Feb 052012
 

Walk(ವಾಕ್), Run(ರನ್), Jump(ಜ೦ಪ್), Dive(ಡೈವ್) ಈ ಪದಗಳನ್ನು ಉಪಯೋಗಿಸಿ, ಗಜರಾಜನ ವರ್ಣನೆಯನ್ನು ಮತ್ತೇಭವಿಕ್ರೀಡಿತದಲ್ಲಿ ಮಾಡಿ. ಪದಗಳನ್ನು ನಿಜಾರ್ಥದಲ್ಲಿ(ಆ೦ಗ್ಲಭಾಷೆಯಲ್ಲಿ) ಬಳಸುವ೦ತಿಲ್ಲ.

ಮತ್ತೇಭವಿಕ್ರೀಡಿತದ ಪ್ರತಿಸಾಲಿನ ವಿನ್ಯಾಸ – ನನನಾನಾನನನಾನನಾನನನನಾ|ನಾನಾನನಾನಾನನಾ

  28 Responses to “ಪದ್ಯಸಪ್ತಾಹ – ೬ – ೨೦೧೨ – ದತ್ತಪದಿ”

  1. ಸೊಗಮಯ್ ಸೊ೦ಡಿಲು ಹಸ್ತಿಯೊಳ್ ಬಳೆಸುವಾಕಲ್ಪ೦, ಪರೀವಾಹಮೇಂ
    ಮೊಗದಿ೦ ದ೦ತದ ಬೆಳ್ಪು ತಾ೦ ಹರನೊಳ೦ ಚ೦ದ್ರಾ೦ಶಮಂ ಮೀರಿಸಲ್?
    ಲಘುಗಳ್ ಪೆರ್ಚ್ಚಿದ ಜ೦ಪೆತಾಳಗತಿಯೊಳ್ ವೈಯ್ಯಾರದಿ೦ ಬರ್ಪುದಯ್
    ಜಗದೊಳ್ ವಾಸಿಪ ಪ್ರಾಣಿಸ೦ಕುಲಗಳೊಳ್ ನೋಡಯ್ ವಿಶೇಷಾದ್ಭುತ೦!

    ಬಳೆಸುವ + ಆಕಲ್ಪ = ಬಳೆಸುವಾಕಲ್ಪ => usable decoration

    • typo
      pm

      ಸೊಗಸೈ ಸೊ೦ಡಿಲು ದೈತ್ಯಗ೦ ಬಳೆಸುವಾಕಲ್ಪ೦, ಪರೀವಾಹವೇ೦
      ಮೊಗದಿ೦ ದ೦ತದ ಕಾ೦ತಿ ತಾ ಹರನೊಳು೦ ಚ೦ದ್ರಾ೦ಶವ೦ ಕ್ಷೀಣಿಸಲ್?
      ಲಘುಗಳ್ ಹೆಚ್ಚಿದ ಜ೦ಪೆತಾಳಗತಿಯೊಳ್ ವೈಯ್ಯಾರದಿ೦ ತಾ ಬರಲ್
      ಜಗದೊಳ್ ವಾಸಿಪ ಪ್ರಾಣಿಸ೦ಕುಲಗಳೊಳ್ ನೋಡೈ ವಿಷೇಶಾದ್ಭುತ೦!

      ಬಳೆಸುವ + ಆಕಲ್ಪ = ಬಳೆಸುವಾಕಲ್ಪ => usable decoration

      • like like like (100 times)…
        Super SomaNNa 🙂

        • ಧನ್ಯವಾದ ಕಣೋಪ್ಪಾ ಶ್ರೀಷ 🙂

        • ಸಾಂಗತ್ಯದಲ್ಲಿ ಶ್ರೀಶರಿಗೊಂದು ಚಾಟಿ-ಚಟಾಕಿ:-)

          ಅನ್ಯರ ಕವಿತೆಗಳನ್ನುರೆ ಸವಿಯುತೆ
          ಧನ್ಯತೆಯಾಂತೊಡೆ ಭಾವ್ಯಂ|
          ವಿನ್ಯಾಸಮೆಂದೊ ನಿಮ್ಮಯ ಕಾರಯಿತ್ರಿಗೆ?
          ಸಂನ್ಯಾಸವೇನುಪಜೀವ್ಯಂ???

