Jan 222012
 

ಚಕ್ರ, ಶಂಖ, ಶೂಲ, ಡಮರು ಪದಗಳನ್ನು ಬಳಸಿ ಪಂಚಮಾತ್ರಾಚೌಪದಿಯಲ್ಲಿ  ಸೂರ್ಯನ ಸ್ತುತಿಯ ಪದ್ಯಗಳನ್ನು ಬರೆಯಿರಿ

 

  35 Responses to “ಪದ್ಯ ಸಪ್ತಾಹ – ೪ – ೨೦೧೨ ::‌ ದತ್ತ ಪದಿ”

  1. ಹೇ! ಚಕ್ರವಾಕಯುಗಲಪ್ರಣಯಾನುಕೂಲ!
    ಪ್ರಾಚೀಪ್ರಿಯಾತ್ಮ! ಅನಿಶಂ ಖರಕಾಂತಿಕಾಂತಾ-
    ಸಾಚಿವ್ಯ! ನಕ್ತಪರಶೂ! ಲಸದಂಬುಜಾತ-
    ಪ್ರಾಚುರ್ಯ! ಚಂಡಮರುದಗ್ರಣಿ! ಭಾನು! ಕಾಯಯ್!!

    ರವಿಯೆ! ನೀನೇಕಚಕ್ರದ ರಥವನೇರಿಯುಂ
    ಕವಿದ ನಿದ್ರಾತಮಕೆ ಶಂಖನಾದಂ|
    ಜವನ ರುಜೆಗಳ ಶೂಲದಿಂ ನವೆವರೊಳ್ ವೈದ್ಯ-
    ಶಿವನೆ ನೀಂ! ದಿವಸಸೂತ್ರಕೆ ದಮರುಕಂ||

    ಮುಂಬೆಳಗಿನ ವರ್ಣನೆಗೆ ಸಲ್ಲುವ ವಸಂತತಿಲಕದಲ್ಲೊಂದು ತುಸು ಪೆದಸಾದ ಶೈಲಿಯ ಪದ್ಯ ಮತ್ತು ಸುಲಭಶೈಲಿಯ ಚೌಪದಿಯಲ್ಲಿನ್ನೊಂದು ಪದ್ಯ. ಎರಡನೆಯ ಪದ್ಯದಲ್ಲಿ ರೂಪಕಾಲಂಕಾರಗಳ ಮಾಲೆಯಿದೆ. ವಿಶೇಷತಃ ಸೂರ್ಯನು ರೋಗ(ಶೂಲ)ಗಳನ್ನು ನಿವಾರಿಸುವ ವೈದ್ಯೇಶ್ವರ ಹಾಗೂ ದಿವಸವೆನ್ನುವ (ಮಾಹೇಶ್ವರ)ಸೂತ್ರಕ್ಕೆ ದಮರುಗದ ನಾದವೆನ್ನುವ ಕಲ್ಪನೆ ಗಮನೀಯ.

  2. ತುಂಬ ಪಡಪೋಶಿ ಕಲ್ಪನೆ:
    ನಿಚ್ಚ ಕ್ರಮದಿನೆ ಬಿಡದೆ ನಡೆವಾ ಸೂರ್ಯ ನೀ
    ನೆಚ್ಚರದಿನಿರ್ದನಿಶಂ ಖಗವ ಕಾವೆ?
    ಬೆಚ್ಚಗಿರಿಸೆಲ್ಲರನುದರಶೂಲವ ಕಳೆಯು
    ತ್ತೆಚ್ಚರಿಪ ಡಮರು ನೀ ನಿಚ್ಚ ಪಗಲು||
    ಉದರಶೂಲವ ಕಳೆವೆ = ಬೆಳೆ ಬೆಳೆಯಲು ನೆರವಾಗಿ ಹಸಿವ ಹಿಂಗಿಸುವೆ

    • ಎರಡನೆಯ ಪಾದದಲ್ಲಿ ’?’ ತೆಗೆಯಬೇಕು.

    • ಪ್ರಯತ್ನ ನಿಜಕ್ಕೂ ಸ್ತುತ್ಯ. ಆದರೆ ಛಂದಸ್ಸಿನ ಗತಿ ಬಹುತ್ರ ಕುಂಠಿಸಿದೆ…ದಯಮಾಡಿ ಸವರಿಸಿರಿ.

