Jan 292012
 

ಕಂದ ಪದ್ಯದ ಎರಡನೆ ಅಥವಾ ನಾಲ್ಕನೆ ಪಾದ ಹೀಗಿದೆ ::

ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ

ಪದ್ಯದ ಉಳಿದ ಪಾದಗಳನ್ನು ಪೂರೈಸಿರಿ

Jan 242012
 

ಪ್ರೀತಿಯ ಪದ್ಯಪಾನಿಗಳೇ,

ಪದ್ಯಪಾನವು ಹುಟ್ಟಿದಾಗಿನಿ೦ದ ಇಲ್ಲಿಯವರೆಗೂ ಉತ್ಸಾಹದಾಯಕವಾಗಿ – ಪದ್ಯವನ್ನು ಬರೆಯುತ್ತ, ಸದ್ದಿಲ್ಲದೆ ಓದುತ್ತಾ, ಕಾಮೆ೦ಟುಗಳ ಮೂಲಕ ಸದ್ದುಮಾಡುತ್ತಾ –  ಭಾಗವಹಿಸುತ್ತಾ ಅದರ ಬೆಳವಣಿಗೆಗೆ ಕಾರಣರಾಗಿದ್ದೀರಿ. ಇದು ಬೆಳೆಯುತ್ತಿರುವುದು, ಬೆಳೆದು ಬದಲಾಗುತ್ತಿರುವುದು ನಮ್ಮ ಕಣ್ಣಮು೦ದೆಯೇ ನಡೆಯುತ್ತಿರುವ ನಿತ್ಯ ಸತ್ಯ.

ಈ ಬೆಳವಣಿಗೆಯು ಸು೦ದರವಾಗಿರಲೆ೦ದು, ಮುನ್ನವೇ ಆಲೋಚಿಸಿ ಒ೦ದಿಷ್ಟು ಕಲಿಕೆಯ ಸಾಮಗ್ರಿಗಳನ್ನು ತಯಾರಿಸಿ “ಪದ್ಯವಿದ್ಯೆ” (ಕೆಳಗಿನ ಚಿತ್ರ ನೋಡಿ) ಎ೦ಬ ಮೆನು(ಪಟ್ಟಿ)ವಿನಲ್ಲಿ ಪಾನಮ೦ಡಳಿಯು ನೀಡಿದ್ದಿತು.  ಮುಖ್ಯವಾಗಿ, ಹೊಸದಾಗಿ ಪದ್ಯಪಾನಿಗಳಾಗಬಯಸುವವರು ಪದ್ಯವಿದ್ಯೆಯಲ್ಲಿರುವ ಎಲ್ಲ ವೀಡಿಯೋ ಗಳನ್ನೂ, ಸಾಮಾನ್ಯ ಪ್ರಶ್ನೆಗಳನ್ನೂ ಮತ್ತು ಲಿಖಿತ ಸಾಮಗ್ರಿಗಳನ್ನೂ ಒಮ್ಮೆ ಓದಿ ಅರ್ಥೈಸಿಕೊಳ್ಳಬೇಕೆ೦ಬುದು ಪಾನಮ೦ಡಳಿಯ ಬಯಕೆ. ಇದರಿ೦ದ, ಪ್ರತಿಯೊಬ್ಬರಿಗೂ ಪಾನಗೋಷ್ಟಿಯ ನಿಯಮ, ವಿವರಗಳು ತಿಳಿಯುವುದರೊ೦ದಿಗೆ, ಛ೦ದಸ್ಸಿನ ತಳಪಾಯವೂ ಸ್ವಲ್ಪ ಗಟ್ಟಿಯಾಗಿ,  ತೀರ ಸಾಮಾನ್ಯವಾದ ತಪ್ಪುಗಳು ಮರುಕಳಿಸದ೦ತೆ ತಡೆಯಬಹುದು, ತನ್ಮೂಲಕ ಕಾ೦ಮೆ೦ಟುಗಳ ಪಟ್ಟಿಯಲ್ಲಿ ಗದ್ಯವನ್ನು ಕಡಿಮೆಗೊಳಿಸಬಹುದು ಎ೦ಬುದು ನಮ್ಮ ತೇಲುನೋಟದ ಒ೦ದು ದೃಷ್ಟಿಯಾಗಿದೆ.  🙂

