Apr 182016
 

ಸರಿ, ಗಮ, ಪದ, ನಿಸ ಎನ್ನುವ ದತ್ತಪದಗಳನ್ನು ಕ್ರಮವಾಗಿ ನಾಲ್ಕೂ ಪಾದಗಳಲ್ಲಿ ಬಳೆಸಿ ಸೀತಾಮಾತೆಯನ್ನು ಕುರಿತು ಪದ್ಯರಚೆಯನ್ನು ಮಾಡಿರಿ.

  79 Responses to “ಪದ್ಯಸಪ್ತಾಹ ೧೯೮: ದತ್ತಪದಿ”

  1. ಸರಿ ! ಈಕೆಯುರ್ವಿಯಂದದಿ ತಾಳ್ಮೆಪೊಂದಿಹಳು
    ಧರೆಯೊಳಗೆ ಸುಗಮದಿಂ ಜೀವಿಸಿಹಳೇ?
    ಹಿರಿಯರಾಶ್ರಮದಲ್ಲಿ ಪದವಿಟ್ಟು ಜನಕಜೆಯು
    ಅರರೆ ! ಲವಕುಶರು ಜನಿಸಲು ಹರ್ಷಿಪಳ್

    • ಉರ್ವಿ ಎಂಬ ಸ್ವರಾದಿಯಾದ ಚಿಕ್ಕದಾದ ಪದವನ್ನು ಬಳಸುವುದರಿಂದ ಸಂಧಿಗೆ ಅನುವಾಗಿ ಒಂದೇ ಅಕ್ಷರದಲ್ಲಿ (ರ್ವಿ) ಭೂಮಿಯನ್ನು ತರುವುದಾಗುತ್ತದೆ. ಇದು ಸುತರಾಂ ಸ್ತುತ್ಯ. ಆ ಪದವೂ ಪ್ರೌಢವಾದದ್ದು, ಮುದ ನೀಡುವಂಥದ್ದು. ನಿನಗೆ ರಾಮಾಯಣಕತೆಯ ಪರಿಚಯವಿದೆಯೆಂಬುದೂ ಪದ್ಯದಿಂದ ಸ್ಪಷ್ಟವಾಗುತ್ತದೆ. ಪದ್ಯವು ಚೆನ್ನಾಗಿದೆ. ಅಭಿನಂದನೆಗಳು.
      (ಅರರೆ! ಲವಕುಶರು ಜನ್ಮಿಸೆ ಹರ್ಷಿಪಳ್ – ಲಘುಬಾಹುಳ್ಯವನ್ನು ಹೀಗೆ ತಪ್ಪಿಸಬಹುದು)

  2. ಸರಿಯುತ್ತುಂ ರಘುರಾಮಸಂಗದೊಳೆ ಸಂಕಷ್ಟಂಗಳಂ ಮೆಟ್ಟಿದಾ,
    ನಿರುತಂ ಧರ್ಮದ ವಟ್ಟೆಯಿಂ ಗಮನಮಂ ಬೇರೆಲ್ಲಿಗೂ ಅಟ್ಟದಾ,
    ಸರಸೀಜಾತಸುಮಂಗಳಂ ನಿಸದವುಂ ಪೋಲುತ್ತುಮಿರ್ಪಂದದಾ,
    ವರಸೌಂದರ್ಯಪದಂಗಳೆಲ್ಲರನು ತಾಂ ಕಾಪಾಡಲೈ ಶಾಶ್ವತಂ!

    • ಆ ಪಾದಂಗಳುಮೆಂದಿಗುಂ ಹತಿಸದಿರ್ಗುಂ ರಾಮಚಂದ್ರಾಖ್ಯನಂ 😉

    • ಘೋರ್ ಎಂಬ ಪದ ಅಸಾಧು. ಅದು ಘೋರ ಎಂದೇ ಇರುವುದು. …….ಸಂಕಷ್ಟಂಗಳಂ…….. ಎಂದು ಸವರಿಸಬಹುದು.

  3. ಚಮಾಚೌ|| ಬಿಡುವೊಳ್ ಸರಿಗಮಪದನಿಸವಾಡದೆ
    ನಿಡುಸುಯ್ಯತ್ತಿದ್ದೊಡೆ ಸೀತೆ|
    ಜಡಭರತರು ತಾವಾಗದೆ ಲವಕುಶ-
    ರಡಿಗಡಿಗುಲಿವರೆ ರಾಮಕತೆ||

    • ಆಹಾ! ನಿಮ್ಮ ಜಾಣ್ಮೆಯೇ!! ಪೂರಣವೇನೋ ಚೆನ್ನಾಗಿದೆ. ಆದರೆ ಸಪ್ತಸ್ವರಗಳನ್ನು ಸ್ವಾರ್ಥತ್ಯಾಗರೂಪದಿಂದ (ಅಂದರೆ ತಮ್ಮ ಸ್ವರವಾಚಕತ್ವಕ್ಕೆ ಹೊರತಾದ ರೀತಿಯಲ್ಲಿ) ಬಳಸಬೇಕೆಂದಲ್ಲವೇ ದತ್ತಪದಿಯಲ್ಲಿ ಸಾಮಾನ್ಯವಾದ ಅಲಿಖಿತನಿಯಮ! ಸಪ್ತಸ್ವರಗಳನ್ನು ಯಥಾವತ್ತಾಗಿ ಹಾಗೆಯೇ ಬಳಸಿದರೆ ಚಮತ್ಕಾರಕ್ಕೆ ಎಡೆಯೆಲ್ಲಿ?

