Jul 022017
 

ಆಕೃತಿ ರಾಮಚಂದ್ರು ವಿರಹಾಕೃತಿ ಕನ್ಬೊಮತೀರು ಸ್ವಾಮಿ ಚಾ-
ಪಾಕೃತಿ ಕನ್ನುಲನ್ ಪ್ರಭು ಕೃಪಾಕೃತಿ ಕೈಶಿಕಮಂದು ರಾಮ ದೇ-
ಹಾಕೃತಿ ಸರ್ವದೇಹಮುನ ಯಂದುನ ರಾಘವವಂಶಮೌಳಿ ಧ-
ರ್ಮಾಕೃತಿ ಕೂರುಚುನ್ನ ವಿಧಮಂತಯು ಸ್ವಾಮಿ ಪ್ರತಿಜ್ಞಮೂರ್ತಿಯೈ

(ಶ್ರೀಮದ್ರಾಮಾಯಣಕಲ್ಪವೃಕ್ಷಮು, ಸುಂದರಕಾಂಡಮು, ಪರರಾತ್ರಖಂಡಮು)

ಆಕೃತಿ ರಾಮಚಂದ್ರ ವಿರಹಾಕೃತಿ ಪುರ್ಬಿನ ಬಾಗು ರಾಮ ಚಾ-
ಪಾಕೃತಿ ಕಂಗಳೊಳ್ ಪ್ರಭು ಕೃಪಾಕೃತಿ ಕೈಶಿಕೆಯಲ್ಲಿ ರಾಮ ದೇ-
ಹಾಕೃತಿ ಸರ್ವದೇಹದೊಳಗೆಲ್ಲವು ರಾಘವವಂಶಮೌಳಿ ಧ-
ರ್ಮಾಕೃತಿ ಕೂರ್ತಭಂಗಿವಿಧಮೆಲ್ಲವು ಸ್ವಾಮಿ ಪ್ರತಿಜ್ಞಮೂರ್ತಿಯೈ

ಕಲ್ಪನೆಯೆಂದರೆ, ಒಂದು ಹೊಸ ದೃಕ್ಕೋನ. ಎಲ್ಲರಿಗೂ ತಿಳಿದ ವಿಷಯಗಳನ್ನು ಕುರಿತು ತಿಳಿಯದ ಹೊಸ ಅಂಶವನ್ನು ಆವಿಷ್ಕರಿಸಬಲ್ಲ ಚಾತುರ್ಯ. ಸೀತಾನ್ವೇಷಣೆಗಾಗಿ ಸಮುದ್ರತರಣಮಾಡಿ ಲಂಕೆಯನ್ನು ಸೇರಿದ ಮಾರುತಿ, ರಾತ್ರಿಯೆಲ್ಲಾ ಲಂಕೆಯನ್ನು ಶೋಧಿಸಿ ಕೊನೆಗೆ ಅಶೋಕವನದಲ್ಲಿ ಸೀತೆಯನ್ನು ಮೊದಲಸಲ ನೋಡಿದಾಗ, ಅಲ್ಲಿ ಕಂಡದ್ದು ರಾಮತತ್ತ್ವಕ್ಕೆ ಅಭಿನ್ನವಾದ ಸೀತೆಯ ರೂಪ. ಸೀತೆಯನ್ನು ನೋಡಿದಾಗ ಅಲ್ಲಿ ಶ್ರೀರಾಮನೇ ಕಂಡುಬರುತ್ತಾನೆ. ಇದು ರಾಮನ ಏಕಪತ್ನೀವ್ರತ ಮತ್ತು ಸೀತೆಯ ಪಾತಿವ್ರತ್ಯದ ಪರಿಪಕ್ವತೆಯ ಪ್ರತೀಕವಾಗಿದೆ. ಸೀತೆಯು ಹನುಮನಿಗೆ ಕಂಡದ್ದು ಹೇಗೆ? ಆ ವರ್ಣನೆಯಲ್ಲಿನ ಹೊಸತನ ಈ ಪದ್ಯದ್ದು.

ಮಾರುತಿಯು ಸೀತೆಯನ್ನು ನೋಡಿದಾಗಿನ ಸಂದರ್ಭದ ಸಹಜಸುಂದರಭಾವದ ವಾಲ್ಮೀಕಿವರ್ಣನೆಯಿದು: “ಆಕೆ ಕಾಂತಿವಿಹೀನಳು, ದುಃಖಿತಳು. ಧೂಳುತುಂಬಿದ ಕೇಶ. ತನ್ನ ಪುಣ್ಯವು ಕ್ಷೀಣಿಸಿ ನೆಲಕ್ಕೆ ಬಿದ್ದ ನಕ್ಷತ್ರದಂತೆ ಇದ್ದಾಳೆ. ನಿಜಸಚ್ಚಾರಿತ್ರವೇ ಸೀತೆಯ ಐಶ್ವರ್ಯವಾದರೂ, ಭರ್ತೃದರ್ಶನಾವರೋಧವು ಅವಳ ಇಂದಿನ ಬಡತನವಾಗಿದೆ. ರಾವಣನ ಬಂಧಿಯಾಗಿ ತನ್ನ ಬಂಧುಜನರಿಂದ ದೂರವಾಗಿ, ಆಕೆ ಸಿಂಹಗಳು ಅಡ್ಡಗಿಸಿದ ಕರಿಣಿಯಂತಿದ್ದಳು. ನಿರಾಭರಣೆಯದರೂ ಸುವಿಭಕ್ತ ಅಂಗಗಳಿಂದ ಶೋಭಿಸುತ್ತಿದ್ದ ಆ ಮೈಥಿಲಿಯನ್ನು ಮಾರುತಿಯು ನೋಡಿದ.” ರಾಮಾಯಣದರ್ಶನದಲ್ಲೂ ಇಂಥ ವರ್ಣನೆಯೇ ಇದೆ. ಆ ಸಂದರ್ಭವನ್ನು ಕುವೆಂಪು ಹೀಗೆ ಕಂಡಿದ್ದಾರೆ:

ಹತ್ತೆ ಸಾರಿರ್ದಳಂ ಕಂಡಾಕೆಯಂ, ಆ
ಕೃಶಾಂಗಿಯಂ, ಮೀಹಮಿಲ್ಲದ ಮಲಿನಗಾತ್ರೆಯಂ,
ವಿವಿಧಭಾವಕ್ರಕಚಪೀಡನಕೆ ಸಿಲ್ಕಿತೊ
ಸಮೀರಜಾತ್ಮಂ! ಸಂತೋಷವುಕ್ಕಿತದನಿಕ್ಕಿ
ದುಃಖಧೂಮಂ ತುಂಬಿದತ್ತದನಿರಿದು ಸೀಳ್ದು
ಉಜ್ಜ್ವಲಿಸಿತುರಿ ರೋಷಭೀಷಣವಿಷಾದದಾ:
“ಇವಳಹುದೆ ಆ ದೇವಿ,….
……………
“ಅಯ್ಯೊ, ದಾಶರಥಿ
ಬಣ್ಣಿಸಿದ ತನ್ನ ದಯಿತೆಯ ಚಿತ್ರವೆಲ್ಲಿ? ಈ
ದೀನದುಃಖಿನಿಯೆಲ್ಲಿ? ಬರ್ಚಿಸಿದ ಚೆಲ್ವೆಸೆವ
ಚಿತ್ರಪಟಮಂ ಮಸಿಯ ಕೈ ಹಿಸುಗಿ ಬಿಸುಟಂತೆ
ತೋರ್ಪಳೀ ಮಹಿಳೆ!

ವಾಲ್ಮೀಕಿಯ ವರ್ಣನಾಮಾರ್ಗವನ್ನೇ ಹಿಡಿಯದೆ, ಈ ಸಂದರ್ಭವನ್ನು ತಮ್ಮ ಸ್ವೋಪಜ್ಞತೆಯಿಂದ ಮತ್ತೂ ಬೆಳಗಿಸುವ ವಿಶ್ವನಾಥರ ವರ್ಣನೆಯನ್ನು ಅವರ ಅನೇಕ ಪದ್ಯಗಳಲ್ಲಿ ಕಾಣಬಹುದು. ಇಲ್ಲಿ ವಿವೇಚಿಸುತ್ತಿರುವ ಪದ್ಯಕ್ಕೆ ಮೊದಲೇ ಹನುಮ ಕಂಡ ಸೀತಾವರ್ಣನೆಗೆ ಹಲವಾರು ಪದ್ಯಗಳನ್ನೇ ಕವಿ ಮೀಸಲಿಟ್ಟಿದ್ದಾರೆ. ಆ ಪದ್ಯಗಳ ಭಾವವಿನೂತ್ನತೆಯ ಸೊಗಸು ಮನನೀಯವಾಗಿದೆ.

