Nov 032014
 

image

  100 Responses to “ಪದ್ಯಸಪ್ತಾಹ ೧೩೩: ಚಿತ್ರಕ್ಕೆ ಪದ್ಯ”

  1. ನಯನಂಗಳ್ ಶರಸಾಮ್ಯಮಂ ತಳೆದೊಡೇಂ! ಬಾಳರ್ಪ ಭ್ರೂಕೋಟಿಯೇಂ!
    ಪಯವಂ ಬೇಳ್ವದರಂಗಳೇ ರುಧಿರಮಂ ಪೀರ್ದಂದಮಂ ಸಾರ್ದೊಡೇಂ
    ಚಯನಂ ಗೈದೊಡೆ ಚಕ್ರಮಂ ಕದಪುಗಳ್ ಕ್ರೋಧಾನುವೇಷ್ಟಾರ್ತರೇಂ
    ಸಯ ಚೆಂಬಣ್ಣದ ಕಿಂಶುಕಧ್ರುಮಮು ತಾಂ ಪೂರೈಪುದೇಂ ವಹ್ನಿಯಂ?
    (ಪೂರೈಸು =ಹೊರಸೂಸು,ಕಿಂಶುಕ=ಕೆಂಪು ಹೂ ಬಿಡುವ ಮುತ್ತುಗದ ಮರ,ಸಯ=ಸ್ವಂತ,ಶಾಶ್ವತ)

    • ಒಳ್ಳೆಯ ಶೈಲಿಯ ಮತ್ತೂ ಒಳ್ಳೆಯ ಕಲ್ಪನೆಗಳುಳ್ಳ ಪದ್ಯಕ್ಕಾಗಿ ಧನ್ಯವಾದಗಳು.

    • ಸೊಗಸಾಗಿರ್ಪುದು ಪದ್ಯಮೇಂ ಬವರಮಂ ತೋರಿರ್ಪುದೋ ವಕ್ತ್ರದೊಳ್!

      • ಅಲ್ತಲ್ತು ! ಪರಮ ಶಾಂತಿಯಂ ಸಾರಿರ್ಪುದು, ಕೊಪ್ಪಲತೋಟಾ 🙂

  2. ಬಣ್ಣದ ಬಣ್ಣನೆಯೇಂ ಮಿಗೆ
    ಕಣ್ಣಿನಲಂಕಾರಸಾರವೇಂ ಪುರ್ಬುವಿನೊಳ್|
    ಬಿನ್ನಿಪ ಛಂದೋಗತಿಯೇಂ
    ಚೆನ್ನಿಗನೀ ಮೊಗದಲಂಪಿದೋರ್ ನಲ್ಗಬ್ಬಂ||

    • ಪದ್ಯ ಚೆನ್ನಾಗಿದೆ; ಹಳಗನ್ನಡದ ಹದವೂ ಸೊಗಸಾಗಿದೆ. ಆದರೆ ಪ್ರಾಸದಲ್ಲಿ ಸ್ವಲ್ಪ compromise ಆದಂತಿದೆ:-) ಅಲ್ಲದೆ ಪುರ್ಬಿನೊಳ್ ಎಂದೇ ಆಗಬೇಕು; ಕೇವಲ ಸಂಸ್ಕೃತಪದಗಳಲ್ಲಿ ಮಾತ್ರ ಸಪ್ತಮ್ಯಂತವು ವಕಾರದಿಂದ ಸೇರಿಕೊಳ್ಳುತ್ತದೆ (ಉದಾ; ಶಂಭುವಿನೊಳ್, ನಿಘಂಟುವಿನೊಳ್ ಇತ್ಯಾದಿ) ಕನ್ನಡದಲ್ಲಿ ಕರ್ಬಿನೊಳ್, ನಾಡಿನೊಳ್, ಗಿಡುವೊಳ್, ನಡುವೊಳ್ ಇತ್ಯಾದಿಯಾಗಿ ಸಾಗುತ್ತದೆ.

    • ಹೊಳ್ಳರ ಕವಿತಾಕಾಮಿನಿ
      ಕಲ್ಲಾಗಿರ್ದಪಳೆ ಸಲ್ವಳಿಂತುಟು ದಿನಕಂ!!

