಣ್ಣಾನೆ 🙁 )
    ಗಣೇಶನು ’ಕರಂಗೆ’ ಎಂದರೆ ಸಮುದ್ರರಾಜನು ಸುಮ್ಮನಿದ್ದುಬಿಡುತ್ತಾನೆಯೆ?
    ಕರಂಗೆನೆನುತಿರ್ಪನಯ್ ಜಲಗತಂ
    ಕರೇಣುವದನಂ. ಸಮುದ್ರಜಲಪಂ|
    (ಉಪ್ಪಿನಿಂದಾಗಿ)ಸರಾಗದಿನೆ ನಾಗವಕ್ತ್ರನನು ತಾಂ
    (gum, paint etc.)ಅರಾಲಸಹಿತಂ ಕರಂಗಿಸುತಿಹಂ||‍

  29. ಸರಾಸರಿಯೂಳೇಕಮಾಸದೊಳೆ ಪುಟ್ಟುತೀರ್ವರ್ಗಳಾಂ
    ಪರಂಪರೆಯ ಪೂಜೆಯಂ ಕೊಳುತಲಿರ್ಪೆವೈ ಭೂಮಿಯೊಳ್
    ಕರಂಗಿಸುದುಮೆನ್ನಮಾತ್ರ ಕಡೆಗಿಂತದನ್ಯಾಯಮೇ-
    ಕ “ರಂಗ”ನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ ।।

    ಇಬ್ಬರೂ ಸರಿಸುಮಾರು ಒಂದೇ ಸಮಯದಲ್ಲಿ ಭೂಮಿಯಲ್ಲಿ ಪೂಜೆ ಗೊಂಡರೂ, ನನ್ನನ್ನು ಮಾತ್ರ ಕಡೆಗೆ ನೀರಿನಲ್ಲಿ ಕರಗಿಸುವುದು, ಇಂತಹ ಅನ್ಯಾಯವೇಕೆ “ರಂಗ” ಎಂದು, ಬಾಲಕೃಷ್ಣನನ್ನು (ಮುಳುಗುತ್ತಿರುವ) ಬಾಲಗಣಪ ಮುದ್ದಾಗಿ ಹೇಳುತ್ತಿದ್ದಾನೆ !!

    • Oh, fine keelaka. Good verse.

    • Usha ಅವರೇ, ‘ಳಾಂ ‘(ಆನ್ ) ಅಂದಾಗ ಒಬ್ಬನೇ ಅನ್ನುವ ಅರ್ಥವಲ್ಲವೇ ? ”ನಾವಿಬ್ಬರು ”ಅನ್ನಬೇಕಾದಲ್ಲಿ ‘ಆನ್ ‘ಅನ್ನುವುದು ಸಮಂಜಸವೇ ?

      • ಏಕ-ಬಹುವಚನಗಳೆರಡಕ್ಕೂ ’ಆಂ’ ಬಳಸಬಹುದು. ’ಆನ್’ ಏಕವಚನಕ್ಕೆ ಮಾತ್ರ.
        ೧) ಏಕವಚನ: ಶಾರದೆಯ ಕರುಣದಿಂ ಪೇಳ್ವೆನಾಂ – ಲಕ್ಷ್ಮೀಶ
        ೨) ಬಹುವಚನ: ….. ಮಾವನ ಮಗನಂತಾಗಿರ್ಕುಮೆಂದು ಮನದೊಳೆ ಬಗೆದೀತಂಗಂ ನಿಮಗಂ ’ನಾಮೆಲ್ಲ’ ಮಿರ್ದು ಮದುವೆಯಂ ಮಾಡಿದಪ್ಪಮನ್ನೆಗಂ… – ಹರಿವಂಶಾಭ್ಯುದಯಂ ದ್ವಿತೀಯಾಶ್ವಾಸಂ

        • ಪ್ರಸಾದು ಸರ್ , ಉತ್ತರಕ್ಕೆ ಧನ್ಯವಾದಗಳು .