      • one more correction:)

        ಸೊಗಸೈ ಸೊ೦ಡಿಲು ದೈತ್ಯಗ೦ ಬಳೆಸುವಾಕಲ್ಪ೦, ಪರೀವಾಹವೇ೦
        ಮೊಗದಿ೦ ದ೦ತದ ಬೆಳ್ಪು ತಾ ಹರನೊಳು೦ ಚ೦ದ್ರಾ೦ಶವ೦ ಮೀರಿಸಲ್?
        ಲಘುಗಳ್ ಹೆಚ್ಚಿದ ಜ೦ಪೆತಾಳಗತಿಯೊಳ್ ವೈಯ್ಯಾರದಿ೦ ಬರ್ಪುದೈ
        ಜಗದೊಳ್ ವಾಸಿಪ ಪ್ರಾಣಿಸ೦ಕುಲಗಳೊಳ್ ನೋಡೈ ವಿಷೇಶಾದ್ಭುತ೦!

      • ಸೋಮ, ಮೂರನೆಯ ಪಾದ ತುಂಬ ಚೆನ್ನಾಗಿದೆ.

        • ಧನ್ಯವಾದ ಪ್ರಸಾದು:), ನಿಮ್ಮ ಪದ್ಯವ ಸಹ ಚೆನ್ನಾಗಿದ

      • ಸ್ತವನೀಯಂ ಕವನಂ ಗಡಿಂತು ಸಮೆಯಲ್ ಮತ್ತೇಭದೊಳ್ ಸೋಮ! ಕೇಳ್
        ಛವಿಮದ್ದತ್ತಪದಂಗಳಂ ಪುದುಗಿಸಲ್ ಮತ್ತೇಭವಿಕ್ರೀಡಿತಂ|
        ನವತಾರುಣ್ಯಕೆ ಸಂದವೊಲ್ ಸುಮತಿ, ಸಾಲಂಕಾರಝಂಕಾರಿತಂ
        ತವೆ ಶೋಭಾವಹಮಪ್ಪುದಲ್ತೆ ಬಗೆಯಲ್ ಮೇಣ್ ಮತ್ತುಮಂ, ವರ್ಧಿಸಯ್!!
        ಒಂದೆರಡು ಸಣ್ಣ ಸವರಣೆಗಳು:
        ತಾಂ, ಪೆರ್ಚಿದ, ಬರ್ಪುದಯ್, ನೋಡಯ್, ವಿಶೇಷ….ಇವು ಸಾಧುರೂಪಗಳು

        • ಧನ್ಯವಾದ ಸರ್,

          ಸರಿಪಡಿಸಿದ್ದೇನೆ:)

          ಸೊಗಸೈ ಸೊ೦ಡಿಲು ದೈತ್ಯಗ೦ ಬಳೆಸುವಾಕಲ್ಪ೦, ಪರೀವಾಹವೇ೦
          ಮೊಗದಿ೦ ದ೦ತದ ಬೆಳ್ಪು ತಾ೦ ಹರನೊಳು೦ ಚ೦ದ್ರಾ೦ಶವ೦ ಮೀರಿಸಲ್?
          ಲಘುಗಳ್ ಪೆರ್ಚ್ಚಿದ ಜ೦ಪೆತಾಳಗತಿಯೊಳ್ ವೈಯ್ಯಾರದಿ೦ ಬರ್ಪುದಯ್
          ಜಗದೊಳ್ ವಾಸಿಪ ಪ್ರಾಣಿಸ೦ಕುಲಗಳೊಳ್ ನೋಡಯ್ ವಿಶೇಷಾದ್ಭುತ೦!