⦁ ಪ್ರಳಯಜಲಧಿಯಲ್ಲಿನ ಬಾಡಬಾಗ್ನಿಯ ವೃಕ್ಷಮೂಲದ ಭೀಕರಪ್ರದೇಶದಲ್ಲಿ ಸೋಮಕಾಸುರನು ಬಂದಾಗ ಕಳವಳಪಡುತ್ತಿದ್ದ ತ್ರಯೀಕಾಂತೆಯಂತೆ ಇದ್ದಳು (ವೇದಸ್ವರೂಪಿಣಿಯಾದ ಸೀತೆ).
⦁ ಹಿರಣ್ಯಾಕ್ಷನು ಭೂಮಿಯನ್ನು ಚಾಪೆಯಂತೆ ಸುತ್ತಿ ಕೊಂಡೊಯ್ದಾಗ, ಅವನ ಕೋರೆಗಳು ಮೈಯೆಲ್ಲಾ ಗೀಚಿ, ಮೇಲೆ, ಕೆಳಗೆ ವಾಲುತ್ತಿರುವ ಧಾರುಣೀಸುಂದರಿಯಂತಿದ್ದಳು.
⦁ ಪರಮದುರಹಂಕ್ರಿಯಾಶಿಖಾಭಾಸುರನಾಗಿ ತಾನೇ ಸರ್ವೇಶ್ವರನೆಂದು ತರ್ಜನೆಮಾಡುವ ಹಿರಣ್ಯಕಶಿಪುವಿನ ಸಭಯೆಲ್ಲಿ, ಸರ್ವಪ್ರಳಯಭೀತಿಯನ್ನು ಕಾಣುವ ವಿಷ್ಣುಭಕ್ತೆಯಂತಿದ್ದಳು.
⦁ ಬಲೀಂದ್ರನ ರಾಜ್ಯಭಾರದಲ್ಲಿ ತೃಣದಂತೆ ಕೃಶೀಭೂತವಾದ ಸ್ವರ್ಗಲಕ್ಷಿಯಂತಿದ್ದಳು.
⦁ ಉಂಡಮನೆಗೆ ಎರಡು ಬಗೆಯುವ ಕಾರ್ತವೀರ್ಯನ ಪರಾಕ್ರಮಕ್ಕೊಳಗಾಗಿ ’ಅಂಬಾ’ ಎಂದು ಭಯಪಟ್ಟು ಅರಚುವ ಆತಿಥ್ಯದೇವತೆಯಂತೆ (ಕಾಮಧೇನು) ಇದ್ದಳು.
⦁ ನಲ್ದೆಸೆಯಲ್ಲೂ ವಿಪರೀತವಾಗಿ ಅಗೆಯುವಂತೆ ಬೀಸುವ ಗಾಳಿಗೆ ಜಲಚರಗಳು ಮಟ್ಟದಿಂದ ಮೇಲೆದ್ದು ವಾರಿಬಂಧವನ್ನು ಚೂರುಚೂರಾಗಿಸಿದಾಗ ಆ ಬಿಂದುಸಮೂಹಭಾವವೇ ದೈನ್ಯಮೂರ್ತಿಯಾಗಿ ತೇಲಾಡುವ ತಟಾಕವೋ ಎಂಬಂತಿದ್ದಳು.

ಹನುಮಂತನಿಗೆ ಸೀತೆ ಹೀಗೆಲ್ಲ ಕಂಡಳು ಎಂಬಂಥ ನವೀನ ಕಲ್ಪನೆಗಳನ್ನು ಮಾಡಿಯೂ ಕವಿಗೆ ತೃಪ್ತಿಯಿಲ್ಲ. ಪ್ರಸ್ತುತ ನಾವು ಗಮನಿಸುತ್ತಿರುವ ಪದ್ಯದಲ್ಲಿ ಮತ್ತೂ ಹೊಸರೀತಿಯ ಕಲ್ಪನೆ ಗರಿಗೆದರಿದೆ.

ಮಾರುತಿ ದೂರದಿಂದ ನೋಡಿದ. ಆಕೆಯ ಆಕಾರ ರಾಮಚಂದ್ರನ ವಿರಹವೇ ಮೈವೆತ್ತಂತೆ ಇತ್ತು. (ಶ್ರೀರಾಮನೆಂದರೆ ಯಾರೋ ನನಗೆ ಸಂಪೂರ್ಣವಾಗಿ ತಿಳಿದಿದೆಯೆಂದು ಭಾವಿಸಿದ್ದೆ. ಈಕೆಯನ್ನು ನೋಡಿ, ನನಗೇನೇನೂ ತಿಳಿದಿರಲಿಲ್ಲ ಎಂದು ಈಗ ಅರ್ಥವಾಯಿತು. ಸೀತೆಯನ್ನು ಅರ್ಥಮಾಡಿಕೊಳ್ಳದೆ ಶ್ರೀರಾಮನು ಪೂರ್ಣವಾಗಿ ಅರ್ಥವಾಗುವುದಿಲ್ಲ – ’ಸೀತನೆರುಂಗಕುಂಡ ರಘುಶೇಖರುಡರ್ಥಮುಗಾಡು ಪೂರ್ತಿಗಾ’ ಎಂದು ಹನುಮನೇ ಮುಂದೆ ಹೇಳುತ್ತಾನೆ). ಇನ್ನು ಸೀತೆ, ರಾಮಚಂದ್ರನ ವಿರಹಾಕೃತಿಯಾಗಿ, ಒಂದು ವಿಯೋಗಭಾವದ ಮುದ್ದೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನು? ಸೀತಾರಾಮರ ಪರಸ್ಪರಾನುಬಂಧ ಆ ರೀತಿಯದು. ಹತ್ತಿರಕ್ಕೆ ಬಂದು ಮುಖವನ್ನು ಕಂಡಾಗ, ಆಕೆಯ ಹುಬ್ಬುಗಳೆರಡೂ ಸೇರಿ ರಾಮಸ್ವಾಮಿಯ ಧನಸ್ಸೇನೋ ಎನ್ನುವಂತಿದ್ದವು. ಕೃಪಾಸಮುದ್ರನಾದ ಶ್ರೀರಾಮನ ಕೃಪೆಯಲ್ಲವೂ ಸೀತೆಯ ಕಣ್ಣುಗಳಲ್ಲಿ ಗೂಡುಕಟ್ಟಿಕೊಂಡಿದೆಯೋ ಎನ್ನುವಂತೆ ಆಕೆಯ ಕಣ್ಣುಗಳಲ್ಲಿ ಕೃಪಾಕಾರವೆಂಬುದು, ದಾಂಪತ್ಯೇಕತ್ವಭಾವನಾಸೂಚಕ. ಆಕೆಯ ದಟ್ಟವಾದ ಕೇಶಪಾಶ, ಅದರ ನೀಲವರ್ಣಚ್ಛಾಯೆ, ನೀಲ ಮೇಘಶ್ಯಾಮನಾದ ರಾಮನ ದೇಹಾಕೃತಿಯನ್ನೇ ಹೋಲುತ್ತಿದೆ. ಅಥವಾ, ಶ್ರೀರಾಮನ ದೇಹವರ್ಣ ಸೀತೆಯ ಕೇಶಗಳಲ್ಲಿ ಸೇರಿಕೊಂಡಿತೋ ಎನ್ನಬಹುದೇ? ಸೀತೆ ಧರ್ಮಸ್ವರೂಪಿಣಿ. ಆಕೆಯ ದೇಹಸರ್ವಸ್ವವೂ ರಘುವಂಶಮೌಳಿಯ ಧರ್ಮಾಕೃತಿಯೇನೋ ಎನ್ನುವಂತಿತ್ತು. ಸಲಕ್ಷಣರಘುವಂಶದ ಧರ್ಮದಂತೆಯೇ ಆಕೆಯ ದೇಹವೂ ಸಲಕ್ಷಣವಾದದ್ದು. ರಾಮನ ಪ್ರತಿಜ್ಞೆಯೇ ದೃಢವಾಗಿ ಅಲ್ಲಿ ಕುಳಿತಿದೆಯೇನೋ ಎನ್ನುವಂತೆ, ಆಕೆ ಕುಳಿತ ಭಂಗಿಯ ರೀತಿ, ರಾವಣನ ನಿರ್ಮೂಲಕ್ಕಾಗಿ ಗೈದ ಶ್ರೀರಾಮನ ಪ್ರತಿಜ್ಞೆಯ ನಿಶ್ಚಯದಂತೆ ನಿಶ್ಚಲವಾಗಿ, ಸುಸ್ಥಿರವಾಗಿತ್ತು.
ದೈಹಿಕವಾಗಿ ಸೀತಾರಾಮರು ಪರಸ್ಪರ ದೂರವಾಗಿದ್ದರೂ ಜೊತೆಯಲ್ಲೇ ಇದ್ದಾರೆ ಎನ್ನುವ ಆಲೋಚನೆ ಹೊಸತು.

