Nov 202011
 

 

ಚಂದ್ರ ಮತ್ತು ಕಡಲು – ಏನುಂಟು ನಿಮ್ಮ ಭಾವ,  ಈ ನಂಟಿನ ಬಗ್ಗೆ ಕವನಿಸಿ

 

ಉಡುಪ ವಾರಧಿಯ ನುಬ್ಬಿಪಂ ; ಮುದಂ-

ಬಡಲು ಸಾಗರನಿಗದೇನು ಕಾರಣಂ?

ಒಡಲಕೂಸು ಕಡಲಿಂಗೆ ಚಂದ್ರಮಂ

ಕಡಲಿಗುಂಟು ಶಶಿಮೋಹ  ವರ್ಧಿಸಲ್

(ಛಂದಸ್ಸು:   ಮತ್ತ ಕೋಕಿಲ.  ಪ್ರಯೋಗಾಕಾಂಕ್ಷಿಗಳು ತ್ವರೆಮಾಡಬಹುದು)

 

 

  51 Responses to “ಕಡಲಿಗೇಕೆ ಶಶಿಮೋಹ ವರ್ಧಿಸಲ್ ?”

  1. ನನ್ನ ಪರಿಹಾರ ಮತ್ತ ಕೋಕಿಲದಲ್ಲಿ (ಇದನ್ನು ರಗಳೆ ಎಂದು ತಿಳಿದು) ಪ್ರಯತ್ನಿಸಿದ್ದೇನೆ.
    ಸ್ವಲ್ಪ ಭಾಷೆ,ವಸ್ತು ಎರಡು ಬಾಲಿಶವಾಗಿದೆ ಎನಿದುತ್ತದೆ 🙂

    ಚಂದ್ರ ಪೂರ್ವದಿ ನೀರರಾಜನ ಕಂಡು ಈ ಪರಿ ಪೇಳ್ದನುs
    “ವಂದ್ಯ ನಿನ್ನಲೆ ನಾನು ಹುಟ್ಟುವೆ, ನಿದ್ರೆ ನಿನ್ನಲೆಗೈವೆನುs
    ಸಂದಿಸಲ್ ನನ ಗುರವಂ ನಿನಗೊಂದು ಕಾಣಿಕೆ ನೀಡಲೇ?
    ಚಂದ ನನ್ನಯ ಬೆಳ್ಳಿ ಕಂಕಣ ನಿನ್ನ ಬಾಹುವ ಶೋಭಿಸೆs
    ತಂದು ನಾ ಬಿಳಿ ಬಣ್ಣವಂ ಮೂವತ್ತು ರಾತ್ರಿಗೆ ಚೆಲ್ಲುವೆs
    ಹೊಂದು ನೀ ಪ್ರತಿಕಾಂತಿಯಂ ಬಹುಧನ್ಯನಾಗುವೆನಾಗಲೇ”
    “ಸುಂದರಾಂಗನೆ ನಾನು ನಿನ್ನಯ ಕಾಂತಿಯಂ ತೊಡೆ ಚೆಂದವುs
    ಮುಂದೆ ಪೂರ್ಣಿಮೆಯಂದು ಬಾಹುಗಳಿಂದ ನಿನ್ನನು ಕಾಯುವೇ”
    ಎಂದು ಸಾಗರ ಪೇಳೆ ಚಂದ್ರನು ಹರ್ಷದಿಂದಲಿ ಇಂದಿಗೂ
    ಸ್ಪಂದಿಸಲ್ ಇರುಳಲ್ಲಿ ಸಾಗರಗೆಂದು ತಾ ಬೆಳಕೀವನು

    ನೀರರಾಜ: ಸಮುದ್ರ
    ಪ್ರತಿಕಾಂತಿ: ಪ್ರತಿಫಲನ
    ಕಾಯುವೆ: ನಿರೀಕ್ಷಿಸುವೆ

    • Correction:
      ಚಂದ್ರ ಪೂರ್ವದಿ ನೀರರಾಜನ ಕಂಡು ಈ ಪರಿ ಪೇಳ್ದನುs
      “ವಂದ್ಯ ನಿನ್ನಲೆ ನಾನು ಹುಟ್ಟುವೆ, ನಿದ್ರೆ ನಿನ್ನಲೆಗೈವೆನುs
      ಸಂದಿಸಲ್ ನನ ಗೌರವಂ ನಿನಗೊಂದು ಕಾಣಿಕೆ ನೀಡಲೇ?
      ಚಂದ ನನ್ನಯ ಬೆಳ್ಳಿ ಕಂಕಣ ನಿನ್ನ ಬಾಹುವ ಶೋಭಿಸೆs

      ತಂದು ನಾ ಬಿಳಿ ಬಣ್ಣವಂ ಮೂವತ್ತು ರಾತ್ರಿಗೆ ಚೆಲ್ಲುವೆs
      ಹೊಂದು ನೀ ಪ್ರತಿಕಾಂತಿಯಂ ಬಹುಧನ್ಯನಾಗುವೆನಾಗಲೇ”
      “ಸುಂದರಾಂಗನೆ ನಾನು ನಿನ್ನಯ ಕಾಂತಿಯಂ ತೊಡೆ ಚೆಂದವುs
      ಮುಂದೆ ಪೂರ್ಣಿಮೆಯಂದು ಬಾಹುಗಳಿಂದ ನಿನ್ನನು ಕಾಯುವೇ”

      ಎಂದು ಸಾಗರ ಪೇಳೆ ಚಂದ್ರನು ಹರ್ಷದಿಂದಲಿ ಇಂದಿಗೂ
      ಸ್ಪಂದಿಸಲ್ ಇರುಳಲ್ಲಿ ಸಾಗರಗೆಂದು ತಾ ಬೆಳಕೀವನು

      ನೀರರಾಜ: ಸಮುದ್ರ
      ಪ್ರತಿಕಾಂತಿ: ಪ್ರತಿಫಲನ
      ಕಾಯುವೆ: ನಿರೀಕ್ಷಿಸುವೆ

      • ನನಗೆ ‘ಮತ್ತ ಕೋಕಿಲ’ದ ನಿಯಮ ತಿಳಿದಿರಲಿಲ್ಲ internet ನಲ್ಲಿ ಕೆಳಗಿನ ಲಿಂಕ್ ಸಿಕ್ಕಿತು, ಅದನ್ನು ಅನುಸರಿಸಿ ಬರೆದೆ
        http://surasa.net/music/telugu-kavita/chandassu101.html
        ಇದು ಸರೀಲ್ಲವೆಂದು ಚಂದ್ರಮೌಳಿಯವರ ಪ್ರಶ್ನೆಯನ್ನು ಇನ್ನೊಮ್ಮೆ ಓದಿದಾಗ ಮತ್ತು ಗಣೇಶ ಕೊಪ್ಪಳ ತೋಟ ಅವರ ಕಾಮೆಂಟ್ನಿಂದ ತಿಳಿಯಿತು.