  2. ಯಮ ನೀನಾದೆ ಗಡಾ ಮದಂ ಮೆರೆದಗಂ| ಚಂದ್ರಂಗೆ ನೀ ವಾಕ್ಪತೇ
    ಶಮನಂ ನೀಡುತೆ ಶಾಪಕಂ ಹರಸಿದೈ| ನೀ ಲೋಗರನ್ ಕಾಯ್ದೆಯೈ
    ಮಮ ಕಾವ್ಯಸ್ಖಲಿತಂ ನಿವಾರಿಸುಗೆ ನೀ| ತೇಜಂ ಪುರಾಣಾನ್ವಿತಂ
    ನಮನಂ ಗೈವೆನು ರಾಜಕುಂಜವದನಾ| ನೀಡೈ ವಚೋವೈಭವಂ

    • ದೋಷಗಳು:
      ೧) ವಾಕ್ಪತೇ = ಬ್ರಹ್ಮ. ಗಣೇಶ ಅಲ್ಲ. ಅಲ್ಲದೆ ಸಂಸ್ಕೃತ (ಸಂಬೋಧನಾ) ಪದ. ಬಳಸುವಂತಿಲ್ಲ.
      ೨) ಮಮ – ಸಂಸ್ಕೃತ ಪದ. ಬಳಸುವಂತಿಲ್ಲ.
      ೩) ಕಾವ್ಯಸ್ಖಲಿತಂ – ಏನೋ ದೋಷವಿದೆ. ಗೊತ್ತಾಗುತ್ತಿಲ್ಲ.
      ೪) ರಾಜಕುಂಜವದನಾ – ’ನಾ’ ಅಷ್ಟು ಸರಿ ಅಲ್ಲ.

      • ನೀಈವೇ ತಪ್ಪುಗಳ ಪಟ್ಟಿ ಮಾಡಿದ ಬಳಿಕ ನಮಗೇನಿದೆ? ಕಾವ್ಯಸ್ಖಲಿತಂ ಎನ್ನುವಲ್ಲಿ ವಿಭಕ್ತಿಯು ದಿವ್ತೀಯವಾಗಬೇಕಿತ್ತು, ಮತ್ತು ಸ್ಖಾಲಿತ್ಯಮಂ ಎಮ್ಡಿದ್ದಲ್ಲಿ ಮತ್ತೂ ಸರಿಯಾಗುತ್ತಿತ್ತು.; ಆಗ ಛಂದಸ್ಸು ಕೆಡುತಿತ್ತೆಂಬುದು ಪ್ರತ್ಯೇಕಸಂಗತಿ:-) ಆದರೆ ಮೊದಲ ಯತ್ನದಲ್ಲಿ ಈ ಪ್ರಮಾಣದ ಸೊಗಸು ಸ್ತವನೀಯವೇ ಸರಿ>

  3. ಪ್ರಸ್ತುದತ್ತಪದಿಗೆ ನನ್ನ ಯಥಾಮತಿ ಪರಿಹಾರ:
    ಕವಿಗಳ್ ತಮ್ಮಯ ವಾಕ್ಕೊಳಿರ್ಕೆ ಬಲಮೋಜಂ ತೇಜಮೆಂದೆಂದುಮೆಂ-
    ದು ವಿಧಿಪ್ರೇಯಸಿಯೊಳ್ ನಿವೇದಿಸಲವಳ್ ಕಾರನ್ನೆಗಂ ಸಾರುತುಂ|
    ಕವಿಯಲ್ಕಾ ಪರಿಯಿಂ ಮಲರ್ದು ಸಿರಿಯಂ ಮೀರ್ವಂತೆ ಸಾಜಂ ಪುಗಲ್
    ತವೆ ನೋಡಯ್ ವರಣೀಯಮಾದುದದೋ!! ಮತ್ತೇಭವಿಕ್ರೀಡಿತಂ||

