Mar 062017
 

  53 Responses to “ಪದ್ಯಸಪ್ತಾಹ ೨೪೫: ಚಿತ್ರಕ್ಕೆ ಪದ್ಯ”

  1. ||ಕಂದಪದ್ಯ||

    ಪುಸ್ತಕದ ರಾಶಿಯಿರ್ದೊಡೆ
    ಮಸ್ತಕಕೆ ಜ್ಞಾನದೀಪ್ತಿ ನಿದ್ರಿಸೆ ಸಿಗದೌ |
    ಹಸ್ತದೆ ಪಿಡಿದೆಚ್ಚರದೊಳ್ ,
    ವಿಸ್ತರಿಸುತುಮೋದೆ ಕನ್ನಡಕದಿಂ, ಲಾಭಂ ||

    • ಕನ್ನಡಕದಿಂದಲೇ ಓದಬೇಕೆ? 🙂

      • ಹೌದು. ಇದು ಚಿತ್ರಕ್ಕೆ ಪದ್ಯ. ಚಿತ್ರದ ಯುವತಿಗೆ ಕನ್ನಡಕವಿರುವುದರಿಂದ ಬರೆದದ್ದು ಸರಿಯಾಗಿಯೇ ಇದೆ.
        ನಾನು ನಿಮಗೆ ಬರೆದ ಪದ್ಯವೆಂದು ಭಾವಿಸಿದಿರಾ ? 😛

  2. ಸಾರದಿರ್ದಿರೆ ನಿದ್ರೆಯಾಗುಪಾಯವಿದೊಂದೆ
    ಭಾರಿಹೊತ್ತಗೆಯನ್ನುಮೋದುವುದು ಕೇಳ್|
    ತಾರುಣ್ಯವತಿಯನ್ನೆನಿತು ಕಾಡಿತೋ ನಿದ್ರೆ
    ಈರೈದು ಪುಸ್ತಕವ ತೆರೆದಿರಿಸಿಹಳ್!!

    • ನನಗೆ ಕಂಡದ್ದು ಎರಡೈದು ಮಾತ್ರ 🙂
      ಭಾರಿಪುಸ್ತಕ ಅರಿಯಾಯಿತು.

      • ಧನ್ಯವಾದಗಳು. ಎರಡನ್ನೂ ಸರಿಪಡಿಸಿದ್ದೇನೆ.

  3. ಪ್ರಹರ್ಷಿಣಿ|| ತೀವಿರ್ಪಧ್ಯಯನಕೆ ಸಾಕೆ ನೇತ್ರಮಾತ್ರಂ
    ದೈವಂ ತಾನೊಲಿವುದು ಸೇರಲಂಗಮೈದೈ(ಪಂಚೇಂದ್ರಿಯಗಳು)|
    ಆವೈದೆಂಬೆಯೊ? ಕಿವಿ, ಮೂಗು, ಬಾಯಿ(tongue), ಚರ್ಮ-(other than eye)
    ಕ್ಕೋವಿಂ ಸಿಂಗರಿಸಿಹಳಲ್ತೆ ಚಶ್ಮಮನ್ನುಂ!!
    The dislodged spectacles now cover not just her eye, but her ear (it rests on one), nose, mouth (tongue) and of course skin – the panchendriya-s!

  4. ಜವದಿಂ ಪ್ರಶ್ನೆಗಳೇಳಂ
    ಸುವಧಾನಿಯೆ ನಿರ್ವಹಿಪ್ಪ ಪಾಂಗಿಂದಿರೆ ಕ-
    ಣ್ಣೆವೆಯಂ ಮುಚ್ಚಿಪ ತೆರದಿಂ
    ಸವಿಯಾದಪ್ರಸ್ತುತಕ್ಕೆ ನಿದ್ರೆಯೆ ಬಂತೇ||
    (ಏಳು ಪ್ರಶ್ನೆಗಳನ್ನು ಅವಧಾನಿಯು ನಿರ್ವಹಿಸುವ ರೀತಿಯಲ್ಲಿ ಇದ್ದಾಗ ಕಣ್ಣೆವೆಯನ್ನು ಮುಚ್ಚಿಸುವಂತೆ ಸವಿಯಾದ ಅಪ್ರಸ್ತುತಕ್ಕೆ ನಿದ್ರೆಯೇ ಬಂತೇ?)