  3. ಅಂತಹ ಕವಿತೆಯ ಗುಣವಿಲ್ಲದಿದ್ದರೂ, ಕೊಟ್ಟಪದಗಳ ಅಳವಡಿಕೆ (ಹೇಗೋ) ಆಯಿತೆಂದು ಹಾಕುತ್ತಿದ್ದೇನೆ – ಇದು ಸೂರ್ಯನ ಸ್ತುತಿಯಲ್ಲ, ಬದಲಿಗೆ ಸ್ತುತಿ ಮಾಡದಿರಲೊಂದು ನೆಪ!

    ವರುಷ ಚಕ್ರದ ಹಾಗೆ ಉರುಳದೇ ಹೋದೀತೆ?
    ಸರಿಯದೇ ನಿಲ್ಲುವನೆ ಶಂಖವಾದ್ಯದಲಿ
    ಸುರಿಸಿದರು ಹೊಗಳಿಕೆಯ ಹೊನ್ನ ಶೂಲವದೆಂಬು-
    -ದರಿತು ಸಿಲುಕಲು ರವಿಗೆ ಕೂಡ ಮರುಳೆ?

    • ಹಂಸಾನಂದಿಯವರೆ,
      ನಿಮ್ಮ ಕಲ್ಪನೆ ತುಂಬಾ ಹಿಡಿಸಿತು. ಸೂರ್ಯ ತಾನ್ ಹೊಗಳಿಕೆಗೆ ಬಾಗುವುದಿಲ್ಲವೆನ್ನುವುದೂ ಆತನ ಹೊಗಳಿಕೆಯೇ ತಾನೆ?

    • ಪ್ರಿಯ ಹಂಸಾನಂದಿಯವರೆ, ನಿಮ್ಮೀ ರಚನೆಯ ಬಗೆಗೆ ನಿಮಗೆ ಸ್ವಲ್ಪವೂ ಕೀಳರಿಮೆ ಬೇಡ…ಇದು ದಿಟವಾಗಿ ಸೊಗಸಾದ ರಚನೆ. ಇಲ್ಲಿ ಶಬ್ದಾರ್ಥಗಳ ಸುಂದರಸಮಾಹಾರವಿದೆ.

  4. ಮರೆಯಾದಯ್ ಹರಿ ಚಕ್ರದಿಂ, ಮಡಿಯೆ ದುಷ್ಟಂ ಸೈಂಧವ೦ ಪಾರ್ಥನಿಂ
    ಸ್ಥಿರವಾದಕ್ಷಯಪಾತ್ರೆಯುರ್ವಿಗನಿಶಂ ಖದ್ಯೋತ ನೀ, ದಾತನೈ
    ಧುರದೊಳ್ ರಾಮನೆ ಪೂಜಿಸಲ್ ಸ್ತವಗಳಿಂ ಹೃತ್ ಶೂಲ ಲಂಕೇಶಗಂ
    ಗುರುವೈ ಚಂಡ ಮರುತ್ಸುತಂಗೆ ಯುಗಮೆಲ್ಲಕ್ಕುಂ ಮಹಾ ಸಾಕ್ಷಿನೀಂ

    • ತುಂಬ ಚೆಲುವಾದ ಪ್ರೌಢವೂ ಆದ ರಚನೆ. ಇಲ್ಲಿ ದತ್ತಪದಗಳು ಬಲುಮಟ್ಟಿಗೆ ಸ್ಸಭಂಗವಾಗಿ ಬಳಕೆಗೊಂಡಿರುವುದು ಗಮನಾರ್ಹ. ಇದು ಕವಿಯ ರಚನಾಪರಿಪಾಕಕ್ಕೆ ನಿದರ್ಶನ.

  5. ಕೊಟ್ಟಿರುವ ಪದಗಳೆಲ್ಲವೂ ಸಂಸ್ಕೃತ ಪದಗಳಾದ್ದರಿಂದ ಒಂದು ಪ್ರಯತ್ನ. ಸಾಮಾನ್ಯವಾದ ಗೊತ್ತಿರುವ ಪದಗಳನ್ನೇ ಬಳಕೆ ಮಾಡಿದ್ದೇನೆ. ಕಲ್ಪನೆಯೇ ಇಲ್ಲದ ಪದ್ಯ 🙁 , ಎಂದಿನಂತೆ ಛಂದಸ್ಸಿನ ನಿಯಮ ಮೀರಿದ್ದೇನೆ 😛
    वन्दे सूर्यं सुकिरणपतिं कालचक्रं कविं त्वाम्
    संध्याकाले नियतिडमरूद्घोषकारं द्युतीशम्
    भर्गोदेवं ह्यदितितनयं शङ्खपाण्याग्रजं खम्
    छायाभर्ता नलिनसुसखे पातुमां जाड्यशूलात्