  2. ಮತ್ತಕೋಕಿಲ ವೃತ್ತ. ರಗಳೆ ಅಲ್ಲ. “ನಭಜರಂಗಳಿರೆ ಮತ್ತಕೋಕಿಲಂ” ಎಂದು ಸೂತ್ರ (ಕನ್ನಡ ಛಂದಸ್ಸಿನ ಚರಿತ್ರೆ-ಸಂ.ಹಾಮಾನಾ& ಸಿಪಿಕೆ) ಇದಕ್ಕೆ ‘ಪ್ರಿಯಂವದಾ’ ಎಂಬ ಹೆಸರೂ ಇದೆ ಎಂದು ಕೇಳಿದ್ದೇನೆ. ಹೌದೋ ಇಲ್ಲವೋ ದಯವಿಟ್ಟು ಯಾರಾದರೂ ತಿಳಿಸಿ.

    ಚಿತ್ರಕ್ಕೆ ನನ್ನ ಪದ್ಯ-

    ಶಶಿಯ ದೋಷಗಳನಿಲ್ಲಿ ಕೋವಿದರ್
    ಕೃಶತೆ ಕೃಷ್ಣಮೃಗಚಿಹ್ನೆ ಟೀಕಿಸಲ್|
    ಶಶಿದಿಟಂ ತಿಳಿಯಲೆಂದು ನೋಡಿದಂ
    ನಿಶೆಯಲೀ ಶರಧಿ ದರ್ಪಣೋಪಮಂ||

    • ಗಣೇಶ ಕೊಪ್ಪಳ ತೋಟ ಅವರೆ,
      ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

    • ಸೋಮಶೇಖರ್,

      ಮತ್ತಕೋಕಿಲ ಮತ್ತಕೋಕಿಲ ಮತ್ತಕೋಕಿಲ ಕೋಕಿಲಾ : ರಸಜಜಬರ ಈ ಬಂದ ನಿಜಕ್ಕೂ ಪ್ರಸಿದ್ಧವಾದ “ಮತ್ತಕೋಕಿಲ”. ನಿಮ್ಮ ಪದ್ಯ ಸರಿಯಾಗಿಯೇ ಇದು. ರಾಮಚಂದ್ರರಿತ್ತ ಸಂಕಲನ ಸ್ವಾತಂತ್ರ್ಯವನ್ನು ಬಳಸಿ ನಿಮ್ಮಪದ್ಯವನ್ನು ಸಮವೃತ್ತವನ್ನಾಗಿ ತೋರಿಸಿದ್ದೇನೆ. ನೀವು ರಗಳೆಯೆಂದುಕೊಂಡು ರಚಿಸಿದರೂ, ಛಂದಸ್ಸಿನಲ್ಲಿ ರಗಳೆಯಾಗಿಲ್ಲ !!. ಇನ್ನೆರಡು ಸಾಲನ್ನು ಸೇರಿಸಿದರೆ, ನಿಮ್ಮವು ಮೂರುಪದ್ಯಗಳು. ಸಮುದ್ರನನ್ನು ಬೆಳಗಿಸುವ ಚಂದ್ರನ ವರ್ಣನೆಯ ಕಲ್ಪನೆ ಮುದವಾಗಿದೆ.

      • ಧನ್ಯವಾದಗಳು ಚಂದ್ರಮೌಳಿಯವರೇ,

        ಹಾಗಾದರೆ ‘ಮತ್ತಕೋಕಿಲ’ ಛಂದಸ್ಸಿಗೆ ೨ ಬಗೆಯ ಪ್ರಯೋಗವಿದೆ ಎಂದಾಯಿತು. ಇನ್ನೊಂದು ಸಂದೇಹ, ಇದು ಕನ್ನಡ ಮತ್ತು ತೆಲುಗಿನಲ್ಲಿ ಇರುವ ವ್ಯತ್ಯಾಸವೇ ಅಥವಾ ಎರಡು ಭಾಷೆಯಲ್ಲೂ ೨ ಬಗೆಯ ಪ್ರಯೋಗ ಪ್ರಸಿಧ್ಧವೇ?

        • ಸೋಮಶೇಖರ್,
          ಕನ್ನಡದ ಮಲ್ಲಿಕಾಮಾಲೆಯೇ ತೆಲುಗಿನ ’ಮತ್ತಕೋಕಿಲ’.ರ-ಸ-ಜ-ಜ-ಭ-ರ ಗಣವಿನ್ಯಾಸದ ತ್ರಿಶ್ರ-ಚತುಶ್ರ ಗಳ ಮಿಶ್ರಗತಿಯದು.ಪಂಪನಲ್ಲಿ ಹಲವಾರು ಪ್ರಯೋಗಗಳುಂಟು. (ಪಿಂಗಳನ ಹರನರ್ತನವೇ – ಮಲ್ಲಿಕಾಮಾಲೆ – ಡಾ. ಟಿ.ವಿ.ವಿ) ನಿಮ್ಮ ಪದ್ಯ ಈ ಜಾಡಿನದೇ. ತರಳ, ಖಚರಪ್ಲುತ ವೃತ್ತಗಳೂ ಈ ನಡಿಗೆಯವೇ. ಕೊಪ್ಪಳ ತೋಟರು ಸೂಚಿಸುರುವ “ನಭಜರಂಗಳಿರೆ ಮತ್ತಕೋಕಿಲಂ” ಎಂಬ ಸೂತ್ರದ “ಮತ್ತಕೋಕಿಲ” ಮಲ್ಲಿನಾಥಪುರಾಣದಲ್ಲಿ ಬಳಕೆಯಾಗಿದೆ. ಈ ಬಂಧ, ತೆಲುಗಿನ ಮತ್ತಕೋಕಿಲದಂತೆ ಪ್ರಸಿದ್ದಿಪಡೆದಿಲ್ಲವೆಂದು ನನ್ನ ಅನಿಸಿಕೆ. ಇಲ್ಲಿ ೩+೫ ರ ವಿನ್ಯಾಸ (೪+೪ ನ್ನು ಒಡೆದು ೩+೫ ಮಾಡುವರೀತಿ)(ಕಡಲಿ+ಗುಂಟು ಶಶಿ+ಮೋಹ+ ವರ್ಧಿಸಲ್ ) ಕನ್ನಡಭಾಷೆಗೆ ಒಗ್ಗುವಂತಿದೆ. ನವೋದಯದ ಕವಿಗಳೂ ಇದನ್ನು ಬಳಸಿದ್ದಾರೆ.

