Oct 262014
 

ಶಾಲಿನೀ, ಮಾಲಿನೀ, ಮಂದಾಕ್ರಾಂತಾ, ಸ್ರಗ್ಧರಾ, ಮಹಾಸ್ರಗ್ಧರಾ ಛಂದಸ್ಸುಗಳಿಗೆ ಹೊಂದುವ ‘ಸಾಕುಸಾಕಾಯ್ತೆ ಲೋಕಂ’ ಎಂಬ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ

  68 Responses to “ಪದ್ಯಸಪ್ತಾಹ ೧೩೨: ಪದ್ಯಪೂರಣ”

  1. ವೃತ್ತದಲ್ಲಲ್ಲ, ಮಾತ್ರೆಯಲ್ಲಿ. ಹೇಗೆ ಮಾಡಬಾರದೆಂಬುದಕ್ಕೆ ಮೇಲ್ಪಂಕ್ತಿ:

    ಬೊಂತೆಯಂತಃಕಲಹಗಳದಲ್ತೆ ಈ ವಿಶ್ವ-
    ಮೆಂತೊ ಕಾವರುಮಣ್ಣ-ತಮ್ಮಂದಿರೈ|
    ಕಾಂತ-ಕಾಂತೆಯರೇನಿನಿತು ಕಾದುವರೆ ನೋಡ-
    ಲಿಂತುಂ ಕುಸಾ-ಕುಸಾ ಕಾಯ್ತೆ ಲೋಕಂ!!

    • 🙂 ha ha

    • ಪ್ರೀತಿಯ ಪ್ರಸಾದು, ನಿಮ್ಮ ಪದ್ಯಗಳು ದಿನದಿನಕ್ಕೆ ನನ್ನಂಥ ಬಡಪಾಯಿ ಕಬ್ಬಿಗನ ಕಾವ್ಯಾರ್ಥಾವಗಮನಶಕ್ತಿಗೇ ಸವಾಲಾಗುತ್ತಿವೆ:-) …………ಅಲ್ತೆಲೀ” ಇತ್ಯಾದಿ ಪ್ರಯೋಗಗಳಿಗೆ ಯಾವುದೇ ವ್ಯಾಕರಣಸಮರ್ಥನೆ ಇಲ್ಲ.

  2. ಜರೆಯುಗುಳಿದ ತಾಪಂ ಪೀರಿರಲ್ ಜೀವನಾಂಶಂ
    ಹರಿವ ವಪುವಿನೊಳ್ಮೇರ್(ಣ್) ಕ್ಷಾಮಮುಂ ಬರ್ಪುದಾಯ್ತೇಂ?
    ಅರಸಿ ಸೆಲೆಯನೊಂದಂ ಚೇತನಂ ಬಾಳ್ತೆಗಾಣಲ್
    ಪೊರಟು ನಡೆಯಿತೇಂ ! ಹಾ! ಸಾಕುಸಾಕಾಯ್ತೆ ಲೋಕಂ?

    • ಮೊದಲ ಸಾಲಿನಲ್ಲಿ ಒಂದು ಲಘು ಕಡಿಮೆಯಾಗಿದೆ… “ವಪುವಿನೊಳ್ಗೇಂ??”

      • ಸರಿಪಡಿಸಿದ್ದೇನೆ (ಇನ್ನೊಂದು ತಪ್ಪನ್ನೂ) 🙂 ಧನ್ಯವಾದಗಳು.

    • “ಕ್ಷಾಮಮುಂ ಬರ್ಪುದಾಯ್ತೇಂ” ಎಂದು ಸವರಿಸಿದರೆ ಒಳಿತು.

  3. ವೃತ್ತಾವೃತ್ತಂ ಕಾಣ್ ಸಮಸ್ಯಾವಿಚಾರಂ
    ಚಿತ್ತಾವಿಷ್ಟಂ ಸಾಕುಸಾಕಾದುದಂತುಂ । (ಸಾಕುಸಾಕಾಯ್ತೆ ಲೇಖಂ?!)
    ತುತ್ತಾಗಿಂತುಂ ಜೀವಜೀವಾತ್ಮ ಬಂಧಂ
    ಸುತ್ತಂಸುತ್ತಲ್ ಸಾಕುಸಾಕಯ್ತೆ ಲೋಕಂ ।।

  4. ಮುಸುಕಿರೆ ಪಸೆಯಿಂತುಂ ಸೋರಿ ಹಿಂಗಾರ ಮೋಡಂ
    ಮಸುಕಿದು ಬಡಬಾಳುಂ, ಸೋತ ಕಂಗಾಲ ನೋಡಂ ।
    ದೆಸೆಗೆಡಲವನಿಂತುಂ ಸಂದು ಸಂತಾಪ ಶೋಕಂ
    ಬಸವಳಿದಿರೆ ಜೀವಂ ಸಾಕುಸಾಕಾಯ್ತೆ ಲೋಕಂ ।।

    (ಬಡಜೀವರ ಮೇಲೆ ಇತ್ತೀಚಿನ ಮಳೆಯ ಪರಿಣಾಮ)

    • ಎಲ್ಲ ಚೆನ್ನಾಗಿದೆ. ಜೊತೆಗೆ ಜೋಡಿಸಾಲುಗಳಲ್ಲಿ ಅಂತ್ಯಪ್ರಾಸವನ್ನೂ ತಂದಿದ್ದೀರಿ! ಇದು ಸೊಗಸಾದ ಮಾಲಿನೀಪ್ರಯೋಗ: ಮೂರನೆಯ ಪಾದದಲ್ಲಿ ಒಂದಿಷ್ಟು ಸವರಣೆ:”…………………..ಸಂದಿರಲ್ ತೀವ್ರಶೋಕಂ”

    • ಸಂದಿರಲ್ ತೀವ್ರತೋಷಂ ಸಾಕಾಗಲೇಕ ಲೋಕಂ !!
      ಧನ್ಯವಾದಗಳು ಗಣೇಶ್ ಸರ್.