    • ರಾಘವೇಂದ್ರರ ಸಂಸ್ಕೃತಪದ್ಯರಚನಾಪ್ರಯತ್ನವು ಸ್ತವನೀಯವೇ ಹೌದು. ಆದರೆ ಸುಸಖ ಮತ್ತು ಸುಕಿರಣ ಎಂಬ ಪದಗಳಿಗೆ ಬದಲಾಗಿ ಬಿಸರುಹಸಖಃ ಮತ್ತು ಕಿರಣಕರುಣಂ ಎಂದು ಸವರಣೆ ಮಾಡಬಹುದು.

      • ನೀವು ಹೇಳಿದಂತೆ ತಿದ್ದುಪಡಿ ಮಾಡಿದ್ದೇನೆ

        वन्दे सूर्यं किरणकरुणं कालचक्रं कविं त्वाम्
        संध्याकाले नियतिडमरूद्घोषकारं द्युतीशम्
        भर्गोदेवं ह्यदितितनयं शङ्खपाण्याग्रजं खम्
        छायाभर्ता बिसरुहसखःपातुमां जाड्यशूलात्

        • ರಾಘವೇಂದ್ರ – ಪದ್ಯ ಬಹಳ ಚೆನ್ನಾಗಿದೆ. ಪದ್ಯಪಾನದಲ್ಲಿ ಸಂಸ್ಕೃತದ ಪದ್ಯ ರಚನೆಯನ್ನು ಹಿಡಿದ ಮೊದಲಿಗರಲ್ಲಿ ನೀವಿದ್ದೀರಿ. ಈ ಕಾರಣಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮೊಡನೆ ಸಂಸ್ಕೃತ ಕವಿಗಳು ಇನ್ನೂ ಕೂಡಿದರೆ ಈ ತಾಣಕ್ಕೆ ಮತ್ತೂ ರಂಗೇರುವುದು.

          • @ಗಣೇಶರೇ
            ನಿಮ್ಮ ಸಹಾಯ ಹಾಗು ಸಹಕಾರಕ್ಕೆ ನನ್ನ ವಂದನೆಗಳು
            @ರಾಮಚಂದ್ರರೇ
            ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಹೇಳಿದಂತೆ ಸಂಸ್ಕೃತದಲ್ಲಿ ಇನ್ನು ಹೆಚ್ಚು ಜನ ಬರೆದರೆ ನನಗೂ ಸ್ವಲ್ಪ ಹುಮ್ಮಸ್ಸು ಹೆಚ್ಚುತ್ತದೆ .ಈ ನಿಮ್ಮ ಆಶಯವೇ ನನ್ನ ಆಸೆಯೂ ಆಗಿದೆ

  6. ಉದಯದೊಳ್ ಚಕ್ರವಾಕದ ತಾನದಿ೦ ಭಜಿಪೆ
    ಹೃದಯವನಿಶ೦ ಖಗನು ಬೆಳೆಗಲೆನ್ದು೦
    ಸದೆಯುವ೦ ಕತ್ತಲೆಯ ಕಿರಣಗಳ ಶೂಲದಿ೦
    ಬದಿಗೊತ್ತಿ ಶೈತ್ಯಪ್ರಚ೦ಡಮರುತ೦

    ಮರುತ೦ = ಮರುತನ೦ ಎನ್ದು ಮಾಡಬಹುದೆ?

    • ಪರವಾಗಿಲ್ಲ, ಮರುತಂ ಎಂಬುದಕ್ಕೆ ನೀವು ಉದ್ದೇಶಿಸಿದ ಅರ್ಥ ಸಾಧ್ಯ. ಇದಕ್ಕೆ ಕಾರಣ ಕನ್ನ್ಡದಲ್ಲಿ ಆಗೀಗ ಬರುವ ವಿಭಕ್ತಿಪಲ್ಲಟಗಳನ್ನು ಒಪ್ಪಿರುವುದೇ ಆಗಿದೆ. ಆದರೆ ಇದು ಕೇವಲ ಆಪದ್ಧರ್ಮವಲ್ಲದೆ ನಿತ್ಯವ್ರತವಲ್ಲ:-)
      ಉಳಿದಂತೆ ಸೋಮರ ಪದ್ಯ ಅನವದ್ಯ, ಹೃದ್ಯ. ಇಲ್ಲಿ ದತ್ತಪದಗಳೆಲ್ಲ ಸೊಗಸಾಗಿ ಅಡಕಗೊಂಡಿರುವುದು ಸ್ಮರಣೀಯ.
      ಪದ್ಯದ ಕಾವ್ಯತ್ವವೂ ಅನುಪಮ.