  5. ಒಡತಿಗಡರ್ದುದು ನಿದ್ರೆಯ-
    ಗಡಿನಿಂ ನಾನಾದೊಡಂ ನಿರುಕಿಪೆಂ ಗಡಮೇ-
    ನಡಕಮೊ ಪೊತ್ತಿಗೆಗಳೊಳೆಂ-
    ದೊಡನೆ ಕೆಳಕ್ಕಿಳಿದುದಿಂತುಮೀ ಕನ್ನಡಕಂ

  6. ಓದಿದ್ದೆಲ್ಲಮು ಸೇರು-
    ತ್ತಾದುದು ಭಾರಮದರಿಂದೆ ಕನ್ನಡಕಂ ಜಾ-
    ರ್ದೈದುದು ಕೆಳಕ್ಕೆ, ಮೇಣ್ ನೀ-
    ನಾದೊಡೆ ನಿದ್ರೆಯೊಳೆ ತೇಲಿದೆ ಹಗುರದಲೆಯಿಂ

    (ಹಗುರ ತಲೆ – ತಲೆಗೇನೋ ಹೋಗಿಲ್ಲ. ಹೋದದ್ದೆಲ್ಲ ಕನ್ನಡಕಕ್ಕೆ)

    • ಐದುದು ಎಂಬ ಪ್ರಯೋಗ ಸರಿಯಿರಲಾರದೆಂಬ ಸಂದೇಹವಿದೆ. ಐದಿದುದು ಆಗಬೇಕೇನೋ. ತಿಳಿದುಕೊಳ್ಳಿರಿ.

  7. ಹತ್ತಾರು ಪುಸ್ತಕದಿ,
    ಕಥೆಗಳೋದಿದ ಬಾಲೆ
    ಕಣ್ರೆಪ್ಪೆಗಳ ಮುಚ್ಚಿದಳು
    ಅವಕಿಂತ, ತಾ ನಿತ್ಯ ಕಾಂಬ
    ಕನಸೇ ಮಧುರವಿತ್ತೆಂದು!

    • ತಮ್ಮ ಆಸಕ್ತಿಗಾಗಿ ಧನ್ಯವಾದಗಳು. ಪದ್ಯಪಾನವು ಛಂದೋಬದ್ಧಪದ್ಯರಚನೆಗೆ ಮೀಸಲಾದ ತಾಣ. ಇಲ್ಲಿ ಶ್ರೀ ರಾ. ಗಣೇಶರ ವಿಡಿಯೊಪಾಠಗಳಿವೆ. ಗಮನಿಸಿಕೊಂಡು ಛಂದೋಬದ್ಧವಾಗಿ ಕವನಿಸಲು ಆರಂಭಿಸಿ. ಅಭಿನಂದನೆಗಳು.

      ನಿಮ್ಮ ಪದ್ಯದ ಹೀಗೊಂದು ಸವರಣೆ:
      ಹತ್ತಾರು ಪುಸ್ತಕದೆ ಕಥೆಗಳನ್ನೋದಿರಲು
      ಒತ್ತಿಬಂದಿತೆ ನಿದ್ರೆಯೀಗ ಬಾಲೆ?
      ಇತ್ತೆಂಬ ಕಾರಣವೆ, ನೀ ಕಾಂಬ ಸ್ವಪ್ನಂಗ-
      ಳುತ್ತಮತರವದೆಂಬ ಕಾರಣಮೊ ಪೇಳ್||

      ಇದು ಪಂಚಮಾತ್ರಾಚೌಪದಿ ಎಂಬ ಛಂದಸ್ಸಿನಲ್ಲಿದೆ ಹಾಗೂ ’ತ್ತ್’ಪ್ರಾಸವಿದೆ.

      • ಈ ನಿಯಮ ಖಡ್ಡಾಯವೆಂದು ತಿಳಿದಿರಲಿಲ್ಲ. ಸಲಹೆಗೆ ಧನ್ಯವಾದಗಳು. ಖಂಡಿತಾ ಪ್ರಯತ್ನಿಸುತ್ತೇನೆ. ತಮ್ಮ ಪದ್ಯ ತುಂಬಾ ಸುಂದರವಾಗಿದೆ.

        ಕಂದ?