    • ಕರಮೆಸೆವುತಿರಲ್ಕೀ ಪದ್ಯದಿಂ ತೋಷಮಾಯ್ತೌ!

  5. ಶಾಲಿನಿಯಲ್ಲಿ ನನ್ನ ಮೊದಲ ಪದ್ಯ

    ಗೋಳಾಡಲ್ ತಾಂ ಪ್ರೇಯಸೀ ಮೋಸಗೈಯ್ಯಲ್
    ಬೀಳಲ್ ಪೋದಂ ಸಾವನಪ್ಪುತ್ತೆ ಮೂಢಂ
    ತಾಳೆನ್ನುತ್ತುಂ ಕೂಗಿರಲ್ಕಂತರಾತ್ಮಂ
    ಕೇಳುತ್ತಿರ್ಕುಂ ಸಾಕುಸಾಕಾಯ್ತೆ ಲೋಕಂ?

    • ಮೊದಲ ಶಾಲಿನೀವೃತ್ತನಿರ್ವಾಹಕ್ಕಾಗಿ ಅಭಿನಂದನೆಗಳು. ಎಲ್ಲ ಚೆನ್ನಾಗಿದೆ; ಕೇವಲ ವ್ಯಾಕರಣರೀತ್ಯಾ ಒಂದು ಸವರಣೆ: “…………………ಪ್ರೇಯಸೀವಂಚಿತಂ ತಾಂ”

      • ಧನ್ಯವಾದಗಳು ಸಾರ್, ಹಾಗಾದಲ್ಲಿ ಮೊದಲನೇ ಸಾಲನ್ನು ಈ ರೀತಿ ಸರಿಪಡಿಸುವೆ.. “ಗೋಳಾಡಿರ್ಪಂ ಪ್ರೇಯಸೀವಂಚಿತಂ ತಾಂ”

    • ವೃತ್ತಂ ಹೃದ್ಯಂ ಚೀದಿ ನಿಮ್ಮಿಂ ಕೃತಂ ಮೇಣ್ 🙂

  6. ಮಂದಾಕ್ರಾಂತ:

    ಕಷ್ಟಂ ಕಷ್ಟಂ ! ಬಳಲುತಿಹೆನಾ ವೇಗದೀ ಪಂಥದಿಂದಂ
    ದುಷ್ಟಾಶ್ಲಿಷ್ಟಂ ! ಸೆಳೆತಬಹಳಂ ನಾನದಕ್ಕೇನು ಲೆಕ್ಕಂ
    ನಷ್ಟಾರೋಪಂ ! ಹೊರಬರುವೆನೇಂ ದೌತ್ಯದಿಂ? ಸಂಧಿಯಿಂದಂ?
    ಶಿಷ್ಟಾಚಾರಂ ! ವಿರಮಿಸುವೆನಾಂ ಸಾಕುಸಾಕಾಯ್ತು ಲೋಕಂ

    Rat race ನಲ್ಲಿರುವನ ಅಳಲು ಇದಾಗಿರಬಹುದೇ?

    ದುಷ್ಟಾಶ್ಲಿಷ್ಟಂ – ದುಷ್ಟರಿಂದ ಆಲಂಗಿಸಲ್ಪಟ್ಟವನು,ದುಷ್ಟತನವನ್ನು ತಾನಾಗಿಯೇ ಆಲಂಗಿಸಿದವನು ಎನ್ನುವ ಎರಡೂ ಅರ್ಥಗಳು ಇಲ್ಲಿ ಇದ್ದಲ್ಲಿ, ಎರಡು ಅರ್ಥಗಳೂ ಹೊಂದುತ್ತದೆಯೆಂದುಕೊಂಡಿದ್ದೇನೆ(ಇದು ನನ್ನದೇ ಪ್ರಯೋಗ – ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿರಿ)
    ಹಾಗೆಯೇ ನಷ್ಟಾರೋಪಮ್ – ನಷ್ಟದ ಆರೋಪ, ಈ ಪ್ರಯೋಗ ಸರಿಯಿದೆಯೇ?