  7. ಚಕ್ರಿ ಚಕ್ರ ಕಾರಣ ಸೂರ್ಯಗ್ರಹಣ ಸೂರ್ಯಾಸ್ತಮಾನ ಭ್ರಮನಿರ್ಮಾಣಂ
    ಚಕ್ರೋತ್ಪಾಟನಂ ಚಕ್ರಿ ಕೈಚಳಕಂ ವರ್ಧಮಾನ ಸೂರ್ಯ ದರ್ಶನಂ
    ವಿಜಯ ದೇವದತ್ತ ಶಂಖ ಘೋಷಂ ಧನಂಜಯ ಪ್ರಖರ ಶರ ಶೂಲಂ
    ಸೈಂಧವ ಶಿರ ಹರಣಂ ಪಣವಾನಕ ಡಮರು ನಿನಾದ ಜಯ ಘೋಷಂ

    • ಚಕ್ರಿ ಚಕ್ರ ಕಾರಣ ಸೂರ್ಯಗ್ರಹಣ ಸೂರ್ಯಾಸ್ತ ಭ್ರಮನಿರ್ಮಾಣಂ
      ಚಕ್ರೋತ್ಪಾಟನಂ ಚಕ್ರಿ ಕೈಚಳಕಂ ವರ್ಧಮಾನ ಸೂರ್ಯ ದರ್ಶನಂ
      ವಿಜಯ ದೇವದತ್ತ ಶಂಖ ಘೋಷಂ ಧನಂಜಯ ಪ್ರಖರ ಶರ ಶೂಲಂ
      ಸೈಂಧವ ಶಿರ ಹರಣಂ ಪಣವಾನಕ ಡಮರು ನಿನಾದ ಜಯ ಘೋಷಂ

  8. ಚಕ್ರಿ ಚಕ್ರ ಕಾರಣ ಸೂರ್ಯಗ್ರಹಣಂ ಸೂರ್ಯಾಸ್ತ ಭ್ರಮನಿರ್ಮಾಣಂ
    ಚಕ್ರೋತ್ಪಾಟನಂ ಚಕ್ರಿ ಕೈಚಳಕಂ ವರ್ಧಮಾನ ಸೂರ್ಯ ದರ್ಶನಂ
    ವಿಜಯ ದೇವದತ್ತ ಶಂಖ ಘೋಷಂ ಧನಂಜಯ ಪ್ರಖರ ಶರ ಶೂಲಂ
    ಸೈಂಧವ ಶಿರ ಹರಣಂ ಪಣವಾನಕ ಡಮರು ನಿನಾದ ಜಯ ಘೋಷಂ

    • ಜಯಪ್ರಕಾಶರು ಸೈಂಧವವಧಾಪ್ರಸಂಗವನ್ನು (ಈ ಮೊದಲೇ ಒಂದು ಪೂರಣದಲ್ಲಿ ಬಂದಂತೆ) ವಿಸ್ತರಿಸಿ ಒಳ್ಳೆಯ ಪದಗಳ ಜೋಡಣೆಯಿಂದ ದತ್ತಪದಗಳನ್ನು ಯೋಜಿಸಿದ್ದಾರೆ. ಇದು ಮೇಲ್ನೋಟಕ್ಕೆ ಪದ್ಯದಂತೆ ಕಂಡರೂ ಛಂದ-ಬಂಧ ತಿಳಿಯುತ್ತಿಲ್ಲ. ಈಗಾಗಲೇ ಅವಧಾನಿಗಳು ಹಲವುಬಾರಿ ಸೂಚಿಸಿರುವಂತೆ, ಛಂದೋಬದ್ಧವಾದ ಪದ್ಯರಚೆನೆಗೆ ಮೀಸಲಾದ ಈ ಅಂಕಣದಲ್ಲಿ, ಇಲ್ಲಿನ ಪಾಠಗಳನ್ನು ಅಭ್ಯಾಸಮಾಡಿ, ತಮಗೆ ಇಷ್ಟವಾದ ರೀತಿಯ ಬಂಧದಲ್ಲಿ ಪದ್ಯರಚನೆಗೆ ಯತ್ನಿಸಿದರೆ, ಇತರ ಪ್ರಯತ್ನಶೀಲರಿಗೆ ಪ್ರೋತ್ಸಾಹಕವಾಗಿ, ತಮ್ಮ ಉತ್ಸಾಹಕ್ಕೂ ಒಂದು ಸಾರ್ಥಕತೆ ಬಂದೀತೆಂದು ನನ್ನ ನಮ್ರ ಮನವಿ.

