Sep 112017
 

ಅತಿವೃಷ್ಟಿಯನ್ನು ವರ್ಣಿಸಿ ಪದ್ಯರಚಿಸಿರಿ

  26 Responses to “ಪದ್ಯಸಪ್ತಾಹ ೨೭೨: ವರ್ಣನೆ”

  1. ನೀರು ತುಂಬುವ ಕೆರೆಗಳನು ಮುಚ್ಚಿ ಸೌಧಗಳ-
    ನೇರಿಸುತ ನಳ್ಳಿ ನೀರಿನ ನಾಗರಿಕರು I
    ಸಾರುವರು ಹನಿಗೂಡಿ ಹಳ್ಳವಾದರೆ ಬೀದಿ
    ತೋರೊ ಜಗದೀಶ ದಾರಿಯೆಮಗೀಗ II

    ಇದು ಕೃತಕ ಅತಿವೃಷ್ಟಿ

    • ತಾತ್ಪರ್ಯ ಗೊತ್ತಾಗಲಿಲ್ಲ.

      • ವ್ಯರ್ಥದಿಂ ಶಂಕಿಸುತ್ತಿರುವೆಯೀ ಪದ್ಯವು ಸ-
        ಮರ್ಥದಿಂದೊರೆವುದಾಗಿರ್ಪುದೈ ಕೇಳ್|
        ಅರ್ಥಮಾಗಿರಲದುಂ ತಾತ್ಪರ್ಯಮಮಮಾ ಚ-
        ತುರ್ಥದಂಶವು ಮಾತ್ರ ನೀ ಕೇಳೆಲೋ||

      • ನದಿಯೇ ಇಲ್ಲದ ಊರಲ್ಲಿ ,ಇರುವ ಹಲವು ಚಿಕ್ಕಪುಟ್ಟ ಕೆರೆಗಳನ್ನು ಮುಚ್ಚಿ, ಕಟ್ಟಡಗಳನ್ನೂ ಕಟ್ಟಿ ,ನಲ್ಲಿ ನೀರನ್ನು ಮಾತ್ರ ಬಳಸಿ ಗೊತ್ತಿರುವವರಿಗೆ ಮೇಲೆ ಆಕಾಶದಿಂದ ಸ್ವಲ್ಪ ಜೋರಾಗಿ ಮಳೆ ಬಿದ್ದರೂ ಅತಿವೃಷ್ಠಿ ಅನ್ನಿಸಿ ; ಜನ ದೇವರ ಮೊರೆ ಹೋಗುತ್ತಾರೆ ಅನ್ನುವುದು ತಾತ್ಪರ್ಯ. ಮೇಲಿನಿಂದ ಬಿದ್ದ ನೀರು ತಗ್ಗು ಪ್ರದೇಶಕ್ಕೆ ಹರಿಯುವುದು ಪ್ರಕೃತಿ ನಿಯಮವಲ್ಲವೇ ? ನೀರು ನಿಲ್ಲಬೇಕಾದ ಪ್ರದೇಶದಲ್ಲಿ ಕಟ್ಟಡಗಳು ಟಾರ್ ರಸ್ತೆಗಳು ಎದ್ದು ಬಂದರೆ ನೀರು ಮಣ್ಣಿಗೆ ಇಂಗುವ ಬದಲು ತಂಗುತ್ತದೆ . ಆಗ ಬೀದಿಯೇ ಹಳ್ಳವಾಗುತ್ತದೆ .ಹರಿದುಹೋಗಲು ಜಾಗವಿಲ್ಲದೆ ನಿ೦ತ ನೀರನ್ನು ಕಂಡು ನಗರದ ಜನರು ಅದನ್ನೇ ಅತಿವೃಷ್ಟಿಯೆಂದು ಭಾವಿಸುತ್ತಾರೆ . ( ಬೃಹತ್ ಬೆಂಗಳೂರಿನ ‘ಅತಿವೃಷ್ಟಿ’ಯನ್ನು ನೀವು ನೋಡಿಲ್ಲವೇ ?)

