Aug 182014
 

ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

  90 Responses to “ಪದ್ಯಸಪ್ತಾಹ ೧೨೨: ಸಮಸ್ಯಾಪೂರಣ”

  1. ಅವಸರದ ಅಡುಗೆಯಾಗಿ ಇದೊಂದು ಪರಿಹಾರ:

    ಖ್ಯಾತೋದಾರಗಭೀರಧೀರರವಿವಂಶಕ್ಕಾಗಿಯುಂ ಪೆರ್ಮೆ, ನೀಂ
    ಚೇತಸ್ಸ್ಫೂರ್ತಿಯನೇಕೆ ನೀಗಿ ನವೆವಯ್ ! ಅಣ್ಣಾ! ಅವಶ್ಯಂ ಸದಾ |
    ಸೀತಾನ್ವೇಷಣೆ; ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ
    ಸ್ಫೀತವ್ಯಾತ್ತವಿಲೋಕನಾಂಬುಕಣಧಾರಾಕಾರಮೆಂದೆಂದಿಗಂ ||

    {ಲಕ್ಷ್ಮಣನು ರಾಮನಿಗೆ ಹೀಗೆನ್ನುತ್ತಾನೆ: ” ಅಣ್ಣಾ! ನೀನೇ ಸೂರ್ಯವಂಶದ ಹೆಮ್ಮೆ. ಇಂಥ ನೀನು ಉತ್ಸಾಹವನ್ನು ತೊರೆದು ಆತ್ತು ಅತ್ತು ಊದಿಕೊಂಡ (ಸ್ಫೀತ) ಕಂಗಳನ್ನು ಮತ್ತೆ ತೆರೆದು (ವ್ಯಾತ್ತ) ಕಂಬನಿ ಮಿಡಿವುದು ಸಲ್ಲದು; ಈಗ ಆಗಬೇಕಾದುದು ಸೀತೆಯ ಹುಡುಕಾಟ ಮಾತ್ರ” }

    • ಸೀತಾನ್ವೇಷಣೆ ಮಾಡುವುದು, ದೃತಿಗೆಡುವ ಸಮಯವಲ್ಲವೆಂಬ ಪೂರಣದ ವಿಧಾನ ಚೆನ್ನಾಗಿದೆ ಸರ್

      • ಮೆಚ್ಚುಗೆಗೆ ಧನ್ಯವಾದಗಳು. ಆದರೆ ನನ್ನೀ ಪೂರಣಕ್ಕಿಂತ ನಿನ್ನ ಪೂರಣವೇ ತುಂಬ ಚೆನ್ನಾಗಿದೆಯಪ್ಪ, ಸೋಮಾ!

        • ಗಣೇಶ್ – ಪೂರಣದ ಕ್ರಮವೆಂತಿದ್ದರೂ, ಪದ ಪದ್ಧತಿ, ಪದ್ಯ ಶೈಲಿಗಳು ಮಾತ್ರ ಅತ್ಯುನ್ನತ. ಉದಾ: “ಖ್ಯಾತೋದಾರಗಭೀರಧೀರರವಿವಂಶ”, “ಸ್ಫೀತವ್ಯಾತ್ತವಿಲೋಕನಾಂಬುಕಣಧಾರಾಕಾರ”.

          • ಈ ಮೆಚ್ಚುಗೆಯು ಶ್ರೀರಾಮಚಂದ್ರಾರ್ಪಣಮಸ್ತು:-)

  2. ಭ್ರಾತಾ! ತಂದಿಹೆ ನಿನ್ನ ಲಂಕೆಗಳಿವಂ ತೋರಲ್ ನಿಮಿತ್ತಂಗಳೀ
    ಸೀತಾಪಹೃತಿ ಮಿತ್ತುವಾಯ್ ಪೊಗದಿರೈ ರಾಮಾಂಘ್ರಿಯಂ ಸಾರ್ವುದೈ
    ನೀತಿಭ್ರಷ್ಟತೆ ನಾಶಮೆಂದು ಸರಮಾನಾಥಂ ಸಮಾಧಾನದಿಂ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

    ಸರಮಾನಾಥ = ವಿಭೀಷಣ ( ತನ್ನ ಜ್ಯೇಷ್ಠನಿಗೆ ಮಾಡಿದ ಹಿತೋಪದೇಶ)
    ಅನುಗತ..ಏಷಣ = ಅನ್ವೇಷಣ, ಅಧೀನಮಾಡಿಕೊಳ್ಳುವ ಕೋರಿಕೆ

  3. ಜ್ಯೋತೀರೂಪಿಣಿ ಭೂಜೆ ಪರ್ಣ ಕುಟಿಯಿಂ ದೂರಾದ ಸಂದಿಗ್ಧದೊಳ್
    ಮಾತಿಂದಂ ತಿಳಿಯಾಗಿಸುತ್ತೆ ತಮವಂ ರೋಷಾಂಧನೇ ಆಗುತುಂ,
    ಮಾತೆಪ್ರೀತೆಯನೊಯ್ದ ಪಾತಕಿಯನಾಂ ಕೊಂದಿಲ್ಲಿ ತಪ್ಪೆಂ!ಬರೀ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಟಂಗೆ ಪೇಳ್ದಂ ಗಡಾ
    (ತಿದ್ದಿರುವ ಪದ್ಯವಿದು)

    • ಸಮಸ್ಯೆಯನ್ನು ಪರಿಹರಿಸಲು ಲಕ್ಷ್ಮಣನ ಕುದಿಯುವಿಕೆ ಬಹಳ ಚೆನ್ನಾಗಿ ನಿಮ್ಮ ನೆರವಿಗೆ ಬಂದಿದೆ, ಚೆನ್ನಾಗಿದೆ 🙂

    • ಪೂರಣದ ಕ್ರಮ ಚೆನ್ನಾಗಿದೆ. ಆದರೆ ಕೆಲವೊಂದು ಭಾಷಾದೃಷ್ಟಿಯ ಸವರಣೆಗಳಾಗಬೇಕಿದೆ.