    • ಪದ್ಯಭಾವ ಸೊಗಸಾಗಿದೆ; ಎಲ್ಲ ಪದಗಳೂ ವ್ಯಾಕರಣಶುದ್ಧವಾಗಿವೆ. ಮಂದಾಕ್ರಾಂತದಂಥ ಪ್ರೌಢವೃತ್ತನಿರ್ವಾಹವನ್ನು ಸಲೀಸಾಗಿ ಮಾಡಿದ್ದೀರಿ; ಅಭಿನಂದನೆಗಳು. ಆದರೆ ಹಳಗನ್ನಡದ ಹದದ ನಿಟ್ಟಿನಲ್ಲಿ ಸ್ವಲ್ಪ ಸವರಣೆಗಳನ್ನು ಹೀಗೆ ಮಾಡಬಹುದು:
      ……………….ಬಳಲಿದಪೆನಾಂ………………………
      ……………….ಸೆಳೆತಮತುಲಂ ನಾನದಕ್ಕಾವ ಲೆಕ್ಕಂ|
      ……………….ಪೊರಬರುವೆನೇಂ……………………
      ……………….ವಿರಮಿಸಿದಪೆಂ………………………||

      • ನಿಮ್ಮ ಮೆಚ್ಚುಗೆಗೆ, ತಿದ್ದುಪಡಿಗಳಿಗೆ ಧನ್ಯವಾದಗಳು.

        @ಚೀದಿ:
        ಮೆಚ್ಚುಗೆಗೆ ಧನ್ಯವಾದಗಳು.

    • ಕಷ್ಟಪ್ರಾಸಾನ್ವಿತಕವನದೊಳ್ ಸಂದುದೊಳ್ಪಿಂದೆ ಭಾವಂ

  7. ಮಿಡಿಯೆ ಮನವು ನೊಂದುಂ ಕಣ್ಗೆಕಂಡಂದು ಕಷ್ಟಂ
    ಹುಡುಕಿಹೊರಟು ನಿಂದಂ ಕಾರಣಂ ಕ್ಲೇಶಕೊಂದಂ
    ಪಡೆದ ಸುಖವ ತೆತ್ತಂ ಬುಧ್ಹನಾಗಲ್ಕದಾಗಳ್
    ಪಿಡಿದ ವಿನುತ ಮಾರ್ಗಂ,ಸಾಕುಸಾಕಾಯ್ತೆ ಲೋಕಂ?

    • ಸರಲಕವನಭಾವಂ ಶಾಂತಿಮಾಲಾನಿಬದ್ಧಂ

  8. ಮುನಿಯದ ಮುನಿಯೆಂಬಂತಿರ್ದಪಂ ಪಾರ್ವನೊರ್ವಂ
    ಜನರಹಿತವನಚ್ಛಾಯೆಯೊಳ್ ಸಾಗುವಾಗಳ್
    ಧನಿಕನ ರಥಮೊಂದಂತೆಯ್ದು ಪಾಯ್ದತ್ತು ಕಾಲ್ಗಂ
    ಮನದೆ ಮರುಗಿ ಪೇಳ್ದಂ ಸಾಕು ಸಾಕಾಯ್ತೆ ಲೋಕಂ|
    ( ಕಥಾಸರಿತ್ಸಾಗರದಲ್ಲಿಯೋ ಎಲ್ಲಿಯೋ, ಕಾಲನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಒಬ್ಬ ಬ್ರಾಹ್ಮಣನ ಕಥೆ ಓದಿದ ನೆನಪು. ಆ ಕಥೆಯ ಬ್ರಾಹ್ಮಣನ ಪರಿಸ್ಥಿತಿಯ ಬಗ್ಗೆ)

    • ಚೆನ್ನಾಗಿದೆ; ಒಂದು ಕಥೆಯನ್ನೇ ಮಾಲಿನೀವೃತ್ತದಲ್ಲಿ ಅಡಕಮಾಡುವ ಸಾಹಸ ಯಶಸ್ವಿಯಾಗಿದೆ.

  9. ಪ್ರತ್ಯಾಹಾರಂ ನಡೆದಿರಲುಂ ವೃತ್ತಿ ನಿರ್ವಾಹಕಂತುಂ
    ಸತ್ಯಾನಂದಂ ದೊರಕಲುವುಂ ಜೀವನಂ ಕಾಣ ನಾಕಂ ।
    ಅತ್ಯಾಚಾರಂ ಜರುಗುದನುಂ ನಿತ್ಯ ಜೀವರ್ಗಳಿಂದುಂ
    ಪ್ರತ್ಯಕ್ಷಂ ಕಂಡಿರೆ ಕಪಟಂ ಸಾಕುಸಾಕಾಯ್ತೆ ಲೋಕಂ ।।

    (ನಿತ್ಯಾನಂದಂ ಬಿಡದಿಯೊಳುಂ ………. ಸಾಲಿನ ಮುಂದುವರಿದ ಭಾಗ !!)

    • ಇದೇಕೆ ಮಂದಾಕ್ರಾಂತದಲ್ಲಿ ಬರುವ ಐದು ಗುರುಗಳಿಗೆ ಬದಲಾಗಿ ನಾಲ್ಕೇ ಗುರುಗಳಿಗೆ ಮಿತಿಮಾಡಿಕೊಂಡಿದ್ದೀರಿ? ಈ ಮಾರ್ಪಾಡು ಸೋದ್ದಿಷ್ಟವೋ ಅಥವಾ ಆಕಸ್ಮಿಕವೋ? ಏನೇ ಆಗಲಿ, ಇದೂ ಒಂದು ನವೀನವೃತ್ತವೇ ಆದೀತು ದಿಟ. ಆದರೆ ಇಲ್ಲಿ ಗತಿಸುಭಗತ್ವವಿಲ್ಲದ ಕಾರಣ ಇಂಥ ಪ್ರಯೋಗವು ಸ್ವರಸವಾಗದು.