  2. ಧರೆಯೊಳ್ ಮಾನವರಾಗಿರಲ್ ದನುಜರಾ ಕ್ರೂರತ್ವಮಂದೋರುತುಂ
    ಮೊರೆಯನ್ನಿತ್ತಿರಲೀಧರಿತ್ರಿ ನಭಕಂ ಸಂತಾಪಮಂ ಸಾರುತುಂ
    ಮೆರೆವೀ ದುರ್ಜನರಟ್ಟಹಾಸವರಿಯಲ್ ಕಪ್ಪಿಟ್ಟಿರಲ್ ವಕ್ತ್ರಮಾ
    ಧರಣೀಪಾಲನ ಕಂಗಳಿಂ ಸುರಿಯಿತೀ ದುಃಖಪ್ರವಾಹಂ ಗಡಾ

    ಧರಣೀಪಾಲ=ಆಕಾಶ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ
    ದೌರ್ಜನ್ಯದಿಂದ ದುಃಖತಪ್ತಳಾದ ಧರಿತ್ರಿ ತನ್ನ ದುಃಖವನ್ನು ಗಂಡನಾದ ಆಕಾಶನ ಬಳಿ ಹೇಳಿಕೊಂಡಾಗ ಅವನು ಬೇರೇನ್ನೂ ಮಾಡಲಾಗದೆ ಮುಖ ಕಪ್ಪಿಟ್ಟು ಕಣ್ಣೀರ ಕೋಡಿ ಹರಿಸಲಾಗಿ ಮೊನ್ನೆ ಬೆಂಗಳೂರಿನ ರಸ್ತೆಗಳೆಲ್ಲ ತುಂಬಿ ಹರಿದವು;-)

    • ಚೆನ್ನಾಗಿದೆ 🙂 ಆ ಈ ಇವುಗಳ ಬಳಕೆ ಕಡಿಮೆಯಾಗಬೇಕು.

      • Neelakanthare nimma padyagalannu odi bahala dinavaayitalla.nimminda ondu khandaprasada ragale barali

        • ಬದರೀನಾಥರೇ, ನಿಮ್ಮ ಆಸೆ ಏನೋ ಒಂದು ಸ್ಫೂರ್ತಿ ಕೊಟ್ಟಿತು. ಕೆಳಗೆ ಒಂದು ಸಖಂಡಪ್ರಾಸಾಖಂಡಮತ್ತೇಭಮಾಲೆಯನ್ನು ಕೊಟ್ಟಿದ್ದೇನೆ 🙂 ನನಗೆ ನೀವು ಬಯಸಿದ ರಗಳೆ ಬರೆದು ರೂಢಿಯಿಲ್ಲ. ನಾನು ಬರೆದದ್ದೆಲ್ಲ ರಗಳೆ ಎಂತಲೇ ಭಾವಿಸಿ ಒಪ್ಪಿಸಿಕೊಳ್ಳಿ _/_

      • ಧನ್ಯವಾದಗಳು_/_ ಆ ಈ ಕಡಿಮೆ ಮಾಡಿದ ಪದ್ಯವಿಲ್ಲಿದೆ:-)

        ದುರುಳರ್ ಮಾನವರಾಗಿರಲ್ ದನುಜರೊಲ್ ಕ್ರೂರತ್ವಮಂದೋರುತುಂ
        ಮೊರೆಯಿತ್ತಳ್ ನಭಕಂ ಧರಿತ್ರಿ ಸಖನೇ ಪಾರಾಗಿಸೆಂದೆನ್ನುತುಂ
        ಅರಿಯಲ್ ದುರ್ಜನರಟ್ಟಹಾಸನಿಕರಂ, ಕಪ್ಪಿಟ್ಟಿರಲ್ ವಕ್ತ್ರಮಾ
        ಧರಣೀಪಾಲನ ಕಂಗಳಿಂ ಸುರಿಯಿತೀ ದುಃಖಪ್ರವಾಹಂ ಗಡಾ