        ಪುಸ್ತಕ ರಾಶಿಯನೊದುತ
        ಬಾಲೆಯು; ನೀರಸಕಥೆಗಳ ಕಾಣಲು ಎಂತೋ
        ಕಣ್ಣೆವೆ ಮುಚ್ಚುತೆ ನಿದ್ರೆಗೆ
        ಜಾರಲು, ಕಂಡಳು ಒಮ್ಮಗೆ ಸವಿಗನಸೊಂದನು

        ( ಛಂದಸ್ಸಿನಲ್ಲಿ ಪ್ರಯತ್ನಿಸಿದ ನನ್ನ ಮೊದಲ ಪದ್ಯ, ಸರಿಯೇ? ತಾವೇ ಹೇಳಬೇಕು )

        • 1. ಪದ್ಯರಚನಾರಂಭದೆಸೆಯಲ್ಲಿ ಪ್ರಾಸವನ್ನು ಪಾಲಿಸಿಲ್ಲದಿರುವುದು ಒಳ್ಳೆಯದೇ. ನಾನು ಆರಂಭಿಸಿದ್ದೂ ಹೀಗೆಯೇ. ಆದರೆ ಇದನ್ನು ಅಭ್ಯಾಸವಾಗಿ ಮಾತ್ರ ಮಾಡಬೇಕಾಗಿರುವುದರಿಂದ, ಪದ್ಯಪಾನದಲ್ಲಿ ಪೋಸ್ಟ್ ಮಾಡಲು ಅನುಷ್ಟುಭ್ ಅಥವಾ ಸೀಸಪದ್ಯವನ್ನು ಬಳಸಿಕೊಳ್ಳಿ. ಇವಕ್ಕೆ ಪ್ರಾಸನಿಯಮವಿಲ್ಲ. ಒಂದಷ್ಟು ಪದ್ಯಗಳ ರಚನೆಯ ನಂತರ ಪ್ರಾಸವು ತಾನೇ ಸಿದ್ಧಿಸುತ್ತದೆ.
          2. ಕಂದಪದ್ಯವನ್ನು ಹಳಗನ್ನಡದಲ್ಲೇ ರಚಿಸಬೇಕು. ಈ ಹೊಸ/ನಡುಗನ್ನಡವು ಇತರ ಮಾತ್ರಾಛಂದಸ್ಸುಗಳಿಗೆ ಮಾತ್ರ ಸೀಮಿತವಾಗಿರಬೇಕು.
          3. ’ಕಥೆಗಳ’ ಹಾಗೂ ’ಒಮ್ಮೆಗೆ’ – ಸಮಪಾದಗಳ ಈ ಮಧ್ಯಗಣವು ಇಲ್ಲವೇ ಜಗಣವಾಗಿರಬೇಕು (ನನಾನ), ಇಲ್ಲವೇ ಸರ್ವಲಘುವಾದರೆ ಮೊದಲ ಅಕ್ಷರಕ್ಕೆ ಯತಿಯಿರಬೇಕು. ಕೆಳಗಿನ ಸವರಣೆಯಲ್ಲಿ ಇವನ್ನು ತೋರಿಸಿದ್ದೇನೆ.
          4. ಸಮಪಾದಗಳ ಕೊನೆಯ ಗಣವು ನನನಾ ಅಥವಾ ನಾನಾ ಆಗಿರಬೇಕು. ಬೆಸಸಾಲುಗಳ ಮಧ್ಯಗಣಗಳು ಜಗಣವಿರಬಹುದಾಗಿದೆ.
          ಪುಸ್ತಕರಾಶಿಯನೋದುತೆ
          ಬಾಲಿಕೆ ನೀರಸಕಥಾನಕವ ಕಂಡಾಗಳ್|
          ಕಣ್ಣೆವೆ ಮುಚ್ಚುತೆ ನಿದ್ರೆಗೆ
          ಜಾರುತೆ ಕಂಡಿಹಳೆ ಸವಿಗನಸನೊಂದನು ತಾಂ||

  8. ಹಗಲಲ್ಲೆ ಬಾಡಿದವೊ ನಿನ್ನ ನೇತ್ರಸುಮಗಳು
    ನಗುವಿರದೆ ಮೊಗವೋದಿನಲಿ ದಣಿದಿದೆ|
    ಬಗೆಬಗೆಯ ಗ್ರಂಥಗಳು ನಿನಗಾಗಿ ಕಾಯುತಿವೆ
    ಸೊಗನಿದ್ದೆ ಮುಗಿಸೆದ್ದ ಕಣ್ಣೋಟಕೆ||

  9. ಪುಸ್ತಕದೊಳಸಾರಮದೀ
    ಮಸ್ತಕದೊಳ್ಪೋಗದಾಗೆ ಬಾಲೆಯ ಕಂಗಳ್
    ಸುಸ್ತಾಗಿ ನಿದ್ರಿಸಲ್ಕೆ ಸ
    ಮಸ್ತವ ಕನ್ನಡಕಮೊಂದೆ ಪಠಿಸಿರ್ಪುದಲಾ

