Apr 172017
 

ಬೇಸಿಗೆಯ ರಜೆಯನ್ನು ಕುರಿತು ಕೆಳಗಿನ ದತ್ತಪದಿಗಳನ್ನು ಅಳವಡಿಸಿ ಪದ್ಯರಚಿಸಿ

ಓದು, ಬರಿ, ಕಲಿ, ತಿಳಿ

  36 Responses to “ಪದ್ಯಸಪ್ತಾಹ ೨೫೧: ದತ್ತಪದಿ”

  1. ಶಾಲೆಯ ರೂಢಿವೋದುದು, ದಿವಾಕರನುರ್ಬಟೆ ಮೇರೆ ಮೀರ್ದೊಡಂ
    ಬಾಲರ ಮತ್ತು ಮಬ್ಬರಿದುದಾಗದು, ಮೈದೊಳೆದೆತ್ತಿನಂತೆ ಮಾ-
    ತಾಲಿಸದಾಡುತೋಡಿ ಕಲಿತೋದ್ಧತಬುದ್ಧಿಯೊಳಾಳ್ವ ಪಾಂಗದೇಂ!
    ಜಾಲಿಸೆ ಬೇಗೆರಕ್ಕಸನನಿಂತಿಳಿದತ್ತೊ ಕುಮಾರಸೇನೆಯೇ!

    ಶಾಲೆಯ ರೂಢಿ ತಪ್ಪಿತು. ಸೂರ್ಯನ ಧಗೆ ಮೇರೆದಪ್ಪಿದರೂ ಬಾಲಕರ ಮತ್ತಿಗೆ ಮಬ್ಬು ಕವಿಯಲಿಲ್ಲ. ಮೈದೊಳೆದ ಎತ್ತುಗಳಂತೆ ಹೇಳಿದ ಮಾತನಾಲಿಸದೆ ಆಡಿ ಓಡಿ ಉದ್ಧತಬುದ್ಧಿಯೊಳಗಾಳುವ ರೀತಿಯೇನು! ಬೇಸಗೆಯ ಬೇಗೆಯೆಂಬ ರಕ್ಕಸನ ಜಾಲಾಡಲು ಕುಮಾರ ಕಾರ್ತಿಕೇಯನ ಸೇನೆಯೇ ಬಂದಿಳಿಯಿತೇನೋ!

    • ಬಾಲರ ಗುಂಪನೇ ಸುರರ ಸೇನೆಗೆ ಪೋಲಿಪಮೋಘ ಪದ್ಯದೊಳ್
      ನಾಲಗೆ ತಪ್ಪುತುಂ ಪಡೆಯೊಲಕ್ಷರಸಂಕುಲಮಿಲ್ಲಿ ತೋರ್ದುದೇಮ್?(೨ ನೇ ಸಾಲು)

      • _/_

        ಸೋಲದ ನಿಮ್ಮ ಚಾರುಮತಿಗಂ ಬೆರಗಾಗುತೆ ತಪ್ಪು ತಿರ್ದಿದೆಂ
        ಕಾಲಿರಿಸಿರ್ಪನಲ್ತೆ ಅರಿಯಕ್ಕರಸಂಕುಲದಲ್ಲಿ ನೋಳ್ಪುದಯ್ 🙂

        • _/_ ಕಾಲಿರಿಸಿರ್ದನಂ ಪದದ ನೇರ್ಪಲೆ ಪೊಯ್ದೆನು ನೀಲಕಂಠರೇ

  2. ಚರಿಸಲ್ ಶಕ್ಯಮದಿಲ್ಲದಿರ್ಪ ವನಮೋ ದುರ್ಗಮ್ಯ ಕೈಲಾಸಮೋ
    ಬರಿ ಬೆಂಗಾಡಿನವೊಲ್ ಮನಸ್ಸಲಿಲವಂ ಪೀರ್ದಿರ್ಪ ದೈತೇಯನೋ
    ನೆರೆದಿರ್ದಾ ಪೊದೆಯೊಳ್ ಸಿತೋತ್ಕಲಿಕೆಯೊಲ್ ಸೌಗಂಧಮಂ ಬೀರಿ ತಾ
    ನುರಿಸಿರ್ಕುಮ್ ತಿಳಿಯಿರ್ಪ ಚಿತ್ತತತಿಯಂ ವೈಶಾಖದೀ ಸೂಟಿಗಳ್