  3. ಪುರುಹೂತಶರನಿಕರ ಧರೆಯನ್ನು ಮುತ್ತುತಲಿ
    ನರಜಾತಿಯೊಡನೆ ಸಾರಿಹುದೆ ಯುದ್ಧಂ?
    ತೊರೆಗಳಲಿ, ಝರಿಗಳಲಿ ಸುರಸೇನೆಯುಕ್ಕುತಲಿ
    ತರಿಯುತಿರ್ಪುದೆ ನರರಹಂಕಾರಮಂ?

  4. ಪ್ರಮತ್ತನಾಗಿ ರುದ್ರದೇವನಿಂತು ನೃತ್ಯ ಗೈದಿರ
    ಲ್ಕಮೋಘಪಾದಘಾತಕಂತೆ ಢಕ್ಕೆಯಿಂದ ಪೊಣ್ಮುವೀ
    ಢಮಢ್ಢಮಢ್ಢಮನ್ನಿನಾದದಿಮ್ ನಭಕ್ಕೆ ರಂಧ್ರಮಾ
    ಗಿ ಮತ್ತಿದೇನಶಕ್ತಮಾಯ್ತೆ? ಅಪ್ಸುಧಾರಣಕ್ಕೆ ತಾಂ/

    ರುದ್ರನ ತಾಂಡವನೃತ್ಯದ ಸಮಯದಲ್ಲಿನ ಕಾಲಿನ ಹೊಡೆತ ಹಾಗೂ ಆತನ ಡಮರುಗದ ಶಬ್ದಕ್ಕೆ ಆಕಾಶಕ್ಕೆ ರಂಧ್ರವಾಗಿ ಅದು ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿತೋ(ಎಂಬಂತೆ ಅತಿವೃಷ್ಟಿಯಾಯ್ತು)

    • ಮಂತೆದೆಂಬ is what? ನಂದಸುತ ತಾಂ should be ನಂದಸುತO ತಾಂ. We can make ನಂದtanujaM, or nandana sutaM.
      ಸಂತಂಬೋಲ್?
      ಕಾಣಲ್ಕO is not saadhu. it should be “kaaNalke”
      ಕಾಂತಾನ್ವೇಷಣ ಗೈವವೋಲು – should be ಕಾಂತಾನ್ವೇಷಣOಗೈವವೋಲ್. We can make “kaantaanvEShaNakoldavOle…”

      However did not get the import of ಕಾಂತಾನ್ವೇಷಣ for the clouds.

      • ಸವರಣೆಗಾಗಿ ಧನ್ಯವಾದಗಳು. ನನ್ನ ಪದ್ಯ ಸಮಂಜಸವಿಲ್ಲವೆಂದು ತೋರಿದ್ದರಿಂದ ಪದ್ಯವನ್ನು ಅಳಿಸಿದ್ದೇನೆ. FYI ಮಂತು= ಕಡೆಗೋಲು

        • ಆ ಪಾಯವನ್ನೇ ಕಿತ್ತರೂ ಈ ಗೋಡೆಗಳೆಲ್ಲ ನಿಂತಿರಲು ಇಲ್ಲೊಂದು ಕಡೆ ಮಾತ್ರ ಸಾಧ್ಯ!

          • ಗೋಡೆಯ ಮೇಲಿನ ಬರಹವನ್ನು ಮಾತ್ರ ಅಳಿಸಿದ್ದು. ಪಾಯವನ್ನು ತೆಗೆಯಲಿಲ್ಲ!