    ಇದು ಗಜರಾಜನ ವರ್ಣನೆಯ ನೆವದಿಂದ ಮಾಡಿದ ಮತ್ತೇಭ(ಮದದಾನೆಯ)ವಿಕ್ರೀಡಿತ(ಆಟ)ದ ಬಣ್ಣನೆಯೇ ಆಗಿದೆ. ಕವಿಗಳು ತಮ್ಮ ಮಾತಿನಲ್ಲಿ ಕಸುವಿಬೇಕೆಂದು ಶಾರದೆಯನ್ನು ಬೇಡಿದಾಗ ಆಕೆ ಗಜವಾಹನೆಯಾದ ಸಿರಿಯನ್ನು ಮೀರಿಸಬೇಕೆಂದೂ ಶರದೃತುವಿಗೆ(ಶಾರದವೆಂದರೆ ಶರತ್ಸಂಬಂಧಿಯೆಂದೇ ಅರ್ಥ) ಮಳೆಗಾಲವು ವಿರೋಧಿಯೆಂಬ ಪ್ರಥೆಯನ್ನು ನಿವಾರಿಸಬೇಕೆಂದೂ ಬಯಸಿ ಮತ್ತೇಭವಿಕ್ರೀಡಿತವನ್ನು ಮಾಡಿದಳು!! (ಈ ಮದಿಸಿದ ಆನೆಯ ಲೀಲೆಗೆ ಅಳಿವೇ ಇಲ್ಲ, ಮಳೆಗಾಲದ ಮುಗಿಲಿನಂಥ ಈ ಮತ್ತೇಭಕ್ಕೆ ಇಳಿಗಾಲವೇ ಇಲ್ಲ. ಅಲ್ಲದೆ ಮುಖ್ಯವಾಗಿ ಈ ವೃತ್ತದಿಂದ — ವೃತ್ತ ಎಂದರೆ ನಡೆವಳಿಕೆ ಎನ್ನುವ ಅರ್ಥವೂ ಇದೆ — ಕವಿಗಳ ಮಾತಿಗೆ ಎಲ್ಲಿಲ್ಲದ ಕಸುವು-ಕಾವುಗಳೂ ಬಂದುವು)

  4. ಅವಧಾನಿಗಳ ಚಾಟಿಯೇಟಿನಿ೦ದ ಚುರು-ಚುರುಕಾಗಿ(!!) ಒ೦ದು ಪರಿಹಾರ

    ಗಲದಾವೇಶಕೆ ಬ೦ಡೆಗಳ್ನಡಗುವಾ | ಕೀರ್ತಿ೦ ಜಗತ್ಸ್ಥಾಪಿತ೦ — (ಗಲ – ಗ೦ಟಲು)
    ಬಲದೊಳ್ಭೀಮನಿಗೊ೦ದೆಮಾದರಿಯಿದ೦ | ರನ್ನ೦ಮಹಾರಣ್ಯದೊಳ್
    ಸುಲಭ೦ಕೇವಲ ನೀರತಕ್ಕಡಿಯೊಳ೦ | ತೂಗಲ್ಗಜ೦ ಪೃಥ್ವಿಯೊಳ್ — (ನೀರತಕ್ಕಡಿ- ನೀರಿನಲ್ಲಿ ಮಾತ್ರ ಆನೆಯ ಭಾರವನ್ನು ಹೊರಬಹುದು)
    ಮೆಲಲೊ೦ದು೦ ಕುಡಿಯಲ್ಕೆಬಾಯ್ಗಳೆರಡು೦ | ನೋಡೈ ವಿಶಿಷ್ಟ೦ದ್ವಿಪ೦ — (ಮೆಲಲು – ತಿನ್ನಲು)