    ಪ್ರವಾಸವೇ ಸಾಧ್ಯವಿಲ್ಲದ ವನವೋ,ದುರ್ಗಮ್ಯವಾದ ಕೈಲಾಸ ಪರ್ವತವೋ, ಚೈತನ್ಯದ ಚಿಲುಮೆಯನ್ನು ಬೆಂಗಾಡಿನಂತೆ ಬತ್ತಿಸಿದ ಯಾವುದೋ ರಾಕ್ಷಸನೋ ಅಥವಾ ಪೊದೆಯೊಳಗಿದ್ದೂ ಕೈಗೆ ನಿಲುಕದ ಮೊಗ್ಗೋ ಎಂಬಂತೆ (ಇನ್ನೂ ದೂರವಿರುವ) ಬೇಸಿಗೆಯ ರಜೆಗಳು ಮುಗ್ಧ ಮನಸ್ಸುಗಳನ್ನು ಉರಿಸಿವೆ(ಅಣಕಿಸಿವೆ) .

    • ತುಂಬ ಚೆನ್ನಾಗಿದೆ 🙂 ಮನಸ್ಸಲಿಲ ಎಂದು ಸಂಧಿಯಾಗುವುದು. ಮನೋಜಲ, ಮನಃಪಯಸ್ ಇತ್ಯಾದಿ.

    • ವೈಶಾಖದಾ is not = ವೈಶಾಖದ. ವೈಶಾಖದ+ಆ ಎಂದು ಬಳಸಬಹುದಾದರೂ, ’ವೈಶಾಖದೀ’ ಮೇಲು.

  3. ಬರಹವೋ ದುಸ್ಸಾಧ್ಯವೆಮಗೆ ರಜೆ ಬಂದಿರಲು
    ಬರಿದು ಮಾಡುವೆವೆಲ್ಲ ಮಾವು ಹಲಸುಗಳ
    ಕೆರಳಿ ಕಾದಾಡುತಲಿ ಕಲಿಗಳಂದದಿ ನಾವು
    ಗಿರಕಿ ಹೊಡೆಯುವೆವಿನ್ನು ತಿಳಿನೀರಿನೊಳ್

  4. ಓ! ದುಗುಡವ ನಿವಾರಿಸುವ ರಜೆ
    ಕಾದಿ ಮನೆಯೊಳು ಬರಿದೆ ಬೈಗುಳ,
    ಬೋಧನೆಯ ಸುರಿಮಳೆ ಬಳಿಕ ಲಿಪಿಕಾರ್ಯದೊಳೆ ಶಿಕ್ಷೆ I
    ವಾದ ಮಾಡುತ ತಿಳಿಯಲಿಚ್ಚಿಸೆ
    ಪಾದರಸಚುರುಕುಳ್ಳ ಬಾಲರು
    ಸಾದರದೆ ಪಡೆವರು ಪುರಾಣದ ಪುಣ್ಯ ಕಥೆಗಳನು II

    ರಜೆಯಲ್ಲಿ ಕಾದಾಡಿ ಕೋಪಿ ಬರೆವ ಶಿಕ್ಷೆ ಗಿಟ್ಟಿಸಿಕೊಂಡ ಬಾಲಕರು , ಮತ್ತೆ ವಾದವಿವಾದ ಮಾಡುತ್ತಾ ಪುನಃ ಗಲಭೆ ಎಬ್ಬಿಸಿ ಮತ್ತೆ ಹಿರಿಯರಿಂದ ಕಥೆ ಹೇಳಿಸಿಕೊಳ್ಳುವ ಬಾಲಕರ ಚಿತ್ರಣ ತರುವ ಪ್ರಯತ್ನ ಈ ಪದ್ಯದಲ್ಲಿ

    • ಚೆನ್ನಾಗಿದೆ. ಪಾದರಸಚುರುಕು ಅರಿಸಮಾಸ.

      • ಧನ್ಯವಾದಗಳು ನೀಲಕಂಠರೇ.