ಹುಬ್ಬುಗಳನ್ನು ಬಿಲ್ಲಿಗೂ, ಹೆರಳ ಸೌಂದರ್ಯವನ್ನು ಕಪ್ಪಾದ ದುಂಬಿಗೂ ಹೋಲಿಸುವುದು ಸಾಮಾನ್ಯವಾದರೂ, ಸೀತೆಯ ಹುಬ್ಬುಗಳು ರಾಮನ ಧನಸ್ಸು, ಕುರುಳಬಣ್ಣ ರಾಮನ ಶರೀರಕಾಂತಿ ಎನ್ನುವುದು ಅಸಾಮಾನ್ಯವಾದ ಹೋಲಿಕೆ. ಅಲ್ಲದೆ ಶ್ರೀರಾಮನ ಬಿಲ್ಲಿನಂಥ ಆ ಹುಬ್ಬುಗಳು ಗಂಟಿಕ್ಕಿ, ಆಕೆ ಕೋಪಗೊಂಡರೆ ರಾವಣನ ನಾಶವೂ ಖಚಿತ ಎಂಬ ಧ್ವನಿಯೂ ಅಲ್ಲಿದೆ. ಕಣ್ಣು, ಹುಬ್ಬು, ಹೆರಳನ್ನು ವರ್ಣಿಸಿ ದೇಹವೆಲ್ಲಾ ಧರ್ಮಾಕಾರವೆನ್ನುವುದೂ, ಕುಳಿತ ಭಂಗಿಯನ್ನುನೋಡಿದರೆ ರಾಮನ ಪ್ರತಿಜ್ಞೆಯು ನೆನಪಿಗೆ ಬರುವುದೆನ್ನುವುದೂ ಸಾಮನ್ಯಕವಿಗಳು ಮಾಡಲಾಗದ ಕಲ್ಪನೆ. ಇದೊಂದು ಸೀತಾರಾಮರ ಅದ್ವೈತವನ್ನು ನಿರೂಪಿಸುವ ಪದ್ಯ. ಅದ್ವೈತತತ್ತ್ವವನ್ನು ಗೂಢವಾಗಿ ಹೇಳುವ ವಿಶ್ವನಾಥರ ಇಂಥ ಕಲ್ಪನೆಗಳು ಕಲ್ಪವೃಕ್ಷದಲ್ಲಿ ಸಾಕಷ್ಟಿವೆ.

ಅವಧಾನವಿದ್ಯೆಯಲ್ಲಿ ಅಪ್ರತಿಮರೆನಿಸಿದ್ದ ತಿರುಪತಿ-ವೇಂಕಟೇಶ್ವರಕವಿಗಳಲ್ಲಿ ಒಬ್ಬರಾದ, ಚೆಳ್ಳಪಿಳ್ಳ ವೇಂಕಟಶಾಸ್ತ್ರಿಗಳು ವಿಶ್ವನಾಥ ಸತ್ಯನಾರಾಯಣರ ಗುರುಗಳು. ಅವರು ತಮ್ಮ ಶಿಷ್ಯನನ್ನು ಕುರಿತು ಹೇಳಿದ ಪದ್ಯವಿದು.

“ನಾ ಮಾರ್ಗಮ್ಮುನು ಕಾದು, ವೀನಿ ದರಯನ್ ನಾ ತಾತ ಮುತ್ತಾತಲಂ
ದೇ ಮಾರ್ಗಮ್ಮುನು ಕಾದು; ಮಾರ್ಗಮದಿಯಿಂಕೇದೋ ಯನಂಗಾ ವಲೆನ್|
ಸಾಮಾನ್ಯುಂಡನರಾದು ವೀನಿ ಕವಿತಾ ಸಮ್ರಾಟ್ವ್ತ ಮಾ ಹೇತುವೈ,
ಯೀ ಮಚ್ಛಿಷ್ಯುನಿ ದಾ ವರಿಂಚಿನದಿ, ನೇನೆಂತೇ ಮುದಂಬಂದೆದನ್||” *

“ಇವನ ಕವಿತ್ವಮಾರ್ಗ ನನ್ನದಲ್ಲ. ಹಾಗೆ ನೋಡಿದರೆ ನನ್ನ ತಾತ ಮುತ್ತಾತರದೂ ಅಲ್ಲ. ಪೂರ್ವದ ಯಾವ ಕವಿಗಳದ್ದೂ ಅಲ್ಲ. ಇವನ ಕವಿತಾಮಾರ್ಗ ಬೇರೆಯೇ ಎನ್ನಬೇಕಾಗಿದೆ. ಇವನು ಸಾಮಾನ್ಯನಲ್ಲ. ಆ ಕಾರಣದಿಂದಲೇ ಈ ಕವಿಸಮ್ರಾಟ್ ಪಟ್ಟ ನನ್ನ ಶಿಷ್ಯನನ್ನು ವರಿಸಿದೆ. ನನಗದೆಷ್ಟು ಸಂತೋಷವೋ!”

ಆ ನಂತರದ ತೆಲುಗಿನ ಆಧುನಿಕ ಮಹಾಕವಿ ಶ್ರೀಶ್ರೀ, ಹಲವು ಸಂದರ್ಭಗಳಲ್ಲಿ ಕಟುವಾಗಿ ವಿಮರ್ಶಿಸಿದ್ದರೂ ವಿಶ್ವನಾಥರನ್ನು ಕುರಿತು ಒಮ್ಮೆ ಹೇಳಿದ್ದು ಹೀಗೆ.

“ಮಾಟ್ಲಾಡೇ ವೆನ್ನೆಮುಕ
ಪಾಟ ಪಾಡೇ ಸುಷುಮ್ನ
ನಿನ್ನಟಿ ನನ್ನಯಭಟ್ಟು
ನೇಟಿ ಕವಿ ಸಾಮ್ರಾಟ್ಟು
ಗೋದಾವರಿ ಪಲುಕರಿಂತ
ಕೃಷ್ಣಾನದಿ ಪುಲಕರಿಂತ
ಕೊಂಡವೀಟಿ ಪೊಗಮಬ್ಬು
ತೆಲುಗುವಾಳ್ಳ ಗೋಲ್ಡುನಿಬ್ಬು
ಅಕಾರಾದಿ ಕ್ಷಕಾರಾಂತಂ
ಆಸೇತು ಮಹಿಕಾವಂತಂ
ಅತಗಾಡು ತೆಲುಗುವಾಡಿ ಆಸ್ತಿ
ಅನವರತಂ ತೆಲುಗುವಾಡಿ ಪ್ರಕಾಸ್ತಿ
ಛಂದಸ್ಸು ಲೇನಿ ಈ ದ್ವಿಪದ
ಸತ್ಯಾನಿಕಿ ನಾ ಉಪದ.”