      • ಗಣೇಶ್ ಸರ್, ಗಾಯತ್ರಿಯವರ ಪದ್ಯ ನೋಡಿ ಬರೆದಿದ್ದು, ಮಂದಾಕ್ರಾಂತದಲ್ಲಿ – ನಾಲ್ಕು ಗುರುಗಳಲ್ಲವೇ?
        ಮಂದಾಕ್ರಾಂತಂಮುಗುದೆಯರಿಗೇ ಮೀಸಲಾಗಿರ್ಪತಂತ್ರಂ

      • ಓ.. ಸರ್, ಈಗ ಅರ್ಥವಾಯಿತು, ಐದು ಲಗುಗಳು ಬರಬೇಕಿತ್ತು ಅಲ್ಲವೇ? ಅದಕ್ಕೆ ಧಾಟಿ ತಪ್ಪಿದೆ.
        ಸರಿಪಡಿಸಿದ್ದೇನೆ.
        ಪ್ರತ್ಯಾಹಾರಂ ನಡೆಯುತಿರಲುಂ ವೃತ್ತಿ ನಿರ್ವಾಹಕಂತುಂ
        ಸತ್ಯಾನಂದಂ ದೊರಕಲದಕುಂ ಜೀವನಂ ಕಾಣ ನಾಕಂ ।
        ಅತ್ಯಾಚಾರಂ ಜರುಗುತಿರಲುಂ ನಿತ್ಯ ಜೀವರ್ಗಳಿಂದುಂ
        ಪ್ರತ್ಯಕ್ಷಂ ಕಂಡಿರೆ ಕಪಟವಂ ಸಾಕುಸಾಕಾಯ್ತೆ ಲೋಕಂ ।।

        • ನೂತ್ನಂ ವೃತ್ತಂ ಕವನಭುವನಕ್ಕಿಂತುಷಸ್ಸಾದುದಲ್ತೇ

        • ನೂತ್ನಂ ವೃತ್ತಂ ಕವನಭುವನಕ್ಕಿಂತುಷಸ್ಸಾದುದಲ್ತೇ

        • ಧನ್ಯವಾದಗಳು ಕೊಪ್ಪಲತೋಟ
          ಪ್ರತ್ಯಾಹಾರ – ಪಥ್ಯಾಹಾರ ವಾಗಿಬಿಟ್ಟಿತ್ತು, ಒಂದು ಮಾತ್ರೆ ನುಂಗಿಬಿಟ್ಟಿದ್ದೆ !!

  10. ಚಿತ್ತಾಕರ್ಷಂಗೊಂಡಿರಲ್ ಭೂಮಿಯಿಂದಂ
    ಹತ್ತೇರ್ವಂದುಂ ಬೆಟ್ಟಗುಡ್ಡಂಗಳಿಂದಂ,
    ತೆತ್ತುಂ ಬಾಳಂ, ಸಾಗರಂಸಾರ್ದನೇಕಂ?
    (ಮ)ಗತ್ತಾರ್ದಾಗಳ್, ಸಾಕುಸಾಕಾಯ್ತೆ ಲೋಕಂ? 🙂

    (ಗತ್ತು=ಅನುಸರಣೆ,ಸಲುಗೆ)
    (ಸೂರ್ಯೋದಯ,ಸೂರ್ಯಾಸ್ತ)

    • ಕೆಲವೊಂದು ವಿಸಂಧಿದೋಷಗಳೂ ಛಂದೋಲೋಪವೂ ಇವೆ (ಕಡೆಯಪಾದದಲ್ಲಿ). ಮುಖತಃ ವಿವರಿಸಿ ತಿದ್ದುವೆ.

  11. ಮೊದಲ ವೃತ್ತ ಪ್ರಯೋಗ…
    ಅಶೋಕ ವನದ ಸೀತೆಯ ದುಃಖ..

    ಬನದನಡುವೆಯೊಳ್ಭೂಜಾತೆ ಕಣ್ತುಂಬಿ ಪೇಳ್ದಳ್
    “ಜನನಿ… ತವರ ತೋರೈ, ಸಾಕು ಸಾಕಾಯ್ತೆ ಲೋಕಂ ” ।
    ನೆನೆಯುತೊಡೆಯನಾಮಂ, ರತ್ನವಂಕೈಯೊಳಿತ್ತನ್
    ಮನದದುಗುಡವಂ ತಾನೂಕಿ ಕೋದಂಡದೂತಂ ।।

    • ಮೊತ್ತಮೊದಲ ವೃತ್ತರಚನಾಪ್ರಯತ್ನ ಮೆಚ್ಚುವಂತಿದೆ. ಆದರೆ ಸಹಜವಾಗಿಯೇ ಕೆಲವೊಂದು ದೋಷಗಳು ನುಸುಳಿವೆ.
      ಉದಾ: ನಡುವೆ ಎಂದರೆ ಸಾಕು, ನಡುವೆಯೊಳ್ ಎಂಬ ಸಪ್ತಮೀವಿಭಕ್ತಿ ಬೇಡ.
      ಒಡೆಯನಾಮಂ ಎಂಬುದು ಅರಿಸಮಾಸ. ಇದನ್ನು ಒಡೆಯನೊಳ್ಪಂ (ಒಳ್ಪು = ಪ್ರೀತಿ)
      ಇತ್ಯಾದಿ. ಅಲ್ಲದೆ ಕೋದಂಡದೂತಂ ಎಂದರೆ ರಾಮ ಎಂದಾಗದು. ಕೋದಂಡಧಾರಂ ಎಂದೋ ಕೋದಂಡರಾಮಂ ಎಂದೋ ಆಗಬೇಕು. ಅಲ್ಲದೆ ತಾವು ಹಳಗನ್ನಡದ ಹದವನ್ನು ಮತ್ತಷ್ಟು ತರುವಲ್ಲಿ ಯತ್ನಿಸಿರಿ.