  10. ಮತಿಯಂಬುಗದೊಡೆ ವಿಷಯಂ
    ಖತಿಯೊಳ್ ಪರಿಹಾರಮಂ ಪುಡುಕುತುಂ ನೆನೆದಾ/
    ಸ್ತುತ ವಿಜ್ಞಾನದೆ ಪೇಳಿದ
    ನುತ ವಿಸರಣಮಂ ಪರೀಕ್ಷಿಸಲ್ಕೊರಗಿರ್ಪಳ್ //

    ಎಷ್ಟು ಪ್ರಯತ್ನಿಸಿದರೂ ಓದಿದ್ದು ನೆನಪಿರದಾಗ diffusion(as the concentration of knowledge is more in books) ನ್ನು ಪರೀಕ್ಷಿಸಿಯೇ ಬಿಡೋಣವೆಂದು ಪುಸ್ತಕದ ಮೇಲೆ ಮಲಗಿದ್ದಾಳೆ.

  11. ಗುರುತ್ವಾಕರ್ಷಕ್ಕಂ ಕೆಳಗಿಳಿದುದೇಂ ಕನ್ನಡಕಮಿಂ-
    ತಿರಲ್ ನಿದ್ರಾಸೌಖ್ಯಂ ತರಳೆಗೆ ತರಂ ಪೊತ್ತಿಗೆಗಳಿಂ
    ಪರಂ, ಮೇಣೆನ್ನಿಂದೇನಕಟ ಉಪಯೋಗಂ ಗಡಮೆನಲ್
    ಸ್ಫುರದ್ಭ್ರೂಮಧ್ಯಂ ತಾನುಳಿದು ನಡೆಗುಂ ಬೇಸರದೊಳಂ

    ಗುರುತ್ವಾಕರ್ಷಣಕ್ಕೆ ಕೆಳಜಾರಿತೇ ಈ ಕನ್ನಡಕ? ಅಲ್ಲ. ಇವಳಿಗೆ ಪುಸ್ತಕಕ್ಕಿಂತ ನಿದ್ರಾಸೌಖ್ಯವೇ ಹೆಚ್ಚಿನದಾಗಿದೆ. ಇನ್ನು ನನ್ನಿಂದೇನು ಉಪಯೋಗ ಎಂದು ಬೇಸರದಿಂದ ಹೊರಟಿತು.

  12. ಕದನದೋಲೋದಿನಗ್ನಿಪರೀಕ್ಷೆ ಗೆಲುವಾಸೆ
    ವಿಧಿಯೇನಿಹುದೋ, ಕುಂಭಕರ್ಣನತಿಮಿತ್ರಂ
    ಮಿದುಳಿಲ್ಲದೋದೋದಿ ನಯನತಾಂ ಸೋತಿರಲು
    ನದಿಯಾಗಿ ಹರಿಯುವುದು ನಿನ್ನಶ್ರುವಿನಕೋಡಿ

    • Which chhandas? Chaupadi? Some matraas are extra in second and fourth lines. ವಿಧಿಯೇನಿ | ಹುದೋ… lagam pattern is there? ಕದನದೋಲೋ… should be kadanadavol. ವಿಧಿಯೇನಿಹುದೋ – could be better made bidiyEnihudo, to avoid sameep-praasa and to have exact praasa.

  13. ಪುಸ್ತಕಗಳೂರಿನಿಂ ಪೊರಮಟ್ಟು ಸರಸತಿಯು
    ಮಸ್ತಕದ ಮನೆಯೆಡೆಗೆ ಸಾಗುತಿರಲು,
    ಅಸ್ತವಾಗಿರಲಕ್ಷಿದಿನಪತಿಯು ಬಾಗಿಲಲೆ
    ವಿಸ್ತರಿಸಿ ಹಾಸಿಗೆಯ ನಿದ್ರಿಸಿಹಳೇ?

    ಪುಸ್ತಗಳೂರಿನಿಂದ ಜ್ಞಾನರಾಶಿಯು ಹೊರಟು ಮಸ್ತಕವನ್ನು ಸೇರುವ ಮೊದಲೇ ಕಣ್ಣೆಂಬ ಸೂರ್ಯನು ಮುಳುಗಿದ್ದರಿಂದ(ಮುಚ್ಚಿದ್ದರಿಂದ) ದಾರಿಯಲ್ಲೇ ಪುಸ್ತಕಗಳ ಹಾಸಿಗೆಯನ್ನು ಬಿಡಿಸಿ ನಿದ್ರಿಸಿದಳೆಂಬ ಕಲ್ಪನೆ.