          • ಮತ್ತಕೋಕಿಲ ಮತ್ತು ಮಲ್ಲಿಕಾ ಮಾಲೆಗಳ ಬಗೆಗಿನ ಮಾಹಿತಿಗೆ ಧನ್ಯವಾದಗಳು ಸರ್,
            “ಕಡಲಿಗುಂಟು ಶಶಿ ಮೋಹ ವರ್ಧಿಸಲ್” ಇದರಲ್ಲಿ “ನಭಜರ” ಗಣಗಳೇ ಬಂದಿವೆ ಹಾಗಾಗಿ ನನಗೆ ಅದನ್ನು ಈ 3+5 ಅಥವಾ 4+4 ಮಾತ್ರೆಗಳ ಗುಂಪನ್ನಾಗಿ ವಿಭಾಗಿಸುವ ಯೋಚನೆ ಬರಲಿಲ್ಲ,
            “ಮಲ್ಲಿಕಾಯತ ಮಾಲೆಯಪ್ಪುದು ರಂಸಜಂಜಭರಂ ಬರಲ್” ಎಂದು ಸೂತ್ರ ಕೇಳಿದ್ದ ಕಾರಣ ಅದರಲ್ಲಿ ಕೂಡ ಮಾತ್ರೆಗಳನ್ನು ವಿಭಾಗಿಸಿ ನೋಡಿರಲಿಲಲ್ಲ.
            ‘ನಭಜರ’ಗಳ ಮತ್ತಕೋಕಿಲಕ್ಕಿಂತ “ರಸಜಜಭರ”ಗಳ ಮತ್ತಕೋಕಿಲ / ಮಲ್ಲಿಕಾಮಾಲೆಯ ಗತಿಯೇ ಹೆಚ್ಚು ಕರ್ಣಾನಂದಕರವಾಗಿದೆ ಎಂದೆನಿಸುತ್ತಿದೆ.

          • ಅಕ್ಶರಗಣ ಛಂದದಲ್ಲಿ ರಚನೆ ಮಾಡುವಾಗ ಮಾತ್ರೆಗಳ ಲೆಕ್ಕಾಚಾರ ಮಾಡಲೇಬಾರದಾಗಿ, ಮಾತ್ರೆಗಳ ಗುಂಪನ್ನಾಗಿಸುವ ಯೋಚನೆ ಬರದಿರುವುದು, ಸಮಂಜಸವೇ. ಪದ್ಯವನ್ನು ಓದುವಾಗ, ಮಾತ್ರಾಲಯದ ಅಭ್ಯಾಸವುಳ್ಳವರಿಗೆ ಬೇಗ ಸ್ಫುರಿಸುವೆದೆಂಬ ಭಾವದಿಂದ ಆ ಮಾತನ್ನು ಹೇಳಿದೆ. ಮಲ್ಲಿಕಾಮಾಲೆಯ ಗತಿ ಹೆಚ್ಚುರಂಜನೀಯವೆನ್ನುವುದು ಒಪ್ಪುವಮಾತು. ಈ ಮಿಶ್ರಗತಿಯಲ್ಲೇ ಅನೇಕ ವೃತ್ತಗಳುಂಟು. ಆ ವೃತ್ತಗಳ ಆವಿರ್ಭಾವವಾಗಿರುವುದು, ಅಕ್ಷರಗಣಪಲ್ಲಟದಿಂದಾದರೂ, ಮಿಶ್ರಗತಿಯ (೩+೪)ಧಾಟಿಯಲ್ಲೇ ಇರುವುದು ಗಮನಾರ್ಹ. ಉದಾ” ನಗುತ ಬರುತಿಹ, ಛದ್ಮ ವೇಷದಿ. ಮುರಾರೀಸತಿ, ಬಲ್ಮೆಯಿಂದಂ… ಎಲ್ಲವೂ (೩+೪) ಮಿಶ್ರಗತಿಯಲ್ಲಿದ್ದರೂ ಮಾತ್ರಾಗಣವಿನ್ಯಾಸ ಬೇರೆ.ಇಂಥ ಪ್ರಯತ್ನಗಳಿಂದ ಹಲವಾರು ವೃತ್ತಗಳಾಗಿವೆ ಮತ್ತು ಇನ್ನೂ ಹೊಸತನ್ನು ಮಾಡುವ ಸಾಧ್ಯತೆಗಳಿಲ್ಲದಿಲ್ಲ. ಇದು ಸರ್ವವಿದಿತಸಾಮಾನ್ಯವಿಷಯವಾದರೂ, ಅಭ್ಯಾಸಿಗಳಿಗೆ ಹೇಗೆ ತಿಳಿಸಬಹುದೆಂಬ ನನ್ನ ಕಲಿಕೆಯಷ್ಟೆ.

