Oct 092017
 

ನಂದನವನದಿಂ ಮುರಾರಿ ಕಳ್ಳಿಯನೊಯ್ದಂ

  15 Responses to “ಪದ್ಯಸಪ್ತಾಹ ೨೭೬: ಸಮಸ್ಯಾಪೂರಣ”

  1. ಸುಂದರಪುಷ್ಪಮನಂತೆಯೆ
    ಕುಂದದ ಸೌರಭಮದಿರ್ಪ ಮನಮಂ ಸೆಳೆವೀ /
    ಯಂದದ ತರುವಂ ಭಾವಿಸೆ
    ನಂದನವನದಿಂ ಮುರಾರಿ ಕಳ್ಳಿಯನೊಯ್ದಂ//

  2. ಸುಂದರಿಯವಳಂ ಸ್ವಹೃದಯ
    ಮಂದಿರಮಂ ಸೂರೆಗೈದಳಂ ಪ್ರಿಯಸಖಿಯ
    ನ್ನಂದದಿನೆದೆಗಂ ಸೆರೆಗಂ
    ನಂದನವನದಿಂ ಮುರಾರಿ ಕಳ್ಳಿಯನೊಯ್ದಂ

    ತನ್ನ ಹೃದಯವನ್ನು ಸೂರೆಗೊಂಡ ರಾಧೆಯನ್ನು ಕೃಷ್ಣ ಮತ್ತೆ ಹೃದಯವೆಂಬ ಸೆರೆಯೊಳಗೇ ಬಂಧಿಸಿದ ಎನ್ನುವ ಪ್ರಯತ್ನ

  3. ಕಳ್ಳ-ಕಳ್ಳಿ!
    ಚಂದದ ಗೋಪಕುವರಿಯರೊ-
    ಳಿಂದುಂ “ನವನೀತಚೋರಗೀ ಪೆಣ್ಣಿವಳೇ|
    ಪೊಂದಿಕೊಳುವಳೆ”ನುತಾಗಾ
    ನಂದನವನದಿಂ ಮುರಾರಿ (ಒಬ್ಬಾನೊಬ್ಬ)ಕಳ್ಳಿಯನೊಯ್ದಂ||

  4. ಕಳ್ಳಿ ಎಂದರೆ ಮೈಗಳ್ಳಿ ಎಂಬರ್ಥವೂ ಇದೆ. ಚತ್ರುರ್ಮಾತ್ರದಲ್ಲಿ ರಚಿಸಿರುವುದರಿಂದ ಮುರಾರಿ ಎಂಬ ಜಗಣವನ್ನು ಕೃಷ್ಣನು ಎಂದು ಬದಲಿಸಿಕೊಂಡಿದ್ದೇನೆ.

    ವಸ್ತ್ರವ ಕದ್ದೊಡೆ ವಿಹ್ವಲಗೊಳ್ಳುವ-
    ಳೈ ಸ್ತ್ರೀ, ಅಪವಾದಳಿವಳ್ ಕೇಳ್!
    ಭಸ್ತ್ರಿಯವೋಲೇದುಸಿರನು ಬಿಡಳು ವಿ-
    ವಸ್ತ್ರಳುಮಿದ್ದುಮತರ್ಕಿತಳೈ|| (ಅತರ್ಕಿತ=Casual)

    ಸುಳ್ಳಿನ ಲಜ್ಜೆಯ ತೋರದಳನ್ನುಂ
    (ಆಟದಲ್ಲಿ ಮಜವಿಲ್ಲವೆಂದು) ಹುಳ್ಳನೆ ನೋಡುತೆ ದರದರನೆ|
    ತಳ್ಳುತೆ ನಂದನವನದಿಂ ಕೃಷ್ಣನು
    (ಮೈ)ಕಳ್ಳಿಯನೊಯ್ದಂ ಮನೆಗವಳ||

  5. ಅಕ್ಕಪಕ್ಕದ ಮನೆಗಳಲ್ಲಿದ್ದ ಕೃಷ್ಣನಿಗೂ ಬಲರಾಮನಿಗೂ ಆಸ್ತಿಯ ವಿಷಯವಾಗಿ ಜಗಳವಾಯಿತು. ವಿವಾದವನ್ನು ತಪ್ಪಿಸಲು ಕೃಷ್ಣನು ಇಬ್ಬರ ಮನೆಯ ನಡುವೆ ಕಳ್ಳಿಬೇಲಿಯನ್ನು ನೆಟ್ಟನು!
    ನಿಂದಿಸಲಗ್ರಜನಾಗಳ್
    ನಂದನವನದಿಂ ಮುರಾರಿ ಕಳ್ಳಿಯನೊಯ್ದಂ|
    ದಂದುಗಮಂ ಸಂಭಾಳಿಸೆ
    ಚಂದದ ಬೇಲಿಯ ನೆಡಲ್ಕೆ ಮನೆಗಳ ನಡುವೊಳ್||