        ಓ! ದುಗುಡವ ನಿವಾರಿಸುವ ರಜೆ
        ಕಾದಿ ಮನೆಯೊಳು ಬರಿದೆ ಬೈಗುಳ,
        ಬೋಧನೆಯ ಸುರಿಮಳೆ ಬಳಿಕ ಲಿಪಿಕಾರ್ಯದೊಳೆ ಶಿಕ್ಷೆ I
        ವಾದ ಮಾಡುತ ತಿಳಿಯಲಿಚ್ಚಿಸೆ
        ಪಾದರಸದ ಚುರುಕಿನ ಬಾಲರು
        ಸಾದರದೆ ಪಡೆವರು ಪುರಾಣದ ಪುಣ್ಯ ಕಥೆಗಳನು II

  5. ಓದು ಬರಿ ಕಲಿ ತಿಳಿಯಿರೆಂಬುವ
    ಬಾಧೆಯೊಳು ವರುಷದಲಿ ಹೈರಾ-
    ಣಾದ ಬಾಲರಿಗೆಲ್ಲ ಹರುಷವು ಬೇಸಿಗೆಯ ರಜೆಯು!
    ಹಾದಿ ವನ ಬಯಲೆಲ್ಲ ನಡೆದರು,
    ಕಾದ ನೆಲದುರಿ ಮರೆಯಿಸುವದಾ-
    ಮೋದ ಕಾಲವು, ಮಕ್ಕಳಿಗೆ ರಜೆ ತರುತಿಹುದು ಮಜವು!
    ಕೃಷ್ಣಪ್ರಸಾದ್

  6. ಓದು ಬರಿ ಕಲಿ ತಿಳಿಯಿರೆಂಬುವ
    ಬಾಧೆಯೊಳು ವರುಷದಲಿ ಹೈರಾ-
    ಣಾದ ಬಾಲರಿಗೆಲ್ಲ ಹರುಷವು ಬೇಸಿಗೆಯ ರಜೆಯು!
    ಹಾದಿ, ಬನ, ಬಯಲೆಲ್ಲ ನಡೆದರು,
    ಕಾದ ನೆಲದುರಿ ಮರೆಯಿಸುವದಾ-
    ಮೋದ ಕಾಲವು, ಮಕ್ಕಳಿಗೆ ರಜೆ ತರುತಿಹುದು ಮಜವು!
    ಕೃಷ್ಣಪ್ರಸಾದ್

    ತಿದ್ದುಪಡಿಗಳೊಂದಿಗೆ

    • ನಮಸ್ಕಾರ. ನಿಮ್ಮ ಪ್ರಯತ್ನ ಸ್ತುತ್ಯ. ಆದರೆ ದತ್ತಪದಿಯನ್ನು ನಿರ್ವಹಿಸುವುದು ಹೀಗಲ್ಲ. ಪದಗಳನ್ನು ಬೇರೆ ರೂಪಗಳಲ್ಲಿ ಬಳಸಬೇಕು. ಪುನರುಕ್ತಿಗಳನ್ನು ತೆಗೆಯಿರಿ. ಸಮೀಪ ಪ್ರಾಸವನ್ನು ಸರಿಪಡಿಸಿ.

  7. ತವರತ್ತ ನಡೆಯೋದು ಸತಿಗೆ ವರುಷದ ರೂಢಿ,
    ಅವಳಿಲ್ಲದಿಹ ಬದುಕು ಬರಿದೆ ದುಸ್ತರವು!
    ಅವನಿಯೊಳು ದೈವ ಸಂಕಲಿಸಿರುವ ಸಖಿಯಾಕೆ
    ಶಿವನೊಲುಮೆಯವಳೆನಗೆ ತಿಳಿ ನೀರ ಕೊಳವು!
    ಕೃಷ್ಣಪ್ರಸಾದ್

    • ಪದ್ಯ & ಪದ್ಯದ ವಸ್ತುವಿನ ಆಯ್ಕೆ ಭಿನ್ನವಾಗಿ , ಚೆನ್ನಾಗಿದೆ . ಓದುತ್ತಾ ದತ್ತಪದಿಯನ್ನು ಬಳಸಿರುವಿರೇ ಇಲ್ಲವೇ ಎನ್ನುವ ಸಂಶಯ ಬಂತು .

      • ನಮಸ್ತೆ
        “ನಡೆಯೋದು” ಎಂಬ ಶಬ್ದದಲ್ಲಿ “ಓದು” ವನ್ನು ಅಳವಡಿಸಿದ್ದು ಸರಿಯೇ ತಪ್ಪೇ ಎಂಬ ಗೊಂದಲವಿದೆ ನನಗೆ.
        ನಡೆಯೋದು ಎಂಬುದು ವ್ಯಾಕರಣ ಸಮ್ಮತವೇ ಎಂಬುದೇ ನನಗೆ ಗೊಂದಲ. ತಿಳಿದವರು ವಿವರಿಸಬೇಕಾಗಿ ಕೋರಿಕೆ.

