Dec 152011
 

ಪದ್ಯ ಪಕ್ಷದ ಮುಂದಿನೀ ಕಂತಿನಲಿ ನೀವು
ಹೃದ್ಯ ಕವಿತಾಪಾಕವನ್ನೆರೆವಿರ |
ವಿದ್ಯಾವರೇಣ್ಯರೇ ಶಾರದೆಯ ಕಂದಗಳೆ
ಮದ್ಯಪಾನಿಸಿರೋದುಗರ ಚಿತ್ತಕೆ ||

ಪದ್ಯಪಕ್ಷದ ರಸಿಕರಿಗೆ ಒಂದು ನಿವೇದನೆ:
ಇಲ್ಲಿ ನೀಡುವ ಸಮಸ್ಯೆ, ದತ್ತಪದಿ, ಲಹರಿ, ಚಿತ್ರಕ್ಕೆ ಕವಿತೆ ಇತ್ಯಾದಿ ಅಂಶಗಲನ್ನೆಲ್ಲವನ್ನೂ ಎಲ್ಲರೂ ಪೂರೈಸಲೇಬೇಕೆಂಬ ನಿರ್ಬಂಧವಾಗಲಿ, ವ್ರತವಾಗಲಿ, ಗೆಲ್ಮೆಯ ಬಲ್ಮೆಯ ಗುರಿಯಾಗಲಿ ಇಲ್ಲ. ಆಯ್ಕೆಗೆ ಅನೇಕ ಅವಕಾಶಗಳಿರಲೆಂದು  ಈ ಹೊಸ ಯತ್ನ. ದಯಮಾಡಿ ಸ್ನೇಹದಿಂದ ಸಹಕರಿಸಿರಿ, ಸಲಹೆಗಳನ್ನೂ ಸರಿಕಂಡಂತೆ ನೀಡಿರಿ. ನಿಮ್ಮ ರುಚಿಗೊಗ್ಗಿದ ಅಡುಗೆಯನ್ನು  ನಾವಿತ್ತ ಸಾಮಗ್ರಿಗಳ ಪರಿಮಿತಿಯಲ್ಲಿ ಅಟ್ಟು ಸವಿಯಿರಿ,  ನಮಗೂ ಉಣಬಡಿಸಿರಿ:-)

೧. ಸಮಸ್ಯೆ: ಮೀಸೆಯು ಮೋಹಿನಿಯ ಮೊಗದೆ ಚೆಲುವೆನಿಸಿರ್ಕುಂ
(ಇದು ಕಂದದ ಕಡೆಯ ಸಾಲು)

೨.ದತ್ತಪದಿ:  ಕರಿ, ಹರಿ, ಗಿರಿ, ಸಿರಿ ಎನ್ನುವ ಪದಗಳನ್ನು ಬಳಸಿ ವಿಘ್ನೇಶ್ವರನನ್ನು ಚತುರ್ಮಾತ್ರಾಗಣದ ಚೌಪದಿಯಲ್ಲಿ ಸ್ತುತಿಸಬೇಕು ಗಣಪತಿಯ ವಂದನೆ ಮಾಡದೆ ಪದ್ಯಪಾನ/ಪಕ್ಷಗಳು ಮೊದಲಾದುಷ್ಟೆ! ಹೀಗಾಗಿ ಎದರುಗಳು ಬರಬಾರೆಂದು ಎಡರ್ಗೇಡಿಯನ್ನು ಮೊತ್ತಮೊದಲು ನಮಿಸೋಣ:-)
(ಈ ಚೌಪದಿಯಲ್ಲಿ ಮೊದಲ ಹಾಗೂ ಮೂರನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳೂ ಎರಡನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳೂ ಕಡೆಯಲ್ಲೊಂದು ಗುರುವೂ — ಇದು ಲಘ್ವಕ್ಷರವು ಪಾದಾಂತ್ಯದಲ್ಲಿ ಗುರುವಾಗುವ ಬಗೆಯಲ್ಲಿಯೂ ಇರಬಹುದು — ಇರಬೇಕು. ಆದಿಪ್ರಾಸ ಕಡ್ಡಾಯ. ಈ ಪದಗಳನ್ನು ಪಾದಗಳ ಯಾವುದೇ ಎಡೆಯಲ್ಲಾದರೂ ಬಳಸಿಕೊಳ್ಳಬಹುದು;  ನೇರವಾಗಿ ಆದಿಪ್ರಾಸಕ್ಕೂ ಬಳಸಿಕೊಳ್ಳಬಹುದು)

೩.  ವರ್ಣನೆ: ಕುಸುಮಷಟ್ಪದಿಯಲ್ಲಿ ಹೇಮಂತದ ಸೊಗಸನ್ನು ಕಟ್ಟಿಕೊಡಬೇಕು.

೪.  ಲಹರಿ:  ನಿಮ್ಮ ಖಯಾಲಿಯ ವಸ್ತು-ಛಂದಸ್ಸುಗಳನ್ನು ಬಳಸಿ ಕಲ್ಪನಾನುಶೀಲಿತವಾದ ಕವಿತೆಯ ನಿರ್ಮಾಣ.

೫. ಚಿತ್ರಕ್ಕೆ ಪದ್ಯ: ಈ ಚಿತ್ರಕ್ಕೆ ಸೂಕ್ತ ಪದ್ಯವನ್ನು ನಿಮಗಿಷ್ಟವಾದ ಚಂದಸ್ಸಿನಲ್ಲಿ ಬರೆಯಿರಿ

 

ಯೇಸು ಕ್ರಿಸ್ತನ ಜನ್ಮ

ಕ್ರಿಸ್ಮಸ್ - ಯೇಸು ಕ್ರಿಸ್ತನ ಜನ್ಮ