      • ಸೋದರರಿಬ್ಬರಿಗೂ ಧನ್ಯವಾದಗಳು.
        ಪದ್ಯವನ್ನು ಸರಿಪಡಿಸಲು ಯತ್ನಿಸುವೆ 🙂

  4. ಕೇತುಸ್ಖಾಲಿತಭಾಗ್ಯಮಲ್ತೆ ರಘುವಂಶಕ್ಕೆಂತು ಸಂಮೋಹನಿ-
    ಷ್ಕ್ರೀತಿ, ಕ್ಷೋಭೆಯ ಚಿತ್ತದಿಂ ಪಗಲಿರುಳ್ ಶ್ರೀರಾಮವಿಭ್ರಾಂತಿಯೊಳ್
    ಸೀತೇ-ವಲ್ಲಭೆ-ಸೀತೆಯೆನ್ನುತರಸಲ್ ಸಂತೈಸುತುಂ ‘ತ್ಯಕ್ತೆ ದಲ್
    ಸೀತಾನ್ವೇಷಣೆ ಸಲ್ಲ’ದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

    ಸ್ಖಾಲಿತ – intoxicated
    ನಿಷ್ಕ್ರೀತಿ – redemption

    • ಅತಿಸುಂದರಪರಿಹಾರಂ
      ಸ್ತುತಿಪಾತ್ರಂ ಸೋಮ! ಪೊಳೆಯಲಿಲ್ಲೆನಗಂ; ಸಂ-
      ಗತಮಪ್ಪುತ್ತರಕಾಂಡದ
      ಕತೆಯಂ ಕಯ್ಕೊಂಡು ನೀಂ ನುಡಿದ ಪರಿ ಸೊಗಸಯ್ !!

    • ಸೋಮ – ಗಣೇಶ್ ಹೊಗಳಿದ ಮೇಲೆ, ಇತರರಿಗೆ ಅದನ್ನು ಮೀರಲು ಹೆಚ್ಚು ಅವಕಾಶವಿಲ್ಲ. ಪೂರಣ ಬಹಳ ಚೆನ್ನಾಗಿದೆಯೆಂದಷ್ಟೇ ಹೇಳಬಲ್ಲೆ 🙂

    • ಧನ್ಯವಾದಗಳು ಗಣೇಶ್ ಸರ್ ರಾಮ್

  5. ಪಾತಿವ್ರತ್ಯಪರೀಕ್ಷೆಯಗ್ನಿಯೊಡಲಿಂ ಮೇಲೆದ್ದ ನಿರ್ದೋಷಿ ತಾನ್
    “ಮಾತೇ! ನಿನ್ನೊಡಲಿಂದೆ ಶಾಂತಿ”ಯೆನುತುಂ ಭೂಗರ್ಭಮಂ ಪೊಕ್ಕಿರಲ್
    “ಪ್ರೀತೇ! ಬಾ”ರೆನೆ ರೋಧಿಸುತ್ತೆ ಕೆಸರಂ ಮೈಯಿಂದೆ ಬಾಚುತ್ತಿರಲ್
    “ಸೀತಾನ್ವೇಷಣೆ ಸಲ್ಲ”ದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

    • ಈ ಪರಿಹಾರಮುಂ ಕರಮುದಾರಮುದಾತ್ತಮತೀವಪೇಶಲಂ;
      ಸ್ವಾಪಯಶಸ್ಸಿನಿಂ ನವೆದ ಸೀತೆಯನಾಶಿಪ ರಾಮನೊಂದನಿ-
      ರ್ವಾಪಕದುಃಖಮಂ ಸಮುಚಿತಸ್ತುತಶಾಬ್ದಿಕಪಾಕದಿಂ ರಸಾ-
      ರ್ಥಾಪರಿಮೇಯರೀತಿಯಿನೆ ಪೇಳ್ದುದಕೀ ನತಿ ರಾಮಚಂದ್ರನೇ!

    • ಚೆನ್ನಾಗಿದೆ ರಾಮ್ 🙂

  6. || ಶಾರ್ದೂಲವಿಕ್ರೀಡಿತವೃತ್ತ ,ಉಪಮಾಲಂಕಾರ||

    ಪಾತಿವ್ರತ್ಯೆಯನಳ್ತು ಕೂಗಿ ಕರೆಯಲ್,ರಾಮಂ ಮಹಾಶೋಕದಿಂ,
    ಸೋತಾಗಳ್ ಮನದನ್ನೆಯಂ ಪುಡುಕುತುಂ,ಚೌರ್ಯಕ್ಕೆ ಸಿಲ್ಕಿರ್ಪಳೆಂ-|
    ದಾತಾಪಾರ್ಕಕುಲೋದ್ಭವಂ ಬೆತಿಸೆ ತಾನ್ ಪೆಣ್ಣೊಲ್, ವಿಲಂಬಂಗೊಳಲ್-
    ಸೀತಾನ್ವೇಷಣೆ ,”ಸಲ್ಲ”ದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ ||

    • ಶಕುಂತಲಾ ಅವರೆ – ಪೂರಣ ಚೆನ್ನಾಗಿದೆ.

      • ನನ್ನ ದಾರಿಯಲ್ಲಿಯೇ ಸಾಗಿ ಪಂಚವಟಿಯ ಹತ್ತಿರ ಬಂದಿದ್ದೀರಿ:-) ತುಂಬ ಸಂತೋಷ. ಹಳಗನ್ನಡದ ಹದವಂತೂ ಮಿಗಿಲು ಸೊಗಸಾಗಿದೆ.

        • ಅಣ್ಣನ ಮಾರ್ಗದೊಳೇ ತಂಗೆಯುಮಿರ್ಪುದೆಂದುಂ ಬಲ್ಸಾಜಮಲ್ತೆ ? ನಿಮ್ಮ ಪದ್ಯದವೊಲ್ ಪಿರಿದಲ್ಲದ,ಎನ್ನ ಕಿರಿಯ ಪದ್ಯದ ಬಾಸೆಯಂ ನೀಂ ಮೆಚ್ಚಿರ್ಪುದಕೆ ಧನ್ಯವಾದಂಗಳ್ . 🙂

      • ರಾಮರೆ,ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಅಗ್ನಿಪರೀಕ್ಷೆಯ ಪ್ರಸಂಗವನ್ನೊಳಗೊಂಡ ನಿಮ್ಮ ಪೂರಣವು ಸೊಗಸಾಗಿದೆ.