  9. ದಿನವೊಂದರಲಿ ಬಾಳಚಕ್ರವಂ ತೋರ್ಪೆಯೈ
    ಕನಕಕಲಶಂ,ಖನಿಯು ನೀ ಜ್ಯೋತಿಯ |
    ಜನಜೀವವುಳಿಸುತಿಹೆ ಕರಶೂಲವಾದೊಡೇಂ
    ಮನಬಾಗುವುದು ಕಂಡ ಮರುಘಳಿಗೆಯೇ ||

    • ತುಂಬ ಸೊಗಸಾದ, ಸರಳವೂ ಆದ ಪದ್ಯ. ದಿಟವಾಗಿ ದತ್ತಪದಿಯನ್ನು ಇಷ್ಟು ಚೆಲುವಾಗಿ ರೂಪಿಸುವುದೇ ಕಷ್ಟ. ನೀವು ಇಂಥ ಕ್ಲಿಷ್ಟಸಾಧನೆಯನ್ನು ಸಲೀಲವಾಗಿ ಮಾಡಿದ್ದೀರಿ. ಧನ್ಯವಾದ.
      ಒಂದು ಸಣ್ಣ ಸವರಣೆ: ಜ್ಯೋತಿಯಾ ಎಂದು ಬದಲಿಸಿದರೆ ಮತ್ತೂ ಒಳಿತು, ಅರ್ಥಸ್ಪಷ್ಟತೆ ಮಿಗಿಲಾಗುತ್ತದೆ.

      • ಧನ್ಯವಾದಗಳು. ಸರಳತೆಯು ನನಗೆ ಅನಿವಾರ್ಯವೂ ಹೌದು 🙂
        ಸರಿಪಡಿಸಿದ ಪದ್ಯ ::
        ದಿನವೊಂದರಲಿ ಬಾಳಚಕ್ರವಂ ತೋರ್ಪೆಯೈ
        ಕನಕಕಲಶಂ,ಖನಿಯು ನೀ ಜ್ಯೋತಿಯಾ |
        ಜನಜೀವವುಳಿಸುತಿಹೆ ಕರಶೂಲವಾದೊಡೇಂ
        ಮನಬಾಗುವುದು ಕಂಡ ಮರುಘಳಿಗೆಯೇ ||

  10. ಹೊಸ ವೃತ್ತಗಳ ಪಾಠ ಹಾಗು ರವೀಂದ್ರರ ಪದ್ಯಗಳಿಂದ ಪ್ರೇರಿತನಾಗಿ, ದತ್ತ ಪದಿಯ ಛಂದಸ್ಸು ಪಂಚಮಾತ್ರಾ ಚೌಪದಿಯಾಗಿದ್ದಾಗ್ಯೂ, ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಬರೆದಿದ್ದೇನೆ ::
    ಶೂಲಚ್ಛಕ್ರಸಮೇತದಸ್ತ್ರಗಳನೀಂ ಕೈಗೊಳ್ಳಬೇಕಿಲ್ಲವೈ
    ಮಾಲಾಪಟ್ಟಶಿರೋವಿಭೂಷಣಗಳುಂ ನಿಂಗಿನ್ನದೇಕೈ ಪ್ರಭೋ |
    ತಾಳಂವೀಣೆಮೃದಂಗಮೋಡಮರುಗಂ ಬೇಕಿಲ್ಲವೈಗೀತಕುಂ
    ಲೀಲಾನಾಟಕಕೆಲ್ಲಭೂಮಿಯೊಳಗುಂ ನೀನಲ್ಲಮೇ ಕಾರಣಂ ||