  5. ಕರಿಘೀಳೇ ಶೃತಿವಾಕ್ಯವೋ ಗ್ರಹಣಮುಕ್ತಂ ಮೋಕ್ಷದಾಖ್ಯಾನದೊಳ್
    ಉರುಳಲ್ ಖೆಡ್ಡದಿಬಂಧಿ ಶ್ರೀವರನ ಕಾಪೆಲ್ಲಯ್ ಮಹಾರಣ್ಯದೊಳ್?
    ಕಿರುಗೂಸಾಟಿಕೆಯಾದೆ ನಿತ್ಯಸಹಜಂ ಪಾಡೇನದೈ ಶ್ರೀಮುಖಾ !
    ದೊರೆಕೊಂಡೈವಿಧಿಯಾಟಕಿಂತು ಗಜರಾಟ್ ಸರ್ಕಸ್ ಮಠಾವಾಸದೊಳ್

    ಗಜೇಂದ್ರಮೋಕ್ಷಖ್ಯಾತಿಯ ಆಖ್ಯಾನದಲ್ಲಿ ಆರ್ತನಾದವೇ ಶೃತಿಯಾಗಿ ಮೊಸಳೆಯ ಹಿಡಿತದಿಂದ ಬಿಡುಗಡೆಪಡೆದೆ. ಈಗ ಬಂಡೀಪುರದಲ್ಲಿ ತೋಡಿದ ಖೆಡ್ಡದ ಗುಂಡಿಯಲ್ಲಿ ಬಿದ್ದು ಬಂಧಿಯಾಗಿ ಬಸವಳಿದಾಗ ಭಗವಂತನೂ ಕಾಪಾಡುತ್ತಿಲ್ಲವಲ್ಲ! ಮುಖ್ಯದೇವತೆಗೇ ಮುಖವಾಗಿದ್ದರೂ, ನಿನ್ನ ಮಹಾ ಆಕಾರಕ್ಕೆ ಮಾಡಿದ ವಿಡಂಬನೆಯೋ ಎಂಬಂತೆ, ಕೂಸಿನ ಹಸ್ತದಲ್ಲಿ ಬೊಂಬೆಯಾಕಾರಕ್ಕಿಳಿದು ಬಂಧಿಯಾದೆಯಾ ದೊಡ್ಡಜೀವ ! ಕೊನೆಗಾಲದಲ್ಲಿ ಪ್ರಾಣವನ್ನುಳಿಸಿಕೊಂಡು ಬದುಕಲು, ಸರ್ಕಸ್ಸನ್ನೋ ಮಠ-ದೇಗುಲಗಳನ್ನೋ ಆಶ್ರಯಿಸಬೇಕಾಯಿತಲ್ಲಾ ಗಜರಾಜ, ನಿನ್ನನ್ನು ಹೇಗೆಂದು ವರ್ಣಿಸಲಿ?

    • ಚೆಲುವೂ ಮಾರ್ಮಿಕವೂ ಆದ ಕಲ್ಪನೆ, ಹೊಸತನದ ಹೊಗರಿನಿಂದ ಕೂಡಿದೆ.

    • ಮೌಳಿಯವರೆ – ಗಜೇಂದ್ರನ ಅಸಹಾಯಕತೆ ಚೆನ್ನಾಗಿ ಮೂಡಿದೆ.
      ಮೊದಲ ಹಾಗು ಎರಡನೆಯ ಸಾಲುಗಳಲ್ಲಿ ಯತಿ ಸ್ಥಾನ ಬಂದಿಲ್ಲವೆನಿಸುತ್ತದೆ (ಬರಬೇಕೆಂಬುದು ನನ್ನ ತಿಳುವಳಿಕೆ). ಮೊದಲ ಸಾಲಿನಲಿ “ಮುಕ್ತಂ” ನಡುವೆ ಯತಿ ಬರಬೇಕಿದೆ. ಎರಡನೆಯದರಲ್ಲಿ “ಕಾಪೆಲ್ಲಯ್” ನಡುವೆ. ಆದ್ದರಿಂದ ಓದುವಾಗ ತಡವರಿಸಿದಂತಾಗುತ್ತದೆ. ಕೊಂಚ ವಿವರಿಸುವಿರಾ?