    • ಲೋಕ ಹೇಳುವ ಕಳಂಕ ತನಗಿದೆಯೇ ಎಂದು ತಿಳಿಯಲು, ಚಂದ್ರನಿಗೆ ಕಡಲೇ ಕನ್ನಡಿಯಾಯ್ತು ಎಂಬ
      ಗಣೇಶ ಕೊಪ್ಪಲ ತೋಟ ಅವರ ಕಲ್ಪನೆ ಸೊಗಸಾಗಿ ಮೂಡಿಬಂದಿದೆ.,

    • ವಾಹ್ಹವಾ… ಗಣೇಶ ಕೊಪ್ಪಲತೋಟರೇ ಸಮುದ್ರವನ್ನು ಕನ್ನಡಿಗೆ ಹೋಲಿಸುವ ನಿಮ್ಮ ಕಲ್ಪನೆ ಅದ್ಭುತವಾಗಿದೆ. ಕೆಲವು ದಿನಗಳಿಂದ ಇತ್ತ ತಲೆಹಾಕಲಾಗಿರಲಿಲ್ಲ. ಈ ಅವಧಿಯಲ್ಲಿ ಎಷ್ಟೊಂದು ರಚನೆಗಳು!

  3. ಮತ್ತಕೊಕಿಲದ “ನಭಜರಂಗಳಿರೆ ಮತ್ತಕೋಕಿಲಂ” ಎಂಬ ಪ್ರಯೋಗಕ್ಕೊಂದು ಪದ್ಯ:

    ಸ್ಮರಿಪ ಪಾಲಾಗಡಲಂ ಹಿಮಾಂಶು ತಾ
    ಹರಿವ ನೀರಿನಲೆಗಳ್ ವಿಶೇಷ ವಾ-
    ಗಿರುವ ಹುಣ್ಣಿಮೆಯ ಬೆಳ್ಪು ಬೀಳೆ ಭೋ-
    ರ್ಗರೆವ ಸಾಗರದಿನೇಳು ಬೀಳಿನೊಳ್

    • ಅಲೆಗಳ ಏರಿಳಿತದಮೇಲೆ ಬೆಳದಿಂಗಳು ಪ್ರತಿಫಲಿಸಿ, ಚಂದ್ರನಿಗೆ ತನ್ನ ಜನ್ಮಸ್ಥಾನದ ನೆನಪನ್ನು ತರುವ ಈ ಪದ್ಯಕ್ಕೆ ಈಗ ಮೊದಲ ಮಣೆ. ಮೊದಲ ಸಾಲಿನಲ್ಲಿ ಸ್ಮರಿಪ ಪಾಲಗಡಲಂ ಮಾಡಿದರೆ ಛಂದ, ಚೆಂದ.

      • ಚಂದ್ರಮೌಳಿ ಅವರೇ,

        ಮುದ್ರಾರಾಕ್ಷಸನ ಹಾವಳಿಯಾಗಿತ್ತು 🙂

        ಸ್ಮರಿಪ ಪಾಲಗಡಲಂ ಹಿಮಾಂಶು ತಾ
        ಹರಿವ ನೀರಿನಲೆಗಳ್ ವಿಶೇಷ ವಾ-
        ಗಿರುವ ಹುಣ್ಣಿಮೆಯ ಬೆಳ್ಪು ಬೀಳೆ ಭೋ-
        ರ್ಗರೆವ ಸಾಗರದಿನೇಳು ಬೀಳಿನೊಳ್

  4. ಹಗಲೊಳ್ ಸೀರೆ ಸುನೀಲಂ
    ಸೊಗದೊಳ್ ತಂದುಡಿಸಿದೀ ಗಗನಚಿರಮಿತ್ರಂ
    ಬಗೆಯೊಳ್ ನೆನೆದು ಕಳಿಪನೇನ್
    ಜಗಜಗಿಪೀ ಚಂದ್ರರತ್ನಸೂತ್ರಿತಹಾರಂ

    • ಹಗಲಲ್ಲಿ ನೀಲಿ ಸೀರೆಯುಡಿಸಿದ ಗಗನಕ್ಕೆ ಉದಧಿ ಚಂದ್ರಹಾರವನ್ನು ಉಡುಗೊರೆಯಾಗಿ ಕಳಿಸುತ್ತಿದೆಯೇನೋ ಎಂದು ಹೇಳುವ ಪ್ರಯತ್ನ.

    • ಪದ್ಯದ ಭಾವ-ಬಂಧ-ಕಲ್ಪನೆ ಹಾಗೂ ಭಾಷೆಗಳೆಲ್ಲ ಸೊಗಸಾಗಿವೆ. ಆದರೆ ಪೋಣಿತ ಎನ್ನುವುದು ಕನ್ನಡಪದಕ್ಕೆ ಸಂಸ್ಕೃತಪ್ರತ್ಯಯವನ್ನು ಸೇರಿಸುವ ಹವಣಾಗಿದೆ. ಇದು ವ್ಯಾಕರಣಸಮ್ಮತವಲ್ಲ:-) ಹೀಗಾಗಿ ಸೂತ್ರಿತ ಎಂದು ಸವರಿಸಬಹುದು.

      • ಧನ್ಯವಾದಗಳು ಗಣೇಶರೆ, “ಜಗಜಗಿಪೀ ಚಂದ್ರರತ್ನಪೋಣಿತಹಾರಂ” ವನ್ನು ಜಗಜಗಿಪೀ “ಚಂದ್ರರತ್ನಸೂತ್ರಿತಹಾರಂ” ಎಂಬುದಾಗಿ ಬದಲಿಸಿದ್ದೇನೆ.

  5. ಚಂದಿರನುಕ್ಕಿಸಲಕ್ಕುಮೆ ಕಡಲ
    ನ್ನಂಬುಧಿ ಹೋಹುದೆ ತಾ ಮೋಸಂ|
    ಗಂಡಸರೀರ್ವರು ಮೌನದಿನೀಕ್ಷಿಪ
    ರ್ಭಂಡರ ಕವಿತಾತಿಕ್ರಮಮಂ||

  6. ಆದಿಪ್ರಾಸ ಪಾಲಿಸಿರಲಿಲ್ಲ. ಈಗ ಒಂದು ರೀತಿಯಾಗಿ ಸವರಿದ್ದೇನೆ. ಇನ್ನೂ ಹುರಿಮಾಡುತ್ತೇನೆ.

    ಚಂದಿರನುಕ್ಕಿಸಲಕ್ಕುಮೆ ಕಡಲಂ
    ಸಿಂಧುವು ಹೋಹುದೆ ತಾ ಮೋಸಂ|
    ಗಂಡಸರೀರ್ವರು ಮೌನದಿನೀಕ್ಷಿಪ
    ರ್ಭಂಡರ ಕವಿತಾತಿಕ್ರಮಮಂ||

    • ದ ಮತ್ತು ಡ ಪ್ರಾಸಕ್ಕೆ ಹೊಂದುವುದೆ? ಳ, ಲ ಗಳ ಸಮನ್ವಯದಂತೆ ದಡಗಳಿಗೂ‌ ಮಾಡಬಹುದೆ?

