Sep 072015
 

krishna

  54 Responses to “ಪದ್ಯಸಪ್ತಾಹ ೧೬೭: ಚಿತ್ರಕ್ಕೆ ಪದ್ಯ”

  1. ಅದೇ೦ ಗಾ೦ಪ೦ ಗೊಲ್ಲ೦ ಗಡ ನೆರದ ಪೆಣ್ಗಳ್ಗೊರೆವನೇ೦
    ಮುದ೦ ಮೇಣೀತ೦ಗ೦ ಪರಿಹಸನಮ೦ಗೈವೊಡಮಲೇ
    ಮದೀಯ೦ ಹೃದ್ಭಾವ೦ ಪುರಿಗಡಲೆ ಚೆಲ್ಲಿರ್ಪ ತೆರನಾ-
    ದುದೆ೦ದಾ ಗೋಪಸ್ತ್ರೀ ತಳಮಳಿಸಿ ತುಯ್ದಳ್ ದುಗುಡದೊಳ್

    ತಾನು ಬರೆದ ಓಲೆಯನ್ನು ಈ ಗೊಲ್ಲ ಎಲ್ಲರ ಮು೦ದೆ ಓದುತ್ತಿದ್ದಾನೆ, ಏನು ಗಾ೦ಪನೋ ಈತ ಅಥವಾ ನನ್ನನ್ನು ಪರಿಹಾಸ ಮಡುವುದೆ೦ದರೆ ಇವನಿಗೆ ಆನ೦ದ… ಅಯ್ಯೋ ನನ್ನ ಮನದ ಭಾವವೆಲ್ಲ ಹುರಿಗಡಲೆ ಚೆಲ್ಲಿದ೦ತಾಯ್ತು ಎ೦ದು ಗೋಪಿಕೆ ತಳಮಳಿಸಿದಳು.

    • ನೀಲಕಂಠರೆ, ರಮಣೀಯಕಲ್ಪನೆ . ಹುರಿಗಡಲೆ ಚೆಲ್ಲಿದಂತೆ ,ಗೈವೊಡಮಲೇ , ತುಯ್ದಳ್-ಅರ್ಥವಾಗಲಿಲ್ಲ.ವಿವರಿಸುವಿರಾ ?( ತುಯ್ದಳ್-ಕಣ್ಣೀರಿನಿಂದ ತುಯ್ದಳ್ ಎಂದೇ ?)

      • ಧನ್ಯವಾದಗಳು!
        ತುಯ್ದಳ್ ಎ೦ದರೆ ಹೊಯ್ದಾಡಿದಳು ಎ೦ದು ತಪ್ಪರ್ಥ ಮಾಡಿಕೊ೦ಡಿದ್ದೆ. ತುಯ್ದಳ್ ದುಗುಡದೊಳ್ ಎ೦ದು ತಿದ್ದಿದ್ದೇನೆ. ಗೈವೊಡಮಲೇ ಎ೦ದರೆ ಗೈವುದೆ೦ದರೆ ಈತನಿಗೆ ಮುದ ಎ೦ಬರ್ಥದಲ್ಲಿ. ತಪ್ಪೇ?
        ಹುರಿಗಡಲೆ ಚೆಲ್ಲಿದ೦ತೆ- ತನ್ನಲ್ಲಿಯೇ ಗೋಪ್ಯವಾಗಿ ಇಟ್ಟುಕೊ೦ಡಿರಬೇಕಿದ್ದ ನನ್ನ ಭಾವನೆಗಳನ್ನು ಎಲ್ಲರ ಮು೦ದೆ ಹುರಿಗಡಲೆಯ೦ತೆ ಹ೦ಚುತ್ತಿದ್ದಾನೆ, ಅಷ್ಟು ಕ್ಷುಲ್ಲಕ ಮಾಡಿಬಿಟ್ಟ ಎ೦ಬ ಕಲ್ಪನೆಯಲ್ಲಿ…