    • ರಾಮ್, ಅಭಿನಂದನೆಗಳು. ಇದು ಪ್ರಾಯಶಃ ನಿಮ್ಮ ಮೊದಲ ವೃತ್ತರಚನೆಯಿರಬಹುದಲ್ಲವೇ! ಪದ್ಯರಚನೆಗೆ ಒರೆಗಲ್ಲೆಂದೇ ಹೇಳಲಾಗುವ ಶಾದೂಲವಿಕ್ರೀಡಿತದ ಬೇಟೆಯನ್ನೇ ಆಡಿದ್ದೀರಿ, ಒಳ್ಳೆಯದು. ಒಂದೆರಡು ಹಳಗನ್ನಡದ ಸಂಸ್ಕಾರಗಳನ್ನು ಮಾಡಿದರೆ ಇದು ಸರ್ವಾಂಗಸುಂದರವಾಗುಗುತ್ತದೆ. ಇದನ್ನು ಕ್ರಮೇಣ ನೋಡೋಣ. ಭಾವವಂತೂ ಚೆನ್ನಾಗಿದೆ.

      • ಧನ್ಯವಾದಗಳು. ಹೌದು – ಇದೇ ನನ್ನ ಮೊದಲ ವೃತ್ತರಚನೆ 🙂
        “ರತ್ನೈಸ್ಕಲ್ಪಿತಮಾಸನಂ ಹಿಮಜಲೈಃ ಸ್ನಾನಂಚದಿವ್ಯಾಂಬರಂ” ಎಂದು ಪ್ರಾರಂಭವಾಗುವ ಶಿವ ಸ್ತೋತ್ರದ ಪರಿಚವಿದ್ದುದರಿಂದ, ಧಾಟಿ ಮನದಲ್ಲಿ ನಿಂತಿತ್ತು. ಹಾಗಾಗಿ ರಚನೆ ಅಷ್ಟೇನು ಕಷ್ಟವಾಗಲಿಲ್ಲ.

        • ಅದು “ರತ್ನೈಃ ಕಲ್ಪಿತಮಾಸನಂ…” ಎಂದಿರಬೇಕಿತ್ತಲ್ಲವೇ! ಇರಲಿ, ನನ್ನ ನಂಬುಗೆಯನ್ನೇ ನೀವು ಬಲಪಡಿಸಿದಿರಿ; ಧಾಟಿಯು ಮನದಲ್ಲಿ ಗಟ್ಟಿಯಾಗಿದ್ದರೆ ಸಾಮಾನ್ಯವಾಗಿ ವೃತ್ತ-ಕಂದಗಳ ರಚನೆ ಕ್ಲೇಶಾಸ್ಪದವಾಗದು. ನಮ್ಮ ವಿದ್ಯಾಭ್ಯಾಸಕ್ರಮದಲ್ಲಿ ಪದ್ಯಗಳನ್ನು ಆಯಾ ಛಂದಸ್ಸುಗಳಿಗೆ ನಿರ್ದಿಷ್ಟವಾದ ಧಾಟಿಯಲ್ಲಿ (ಅಂದರೆ ಯತಿಸ್ಥಾನವನ್ನರಿತು ನಿಯತಗತಿಗೆ ಅನುಸಾರವಾಗಿ) ಅಧ್ಯಾಪಕರು ಪಠಿಸದಿದ್ದುದುದರಿಂದಲೇ ಸಾಂಪ್ರದಾಯಿಕಚ್ಛಂದಸ್ಸುಗಳ(ಹಾಗೆಂದೇನೂ ಮಿತಿಗೊಳಿಸಬೇಕಿಲ್ಲ; ಎಲ್ಲ ಬಗೆಯ ಪದ್ಯಗಳ) ರಚನಾಸ್ವಾರಸ್ಯಗಳು ಅರಿವಿಗೆ ಬರುತ್ತಿಲ್ಲ.

  11. ನೀಲ ಬಾನಿನ ಚಕ್ರವರ್ತಿಯಾಗಿಹೆ ನೀನು
    ಸಾಲದಾವೇಶಂ ! ಖಳರಿವರಹರು
    ಶೂಲವಾಗಿಹಸಾವಯವ ಕಸಕೆ ಸಾವಾಗಿ
    ಮೇಲೆನೀ ಸುಡಲು ಕೂಡ ಮರುಗುವರೇ?