    • ‘ದಾತಾಪಾರ್ಕಕುಲೋದ್ಭವಂ ಬೆತಿಸೆ ತಾನ್ ಪೆಣ್ಣೊಲ್, ವಿಲಂಬಂಗೊಳಲ್’ ಬಹಳ ಹಿಡಿಸಿತು

      • ಧನ್ಯವಾದಗಳು ಸೋಮರೆ. ನಿಮ್ಮ ಪೂರಣವೂ ತುಂಬ ಹಿಡಿಸಿತು.

  7. ಸುಮ್ಮನೆ ತಮಾಶೆಗೆ ::

    “ಪ್ರೀತಿಪ್ರೇಮಗಳೆಲ್ಲ ಬುಲ್ಡೆ ಕಣಣೋ” ಎನ್ನುತ್ತೆ ಶಾರ್ದೂಲದೊಳ್
    ಮಾತಾಡಿರ್ದನು ಹೆಂಡತುಂಬಿದನಟಂ ಸೌಮಿತ್ರಿಯಾ ಪಾತ್ರದೊಳ್
    ಭ್ರಾತಂ ಭ್ರಾತಾ ವಾಮದ ಪಾದದಿಂದಲೊದೆಯಲ್ ಸಿಟ್ಟಾಗಿ ಮೇಣ್ ದಾರ್ಷ್ಟ್ಯದಿಂ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

  8. Krishna says to Balarama, “You drank the liquor Varuni, played rasalila with gopikas, commanded a reluctant Yamuna to stream up to you, and then towed that pious femme (Yamuna) with your plough. You suffered humiliation at the hands of a lemur, Dvivida, who chided you and broke your liquor pot. So, stop indulging in liquor.”
    ಚೇತೋಹಾರಿಯದೆಂದು ವಾರುಣಿಯನುಂ(liquor)| ಪೀರ್ದಾಗಳೊಂದೊಮ್ಮೆ ನೀಂ
    ಘಾತಂಗೊಂಡಳೆ ಸಾಧ್ವಿಯಾ ಯಮುನೆಯಳ್! ನೀನಾಡೆ ರಾಸದ್ರವಂ(sport)
    ಚಾತುರ್ಯಂ ದ್ವಿವಿದಪ್ರಣೀತಮದುಮೇಂ! ಶೌಂಡಾಘಟಂ(liquor pot) ಭಗ್ನವೈ
    ಸೀತಾ(spirituous liquor)ನ್ವೇಷಣೆ ಸಲ್ಲದೆಂದನುಜನಾ| ಜ್ಯೇಷ್ಠಂಗೆ ಪೇಳ್ದಂ ಗಡಾ

    • ಒಂದೆರಡು ಸಣ್ಣ ಪುಟ್ಟ ವ್ಯಾಕರಣದ ಸವರಣೆಗಳನ್ನುಳಿದರೆ ಈ ಪೂರಣ ನಿಜಕ್ಕೂ ತುಂಬ ಸೊಗಸಾಗಿದೆ. ರಾಮಾಯಣದ ಚೌಕಟ್ಟಿನಿಂದ ಭಾಗವತಕ್ಕೆ ಹಾರಿದ ಪರಿ ಸಲೆಸೊಗಸು!!

    • ಹೊಸ ಹಾಗು ಭಿನ್ನರೀತಿಯ ಪೂರಣ, ಚೆನ್ನಾಗಿದೆ ಪ್ರಸಾದು

      • tnx soma. ಬಲರಾಮನ ಮದ್ಯಪಾತ್ರೆ ಒಡೆದುಹೋಗಿರುವ ಕಾರಣ, ’ಭಿನ್ನ’ರೀತಿಯ ಪೂರಣ ಎಂಬ ಧ್ವನಿಪೂರ್ಣವೂ ಅಲಂಕಾರಯುತವೂ (ಭಿನ್ನ~ಪೂರಣಗಳಲ್ಲಿನ ವಿರೋಧಾಭಾಸ) ಆದ ವಿಮರ್ಶೆ ತಮ್ಮದು!

  9. ನೀತಿಪ್ರೀತನದೊರ್ವನೀಕ್ಷಿಸುತೆ ’ರಾಮಾನಂದಸಾಗರ್’ ಕೃತ-
    ಖ್ಯಾತಾಲೋಕನಪರ್ವಮಂ ಬಳಿಕಮಾತಂ ’ಟಿಪ್ಪು ಸುಲ್ತಾನ’ನಂ|
    ಕೌತುಕ್ಯಂಮಿಗೆ ಕಂಡು, ಮೈಥಿಲಿಯ ಭಾವಂಗಳ್ಗೆ ತಾಂ ಸುಯ್ಯಲ್; ಆ
    ಸೀತಾನ್ವೇಷಣೆಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ವಂ ಗಡಾ ||

    (ಈ ಪರಿಹಾರದ ಹಿನ್ನೆಲೆಯಾಗಿ ಒಂದಿಷ್ಟು ವಿವರಿಸದಿದ್ದರೆ ಅರ್ಥವಾಗದೆಂದು ಈ ಟಿಪ್ಪಣಿ: ದೂರದರ್ಶನದ ಧಾರಾವಾಹಿಗಳಲ್ಲಿ ಒಂದಾದ ರಾಮಾಯಣವನ್ನು ಯಾರೋ
    ಪಾಮರನೊರ್ವನು ಕಂಡು ಅಲ್ಲಿ ದೀಪಿಕಾ ಎಂಬಾಕೆಯು ಮಾಡಿದ ಸೀತಾಪಾತ್ರದಿಂದ ಮರುಳಾಗಿದ್ದನು. ಇದೀಗ ಸಂಜಯ್ ಖಾನನ ಟಿಪ್ಪು ಸುಲ್ತಾನ್ ಧಾರಾವಾಹಿಯಲ್ಲಿ ದೀಪಿಕೆಯೇ ಸುಲ್ತಾನನ ತಾಯಿಯ ಪಾತ್ರವನ್ನು ನಿರ್ವಹಿಸಿದುದನ್ನು ಕಂಡು ಆಕೆಯೇ ಸೀತೆಯೆಂದು ಮುಗ್ಧತೆಯಿಂದ ಬಗೆದು ಅಲ್ಲಿ ಸೀತಾತ್ವವನ್ನು ಹುಡುಕಿ ಹುಡುಕಿ ಬಸಬಳಿದು ಸೋತಾಗ ಅವನ ಜಾಣ ತಮ್ಮನು ಇಲ್ಲಿ ಆ ಹುಡುಕಾಟವು ವ್ಯರ್ಥವೆಂದು ತಿಳಿಸಿ ತಿದ್ದುವನು.)