  2. ನೆರೆದೊಡನಿರ್ಪ ನಲ್ಲೆಯರ ಲಲ್ಲೆಯ ಸೊಲ್ಲಿರೆ ಕೇಳನೊಲ್ಲನೇ೦
    ಮೊರೆದಿರೆ ಗೆಜ್ಜೆಗಳ್ ಝಣಝಣತ್ಕೃತಿಯ೦ ಸುಳಿಯುತ್ತೆ ನಾನಿರಲ್
    ಹೊರೆಯೊ ಸುವಾಸಿತ೦ಗಳಿವು ಕತ್ತುರಿ ಚೆಲ್ವಿನ ಭಾಲದೊಳ್ ಸಲಲ್
    ಕರೆಕರೆಯಾದೆನೇ೦ ಹರಿಗೆ ತಾನೆನೆ ನೋಯುತೆ ಬಾಲೆ ಸುಯ್ದಳೇ೦?!

    ಈಕೆ ಅಲ್ಲಿಯೇ ಸುಳಿದಾಡುತ್ತಿದ್ದರೂ ಇವಳ ಕಡೆ ಗಮನ ಕೊಡದ ಕೃಷ್ಣನನ್ನು ನೋಡಿ ಈಕೆ ಆ೦ತ೦ಕ ಪಡುವುದು.

    • ನೀಲಕಂಠರೆ, ಸೊಗಸಾದ ಕಲ್ಪನೆಯ ಚೆಲುವಾದ ಪದ್ಯ. ಮೊದಲನೆ ಪಾದದಲ್ಲಿ” ನೆರೆದಿರುವೆಲ್ಲ ” ಎಂಬುದು “ನೆರೆದಿರ್ಪೆಲ್ಲ” ಎಂದಾದಾಗ ಹಳಗನ್ನಡವಾಗುವುದಾದರೂ, ಛಂದಸ್ಸು ಕೆಡುವುದು.

      • Thanks madam. have changed to ನೆರೆದಿರುತಿರ್ಪ . Should it be fine?

        • ನೆರೆದು ಇರುತೆ ಇರ್ಪ – ಎಂಬುದಕ್ಕಿಂತ ನೆರೆದೊಡನಿರ್ಪ( ನೆರೆದು ಒಡನೆ ಇರ್ಪ ) ಅಥವಾ ಮೆರೆಯುತುಮಿರ್ಪ ಎಂಬುದಾಗಿ ಸವರಬಹುದು.

  3. Of the 8 wives of Krishna, 5 are with him, and the pompous Satyabhaame is aloof (in the foreground). Nagnajiti and the bearish Jaambavati and absent for obvious reasons!
    ಅಷ್ಟರಾಜ್ಞಿಯರೊಳಲ್ಲಿಹರು ಲಕ್ಷ್ಮಣ-ಭದ್ರೆ
    ಜೇಷ್ಟರುಕ್ಮಿಣಿಯು-ರೋಹಿಣಿ-ಮಿತ್ರವೃಂದೆ|
    ದೃಷ್ಟಿತಾಗಿಹ ಸತ್ಯಭಾಮೆಯಳ ನೋಡಿಲ್ಲಿ
    ದೃಷ್ಟರೇಂ ನಗ್ನಜಿತಿ-ಜಾಂಬವತಿಯರ್?!
    (The eight names are as per mahAbhArata. In bhAgavatapurANa, there is Kalindi instead of Rohini. Vishnupuraana entitles him to both Kalindi and Rohini, making it 9 for him. As if to compensate for this, HarivamshaPurana denies him both these thereby making it just 7)

    • ಆತನ ಮಕ್ಕಳು ಪೊದೆಗಿಡಗಳೆಡೆಯಲ್ಲೆಲ್ಲಾದರೂ ಕ೦ಡವೇ? 🙂
      ಜ್ಯೇಷ್ಠ ಆಗಬೆಕಲ್ಲ…
      ಯಾವ ಛ೦ದಸ್ಸು?

      • ಆತನ ಮಕ್ಕಳು ಪೋಗಿರ್ಪರ್ ಮರ-
        ಕೋತಿಯನಾಡಲುಮವರೊಡನೆ|
        ಚೂತದ್ರುಮದೊಳಗಷ್ಟಮಹಿಷಿಯರ
        ನೇತಾಡುತಿಹರ್ ಸುತಸುತೆಯರ್||
        Yes, it should be ಜ್ಯೇಷ್ಠ. Please permit a sameepaprAsa. Chandas is pancamAtra typical of kagga – extra mAtras in the UnagaNa of 2nd line.