      • ಸವರಣೆಗಳಿಗೆ ಧನ್ಯವಾದಗಳು ಮೇಷ್ತ್ರೆ…. ಮತ್ತಷ್ಟು ಅಭ್ಯಾಸದಿಂಬರೆಯಲೆತ್ನಿಸುವೆ..

  12. ಇಳೆಯುಂ ಕಾಣಿಂತುತಾನುಂ ತುಳುಕಿರೆ ಜನರಿಂ ಚಂದ್ರಲೋಕಂಪೊದಳ್, ತಿಂ-
    ಗಳುತಾಂ ತೂರಾಡುತಿಂತುಂ ತಳೆದಿರೆ ಕಳೆಯಂ, ಪುತ್ರನಂಗಾರನಂ ಸಂ-
    ಗಳಿಸಲ್ ಹೂಡಿಂತುಯಾನಂ ಹೊರಟಿರೆ ಬುಧರುಂ, ಮಂಗಳಂಕಂಡಿರಲ್ ಬಾಂ-
    ದಳದೊಳ್, ಬೇರೊಂದುತಾವೊಳ್ ದೊರಕಿರೆ ನೆಲೆಯುಂ, ಸಾಕುಸಾಕಾಯ್ತೆ ಲೋಕಂ ।।

    (ಅಂತರಿಕ್ಷ ಯಾನದ ಪರಿಕಲ್ಪನೆ… !!)

    • ಕಲ್ಪನೆಯು ತುಂಬ ಸೊಗಸಾಗಿದೆ. ಈವರೆಗೆ ಎಲ್ಲರೂ ವಿಷಾದ-ಖೇದಗಳ ಹಿನ್ನೆಲೆಯಲ್ಲಿ ಪದ್ಯಪೂರಣವನ್ನಿದಕ್ಕೆ ಮಾಡಿದ್ದರು. ನೀವು ಇದೀಗ ತುಂಬ ಭರವಸೆ, ಹರ್ಷಗಳ ಧ್ವನಿ ಹೊಮ್ಮುವಂತೆ ಕವನಿಸಿದ್ದೀರಿ; ಅಭಿನಂದನೆಗಳು. ಆದರೆ ಪ್ರಶಂಸನೀಯವಾದ ಇಂಥ ಮಹಾಸ್ರಗ್ಧರೆಯನ್ನು ನಿರ್ವಹಿಸುವಲ್ಲಿ ಮತ್ತಷ್ಟು ಹಳಗನ್ನಡದ ಬಿಗಿ ಬೇಕಿದೆ. ಇದು ನಿಮ್ಮ ಸತತಪ್ರಗತಿಯ ಹಿನ್ನೆಲೆಯಲ್ಲಿ ಕಂಡಾಗ ಸದ್ಯೋಭವಿಷ್ಯದಲ್ಲಿಯೇ ಸಾಧ್ಯವಾಗುವ ನೆಲೆಯೆಂದು ತೋರುತ್ತದೆ.

      • ಧನ್ಯವಾದಗಳು ಗಣೇಶ್ ಸರ್, ವೃತ್ತಗಳಲ್ಲಿ ಪದ್ಯ ರಚನೆ ಸಂತೋಷ ತಂದಿದೆ. ಕಲ್ಪನೆಯನ್ನು ವೃತ್ತಗಳಲ್ಲಿ ತರುವಲ್ಲಿ ನನ್ನ ಭಾಷಾಮಿತಿಯ ಪರಿಣಾಮ ಅರಿವಾಗುತ್ತಿದೆ. ಹೆಚ್ಚು ಹೆಚ್ಚು ಅಧ್ಯಯನದ ಅವಶ್ಯಕತೆಯಿದೆ.

  13. ಮಂದಾಕ್ರಾಂತದಲ್ಲೊಂದು ಪ್ರಯತ್ನ:

    ಹಾರಾಡುತ್ತಿಂದ್ರಜಿತನುಮಹಾ|ಮಾಯೆಯಿಂಧಾವಿಸಿರ್ಪಂ
    ಹೋರಾಡಲ್ ಲಕ್ಷ್ಮಣನುಚಣದೊಳ್|ಬೀಳ್ದನಂಮೂರ್ಚೆಯಿಂದಂ
    ಶ್ರೀರಾಮಂಶೋಕದೊಳನುಜನಂ|ಕಂಡುದಿಗ್ಭ್ರಾಂತಿಗೊಳ್ಳಲ್
    ಕೀರೀತ್ಯೊಳ್ಕೇಳ್ದನುಮುದದಿತಾಂ|ಸಾಕುಸಾಕಾಯ್ತೆ ಲೋಕಂ

    • ಕಡೆಯ ಸಾಲಿನ ಅರ್ಥ ಸ್ಫುಟವಾಗಲಿಲ್ಲ; ಹಳಗನ್ನಡ ಮತ್ತೂ ಮಿಗಿಲಾಗಬೇಕು:-)