      • ನಿಮ್ಮ ಗರಡಿಯಲ್ಲಿ ಪಳಗಿರುವವನು ನಾನು. ಅಂತಹ ತಪ್ಪನ್ನು ಮಾಡುವುದಿಲ್ಲ.
        ಸರಿ=move, correct, even (opposite of ‘odd’)
        ಗಮ=aroma, exit, gait
        ಪದ=word, foot, verse, position
        ನಿಸ=’ಅನಿಶಂ’ಶಬ್ದದ ಹ್ರಸ್ವರೂಪ; ಹಿಂದಿಯಲ್ಲಿ ಹೆಚ್ಚು ಬಳಕೆಯಿರುವುದು (ನಿಸ ದಿನ ಗಾಯೇ ಮನ್ ಪ್ರಭುನಾಮ್)
        ದತ್ತಪದಗಳ ಈ ಸ್ವಾರ್ಥಗಳನ್ನು ತ್ಯಜಿಸಿ ಸಂಗೀತಸ್ವರಗಳೆಂಬಂತೆ ಬಳಸಿದ್ದೇನಲ್ಲ! ದತ್ತಪದಗಳು ಸಂಗೀತಸ್ವರಗಳು ಎಂದು ಪ್ರಶ್ನೆಯಲ್ಲಿ ಸೂಚಿತವಾಗಿಲ್ಲವಲ್ಲ! 😉
        ನನ್ನ ಉದ್ಧಟತನವನ್ನು ಕ್ಷಮಿಸಿ. ನಿಮ್ಮ ಸೂಚನೆಯನ್ನು ಅನುಸರಿಸಿ ಇನ್ನೊಂದು ಪದ್ಯವನ್ನು ರಚಿಸುವೆ. ಇದೊಂದು ವೈವಿಧ್ಯ ಅಷ್ಟೆ. ಮೆಚ್ಚುಗೆಗಾಗಿ ಧನ್ಯವಾದಗಳು.

        • ಅಡ್ಡಿಯಿಲ್ಲ. ಆದರೆ ಒಂದು ತಪ್ಪಿಗೆ ಬದಲಾಗಿ ಮತ್ತೊಂದು ತಪ್ಪಾಯಿತಲ್ಲಾ! ಅರಿಸಮಾಸದ ದೋಷವು ಪದ ಎಂಬಲ್ಲಿ ಆಗಿದೆ. ಅಲ್ಲದೆ ನಿಸ ಎಂಬುದು ಅಯುಕ್ತವಾದ ಆಯಾತಪದ (imported word) 🙂

    • ಹಾದಿರಂಪರೆ, ದತ್ತಪದಗಳನ್ನು ಕ್ರಮವಾಗಿ ನಾಲ್ಕೂ ಪಾದಗಳಲ್ಲಿ ಬಳಸಬೇಕೆಂದು ಸೋಮರು ಸೂಚಿಸಿದ್ದಾರಲ್ಲವೆ ? ಮೊದಲಿನ ಪಾದದಲ್ಲೇ ಎಲ್ಲಾ ದತ್ತಪದಗಳನ್ನೂ ಬಳಸಿದ್ದೀರಲ್ಲಾ ?! 🙂

  4. ಯಾ ಕಾನನಾಧ್ವನಿ ಸರಾಕ್ಷಸವಾಟಿಕಾಯಾಂ
    ತೀವ್ರಂ ತತಾಪ, ದಶಕಂಠನಿಶಾಭಿಭೂತಾ |
    ರಾಮಾರ್ಯಮಾಗಮಸಮುತ್ಕಚಸಾರಾಸಾಸ್ಯಾ
    ಭಾಗೀರಥೀವ ಸರಿತಾಂ ವನಿತಾಸು ಸೀತಾ ||

    ಸರಿಗಮಗಳನ್ನು ವಕ್ರಾವರೋಹಣಕ್ರಮದಲ್ಲಿ ತಂದುದಕ್ಕೆ ಕ್ಷಮೆಯಿರಲಿ. ದತ್ತಪದಗಳನ್ನು ತರಲು ಸುಮ್ಮನೇ ಏನೋ ಬರೆದದ್ದಾಗಿದೆ.

    • ಆಹಾ! ನಿಮ್ಮ ಕವಿತೆ ತುಂಬ ಸೊಗಸಾಗಿದೆ ಕೇಯೂರ್! ನಿಜಕ್ಕೂ ಒಳ್ಳೆಯ ಭಾಷೆ, ಬಂಧ ಹಾಗೂ ದತ್ತಪದವಿನ್ಯಾಸ. ಕಲ್ಪನೆಯೂ ಉತ್ಕೃಷ್ಟವಾಗಿದೆ. ಧನ್ಯವಾದ.

    • Fine verse

  5. ಸರಿ ಸರಿ ನಿನ್ನಯ ನಡೆ, ನುಡಿ ಜಾನಕಿ!
    ವರಜಗದಾಗಮಗಮನಪಥಂ|
    ಸುರಸಾಸ್ಪದಪದಕಾವ್ಯಮಲಾ ನಿ-
    ನ್ನರಿಮೆಯೆ ಮಾನಿಸನಿಸದಹದಂ||

    ಇಲ್ಲಿರುವ ವಿಶೇಷವೆಲ್ಲ ದತ್ತಪದಗಳನ್ನು ಸ್ವಾರ್ಥತ್ಯಾಗರೂಪದಲ್ಲಿ ಅವ್ಯವಹಿತವಾಗಿ (continuously) ಎರಡೆರಡು ಬಾರಿ ಬಳಸಿರುವುದೇ ಆಗಿದೆ. ಸುಮ್ಮನೆ ಇದೊಂದು ಬಗೆಯಷ್ಟೆ.