        • ಓಹ್ ಚೌಪದಿ… :))
          ಜ್ಯೇಷ್ಠ ಬದಲು ಹೃಷ್ಟ ಆಗಬಹುದಲ್ಲ ಪ್ರಾಸಕ್ಕೆ…

    • ಪಾಪ, ಕಾಳಿ೦ದಿ, ರೋಹಿಣಿಯರು ಗ೦ಡನ ಆಸ್ತಿಗಾಗಿ ಅದೆಷ್ಟು ಪರದಾಡಿದರೊ ಕೋರ್ಟಿನಲ್ಲಿ!!!
      ನಿಮ್ಮ ಸ೦ಶೋಧನೆಗಳೇನೋ ಅದ್ಭುತವಾಗಿವೆ. ಆದರೆ ಇಲ್ಲಿಯ ಬಟ್ಟೆ ಬರೆ, ಭ೦ಗಿಗಳನ್ನು ನೋಡಿದರೆ ಕೃಷ್ಣನೊಬ್ಬ ರಾಜಕುಮಾರ, ಇವರು ಮಹಿಷಿಯರು ಎ೦ದೆಲ್ಲ ಅನಿಸುವುದಿಲ್ಲ. ನಿಮ್ಮ ಗಣಿತದ ಮೇಲಷ್ಟೇ ಊಹಿಸಬೇಕು 🙂

      • ಯವ್ವಾssಗ ಆಯುಧಪೂಜೆ BTS ಬಸ್ಸಂಗ್ ಅಲಂಕಾರ ಮಾಡ್ಕಬ್ಯಾಡಿ, simpleಆಗಿರಿ, ಅಮ್ಬ್ತ ಯೋಳವ್ನೆ ಎಡ್ತಿಗೋಳ್ಗೆ. ನಗ್ನಜಿತಿ-ಜಾಂಬವತೀರು ತೀರss ಸಿಂಪಲ್ಲಾಗ್ಬುಟ್ಟಿ ಮರೆಯಾಗ್ ನಿಂತೋದ್ರೊ! ತಾವ್ ಕಣ್ತುಂಬ ಬಡಾಯಿ-ಬಾಮೇನ್ ನೋಡ್ರ.

  4. ಧವಳಾ೦ಗಪ್ರಭೆಯಿ೦ದೆ ರಾಧೆಯೆಸಗಿರ್ಪಳ್ ಕೃಷ್ಣನ ಪ್ರೇಮಕ೦
    ತವೆ ತಾನಾಗಿರೆ ಕೀರ್ತಿಲಕ್ಷ್ಮಿಯ ತೆರ೦, ತತ್ಪ್ರೀತಿಮಾಧುರ್ಯಮಾ-
    ರ್ದವತಾಮೂರ್ತಿಯೆ ಕಣ್ಗೆ ನಾ೦ಟುವುದು ಕೃಷ್ಣ೦ ತಾನೆ ಪಿ೦ತಿರ್ದು ತೋ-
    ರ್ವವೊಲೆ೦ಬ೦ದಮೆ ತೋರ್ವ ಚಿತ್ರಮಿದು ಕಾಣ್, ರಾಧಾಮಯ೦ ಕೃಷ್ಣನಯ್

    ಕೃಷ್ಣನ ಪ್ರೇಮದ ಕೀರ್ತಿಲಕ್ಷ್ಮಿಯೇ ಧವಳಾ೦ಗಿ ರಾಧೆ. ಅವಳ ದೊಡ್ಡ ಚಿತ್ರ, ಕೃಷ್ಣನ ಚಿಕ್ಕ ಚಿತ್ರ ಇಲ್ಲಿ ಆ ಪ್ರೇಮಮೂರ್ತಿ ರಾಧೆಯ ದೊಡ್ಡತನ , ಅದರ ಹಿ೦ದೆ ಕೃಷ್ಣನೇ ನೇಪಥ್ಯಕ್ಕೆ ಸರಿದ೦ತೆ ತೋರುತ್ತದೆ. ರಾಧಾಮಯನೇ ಕೃಷ್ಣನಾಗುತ್ತಾನೆ.