    • ಈ ಸಮಸ್ಯೆಗೆ ವೈವಿಧ್ಯತೆಯಿಲ್ಲ ಎಂದು ಕೈಚೆಲ್ಲಿ ಕೂತಿದ್ದಾಗ ಅಕಸ್ಮಾತ್ ಒಂದು ಪರಿಹಾರ ಹೊಳೆಯಿತು. ಬದುಕಿಕೊಂಡೆ. ಈಗ ನೋಡಿದರೆ ಹೀಗೆ ಇನ್ನೊಂದು ವಿವಿಕ್ತವಾದ ಪರಿಹಾರವನ್ನು ತೋರಿಸಿದ್ದೀರಿ! ಐಸಾಡೋರ ಡಂಕನಳು ನೆನಪಿನಲ್ಲಿ ಸುಳಿದಳು. ಧನ್ಯವಾದಗಳು.

      • ಧನ್ಯವಾದದ ಕುಡುಮೆಯೈಸಡೋರಳ ಸಲುವೆ?
        ಅನ್ಯ ಪರಿಹಾರಗಳ ದಾರಿಗೋಸುಗವೆ?
        ಶೂನ್ಯವಾಗಿಹ ಮನಕೆ ಸಿರಿಯ ತಂದಿರೆ ರಾಗ
        ಮಾನ್ಯರಂ ನೀವಿಂತು ಕೆಕ್ಕರಿಪುದೇ?

        • ‘ಸಿರಿ ಸಿಕ್ಕಿದ ಹಾಗಾಯ್ತು’ ಎಂಬ ನಿಮ್ಮ ಮಾತಿಗೆ ಬರೆದ ಪ್ರತಿಕ್ರಿಯಾಪದ್ಯ ಅದು; ಶ್ರೀ ರಾಗರ ಪದ್ಯಕ್ಕಲ್ಲ.

          • ಗೊತ್ತು ಪ್ರಸಾದ್. ಸುಮ್ಮನೆ ನಿಮ್ಮನ್ನು ತಮಾಶೆ ಮಾಡಲೆಂದು ಬರೆದದ್ದು. 😉

    • “ಸೀತಾತ್ವ”ದ ಅನ್ವೇಷಣೆಯ idea ಬಹಳ ಚೆನ್ನಾಗಿದೆ. ಇದನ್ನು ಟಿಪ್ಪು ಸುಲ್ತಾನನ ತಾಯಿಯಲ್ಲಲ್ಲದೆ, ಇನ್ನೂ ಅನೇಕ ಕಡೆಗಳಲ್ಲಿ ಹುಡುಕುವ ವ್ಯರ್ಥತೆಯ ಕಡೆಗೆ ಎಳೆದೊಯ್ಯಬಹುದು. ಕೈಚೆಲ್ಲಿ ಕುಳಿತ ಹಾದಿರಂಪರಿಗೆ ಒಳ್ಳೆಯ ಸಿರಿ ಸಿಕ್ಕಿದ ಹಾಗಾಯ್ತು.

      • ಸಿಕ್ಕೊಡೇನಾ ಸಿರಿಯು ದಕ್ಕುವುದೆ ಸುಲಭದೊಳ್
        ಹಕ್ಕದಾ ಪೆರರದೈ ಕೆಕ್ಕರಯ್ಯ|
        ಅಕ್ಕುಮಿಂತೆಯೆ ಕಂಡು ನಕ್ಕುನಲಿಯಲುಮಾಗಿ
        ಕೆಕ್ಕರಿಸಿ ನೋಡಿದನು – ಹಾದಿರಂಪ 😉
        (ಮೊದಲ ಮೂರು ಪಾದಗಳಲ್ಲಿ ಅನುಪ್ರಾಸವಿದೆ)

        • ಕೊನೆಯ ಪಾದದೊಳಂತೆ ಕೆಕ್ಕರಿಸಿ ಕುಕ್ಕಿದೊಡ-
          ಮನುವಪ್ಪುದೈ ಪ್ರಾಸವಿನ್ನಲ್ಲಿಯುಂ 🙂

          • ಅಲ್ಲ ಕಾಣಣ್ಣ ಅನುಪ್ರಾಸವಿರಬೇಕಾದು
            ದೆಲ್ಲೊಲ್ಲೊ ಅಲ್ಲದೆಲೆ ಗಣಮೂರರೊಳ್ (3rd gaNa)

          • ಎಲ್ಲಿಯೂ ಸಲ್ಲುವುದುವನುಪ್ರಾಸ ಮಲ್ಲೆಯೊಲು
            ತಲ್ಲಣಿಪ ದೋಷವಿಲ್ಲಿಲ್ಲಿಲ್ಲವೈ

    • ಟಿಪ್ಪುಸುಲ್ತಾನನ ತಾಯಿಯಪಾತ್ರದಲ್ಲಿ ಸೀತಾನ್ವೇಷಣೆ ಸಲ್ಲದೆಂಬ ಪೂರಣ ಬಹಳ ಚೆನ್ನಾಗಿದೆ ಗಣೇಶ್ ಸರ್