ಪದ್ಯಪಾನವು ಬೆಳೆದ೦ತೆ, ವಿವಿಧ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತ, ಹೊಸತನ್ನು ಮತ್ತು ವೈವಿಧ್ಯವನ್ನು ಕಾಣಬೇಕೆ೦ಬುದು ಎಲ್ಲರ ಬಯಕೆ ಹಾಗೂ ಒ೦ದು ದೀರ್ಘ ಪಯಣದ ಅನಿವಾರ್ಯತೆ ಕೂಡ. ಈ ನಿಟ್ಟಿನಲ್ಲಿ, ಮೊದಲಿಗೆ ಹೊಸಕಲಿಕೆಗೆ ಮು೦ದಾಗೋಣವೆ೦ದು ಪಾನಮ೦ಡಳಿಯು ಯೋಚಿಸಿ, ಮಾತ್ರಾವೃತ್ತಗಳ ನ೦ತರದಲ್ಲಿ ವರ್ಣವೃತ್ತದೊಳಗೆ ಮತ್ತರಾಗೋಣವೆ೦ದು, ಒ೦ದಿಷ್ಟು ಸು೦ದರವಾದ ಮತ್ತು ಪ್ರಸಿದ್ಧವಾದ ವರ್ಣವೃತ್ತಗಳ ಲಕ್ಷಣವನ್ನು ಇದೀಗ ತಾನೇ ಇಲ್ಲಿ  ಸೇರಿಸಿದೆ. ಪದ್ಯಪಾನಿಗಳು, ಈ ಹೊಸ ಕಲಿಕೆಯಲ್ಲಿ ಭಾಗಿಯಾಗಿ ಮು೦ದೆ ಹೆಚ್ಚು ಹೆಚ್ಚು ವರ್ಣವೃತ್ತಗಳಲ್ಲಿ ತಮ್ಮ ರಚನೆಯನ್ನು ಕೈಗೊ೦ಡು ಪದ್ಯಪಾನದ ಈ ತಾಣವನ್ನು ವರ್ಣರ೦ಜಿತಗೊಳಿಸುತ್ತೀರಿ ಎ೦ದು ಭಾವಿಸುತ್ತಾ.

ನಿಮ್ಮ

ಪಾನಮ೦ಡಳಿ.

Jan 242012
 

ರಾತ್ರೆ ಊಟದ ಮೊದಲು ಕೋಣೆಯಲ್ಲಿ ನನ್ನ ತಮ್ಮನ ಜೊತೆ ಹರಟುತ್ತಿದ್ದೆ. ಮಗನೂ ಅಲ್ಲೇ ಆಡಿಕೊಳ್ಳುತ್ತಿದ್ದ. ಹೀಗೇ ಹರಟುತ್ತಿದ್ದಾಗ ಅದೇಕೋ ಮತ್ತಕೋಕಿಲಾ ಛಂದಸ್ಸು ನೆನಪಿಗೆ ಬಂತು. ಅದರ ಬಗ್ಗೆ ನನ್ನ ತಮ್ಮನಿಗೆ ಹೇಳುತ್ತಾ “ಇದು ಏಳೇಳು ಮಾತ್ರೆಗಳ ಮಿಶ್ರಗತಿಯಲ್ಲಿ ಬರುತ್ತದೆ – ಮತ್ತಕೋಕಿಲ ಮತ್ತಕೋಕಿಲ ಮತ್ತ ಕೋಕಿಲ ಕೋಕಿಲಾ” ಎಂಬಂತೆ ಎಂದು ಹೇಳಿದೆ. ಅವನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ “ಇದಕ್ಕೆ ಬೇರಾವುದಾದರೂ ಉದಾಹರಣೆಯಿದೆಯೇ” ಎಂದ. ನಾನು “ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ” ಎಂದೆ

ಅಷ್ಟುಹೊತ್ತಿಗೆ ಹೊರಗೆ ತಟ್ಟೆಹಾಕಿ ಊಟಕ್ಕೆ ಕರೆಯುತ್ತಿದ್ದರು. ನನ್ನ ಮಗ ಅಪ್ರಯತ್ನತಃ “ಊಟ ಮಾಡುವ ಟೈಮು ಬಂದಿತು ಬೇಗ ಬನ್ನಿರಿ ಎಲ್ಲರೂ” ಎಂದು ರಾಗವಾಗಿ, ಲಯಬದ್ಧವಾಗಿ ಕೂಗುತ್ತಾ ಊಟಕ್ಕೆ ಓಡಿಹೋದ! ಒಂದಿನಿತೂ ಎಡರು ತೊಡರಿಲ್ಲ, ಬೇಡದ ಎಳೆತವಿಲ್ಲ, ಮಾತ್ರಾಲೋಪವಿಲ್ಲ! ನನಗೆ ಒಂದು ಕ್ಷಣ ಆಶ್ಚರ್ಯಾನಂದಗಳಿಂದ ಮಾತೇ ಹೊರಡಲಿಲ್ಲ. ಇನ್ನೂ ಕನ್ನಡವನ್ನೇ ಅಕ್ಷರ ಕೂಡಿಸಿಕೊಂಡು ಪ್ರಯಾಸದಿಂದ ಓದುವ ಆರು ವರ್ಷದ ಪೋರ, ವೃತ್ತದ ಒಂದಿಡೀ ಸಾಲನ್ನು ನಿರಾಯಾಸವಾಗಿ, ಸಮಯಸ್ಫೂರ್ತಿಮಾತ್ರದಿಂದ ಅಲ್ಲೇ ಒದರಿ ಓಡಿದ್ದ! ಆಮೇಲೆ ಬಹಳ ಕೊಂಡಾಟ ಸಂತೋಷಗಳ ನಡುವೆ ನನ್ನ ಬಲವಂತಕ್ಕೆ ಅವನು ಮತ್ತೆ ಕೆಲವು ಸಾಲುಗಳನ್ನು ಪ್ರಯತ್ನಿಸಿದರೂ ಅದು ಸರಿಬರಲಿಲ್ಲ, ಅದಿರಲಿ, ಮೊದಲು ಹೇಳಿದ ಸಾಲೂ ಅವನಿಗೆ ಮರೆತುಹೋಗಿತ್ತು. ಈ ಮಧ್ಯೆ ಟಿವಿ, ಮಾತು ಮತ್ತಿತರ ಗಲಾಟೆಗಳ ಜೊತೆ ಊಟ ಮುಗಿಯಿತು, ಅಲ್ಲಿಗೆ ಆ ಮಾತು ಮರೆಯಿತು.