    • ಹಬ್ಬಲೀ ಗೋಡೆಯಲಿ ಸತ್ಕಾವ್ಯಲತೆಯೀಗ
      -ಲುಬ್ಬುತಗ್ಗುಗಳನ್ನು ತಾನೇರುತುಂ
      ಹುಬ್ಬನೇರಿಸುವಂಥ ಕಬ್ಬದರಲರಳುತಲಿ
      ಹಬ್ಬದಾ ಕಳೆತರಲಿ ತಾಣಕೀಗಳ್

  5. ಏಗಳುಂ ತಾಳ್ಮೆಯಿಂದಿದ್ದು ಪ್ರಕೃತಿಮಾತೆ
    ಆಗೀಗಳೊಮ್ಮೆ ಮುನಿವಳುಮೆಮ್ಮೊಲೇ|
    ಭೋಗಭೂಮವನಿತ್ತಿಹಳವಕ್ಕೆ ನಾಂ ನೋಡೆ
    ತೂಗಿ, ಹುಸಿಮುನಿಸೆನಿಪುದತಿವೃಷ್ಟಿಯು||

  6. ಮಳೆಗಂ ನರ್ತಿಪ ನೀಲಕಂಠಮುಳಿಗುಂ ಭೀತಾರ್ತಮಾಗುತ್ತೆ, ಪೊಂ-
    ಪುಳಿವೋಗುತ್ತೆ ಮಲರ್ದ ಪಾದಪಚಯಂ ಬೀಳ್ದತ್ತು ಬೆಂಡಾಗಿ, ನಿ-
    ವ್ವಳಮಾಗೀ ಧರೆಯಾಶ್ರಯಕ್ಕೆ ತಡಕಾಡಿತ್ತಾರದಾರೆಂದು ತ-
    ನ್ನುಳಿವಿಂಗಂ ಸಲೆ, ಆರಿದಾ ಖಳ ಹಿರಣ್ಯಾಕ್ಷಂ ಮರಳ್ದಬ್ದಸಂ-
    ಕುಳಸಂಕಾಶವಿಕಾಶಿಯಾಗೆಸೆದನೇಂ ವರ್ಷಚ್ಛದಂಬೀಸಿ ಮೈ-
    ಗುಳದಿಂ ಮರ್ತೆ ರಸಾತಳಕ್ಕೆಸೆವನೇನೆಂದೆನ್ನುತುಂ ಕೊಚ್ಚಿ ಪೋ-
    ದಳಲಾ ಗೋಳೊಳಳಲ್ದು, ನೀಳ್ವೊಡಿದೆಯೇನೀ ಪಾಂಗು?! ಮಂದಸ್ಮಿತಾ-
    ವಳಿ ಚೆಲ್ವೆಂದೆನೆ ಕಾಲಭೈರವರವಂ ಮಾಳ್ಪಟ್ಟಹಾಸಕ್ಕಮೆ-
    ಮ್ಮಳವೇಂ?! ಲಾಸ್ಯಮನಳ್ತಿಯಿಂ ರಚಿಸೆನಲ್ ಕಲ್ಪಾಂತಕಲ್ಪಂ ಮಹಾ-
    ಪ್ರಳಯಪ್ರಾಕೃತತಾಂಡವಕ್ಕೆಳಸಲೇನಿರ್ಕುಂ ಮುದಂಗೊಳ್ಳೆ?! ಕಾ-
    ಲ್ವೊಳೆ ಮೇಲ್ವಾಯ್ವ ತೆರಂ ತರಂಬಿಸುಟುದೀ ವೃಷ್ಟಿ, ಪ್ರಹರ್ಷಪ್ರದಾ-
    ಚಳಚಕ್ರೇಶಸುತಾವಚೋಲಸನಮಂ ಕೇಳ್ವಾಸೆಗಂ ಕಾಳಿ ಬ-
    ಲ್ಮುಳಿದಿತ್ತಂತಿರೆ ಥೂತ್ಕೃತಿಪ್ರಸರಮಂ ನಲ್ವಾಳ್ತೆಯಂ ಕೀಳುತುಂ