  10. ನೇತಾರಂ ಸುರಗಾನದಿಂದೆ ನುತಿಸಲ್, ಸಂಕ್ಷಿಪ್ತರಾಮಾಯಣಂ-
    ಸಾತೂರೆಂಬಯ ಗಾಮದೊಳ್ ಪಡೆಯಿತುಂ ಮೇಣ್ಪಂಕ್ತಿಯಂ ಜಾಮದೊಳ್
    ಇಂತಾಗಲ್ಕಿದ ಕೇಳದಾಗೆ,ಮುನಿಸಿಂ ” ಈ ರಾಮ,ಸೌಮಿತ್ರಿ,ಮೇಣ್
    ಸೀತಾ..ಅನ್ವೇಷಣೆ.. ಸಲ್ಲದು”ಎಂದನುಜನಾ ಜ್ಯೇಷ್ಟಂಗೆ ಪೇಳ್ದಂ ಗಡಾ
    (ಹಿರಿಯನೋರ್ವ ರಾಮಾಯಣವನ್ನು ಹಾಡುತ್ತ,ಗ್ರಾಮದಲ್ಲಿ ಅದನ್ನು ಪ್ರಸಿದ್ದಿಗೆ ತರಲಾಗಿ,ಇದನ್ನೆಲ್ಲ ಕೇಳಲು
    ಇಷ್ಟಪಡದ ಬಾಲಕ, ಆ ಹಿರಿಯನಿಗೆ “….”ಹೇಳಿದ,ಬಾಲಕನನ್ನು ನೇತಾರನ ತಮ್ಮನೆಂದೂ ಗಣಿಸಬಹುದು)
    (ಗಾಯನ ನಡೆದಿದ್ದಾಗ, ಅರಿಯದ ಚಿಕ್ಕ ಬಾಲಕ ನಿದ್ದೆಗಣ್ಣಿನಲ್ಲಿ ಹೇಳಿದ್ದಿರಬಹುದು)

    • ಸಾತೂರು! ಸೀತಾನ್ವೇಷಣವಿರಲಿ, ಪ್ರಾಸಾನ್ವೇಷಣಕ್ಕೆ ಒಳ್ಳೆ ಐಡಿಯ ಕೊಟ್ಟಿರಿ. ತ್ಯಾಂಕ್ಸ್ 🙂

    • ಕೀಲಕದ ಐಡಿಯಾ ಚೆನ್ನಾಗಿದೆ, ಸಾರತೂರಿನ ಐಡಿಯಾನೂ ಚೆನ್ನಾಗಿದೆ ಆದರೆ ‘ಸಾತೂರೆಂಬಯ ‘ ಹೇಗೆ ಸರಿಯಾಗುವುದು?

  11. ಸೋಮರೆ,

    ಶ್ರೀ ಗಣಪತಿ ಮೊಳೆಯಾರರ ಮೇಘದೂತದ ಪ್ರತಿಕೃತಿಯ ಉಳಿದೆರಡು ಭಾಗಗಳ ಗಣಕಯಂತ್ರದ ಪ್ರತಿಗಳನ್ನು ನಿಮಗೆ ಕಳುಹಿಸಿರುವೆ:-)

    • ಧನ್ಯವಾದಗಳು ಶಕುಂತಲಾ ಅವರೇ 🙂

      ಈ ಹಿಂದೆ ನೀವು ಕಳುಹಿಸಿದ ಶ್ರೀ ಗಣಪತಿ ಮೊಳೆಯಾರರ ಮೇಘದೂತದ ಪ್ರತಿಕೃತಿಯ 3ನೇ ಭಾಗವನ್ನು ಪದ್ಯಪಾನದಲ್ಲಿ ಕೇಳಕಂಡ ಕೊಂಡಿಯಲ್ಲಿ ಹಾಕಿದ್ದೇವೆ:
      http://padyapaana.com/?attachment_id=2304

      ಪದ್ಯಪಾನಿಗಳೆಲ್ಲರೂ ಇದರಿಂದ ಹಳಗನ್ನಡದ ಬಳಕೆಯ ಮಾದರಿಗಾಗಿ ಹಾಗು ಮೇಘಧೂತವನ್ನು ಕನ್ನಡದಲ್ಲಿ ಆಸ್ವಾದಿಸುವನಿಟ್ಟಿನಲ್ಲಿ ಲಾಭಪಡೆದುಕೊಳ್ಳಬಹುದು

      ರಾಮ್, ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು 🙂

      • ಶ್ರೀಯುತರಾದ ರಾಮಸೋಮರೆ,

        ಮೇಘದೂತದ ಪ್ರತಿಕೃತಿಯನ್ನು ಪದ್ಯಪಾನದ ಆಸಕ್ತರು ಸವಿಯಬಯಸಿದಲ್ಲಿ, ಸಹಕರಿಸಿದ ನಿಮಗೆ ಧನ್ಯವಾದಗಳು.

  12. ಮಾತಾಸೀತೆಯ ಕಂಡಲಕ್ಷ್ಮಣನುತಾಂ ಶ್ರೀರಾಮನಾ ಕಂಗಳೊಳ್
    ಚೇತೋಹಾರದೆ ಕೈಗಳಂ ಮುಗಿಯುತುಂ ಸಂತೋಷದಿಂ ಪೇಳ್ದನೈ
    ಭ್ರಾತಾ ಚಿಂತಯೊಳೇತಕಿರ್ಪೆನುತಿರಲ್ ಬನ್ನಂಗಳಿನ್ನೇತಕೀ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