    • aahaa! tumba sundaravaada kalpane, chitraNa!! abhinandanegaLu 🙂

    • ಅನಂತರೆ, ಪದ್ಯದಲ್ಲಿ ಕೆಲವು ಅಂಶಗಳು ಸರಿಯಾಗಿ ತಿಳಿಯಲಿಲ್ಲ. ಜ್ಙಾನರಾಶಿಯು(ಸರಸತಿಯು) ಪುಸ್ತಕಗಳ ಹಾಸಿಗೆಯನ್ನು ಬಿಡಿಸಿ ನಿದ್ರಿಸಿರುವುದು ಹೇಗೆ ? ಚಿತ್ರದಲ್ಲಿ ಯುವತಿಯಲ್ಲವೆ ನಿದ್ರಿಸಿರುವುದು ? ಮಸ್ತಕಕ್ಕೆ ಸೇರಬೇಕಾದರೆ ಪುಸ್ತಕಗಳನ್ನು ತರುಣಿಯೇ ತೆರೆದಿರಬೇಕಲ್ಲವೆ ?

      • ಧನ್ಯವಾದಗಳು ಶಕುಂತಲಾ ಅವರೆ..ನಿಮ್ಮ comment ಓದಿದ ನಂತರ ನನಗೂ ಪದ್ಯದಲ್ಲಿ ಸ್ವಲ್ಪ ತಿದ್ದುಪಡಿ ಬೇಕೆನಿಸಿತು..
        ನನಗೆ ತಿಳಿದಹಾಗೆ ತಿದ್ದಿದ್ದೇನೆ..ಇಲ್ಲಿಯೂ ಲೋಪದೋಷಗಳಿದ್ದಲ್ಲಿ ದಯವಿಟ್ಟು ತಿಳಿಸಿ,ಸಹಕರಿಸಿ.

        Attempt 1

        ಸರಸತಿಯು ಪುಸ್ತಕದ ತೌರಿನಿಂ ಮಸ್ತಕದ
        ವರನ ಮನೆಯನು ಸೇರೆ ಪೊರಮಟ್ಟಿರೆ
        ವಿರಮಿಸಿರಲಕ್ಷಿದಿನಪತಿ ಮುಳುಗಿ ನಿದ್ರೆಯಲಿ
        ತಿರುಗಿ ನಡೆದಳೆ ತಾನು ತೌರಿನೆಡೆಗೆ?

        Attempt 2
        ಸರಸತಿಯು ಪುಸ್ತಕವೆನುವ ತೌರಿನಿಂ ಹೊರಟು
        ಶಿರವೆನ್ನುವತ್ತೆಮನೆಯೆಡೆ ಸಾಗಿರೆ
        ವಿರಮಿಸುತಲಕ್ಷಿದಿನಪತಿ ಮುಳುಗೆ ನಿದ್ರೆಯಲಿ
        ತಿರುಗಿ ನಡೆದಳೆ ತಾನು ತೌರಿನೆಡೆಗೆ?

        • ಅನಂತರೆ, ನಿಮ್ಮ ಕಲ್ಪನೆ ಈಗಿನ ಪದ್ಯಗಳಲ್ಲಿ ಅರ್ಥವಾಗುವಂತೆ ಮೂಡಿ ಚೆನ್ನಾಗಿವೆ.
          ಈ ಕೆಳಗಿನಂತೆಯೂ ಪದ್ಯವನ್ನು ಬರೆಯಬಹುದು. ಆಗ ತರುಣಿಯನ್ನೂ ಪದ್ಯದಲ್ಲಿ ಸೇರಿಸಿದಂತಾಗಿ ಚಿತ್ರಕ್ಕೆ ಪದ್ಯವನ್ನು ಬರೆದಂತಾಗುತ್ತದೆ.

