Mar 152014
 

ಪ್ರಿಯ ಪದ್ಯಪಾನಿಗಳೆ,

ಪದ್ಯಪಾನದ ಪದ್ಯಸಪ್ತಾಹ ಈ ಬಾರಿ ೧೦೦ನೇಯ ಸಂಚಿಕೆಗೆ ಕಾಲಿಟ್ಟಿದೆ!

ಪದ್ಯಪಾನದ ಯುವಕವಿಗಳಿಗೆ ಛಂದಸ್ಸು, ಅಲಂಕಾರಗಳನ್ನು ಪರಿಚಯಿಸಿ ಅಭಿಜಾತಪದ್ಯರಚನೆಯ ಮೊದಲ ಹೆಜ್ಜೆಯಿಡುವುದರಿಂದ ಪ್ರತಿ ಪ್ರಯತ್ನದಲ್ಲೂ ಸಂತತವಾಗಿ ಪೋಷಣೆಯನ್ನು ಕೊಡುತ್ತಾ ನಮ್ಮೆಲ್ಲರ ಸ್ಫೂರ್ತಿಯ ಚಿಲುಮೆಯಾಗಿರುವ ಶತಾವಧಾನಿ ಡಾ|| ಗಣೇಶರಿಗೆ ನಮನಗಳು. ಪದ್ಯಪಾನದಲ್ಲಿ ಆಸಕ್ತಿಯನ್ನು ತೋರಿ ಪದ್ಯರಚನೆಯಲ್ಲಿ ಭಾಗವಹಿಸುತ್ತಿರುವ ಕವಿಗಳಿಗೂ ಮತ್ತು ಪದ್ಯಪಾನದ ಪದ್ಯವನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪದ್ಯಾಭಿಮಾನಿಗಳಿಗೂ ನಮನಗಳು.

ಈ ಬಾರಿ ನಿಮ್ಮ ಇಷ್ಟದ ವಿಷಯದ ಬಗ್ಗೆ ಅದು ಯಾವುದಾದರೂ ಇರಬಹುದು ಇಷ್ಟದ ಛಂದಸ್ಸು, ಕವಿ, ಕಾವ್ಯ, ಶಿಲ್ಪ, ರಾಗ, ಕಾದಂಬರಿ, ತಾಣ, ಅನುಭವ… ಹೀಗೆ ನಿಮ್ಮ ಇಚ್ಛೆಯ ಯಾವುದೇ ವಿಷಯದಲ್ಲಿ ಅಲಂಕಾರಯುತ ಪದ್ಯ ಬರೆಯಿರಿ. ಪದ್ಯದ ಸಂಖ್ಯೆಗಳ, ಭಾಷೆಯ ಅಥವಾ ವಸ್ತುವಿನ ನಿರ್ಬಂಧವಿಲ್ಲ. ಈ ಮುಕ್ತಸಂಚಿಕೆಯಲ್ಲಿ ಅತಿ ಹೆಚ್ಚು ಪದ್ಯಗಳನ್ನು ಬರೆದು ಪದ್ಯಪಾನದ ಪದ್ಯೋತ್ಸವದಲ್ಲಿ ಭಾಗವಹಿಸಿರೆಂದು ಕೋರುತ್ತೇವೆ.

ಪದ್ಯಪಾನ ತಂಡ

Feb 192014
 

ವಸ್ತು: ಸರಸ್ವತೀಸ್ತುತಿ

ಛಂದಸ್ಸು:ಅನುಷ್ಟುಪ್

ಬಂಧ:ಪುಷ್ಪಗುಚ್ಛಬಂಧ

pushpaguchha

ಛಂದಸ್ಸು:ಚಂಪಕಮಾಲೆ

ಬಂಧ:ಕುಂಡಲಿತನಾಗಬಂಧ

kundalita1000

 

ಛಂದಸ್ಸು:ಸ್ರಗ್ಧರಾ

ಬಂಧ:ಕವಿ-ಬಂಧನಾಮಗರ್ಭೀಕೃತ ಮಹಾಪದ್ಮಬಂಧ

padmabandha

Feb 172014
 

ಅನ್ಯೋಕ್ತಿ ಅಲಂಕಾರವನ್ನು ಬಳಸಿ ಉತ್ತಮವಾದ ಪದ್ಯವನ್ನು ರಚಿಸಿರಿ

ಒಂದು (ಅಪ್ರಧಾನ) ವಸ್ತುವನ್ನು ಆಧರಿಸುತ್ತಲೆ ಬೇರೊಂದರ (ಪ್ರಧಾನವಸ್ತುವಿನ) ಲಕ್ಷಣವನ್ನು ವಿವರಿಸುವುದು ಅನ್ಯೋಕ್ತಿಯಾಗುತ್ತದೆ