      • ಲಕ್ಷ್ಮಣನು ಎಚ್ಚರವಿಲ್ಲದೆ ಸಾವು ಬದುಕುಗಳ ನಡುವೆ ಇರುವುದನ್ನು ಕಂಡು ದುಃಖದಿಂದ, ಆ ಸಂಧರ್ಭದಲ್ಲಿ ಹೀಗೆ ಎಂದಿರಬಹುದು ಎಂಬ ಕಲ್ಪನೆ, ಕ್ಷಮಿಸಿ ಸಾರ್ 🙁 ಹಳಗನ್ನಡದ ಕಡೆ ಹೆಚ್ಚು ಗಮನ ಕೊಡುವೆ

  14. || ಮಂದಾಕ್ರಾಂತವೃತ್ತ ||

    ವೃದ್ಧರ್ ನೋವುಣ್ಣುತಿರೆ ನಿರುತಂ ಸೋಲ್ತನಾರೋಗ್ಯದಿಂದಂ ,
    ಶ್ರದ್ಧಾಭಕ್ತ್ಯಾದಿಗಳಿನನಿಶಂ ದೇವರಂ ಜಾನಿಸುತ್ತುಂ,|
    ಶುದ್ಧಾತ್ಮಾನಂದದ ಬಯಕೆಯಿಂ ಮುಕ್ತಿಯಂ ಬೇಡಿರಲ್,ಸಂ-
    ಬದ್ಧರ್ ಕೇಳ್ವರ್,”ನವೆದು ರುಜೆಯಿಂ ಸಾಕುಸಾಕಾಯ್ತೆ ಲೋಕಂ?”||

    • ಒಳ್ಳೆಯ ಶೈಲಿ, ಒಳ್ಳೆಯ ಕಲ್ಪನೆ ಮತ್ತು ದುಷ್ಕರಪ್ರಾಸವನ್ನೂ ಲೀಲೆಯಿಂದ ನಿರ್ವಹಿಸಿದ ಪರಿ ಎಲ್ಲ ಸೊಗಸಾಗಿವೆ.

      • ಸಹೋದರರೆ, ನಿಮ್ಮೀ ಪ್ರೋತ್ಸಾಹದ ನುಡಿಗಳಿಗೆ ಹೃತ್ಪೂರ್ವಕಧನ್ಯವಾದಗಳು. ಪದ್ಯಪಾನದ ಹಾಗೂ ನಿಮ್ಮ ಶ್ರೇಷ್ಠಮಾರ್ಗದರ್ಶನದ ಲೀಲೆಯಿಂದ ಈ ವೃತ್ತರಚನೆಯು ಸಾಧ್ಯವಾಗಿದೆಯೆಂಬುದು ವಾಸ್ತವಾಂಶ:-)

  15. ಹೀಗೊಂದು “ಸಮಸ್ಯಾಪೂರಣ” !! – ಚೌಪದಿಯಲ್ಲಿ

    ಇನಯನೀನಿರದಿರುಳ ನೀರವದೊಳೆನಿತು ಕಂ-
    ಪನವಿಂತು? ಸಾಕುಸಾಕಾಯ್ತೆಲೋ….ಕಂ-
    ದನಳುವಿಂದದೊ ಕರುಳಹಿಂಡುತಿರೆ ಕಂ-
    ಬನಿ ಕಾಣ, ಸಾಕುಸಾಕಾಯ್ತು ಲೋಕಂ ।।

    ಅಳುವ ಕಂದನೊಡೆ ಒಂಟಿಯಾಗಿ ಕಳೆದ ರಾತ್ರಿಯಂದು – ಲಲನೆಯ ಮನದಮಾತು. (ಮಳೆಯ ಇರುಳಿನಲಿಳೆಯ ಸ್ವಗತವೂ ಆದೀತೆ?)

    • ನಿಮ್ಮ ಈ ನೂತನ ಪರಿಹಾರವೂ ಬಹಳ ಚೆನ್ನಾಗಿದೆ ಉಷಾ. ಧನ್ಯವಾದಗಳು.

    • ಹೌದು ಕಾಂಚನ ಅವರೆ, ಉಷಾ ಅವರ ಕಲ್ಪನೆ ತುಂಬ ಚೆನ್ನಾಗಿದೆ.
      ಉಷಾ ಅವರೆ,(ನಿಮ್ಮ ಮಾತುಗಳಲ್ಲಿ ಹೇಳುವುದಾದಲ್ಲಿ,)ಕರುಳಹಿಂಡುವ ಕಾರಣಕ್ಕೆ ಸೇವಿಸಿಯೋ ಏನೋ,ಮೂರು ಮಾತ್ರೆಗಳು ಮಾತ್ರ ಪದ್ಯದ ಮೂರನೇ ಪಾದದಲ್ಲಿ ಕಾಣದಾಗಿವೆಯಲ್ಲಾ !