    • ತುಂಬ ಮನೋಜ್ಞವಾಗಿದೆ ಸರ್

    • ಇಂಥದ್ದೊಂದು ಸಾಧ್ಯತೆಯನ್ನು ತಿಳಿಸಿಕೊಟ್ಟುದಕ್ಕಾಗಿ ಧನ್ಯವಾದಗಳು.

    • ನಿಮ್ಮ ರೂಪಕ ತಾಳದ “ಅಲಂಕಾರ” ಪದ್ಯ (ಸರಿಸರಿ ಗಮ / ರಿಗರಿಗ ಮಪ /ಗಮಗಮ ಪದ ….) ಬಹಳ ಇಷ್ಟವಾಯಿತು ಗಣೇಶ್ ಸರ್

  6. ಅಶೋಕವನದಲ್ಲಾದ ಘಟನೆ:

    ಬೇಸರಿಸದಿರು ತಾಯಿ ಜಾನಕಿ
    ಲೇಸು ಗಮನವ ಹರಿಸು ಮೇಗಡೆ
    ಕೂಸು ಹನುಮನ ಪದವ ಕೇಳೆಂದಿರಲು ಮಾರುತಿಯು
    ಮಾಸು ಬಟ್ಟೆಯನುಟ್ಟ ಮೈಥಿಲಿ
    ಯೋಸರಿಸಿ ತಲೆಯೆತ್ತೆ ಮನವು
    -ಲ್ಲಾಸವೆನಿಸಲು ನಗುವು ಮೂಡಿತು ವಾನರನ ಕಂಡು

    (ಷಟ್ಪದಿಯಾದ್ದರಿಂದ ಸಾಲಾಗಿ ನಾಲ್ಕು ಪಾದಗಳಲ್ಲಿ ಅಲ್ಲದಿದ್ದರೂ ಕ್ರಮವಾಗಿ ಸರಿ, ಗಮ, ಪದ, ನಿಸ ಗಳನ್ನು ಒಂದಾದಮೇಲೊಂದು ತರುವ ಪ್ರಯತ್ನ)

  7. ಕಳಿತಕದಳೀ ತರುವತೋಂಟವ
    ನಳಿಸಲೆನುತೆ ನಿಸರ್ಗದೊಡಲಿಂ,
    ಬಳಿಯವೆರೆಸಹ! ಗಮನಗೈದಿಭವೃಂದದಂತೆಯೆ ತಾಂ
    ನಲಿದು ಪದಪೊಳು ಸೀತೆಯಿರ್ದೆಡೆ
    ಬಳಸಿ ಸರಿದುದೆ ಕಷ್ಟನಿಚಯಮೆ
    ಪಳುವಿಗಟ್ಟುತೆ ಭಗ್ನಗೊಳಿಸುತೆ ತಳಿತಕನಸುಗಳಂ!

  8. ಜಾನಕಿಯಾಗುತೆ ಸಹಧರ್ಮಿಣಿ ಮೇ
    ಣ್ಮಾನಿತಳಾದರು ಮಾತೆಯವೊಲ್,
    ಜಾನಿಸದಿರ್ಪರೆ ಸರಿ-ತಪ್ಪನು,ರಾ
    ಮನ ಗಮನದ ಪದವಿಧಿಯಿಂದುಂ?

    • ಒಳ್ಳೆಯ ರಚನೆಗಳು. ಅದರೆ ದತ್ತಪದಗಳ ಆನುಪೂರ್ವಿ ತಪ್ಪಿತಲ್ಲಾ!

      • ಹಾದಿರಂಪರು ತೋರ್ದ ಹಾದಿಯಂತೇ , ತಪ್ಪಿದ್ದಕ್ಕಾಗಿ ಇನ್ನೊಂದು ದತ್ತಪದಗಳ ಕ್ರಮವನ್ನು ಪಾಲಿಸಿರುವ ಚೌಪದಿ 🙂

        ಸರಿಯಿರುಳು ,ದಶಶಿರನ ಕಿಂಕರರ ನುಡಿಯೊಡನೆ
        ಸೆರೆಗಮಲು ಧರಣಿಜೆಗೆ ನೋವಿತ್ತಿರ
        ಲುರಪದರಮಂ ಸೀಳಿ,ಪರಿದತ್ತು ನಯನಾಂಬು
        ವುರವಣಿಸಿ ಕವನಿಸಲು ಮಧುರಸ್ಮೃತಿಯಂ!

  9. ಸರಿಯದುವುದೆಂದುತಾ ಕಾನನಕೆ ಪೊರಟಳೈ
    ನರರ ನಡುವಿರುವವಳು ಮೃಗಗಳೊಡಗೂಡಿ ತಾ
    ಬರಿ ಸುಗಮ ಸಂಗೀತವೇನಿಲ್ಲ ನೋಡಲ್ಲಿ , ರಕ್ಕಸರ ಅಟ್ಟಹಾಸ !
    ಅರಸಿಯೋ ಪಾಪದ ಹಸುಳೆಯೋಲ್ ಮುಗುದುತನದ-
    ಲರಸುತಲಿ ಸವಿಯುವಳು ಕಂದಮೂಲಾದಿಗಳ್
    ಜರೆವಳೇ ? ಮಾನಿಸರ ? ಅತ್ತೆಯರ ? ದಶರಥನ ? ರಕ್ಕಸರ? ಅಲ್ತಲ್ತು !