ಉದಾ:
ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು
ಶುಕಪಂಜರಬಂಧಸ್ಥ ಮಧುರಾಣಾಂ ಗಿರಾಂ ಫಲಂ

ಉದಾಹರಣೆಗಾಗಿ ಕನ್ನಡದಲ್ಲಿ ಇದೇ ಭಾವವನ್ನು ತೋರುವ ಪ್ರಯತ್ನ-
ಸರ್ವವಿಹಂಗಂಗಳ್ ಗಡ
ಗರ್ವದೆ ಮನದಿಚ್ಛೆಯಂತೆ ಪಾರಲ್ ಮುಗಿಲೊಳ್
ಒರ್ವಗೆ ಬಂಧನಮಕಟಾ
ಬೀರ್ವುದೆ ನೀನಿಂತು ಗಿಳಿಯೆ! ಸವಿಸೊಲ್ಪರಿಯಂ?

Dec 072013
 

ಪದ್ಯಪಾನಿಗಳೇ,

ಮುಕ್ತಕಗಳನ್ನು ಬರೆಯುವಲ್ಲಿ ಕೈಪಳಗಿರುವ ಪದ್ಯಪಾನಿಗಳು ಪದ್ಯಗುಚ್ಛಗಳಲ್ಲಿ ವರ್ಣನೆಯನ್ನು ಮಾಡಬೇಕಾಗಿ ವಿನಂತಿ. ಒಂದೇ ವಸ್ತುವಿಗೆ ಹಲವಾರು ಪದ್ಯಗಳನ್ನು ಅವಿರತವಾಗಿ ಬರೆಯುವ ನಿಮ್ಮ ದಕ್ಷತೆಯನ್ನು ಈ ಕಂತಿನಲ್ಲಿ ಪ್ರದರ್ಶಿಸುವ ಸದವಕಾಶವಿದೆ.

ಈ ಕೆಳಗಿನ ನಿಯಮಗಳನ್ನು ಗಮನಿಸಿ:

  • ಐದಕ್ಕೂ(5) ಹೆಚ್ಚಿನ ಪದ್ಯಗಳಲ್ಲಿ ಪ್ರಕೃತಿಯ ಯಾವುದಾದರೂ ಒಂದು ಆಯಾಮವನ್ನು ವರ್ಣಿಸಬೇಕು. 
  • ಪರ್ಯಾಯವಾಗಿ ಪ್ರಕೃತಿವರ್ಣನೆಯ ಯಾವುದಾದರೂ ಮಹಾಕವಿಯ 5ಕ್ಕೂ ಹೆಚ್ಚಿನ ಪದ್ಯವಿರುವ ಗುಚ್ಛವನ್ನು ಅನುವಾದ ಮಾಡಾಬೇಕು.
  • ಸಂಸ್ಕೃತ ಮತ್ತು ಕನ್ನಡದಲ್ಲಿ ಪದ್ಯರಚನೆ ಮಾಡಬಹುದು

ಉದಾಹರಣೆಗೆ ಕುಮಾರವ್ಯಾಸಭಾರತದ ಆದಿಪರ್ವದಲ್ಲಿ ಬರುವ ವಸಂತವರ್ಣನೆಯನ್ನು ಕೆಳಗೆ ಕಾಣಬಹುದು:

ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡೆಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಟಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

ಫಲಿತಚೂತದ ಬಿಣ್ಪುಗಳ ನೆರೆ
ತಳಿತ ಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

ಜಗವ ಹೊಗೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಲಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ

ನೆನಪಿರಲಿ ಬಿಡಿ ಪದ್ಯಗಳಲ್ಲ, ಐದಕ್ಕೂ ಹೆಚ್ಚು ಪದ್ಯಗಳಲ್ಲಿ ವರ್ಣಿಸಬೇಕು… ಕಲ್ಪನೆ ಗರಿಗೆದರಲಿ…

ವಿ.ಸೂ:  ಬಹಳ ಪ್ರಯತ್ನ ಪಟ್ಟೆ ನಾಲ್ಕು ಪದ್ಯವನ್ನು ಬರೆದಿದ್ದೇನೆ, ಐದನೇಯದು ತೋಚುತ್ತಿಲ್ಲ ಎನ್ನುವ ಪರಿಸ್ಥಿತಿಯಿದ್ದರೆ, ನಾಲ್ಕನ್ನೇ ಹಾಕಿ 🙂