    • ತವರತ್ತ ನಡೆಯೋದು ಸತಿಗೆ ವರುಷದ ರೂಢಿ,
      ಅವಳಿಲ್ಲದಿಹ ಬೇಸಿಗೆಯ ರಜೆಯು ಬರಿದು!
      ಅವನಿಯೊಳು ದೈವ ಸಂಕಲಿಸಿರುವ ಸಖಿಯಾಕೆ
      ಶಿವನೊಲುಮೆಯವಳೆನಗೆ ತಿಳಿ ನೀರ ಕೊಳವು!
      ಕೃಷ್ಣಪ್ರಸಾದ್

      ತಿದ್ದುಪಡಿಯೊಂದಿಗೆ

  8. (ನಮ್ಮೆಲ್ಲರ ಬಾಲ್ಯದಲ್ಲಿ ಕಳೆದ ಬೇಸಿಗೆ ರಜೆಯ ಒಂದು ಮೆಲುಕು…)

    ಪಾಠಮೋ ದುಗುಡ ಕಾರಕ ಕಜ್ಜಂ |
    ಸೂಟಿಗಂ ಶಬರಿ ರೂಪದ ಚಿತ್ತಂ ||
    ಭೇಟಿ ತಾಂ ಸೊಗಕೆ ಹಾಕಲಿ ಬೀಜಂ |
    ಸಾಟಿ ಹತ್ತಿಳಿವ ಸೂರ್ಯಗಮಾನುಂ ||

    (ಅಧ್ಯಯನವು ದುಸ್ತರವಾಗಿದತ್ತು. ಶಬರಿ ರಾಮನಿಗೆ ಕಾದಂತೆ ರಜೆಯ ಆರಂಭಕ್ಕೆ ಕಾಯುತ್ತಿದ್ದೆವು. ಮಿತ್ರರ ಭೇಟಿಯೇ ಸಂತೋಷದ ಮೂಲವಾಗಿತ್ತು. ಸೂರ್ಯನಿಗೆ ಸ್ಪರ್ಧಿಯಾಗಿ ದಿನವಿಡೀ ಆಡುತ್ತಿದ್ದೆವು)

    [ಇಲ್ಲಿ ಮೊದಲ ಸಾಲಿನಲ್ಲಿ ಪ್ರಾಸದ ಗತಿ ಕೊಂಚ ತಪ್ಪಿದೆ. ಅದು ರಜೆಗಾಗಿ ಹಂಬಲಿಸುತ್ತಿರುವ ಸಾಲು. ಇಲ್ಲಿ ಮನಸ್ಸಿನ ಸ್ಥಿತಿಯನ್ನು ಪ್ರಾಸದಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ]

  9. ಶಾಲೆಯಲೋದುತ ಪರೀಕ್ಷೆ ಮುಗಿಸಲ್ ( ಲಗಂ ಹೇಗೆ ಸರಿಪಡಿಸಲಿ)
    ಬಾಲೆಯು ಗಾಬರಿಯಾಗಿಹಳು
    ನಾಳೆಯ ಕಳೆವುದ ಕಲಿಯದ ಮನಸಿಗೆ
    ಗೋಳಲಿ ತಿಳಿಯಾಗುವುದೆಮನ?

    • “ಶಾಲೆಯಲೋದುತ ಪರಿಕೆಯ ಮುಗಿಸಲ್”
      ಎಂದು ಮಾಡಬಹುದು (ಕೊಂಚ ವಿಭಕ್ತಿ ಪಲ್ಲಟದೊಂದಿಗೆ).
      ಪರೀಕ್ಷೆ-ಪರಿಕೆ, ತತ್ಸಮ-ತದ್ಭವಗಳು.

  10. ಮಜವೋ ದುಃಖವ ಕಳೆಯುವ
    ರಜೆಯೋ, ಹೆಬ್ಬಲಸು ಮಾವುಗಳ ಬರಿ ಮಧುರಂ!
    ನಿಜ ಸೊಕ್ಕಲಿ ಸುಖಿಸುತ ಬಿಗು-
    ಸಜೆಯ ತಿಳಿಗೊಳಿಸುವ ಬೇಸಿಗೆ ರಜೆಗೆ ನಮನಂ!
    ಕೃಷ್ಣಪ್ರಸಾದ್

  11. ಓದು-ಬರೆಹಗಳಿಲ್ಲ, ಬರಿದೆ ಹಾಸುಗೆಯಾಯ್ತು,
    ಐದುದಿನದಿಂದೆನಗೆ ವಿಷಮಜ್ವರಂ|
    ನೇದಿಹೆಂ ಮೊಳಮೊಂದ, ತೋರಿಹವೆ (ದತ್ತ)ಪದ ಪೇಳಿ,
    ವಾದಿಪಿರ ’ಕಲಿ-ತಿಳಿ’ಯ ಬೆಟ್ಟನೆಂದು??