          ಸರಸತಿಯೆ ಪುಸ್ತಕದ ತಾವಿನಿಂ ಪೊರಮಟ್ಟು
          ನರಮಸ್ತಕದೆ ಬಾಳೆ ಬಳಿಗೈದಿರೆ,|
          ವಿರಮಿಸಿರೆ ಸೌಭಾಗ್ಯವತಿ ಕಂಗಳಂ ಮುಚ್ಚಿ,
          ತಿರುಗಿ ನಡೆದಳೆ ದಾರಿಯಂ ಕಾಣದೆ ?||

    • ಮೂಲದ ಪದ್ಯವೇ ಚೆನ್ನಾಗಿದೆ ಅನ್ನಿಸಿತು 🙂 ಪುಸ್ತಕದಿಂದ ಮಸ್ತಕಕ್ಕೆ ಹರಿಯಬೇಕಾದ ಸರಸ್ವತಿ (ಹುಡುಗಿ ನಿದ್ರಿಸಿದ್ದರಿಂದ) ತಾನೇ ನಿದ್ರಿಸಿದಳು ಎಂಬ ಧ್ವನಿಯಿಂದ ಕೂಡಿದೆ. ಓದುವವರು ಜಾಗ್ರತರಾಗಿದ್ದರೆ ತಾನೆ ಅವರ ಪಾಲಿನ ಸರಸ್ವತಿಯೂ ಜಾಗ್ರತಳಾಗಿತುವುದು!

      • ನೀಲಕಂಠರ ಧ್ವನಿಗೆ ನನ್ನ ಪಾಲಿನ ಸರಸ್ವತಿಯೂ ಜಾಗ್ರತಳಾಗಿದ್ದಾಳೆ. ಅನಂತರೇ ಧ್ವನಿಯನ್ನು ಹೊರಡಿಸಬಹುದಿತ್ತು.ಅವರು ಗದ್ಯದಲ್ಲಿ ನೀಡಿದ ಅರ್ಥವನ್ನು ಓದಿ ನನಗೆ ಮೂಲಪದ್ಯವು ಸರಿಯಾಗಿ ಅರ್ಥವಾಗದಾಯಿತೇನೋ. 🙂

  14. ಹೊತ್ತಗೆಯ ಹೊತ್ತ ಹೊತ್ತಗೆಯದೊತ್ತಿರೆ ಮೆತ್ತ-
    ಗೆತ್ತಲಿಂ ಮುತ್ತಿದುದು ನಿದಿರೆ ಮತ್ತೇ ?
    ನೆತ್ತಿಗೇರದವೋದು ಕನ್ನಡಕ ಸಹಿತೆ ಬೇ-
    ಸತ್ತು (ಸ)ಸುತ್ತುದು ಮೂಗುವಟ್ಟ ಹೊತ್ತೇ ?!!

    ಮುಗುವಡು = ಮೌನವಾಗು

    ಓದುವಾಗಿನ ಮೌನದಸಮಯದ ಕಲ್ಪನೆ ?!!

  15. ಆಡುತೆ ವಾಣಿಯ ಮನೆಯೊಳ್
    ಪಾಡುತಲಕ್ಕರೆಯಿನಕ್ಕರಂಗಳನೀಗಳ್|
    ಕಾಡಲ್ಕಾಯಸಮದರಿಂ
    ಮೂಡಲ್ ಜಾಹ್ಯಮುಸಿರ್ವೆಣ್ಣೆ ಮಂಚಕಮಾದಳ್(ಶಿ.ದ್ವಿ)||

  16. ತೆರೆದಿರ್ಪಹೊತ್ತಿಗೆಯವೊಲ್
    ಸರಿದಿರ್ಪ ವಿಷಯಗಳಂ ತಿಳಿಯದೇ ಸುಖದಿಂ
    ದಿರುವಾಗ ನಿದ್ರೆಯೊಳ್ ನಾಂ!
    ಬರಿದೆ ಜರೆವುದೆಂತು ಬಾಲೆಯಂ ಶ್ರಮಿಸೆಂದುಂ!

    (ಜೀವನದಲ್ಲೀ ಏಷ್ಟೋ ವಿಷಯಗಳನ್ನು ನೋಡದೇ ನಿರ್ಲಕ್ಷಿಸುತ್ತ ಕಳೆಯುತ್ತಿರುವ ನಾವು, ಈ ಬಾಲೆಗೆ ಎಲ್ಲವನ್ನೂ ಓದಿಕೋ,ನಿದ್ರಿಸದಿರು, ಎಂದು ಹೇಳುವದಾದರೂ ಹೇಗೆ!)

  17. ಪುಸ್ತಕವ ಕೊಂಬಾಗ ಮಸ್ತಕವ ಕೊಂಡಂತೆ
    ಹಸ್ತದಲಿಯದನು ಪಿಡಿದಾಗ, ಬುದ್ಧಿsಯ
    ನಾಸ್ತಿಕ್ಯದರಿವು ತಿಳಿದಿತ್ತು

    • ಹಸ್ತಽದೊಽಳದನುಽ. ನಾಸ್ತಿಕ್ಯವು ಇಲ್ಲಿ ಹೇಗೆ relevant ಎಂದು ತಿಳಿಯಲಿಲ್ಲ. Did you mean ಜ್ಞಾನಾಭಾವ (instead of ನಾಸ್ತಿಕ್ಯದರಿವು)?