    • ಪ್ರಿಯ ಚೀದಿ,
      ನಿಮ್ಮ ಪೂರಣ ಸೀತೆ ಸಿಕ್ಕ ನಂತರದ್ದಲ್ಲವೇ? ಅಥವಾ ಶ್ರೀರಾಮನ ಕಂಗಳಲ್ಲಿಯೇ ಸೀತೆಯನ್ನು ಕಂಡನೆ?
      ಆಗ ಕೊನೆಯ ಸಾಲಿನಲ್ಲಿ “ಸೀತಾನ್ವೇಷಣೆ ಸಂದುದೆಂ…” ಅಥವಾ “ಸೀತಾನ್ವೇಷಣೆಯಿನ್ನು ಸಲ್ಲದೆನುತುಂ …” ಎಂದಾಗಿದ್ದರೆ, ಈ ಪೂರಣಕ್ಕೆ ಇನ್ನೂ ಹೆಚ್ಚಿನ ಸಾರ್ಥಕ್ಯ ಬರುತ್ತಿತ್ತು.
      ಹಾಗೂ ಮೂರನೆಯ ಸಾಲಿನಲ್ಲಿ, “ಚಿಂತೆಯೊಳೇತಕಿರ್ಪೆನುತಿರಲ್ …” ಅಂದರೆ ಕೊಂಚ ಅನ್ವಯ ಕ್ಲೇಶವಾಗುತ್ತದೆ [ಚಿಂತೆಯೇತಕ್ಕೆ ಎನ್ನುವವನೂ, ಸೀತಾನ್ವೇಷಣೆ ಸಲ್ಲದು ಎನುವವನೂ ಅನುಜನೇ ಆದ್ದರಿಂದ ಅನ್ವಯ ಕ್ಲೇಶ].
      ಅದರಲ್ಲೂ, ಪೇಳ್ದನೈ, ಎನುತಿರಲ್ ಹಾಗೂ ಪೇಳ್ಗುಂ – ಎಲ್ಲವೂ ಒಂದೇ ವಿಷಯದ ಬಗ್ಗೆಯಾದ್ದರಿಂದ, ಪುನರುಕ್ತಿಯೂ ಆಗಿದೆಯೆನಿಸುತ್ತದೆ.
      ಇಷ್ಟೆಲ್ಲಾ ದೋಷಾನ್ವೇಷಣೆ ಮಾಡಿದ್ದಕ್ಕೆ ಕ್ಷಮೆಯಿರಲಿ 🙂

      • ರಾಮ್, ಇಷ್ಟು ದೊಡ್ಡ ಪದ್ಯದಲ್ಲಿ ಇಷ್ಟಾದ್ರೂ ತಪ್ಪಿಲ್ದೇ ಇದ್ರೆ ಹೇಗೆ? 😉
        on a serious note, ದೋಷಾನ್ವೇಷಣೆಗೆ ಧನ್ಯವಾದಗಳು… ಈ ಪದ್ಯದ ಕಲ್ಪನೆ ಹೀಗಿತ್ತು.. ಲಕ್ಷ್ಮಣನು ರಾಮನ ಕಣ್ಣುಗಳಲ್ಲಿ ಸೀತೆಯನ್ನು ಕಂಡು (ಕಲ್ಪಿಸಿಕೊಂಡು) ಇನ್ನೇಕೆ ಚಿಂತಿಸುವೆ, ಅವಳ ಹುಡುಕಾಟವು ಬೇಡವೆಂದು..
        ನನ್ನ ವಿಫಲವಾದ ಪ್ರಯತ್ನಕ್ಕೆ ಕ್ಷಮೆಯಿರಲಿ 🙁 .. i will try to write a better one 🙂

  13. ಮೇಲಿನ ಪರಿಹಾರವನ್ನೇ ಸ್ವಲ್ಪ ಸರಿಪಡಿಸಲು ಯತ್ನಿಸಿದ್ದೇನೆ… ಲಕ್ಷ್ಮಣನು ರಾಮಸೀತೆಯರನ್ನು ಕನಸಿನಲ್ಲಿ ಕಂಡು, ಅದೇ ಸತ್ಯವೆಂದು ಭಾವಿಸಿ ಇಂತು ಹೇಳಿದ…
    ಮಾತಾಸೀತೆಯ ಕಂಡಲಕ್ಷ್ಮಣನುತಾಂ ಶ್ರೀರಾಮನಾ ಸಂಗಡಂ
    ಚೇತೋಹಾರದೆ ಕೈಗಳಂ ಮುಗಿಯುತುಂ ದಿಗ್ಭ್ರಾಂತಿಯಂದೋರುತುಂ
    ಪ್ರಾತಃಕಾಲದೊಳೆದ್ದು ತನ್ನಕನಸೇ ವಾಸ್ತವ್ಯಮೆಂಬಾಶೆಯಿಂ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ

    supplementary ನಲ್ಲಾದ್ರೂ ತೇರ್ಗಡೆ ಆಗಬಹುದೇನೋ ಅಂತ ಅಂದುಕೊಂಡಿದ್ದೇನೆ!

    • ಚೆನ್ನಾಗಿದೆ ಚೀದಿ. ಮರುಪ್ರಯತ್ನ ಫಲ ನೀಡಿದೆ 🙂

      • ಪ್ರಿಯ ಚೀದಿ, ಪೂರಣವು ಇದೀಗ ಚೆನ್ನಾಗಿದೆ. ಅಂತೂ ರಾಮನ ದಯೆ ಆಗಿದೆ:-)
        ಆದರೆ ಮಾತಾಸೀತೆ ಎಂಬ ಪ್ರಯೋಗವು ಅಸಾಧು. ಅದು ಮಾತೃಸೀತೆ ಎಂದಾಗಬೇಕು. ಹೀಗಾದರೆ ಛಂದಸ್ಸು ಎಡವೀತು. ಆದುದರಿಂದ ಸೀತಾಮಾತೆ ಎಂದರೆ ಎಲ್ಲ ಸರಿಯಾಗುವುದು.

    • ‘ತನ್ನಕನಸೇ ವಾಸ್ತವ್ಯಮೆಂಬಾಶೆಯಿಂ’ ಚೆನ್ನಾಗಿದೆ

  14. ಭೀತೈಣೇಕ್ಷಣೆ ಚಾರುಶೀಲೆ ಗುಣಸಂಪನ್ನೆ ಪ್ರಮೋದಾಸ್ಪದೆ
    ಪ್ರೀತಾಲಾಪೆ ಮನೋಜ್ಞೆಯೆನ್ನ ಮನೆಯಂ ತುಂಬಲ್ಕೆ ಬೇಕೆಂದೆನಲ್ |
    ಭ್ರಾತಂ, ಕೇಳ್ದುಪಹಾಸಗೆಯ್ಯುತುಮಲಾ ! ವೈವಾಹಕೀ ಕಾಲದೊಳ್
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ ||