      • ದಡಗಳಿಗೂ ಮಾಡಬಹುದೆ ಎಂದು ಕೇಳಿರುವಿರಿ. ದಡಕ್ಕೆ ಬೀಳೋಣ ಎಂದು ಹಾಗೆ ಮಾಡಿರುವೆ. ಮಾಡಬಾರದು ನಿಜ. ಆದರೆ ನನ್ನಂಥವನಿಗೆ ವಿನಾಯಿತಿ ಇದೆ.

  7. ಸಿಂಧುವನ್ನು ನಪುಂಸಕ ಮಾಡಿಬಿಟ್ಟಿದ್ದೆ.

    ಚಂದಿರನುಕ್ಕಿಪಲಕ್ಕುಮೆ ಕಡಲಂ
    ಸಿಂಧುವು ಹೋಹನೆ ತಾ ಮೋಸಂ|
    ಗಂಡಸರೀರ್ವರು ಮೌನದಿನೀಕ್ಷಿಪ
    ರ್ಭಂಡರ ಕವಿತಾತಿಕ್ರಮಮಂ||

    • ಚಂದಿರನುಕ್ಕಿಪಲಕ್ಕುಮೆ ಕಡಲಂ
      ಸಿಂಧುವು ಗೊಳ್ವನೆ ತಾ ಮೋಹಂ|
      ಗಂಡಸರೀರ್ವರು, ಮೌನದಿನೀಕ್ಷಿಪ
      ರ್ಭಂಡರ ಕವಿತಾತಿಕ್ರಮಮಂ||

      • ಪದ್ಯ ಚೆನ್ನಾಗಿದೆ. ಪ್ರಾಸವಿಲ್ಲಿ ಎರಡೆರಡು ಸಾಲುಗಳಿಗೆ ಒಂದರಂತೆ ಬಂದಿದೆಯೆಂದು ಭಾವಿಸಬಹುದು. ಇದೇನೂ ದೊಡ್ಡ ತೊಡಕಲ್ಲ. ಸಿಂಧುವು ನಪುಂಸಕಲಿಂಗದಲ್ಲಿರುವುದೇ ಕನ್ನಡದ ಸಾಮಾನ್ಯ ಬಳಕೆ.

  8. ಮಾಸದ ಜನಮನ್ನಣೆಯಂ
    ಸಾಸಿರ ಕವಿಕಾವ್ಯವರ್ಣನೆಗಳಂ ಕೇಳ್ದುಂ
    ಲೇಸಿಗ ಕಲಾನಿಧಿಸುತಂ
    ಹಾಸದಿ ಬಂದಂ ಮಹಾಬ್ಧಿಗಾನನಿಮಿತ್ತಂ

  9. ಪ್ರಸದ್ ಅವರ ಪದ್ಯದ ಚತುರ್ಮಾತ್ರಾಗತಿಯ ಬಿಗಿಯಲ್ಲಿ ಅರ್ಥ ಹೀಗಿದೆಯೇ? ಸಮದ್ರ-ಚಂದ್ರ ಪುರುಷರು – ಸಂಬಂಧ ಕಲ್ಪಿಸಿರುವ ಈ ಭಂಡಕವಿಗಳ ಅತಿಕ್ರಮವನ್ನು ಅವರು ನೋಡು ತ್ತಿದ್ದಾರೆಯೇ…ಹೀಗದ್ದಲ್ಲಿ ಅದು ವರ್ಣನೆಗೆ ಹೊಸಭಾವವೇ. ರವೀಂದ್ರರ ಕವಿತಾಭಾವವೂ ರಮ್ಯ… ಮಹಾಬ್ಧಿಗಾನನಿಮಿತ್ತಂ …ಪದ ಪ್ರಯೋಗ ಗಮನಾರ್ಹ.

  10. ಚಂದ್ರಮೌಳಿಯವರೆ, ಸರಿಯಾಗಿ ಗ್ರಹಿಸಿರುವಿರಿ.

  11. ಬೆಂಗದಿರನುಗ್ರರೂಪಂ
    ಕಂಗೆಡಿಸಿ ಬೆಮರಿಳಿಸುತ್ತಿರಲ್ ಸಾಗರನಂ |
    ತಿಂಗಳುಗಳೆದಾಗಮಿಸಿಪ
    ತಂಗದಿರನ ತಂಗದಿರ್ ಹಿತವೆನಿಪುದಲ್ತೇ ?

    • ಚಂಡಕಿರಣನ ಬೇಗೆಗೆ ತತ್ತರಿಸಿದ ಸಾಗರ, ಹಿಮಾಂಶುವಿನ ಶೀತಕಿರಣಗಳಿಗೆ ಪುಲಕಗೊಳ್ಳುವ, ಕಾಂಚನರ ಚಿತ್ರಣ ಮುದಾವಹ. ಕಂದದ ಛಂದ ಚೆನ್ನಿದೆ. ತಂಗದಿರನ ತಂಗದಿರ್ ಹಿತವೆನಿಪುದಲ್ತೇ .. ಇಲ್ಲಿನ ನಡಿಗೆ, ಲಯ ಎರಡನೆಯಸಾಲಿಲ್ಲೂ ತಂದರೆ ಚೆನ್ನ.

      • ಧನ್ಯವಾದಗಳು. ಎರಡನೆ ಸಾಲನ್ನು ಇನ್ನು ಸುಲಲಿತವಾಗಿ ಮಾಡುವ ಪ್ರಯತ್ನ ಮಾಡುವೆ.

  12. ಹತ್ತಾರು ಕೋಟಿಯೋಜನೆದೂರವಿದ್ದುತ-
    ನ್ನತ್ತ ಶರಧಿಯ ಸೆಳೆಯೆ ಹುಣ್ಣಿಮೆಯೊಳು
    ಗೊತ್ತಿದ್ದರೂ ಭೌತಶಾಸ್ತ್ರ ಮನಕಚ್ಚರಿಯ-
    ದೆತ್ತಣಿಂದೆತ್ತ ಸಂಭಂದವಯ್ಯ?