(ಕನ್ನಡ ರೂಪ)

(“ಮಾತನಾಡುವ ಬೆನ್ನೆಲುಬು
ಹಾಡು ಹೇಳುವ ಸುಷುಮ್ನ
ನಿನ್ನೆಯ ನನ್ನಯಭಟ್ಟ
ಇಂದಿನ ಕವಿಸಾಮ್ರಾಟ
ಗೋದಾವರಿ ಮಾತನಾಡಿಸಿದಂತೆ
ಕೃಷ್ಟಾನದಿ ಪುಳಕಗೊಂಡಂತೆ
ಕೈಲಾಸಶಿಖರದ ಹೊಗೆಮಬ್ಬು
ತೆಲುಗರ ಗೋಲ್ಡು ನಿಬ್ಬು
ಅಕಾರಾದಿ ಕ್ಷಕಾರಾಂತ
ಆಸೇತು ಮಹಿಕಾವಂತ
ಆತ ತೆಲುಗಿನವನ ಆಸ್ತಿ
ಅನವರತ ತೆಲುಗಿನವನ ಪ್ರಕಾಸ್ತಿ
ಛಂದಸ್ಸಿಲ್ಲದ ಈ ದ್ವಿಪದ
ಸತ್ಯಕ್ಕೆ ನನ್ನ ಉಪದ (ಕಾಣಿಕೆ)

—————————————-

*ಮಾತ್ರಾಸೀಸ|| ಮಾತ್ರಮೆನದಲ್ಲಮೀತನ ಕವಿತ್ವದ ಮಾರ್ಗಮೆನ್ನಜ್ಜಮುತ್ತಜ್ಜರದುಮಲ್ಲವು
ಚಿತ್ರಕವಿಗಳ ರೀತಿಯಲ್ಲಮೀತನ ರೀತಿಯನುಕರಿಸನಾವ ಪೂರ್ವದ ಕವಿಗಳಂ|
ಸೂತ್ರಮೀತನದನ್ಯ ಮಾರ್ಗಮೇ ಅನ್ಯಾನ್ಯ ಸಾಮಾನ್ಯರೊಳು ಗಣತಿಯಾಗನೀತಂ
ಸೌತ್ರಕವಿಯೆನಿಸಿಹೀ ನಿಜಶಿಷ್ಯನದರಿಂದೆ ಸುಕವಿಸಮ್ರಾಟಪಟ್ಟವನೈದಿಹಂ||

ಆಟವೆಲದಿ|| ತೋಷನ್ನದುಂಟೆ ಮೇರೆಯು ಪೇಳು ಪೀ-
ಯೂಷಪಾನಸಮವು ಛಾತ್ರಭಾಗ್ಯಂ|
ಭೂಷಣಪ್ರಾಯರುಮೀಪರಿಯ ಶಿಷ್ಯರುಮಲ್ತೆ
ಶೇಷಗುರುಗಳಿಂಗೀ ಭಾಗ್ಯಮುಂಟೆ||) (ಪದ್ಯಾನುವಾದ: ಹಾದಿರಂಪ)

ಈ ಪದ್ಯಪರಿಚಯದ ಕರಡನ್ನು ಶೋಧಿಸಿದ್ದಲ್ಲದೆ, “ನಾ ಮಾರ್ಗಮ್ಮುನು ಕಾದು…” ಸೀಸಪದ್ಯವನ್ನು ಕನ್ನಡಿಸಿ, ಮೇಲೊಂದು ಆಟವೆಲದಿಯ ಸೊಂಪನ್ನೂ ತೊಡಿಸಿ ನೆರವಾದ “ಹಾದಿರಂಪ” ರಿಗೆ ನಾನು ಋಣಿಯಾಗಿದ್ದೇನೆ.

Jun 092017
 

ಸೀ || ಕಡಚಿನ ಯಾಮಿನಿ ಪಿಡುಗುವಡ್ಡ ಸಗಂಬು
ಮಾcಡಿನ ತಲಯೈನ ಮದ್ದಿಚೆಟ್ಟುc
ಬೋಲಿನದಾನಿನಿ, ಮುಂಚೆತ್ತು ವಾನಲು
ಸಗಮುಲೋ ವಚ್ಚಿನಂ ಜಲ್ಲನಾರಿ
ಪೋಯಿನ ಕಾಷ್ಠಂಬುc ಬೋಲಿನ ದಾನಿನಿ,
ಗಹನಂಬುಲೋc ಗುಂಟಗಟ್ಟುಲೋನ
ಮಟ್ಟಲೆಂಡಿ ಜಲಾನ ಮಾcಗಿನ ಚಿಟ್ಟೀತc
ಬೋಲಿನದಾನಿನಿ, ಸೋಲುದಾನಿ

ತೇ|| ನೆಡಪೆಡಗ ವಾಯುವುಲು ವೀವನಿಟ್ಲು ವಚ್ಚು
ವಾಯುವುನ ವಂಗುಚುನು ನಟ್ಲುವಚ್ಚು ವಾಯು
ಪೂರಣಮುನ ನಾcಗುಚು ನಾcಗಿ ಮೊರಯುಚುನ್ನ
ವೇಣುವಲ್ಮೀಕ ಗುಲ್ಮಂಬುc ಬೋನಿದಾನಿ

(ಕಳೆದಿರುಳು ಬಡಿದ ಸಿಡಿಲಿಂಗೆ ಸುಟ್ಟರಬರೆಯೆ
ತಲೆಬಾಡಿದಂತಿರ್ಪ ಮತ್ತಿ ಯಿವಳೋ !
ನೆಲನ ಮುಳುಗಿಪಧಾರೆ ಮಳೆಗೆರೆಯಲಾ ಕಾಷ್ಠ
ಜ್ವಲಿಸುತರ್ಧಕೆ ಬೆಂಕಿಯಾರ್ದುದೇನೋ!
ಒಳಗೆಲ್ಲೊ ಕಾಡುಕುಂಟೆಯದಡದೆರೆಂಕೆಗಳು
ಜಲದಿ ಪಣ್ಣಾಗಿಳಿದ ಗುಜ್ಜೀಚಲೋ
ಸುಳಿಗಾಳಿಯಿರ್ಕಡೆಗೆ ಬೀಸಲತ್ತಿತ್ತಲುಲಿ
ದಲೆವ ವಲ್ಮೀಕವಂಶಮೊ ತಾನಿವಳ್)

( ಕನ್ನಡಕ್ಕೆ ಪದ್ಯಾನುವಾದಮಾಡಲು ತೊಡಗಿದಾಗ, ಭಾವವನ್ನು ಹಿಡಿದಿಡಲು ತೇಟಗೀತಿಯ ಭಾಗದ ಛಂದಸ್ಸು ಹೆಚ್ಚಾಗಿ, ಸೀಸಪದ್ಯವು ಸಾಲದಾಯಿತು ! ಆದರೂ ಸೀಸಪದ್ಯಕ್ಕೇ ಸೀಮಿತಗೊಳಿಸಿದೆ)

ಈ ಪದ್ಯ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ವಿರಚಿತ ಶ್ರೀಮದ್ರಾಮಾಯಣ ಕಲ್ಪವೃಕ್ಷದ್ದು. ನಾಲ್ಕು ಉಪಮಾನಗಳಮೂಲಕ ಯಾರನ್ನೋ ಕವಿ ವರ್ಣಿಸುತ್ತಿರುವಂತಿದೆ.