    • ಅಂಕಿತಾ! ಪ್ರಯತ್ನವೇನೋ ಶ್ಲಾಘ್ಯ. ಆದರೆ ಛಂದಸ್ಸಿನಲ್ಲಿ ಸ್ವಲ್ಪ ಎಡವಿದಂತಿದೆ.

  10. ಅವನಿ ಪಾಲಕ ಜನಕಗೊದಗಿರ-
    ಲವನಿಯೊಳಗಡೆಯೊಸರಿನ೦ದದೆ
    ಕುವರಿ, ಮಿಥಿಲಾಗಮನದೆ ಶ್ರೀ ರಾಮನನುವರಿಸಿ I
    ಭವದ ಬಂಧನ ಪರಮಪದವೆನು-
    ತವನಿಜೆಯು ಕಣ್ಣೀರ ಹನಿಸಲು
    ಭುವನವದು ಕೊಂಡಾಡಿ ಮೆರೆಯಿತು ರವಿಕುಲೋತ್ತಮನ II

  11. ಮೇದಿನೀ|| ಸರಿತ್ಪತಿಯ ದಾಂಟುತುಂ ಗುರುತ ನೀಡೆ ವಾನರಂ
    ಕೊರಂಗ ಬದಿಗಿತ್ತಳೈ, ಸುಗಮಮಿನ್ನು ರಾಮನಿಂ|
    ನರಾಧಮನ ವ್ಯಾಪದಂ, ಮಿಗೆ ವಿನಾಶ ಲಂಕೆಯಾ|
    ನಿರೀಕ್ಷೆಯೊಳು ಹ್ಲಾದದಿಂ ಸವಿದಿಹಳ್ ನಿಸರ್ಗಮಂ||

    • ಹಾದಿರಂಪರೆ, ಚೆನ್ನಾಗಿದೆ. ಈ ವೃತ್ತದಲ್ಲಿ,ಮೊದಲೆರಡು ಸಾಲುಗಳಿಗೂ ಮತ್ತೆರಡು ಸಾಲುಗಳಿಗೂ ಛಂದಸ್ಸಿನಲ್ಲಿ ವ್ಯತ್ಯಾಸವಿದೆಯೆ ? “ವಿನಾಶ” ವು ಪ್ರತ್ಯಯಸಹಿತವಾಗಿದ್ದಲ್ಲಿ ಒಳಿತು. “ನಿರೀಕ್ಷೆಯೊಳು” ಎಂಬುದು “ನಿರೀಕ್ಷೆಯೊಳೆ “ಹಾಗೂ ಸವಿದಿಹಳ್-ಸವಿಯುತುಂ ಆದಲ್ಲಿ ಹಳಗನ್ನಡವಾಗುವುದು. ಕೊರಂಗು ಎನ್ನುವುದು ಅಸಾಧುವೆಂಬ ಸಂದೇಹವಿದೆ. ನಾನು ಓದಿದಂತೆ, “ಕೊರಗು” ಎಂದೇ ಹಳಗನ್ನಡದಲ್ಲಿಯೂ ಇದೆ.””ದಾಂಟುತುಂ-ದಾಂಟಿರಲ್” ಆಗಬೇಕೆ ?”ವ್ಯಾಪದ್ “ಹಾಗೂ “ವ್ಯಾಪಾದಂ” ಎಂಬೆರಡು ರೂಪಗಳನ್ನು ಶಬ್ದಕೋಶದಲ್ಲಿ ನೋಡಿರುವೆ. “ವ್ಯಾಪದಂ”- ಸರಿಯೆ ?

      • ವ್ಯಾಪದಂ ಮತ್ತು ಹ್ಲಾದದಿಂ – ಶಿಥಿಲದ್ವಿತ್ವ
        ಹೌದು, ’ವಿನಾಶ’ವು ಪ್ರತ್ಯಯವನ್ನು ಬೇಡುತ್ತದೆ
        MW ನಿಘಂಟು: ವ್ಯಾಪದಂ=death
        ಉಳಿದವನ್ನು ಗಮನಿಸಿಕೊಳ್ಳುತ್ತೇನೆ. ಧನ್ಯವಾದಗಳು

  12. ಇರುತೆ ಕಾಲ ವಸಂತ ಶಿಶಿರವು
    ಸುರಿದು ನಿರ್ಗಮ ಗೈವ ವರ್ಷವು
    ತಿರೆಯ ಮಡಿಲಲಿ ಶರದ ಹೇಮಂತಾದಿ, ಮುದಮೀವ!
    ಸರಿಸಮಾನರಿರಲ್ಕೆ ಸಲ್ಲದು,
    ಪರಮ ಸಹನೆಯೊಳೆಂದೆನಿಸಲಹ!
    ಭರದೊಳಿತ್ತಳೆ ಸುತೆಗೆ ಪದಪಿಂ,”ವಿರಹ”ಮೆಂಬೊಂದೂ!!