  13. ಬಾನೆತ್ತರಕೆ ಬೆಳೆದೊಡಂ
    ಕ್ಷೀಣಂ ಗೊಂಡಿತೆ ಸಮುದ್ರ ಸಖನೊಳ್ ಪ್ರೀತೀ |
    ತಾನಿಟ್ಟೆದೆಯೊಳಗವನಂ
    ಪೂರ್ಣೇಂದು ಮೆರೆದಿಪನಲ್ತೆ ಮೈತ್ರಿಯ ಪರಿಯಂ ||

  14. ಕಾಂಚನ ಅವರ ಕಲ್ಪನೆಗಳು ನವೀನರೀತಿಯಲ್ಲಿ ಬರುತ್ತಿದ್ದು, ಅವರು ಷಟ್ಪದಿ – ಕಂದರಚನೆಗಳನ್ನು ಕಲಿಯುತ್ತ ಸಾಂದ್ರವಾದ ಪದ್ಯರಚೆನೆಯತ್ತ ಬರುತ್ತಿರುವ ವೇಗ ಆಶ್ಚರ್ಯಕರ…

    • ಕಾಂಚನ ಅವರೇ

      ಕ್ಷೀಣಂ ಗೊಂಡಿತೆ ಸಮುದ್ರ ಸಖನೊಳ್ ಪ್ರೀತೀ | ಸರಿಯಾಗಿಯೇ ಇದೆ. ಕ್ಷೀಣಂ ಗೊಂಡೀತೇ ಪ್ರೀತಿ ..ಎಂಬ ಧ್ವನಿ ತಂದರೆ ಹೇಗೆ ಅನ್ನಿಸಿತು…. ಕ್ಷೀಣಂ ಗೊಂಡೀತೆ ಕಡಲ ಸಖನೊಳ್ ನಲವೇಂ

      • ಕಾಂಚನರ ರಚನೆಗಳ ಬಗೆಗೆ ಚಂದ್ರಮೌಳಿಯವರು ಹೇಳಿದ್ದು ನಿಜ. ಅವರ ಪ್ರಗತಿ ಎದ್ದುತೋರುವಂತಿದೆ. ಕಲ್ಪನೆಗಳಂತೂ ತುಂಬ ಸ್ವೋಪಜ್ಞ. ಸದ್ಯದ ಪದ್ಯಕ್ಕೆ ಮೌಳಿಯವರ ಸವರಣೆ ಸೊಗಸಾಗಿದೆ. ಪ್ರೀತೀ ಅಥವಾ ನಲವೇ ಎನ್ನುವುದಕ್ಕೆ ಬದಲಾಗಿ ಪ್ರೇಮಂ ಎಂದರೆ ಮತ್ತೂ ಸರಿಯಾದೀತೇನೋ ನೋಡಿರಿ.

        • ಚಂದ್ರಮೌಳಿ ಹಾಗೂ ಗಣೇಶರ ಪ್ರೊತ್ಸಾಹ, ಮಾರ್ಗದರ್ಶನಕ್ಕೆ ಧನ್ಯವಾದಗಳು. ತಿದ್ದಿದ ಪದ್ಯ ::
          ಬಾನೆತ್ತರಕೆ ಬೆಳೆದೊಡಂ
          ಕ್ಷೀಣಂ ಗೊಂಡೀತೆ ಕಡಲ ಸಖನೊಳ್ ಪ್ರೇಮಂ |
          ತಾನಿಟ್ಟೆದೆಯೊಳಗವನಂ
          ಪೂರ್ಣೇಂದು ಮೆರೆದಿಪನಲ್ತೆ ಮೈತ್ರಿಯ ಪರಿಯಂ ||

  15. ಅಲೆಗಳಿಂ ನೊರೆಯೊಡೆದು ಬಿಳುಪ ಸೂಸುವನೊಬ್ಬ
    ಕಲೆಗಳಂ ಪಡೆದು ಬೆಳಕೀವನೊಬ್ಬ
    ಮಿಲಿಪರಿವರೀರ್ವರು ವಿಧಿಯರಂಗ ಮಂಚದೊಳು
    ಚೆಲುವಿನಾಟವ ಕಾಣ್ವ ಸೃಷ್ಟಿಕರ್ತ

    • ಪದ್ಯ ಸೊಗಸಾಗಿದೆ. ಕಾಂಬ ಎಂದು ಸವರಿಸಿದರೆ ಮತ್ತೂ ಸೊಗಸಾದೀತು.

  16. ಎಷ್ಟೆಲ್ಲ ಗೆಳೆಯರು ಕಡಲು-ತಿಂಗಳುಗಳ ಬಗೆಗೆ ಸೊಗಸಾಗಿ ಕವನಿಸಿದ್ದೀರಿ. ಧನ್ಯವಾದಗಳು. ನಾನು ಇದೀಗ ತಡವಾಗಿಯಾದರೂ ಕವನಿಸುವೆ. ಆದರೆ ಕವಿಮಿತ್ರ ಮಂಜುನಾಥರ ಪದ್ಯವನ್ನು ಕಾಣದೆ ನನಗೆ ತೃಪ್ತಿಯಿಲ್ಲ. ಅವರು ಬೇಗ ಕವನಿಸಲೆಂದು ಆಶಿಸುವೆ.

    ಅಲೆಗಯ್ಗಳಿಂದೆ ಪೆರೆಚೆಂಡನಾಡಿಸಲ್
    ಜಲರಾಶಿ ಪೂರ್ಣಿಮೆಯೊಳಿಂತು ನೋಂತುದೇಂ?
    ನೆಲದಬ್ಬೆ ತಾರೆಗಳ ಚುಕ್ಕಿಯಿಕ್ಕುತುಂ
    ಗೆಲಮಂ ಗಣಿಪ್ಪ ಬಿನದಕ್ಕೆ ಸಂದಳೇಂ?