    ಇದು ಈ ಕಲ್ಪಿತ ಸೋದರರ ಸಂಭಾಷಣೆ 🙂

    • ಸುಂದರವಾದ ಕಲ್ಪನೆಯಷ್ಟೇ ಅಲ್ಲ, ಸೀತೆಯ ಗುಣಗಳನ್ನೂ ಚೆನ್ನಾದ ಶಬ್ದಗಳಿಂದ ಸಂಕ್ಷಿಪ್ತವಾಗಿ ಪದ್ಯದಲ್ಲಿ ಹೆಣೆದಿದ್ದೀರ.
      ಬಹಳ ಚೆನ್ನಾಗಿದೆ. 🙂

      • ರಾಮಚಂದ್ರವಚನಾನುಘೋಷಣಂ
        ಮಾಮಕೀನಮುಮಿದೊಪ್ಪುಗುಂ ಕರಂ|
        ಶ್ರೀಮನೋಜ್ಞಪೆಜತಾಯಪದ್ಯದೊಳ್
        ಕೋಮಲಸ್ಮಿತಚಮತ್ಕೃತಿ ಸ್ತುತಂ||

        • ರಾಮರಾಗರ ಸರಾಗವಾಕ್ಯಕಂ

          ಮಾಮಕೀನಮಭಿವಂದನಂ ಕರಂ 🙂

    • ಬಹಳ ಅದ್ಭುತವಾದ ಮತ್ತು ಬಹಳ ಪರಿಹಾರ ಹಾಗು ಈ ಕಾಲದಲ್ಲಿ ಮದುವೆಯಾಗ ಬಯಸುವ ಹುಡುಗರಿಗೆ ಸರಿಯಾದ ಕಿವಿಮಾತು ಕೂಡ 🙂

      • 🙂 ಧನ್ಯವಾದಗಳು…

      • ಸೋಮ,
        ’ಈ ಕಾಲದಲ್ಲಿ ಮದುವೆಯಾಗ ಬಯಸುವ ಹುಡುಗಿಯರಿಗೆ ಸರಿಯಾದ ಕಿವಿಮಾತು’ಗಳನ್ನು ಮುಂಬರುವ ವಾರಗಳಲ್ಲಿ ನಿರೀಕ್ಷಿಸಿ!

  15. “ಭೂತಪ್ರೇತಗಳಿರ್ದ ಕಾನನವಿದುಂ ಘೋರಾತಿಘೋರಂ ಕಣಾ,
    ಜಾತೀಕೋಮಲ ಪುಷ್ಪಮಿರ್ಪುದೆ?ಮಹಾ ಕಾಠಿಣ್ಯದೀ ಕಂಟಿಯೊಳ್?
    ಗೀತಾಚಾರ್ಯನ ನಾಮವಂ ತಳೆದೊಡೇಂ , ಶಾಸ್ತ್ರಜ್ಞನಾಗಿರ್ಪೊಡೇಂ,
    ಸೀತಾನ್ವೇಷಣೆ ಸಲ್ಲ” ದೆಂದನುಜನಾ ಜ್ಯೇಷ್ಠಂಗೆ ಪೇಳ್ದಂ ಗಡಾ
    ಸೀತಾ=ಒಂದು ಬಗೆಯ ಹುಲ್ಲು,ಒಂದು ಬಗೆಯ ಮರ ಮತ್ತು ಅದರ ಹೂವು
    (ಸಸ್ಯ ಶಾಸ್ತ್ರಜ್ಞ ಅಣ್ಣನಿಗೆ ತಮ್ಮನಿಂದ ಎಚ್ಚರಿಕೆ!)

    • ಆಹಾ! ಒಳ್ಳೆಯ ಪದ್ಯ! ತುಂಬ ಒಳ್ಳೆಯ ಕಲ್ಪನೆ!!…ಸೀತಾಪುಷ್ಪ ಅಥವಾ ಸೀತೆಯ ಹೂವು, ಸೀತೆಯ ದಂಡೆ ಎಂಬಿವು ಮಲೆನಾಡಿನ arched ಪ್ರಕಾರಗಳು..

      • ಧನ್ಯವಾದಗಳು 🙂
        ನಿಜಕ್ಕೂ,ತಿಳಿ ನೇರಳ ಬಣ್ಣದ ಸೀತೆಯ ದಂಡೆಯು ಬಲು ಸುಂದರ!

    • ಇದೇನಪ್ಪಾ! ರಾಮಾಯಣದಲ್ಲಿ ಗೀತಾಚಾರ್ಯ ಎನ್ನುವಷ್ಟರಲ್ಲೆ ಕಡೆಯ ಸಾಲನ್ನು ಜಾಣತನದಿಂದ ನಿಭಾಯಿಸಿರುವ ಪೂರಣ ಬಹಳ ಚೆನ್ನಾಗಿದೆ

  16. ಮಾತೇ ಧಾತ್ರಿ ! ಖಗಂಗಳೇ ! ಮಿಗಗಳೇ ! ನೀಂ ಕಂಡಿರೇಂ ಸೀತೆಯಂ ?
    ಖ್ಯಾತಂ ರಾಘವನಿಂತು ಗೋಳಿಡುತಿರಲ್ ಬಾಷ್ಪಾರ್ದ್ರನೇತ್ರಂ ಜಗ-
    ದ್ಗೀತಾ ! ಕಾಡಿನ ಮೂಲೆಮೂಲೆಗಳೊಳುನ್ಮತ್ತರ್ಕಳೀ ರೀತಿಯಿಂ
    ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ ||

    • ಆಹಾ! ತುಂಬಾ ಚೆನ್ನಾಗಿದೆ

    • ತುಂಬ ಚೆನ್ನಾದ ಪ್ರಾಬಂಧಿಕಶೈಲಿಯ ಪದ್ಯ. ನಾಗಚಂದ್ರಕವಿಯ ಪದ್ಯವೊಂದನ್ನು (ಕಲಹಂಸಾಲಸಯಾನೆಯಂ ಮೃಗಮದಾಮೋದಾಸ್ಯನಿಶ್ಶ್ವಾಸೆಯಂ…….) ಸ್ಮರಣೆಗೆ ತರುವಂಥ ಶೈಲಿ, ಭಾಷೆಯ ಹದ ಎಲ್ಲ ಪರಿಪಾಕದಶೆಯಲ್ಲಿವೆ. ಅಲ್ಲದೆ ಇದು ಸಂಸ್ಕೃತದ ಲುಪ್ತಸತ್ಕಾವ್ಯಗಳಲ್ಲಿ ಒಂದಾದ ಯಶೋವರ್ಮನ ರಾಮಾಭ್ಯುದಯ ರೂಪಕದ ಪದ್ಯವೊಂದನ್ನೂ ನೆನಪಿಗೆ ತರುವಂತಿದೆ.ತುಂಬ ಧನ್ಯವಾದಗಳು.