    (ಧರಣಿಯು ತನ್ನ ಮಗಳಲ್ಲಿ ಸಹನೆಯನ್ನು ಬೆಳೆಸಲೋಸುಗ ,ಇರುವ ಎಲ್ಲ ಕಾಲಗಳೊಂದಿಗೆ “ವಿರಹ”ಕಾಲವನ್ನೂ ಬಳುವಳಿಯಾಗಿತ್ತಳೇ)

  13. (ಹಿಂದೊಮ್ಮೆ ಬರೆದಿದ್ದ ಸೀತಾಸ್ವಯಂವರದ ಸಮಯದಲ್ಲಿ. ಮೊದಲಬಾರಿ ಸೀತೆಯನ್ನು ಕಂಡಾಗ ಉಂಟಾದ ಭಾವದ ಬಗ್ಗೆಯ ಪದ್ಯವನ್ನೇ, ಇಲ್ಲಿ ಕೊಟ್ಟ ಪದಗಳನ್ನು ಉಪಯೋಗಿಸುವಂತೆ ಬದಲಾಯಿಸಿ ಬರೆದ ಪದ್ಯ:

    ಮಾಲೆ ಪಿಡಿದಳು ಮೆಲ್ಲ ಸರಿದಳು ಪುಲ್ಲಲೋಚನೆ ಚೆಂದದಿಂ
    ಸಾಲು ಕುಳಿತಿಹ ರಾಜ ಕುವರರು ಕಣ್ಣ ಗಮನಕೆ ಬಿದ್ದಿಹರ್
    ಕಾಲು ಮುಂದಕೆ ಪದವ ಬೆಳೆಸದು ರಾಮಚಂದಿರ ಕಂಡಿರಲ್
    ನೀಲ ರತುನವು ಮಾನಿಸರ ರೂಹಿನಲಿ ಬಂದುದುಯೆಂದಿಹಳ್

    • ಚೆನ್ನಾಗಿದೆ ಹಂಸಾನಂದಿಯವರೆ.” ಸಾಲು ಕುಳಿತಿಹ “- “ಸಾಲಿನಲಿರುವ”,”ರಾಜ ಕುವರರು”-ರಾಜಪುತ್ರರು”,”ರಾಮಚಂದಿರ ಕಂಡಿರಲ್”-“ರಾಮಚಂದ್ರನ ಕಂಡಿರಲ್”, “ನೀಲ ರತುನವು”-“ನೀಲರತ್ನವು” ಎಂದಾದಲ್ಲಿ ಹೆಚ್ಚು ಸರಿಯಾಗಬಹುದೇನೋ.

    • ಪದ್ಯ ಚೆನ್ನಾಗಿದೆ. ’ಮಾನಿಸರ’ ಎಂಬ ಬಹುವಚನಪದವೇಕೆ? ಈ ಹಿಂದೆ ಪದ್ಯಪಾನದಲ್ಲಿ ಜಯಭೇರಿಯನ್ನು ಬಾರಿಸಿದ ಸಮಸ್ಯಾಪೂರಣವೊಂದನ್ನು ನೆನಪಿಗೆ ತಂದಿತು: ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ? ಇರ್ವರೇ?
      http://padyapaana.com/?p=1422

  14. ಚಿನ್ನದಂತಹ ಜಿಂಕೆ ಸರಿಯಲು
    ತನ್ನ ಪತಿಯನು ಕಳಿಸಿ ಬಿಟ್ಟಳು
    ಚೆನ್ನ ಲಕ್ಷ್ಮಣ ಸುಗಮದಿ ಗೆರೆಯ ದಾಟಬೇಡೆಂದ
    ಅನ್ನ ಬೇಡುತಲೋರ್ವ ಬಂದನು
    ಇನ್ನು ದಾಂಟುತ ಪದವನಿಡುತಿರೆ
    ಹೊನ್ನ ಮೊಗವಿಹ ಸೀತೆಯನ್ನೊಯ್ದವನು ಮಾನಿಸನೆ?

    • ಚೆನ್ನಾಗಿದೆ ಅಂಕಿತಾ. 🙂

  15. ಸರಿದೂಗಿರ್ಪಳ್ ಗಡ ಸೀ-
    ತೆ, ರಾಮನೊಡೆ ತಾಂ ಪರಿಗ್ರಹಿಸಿ ನಿರ್ಗಮಕಂ ।
    ಪರಿವೆಸಗೈಯ್ಯಲ್ ಪದವಿಯ
    ತೊರೆದುಂ ಹದಿಬದೆಯ ಧರ್ಮವದುವೆಂದನಿಸಲ್ ।।

    ಪರಿಗ್ರಹಿಸಿ = ಅಂಗೀಕರಿಸಿ, ಪರಿವಸೆ = ಸೇವೆ, ಪದವಿ = ಸಂಪತ್ತು / ಸ್ಥಾನ

    • ರಾಮನೊಡನೆ ವನವಾಸಕ್ಕೆ ತೆರಳಲಣಿಯಾದ ಸಂದರ್ಭ:

      ಸರಿಬರಿಯೆಂದಳ್ ಗಡ ಸೀ-
      ತೆ, ರಾಮನೊಡನೆ ವನವಾಸಕಂ ನಿರ್ಗಮಕಂ ।
      ಪರಿವೆಸಗೈಯ್ಯಲ್ ಪದವಿಯ
      ತೊರೆದುಂ ಹದಿಬದೆಯ ಧರ್ಮಮದುವೆಂದನಿಸಲ್ ।।

      • ಚೆನ್ನಾಗಿದೆ ಉಷಾ ಅವರೆ. ಪರಿವೆಸ= ಸೇವೆ – ಹೊಸತಾದ ಪದವನ್ನು ತಿಳಿದಂತಾಯಿತು.

