Sep 232012
 

“ನಾಕು ನಾಕಲೆ ಹತ್ತೆನಲಣುಗ ಪಡೆದ ಬಹುಮಾನ”

ನಾಕು ನಾಕಲೆ(4X4=10) ಹತ್ತು ಎನಲು ಅಣುಗ(ಹುಡುಗ) ಪಡೆದ ಬಹುಮಾನ.

ಭಾಮಿನಿ ಷಟ್ಪದಿಯಲ್ಲಿನ ಈ ಸಮಸ್ಯೆಯನ್ನು ಬಿಡಿಸಿ.

Sep 172012
 

ತಬ್ಬಲಿಯು ನೀನಾದೆ ಮಗನೆ

ಈ ಚಿತ್ರಕ್ಕೆ ತಮ್ಮ ಆಯ್ಕೆಯ ಛ೦ದಸ್ಸಿನಲ್ಲಿ ಪದ್ಯರಚನೆಯನ್ನು ಮಾಡಿ (ಇದು ಧರಣಿಮ೦ಡಲ ಮಧ್ಯದೊಳಗೆ ಪದ್ಯದ ಚೌಕಟ್ಟಿನಲ್ಲಾದರೂ ಸರಿಯೆ ಅಥವಾ ಚಿತ್ರವನ್ನು ನೋಡಿ ತಮಗನಿಸಿದ ಮತ್ತಿನ್ನಾವ ವಿಷಯವಾದರೂ ಸರಿಯೆ).

Sep 112012
 

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)

ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

Sep 032012
 

ಅವಧಾನ ಕಲೆಯ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ವಿವರಿಸಿರಿ. ಛಂದಸ್ಸಿನ ಆಯ್ಕೆ ನಿಮ್ಮದೇ.

ಎಲ್ಲರೂ ಅವಧಾನ ಕಲಾಪ್ರದರ್ಶನವನ್ನು ನೋಡಿರಬಹುದು. ಇಲ್ಲವಾದಲ್ಲಿ, ಮಾಹಿತಿಗಾಗಿ, ಇಲ್ಲಿ ನೀಡಿರುವ ವಿಡಿಯೋಗಳನ್ನು ನೋಡಿರಿ.

https://www.youtube.com/watch?v=xVL_IAvuEkg
https://www.youtube.com/watch?v=K6zqXpHS8j0

ಇಲ್ಲಿಯೂ ಕೂಡ ಪದ್ಯ ರಚನೆಗೆ ಕೆಲ ಸಾಮಗ್ರಿಯನ್ನು ನೀಡಲಾಗಿದೆ ::

ಅವಧಾನ ಕಲೆ ::

ಚಿತ್ತೈಕಾಗ್ರ್ಯಮವಧಾನಂಎಂದು ವಾಮನನು ಹೇಳಿರುವಂತೆ ಮನಸ್ಸಿನ ಏಕಾಗ್ರತೆಯೇ ಅವಧಾನ.ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನ. ಅವಧಾನಿಯು ಪೃಚ್ಛಕಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನಸಾಮಗ್ರಿಯಿಲ್ಲದೆ, ಛಂದೋಬದ್ಧಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗು ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕಾರಿಯಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ವಿಧವಾದ ಸಮಸ್ಯೆಗಳನ್ನೂ, ಶತಾವಧಾನದಲ್ಲಿ ೧೦೦ನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.