    ಸಾಗರದ ಅಲೆಗಳ ಕರಗಳು ಚಂದ್ರನೆಂಬ ಚೆಂಡನ್ನಾಡಿಸುವಾಗ ಭೂದೇವಿಯು ತಾರೆಗಳೆಂಬ ಚುಕ್ಕೆಗಳ score ಲೆಕ್ಕಿಸುತ್ತಿದ್ದಾಳೆಯೇ ಎನ್ನುವ ರೂಪಕಾತಿಶಯೋಕ್ತಿ-ಸಸಂದೇಹ-ಉತ್ಪ್ರೇಕ್ಷೆಗಳಿಲ್ಲಿವೆ. ಇದು ಮಂಜುಭಾಷಿಣಿ ಎನ್ನುವ ಹದಿಮೂರು ಅಕ್ಷರಗಳ ಸುಕರವೂ ಸುಂದರವೂ ಆದ ವರ್ಣವೃತ್ತ. ಇಲ್ಲಿ ಯತಿಯ ತೊಡಕೇ ಇಲ್ಲ. ಇದರ ಗುರು-ಲಘುವಿನ್ಯಾಸ ಹೀಗಿದೆ:
    UU – U – UUU -U -U –

    ಮೂಲತಃ ಚಂದ್ರಮೌಳಿಯವರು ಕೊಟ್ಟ ವೃತ್ತದ ಗತಿಯನ್ನೇ ಇದೂ ಹೋಲುತ್ತದೆ. ಇದರ ಮೊದಲ ಎರಡು ಲಘುಗಳನ್ನು ಕಳಚಿದರೆ ರಥೋದ್ಧತಾ ವೃತ್ತ ಸಿದ್ಧವಾಗುತ್ತದೆ. ಈ ಎಲ್ಲ ವೃತ್ತಗಳ ಗತಿಯು ಸಂತುಲಿತಮಧ್ಯಾವರ್ತವಾಗಿದೆ. ಅಂದರೆ ೩+೫ ಅಥವಾ ೫+೩ ಮಾತ್ರಾಗತಿಗಳಿಗೆ ಬರುತ್ತವೆ.

    • ಗಣೇಶರೇ ಅನೇಕ ಅಧಿಭೌತಿಕ ತಾಪಗಳ ಗದ್ದಲದಲ್ಲಿ ನನ್ನ ತಲೆಯಿಂದ ಕಾವ್ಯಪಕ್ಷಿ ಹಾರಿಹೋಗಿತ್ತು ಕೆಲ ದಿನ 🙂

      ಬಹಳ ತಡವಾಗಿ ನನ್ನ ಕೆಲವು ಕವನಗಳು ಇಲ್ಲಿವೆ:

      *ಮಂಜುಭಾಷಿಣಿ*
      ಕರಿ ತಾನು ಕನ್ನಡಿಯೊಳೊಗ್ಗಿ ಕೂರ್ವವೋಲ್
      ಬಿರುಬೆಟ್ಟ ಕಂಗಳೊಳವೊಕ್ಕು ನಿಲ್ವವೋಲ್
      ಹಿರಿನೀರ ರಾಶಿ ನೆರೆದೊಟ್ಟಿ ನಿಂದುದಾ
      ವರ ಚಂದ್ರ ದರ್ಪಣದ ದುಂಡುಗಟ್ಟಿನೊಳ್

      ಕಡೆಯಲ್ ಮೊಸರ್, ಬಹುದು ಬೆಣ್ಣೆಮುದ್ದೆಯೆಂ
      ದೊಡಿದೇಂ ಕಡಲ್ ಕಡೆಯೆ ತೇಲಿ ಬಂದಿತೈ
      ಕಡುಚೆಲ್ವಿನಿಂ ಬೆಳಕ ಚೆಲ್ಲುತೈತರಲ್
      ಕಡಲಾಯ್ತು ಪಾಲ್ಗಡಲಿದೇ ದಿಟಂ ದಿಟಂ

      *ಮಂಜುಭಾಷಿಣಿಗೊಂದು ಕಂದ :)*
      ಕಡಲೋ ಪಾಲ್ಗಡಲೋ ಗಡ
      ಗಡ ಕಡೆದವರಾರುಪೇಳಿದೀ ಕಡುಗಡಲಂ
      ಕಡುಗತ್ತಲನೀರ್ಗಡೆಯಲ್
      ಸುಡುವಿಷಮಲ್ಲದೆ ಸುಧಾಂಶು ದೊರೆವುದೆ ಚೋದ್ಯಂ

      *ಪ್ರಮಿತಾಕ್ಷರ*
      ಕಡಲಿಂದೆ ಪುಟ್ಟುತಿರುಳಂ ಬೆಳಗಲ್,
      ಸುಡುವೀ ಜಗಕ್ಕೆ ನೆರೆ ತಂಪೆರೆವನ್
      ಕಡು ಚೆಲ್ವಗಾ ವಿರಹಿಯಂ ಪೊರೆಯಲ್
      ಕೆಡುಕಿಂತಿದೇತಕರಿಯೆಂ ಸುಡುವನ್

      • ಸೊದೆಗೆನುತೆ ಸುರರ್ಕಳ್ ಮಂಥಿಸಲ್ ವಾರ್ಧಿಯಂ ಮು-
        ಮ್ಮೊದಲೊಳೊದವಿತಲ್ತೇ ದುರ್ಭರಂ ಹಾಲಹಾಲಂ|
        ಮುದಮೆಸೆಯೆ ಗಡಿಂದೀ ಮಂಜುನಾಥಂ ಬರಲ್ಕೀ
        ಬದಿಗೆ ಕವನಪೀಯೂಷಂ ದಲುಕ್ಕುತ್ತುಮಿರ್ಕುಂ||