  5. ಎನ್ನ ಮನವ ಕದ್ದವನಂ
    ತನ್ನವನಾಗಿಸಲು ಬಂದ ಗೋಪಿಯರಂ ಕಣ್
    ಸನ್ನೆಯೊಳಿಂ ಶಪಿಸುತ್ತುಂ
    ಮುನ್ನಮೆ ಬಾರದುದಕಿಂತು ಕೃಷ್ಣನ ಕೇಳ್ವಳ್

    ಮರೆತೆಯೊ ನಿನ್ನೀ ರಾಧೆಯ
    ನರೆನಿಮಷವು ಬಿಡೆನುಮೆಂಬ ಪುಸಿನುಡಿಯಂ ಸುಂ
    ದರಿಯರೊಡನೆ ಕಾಲ ಕಳಯೆ
    ಸರಿಯೇಂ ಪೇಳೆನಗೆ ಮೋಸಮಾಡಿಹೆಯೇಕೈ

    • ೧) ಎನ್ನ ಮನವ ಕದ್ದವನಂ: ನಿಮ್ಮ ಬಗೆಗೆ ಹೇಳಿಕೊಂಡಂತಾಯಿತು. ’ತನ್ನ’ ಎಂದರೆ ಸರಿಯಾಗುತ್ತದೆ.
      ೨) ತನ್ನವನಾಗಿಸಲು ಬಂದ ಗೋಪಿಯರಂ: ತನ್ನವನಾಗಿಸಲು=ತನ್ನವನ/ನು+ಆಗಿಸಲು. ಆದರಿಲ್ಲಿ, ’ತಮ್ಮವನನ್ನಾಗಿಸಿಕೊಳ್ಳಲು’ ಎಂಬ ಅರ್ಥ ಅಪೇಕ್ಷ್ಯ; ಗೋಪಿಯರು ಎಂಬ ಬಹುವಚನಕ್ಕೆ ಹೊಂದುವಂತೆ ’ತಮ್ಮವನು’ ಎಂದಾಗಬೇಕು.
      ’ಚನ್ನಿಗನಂ ತಮ್ಮೊಳೇ ಉಳಿಸಿಕೊಂಡರ ಕಣ್-’ ಎಂದು ತಿದ್ದಬಹುದು.

  6. ಮುನ್ನಮರಳರ್ದೆ,ನೈದಿಲೆ,
    ಜೊನ್ನನೆ ಕಾವಂತೆಯಾಕುಲತೆಯಿಂ ಕಾವಂ
    ತನ್ನ ಪ್ರೇಯಸಿಯಂ,ತವೆ
    ಬನ್ನಂಬಡದೇ ಮುರಾರಿ ಗೋಪಿಕೆಯರೊಡಂ
    (ಹೇಗೆ ನೈದಿಲೆಯು ಚಂದ್ರನ ಬೆಳಕಿಗೋಸುಗ ಕಾಯುತ್ತದೋ ಹಾಗೆಯೇ ತನ್ನ ಪ್ರೇಯಸಿಗಾಗಿ ಕೃಷ್ಣನು ಕಾಯುವ)

  7. ತಂತಿಯು ಬಂತೆಂದು ಚಿಂತಿಸಿs ನುಡಿದsನ
    ಚಿಂತಿಲ್ಲs ಗೆಣೆಯs ಮಥುರೆsಗೆ ಹೋದsರೆ
    ಸಂತಸs ತರವs ಚರವಾಣಿ II

    ಚರವಾಣಿ = cellphone ,
    ಕೃಷ್ಣನಿಗೆ ಮಥುರೆಯಿಂದ ಆಮಂತ್ರಣ ಬಂದ ವಿಷಯವನ್ನು ಸಖಿಯರು ರಾಧೆಗೆ ತಿಳಿಸಿದಾಗ : ಅದನ್ನು ಅವನು ಓದಿದ ಚಿತ್ರಣ ರಾಧೆಯ ಕಲ್ಪನೆಯಲ್ಲಿ ಮೂಡಿ ಬ೦ದು, ಅವಳು ಕೃಷ್ಣನಿಗೆ ಒಂದು ಚರವಾಣಿ ತೆಗೆದು ಕೊಟ್ಟು ಕಳುಹಿಸುವ ಯೋಚನೆಯಲ್ಲಿ …. (ದ್ವಾಪರದೊಂದಿಗೆ ಈ ಶತಮಾನವನ್ನು ಬೆಸೆಯುವ ನನ್ನ ಕಲ್ಪನೆ )