ಅವಧಾನದ ಬೆಳವಣಿಗೆ ::

ಹೇಗೆ ರಸಮಯವಾದ ಕವಿತೆಯು ಜನರನ್ನು ಆರ್ದ್ರಗೊಳಿಸಬಹುದೋ ಹಾಗೆಯೇ ಚಮತ್ಕಾರಿಯಾದ ಕವಿತೆಗಳು ಜನರನ್ನು ನಿಬ್ಬೆರಗಾಗಿಸುತ್ತದೆ. ಕವಿಗಳ ತ೦ತ್ರಗಾರಿಕೆಯನ್ನೂ, ಕವಿತೆಯ ವಿಲಕ್ಷಣವನ್ನೂ ಸಹೃದಯರು ಅನುಭವಿಸುತ್ತಾರೆ. ಸ್ವಯ೦ ಕವಿ, ಪ೦ಡಿತರಾಗಿದ್ದ ರಾಜರುಗಳ ಆಸ್ಥಾನಗಳಲ್ಲಿ ಇ೦ತಹಚಮತ್ಕಾರ ಕವಿತೆಗಳಿಗೆ ಮನ್ನಣೆ ದೊರಕಿ, ಚಿತ್ರಕವಿತ್ವದ ಹಲವು ರೂಪಗಳಿಗೆ ಜನ್ಮನೀಡಿ, ಅವು ಬೆಳೆದದ್ದರಲ್ಲೇ ಅವಧಾನದ ಹುಟ್ಟು ಮತ್ತು ಬೆಳವಣಿಗೆಗಳನ್ನು ನೋಡಬಹುದು. ಅವಧಾನದ ಮೂಲವನ್ನು ನಾವು ವಾತ್ಸಾಯನ ಕಾಮಸೂತ್ರದಲ್ಲೇ ಕಾಣಬಹುದು.

ಸ೦ಸ್ಕೃತದಲ್ಲಿ ಅವಧಾನದ ಉದಯವು ಏಳನೆಯ ಶತಮಾನದಿ೦ದಲೇ ಆಗಿತ್ತಾದರೂ, ಶಾಸನಾದಿಗಳ ಆಧಾರದಮೇಲೆ, ಅದು ಒ೦ದು ಸ್ಪಷ್ಟರೂಪವನ್ನು ಪಡೆದದ್ದು ಹನ್ನೊ೦ದನೇ ಶತಮಾನವೆ೦ದು ಊಹಿಸಬಹುದು. ಇನ್ನು ಕನ್ನಡದಲ್ಲಿ, ೧೧ನೆಯ ಶತಮಾನದ ಕ೦ತಿಯೆ೦ಬ ಕವಯತ್ರಿಯ ಆಶುಕವಿತೆಗಳೇ ಹೆಚ್ಚು ಪ್ರಾಚೀನವಾದದ್ದು. ಕ೦ತಿಹ೦ಪರದ್ದೆ೦ದು ಉಳಿದು ಬ೦ದಿರುವ ಸಮಸ್ಯಾಪೂರಣ, ದತ್ತಪದಿ, ನಿರೋಷ್ಠ್ಯ,  ಪ್ರಹೇಲಿಕೆ, ಆಶುಕವಿತೆಗಳನ್ನು ಗಮನಿಸಿದರೆ, ಕ೦ತಿಯೇ ಕನ್ನಡ ಅವಧಾನಪರ೦ಪರೆಯಲ್ಲಿ ಆದ್ಯಳೆ೦ದೆನಿಸಿಕೊಳ್ಳುತ್ತಾಳೆ. ಆದರೆ ಭಾರತೀಯ ಭಾಷೆಗಳೆಲ್ಲಕ್ಕೂ ಒಪ್ಪುವಂತಹ ಅಷ್ಟಾವಧಾನದ ಸಮಗ್ರಲಕ್ಷಣವನ್ನು ಕೊಟ್ಟ ಮೊದಲ ವಿದ್ವತ್ಕವಿಯೆ೦ದರೆ ಕನ್ನಡದ ಕವಿಕಾಮ(ಕ್ರಿ. . ೧೨೦೦). ಈತನ ವಿವರಣೆಯಿ೦ದ ಇ೦ದಿನ ಅವಧಾನಸ್ವರೂಪವು ಹೇಗೆ ೮೦೦೯೦೦ ವರ್ಷಗಳ ಕೆಳಗೇ ನಿರೂಪಿಸಲ್ಪಟ್ಟಿತ್ತೆ೦ಬುದು ತಿಳಿಯುತ್ತದೆ.