ಕಳೆದ ರಾತ್ರಿ, ಮತ್ತಿಮರದಮೇಲೆ ಸಿಡಿಲು ಬಡಿದಿದೆ. ಆದರೂ ಆ ಮರ ಪೂರ್ಣವಾಗಿ ನಾಶವಾಗಿಲ್ಲ. ಅರ್ಧ ಬೆಂದು ಸೀದಿದೆ (ಸಗಂಬು ಮಾcಡಿನ). ಗಂಭೀರವಾದ ಮತ್ತಿಮರ ಅಶನಿಪಾತದಿಂದ ಅರ್ಧಸುಟ್ಟುಹೋಗಿ, ಎಷ್ಟುವಿಕಾರವಾಗಿ ಕಾಣಬಹುದೋ ಅಂಥ ಅವಲಕ್ಷಣ ಅವಳಲ್ಲಿ ಕಾಣುತ್ತಿದೆ. ಎರಡೆನೆಯ ಹೋಲಿಕೆ : ಕಾಡಿನಲ್ಲೋ, ಸ್ಮಶಾನದಲ್ಲೋ ಧಾರಾಕಾರವಾಗಿ ಮಳೆಸುರಿದು, (ಚಿತೆಯಮೇಲೋ, ಕಾಳ್ಗಿಚ್ಚಿನಭಾಗವಾಗಿಯೋ) ಉರಿಯುತ್ತಿದ್ದ ಕಾಷ್ಠ ಅರೆಬರೆಯಾಗಿ ಸುಟ್ಟು, ಅಷ್ಟಕ್ಕೇ ಆರಿನಿಂತಹಾಗೆ (ಜುಗುಪ್ಸಾಕರವಾಗಿ) ಕಾಣುತ್ತಿದ್ದಾಳೆ. ಮೂರನೆಯ ಉಪಮೆ: ಅಡವಿಯಲ್ಲಿ ಅಲ್ಲಲ್ಲಿ ನೀರುನಿಂತ ಕುಂಟೆಗಳಿರುತ್ತವೆ. ಅಂಥ ಕುಂಟೆಯ ದಡದಲ್ಲೊಂದು ಈಚಲು ಮರ. ನೀಳವಾಗಿ ಬೆಳದದ್ದಲ್ಲ. ಪೊದೆಯಂತೆ ಬೆಳೆದ ಗುಜ್ಜಲೀಚು (ಚಿಟ್ಟೀತ), ನೀರಿನಲ್ಲಿ ನೆನೆದು ಮಾಗಿ, ತನ ಒಣಗಿ ಬಗ್ಗಿದ ರೆಕ್ಕೆಗಳಿಂದ ನಿಂತಂತೆ ಇವಳು, ಎಷ್ಟು ಅಸಹ್ಯವಾಗಿ ಕಾಣಬಹುದೋ ಹಾಗೆ ತೋರುತ್ತಿದ್ದಾಳೆ. ನಾಲ್ಕನೆಯ ಹೋಲಿಕೆ : ಕಾಡಿನಲ್ಲೊಂದು ಬಿದುರುಮೆಳೆ. ಹುತ್ತದಮೇಲೆ, ಅಷ್ಟೇನೂ ಎತ್ತರವಲ್ಲದ ಪೊದೆಯಂತೆ ಬೆಳೆದು, ಅಡ್ಡವಾಗಿ ಅತ್ತಲಿಂದ ವೇಗವಾಗಿ ಬೀಸುವ ಗಾಳಿಗೆ ಅತ್ತಕಡೆಗೆ ಬಗ್ಗಿ, ಇತ್ತಲಿಂದ ಬೀಸುವ ಗಾಳಿಗೆ ಇತ್ತಬಗ್ಗಿ, ಪರಸ್ಪರ ಘರ್ಷಣೆಯಿಂದ ವಿಚಿತ್ರ ಶಬ್ದಗಳನ್ನು ಹೊರಡಿಸುತ್ತಾ ಊಳಿಡುತ್ತಿದೆ.(ಅದು ವೇಣುವಲ್ಮೀಕ ಗುಲ್ಮವಾದರೂ ಕಣ್ಣನ್ನು ತಣಿಸುವ ದೃಶ್ಯವೇನಲ್ಲ).

ಈ ಕವಿಗೆ ಪದ್ಯನಿರ್ಮಾಣದ ವಿಷಯದಲ್ಲಿ, ಒಂದು ಸೊಗಸಾದ ಪದವನ್ನು ಇಲ್ಲಿತಂದು ಸಿಂಗರಿಸೋಣ ಎಂಬ ನಕಾಸೆಯ ಪ್ರವೃತ್ತಿಯಿಲ್ಲ. “ನನ್ನ ಚೈತನ್ಯ ನಿತ್ಯ ವೇಗಿಯಾದದ್ದು – ಶಬ್ದಗಳನ್ನು ಆಯ್ದು ಕೂರಿಸಲು ಅದು ನಿಲ್ಲದು” ಎಂದು ಕವಿಯೇ ಹೇಳಿಕೊಂಡಿದ್ದಾನೆ (“ನಿತ್ಯವೇಗಿ ನಾ ಚೇತಮು – ಶಬ್ದಮೇರುಟಕು ನಿಲ್ವದು”). ಎದೆಯಾಳದಿಂದ ಭಾವಗಳು ಧುಮುಕಿ ಹರಿದು, ತನ್ನನ್ನೇ ಸೇವಿಸುವ ಛಂದಸ್ಸು, ಆ ಭಾವಗಳನ್ನು ಗಣಗಳ, ಯತಿಪ್ರಾಸಗಳ ಮಧ್ಯೆ ನಿಲ್ಲಿಸಿಕೊಳ್ಳುವ ವಿಶ್ವನಾಥಕವಿತ್ವದಲ್ಲಿ ಪದಶಯ್ಯೆ, ಪದ್ಯಧಾರೆಗಿಂತಲೂ ರಸವೇ ಪ್ರಧಾನವಾಗಿ ಕಂಡುಬರುತ್ತದೆ ಎನ್ನಬಹುದು. ಪದ್ಯಗಳ ಸೊಗಸನ್ನು ಪಕ್ಕಕ್ಕಿಟ್ಟು ಓದುತ್ತಿದ್ದರೆ ಆತನ ಮಹಾದ್ಭುತ ಕಲ್ಪನೆಗಳು ಬಿಚ್ಚಿಕೊಂಡು, ಕಥಾಶಿಲ್ಪನಿರ್ಮಾಣದ ಜಾಣ್ಮೆ ಕಾಣದಿರದು. ಸಂಭಾಷಣೆಗಳಲ್ಲಿನ ವ್ಯಾವಹಾರಿಕ ರೀತಿ ಛಂದೋಬದ್ಧವಾಗಿ ರೂಪುಗೊಳ್ಳುವುದು, ತೆಲುಗರ ಆಚಾರ, ಅಭ್ಯಾಸ, ನುಡಿಗಟ್ಟುಗಳನ್ನು ಪದ್ಯಗಳಲ್ಲಿ ಮೂಡಿಸುವುದು, ಚಿತ್ರವಿಚಿತ್ರವಾದ ಉಪಮಾನಗಳನ್ನು ಸೃಷ್ಟಿಸುವುದು ಈ ಕವಿಯ ಪ್ರತ್ಯೇಕತೆ. ಮೇಲಿನ ಪದ್ಯ ಆ ರೀತಿಯದ್ದೇ. ಈ ಉಪಮಾನ ಪೂರ್ತಿಯಾಗಿ ವಿಶ್ವನಾಥಸೃಷ್ಟಿಯೇ ಹೊರತು ವಾಲ್ಮೀಯದ್ದಲ್ಲ. ಇದು ವಾಲ್ಮೀಕಿ ಪ್ರಯೋಗಿಸಿದ ಒಂದು ಪದವನ್ನು ಹಿಡಿದು ವಿಸ್ತರಿಸಿದ ಕಲ್ಪನೆ.

ಮೂಗು ಕಿವಿಗಳನ್ನು ಕಳೆದುಕೊಳ್ಳುವ ಮುನ್ನ  ಶೂರ್ಪಣಖೆಯನ್ನು ವಾಲ್ಮೀಕಿ, – “ದಾರುಣಾ, ವೃದ್ಧಾ, ಭೈರವಸ್ವರಾ, ದುರ್ವೃತ್ತಾ, ಅಪ್ರಿಯದರ್ಶಿನೀ, ಕಾಮಮೋಹಿತಾ, ಅಸತೀಂ, ಅತಿಮತ್ತಾಂ, ಮಹೋದರೀಂ, ರಾಕ್ಷಸೀಂ – ಹೀಗೆ ವರ್ಣಿಸುತ್ತಾರೆ.  “ಉದ್ಧೃತ್ಯ ಖಡ್ಗಂ ಚಿಚ್ಚೇದ ಕರ್ಣನಾಸಂ ಮಹಾಬಲಃ ” ಕುಪಿತನಾದ ಲಕ್ಷಣ ಅವಳ ಮೂಗು ಕಿವಿಗಳನ್ನು ಕೊಯ್ದ. “ನಿಕೃತ್ತಕರ್ಣನಾಸಾ ತು ವಿಸ್ವರಂ ಸಾ ವಿನದ್ಯ ಚ /ಯಥಾಗತಂ ಪ್ರದುದ್ರಾವ ಘೋರಾ ಶೂರ್ಪಣಖಾ ವನಮ್- ಘೋರಳಾದ ಆ ಶೂರ್ಪಣಖೆ ಕರ್ಣನಾಸಛೇದಿತಳಾಗಿ, ವಿಕೃತಸ್ವರಗಳಿಂದ ಅರಚಿಕೊಂಡು ಕಾಡಿನೊಳಕ್ಕೆ ಓಡಿದಳು.