          ನೀವು ಕೊಟ್ಟಿರುವ ಎರಡನೇ ಉದಾಹರಣೆಯಿಂದ ನಾನು ಅರ್ಥ ಮಾಡಿದುದೇನೆಂದರೆ ಹೇಳುವಾತ ‘ನಿಮಗಂ’ ಅನ್ನುವಲ್ಲಿ ನೀನು ಅನ್ನುವ ಪದವನ್ನು ಗೌರವ ಸೂಚಕವಾಗಿಯೂ , ”ನಾಮೆಲ್ಲ” ಅನ್ನುವಲ್ಲಿ -ಹೇಳುವವನು ; ತನ್ನನ್ನು ,ಪ್ರಶ್ನೆಯನ್ನು ಕೇಳಿದವನನ್ನು ಮತ್ತು ಅಲ್ಲಿರುವ ಜನರ ಗುಂಪನ್ನು (ನಾವೆಲ್ಲರೂ ಅನ್ನುವಂತೆ) ಸೇರಿಸಿ ಹೇಳುತ್ತಿದ್ದಾನೆ ಎಂಬಂತೆ ನನಗೆ ತೋರಿಬರುವುದು . ಅದು ದ್ವಿವಚನ ಅಲ್ಲ . ಉತ್ತಮ ಪುರುಷ ಬಹುವಚನವಲ್ಲವೇ ?
          ನಾನು ಕೇಳಿರುವ ಪ್ರಶ್ನೆ ಉತ್ತಮ ಪುರುಷ ದ್ವಿವಚನದ ಬಗ್ಗೆ ಆಗಿರುತ್ತದೆ .

          ಉದಾ ;-ಉಳಿದವರೆಲ್ಲಾ ಇಲ್ಲಿರಲಿ. ನಾವಿಬ್ಬರು ಹೋಗಿ ಅದನ್ನು(ಏನೋ ವಸ್ತು ) ತರೋಣ ಅನ್ನುತ್ತೇವಲ್ಲಾ . ಇಲ್ಲಿ’ನಾವು’ ಅನ್ನುವ ಎರಡು ಮಂದಿ ಬಹುವಚನಕ್ಕೆ ಸೇರುತ್ತಾರೆಯೇ ?

          • ಕನ್ನಡದಲ್ಲಿ ದ್ವಿವಚನವಿಲ್ಲವಲ್ಲ!

        • ಅಂ = ಆನ್ – ಎರಡೂ ಏಕವಚನವೇ
          ಬಹುವಚನಕ್ಕೆ “ಆವ್” ಬಳಸಬಹುದು

  30. ತರಾಟೆಗೆ ನಿಂದನೈ ತರಲೆ ಪುತ್ರ ವಿಘ್ನೇಶ್ವರಂ
    ಬರಾಬರಿಯೋಡುತಂ ನದಿಯೊಳೀಜಿ ನಿಂತಿರ್ದನೈ
    ತರಾತುರಿ ಕಾಣುತಂ ನಗಲು ಮಾತೆ, ತಪ್ಪೊಪ್ಪುತುಂ
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ

    ( ವಿಘ್ನೇಶ್ಟರನೆಂಬ ತುಂಟ ಬಾಲಕನ ತಂಟೆ)

    • ಒಳ್ಳೆ ಕಲ್ಪನೆ. ಛಂದಸ್ಸು ಮತ್ತೆ ತಪ್ಪಿದೆ. ಪ್ರತಿಪಾದದ ಎರಡನೇ ಗಣದಲ್ಲಿ. ತರಲೆ ಪುತ್ರ ಅರಿಸಮಾಸ. ವಿಘ್ನೇಶ್ವರ ಪುನರುಕ್ತಿಯಾಗಿದೆ. ತರಲಬಾಲಚಾಪಲ್ಯದಿಂ ಎಂದೇನಾದರೂ ಮಾಡಬಹುದು.