        ಮಾಲಿನೀವೃತ್ತದಲ್ಲಿ (UUUUUU – – * – U – – U – – ಎನ್ನುವುದು ಮಾಲಿನೀಛಂದಸ್ಸಿನ ವಿನ್ಯಾಸ. ಇದು ಸಮವೃತ್ತ. ಎಂಟನೆಯ ಅಕ್ಷರದ ಬಳಿಕ ಯತಿಸ್ಥಾನ. ಇ ದನ್ನು * ಗುರುತಿನಿಂದ ಸೂಚಿಸಲಾಗಿದೆ. ಆದರೆ ಕನ್ನಡದ ಮಟ್ಟಿಗೆ ಯತಿವಿಲಂಘನದ ಸೌಕರ್ಯವಿದೆ. ಈ ಸವಲತ್ತನ್ನು ಇಲ್ಲಿ ಸೋದ್ದಿಷ್ಟವಾಗಿಯೇ ಬಳಸಿಕೊಂಡಿದ್ದೇನೆ:-) ಮಂಜುನಾಥರ ರಮಣೀಯಪದ್ಯಗಳಿಗೆ ಮೆಚ್ಚುಗಾಣಿಕೆಯಿತ್ತಿದ್ದೇನೆ. ಇಲಿ ಬದಿಗೆ ಎನ್ನುವ ಪದಕ್ಕೆ ನಮ್ಮೀ ಜಾಲಸ್ಥಾನದ ಬದಿಗೆ ಎನ್ನುವ ಲಕ್ಷ್ಯಾರ್ಥವಿದೆ:-) ತಡವಾದರೂ ಭಾಷಾ-ಬಂಧಗಳ ದೃಷ್ಟಿಯಿಂದ ತುಂಬ ಸೊಗಸಾದ ಪದ್ಯಗಳನ್ನು
        ನೀಡಿರುವ ಮಂಜುನಾಥರಿಗೆ ಮತ್ತೆ ವಂದನೆಗಳು.

  17. ರಥೋಧ್ಧತಕ್ಕೆ ಎರಡು ಚಕ್ರ(ಲಘು)ಗಳನ್ನು ಸೇರಿಸಿ, ಕಡಲುಡುಪರ ಚೆಂಡಾಟ ವಾಡಿಸಿ, ನಮಗೆ ವಿಸ್ಮಯದ ಚುಕ್ಕೆಗಳನ್ನು ತೋರಿಸುವ ಕಾವ್ಯಕ್ರೀಡೆ ಮಂಜುಭಾಷಣವೇಸರಿ.

  18. ಭವನ ಶಿಖಾಭವನಿಕೆಯಂ
    ಶಿವತಾಂಡವತೋಲಬವಣೆಯಂ ತಾನ್ ಮರೆತುಂ
    ತವಕಾತುರದೊಳ್ ತವರೊಳ್
    ಭವಿಸಿದನೀಕಂದನಿಂ ಜಲಧಿಗಾನಂದಂ
    [ಭವ = ಶಿವ, ಭವನಿಕೆ = ಅರಮನೆ ಭವಿಸು = ಹುಟ್ಟು]

    • ಶಿವನ ಶಿಖಾಸ್ಥಾನವನ್ನೂ, ಶಿವ ತಾಂಡವ ನೃತ್ಯದ ಸಮಯದಲ್ಲಿ ಆದ imbalance ನ ಬವಣೆಯನ್ನೂ ಮರೆತು, ಸಡಗರದಿಂದ ತವರಿನಲ್ಲಿ ಮರುಹುಟ್ಟು ಪಡೆಯುತ್ತಿದ್ದಾನೆ ಎಂದು ಹೇಳುವ ಪ್ರಯತ್ನ.

      • ಹೊಳ್ಳರೆ, ಪದ್ಯದ ಭಾವ ಸೊಗಸಾಗಿದೆ. ನಿಮ್ಮ ಸ್ವೋಪಜ್ಞತೆಗಿದು ಎಂದಿನಂತೆ ನಿದರ್ಶನವೂ ಆಗಿದೆ. ಆದರೆ ’ತೋಲಬವಣೆ’ ಎನುಉವಲ್ಲಿ ಅರಿಸಮಾಸವಾಗಿದೆ. ತೋಲವು ಸಂಸ್ಕೃತಪದ, ಬವಣೆ ಕನ್ನಡದ ಪದ. ಹೀಗೆಯೇ ’ತವಕಾತುರ’ ಪದದಲ್ಲಿ ಕೂಡ ಅರಿಸಂಧಿಯಾಗಿದೆ. ತವಕ ಕನ್ನಡವಾದರೆ ಕಾತರ ಸಂಸ್ಕೃತ. ಮತ್ತಿವೆರಡು ಪದಗಳಿಗೂ ಒಂದೇ ಅರ್ಥ! ಆದುದರಿಂದ ಇಲ್ಲಿ ಪುನರುಕ್ತಿದೋಷವೂ ಇದೆ:-) ನೀವು ಬೇಗ, ಚೆನ್ನಾಗಿ ಸರಿಪಡಿಸಿಕೊಳ್ಳಬಲ್ಲಿರೆಂಬ ವಿಶ್ವಾಸ ನನಗುಂಟು.

        • ಗೆಳೆಯ ಗಣೇಶರೆ, ಮಾಡಿದ್ದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೂ ತಿದ್ದುವ ನಿಮ್ಮ ತಾಳ್ಮೆಗೆ ನಾನು ಚಿರಋಣಿ.
          “ಶಿವತಾಂಡವತೋಲದಾಬವಣೆಯಂ ಮರೆತುಂ” ಎಂಬುದಾಗಿ ಬದಲಿಸಬಹುದು. ಮೂರನೆಯ ಪಾದಕ್ಕೆ ಸ್ವಲ್ಪ ಯೋಚಿಸಬೇಕಾಗಿದೆ.

      • ಬದಲಿಸಿದ ಪದ್ಯ:

        ಭವನ ಶಿಖಾಭವನಿಕೆಯಂ
        ಶಿವತಾಂಡವತೋಲದಾಬವಣೆಯಂ ಮರೆತುಂ
        ತವಕದೊಳಿಂದೀ ತವರೊಳ್
        ಭವಿಸಿದನೀಕಂದನಿಂ ಜಲಧಿಗಾನಂದಂ

  19. ಜಲಧಿ ಯಾಳದೊಳು ಮಿಗಿಲಿನೈಶ್ವರ್ಯ
    ಮೆಲ್ಲ ವನುಕಾಣ್ವ ಬಯಕೆ ಸಗರನಿಗಿ
    ರಲವ ನಿಗಿನಿಗಿಪ ಸೂರ್ಯ ಗಿಂ ತಂಪಿ
    ನೆಲ್ಲಿ ಡಿಯಂತಹ ಶಶಿಯೆ ಸರಿಯೆಂದ

    ತಂಪಿನೆಲ್ಲಿಡಿ – ತಂಪಿನ LED

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)