      • ತ್ರಿಪದಿಯಲ್ಲಿ ಎರಡನೆಯ ಸಾಲನ್ನು (ಮೊದಲ ಮೂರು ಗಣಗಳನ್ನು ಎರಡು ಬಾರಿ ಓದಿ, ನಾಲ್ಕನೆಯ ವಿಷ್ಣುವನ್ನು ಸೇರಿಸಿ ಮೂರನೆಯ ಸಾಲನ್ನು ಓದುವ ಪರಿ ಇದೆ ಎಂದು ಓದಿದ್ದೆ. ಹಾಗಾಗಿ “ಬುದ್ದಿಯ ನಾಸ್ತಿಕ್ಯ” ಅಂದರೆ ಇಲ್ಲದಿರುವಿಕೆ ಎಂಬರ್ಥದಲ್ಲಿ ಬರೆದಿದ್ದು.)

  18. ತಂದಿದೇ ನಿದಿರೆಯನು ಆಸ್ಮೋಸಿಸ್ ಪಾಠವಿದು
    ಬಂದಿದೇ ಮೆದುಳೊಳಗೆ ಕಾಸ್ಮೋಸಿನರಿವು
    ಒಂದೆತ್ತುಗೆಯಾಗಿದೆ ನಿನ್ನ ಪೋಸಿನ ಪರಿಯು
    ಇಂದಿಲ್ಲಿ ಹರಿದಿಹುದು ಪೊರೆತೊರ್ಪೆ ಭ್ರಮೆಯು
    ________
    ನಾನು ಹೈಸ್ಕೂಲ್ ಓದುತ್ತಿದ್ದಾಗ ಹೀಗೆ ನಿದ್ದೆ ಮಾಡಿ ಆಸ್ಮೋಸಿಸ್ ನಿಂದ ಹೆಚ್ಚು ಇರುವ ಕಡೆಯಿಂದ ಕಡಿಮೆ ಇರುವ ಕಡೆಗೆ ಜ್ಞಾನ ಹರಿಯುವುದು ಎಂದು ತಮಾಷೆ ಮಾಡುತ್ತಿದ್ದೆ.

    Osmosis – ಪೊರೆತೊರ್ಪೆ (ನೇರ ನಿಘಂಟಿನಿಂದ ಎತ್ತಿದ್ದು)

    • ತಂದಿದೇ, ಬಂದಿದೇ ~ ತಂದಿದೆ, ಬಂದಿದೆ
      ಗೆಯಾಗಿದೆ – ಗಣವು ಲಗಾದಿಯಾಗಿದೆ

    • ಪ್ರಸಾದರಿಗೆ ಧನ್ಯವಾದಗಳು. ಹೀಗೆ ಮಾಡಬಹುದೇ?

      ತಂದಿಹುದು ನಿದಿರೆಯನು ಆಸ್ಮೋಸಿಸ್ ಪಾಠವಿದು
      ಬಂದಿಹುದು ಮೆದುಳೊಳಗೆ ಕಾಸ್ಮೋಸಿನರಿವು
      ಒಂದುದಾಹರಣೆಯೇ ನಿನ್ನ ಪೋಸಿನ ಪರಿಯು
      ಇಂದಿಲ್ಲಿ ಹರಿದಿಹುದು ಪೊರೆತೊರ್ಪೆ ಭ್ರಮೆಯು

      ನನ್ನ ತ್ರಿಪದಿಯೂ ಸರಿಯೆದೆಯೇ ಎಂದು ತಿಳಿಸಿದರೆ ಬಹಳ ಸಹಾಯವಾಗುತ್ತದೆ. ನಿಮ್ಮ ಸಮಯಕ್ಕಾಗಿ ಆಭಾರಿ.

      • ತಪ್ಪೆಂದಲ್ಲ. ಕೊನೆಯ ಪಾದದ ಕೊನೆಯ ಗಣದಲ್ಲಿ ಒಂದು ಗುರು/ಲಘುಮಾತ್ರವಿದ್ದರೆ ಪ್ರಶಸ್ತ.