    • ಪ್ರೀತಿಯ ಕಾಂಚನ & ಶಕುಂತಲಾ,
      ಒಂದೇಮಾತಿನಲ್ಲಿ(ಏಕವಚನದಲ್ಲಿ!) ತೋಡಿಕೊಂಡ ಲಲನೆಯ ಅಳಲನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು.
      “ಸಾಕುಸಾಕಾಯ್ತೆಲೋ….ಕಂ(come?!)-ದ” ಅಂತ ಕಂದನನ್ನ ವಿಭಜಿಸುವ ಭರದಲ್ಲಿ – “ಕಂ-ದನಾಕ್ರಂದನ”ವನ್ನ “ಕಂ-ದನಳು”ವಾಗಿ ಬದಲಿಸಲು ಆ ಮೂರೂ ಮಾತ್ರೆಗಳನ್ನ ಕಂದನಿಗೆ ನುಂಗಿಸಿದ್ದು !!

      **… ಕಂ- ದನಳುವಿಂದದೊ ಕರುಳಹಿಂಡುತಿರೆ ಸುರಿದ ಕಂ- ಬನಿ ಕಾಣ ….

  16. ಪ್ರಮದಾಕ್ರಾಂತಾ 🙂
    ಗರಳಂ ಪಾಥೋನಿಧಿಯಿನುದಿಸಲ್ ತೊಟ್ಟನೈತಂದು ಭೂಮಾ-
    ತುರದಿಂ ಪೀರ್ದಾ ಹದನಕೊರೆಯಯ್ ಹೇತುವಂ ಹೇ ಮಹೇಶಾ !
    ಗಿರಿಜಾಗಂಗೋರಗಶಿಖಿಹುತಾಶಾದಿಗಳ್ ನಿಚ್ಚವುಂ ಮಂ-
    ದಿರದೊಳ್ ಮಾಳ್ಪುತ್ಕಟಕಲಹದಿಂ ಸಾಕುಸಾಕಾಯ್ತೆ ಲೋಕಂ ?
    ಹದನಕೊರೆಯಯ್ – ಹದನಕೆ ಒರೆಯಯ್
    ಶಿಖಿ – ನವಿಲು

    • ಆಹಾ! ಮೊದಲ ಬಾರಿಗೆ ಹಾಸ್ಯರಸಪ್ರಚುರವಾಗಿ ಸದ್ಯದ ಪದ್ಯಪೂರಣ ಸಾಗಿದೆ; ಅಭಿನಂದನೆಗಳು. ಅಲ್ಲದೆ ಪ್ರಮದಾಕ್ರಾಂತಾವೃತ್ತದ ಪ್ರಯೋಗವೂ ಚೆನ್ನಾಗಿದೆ. ಮೊದಮೊದಲು ನಾನು (ಶತಾವಧಾನಕಾಲದಲ್ಲಿ ಕೊಪ್ಪಲತೋಟನಿದನ್ನು ಒಡ್ಡಿದಾಗ)
      ಗತಿಹಿತವಿಲ್ಲವೆಂದು ಭಾವಿಸಿದ್ದೆ. ಈಚೆಗೆ ಈ ವೃತ್ತವನ್ನೇ ಹಲವು ಬಾರಿ ಮನದಲ್ಲಿಯೇ ಮಗುಚುತ್ತಾ ಈ ನಡೆಗೆ ಸ್ವಲ್ಪ ನುರುಗಿದ್ದೇನೆ. ಹೀಗಾಗಿ ನಿಮ್ಮ ಈ ಪದ್ಯದ ಗತಿಸ್ವಾದ ಕಿವಿಗೆಟುಕುತ್ತಿದೆ. ಮುಖ್ಯವಾಗಿ ಈ ಸಾಧ್ಯತೆಯನ್ನು ತೋರಿದ ಕೊಪ್ಪಲತೋಟನಿಗೆ ಧನ್ಯವಾದಗಳು ಸಲ್ಲಬೇಕು. ಅಲ್ಲದೆ ಈಚೆಗೆ ವಸಂತತಿಲಕದಲ್ಲಿ ಇದೇ ರೀತಿ ಮೊದಲ ಗುರುವಿಗೆ ಲಘುದ್ವಯವನ್ನಿರಿಸಿದ ಹಳೆಯ ಪ್ರಯೋಗವೊಂದನ್ನು ಕಂಡು ಅದರ ಗತಿಸಾಧ್ಯತೆಯನ್ನೂ ಮನನಿಸುತ್ತಿದ್ದೇನೆ. ಈ ಹೊಸ ವೃತ್ತಕ್ಕೆ ವಸಂತಕಲಿಕಾ ಎಂದು ನಾಮಕರಣವನ್ನೂ ಮಾಡಿದ್ದೇನೆ. ದಿಟವೇ, ಪ್ರಮದಾಕ್ರಾಂತಾ, ವಸಂತಕಲಿಕಾ ಮುಂತಾದ ಹೊಸ ಸಾಧ್ಯತೆಗಳೆಲ್ಲ ಈಗಾಗಲೇ ಛಂದೋಗ್ರಂಥಗಳಲ್ಲಿ ದಾಖಲೆಗೊಂಡಿರುತ್ತವೆ; ಅವಕ್ಕೆ ಅವುಗಳದ್ದೇ ಹೆಸರುಗಳೂ ಇವೆಯೆನಿಸುತ್ತದೆ.
      ಆದರೆ ಇವುಗಳ ಪ್ರಸಿದ್ಧಮೂಲಗಳಾದ ಮಂದಾಕ್ರಾಂತಾ, ವಸಂತತಿಲಕ ಮುಂತಾದ ವೃತ್ತಗಳ ಸಂಜ್ಞಾಛಾಯೆಯಲ್ಲಿ ಹೊಸಹೆಸರುಗಳು ಹೊಮ್ಮಿದಾಗ ಅಭ್ಯಾಸಿಗಳಿಗೆ ಹೆಚ್ಚಿನ ಹಿತವೂ ಪರಿಚಯಸೌಲಭ್ಯವೂ ಆದೀತೆಂದು ನನ್ನ ಅನಿಸಿಕೆ.