        • ಧನ್ಯವಾದಗಳು ಶಕುಂತಲಾ, ಇತ್ತೀಚಿಗೆ ಸುಧಾ /ತರಂಗ ದಲ್ಲಿ ಮಿಡಿಮಾವಿನ ಗೊಂಚಲು ಕಂಡು, ನಿಮ್ಮ ಸುಂದರ ಪದ್ಯಪೂರಣ ನೆನಪಾಯಿತು !!

          • ಮಿಡಿಮಾವಿನ ಗೊಂಚಲನ್ನು ಕಂಡಾಗ ನನ್ನ ಪದ್ಯಪೂರಣವು ನೆನಪಾಗುವುದಕ್ಕಾಗಿ ಧನ್ಯವಾದಗಳು ಉಷಾ . 🙂

  16. ಸೀತೆಯು ಬೇಸರಿಸಲಶೋಕವನದಿ ( ಅರಿಸಮಾಸ ದೋಷ? )
    ದೂತನ ವೇಗದ ಆಗಮನ ( ವಿಸಂಧಿದೋಷ)
    ಭೀತಿಯು ಪಾಪದ ಸೀತೆಗೆ ಕಾಡಲು (ಇದಾದರೂ ದೋಷ ರಹಿತ ಚರಣ ಇರಬಹುದೇ ?)
    ಪ್ರೀತಿಹನಿಸಿತುಂಗುರದಿಂದ (ನಿಸ ಎಂಬುದು ‘ನಿಸಿ’ ಆಗಿದೆ)

    • ಎರಡನೆಯ ಸಾಲಿನಲ್ಲಿ ಮಾತ್ರ ಸ್ವಲ್ಪ ವಿಸಂಧಿದೋಷವಿದೆ.ಉಳಿದೆಲ್ಲ ಸಾಲುಗಳೂ ಪದ್ಯವೂ ಚೆನ್ನಾಗಿವೆ. ದೂತನ ವೇಗಾಗಮನವಿರಲ್ ಎಂದು ತಿದ್ದಬಹುದು.

  17. ಬೇಸರಿಸಿರ್ಪೆಯೇಂ ಜನಕನಂದಿನಿ ರಾಮನ ಧರ್ಮಜಾಡ್ಯದಿಂ
    ಭಾಸಿಪ ಹಾಸಮುಂ ಸೊಗಮದಪ್ಪ ಭವದ್ಧ್ವನಿಯುಂ ಜನಂಗಳೊಳ್
    ಸಾಸಿವೆಯಂದಮುಂ ನಯನಕರ್ಣಯುಗಾಸ್ಪದಮಾದುದಿಲ್ಲ ಕೇ-
    ಳೀಸು ವಿಷಾದಮೇಂ ಮುನಿಸದೇಂ, ನುಡಿಯೌ ನುಡಿಸೌ ಮನಂಬುಗೌ

  18. || ತೋಟಕವೃತ್ತ ||

    ಸರಿಯಾರ್ ರಘುನಂದನನಾಯಕಿಗಂ ?
    ಚರಿಸಲ್ ಋತದಿಂ ತಿಳಿದಾಗಮಮಂ,|
    ಸಿರಿಸಂಪದದಂಥ ಗುಣಂಗಳಿರಲ್,
    ಸ್ಮರಿಸುತ್ತಿರೆ ಮಾನಿಸರೊಮ್ಮನದಿಂ ||

    • ಚೆನ್ನಾಗಿದೆ. ತುಂಬ ವಿರಳವಾಗಿ ತೋಟಕ ಬಂದಿದೆ ಪದ್ಯಪಾನದಲ್ಲಿ. ಸಿರಿಸಂಪದ ಅರಿಸಮಾಸವಲ್ಲವೇ?

      • ಸೊಗಸಾದ ರಚನೆ. ಒಳ್ಳೆಯ ಶೈಲಿ. ಚಿಕ್ಕದಾದ, ಕೆಲಮಟ್ಟಿಗೆ ತೊಡಕಿನದೂ ಆದ ತೋಟಕದದಲ್ಲಿ ದತ್ತಪದವನ್ನು ಸರಸವಾಗಿ ಹವಣಿಸುವುದು ಕಷ್ಟದ ಕೆಲಸವೇ. ಅದರೆ ಅದಿಲ್ಲಿ ಚೆಲುವಾಗಿ ಸಾಗಿದೆ. ಅಭಿನಂದನೆಗಳು. ನಾಯಕಿ ಎಂಬುದಕ್ಕಿಂತ ನಾಯಿಕೆಯೆಂಬ ಪ್ರಯೋಗ ಒಳಿತು. ಸಿರಿಸಂಪದ ಎಂಬುದು ಅರಿಸಮಾಸವೇ ಆದರೂ ಅಂಥ ಕೆಲವು ಪೂರ್ವಪ್ರಸಿದ್ಧಕವಿಪ್ರಯುಕ್ತವಾದ ಕಾರಣ ಉದ್ವೇಜಕವಲ್ಲ. ಹೀಗಾಗಿ ವೈಯಾಕರಣರಿಂದ ಅನುಮತವೇ ಆಗಿದೆ.