  19. ಗೀಟು ಭಾಷೆಯಲಿ ಘೋಷಣೆಯಿಂತು, ಲಕ್ಷಣದೆ
    “ಬೇಟೀ ಬಚಾವೊ ಬೇಟೀ ಪಡಾವೊ” ।
    ಪಾಟ ಚಿತ್ರದೊಳು ಪೋಷಣೆಯೆಂತು, ತಕ್ಷಣದೆ
    “ಬೇಟೀ ಉಠಾವೊ ಬೇಟೀ ಪಡಾವೊ” !!

    • Hhahhahhahha… Very good sense of humour!
      ಪಢಾವೊ ಎಂದಾಗಬೇಕು. ಟೈಪೊ ಎಂದುಕೊಳ್ಳೋಣವೆಂದರೆ, ಪಡಾವ್ ಎಂಬುದಕ್ಕೆ ಬೇರೊಂದು ಅರ್ಥವಿದೆ: hindrance!
      (ತಕ್ಷಣ ಎಂಬ ಅನರ್ಥವು ಕನ್ನಡದಲ್ಲಿ ನೆಲೆನಿಂತಿದೆಯಾದರೂ, ಶುದ್ಧರೂಪವಾದ ’ತತ್ಕ್ಷಣ’ ಎಂದು ಬಳಸುವುದೊಳ್ಳೆಯದು.)

    • ಹಹ್ಹಾ…

    • ಓ.. ಹೌದು ಪ್ರಸಾದ್ ಸರ್, ಟೈಪೋ ಆಗಿದೆ, ಧನ್ಯವಾದಗಳು. (“ವಿನೋದವಾಗಿ” ಎಂದು ಸಾಮಾನ್ಯವಾಗಿ ಬರೆಯುವವಳು, ಬರೆಯಲು ಮರೆತಿದ್ದೆ – ಪದ್ಯದಲ್ಲಿ ಅಷ್ಟು ಒಳ್ಳೆಯ ಯೋಜನೆಯ ಅಪಹಾಸ್ಯವೇನಾದರೂ ಆಗಿದೆಯೇ ಎಂಬ ಆತಂಕ ವಿತ್ತು,) ತಿದ್ದಿದ ಪದ್ಯ:

      ಗೀಟು ಭಾಷೆಯಲಿ ಘೋಷಣೆಯಿಂತು, ಲಕ್ಷಣದೆ
      “ಬೇಟೀ ಬಚಾವೊ ಬೇಟೀ ಪಢಾವೊ” ।
      ಪಾಟ ಚಿತ್ರದೊಳು ಪೋಷಣೆಯೆಂತು, ತತ್ಕ್ಷಣದೆ
      “ಬೇಟೀ ಉಠಾವೊ ಬೇಟೀ ಪಢಾವೊ” !!

      ಅಂದಹಾಗೆ, ನೀಲಕಂಠ ನೀನೂ ಕೂಡ ನಿಧಾನವಾಗಿ ಪ್ರಸಾದ್ ಸರ್ ನಕ್ಕ ಮೇಲೆ ನಕ್ಕಿರುವೆಯಲ್ಲ ?! ಧನ್ಯವಾದಗಳು.

  20. ಭರದಿಂ ಸಾಗಿರಲ್ ಜಗದೊಳುಂ ನಗರೀಕರಣಂ ನಿವಾಸಕಂ
    ತರುನಾಶಂ ದಿನಂ ಜರುಗುದುo ಕರುಣಾಜನಕಂ ಗಡಾ, ಭಯಂ-
    ಕರ ಸಾಸಂ, ನೆಡಲ್ಕದನು ವೇರೆಡೆ ವೇರೊಡನೊಯ್ಯುತಿರ್ಪ ನೇ-
    ಸರ ಸಂರಕ್ಷಕಂಗದುವೊ ಕಾಲ್ದೆಗೆದೋಡುತೆ ತಣ್ಪನಿತ್ತುದೇo !!

    ನಗರೀಕರಣದಲ್ಲಿ ನಾಶವಾಗುತ್ತಿರುವ ಮರವನ್ನು ರಕ್ಷಿಸಲು, ಬೇರುಸಮೇತ ಅದನ್ನು ಕಿತ್ತು ಬೇರೆಡೆ ನೆಡಲು ಸಾಗಿರುವ ಪರಿಸರ ಪ್ರೇಮಿಯ ಹಿಂದೆ ತಾನೂ ಓಡುತ್ತಾ ನೆರಳನಿತ್ತು ಸಹಕರಿಸುತ್ತಿದೆಯೇ ಮರ ?!!

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)