      • ಶಿರಮಂ ಬಾಗಿಸಿ ಧನ್ಯವಾದಸುಮಮಂ ನಾನರ್ಪಿಸುತ್ತಿರ್ಪೆನಯ್ 🙂

    • ರಾಮನ ಅಳಲನ್ನು ಎಷ್ಟು ಚೆನ್ನಾಗಿ ಬಣ್ಣಿಸಿದ್ದೀರಾ ಬಹಳ ಚೆನ್ನಾಗಿದೆ ಪೆಜತ್ತಾಯರೆ

    • ಚೀದಿ-ಸೋಮರಿಗೆ ಧನ್ಯವಾದಗಳು 🙂

    • Thoroughly enjoyable read.
      1) ಕಾಡಿನ ಬದಲು ಕಾಡೊಳ ಎನ್ನಬಹುದೇನೋ.
      2) ಜಗದ್ಗೀತಾ ಎಂದರೇನು?

      • ಧನ್ಯವಾದಗಳು 🙂
        ಹೌದು ಸರ್..ಕಾಡೊಳ ಶಬ್ದ ಸುಂದರತರ.
        ಜಗದ್ಗೀತಾ – ಪ್ರಪಂಚದಿಂದ ಹಾಡಿ ಹೊಗಳಲ್ಪಟ್ಟವನೇ ಎಂದರ್ಥದಲ್ಲಿ.

  17. ” ತ್ರೇತಾಜಾತನುದಾತ್ತನುಂ, ಧರಣಿಪಂ, ಲಂಕೇಶಸಂಹಾರಕಂ,
    ಸೀತಾ,ಭಾರ್ಯೆ,ಮಹೋನ್ನತಳ್ ಮೆರೆದಳೈ ಆದರ್ಶವಂ,ಬಾಗದೇ
    ಈ ತೇಜೋಮಯರಂ ಸದಾ ಭಜಿಸೆ ಔನತ್ಯಂ;ವೃಥಾ ರಾಮ ಮೇಣ್
    ಸೀತಾನ್ವೇಷಣೆ ಸಲ್ಲ”ದೆಂದನುಜನಾ ಜ್ಯೇಷ್ಠಂಗೆ ಪೇಳ್ದಂ ಗಡಾ
    ( ಅನ್ವೇಷಣಾ ಬುಧ್ಹಿಯ ಅಣ್ಣನಿಗೆ ಹೇಳಿದ್ದು)

    • ಕಾಂಚನ ಅವರೆ, ಐಡಿಯಾ ಚೆನ್ನಾಗಿದೆ
      ಇಂತೋದಾರ ಸರಿಯಾಗುವುದಿಲ್ಲ ಅರಿಸಂಧಿಯಾಗುತ್ತದೆ,
      ಉದಾರರಂ ಪೂಜಿಸಲ್ಕೆ ಎಂದಾಗಬೇಕಿತ್ತು:)

      • ಸೋಮರೇ, ಈಗ ಸರಿಯಾಗಿದೆಯೆಂದು ತಿಳಿಯುವೆ .
        ತ್ರೇತಾಜಾತ – ದಲ್ಲಿ ಸಂದೇಹವಿದೆ.
        ಧನ್ಯವಾದಗಳು.

  18. A young and an elder ox are paired on a yoke. The younger is more experienced, and the elder is drawing a yoke for the first time. The inexperienced elder keeps looking back at the furrow (ಸೀತಾ) to ensure that he is right on track so as to save himself from being beaten by the farmer who is ploughing the land. The younger ox tells him, “Don’t worry pal. Just keep pace with me. The onus to hold the plough right on track is the farmer’s”.
    ಓತಿಕ್ಯಾತದವೋಲು (restless nodding) ತತ್ತರಿಸಲೇಂ| ಭೀತಂಗೊಳುತ್ತೀಗಳೈ
    ರೈತಂದಲ್ಲವೆ ಕಾರ್ಯ ನೇಗಿಲನು ವೈ|ನಾಗಿರ್ಪ ಸಾಲೊಳ್ ತೊಡಲ್
    ಭೀತಂಗೊಳ್ಳದೆಲೆನ್ನ ವೇಗಕನುಗೊ|ಳ್ಳೈ ಸುಮ್ಮನಣ್ಣೈಯ್ಯ ನೀಂ
    ಸೀತಾ(furrow)ನ್ವೇಷಣೆ ಸಲ್ಲದೆಂದನುಜನಾ| ಜ್ಯೇಷ್ಠಂಗೆ ಪೇಳ್ದಂ ಗಡಾ

    • ತುಸು ತಿದ್ದಿದ್ದೇನೆ:
      “ಓತಿಕ್ಯಾತದವೋಲು (restless nodding) ತತ್ತರಿಸದೆಲ್| ನಿಶ್ಚಿಂತೆಯಿಂ ನೀನಿರೈ
      ರೈತಂದಲ್ಲವೆ ಕಜ್ಜ ನೇಗಿಲನು ವೈ|ನಾಗಿರ್ಪ ಸಾಲೊಳ್ ತೊಡಲ್?
      ಭೀತಂಗೊಳ್ಳದೆಲೆನ್ನ ವೇಗಕನುಗೊ|ಳ್ಳೈ ಸುಮ್ಮನಣ್ಣಯ್ಯ ನೀಂ
      ಸೀತಾ(furrow)ನ್ವೇಷಣೆ ಸಲ್ಲ”ದೆಂದನುಜನಾ| ಜ್ಯೇಷ್ಠಂಗೆ ಪೇಳ್ದಂ ಗಡಾ

Leave a Reply to ರಾಮಕೃಷ್ಣ ಪೆಜತ್ತಾಯ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)