  8. ಹೊತ್ತು ಬಿತ್ತರಮಾಯ್ತೆ! ಹಾರಕೆ,
    ಮುತ್ತುಗಳ್ ಸಲೆ ಮೀಸಲಾಯ್ತೇ!
    ಮತ್ತೆ ಬದುಕಿನೊಳೊಂಟಿ ತನಮೇ ಜೀವಸಖಿಯಾಗಲ್!
    ಹುತ್ತುಗಟ್ಟಿದ ವಿರಹಭಾಷೆಯೊ
    ಳತ್ತು ಕೃಷ್ಣನ ಕರೆದು ರಾಧೆಯು
    ಚಿತ್ತಮಂ ಬಿತ್ತರಿಸೆ ,ಪತ್ರಮೆ ಸಂದವೋಲಾಯ್ತೇಂ!

  9. ಅಂದು ವಿಪ್ರನ ಕಯ್ಯೊಳಾಂ ಕಳುಪಿರ್ದ ಕಾದಲಿನೋಲೆಯಂ
    ತಂದನೇಂ ಮುಗುಳಿಂದು ಕೂರ್ಮೆಯು ಕಾಪುಗಯ್ದುದನೆಲ್ಲರೊಳ್|
    ಚಂದದಿಂದೆ ಸಮರ್ಪಣೋತ್ಕಟಭಾವಮಂ ಬಗೆ ಬಣ್ಣಿಸಲ್
    ಸುಂದರಾಗಿಯರೆಂಬರ್ಗಂ ಪ್ರಿಯನೆಂದು ರುಕ್ಮಿಣಿ ಮೆಚ್ಚುವಳ್||

    ಹಿಂದೆ ತಾನು ಅಗ್ನಿದ್ಯೋತನನೆಂಬ ವಿಪ್ರನ ಮೂಲಕ ಕಳುಹಿದ ಆತ್ಮಸಮರ್ಪಣರೂಪದ ಪ್ರಣಯಪತ್ರವನ್ನು ಜೋಪಾನವಾಗಿ ಈ ವರೆಗೆ ಕಾಯ್ದಿರಿಸಿ ಇದೀಗ ತಮ್ಮ ತಮ್ಮಚೆಲುವಿನಿಂದ ಬೀಗಿ ಬಿಂಕವೇರಿದ ವನಿತೆಯರಿಗೆ ಪ್ರೀತಿಯ ಪರಿ ಎಂಥದ್ದೆಂಬುದನ್ನು ತಿಳಿಸಲು ಕೃಷ್ಣನು ಆ ಓಲೆಯನ್ನು ವಿವರಿಸಲು ತೊಡಗಿದನೇ ಎಂದು ಲಜ್ಜೆ-ಮೆಚ್ಚುಗೆಗಳಿಂದ, ಕ್ಕೃತಜ್ಞತೆ-ಪ್ರೀತಿಗಳಿಂದ ರುಕ್ಮಿಣಿಯು ಮೆಲ್ಲನೆ ಆ ಎಡೆಯಿಂದ ದೂರ ಸಾರುವ ಚಿತ್ರ ಈ ಪದ್ಯದ ತಾತ್ಪರ್ಯ.

  10. ಅರೆಚಣ೦ ದುಗುಡ೦ಗೊಳುತು೦ ತನ್ನ೦ ಮರೆದನ್ಯ ಸಖೀಜನ೦
    ವರಿಸೆ ತಟ್ಟನೆ ಸ೦ದನೆ ಕೃಷ್ಣ೦, ಜಾರ್ದನೆ ಬಿಟ್ಟಿರದಿರ್ಪೆನೆ೦-
    ದೊರೆದ ಕಟ್ಟಳೆಯಿ೦, ಕರಕಷ್ಟ೦ ನ೦ಬುವೊಡೀತನ ಚರ್ಯೆಯ೦
    ತರಳೆಯಿ೦ತಿರೆ ಚಿ೦ತಿಸುತೇನೋ ನೆಪ್ಪಿಗೆ ಬ೦ದುದಲಾ ಕ್ಷಣ೦!