  6. ಬೃಂದಾವನದಿಂ ರಾಧಾ
    ಕ್ರಂದನಮಂ ಬೆಸಗೊಳುತ್ತೆ ಪೋಗಲ್ ದಿನಮುಂ
    ಪಿಂದಣ ನೆನಪಿಂದಿರಿವೊಲ್
    ನಂದನವನದಿಂ ಮುರಾರಿ ಕಳ್ಳಿಯನೊಯ್ದಂ //

    ನಂದನ-ವನ =ಗೋಕುಲದಿಂದ ನೆನಪೆನ್ನುವ ಚುಚ್ಚುವ ಕಳ್ಳಿಯನ್ನೇ ಕೃಷ್ಣ ತೆಗೆದುಕೊಂಡು ಹೋದ.

    ಕುಂದದ ಬಿಸಿಲೊಳ್ ಕರಭಾ
    ನಂದಾಸ್ಪದಮಲ್ತೆ ಕಳ್ಳಿಯಂತೆಯೆ ಮನಮೇ/
    ಬೆಂದಿರೆ ತಾಪದಿನಾರಿಸೆ
    ನಂದನವನದಿಂ ಮುರಾರಿ ಕಳ್ಳಿಯನೊಯ್ದಮ್ //
    ಹೇಗೆ ಕಳ್ಳಿಯಗಿಡ ಒಂಟೆಗೆ ಆಹಾರವಾಗಿ ಆನಂದವನ್ನೀಯುತ್ತದೆಯೋ ಅಂತೆಯೇ ಮನಸ್ಸಿಗೆ ಹಿತವನ್ನುಂಟುಮಾಡುವ ಪಾರಿಜಾತವನ್ನು……

  7. ವಿನೋದವಾಗಿ !!
    ಸುರಿವ “ಹಾಲು” ಕಂಡರೆ ಬಿಟ್ಟಾನೆಯೇ ನಮ್ಮ ಕೃಷ್ಣ !!

    ಹಿಂದಾಲೋಚನೆಯೊಳ್ ಗಡ
    ನಿಂದಿಸಿ ಪಾಲಿತ್ತ ಪೂತಣಿಯ “ಕಳ್ಳಿ”ಯ ಮೇಣ್
    ಸಂದಿಸಿ ಸುರಿವಾಲಂದಾ
    ನಂದನವನದಿಂ ಮುರಾರಿ “ಕಳ್ಳಿ”ಯನೊಯ್ದಂ !!

    • ಸ್ವಲ್ಪ ಬದಲಾವಣೆಯೊಂದಿಗೆ,

      ನಿಂದಿಸಿರಲ್ ಪೂತಣಿಗಂ
      ಮಂದಿಯು “ಪಾಲೀವ ಕಳ್ಳಿ”ಯವಳೆಂದೆನುತುಂ ।
      ಕಂದನವ ನೆನೆದದಂ ಗಡ
      ನಂದನವನದಿಂ ಮುರಾರಿ “ಕಳ್ಳಿ”ಯನೊಯ್ದಂ !!

    • ಅದು ಹೀಗಿರಬಹುದೇ?! ಬಿಂದಿಗೆ ಹಾಲು ಕುಡಿಯಲು, (ಹಾಲುಸುರಿಸುತ್ತಿದ್ದ ಹಸಿರು ಕಳ್ಳಿಯ ಕಾಂಡ ಕಂಡು) – “ಬೆಂಡ್” ಆಗುವ “ಸ್ಟ್ರಾ”ಥರ ಉಪಯೋಗಕ್ಕೆ ಬರಬಹುದು ಎಂದು… !!

      ಸಂದ ಪಸಿರ್ನಳಿಗೆಯದಂ,
      ಬಿಂದಿಗೆ ಪಾಲ ಪರಿಪೂರ ಬಾಗದೆ ಮಹದಾ-
      ನಂದದೆ ಪೀರಲ್ಕನುವೆನೆ
      ನಂದನವನದಿಂ ಮುರಾರಿ ಕಳ್ಳಿಯನೊಯ್ದಂ !!

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)