    ಮಳೆಗೆ ನರ್ತಿಸುವ ನವಿಲು ಭೀತಿಯಿಂದ ಆರ್ತವಾಯಿತು, ಚಿಗುರಿ ಮೈದಳೆದ ಮರಗಳು ಬೆಂಡಾಗಿ ಬಿದ್ದವು, ಇಡೀ ಧರೆ ತನಗೆ ಯಾರು ಆಶ್ರಯ ಎಂದು ತಡಕಾಡಿತು. ಯಾರಿದು? ಆ ಹಿರಣ್ಯಾಕ್ಷನೇ ಈ ಕಾರ್ಮೋಡಗಳ ರೂಪದಲ್ಲಿ ಮರಳಿ ಬಂದು ಮಳೆಯೆಂಬ ಹೊದ್ದಿಕೆಯಿಂದ ಮೈಸೆರೆಮಾಡಿ ರಸಾತಳಕ್ಕೆ ಎಸೆಯುವನೇನೋ ಎಂದು ಗೋಳಿನಲ್ಲಿ ಕೊಚ್ಚಿಹೋದಳು. ನೀಡು ಎಂದರೆ ಇದೇ ತರವೇನು ನೀಡುವುದು?! ಮುಗುಳ್ನಗೆ ಚೆನ್ನ ಎಂದರೆ ಭೈರವನ ಅಟ್ಟಹಾಸವನ್ನು ತಡೆಯಲಾದೀತೆ?! ಒಲಿದು ನೃತ್ಯ ಮಾಡೆಂದರೆ ಪ್ರಳಯತಾಂಡವ ಮಾಡಿದರೆ ಸಂತಸಪಡಲು ಏನಿದೆ?! ಕಾಲುಹೊಳೆ ತಲೆಮೇಲೇರಿದಂತೆ ಮೇರೆಮೀರಿತೀ ಮಳೆ. ಹರ್ಷಪ್ರದವಾದ ಗೌರಿಯ ನಲ್ನುಡಿಯನ್ನು ಕೇಳುವ ಆಸೆಗೆ ಕಾಳಿ ಮುಳಿದು ಥೂತ್ಕಾರ ಮಾಡಿದಂತೆ ಬಾಳನ್ನು ಹಾಳುಗೆಡವಿತು.

  7. ಪ್ರಕೃತದೆ ನಭದಾಳದೊಳು ಪ-
    ರಿಕಿಸಿರಲಣ್ವಸ್ತ್ರಮಂ ಜಲಪ್ರಲಯಂ ಕಾಣ್
    ಅಕಟಾ! ಮೇಘಸ್ಪೋಟಂ
    ಪ್ರಕಟಂಗೊಳ್ಳುತಿಳೆಗಾದುದತಿವೃಷ್ಟಿ ಗಡಾ !!

    ಅಂತರಿಕ್ಷದಲ್ಲಿ ನಡೆದಿರಬಹುದಾದ ಅಣ್ವಸ್ತ್ರ ಪರೀಕ್ಷೆ – ಪರಿಣಾಮದ ಮೇಘಸ್ಫೋಟ ತಂದ “ಅತಿವೃಷ್ಟಿ”ಯ ಕಲ್ಪನೆ !!

    • Good idea madam! But the gati is jarring in the end of first line and beginning of second line.

      • ಓ.. ಅಣುಪರೀಕ್ಷೆ ಕಾಲುಜಾರಿದೆ(~ಕೈತಪ್ಪಿದೆ) !!
        “ಅಕಟಾ” ತರಲು ಹೋಗಿ ಈ ಅವತಾರ !. ತಿದ್ದಿದ ಪದ್ಯ:

        ಪ್ರಕೃತದೆ ಪರಿಕಿಸಿರಲ್ ಪಾ-
        ತಕಿಗಳ್ ನಭದಾಳಬಗೆದಣ್ವಸ್ತ್ರಗಳಂ ।
        ಅಕಟಾ! ಮೇಘಸ್ಪೋಟಂ
        ಪ್ರಕಟಂಗೊಳ್ಳುತಿಳೆಗಾದುದತಿವೃಷ್ಟಿ ಗಡಾ !!

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)