      • ರಾಮಕೃಷ್ಣ ಪೆಜತ್ತಾಯರೇ… ತುಂಬ ಸೊಗಸಾದ ಪರಿಹಾರ 🙂
        ಗಣೇಶ ಸರ್.. ಧನ್ಯವಾದಗಳು:-)
        ವಸಂತತಿಲಕದ ಮೊದಲ ಗುರುವನ್ನು ಎರಡು ಲಘುಗಳನ್ನಾಗಿ ಬದಲಾಯಿಸಿದ ವೃತ್ತಕ್ಕೆ ಟಿ.ವಿ.ವಿ ಅವರ ‘ಕನ್ನಡ ಛಂದಃಸ್ವರೂಪ’ದಲ್ಲಿ ‘ಋಷಭ’ ಎಂಬ ಹೆಸರನ್ನು ಉಲ್ಲೇಖಿಸಿದ್ದಾರೆ..

    • ಉಭಯಗಣೇಶರಿಗೆ ಧನ್ಯವಾದಗಳು 🙂

  17. ಸ್ರಗ್ಧರೆ :
    ಅಮ್ಮನ್ ತಾಂ ಗುಮ್ಮನಂ ತೋರುತಲುಣಿಸಿರಲುಂ ಕಂದಗಂ ಸುಮ್ಮಗಿಂತುಂ
    ದಮ್ಮಮ್ ಸಂದಿಂತುಟಂತುಂ ಮಣಿಸುದನೊಲವಿಂ ಕಂಡು ಮೂಕಾಯ್ತೆ ಲೋಕಂ ।
    ಕಮ್ಮಮ್ ಸಾಗಂತುಟಿಂತುಂ ಸೃಜಿಸುತಲಿರಲುಂ ಜೀವರಂ ಸುಮ್ಮಗಂ ತಾಂ
    ಬೊಮ್ಮನ್ ಕಾಣ್, ಗುಮ್ಮಗಿಂತುಂಮರಳಿರಲಿರವುಂ – ಸಾಕುಸಾಕಾಯ್ತೆ ಲೋಕಂ ।।

    ದಮ್ಮ = ಧರ್ಮ , ಕಮ್ಮ= ಕರ್ಮ
    (ಪರಬ್ರಹ್ಮತತ್ತ್ವದ ಇರವಿನ ಕಲ್ಪನೆ – ಅಮ್ಮನೊಲವಿನೊಂದಿಗೆ)

  18. ಶಿರಕಂ ಧೋಯೆಂದು ಪೊಯ್ವಾ ಮುನಿಸಲೆ ಮೆರವಳ್ಗಂಜುತುಂ ‘ಏನು ಬನ್ನಿಂ’
    ಕರೆಯಲ್ಕೋ ವಂದೆಯೆನ್ನಲ್ ಚಣದಡತಡೆಯುಂ ತಾಳದೋಪಳ್ ಸಮಕ್ಕಂ
    ಕೋರಳೇ ಚೀರ್ವಂದವೊಲಾಳ್ವನ ಕಿರುಕುಳದಾ ಚೀರ್ಕೆಗಂಜುತ್ತುಮಿನ್ನೀ
    ನರಕಂ ಸಾಕೆಂದು ಪೇಳಲ್ವೆದರುತಲುಲಿವಂ ಸಾಕುಸಾಕಾಯ್ತೆ ಲೋಕಂ

    ಮನೆಯಲ್ಲಿ ಹೆಂಡತಿ ಕಾಟ ಮತ್ತು ಕಚೇರಿಯಲ್ಲಿ ಬಾಸ್ ಕಾಟದಿಂದ ಬೇಸತ್ತವನ ಬವಣೆ 😉

  19. ನಶೆಯೇಂ ಪಾರ್ಥಾ! ಶಿರಕ್ಕೋರ್ ಶರವನೆಣಿಸಿ ಮುಂಜಾವಿನೊಳ್ ನೀನೆ ನಿತ್ಯಂ
    ಮಸೆಯಲ್ ಕೂರಂಬುವಂ ಕಾದ ಕಿಡಿಗೆ ಕೆಡುಕೇ ಬೆಚ್ಚಿ ಹಿಮ್ಮೆಟ್ಟುವೋಲ್ ಬೇ-
    ವಸದಿಂ ಗಾಂಡೀವಮಂ ಮೀಂಟಿರೆ ಮೊಳಗಿದ ಯುದ್ಧಾರ್ತದಾಹ್ವಾನಮೇ ತಾ-
    ನುಸಿರ್ಗೊಂಡೀ ಕಾಲದೊಳ್ ಛೇ! ಕುರುವರ ನಿನಗೇಂ ಸಾಕು ಸಾಕಾಯ್ತೆ ಲೋಕಂ||

Leave a Reply to ಗಣೇಶ ಭಟ್ಟ ಕೊಪ್ಪಲತೋಟ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)