    ಎದೆಯ೦ ಮುಟ್ಟುತೆ ನೋಡಿಕೊ೦ಡೊಡಮದೇ ವ೦ಶೀನಿನಾದ೦ ಮುದ೦
    ಹೃದಯಕ್ಕ೦, ಸದನ೦ ಸದಾ ಸಹೃದಯರ್ ಹ್ಲಾದ೦ಗೊಳುತ್ತು೦ ನಿಲ-
    ಲ್ಕೊದಗಿರ್ದತ್ತು ತದೀಯ ನಾದದೊಳೆ ಕೃಷ್ಣ೦ ಮ೦ದಹಾಸ೦ಗುಡು-
    ತ್ತಿದೊ ನಿನ್ನ೦ ಬಿಡದಿರ್ಪೆನೆ೦ದೊರೆದುದ೦ ಕೇಳ್ದಳ್ ಸುಖೋತ್ಕರ್ಷದೊಳ್

    ನಿನ್ನನ್ನು ಬಿಟ್ಟಿರುವುದಿಲ್ಲ ಎ೦ದದ್ದನ್ನು ಮರೆತು ಬೇರೆ ಸಖಿಯರ ಜೊತೆಗೂಡಿದನೇ ಎ೦ದು ಬೇಸರದಿ೦ದಿದ್ದಾಗಲೇ ಏನೋ ಹೊಳೆದು ಎದೆ ಮುಟ್ಟಿಕೊ೦ಡಾಗ ಅಲ್ಲಿ ವೇಣುನಾದ ಕೇಳಿಸುತ್ತಾ ಅದರೊಳಗಿ೦ದ ಕೃಷ್ಣನ ಮಾತು ಕೇಳಿ ಹರ್ಷಿಸಿದಳು.

    • ತುಂಬ ಒಳ್ಳೆಯ ಪದ್ಯಗಳು. ಅಭಿನಂದನೆಗಳು.

      ಅನುದಿನಮುಂ ವ್ರತಮೆಂಬಿನ-
      ಮನುವಿಂದಂ ಪದ್ಯರಚನೆಯೊಳ್ ಪ್ರೌಢಿಮೆಯಂ|
      ಮನನೀಯಕಲ್ಪನೆಗಳಿಂ
      ದನಿಗುಡುವೀ ನಿಮ್ಮ ಕೃಷಿಗಮಿದೊ ವಂದನೆಗಳ್!!

      • ಧನ್ಯವಾದಗಳು ಸರ್!
        ಕೃಷಿ ಸುಲಭಸಾಧ್ಯಮೈ ರಸ-
        ಋಷಿಗಳ್ ಭವದುಪಮರಿರ್ದೊಡ೦ ತಿಳಿವಿನ ಕ-
        ಲ್ಮಷಮ೦ ತೊಡೆವ ರವಿಯವೊಲ್
        ತೃಷೆಯ೦ ನೀಗುತ್ತೆ ನನ್ನಿಯ ಪೊನಲವೊಲ್ ಮೇಣ್:)

  11. ಇರಿಸುವನೆಲ್ಲರಂ ಹೃದಯದೊಳ್,ನಿರುತಂ, ಬಲುಕೂರ್ಮೆಯಿಂದಮೆಂ
    ದರಿಯದೆ,ಗೋಪನೋದುತಿರಲೋಲೆಯನಾತುರದಿಂದೆ,ತಮ್ಮೊಳೇ
    ಪರಿತಪಿಸುತ್ತುಮಸ್ಥಿರತೆಯಿಂ, ಪ್ರಿಯನಳ್ತಿಯೆ ಕೋದುಪೋಕುಮೆಂ
    ಬರಿಮೆಯಿನೀ ಸಖೀಜನತೆ ಚಿಂತಿತಗೊಂಡುದೆ ,ಸಾಜಮೆಂಬವೊಲ್!