ಸಾ ವಿರೂಪಾ ಮಹಾಘೋರಾ ರಾಕ್ಷಸೀ ಶೋಣಿತೋಕ್ಷಿತಾ
ಸನಾದ ವಿವಿಧಾನ್ ನಾದಾನ್ ಯಥಾ ಪ್ರಾವೃಷಿ ತೋಯದಃ ||

ಸಾ ವಿಕ್ಷರನ್ತಿ ರುಧಿರಂ ಬಹುಧಾ ಘೋರದರ್ಶನಾ
ಪ್ರಗೃಹ್ಯ ಬಾಹೂ ಗರ್ಜನ್ತೀ ಪ್ರವಿವೇಷ ಮಹಾವನಮ್ ||

ವಿರೂಪ ಭಯಂಕರ ರಕ್ತಸಿಕ್ತಳಾಗಿ ಆ ರಕ್ಕಸಿ ವರ್ಷಕಾಲದ ಮೇಘಗಳಂತೆ ಅನೇಕವಿಧವಾದ ಧ್ವನಿಗಳನ್ನು ಹೊಮ್ಮಿಸಿ ಅರಚಿದಳು. ನೋಡಲು ಭಯಂಕರಳಾದ ಅವಳು ಅನೇಕ ವಿಧವಾಗಿ ರಕ್ತವನ್ನು ಸುರಿಸುತ್ತಾ ತೋಳುಗಳನ್ನು ಹಿಡಿದು ಗರ್ಜಿಸುತ್ತಾ ಮಹಾರಣ್ಯವನ್ನು ಪ್ರವೇಶಿದಳು. ವಿಶ್ವನಾಥರೂ ಇದನ್ನು ಹೇಳುತ್ತಾರೆ. ಕುವೆಂಪು ಈ ಸಂದರ್ಭವನ್ನು ” ಸಿಡಿದಳಂಬರಕೊಡನೆ ವರ್ಷಾಭ್ರವೇಷದಿಂ ರೋಷರವದಿಂದಶನಿಘೋಷದಿಂ, ನೆಲಂ ನಡುಗಿ ಗುಡುಗೆ ಗಿರಿಗಹ್ವರಂ” ಎಂದಿದ್ದಾರೆ.

ವಿಶ್ವನಾಥರ ನವಸೃಷ್ಟಿ, ಮೂಗು ಕಿವಿಗಳನ್ನು ಕತ್ತರಿಸಿದಮೇಲೆ ಶೂರ್ಪಣಖೆ ಹೇಗೆ ಕಂಡಳು ಎಂಬುದರ ಚಿತ್ರಣ  (ಅರಣ್ಯಕಾಂಡ – ಪಂಚವಟೀ ಖಂಡ).

ಅವಳು ತನ್ನ ಸೋದರ ಖರನ ಬಳಿಗೆ ಹೋದಾಗ, ನಿನ್ನನ್ನು ಹೀಗೆ ವಿರೂಪಗೊಳಿಸಿದವರು ಯಾರು? (ಕೇನ ತ್ವಮ್ ಏವಂರೂಪಾ ವಿರೂಪಿತಾ) ಎಂದ ಖರ, ತನ್ನ ತಪ್ಪನ್ನು ಮುಚ್ಚಿಟ್ಟು ತಂಗಿ ಹೇಳಿದ ವಿಷಯವನ್ನು ಕೇಳಿ, ಹದಿನಾಲ್ಕುಮಂದಿ ಯೋಧರನ್ನು ರಾಮನಮೇಲೆ ಯುದ್ಧಕ್ಕೆ ಹರಿಯಬಿಟ್ಟ. ರಾಮನಿಂದ ಅವರು ಹತರಾದಾಗ, ಶೂರ್ಪಣಖೆ ನೆಲಕ್ಕುರುಳಿದ ಆ ರಾಕ್ಷಸರನ್ನು ನೋಡಿ ಕ್ರೋಧದಿಂದ ಮೂರ್ಛಿತಳಾಗಿ, ಭಯದಿಂದ ನಡುಗುತ್ತಾ ಭೀಕರಧ್ವನಿಗಳನ್ನು ಮಾಡುತ್ತಾ ಬಂದಳು ( ತಾನ್ ದೃಷ್ಟ್ವಾ ಪತಿತಾನ್ ಭೂಮೌ ರಾಕ್ಷಸೀ ಕ್ರೋಧಮೂರ್ಛಿತಾ | ಪರಿತ್ರಸ್ತಾ ಪುನಸ್ತತ್ರ ವ್ಯಸೃಜದ್ಭೈರವಸ್ವನಾನ್ ||), ಹಾಗೆ ಬಂದ ಅವಳನ್ನು ವಾಲ್ಮೀಕಿ ವರ್ಣಿಸುವುದು ಹೀಗೆ :

ಸಾ ನದಂತೀ ಮಹಾನಾದಂ ಜವಾತ್ ಶೂರ್ಪಣಖಾ ಪುನಃ |
ಉಪಗಮ್ಯ ಖರಂ ಸಾ ತು ಕಿಂಚಿತ್ ಸಂಶುಷ್ಕಶೋಣಿತಾ ||
ಪಪಾತ ಪುನರೇವಾರ್ತಾ ಸನಿರ್ಯಾಸೇವ ಸಲ್ಲಕೀ (ಅರಣ್ಯ: ಸ೨೦/ ಶ್ಲೋ೨೨-೨೩)