      • ಗತಿಯೆಂತೋಗಜರಾಜಗಂತುಯತಿಗಂ ಪೂರ್ವಾನ್ವಯಂ ಸಂದುದೈ

  6. ವನಸಂಚಾರಿ ದಲಾನೆ ವಾಕ್ಪತಿಪಿತಪ್ರೀತಾನ್ವಯಂ ಕುಂಜರಂ
    ಘನದಂತಸ್ಥಿತರೋಷದಿಂದೆ ಸವರನ್ನಂ ಗೆಲ್ದು ಸಾಗಿರ್ಪುದೈ
    ವನರಾಜಂ ಪೆಗಲೇರಲೆತ್ತಿ ಬಿಸುಟಿಂ ಧೂಳೀಪಟಂ ಮಾಳ್ಪುದೈ
    ವನದಿಂದಾನೆಗಳಲ್ತೆ ಮೇಣ್ ಗಜಪನಿಂ ಕಾಡಯ್ ವಿರಿಂಚಿಕ್ರಮಂ||
    ಕೊನೆ ಸಾಲು- ಆನೆಗಳಿದ್ದರೆ ಕಾಡು; ಕಾಡುಗಳಿದ್ದರೆ ಆನೆ ಎಂಬುದು ವಿರಿಂಚಿಯ ಕ್ರಮ- ಎಂಬರ್ಥದಲ್ಲಿದೆ.
    ದೋಷಗಳನ್ನು ದಯವಿಟ್ಟು ತಿಳಿಸಿ.

    • ಒಳ್ಳೆಯ ಪದ್ಯಶೈಲಿ, ಒಳ್ಳೆಯ ಕಲ್ಪನೆ ಕೂಡ. ಕೆಲವೊಂದು ಸವರಣೆಗಳು:
      …………………………………….ಪಿತೃಪ್ರೀತಾನ್ವಯಂ………
      ………………………………….ಸವರನ್ನಂ(?)……………
      ಇದೇನು ಸವರಂ(=ಸಮಾನರನ್ನು) ಎಂದೇ? ದಯಮಾಡಿ ಸ್ಪಷ್ಟಗೊಳಿಸಿರಿ
      ……………ಪೆಗಲೇರಲೆತ್ತಿ ಬಿಸಿಟುಂ……………………………..
      ………………………..ಮೇಣ್ ಸಲಗನಿಂ ಕಾಡಯ್……………..

      • ಧನ್ಯವಾದಗಳು ಸರ್
        ಸಮಾನರನ್ನು ಎಂಬುದಕ್ಕೆ ‘ಸವರನ್ನಂ’ ಎಂದು ಬಳಸಿದ್ದೆ (ನೀವು ಅವಧಾನವೊಂದರಲ್ಲಿ “ಸವರನ್ನು ವಿಧಿಗಾರಂ ಕಾಣೆಂ” ಎಂದು ರಚಿಸಿದ್ದರಿಂದ ಪ್ರೇರಿತನಾಗಿ)
        ಉಳಿದಂತೆ ಸರಿಪಡಿಸಿಕೊಳ್ಳುತ್ತೇನೆ

  7. ಚರಿಪಂ ಕಾಡೊಳು ಗುಂಪಿನಲ್ಲಿ, ಮರದಿಂ ಬೇರನ್ನೆ ಮೇಲೆತ್ತುವನ್
    ನರನುಂ ಕೇರಲು ಹೊಂದುವಂಥ ಮೊರವಾ ಕರ್ಣಂಗಳಲ್ ತೊಟ್ಟನೇಂ
    ಉದರಂ ತುಂಬಿಸೆ ಬೇಕು ತೊಪ್ಪಲು ವಿಧಂ ನೋಡಯ್ ವನಂಪೋಷಿಸಲ್
    ಶಿರವಂ ನೀಡೆಗಜಂ ಪರರ್ಗೆ ನಿಜದಿಂ ರಾಜಾಧಿರಾಜಂ‌ ಗಡಾ