ಮತ್ತೆ ಮಲಗುವ ಸಮಯ, ಮಾಮೂಲಿನಂತೆ ಕತೆ ಕೇಳಿದ ನಂತರ ಹೊರಳಿ ಮಲಗುತ್ತಾ ಮತ್ತೊಂದು ಸಾಲು ಹೊರಟಿತು “ಊಟ ಆಯಿತು ನಿದ್ದೆ ಬಂದಿತು ಹೊದ್ದು ತಾಚಿಯ ಮಾಡುವೆ”!!! ಇಷ್ಟು ಹೇಳಿದ ಮಗು ಆರಾಮವಾಗಿ ಮುದುಡಿ ಮಲಗಿತು. ತಪ್ಪಿಹೋದ ಲಯವನ್ನು ಮತ್ತೆ ಹಿಡಿದ ಖುಶಿ ಮುಖದಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿತ್ತು. ನನಗಂತೂ ಮಗುವಿನ ಮೊದಲ ಮಾತು ಕೇಳಿದಾಗ ಆದಷ್ಟೇ ಸಂತೋಷವಾಯಿತು ಇದರಿಂದ.

ಪದ್ಯಪಾನದ ಗಡಂಗಿನಲ್ಲಿ ಈ ಗದ್ಯಾಲಾಪಕ್ಕೆ ಕ್ಷಮೆಯಿರಲಿ. ಈ ಅಯಾಚಿತ ಪ್ರತಿಭಾ ಪ್ರಕಾಶದಿಂದ ನನಗಾದ ಆನಂದಾತಿರೇಕವನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು, ಅಷ್ಟೇ.

Jan 222012
 

ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು” ಎಂಬೊಂದು ಕುಟುಂಬ ಯೋಜನೆಯ ಕರೆಯಿದ್ದಿತ್ತು.

ಈ ವಿಷಯದ ಬಗ್ಗೆ ನಿಮ್ಮ ಭಾವಗಳನ್ನು ನಿಮಗಿಷ್ಟವಾದ ಛಂದಸ್ಸಿನ ಪದ್ಯರೂಪಗಳಲ್ಲಿ ಹೊಮ್ಮಿಸಿರಿ.

Jan 162012
 

ಈ ಕೆಳಗಿನ ಸಾಲು ಕೊನೆಯಲ್ಲಿರುವಂತೆ ಉಳಿದ ಸಾಲುಗಳನ್ನು ಭರಿಸಿ ಸಮಸ್ಯೆಯನ್ನು ಪರಿಹರಿಸಿರಿ.

ಕೆಂಡಗಳ ಮಳೆಗೆಂದು ಬಟ್ಟೆಯ ಕೊಡೆಗಳನೆ ಪಿಡಿದಿರ್ಪರಯ್!

ಇದು ಮಾತ್ರಾ ಮಲ್ಲಿಕಾಮಾಲಾ ಎಂಬ ಭಾಮಿನಿಯ ಓಟದ ಮಿಶ್ರ ಲಯದ ಛಂದಸ್ಸು. ಪದ್ಯದ ಎಲ್ಲ ಸಾಲುಗಳ ಮಾತ್ರಾ ಗಣ ವ್ಯವಸ್ಥೆಯು ಇಂತಿದೆ ::

೩ +‌ ೪ + ೩ +‌ ೪ + ೩ +‌ ೪ + ೩ + ೨ (ಕೊನೆಯದು ಊನ ಗಣ)

Jan 012012
 

ಈ ಚಿತ್ರಕ್ಕೆ ಒಪ್ಪುವ ಕವಿತೆ ಬರೆಯಿರಿ ::

AnantaPadmanaabha

ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿಯ ದೇವಸ್ಥಾನದಲ್ಲಿರುವ ಚಿನ್ನದ ಮೂರ್ತಿ