    • ಹಾಗೆಯೇ ಗಣಗಳನ್ನು ಗುಣಪಡಿಸಲು ತರಾಟೆಗೆನೆ ಕಾಡುತುಂ (ನಿಂತಿದ್ದ ಎಂದು ಎರಡು ಬಾರಿ ಬಂದಿರುವುದರಿಂದ), ತರಾತುರಿಯೊಳೋಡುತುಂ, ನಿರೀಕ್ಷಿಸುತುಮಲ್ಲಿರಲ್ ನಗುತೆ ಮಾತೆ.. ಎಂದು ತಿದ್ದಬಹುದು. 🙂

    • ಅಂತೆಯೇ, ಅರ್ಥಸ್ಪಷ್ಟತೆಗೋಸ್ಕರ ಮೂರನೇ ಸಾಲನ್ನು ತಿದ್ದಿ,
      ಬೆರಂಗಿನೊಳಗಾಳ್ದಿರಲ್ ಜನನಿ, “ಚಿಂತೆಯೇಂ ನೀರೊಳಾಂ
      ಕರಂಗೆನೆನು….”
      ಎಂದು ಮಾಡಬಹುದು 🙂

  31. ನೀಲಕಂಠರೆ, ಬೆರಂಗು- ಬೆರಗು ಆಗಬೇಕಲ್ಲವೆ ?ಛಂದಸ್ಸಿಗೆ ಹೊಂದದು.

    • ಬೆಡಂಗಿನಂತೆಯೇ ಬೆರಂಗೂ ಇದೆ ಅಂದುಕೊಂಡೆ. ಇಲ್ಲವೇ?

      • ತರಾಟೆಗೆನೆ ಕಾಡುತುಂ ತರಲ ಬಾಲ ಚಾಪಲ್ಯದಿಂ
        ತರಾತುರಿಯೊಳೋಡುತುಂ ನದಿಯೊಳೀಜಿ ನಿಂತಿರ್ದನೈ
        ನಿರೀಕ್ಷಿಸುತುಮಲ್ಲಿರಲ್ ನಗುತೆ ಮಾತೆ, ತಪ್ಪೊಪ್ಪುತುಂ
        ಕರಂಗೆನೆನುತಿರ್ಪನಯ್ ಜಲದೊಳಿರ್ಪ ವಿಘ್ನೇಶ್ವರಂ

        (ಸರ್, ನಾನು ವೃತ್ತದಲ್ಲಿ ಬರೆಯುವುದು ಇಲ್ಲಿಯೇ ಮೊದಲು . ಆದ್ದರಿಂದ ನನಗೆ ದೊರೆಯುವ ಅಂಕಗಳೂ ವೃತ್ತವೇ (zero ) ಆಗಿದೆ )

        • ಬೌದ್ಧರ ಶೂನ್ಯವೂ ವೇದಾಂತಿಗಳ ಪೂರ್ಣಬ್ರಹ್ಮವೂ ತತ್ತ್ವಶಃ ಒಂದೇ 🙂

        • zero ’ಆಗಿದೆ’ ಅಲ್ಲ, ’ಆಗಿತ್ತು’. ಈಗ ಅದರ ಎಡಕ್ಕೆ 9ನ್ನು ಇರಿಸಿಬಿಟ್ಟೆಯಲ್ಲ 😉

      • ನಾನು ತಿಳಿದಂತೆ ಇಲ್ಲ.