ಮೂಗು ಕಿವಿಗಳು ಕೊಯ್ದು ಸುರಿಯುತ್ತಿದ್ದ ರಕ್ತ ಸ್ವಲ್ಪ ಒಣಗಿ, ಗಾಯ ಕರಕಲಾಗಿ, ಅಂಟಿನಿಂದ ಕೂಡಿದ ಸಲ್ಲಕೀ ಮರದಂತೆ (ಸ ನಿರ್ಯಾಸ ಇವ ಸಲ್ಲಕೀ) ಖರನಮುಂದೆ ಬಂದು ನೆಲಕ್ಕುರುಳಿದಳಂತೆ. “ಸನಿರ್ಯಾಸೇವ ಸಲ್ಲಕೀ” – ಅಂಟಿನಿಂದ ಕೂಡಿದ ಸಲ್ಲಕೀ ಮರ ( Strychnos potatorum, ಚಿಲ್ಲ, ಚಿಲದೇಮರ,ನಿರ್ಮಾಲಿ ಮರ) ಎಂಬ ಪದವನ್ನು ಹಿಡಿದು, ವಿಶ್ವನಾಥರು ಒಂದು ಅಪೂರ್ವ ಕಲ್ಪನೆಯನ್ನುಇಲ್ಲಿ ಮಾಡಿದ್ದಾರೆ. ಈ ಸೀಸಪದ್ಯ ಕರ್ಣನಾಸಿಕಾಚ್ಛೇದದನಂತರ ಶೂರ್ಪಣಖೆಯ ಆಗಿನ ಸ್ಥಿತಿಯ ಛಾಯಾಚಿತ್ರವನ್ನು ತೆಗೆದಿದೆ. ಘೋರವಾದ ಸಿಡಿಲು ಬಡಿದು ಅರ್ಧಸುಟ್ಟ ಮತ್ತಿಮರ, ಅರೆಬರೆ ಸುಟ್ಟ ಮರದ ದಿಮ್ಮಿ, ರೆಕ್ಕೆಯೊಣಗಿ ಕುಂಟೆಯತ್ತ ಬಗ್ಗಿ, ಹಣ್ಣಾದ ರೆಕ್ಕೆಗಳ ಗುಜ್ಜು ಈಚಲು, ಹುತ್ತದಿಂದ ಹೊರಬಂದು ಗಾಳಿಗೆ ಊಗುತ್ತಾ ಕಿವಿಗೆ ಅಹಿತವಾದ ಶಬ್ದಗಳನ್ನು ಮಾಡುವ ಬಿದರಮೆಳೆ, ಎದೆ ಝಲ್ಲೆನುವ ಈ ಉಪಮಾನಗಳು ವಿಶ್ವನಾಥರ ಅಪೂರ್ವ ಕಲ್ಪನೆ ! ಮೂಲದ ರಸದೃಷ್ಟಿಗೆ ಕುಂದುಬರದಂತೆ ಅದರ ಒಂದು ಕಿರುನುಡಿಯನ್ನೇ ಹಿಡಿದು, ತನ್ನದೇ ಪ್ರತ್ಯೇಕ ಕಲ್ಪನೆಯಾದರೂ ಮೂಲದ ಆಶಯವನ್ನು ಅಲಂಕರಿಸಿ ವಿಸ್ತರಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ತನ್ನ ಕಲ್ಪನಾದೃಷ್ಟಿ ಪ್ರಸರಿಸದ ಪ್ರಪಂಚವೇ ಇಲ್ಲವೆನ್ನುವಷ್ಟರ ಮಟ್ಟಿಗೆ ವಿಶ್ವನಾಥರ ಬಹುಮುಖ ವೈದುಷ್ಯ, ವಿಸ್ತೃತಿ ಮತ್ತು ಸಾಮರ್ಥ್ಯ ಅವರ ಕೃತಿಗಳಲ್ಲಿ ಕಾಣುತ್ತದೆ. “ವೇದಗಳಲ್ಲಿನ ವಿಮಲಾರ್ಥಚಯವನ್ನು ವಾದಿಸುವುದೇ ನನ್ನ ಕವಿತೆ – ಅದರ ಶತ್ರುವಾಗಿ ಅರಚುವುದೇ ಈ ಜಗತ್ತು (“ವೇದಮುಲಲೋನಿ ವಿಮಲಾರ್ಥ ಚಯಮು ವಾದಿಂಚು ನಾ ಕೈತ – ದಾನಿ ಶತ್ರುವೈ ವರಲು ನೀ ಜಗಮು”) ಎಂದು ತನ್ನ ಪ್ರಾಥಮ್ಯವನ್ನು ಸ್ಪಷ್ಟಪಡಿಸಿದವರು. “ಶ್ರೀಮದ್ರಾಮಾಯಣ ಕಲವೃಕ್ಷಮು”, ವಾಲ್ಮೀಕಿಯನ್ನು ಅನುಸರಿಸಿ ಬರೆದ ರಾಮಕಥೆಯಾದರೂ, ಹಲವೆಡೆಗಳಲ್ಲಿ ಸ್ವೋಪಜ್ಞೆತೆಯಿಂದ ಕವಿ ಮಾರ್ಪಾಡುಗಳನ್ನು ಮಾಡಿದ್ದಾನೆ. ವಾಲ್ಮೀಕಿಯ ಕೈಕೆ ತನ್ನ ಮಗನಿಗೇ ರಾಜ್ಯವನ್ನು ಕೊಡಿಸಲು, ಅದಕ್ಕಾಗಿ ಏನನ್ನಾದರೂ ಮಾಡಲು ಯತ್ನಿಸುವ ಸಾಮಾನ್ಯ ಸ್ವಾರ್ಥಮಾತೆಯಾದರೆ, ವಿಶ್ವನಾಥಸೃಷ್ಟಿಯ ಕೈಕೆ ರಾಮನಿಂದ ಧರ್ಮರಕ್ಷಣೆ ಮತ್ತು ರಾಕ್ಷಸ ಸಂಹಾರ ಮಾಡಿಸುವ ಪರಮಾರ್ಥಕ್ಕಾಗಿ ಸ್ವಬುದ್ಧಿಯಿಂದಲೇ ಅಪಕೀರ್ತಿಯನ್ನು ತಲೆಯಮೇಲೆ ಹೊತ್ತವಳು. ಈ ರಹಸ್ಯ ಅವಳಿಗೆ ಮತ್ತು ರಾಮನಿಗೆ ಮಾತ್ರ ತಿಳಿದಿತ್ತಂತೆ! ಹಾಗೆಯೇ ವಾಲ್ಮೀಕಿಯಲ್ಲಿ ಪರಶುರಾಮ ಗರ್ವಭಂಗ ಸೀತಾರಾಮರ ಕಲ್ಯಾಣಾನಂತರ ನಡೆದರೆ, ವಿಶ್ವನಾಥರು, ಪರುಶುರಾಮನನ್ನು ಕಲ್ಯಾಣಾತ್ಪೂರ್ವವೇ ಪ್ರವೇಶಗೊಳಿಸುತ್ತಾರೆ. ಪರಶುರಾಮನ ಶೃಂಗಭಂಗ ನಡೆದು, ತನ್ನ ಪೂರ್ವಾವತಾರವನ್ನು ಪೂರ್ಣವಾಗಿ ಮುಗಿಸಿ, ಅವನಲ್ಲಿನ ವೈಷ್ಣವಾಂಶವನ್ನು ಶ್ರೀರಾಮ ಪೂರ್ಣವಾಗಿ ತನ್ನಲ್ಲಿ ಆವಾಹನೆ ಮಾಡಿಕೊಂಡನಂತರವೇ ಸೀತಾವಿವಾಹ ಯೋಗ್ಯತೆಯನ್ನು ಪಡೆದಂತೆ ಚಿತ್ರಿಸಲಾಗಿದೆ. ಹೀಗೆ ಎಷ್ಟೋ ಬದಲಾವಣೆಗಳು ಅವಾಲ್ಮೀಕವಾದರೂ ಅನೌಚಿತ್ಯದೋಷದಿಂದ ಮುಕ್ತವಾಗಿವೆ.

May 232017
 

ಶ್ರೀವಾಣೀ ಗಿರಿಜಾಃ ಚಿರಾಯ ದಧತೋ ವಕ್ಷೋ ಮುಖಾಂಗೇಷು ಯೇ
ಲೋಕಾನಾಂ ಸ್ಥಿತಿಮಾವಹನ್ತ್ಯವಿಹತಾಂ ಸ್ತ್ರೀ ಪುಂಸ ಯೋಗೋದ್ಭವಾಂ
ತೇ ವೇದ ತ್ರಯ ಮೂರ್ತಯಃ ತ್ರಿಪುರುಷಾಃ ಸಂಪೂಜಿತಾಃ ವಃ ಸುರೈಃ-
ಭೂಯಾಸುಃ ಪುರುಷೋತ್ತಮಾಂಬುಜ ಭವ ಶ್ರೀಕಂಧರಾಃ ಶ್ರೇಯಸೇ

ಇದೇನು ! ತೆಲುಗುಪದ್ಯದ ವಿಭಾಗದಲ್ಲಿ ಸಂಸ್ಕೃತ ವೃತ್ತವೇ ? ಹೌದು. ಇದು ಕವಿತ್ರಯರು ತೆಲುಗಿಸಿದ ಮಹಾಭಾರತದಲ್ಲಿನ ಮೊದಲ ಶ್ಲೋಕ. ತೆಲುಗಿನಲ್ಲಿ ಆದಿಕವಿ ನನ್ನಯ್ಯ ತನ್ನ ಮಹಾಭಾರತವನ್ನು ಒಂದು ಸಂಸ್ಕೃತ ಶ್ಲೋಕದಿಂದ ಪ್ರಾರಂಭಿಸಿರುವುದೊಂದು ವಿಶೇಷ. ” ತಲ್ಲಿ ಸಂಸ್ಕೃತಂಬು ಎಲ್ಲ ಭಾಷಲಕುನೂ ( ಅಮ್ಮನೇ ಸಂಸ್ಕೃತವು ನಮ್ಮೆಲ್ಲ ನುಡಿಗಳಿಗೆ) ಎಂಬ ಸಂಪ್ರದಾಯವನ್ನು ಗೌರವಿಸಿ ಕಾವ್ಯಾರಂಭದಲ್ಲೇ ತ್ರಿಮೂರ್ತಿಗಳನ್ನು ಸ್ಮರಿಸಿರುವುದು ಇಲ್ಲಿನ ವಿಶೇಷ. ಈ ಶ್ಲೋಕವಲ್ಲದೆ ಮತ್ತಾವ ಇಷ್ಟದೇವತಾಸ್ತುತಿಯನ್ನೂ ನನ್ನಯ್ಯ ರಚಿಸಿಲ್ಲ. ಅವೆಲ್ಲಾ ಮುಂದೆ ಬೆಳೆದು ಬಂದ ಸಂಪ್ರದಾಯ.

ಶ್ರೀ-ವಾಣೀ- ಗಿರಿಜಾಃ : ಲಕ್ಷ್ಮೀ ವಾಣೀ ಗಿರಿಜೆಯರನ್ನು
ಚಿರಾಯ ದಧತೋ ವಕ್ಷೋ ಮುಖಾಂಗೇಷು – ಅನಾದಿಯಿಂದ ವಕ್ಷಸ್ಥಲದಲ್ಲಿ, ನಾಲಿಗೆಯಮೇಲೆ ಮತ್ತು ಶರೀರಾರ್ಧಭಾಗವಾಗಿ ಧರಿಸಿ,
ಯೇ : ಯಾರು,
ಸ್ತ್ರೀ ಪುಂಸ ಯೋಗೋದ್ಭವಾಂಲೋಕಾನಾಂ ಸ್ಥಿತಿಮ್ ಅವಿಹತಾಂ ಆವಹಂತಿ : ಸ್ತ್ರೀ ಪುರುಷ ಸಂಯೋಗದಿಂದ ಉದ್ಭವಿಸುವ ಲೋಕಗಳ ಸ್ಥಿತಿಯನ್ನು ಅವಿಚ್ಛಿನ್ನವಾಗಿ ನಿರ್ವಹಿಸುತ್ತಿದ್ದಾರೋ,
ತೇ ವೇದತ್ರಯ ಮೂರ್ತಯಃ ತ್ರಿಪುರುಷಾಃ – ಆ ವೇದತ್ರಯ ಮೂರ್ತಿಗಳಾದ, ತ್ರಿಮೂರ್ತಿಗಳು
ಪುರುಷೋತ್ತಮ-ಅಂಬುಜ ಭವ-ಶ್ರೀಕಂಧರಾಃ – ವಿಷ್ಣು, ಬ್ರಹ್ಮ, ಪರಮೇಶ್ವರರು
ಸುರೈಃ ಪೂಜಿತಾಃ – ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಅವರು
ವಃ ಶ್ರೇಯಸೇ ಭೂಯಾಸುಃ : ನಿಮಗೆ ಶ್ರೇಯಸ್ಸನ್ನು ಉಂಟುಮಾಡಲಿ.