    (ತನಗೆಬಂದ,(ಇನ್ನೊಂದು) ಪತ್ರವನ್ನು ಕೃಷ್ಣನು ಓದುತ್ತಿರಲಾಗಿ, ತಮ್ಮ ಪ್ರ್ರೀತಿಯೇ ಕಳೆದುಹೋಗುವದೇನೋ ಎಂದು ಸಖಿಯರು ಸಹಜವಾಗಿಯೇ ಚಿಂತಿತರಾದರೇನೋ! ಅವನು ಎಲ್ಲರನ್ನೂ ತನ್ನ ಹೃದಯದಲ್ಲಿ ಇರಿಸಿಕೊಳ್ಳುವನೆಂಬುದನ್ನು ಅರಿಯದೇ!)

    • ಪ್ರಿಯನಾಳ್ತಿಯೆ?? It should be ಪ್ರಿಯನಳ್ತಿಯೆ.
      ಚಿಂತಿತಗೊಂಡುದೆ should be “chintitamaadude”

    • ಪತಿಯಾವಗಂ ತನ್ನ ಹೃದಯದೊಳೆ ಬೈತಿಡುವ-
      ನಿತರೆಲ್ಲ ರತಿಯರನುಮೆಂದು ನೀಮೇ|
      ಸತಿಯೆ ಒಪ್ಪದೆಲಿದ್ದು ಸುಮ್ಮನಾ ಗೋಪಿಯರ
      ಮತಿಯ ಖಂಡಿಸಲೇಕೆ ಇಬ್ಬಂದಿಯಿಂ!!

  12. ಮಾನಕ್ಕೆ ಸೋಲ್ತೀ ಮನೆಮಂದಿಯೆಲ್ಲಂ
    “ಬಾ!ನೀನಿದೀಗಳ್ “ಮನೆವಾಳ್ತೆಗೆಂಬರ್
    ನಾನಾ ವಿಲಾಸಂಗಳ ಮೋಜು ತಪ್ಪ
    ಲ್ಕಾನಾದೆನೇಂ ,ವಂಚಿತೆಯೇ ನಿಜಕ್ಕುಂ!

    (ಮನೆಗೆ ,ಮುಂಚಿತವಾಗಿಯೇ ತೆರಳಬೇಕಾದ ಪರಿಸ್ಥಿತಿಯಿರುವ ಸಖಿಯ ನೋವು )

    • ಆಹಾ ತು೦ಬ ಚೆನ್ನಾಗಿದೆ.. ಹಳಗನ್ನಡೀಕರಣಕ್ಕಾಗಿ, ಬಾ ಪೆಣ್ಣೆ, ಬಾ ಬಾಲೆ .. ಎ೦ದು ತಿದ್ದಬಹುದಲ್ಲ.. 🙂

    • ಕ್ಷಮಿಸಿ, ಪ್ರಾಸ ತಪ್ಪುತ್ತದೆ. ಬಾ ನೀನಿದೀಗಳ್ ಎನ್ನಬಹುದು.

      • ಕಾಂಚನಾ ಅವರು ಸತತವಾಗಿ ಹೊಸ ಹೊಸ ವೃತ್ತಗಳಲ್ಲಿಯೂ ಹಳಗನ್ನಡದಲ್ಲಿಯೂ ರಚಿಸಿ ತಮಗೆ ಮೊದಲಿನಿಂದಲೂ ಇರುವ ಪ್ರತಿಭೆಗೆ ಮತ್ತೂ ಸೊಗಸಾದ ಕಳೆಯನ್ನು ತಂದುಕೊಂಡಿದ್ದಾರೆ; ಅಭಿನಂದನೆಗಳು.

        • ಹೀಗೇನಾದರೂ ವಿಸ್ಮಯವೊಂದು ನಡೆದಿದ್ದರೆ, ಅದಕ್ಕೆ ತಮ್ಮ ಮತ್ತು ಸಹಪದ್ಯಪಾನಿಗಳ ಸಹಕಾರ,ಸಹಾಯವೇ ಕಾರಣ 🙂 . ಹಾಗಾಗಿ ತಮ್ಮೆಲ್ಲರಿಗೂ ಶ್ರಧ್ಧಾಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.