  32. ಪಾಸು ಮಾಡಿಸು, ಸೈಟು ಕೊಡಿಸು, ವಧುವನ್ನು ಕೊಡಿಸು (ವರನನ್ನು ಕೊಡಿಸು ಎಂದು ಬೇಡುವ ಕಾಲ ಆಗಿಹೋಯಿತು; ವಧುವನ್ನು ಬರಿಯ ಬೇಡುವುದಲ್ಲ, ತಾಯೇಽಽಽ ಮ್ಮಾಽಽಽ ಎಂದು ಮೇಕೆಯಂತೆ ಗೋಗರೆಯುವ ಕಾಲ ಬಂದಾಯ್ತು!), ಸಂತಾನವನ್ನು ಕರುಣಿಸು, ವ್ಯಾಪಾರವನ್ನು ಕುದುರಿಸು, ಇಗೋ ಕಡುಬು ತಗೋ, ಮೋದಕ ತಗೋ ಎಂದು ತಿನ್ನಿಸಿ ತಿನ್ನಿಸಿ ಡೊಳ್ಳುಹೊಟ್ಟೆಯಾಗಿದೆ. ನನ್ನ ದೇಹವು ಕರಗುವುದೆಂತು?
    (ಪರೀಕ್ಷೆಯಲ್ಲಿ)ಪರಾಭವವ ತಪ್ಪಿಸೈ, ವಧುವನೊಪ್ಪಿಸೈ ಮುಂದಿನಾ (Whatever comes up next 🙁 )
    (A piece of land=site)ಧರಾಶಕಲಮಂ ಕೊಡೆನ್ನುತಲಿ ಮೋದಕಾದ್ಯಂಗಳಂ
    ಶರೀರದೊಳಖಂಡದಿಂ ಭರಿಸುತಿರ್ದಿರಲ್ ಭಕ್ತರೈ
    ಕರಂಗೆ*ನೆನುತಿರ್ಪನಯ್ ಜಲದೊಳಿರ್ಪ# ವಿಘ್ನೇಶ್ವರಂ||
    *ಸಪ್ರಯತ್ನವಾಗಿ ಅಲ್ಲ. ಕರಗುವುದಾಗದು ಎಂಬರ್ಥದಲ್ಲಿ.
    #ಇಲ್ಲಿ ಜಲದ್ದೇನೂ ಅವಧಾರಣೆಯಿಲ್ಲ. ಗಣೇಶವಿಗ್ರಹವು ತನ್ನ ಜೀವಂತರೂಪದ ಬಗೆಗೆ ಹೇಳುತ್ತಿದೆಯಷ್ಟೆ.

  33. ಶರೀರಮಿರೆ ಬೊಜ್ಜಿನಿಂ, ಸಮೆಯೆ,ವೇಗದಿಂದೀಜಿರಲ್,
    ಸರೋವರದೆ ನಿಚ್ಚಮುಂ ನಸುಕಿನೊಳ್, ಮಹಾಕಷ್ಟದಿಂ,|
    ನಿರೀಕ್ಷಿಸುತೆ ಬಿಂಬದೊಳ್ ಕೃಶತೆಯಂ, ವಿಷಾದಂಗೊಳಲ್,
    ಕರಂಗೆನೆನುತಿರ್ಪನೈ ಜಲದೊಳಿರ್ಪ ವಿಘ್ನೇಶ್ವರಂ ||

    ( ಈ ಪದ್ಯದಲ್ಲಿ, ಕರಂಗೆನೆನುತಿರ್ಪನೈ_= ಕರಂಗೆನ್+ಎನುತಿರ್ಪನೈ ಅಥವಾ ಕರಂಗೆನೆ ? +ಎನುತಿರ್ಪನೈ – ಎರಡು ಸಾಧ್ಯತೆಗಳೂ ಸರಿಯಾಗಿವೆ)

    • Fine verse. Unrestrained diet and paucity of exercise are good for a verse’s belly (ಕೋಷ್ಠ):
      Dietಟನುಮಲಕ್ಷಿಪಂ. ಬರಿಯ ಈಜಿನಿಂದೇಂ ಫಲಂ?
      (Abusive)Dietಟು-ತರಣಂಗಳಿಂ ಕಿಡದು ಕಾವ್ಯಕೋಷ್ಠಂ ವಲಂ!

      • ಧನ್ಯವಾದಗಳು ಹಾದಿರಂಪರೆ.

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)