        • ಸೋದರರೆ, ಪದ್ಯವನ್ನು ಮೆಚ್ಚಿರುವುದಕ್ಕೆ ವಂದನೆಗಳು. ಸಿರಿಸಂಪದವು ಅರಿಸಮಾಸವಿರಬಹುದೆಂದು ಮೊದಲು ಸಂದೇಹವಾಯಿತು. ಆದರೆ ಕಿಟ್ಟೆಲ್ ಶಬ್ದಕೋಶದಲ್ಲಿ, ಸಂಪದ್(ಸಂಸ್ಕೃತ)-ಸಂಪದ(ತಧ್ಬವ) -ಎಂದು ಇರುವುದರಿಂದ , ದೋಷವಾಗದೆಂದುಕೊಂಡೆ. ವಿವರಣೆ, ಸವರಣೆಗಳಿಗಾಗಿ ತುಂಬ ಧನ್ಯವಾದಗಳು. ತಿದ್ದಿದ ಪದ್ಯದ ಮೊದಲನೇ ಪಾದ ಕೆಳಗಿನಂತಿದೆ.

          ಸರಿಯಾರ್ ರಘುನಂದನನಾಯಿಕೆಗಂ ?

      • ನೀಲಕಂಠರಿಗೆ ಧನ್ಯವಾದಗಳು.

  19. ಸರಿ, ಗಮನಂ ಭವತ್ಪತಿಯೊಡಂ ನಿನಗಾದುದು ಸೌಖ್ಯಮೆಂದಿಗುಂ
    ಧರಣಿಜೆ, ಸರ್ವಹೃದ್ಗಮಪದಂಗಳ ನೆಯ್ಗೆಯವೊಲ್ ವಚೋವಿಧಂ
    ಮುರಿಯದ ತಾಳ್ಮೆಯಿರ್ಪ ದನಿ ಸಂಗಮಿಸಿರ್ಪ ನವೋನವಂ ನಯಂ
    ತಿರೆಗಭಿಮಾನದಾನಿ, ಸಸರಿತ್ಪತಿಧಾತ್ರಿಯಿದೋ ನಮಿಪ್ಪುದೌ

    ಸರಿಗಮ, ಗಮಪದ, ಪದನಿಸ, ನಿಸಸರಿ ವರಸೆಯ ಜೋಡಣೆಯ ಪ್ರಯತ್ನ 🙂

    • ಆಹಾ!
      ನೀಲಕಂಠಕಮನೀಯಕಂಠದಿಂ
      ಲೀಲೆಯಿಂದೆ ಕಲಕೇಕೆಯಂದದಿಂ|
      ಲೋಲಸುಸ್ವರವಿಲಾಸಭಾಸ್ವರಂ
      ಲಾಲಿತಂ ಕವಿತೆಯುಣ್ಮಿತೊಪ್ಪುತುಂ||

  20. ಒಂದು ಸಣ್ಣ ಪ್ರಯತ್ನ. ತಪ್ಪಿದಲ್ಲಿ ತಿದ್ದಬೇಕು..

    ಸರಿದಾರಿಯಲಿ ಸದಾ ಜೀವನವ ಸಾಗಿಸುತ
    ನರಹರಿಯ ಗಮನ ಸೆಳೆದಳು ಜಾನಕೀ |
    ವರರೂಪ ರಾಮನಿಗೆ ಸಪ್ತಪದ ಸತಿಯಾಗಿ
    ವಿರಸವೆನಿಸದ ಮನದಿ ವನಕೆ ನಡೆದಳ್ ||

    • ಬದಲಾಯಿಸಿದ ಪದ್ಯ..

      ಸರಿದಾರಿಯಲಿ ಭವ್ಯಜೀವನವ ಸಾಗಿಸುತ
      ನರಹರಿಯ ಗಮನ ಸೆಳೆದಳು ಜಾನಕಿ |
      ವರರೂಪ ರಾಮನಿಗೆ ಸಪ್ತಪದಗಳನಿಟ್ಟು
      ವಿರಸವೆನಿಸದ ಮನದಿ ವನಕೆ ನಡೆದಳ್ ||

    • ಚೆನ್ನಾಗಿದೆ. ಪದ್ಯಪಾನಕ್ಕೆ ಸ್ವಾಗತ. ಜಾನಕಿ ಆಗಬೇಕು. ಸಪ್ತಪದ ಸತಿ ಎಂಬುದು ಅಸಾಧು. ಸಪ್ತಪದಿಯಿಟ್ಟಾಕೆ ಎಂದೇನಾದರೂ ಮಾಡಬಹುದು.

      • ಧನ್ಯವಾದಗಳು ನೀಲಕಂಠರೆ.. ತಿದ್ದಿಕೊಳ್ಳುತ್ತೇನೆ..

      • ನೀಲಕಂಠರೆ, “ಸಪ್ತಪದಿ”ಯೆಂದು ತಿದ್ದಿದಲ್ಲಿ, ದತ್ತಪದವು ( ಪದ) ಇಲ್ಲದಾಗುವುದಲ್ಲಾ 🙂

        • ಓಹ್ ಹೌದು. ಸಪ್ತಪದವಿಟ್ಟಾಕೆ ಎಂದೂ ಮಾಡಬಹುದು! ಅಥವ, ಇದು ನಡುಗನ್ನಡ / ಹೊಸಗನ್ನಡ ಆಗಿದ್ದರಿಂದ ಸಪ್ತಪದಗಳನಿಟ್ಟು ಅಂತಲೂ ಮಾಡಬಹುದು.

          • ಧನ್ಯವಾದಗಳು ನೀಲಕಂಠರೆ, ಶಕುಂತಲಾರೆ…ತಮ್ಮ ಸಲಹೆ, ಸವರಣೆಗೆ..