    ಸೂರ್ಯನಿಗೆ ನಿನ್ನ ಪ್ರಖರತೆಯನ್ನು ಹೆಚ್ಚಿಸಿಕೊಂದು ಪ್ಲಾಸ್ಟಿಕ್ (ಅಸಾವಯವ ಕಸ) ವನ್ನು ಸುಟ್ಟಿ ಹಾಕು ಎಂದು ಹೇಳುವ ಪ್ರಯತ್ನ.
    ಸರ್ವಲಘುಗಳಿವೆ. ಬೇರೆ ದೋಷಗಳನ್ನು ತೋರಿಸಿಕೊಟ್ಟರೆ ತಿದ್ದಲು ಪ್ರಯತ್ನಿಸುತ್ತೇನೆ.
    ಶೂಲವಾಗಿಹ + ಅಸಾವಯವ ಎಂದು ಓದಿಕೊಳ್ಳಬಹುದೇ?

    • ತುಂಬ ಒಳ್ಳೆಯ ಪ್ರಯತ್ನ; ಧನ್ಯವಾದಗಳು. ಅರ್ಥಸ್ಪಷ್ಟತೆಯೂ ಚೆನ್ನಗಿದೆ, ಕಲ್ಪನೆಯೂ ಸೊಗಸಾಗಿದೆ. ಕೇವಲ ಒಂದೆರಡು ಸಣ್ಣ ಸವರಣೆಗಳಷ್ಟೇ ಇವೆ:
      ಮೊದಲ ಮೂರನೆಯ ಹಾಗೂ ಸಾಲುಗಳು ಎಲ್ಲ ರೀತಿಯಿಂದಲೂ ಅನವದ್ಯವಾಗಿವೆ. ಎರಡನೆಯದರಲ್ಲಿ “………ಖಳರ್ಕ(ರ್ಗ)ಳಿವರು” ಎಂದೂ ನಾಲ್ಕನೆಯದರಲ್ಲಿ “……..ಸುಡುತಿರಲ್ ಕೂಡ………” ಎಂದೂ ಸವರಿಸಿಕೊಂಡಲ್ಲಿ ಸರ್ವವೂ ಸಲೆಸೊಗಯಿಸೀತು.

  12. ಸಮಸ್ಯೆಯಲ್ಲಿ ಸೂರ್ಯಸ್ತುತಿಯೆನ್ನಲಾಗಿದೆ. ಇಲ್ಲಿಯ ಹಾಸ್ಯ ಸ್ತುತಿಯ ಗಾಂಭೀರ್ಯವನ್ನು ಮೀರಿದ್ದರೆ ಮನ್ನಿಸಬೇಕು. ಕೊಟ್ಟು ಕಳಕೊಂಡ ಸಾಲಗಾರನೊಬ್ಬ ಸೂರ್ಯದೇವನಿಗೆ ಸಾಲಿಗನನ್ನು ತೋರಿಸುವಂತೆ ಆರ್ತವಾಗಿ ಮೊರೆಯಿಡುವುೂ ಸ್ತುತಿಯೇ ಎಂದು ನನ್ನ ಅನಿಸಿಕೆ 🙂

    ಸಾಲಿಗಂ ಕಾಲೊಳಗೆ ಚಕ್ರವಂ ಪಡೆದನೈ
    ಸಾಲ ಕೊಟ್ಟವಗಾಯ್ತು ಶಂಖವಾದ್ಯಂ
    ಕಾಲು ಚಣದೊಳ್ ಕಂಡ ಮರುಗಳಿಗೆ ಮರೆಗೊಂಡ
    ಶೂಲನಂ ತೋರಿಸೈ ಸೂರ್ಯ ದೇವಾ

    ಶೂಲನಂ = ನನಗೆ ಶೂಲಪ್ರಾಯನಾದ ಈ ಸಾಲಿಗನನ್ನು

    • ಬರೆಯಬೇಕಿರಲು ತೆಂಗಿನ ಬಗೆಗೆ ಶಾಲೆಯೊಳ್
      ಸರಸಪ್ರಬಂಧವನು ಬಾಲಕನದೊರ್ವಂ|
      ಬರಿಯ ಗೋವಿನ ಬಗೆಗೆ ತಾನರಿತುದಂ ರಚಿಸೆ
      ತರುವಿಗದನಾದಿಯೊಳ್ ಕಟ್ಟಿದಂತೆ||
      ಪರಮರಮಣೀಯವಾಗಿದೆ ನಿಮ್ಮ ನಲ್ಗವಿತೆ
      ಮೆರೆದು ನೀಡಿದ ಪದಗಳನ್ನು ಬಳಸಿ|
      ಸರಿ-ಸವಿಗಳಿರುವ ಹದದಿಂದ ಸರಳೋದಾರ-
      ಗರಿಮೆಯಿಂದೆನುವೆ ನಾಂ ಮಂಜುನಾಥ!!