    ಗಣಪನಿಗೆ ಶಿರವನ್ನೇ ಕೊಟ್ಟ ಗಜದ ಬಗ್ಗೆ ಈ‌ಪದ್ಯ

  8. ಹರವಾಕಾಶದೊಳೇನುಮಿಂದು ದುಗುಡಂ ಯೇನೀಮಹಾಸಂಕಟಂ
    ಹೊರನೀರೆಲ್ಲವ ಪೊತ್ತ ಬಾನ ಕರಿಗಳ್ ಬೆಳ್ಪಾದುವೇಕೀಭಯಂ
    ಹರಿಸುತ್ತಾ ಮದಧಾರೆಯಂ ಯಮಗಜಂ ಪಾತಾಳಮಂ ಭೂಮಿಯಂ
    ಹರಿದೊಂದಾಗಿಪೆನೆಂಬ ರೌದ್ರಮದಮಂ ನೋಡೈವರೊಳ್ ಮಧ್ಯಮಂ

    ಕರಿ ಮೋಡಗಳಿಗೆ ಕೂಡ ಭಯ ಹುಟ್ಟಿಸುತ್ತಿರುವ (ಭಗದತ್ತನ) ಆನೆಯತ್ತ ಭೀಮನ ಗಮನವನ್ನು ಸೆಳೆಯುವಂತೆ ಪದ್ಯ

    • ರಾಮ್,
      ಐವರು ಪಾಂಡವರೊಳ್ ಮಧ್ಯಮ ಅರ್ಜುನ. ಭೀಮನು ಮೂವರು ಕೌಂತೇಯರೊಳ್ ಮಧ್ಯಮ. ಅಲ್ಲವೆ?

      • ಹೌದಲ್ಲವೇ 😉 ಈಗ ಪದ್ಯ ಬದಲಿಸುವ ಬದಲು ಇದು ಅರ್ಜುನನ ಗಮನ ಸೆಳೆಯಲು ಎಂದು ಮಾಡುವುದೇ ಸೂಕ್ತ 🙂

        • Very smart! In fact, you have kept it much more open. You have not said they are pandavas: If you are third among 5 five siblings, it may as well be you;-)

  9. ರಾಮ್, dive ಹೊಂದಿಸಿರುವುದು ಸೊಗಸಾಗಿದೆ.
    ನನ್ನದಿನ್ನೊಂದು: ವ್ಯಾಸರು ಭಾರತವನ್ನು dictate ಮಾಡಿದ್ದನ್ನು ಗಣೇಶ ಬರೆದುಕೊಂಡನಲ್ಲ, ಅವನು ಶಾಂತಚಿತ್ತದಿಂದ ಬರೆದುಕೊಂಡನೆ? ಮಧ್ಯೆ ಮಧ್ಯೆ ಅವರನ್ನು ಹಾಗಲ್ಲ ಹೀಗೆ ಎಂದು ಪೀಡಿಸಲಿಲ್ಲವೆ?

    ಶುಕತಾತಂ ಜಯ ಬೋಧಿಸಲ್ ಬರೆದನೋ| ವಾಕ್ಯಾರ್ಥಮಂ ಮಾಡದೆಲ್?
    ಬಕನೊಲ್ ಪ್ರಶ್ನಿಸಿ ಪೂಜ್ಯರನ್ ಕೆಣಕಿರಲ್| ವಿಘ್ನೇಶನನ್ವರ್ಥನೇಂ?
    ಅಕಟಾ ಕಷ್ಟ ಗಜಂ ಪ್ರವರ್ತಿಪುವುದೈ| ಮೈಮೇಲೆಯೇ ಬೀಳುಗುಂ
    ಶುಕನೊಲ್ ಯಾಚಿಸಿದರ್ ಕೊಡೈ ವರವ ನೀ| ನಿರ್ವಿಘ್ನದಿಂ ಸಾಗಿಸಲ್

Leave a Reply to ಗಣೇಶ್ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)