  13. ನಯನಮನೋಹರಮೈ, ಗೋ-
    ಪಿಯರೊಡೆ ಕೃಷ್ಣ ಸಮಯಮಿದು, ಪೂರ್ಣದೆ ರಾಧಾ-
    ಮಯಮೈ, ಮೈದಳೆದ ಸಮ-
    ನ್ವಯ ಪರಿಪಾಟಮಿದು ರಾಸಲೀಲಾಭಾಸಂ ।।

    • tumba chennagide madam..

    • ಸಮಪಾದಗಳ ಮಧ್ಯಗಣವು (ಪ್ರಸ್ತುತದಲ್ಲಿ ಎರಡನೆಯ ಪಾದ) ಸರ್ವಲಘುವಾದರೆ, ಮೊದಲನೆಯ ಅಕ್ಷರದ ನಂತರ ಯತಿಯಿರಬೇಕು.

    • ಧನ್ಯವಾದಗಳು ಪ್ರಸಾದ್ ಸರ್, ನೀಲಕಂಠ.
      ತಿದ್ದಿದ ಪದ್ಯ :
      ನಯನಮನೋಹರಮೈ, ಗೋ-
      ಪಿಯರೊಡೆ ಕೃಷ್ಣ ಸಮಯಂ ವಿಶೇಷಂ ರಾಧಾ-
      ಮಯಮಿದು, ಮೈದಳೆದ ಸಮ-
      ನ್ವಯ ಪರಿಪಾಟಮಿದು ರಾಸಲೀಲಾಭಾಸಂ ।।

  14. ಅನಿಶಂ ಮರಳುವನೆಂದಾಂ,
    ಮುನಿಸಂ ತೋರ್ದಾಡಿದಾಟಮೇ,ಮುಳುವಾಯ್ತೇಂ!
    ವನಕನ್ಯೆಯರೊಡಗೂಡೆ
    ನ್ನನೆ ಮರೆತನಲಾ!ಸಖಂ,ಕಿಶೋರಂ,ಚೋರಂ!

    (ಪ್ರತಿಸಲದಂತೇ ,ಮುನಿಸನ್ನು ತೋರಿದಾಗ,ತನ್ನಲ್ಲಿಗೆ ಮರಳಿಬಾರದಿರುವ ಸಖನನ್ನು ಮನದಲ್ಲಿ ಹಳಿಯುತ್ತಾ..)

  15. || ಮಾಲಿನೀವೃತ್ತ ||

    ಮಸುಕದೊಲವ ನೆಪ್ಪಿಂ ಚಿತ್ತಮಾಗಲ್ ಪ್ರಸನ್ನಂ,
    ರಸದನುಭವಕೆಂದೇ ಪೂರ್ಣಶೃಂಗಾರದಿಂದಂ, |
    ಕುಸುಮವನದ ತಂಪೊಳ್,ರಾಧೆ ಕೃಷ್ಣಂಗೆ ಕಾಯು-
    ತ್ತೆಸೆಯೆ ಮಧುರಭಾವಂಬೊಂದಿರಲ್, ದೃಶ್ಯಮಂದಂ ||

    • ದೃಶ್ಯಮಂದಂ – Is this Sanskrit or Kannada 😉

    • ಆಹಾ, ಜಯದೇವನ ಪದ್ಯ ಓದಿದ೦ತಾಯ್ತು… 🙂

      • ಪದ್ಯವನ್ನು ಮೆಚ್ಚಿರುವುದಕ್ಕೆ ಧನ್ಯವಾದಗಳು ನೀಲಕಂಠರೆ. ಆದರೆ ಜಯದೇವನ ಪದ್ಯಕ್ಕೆ ಹೋಲಿಸಿರುವುದು ಮಾತ್ರ ಉತ್ಪ್ರೇಕ್ಷೆಯಾಗಿದೆ. ನೀವೇನಾದರೂ ವಿನೋದವಾಡಿದ್ದೆ ? 🙂

Leave a Reply to ಶಕುಂತಲಾ ಮೊಳೆಯಾರ ಪಾದೆಕಲ್ಲು Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)