    • ಬರೆಯಬೇಕಿರಲು ತೆಂಗಿನ ಬಗೆಗೆ ಶಾಲೆಯೊಳ್
      ಸರಸಪ್ರಬಂಧವನು ಬಾಲಕನದೊರ್ವಂ|
      ಬರಿಯ ಗೋವಿನ ಬಗೆಗೆ ತಾನರಿತುದಂ ರಚಿಸೆ
      ತರುವಿಗದನಾದಿಯೊಳ್ ಕಟ್ಟಿದಂತೆ||
      ಪರಮರಮಣೀಯವಾಗಿದೆ ನಿಮ್ಮ ನಲ್ಗವಿತೆ
      ಮೆರೆದು ನೀಡಿದ ಪದಗಳನ್ನು ಬಳಸಿ|
      ಸರಿ-ಸವಿಗಳಿರುವ ಹದದಿಂದ ಸರಳೋದಾರ-
      ಗರಿಮೆಯಿಂದೆನುವೆ ನಾಂ ಮಂಜುನಾಥ!!
      (ಸುಮ್ಮನೆ “ಪರಿಹಾಸವಿಜಲ್ಪಿತಂ ಸಖೇ! ಪರಮಾರ್ಥೇನ ನಗೃಹ್ಯತಾಂ ವಚೋ ಮೇ!!)

  13. ಪ್ರಾರ್ಥನೆಯ ಸಮಯದಲಿ ತುಂಟಬಾಲಕನಿವನ
    ವರ್ತನೆಗೆ ಸಿಟ್ಟೆಗೇಳುವ ಮೇಷ್ಟರು
    ಬೆತ್ತದೊಳ್ ನಯವಾಗಿ ತೀಡಿಬಿಡಲಾ ಹುಡುಗ
    ಮತ್ತೆ ಶಿಸ್ತಿನ ಹಾದಿ ಹಿಡಿದ ತೆರದೊಳ್

    ನಾನೀಗ serious ಆಗಿ ಸೂರ್ಯದೇವನನ್ನು ಪ್ರಾರ್ಥಿಸುತ್ತೇನೆ:

    ಹೇ ದಿವಚ್ಚಕ್ರವರ್ತಿಯೆ ಕಳ್ತಲೆಗೆ ಶಂಖ
    ನಾದವಲ್ತಾ ನಿನ್ನಮೋಘತೇಜಂ
    ಈ ದಿನದ ಶೂಲ-ಡಮರುಗಧರನ ಪೂಜೆಯಂ
    ಮೋದದೊಳ್ ಕೈಗೊಂಬೆ ಸುಪ್ರಭಾತಂ

    • ಸರ್ವಂ ಬಲವತಾಂ ಪಥ್ಯಂ ಸರ್ವಂ ಬಲವತಾಂ ಹಿತಮ್!!
      ಮಂಜುನಾಥೀಯಪದ್ಯಾನಿ ಮಂಜು ಗುಂಜಂತಿ ಮಾನಸೇ||

  14. ದತ್ತಪದಿಯಲ್ಲಿ ಹೀಗೊಂದು ಪ್ರಯತ್ನ, ಹೊಸಹಳಗನ್ನಡ ಶಬ್ದಗಳ ಪ್ರಯೋಗವಿದೆಯೆಂದು ಭಾವಿಸುತ್ತೇನೆ:

    ಹಗಲಿರುಳಿನ ಚಕ್ರ ತಿರುವಿ ನಭದೆ ಮಿತ್ರ ನೋಡುವಾ
    ಜಗದ ಆಟ ನಡೆಸುವಲ್ಕೆ ಹೊನ್ನ ಶೂಲ ಹಿರಿಯುವಾ |
    ನಗುವಳುವಿನ ಡಮರು ಬಡಿದು ಸುಖದುಃಖಗಳ ನೀಡುತಾ
    ಖಗಮಿಗಗಳ ಶಂಖ ಹವಳ ಜೀವ ಕೋಟಿ ಸೃಜಿಸುತಾ ||

    ಧನ್ಯವಾದಗಳು

    http://nimmodanevrbhat.blogspot.com,
    vrbhat06@gmail.com

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)