  12. ಪರಿಕೆಯೆನ್ನುವ ಯುದ್ಧದೊಳಗಂ
    ಬರಿದು ಮಾಡುತಲರಿಗಳೆಲ್ಲರ
    ಕರಿಗಳಂದದಿ ಮೆರೆದ ಕಲಿಗಳ ವಿಜಯಪರ್ವವಿದು
    ಮರವ ಹತ್ತಿಳಿಯುತ್ತಲಾಡಿರೆ
    ಶಿರದ ಭಾರವದಿಳಿದು ಹೋಗಿರೆ
    ಮರೆತು ಹೋದುದು ಪಾಠವೆನ್ನುವ ಕಾಟವಂ ಮನವು

    • ಸುಂದರವಾಗಿದೆ

      • ಧನ್ಯವಾದಗಳು.‌.ಅತ್ತ ಹಳಗನ್ನಡವೂ ಅಲ್ಲದ,ಇತ್ತ ಹೊಸಗನ್ನಡವೂ,ನಡುಗನ್ನಡವೂ ಅಲ್ಲದ ಕಲಸುಮೇಲೋಗರ ಕನ್ನಡದಲ್ಲಿ ಬರೆದಿದ್ದೇನೆ.ಅದನ್ನು ಸರಿಪಡಿಸಬೇಕಾಗಿದೆ.

  13. ಪೂಮೆಲ್ಲಮೋ ದುಂಬಿಯ ಗೇಹ ಮೂಲಂ
    ಹೇಮಾಗ್ನಿ ತಾಪಂ ಬರಿ ಗೈದು ಸಾರಂ I
    ನಾಮಾವಶೇಷಂ ಕಲಿಸೂರ್ಯ ಗೆಯ್ದಂ
    ತಾಂ ಮಾಳ್ಪುದೇನಂ ತಿಳಿಯಲ್ತು ಜೇನುಂ II

    (ಭ್ರಮರಕ್ಕೆ ಹೂಗಳೇ ಮನೆಯ ಮೂಲ. ಬೇಸಿಗೆಯಲ್ಲಿ, ಚಿನ್ನದ ಬಣ್ಣದ ಬೆಂಕಿಯ ತಾಪವು ಹೂಗಳ ಸತ್ವವನ್ನು ಬರಿದು ಮಾಡಿದೆ. ಇದಕ್ಕೆ ಕಾರಣನು ವೀರನಾದ ಸೂರ್ಯ. ಹಾಗಾಗಿ ದೊಂಬಿಗಳೂ ಸಹ ಕಾರ್ಯವಿಲ್ಲದೆ ರಜೆಯ ಅನುಭವ ಪದೆದಿದೆ!)

  14. ಓದ ಬಳಿಕಂ ಬರೆದುದಾ-
    ಮೋದದ ಮುಂಬರಿಕೆ, ಪೋದಪೊಳ್ತನರಿಯದಲ್
    ಕಾದ ನಸುಕಲಿಂತಿಳಿ ಬೇ-
    ಕಾದ ದಿನಂಗಳವು ಬೇಸಗೆಯ ರಜೆ ಬಾಲರ್ಗಂ !!

    ಓದಿನ ನಂತರ(ವರ್ಷದ ಕೊನೆಯಲ್ಲಿ) ನಿಶ್ಚಿತವಾಗಿ ಒದಗಿಬರುವ ಸಂತೋಷ,
    ಪೋದಪೊಳ್ತನರಿಯದೆ = ಗತಿಸಿದಕಾಲವನ್ನು ಮರೆತು ~ ಆನಂದವಾಗಿ
    ಕಾದ (ನಸುಕಲಿ + ಇಂತು + ಇಳಿ) – ಬೆಳಗಿನಿಂದಲೇ ಬಿರುಬಿಸಿಲಿಗೆ ಬೀಳುವಂತ ದಿನಗಳು
    ಮಕ್ಕಳು ಕಾದು.. ಕಾದು !! ಬಂದವು – “ಬೇಸಿಗೆಯ ರಜೆ ” !!

Leave a Reply to ಭಾಲ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)