-::-

ವೇಂಕಟರಾಮಕೃಷ್ಣ ಎಂಬ ಕವಿಯೊಬ್ಬರು, ಈ ಶ್ಲೋಕವನ್ನು ವ್ಯಾಜನಿಂದೆಯ ಪದ್ಯದ ಮೂಲಕ ಆಕ್ಷೇಪಿಸಿದ್ದಾರೆ !

“ಆಂಧ್ರ ಲೋಕೋಪಕಾರಮ್ಮು ನಾಚರಿಂಪ
ಭಾರತಮ್ಮುನು ನನ್ನಯ ಭಟ್ಟು ತೆಲುಗು
ಚೇಯುಚುನ್ನಾಡು ಸರಿಯೆ, ಬಡಾಯಿಗಾಕ
ತೊಲುತ ಸಂಸ್ಕೃತ ಪದ್ಯಮೆಂದುಲುಕು ಚೆಪುಡಿ?”

ಆಂಧ್ರಲೋಕೋಪಕಾರವನ್ನಾಚರಿಸಲು
ಭಾರತವನಿಂತು ನನ್ನಯ್ಯಭಟ್ಟ ತೆಲುಗು
ಗೈಯಲುದ್ಯುಕ್ತನೈ ಸರಿ ಬಡಾಯಿ ಯಲ್ತೆ
ಮೊದಲು ಸಂಸ್ಕೃತವೃತ್ತವೇಕೊದಗಿಬಂತೈ?

Apr 242012
 

 

 

ಕನ್ನಡರೂಪಾಂತರ

ನಿರುಪಹತಿಸ್ಥಲಂ ಸುರಮಣೀ ಪ್ರಿಯದೂತಿಕೆ ತಂದುಕೊಟ್ಟ ಕ-

ಪ್ಪುರದೆಲೆ, ಯಾತ್ಮಕಿಂಪಹ ಸುಭೋಜನ, ವುಯ್ಯಲೆ ಮಂಚ, ಮೊಪ್ಪು ತ-

ಪ್ಪರಿತ ರಸಜ್ಞರೂಹೆ ತಿಳಿವಂಥಹ ಲೇಖಕ, ಪಾಠಕೋತ್ತಮರ್

ದೊರಕಿದರಲ್ತೆ,   ಕಾವ್ಯಗಳ ಸುಮ್ಮನೆ ಲೇಖಿಸೆನಲ್ಕೆ ಶಕ್ಯಮೇ

ಮೂಲ ಪದ್ಯ

 ನಿರುಪಹತಿಸ್ಥಲಂಬು ರಮಣೀಪ್ರಿಯದೂತಿಕ ತೆಚ್ಚಿಯಿಚ್ಚು ಕ

ಪ್ಪುರವಿಡೆ ಮಾತ್ಮಕಿಂಪಯಿನ ಭೋಜನ ಮುಯ್ಯಲಮಂಚ ಮೊಪ್ಪು ತ

ಪ್ಪರಯು ರಸಜ್ಞುಲೂಹ ತೆಲಿಯಂಗಲ ಲೇಖಕ ಪಾಠಕೋತ್ತಮುಲ್

ದೊರಕಿನ ಗಾಕ ಯೂರಕ ಕೃತುಲ್ರಚಿಯಿಂಪುಮಟನ್ನ ಶಕ್ಯಮೇ

ಆಂಧ್ರ ಕವಿತಾ ಪಿತಾಮಹನೆಂಬ ಖ್ಯಾತಿಯ ಅಲ್ಲಸಾನಿಪೆದ್ದನ ರಚಿಸಿದ ಪದ್ಯವಿದು.  ಕಾವ್ಯರಚನೆಗೆ ಯಾವ ಸೌಕರ್ಯಗಳಿದ್ದರೆ ಅನುಕೂಲ ಎಂಬುದರ ಪಟ್ಟಿ ಇಲ್ಲಿದೆ ! ಜನ ಜಂಗುಳಿಯಿರದ ಏಕಾಂತ ಪ್ರದೇಶ, ಮಧ್ಯ ಮಧ್ಯೆ ಪ್ರಿಯೆ ತನ್ನ ದೂತಿಯ ಮೂಲಕ ಕಳಿಸಿ ಕೊಡುವ ಕರ್ಪೂರ ತಾಂಬೂಲ, ಮನಸ್ಸಿಗೆ ತೃಪ್ತಿಯಾಗುವ ರುಚಿಕರವಾದ ಭೋಜನ, ಕುಳಿತು ತೂಗಾಡಲು ಉಯ್ಯಾಲೆಯ ಮಂಚ, ತನ್ನ ರಚನೆಯಲ್ಲಿ ಸರಿ ತಪ್ಪುಗಳನ್ನು ತಿಳಿಯುವಂಥ ರಸಜ್ಞರು, ಕವಿಯ ಆಶಯವನ್ನು ಊಹೆಯಿಂದ ಗ್ರಹಿಸಬಲ್ಲ ಲಿಪಿಕಾರರು, ಪಾಠಕರು ಇವೆಲ್ಲಾ ಸೌಕರ್ಯಗಳಿರದೆ, ಸುಮ್ಮನೆ ಕಾವ್ಯಗಳನ್ನು ಬರೆಯಿರಯ್ಯ ಎಂದರೆ ಸಾಧ್ಯವೇ ಎನ್ನುತ್ತಾನೆ ಪೆದ್ದನ !

Oct 012011
 

 

ನವಕವಿತೆ

ಕದ-ಲುವುದು, ಕದ-ಲಿಪುದು,

ಬದ-ಲಪ್ಪುದು, ಬದ-ಲಿಪುದು

ಹಾ-ಡುವುದು, ಹಾ-ಡಿಸುವುದು

ನಿಡುನಿದ್ದೆಯಿನ್ -ಎಬ್ಬಿಸುವುದು

ಮುಂದೆ-ಮುಂದೆ- ಸಾಗಿಸುವದು

ಪರಿಪೂರ್ಣತೆ ಬಾಳ್ಗೀವುದು

ಬೇಕಿದೆ ನವಕವಿತೆಗೆ


(ಆಧಾರ:ಶ್ರೀಶ್ರೀ)

Howtoread

 

“కద-లేదీ, కద-లించే-దీ,
మా-రేదీ,- మా-ర్పించే-దీ,
పా-డేదీ,- పా-డించే-దీ,
పెను-నిద్దుర- వద-లించే-దీ,
మును-ముందుకు- సా-గించే-దీ,
పరి-పూర్ణపు- బ్రతు-కిచ్చే-దీ,
కా-వాలోయ్- నవ-కవనా-నికి”

Apr 232011
 

ಮಿಂಗೆಡಿವಾಡು ವಿಭುಡನಿ
ಮಿಂಗುಟೆದಿಯು ಗರಳಮನಿಯು ಮೇಲನಿ ಪ್ರಜಕುನ್
ಮಿಂಗಮನೆ ಸರ್ವಮಂಗಳ
ಮಂಗಳ ಸೂತ್ರಂಬುನೆಂತ ಮದಿನಮ್ಮಿನದೋ

ನುಂಗುವನಾರ್‍ ನಿಜಪತಿಯೆನೆ
ನುಂಗುವುದೇಂ ಗರಳಮೆಂದು, ಜನಹಿತಕೆಂದುಂ
ನುಂಗೆನಲು ಸರ್ವಮಂಗಳೆ
ಮಂಗಳಸೂತ್ರ ವನದೆಷ್ಟು ನೆರೆನಂಬಿದಳೋ