  21. ಪತಿಯನ್ನನುಸರಿಸಲ್ ದು-
    ಷ್ಕೃತಿಯಂ ಗೈದಿರ್ಪ ದೂರ್ತನೊಡೆ ನಿರ್ಗಮದೀ|
    ಸ್ಥಿತಿಯೊಳ್ ಪದವೆಡವದೆ ಸ
    ನ್ಮತಿಯೊಳ್ ರಾವಣನ ಗಮನಿಸದವೊಲುಮಿರ್ಪಳ್|

  22. ಪಸರಿರ್ಪುದು ಖ್ಯಾತಿ ನಿಗಮ ನಿಗಮಂಗಳಲಿ,
    ದೆಸೆದೆಸೆಗೆ, ಜಾನಕಿಯದೆಂಬಚ್ಚರೇಂ!
    ಕಿಸುರು ಕಾಮನೆಯಿರದ ಸತ್ಯಸಂಪದದಿಂದೆ
    ಜಸದ ಬನಿ ಸಲಲದಂ ,ಪೊಸತೆಂಬರೇಂ!

  23. ಜಾನಕಿ ಮಾತೆಯ ವಿರಹದ ತಾಪವು ಹಿಮದಸರಿತ್ತನು ಕರಗಿಸಿತು.
    ಕಾನನದೊಳಗಿನ ಖಗಮೃಗಗಳ ದನಿಯಾಕೆಯನೋವನೆ ಗಮಕಿಸಿತು.
    ದಾನವ ದೈತ್ಯರ ನಡುವಲಿ ನೋವಿನ ಪದಗಳ ಮಾಲೆಯ ಪೋಣಿಸುತ,
    ಮಾನಿನಿ ನಿಂತಳು ಸಾವನ್ನರಸುತ, ರಾಮನು ಕಾಣದೆ ಸನ್ನಿಹಿತ.

    • ಜಾನಕಿ ಮಾತೆಯ ವಿರಹದ ತಾಪವು ಹಿಮದಸರಿತ್ತನು ಕರಗಿಸಿತು.
      ಕಾನನದೊಳಗಿನ ಖಗಮೃಗಗಳ ದನಿಯಾಕೆಯನೋವನೆ ಗಮಕಿಸಿತು.
      ದಾನವ ದೈತ್ಯರ ನಡುವಲಿ ನೋವಿನ ಪದಗಳ ಮಾಲೆಯ ಪೋಣಿಸುತ,
      ಮಾನಿನಿ ಸಾವನ್ನರಸುತ ನಿಂತಳು ರಾಮನು ಕಾಣದೆ ಸನ್ನಿಹಿತ.

      • Small correction was necessary in the last line. Have reposted it after changes.

      • ಕಾರ್ತಿಕ್ ಅವರಿಗೆ ಪದ್ಯಪಾನಕ್ಕೆ ಸ್ವಾಗತ.ಒಳ್ಳೆಯ ಯತ್ನ.ನಾಲ್ಕನೇ ಪಾದವನ್ನು ಬದಲಾಯಿಸಿ , ಇನ್ನೂ ಸರಿಯಾಗಿ ಬರೆದರೆ ಒಳಿತು. ಪದ್ಯಪಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರೆಂದು ಆಶಿಸುವೆ.

  24. ಚೆಲುವಲ್ಲಿ ಆ ಲಕುಮಿಗೆ ಸರಿಸಮಳ್
    ಕರುಣೆ, ವಾತ್ಸಲ್ಯಗಳ ಸಂಗಮಳ್
    ಪದವಿಟ್ಟೆದೆಯೆಲ್ಲಾ ಸೊಬಗಿನ0ಗಳಮಾಗಿ
    ಎದೆಯ ನೋವುಗಳ ಮಾನಿಸುವಳ್

    • ಪದ್ಯಪಾನದ ಪರವಾಗಿ ಅಜಿತ ಕುಲಕರ್ಣಿ ಅವರಿಗೆ ನೀಲಕಂಠ ಕುಲಕರ್ಣಿಯ ಸ್ವಾಗತ. ದತ್ತಪದಿಯಲ್ಲಿ ನಿಮ್ಮದು ಒಳ್ಳೆಯ ಪ್ರಯತ್ನ.ಆದರೆ ಛಂದೋಬದ್ಧವಾಗಿ ಬರೆಯಬೇಕು. ಆದಿಪ್ರಾಸಾದಿಗಳನ್ನು ಪಾಲಿಸಬೇಕು. ಇದೇ ತಾಣದಲ್ಲಿ ಉಪಯುಕ್ತ ಮಾಹಿತಿಗಳು ದಕ್ಕುತ್ತವೆ. ಅಭ್ಯಾಸ ಮಾಡಿ ಬರೆಯುತ್ತಿರಿ. 🙂 ನೀವೂ ಜೊತೆಗೂಡಿದರೆ ನನಗೂ ಸಂತೋಷ. ಇದೀಗ ನಾನೊಬ್ಬನೇ ಕುಲಕರ್ಣಿ ಇಲ್ಲಿ 😉

  25. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ನೀಲಕಂಠರೆ. ನನಗೆ ಛಂದಗಳು ನನಗೆ ಗೊತ್ತಿಲ್ಲ. ಈ ಮಿನ್ದಾಣದಲ್ಲಿ ಕಲಿಯಲು ಪ್ರಯತ್ನಿಸುತ್ತೇನೆ.

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)