  3. ಈತನಾರೆನೆ ಕೌತುಕಂ ನವನೀತನಾರಿವ ಭೀಷಣಂ
    ಭೂತದೋಲಿಹ ಭೂಪನುಂ ಪರ ಪಂಚವರ್ಣವನಾತು ಸಾ-
    ಕ್ಷಾತ ಕಂಡಿವಜಾತನುಂ ಘನ ಪಂಚಭೂತದ ಗಾತ್ರದೊಳ್
    ಭೌತಶಾಸ್ತ್ರದ ಪಾತ್ರದೊಳ್ ಪರಮಾಪ್ತ ರೂಪ ವಿಭೂಷಣಂ ।।

  4. nimma ooheya kavanagalANNU Odi bahaLa santhosha /aacharya vaaguttaa ide!!!!!

  5. पूर्वं क्रुद्धां मातरं व्यायतास्ये
    विश्वं विश्वं दर्शयामास कृष्णः ।
    तस्मादप्येषोऽस्ति कृष्णः पटीयान्
    त्रैलोक्यं स्वे दर्शयत्यक्षियुग्मे ॥

    ಹಿಂದೆ ಆ ಕೃಷ್ಣನು ಕುಪಿತಳಾಗಿದ್ದ ತಾಯಿಗೆ ಬಾಯೊಳು ಜಗವನ್ನು ತೋರಿದ್ದ. ಅವನಿಗಿಂತಲೂ ಈ ಕೃಷ್ಣನು ಪಟುತರ. ಈತನು ಕಂಗಳಲ್ಲಿ ಮೂರು ಲೋಕಗಳನ್ನು ತೋರಿಸುತ್ತಿದ್ದಾನೆ.

    • अन्तिमपादः किञ्चित् परिवर्तितः ।

      पूर्वं क्रुद्धां मातरं व्यायतास्ये
      विश्वं विश्वं दर्शयामास कृष्णः ।
      तस्मादप्येषोऽस्ति कृष्णः पटीयान्
      नूत्नं विश्वं दर्शयत्यक्षियुग्मे ॥

      ಹಿಂದೆ ಆ ಕೃಷ್ಣನು ಕುಪಿತಳಾಗಿದ್ದ ತಾಯಿಗೆ ಬಾಯೊಳು ಜಗವನ್ನು ತೋರಿದ್ದ. ಅವನಿಗಿಂತಲೂ ಈ ಕೃಷ್ಣನು (ಕೃಷ್ಣವರ್ಣನು) ಪಟುತರ. ಈತನು ಕಂಗಳಲ್ಲಿ ಹೊಸ (ರಸಮಯ) ಪ್ರಪಂಚವನ್ನು ತೋರಿಸುತ್ತಿದ್ದಾನೆ.

      • ಅತ್ಯುತ್ತಮಂ ಪ್ರಕಟಿತಂ ಪ್ರತಿಭಾನಭಾನ-
        ಭವ್ಯಂ ಕವಿತ್ವಮಮಲಂ ಭವದೀಯಬುದ್ಧ್ಯಾ|
        ಕೃಷ್ಣಸ್ಯ ವಾಪ್ಯಮುಕರೂಪಕವೇಷಿಣೋ ವಾ
        ವಿಶ್ವಾನಿ ಸತ್ಕವಿಕೃತಾದಪಿ ನೋಜ್ಜ್ವಲಾನಿ||

      • ನವನೀತಭಾವರಸದಂ ಭವದೀಯ ಪದ್ಯಂ 🙂

        • ಆಹಾ! ನಾನು ಸೂಚಿಸಿದ ನವೀನವೃತ್ತಸಾಧ್ಯತೆಯು ಇಷ್ಟು ಬೇಗ ಪ್ರಯೋಗಕ್ಕೆ ಬಂದಿದೆ!!

          • ಗಣಿಪರ್ ನಾನಾನೂತನಾಧ್ವಂಗಳನ್ವೇ-
            ಷಣದೊಳ್ ನಿಚ್ಚಂ ಸಾಗುತಿರ್ಪರ್ ಗಣೇಶರ್ | (ಈರ್ವರು ಗಣೇಶರು)
            ಇವರಿಂದೀಗಳ್ ಬಾಸೆವೆಣ್ ಲಾಸ್ಯದಿಂದಂ
            ಕುಣಿವಳ್ ನಾನಾವೃತ್ತರಂಗಂಗಳೊಳ್ ದಲ್ | 🙂

            ತೃತೀಯಪಾದದಲ್ಲಿ ಪ್ರಾಸತ್ಯಾಗಕ್ಕೆ ಕ್ಷಮೆಯಿರಲಿ.
            ಗಣಿಪರ್ – ಸಂಖ್ಯಾವಾನ್, ಪ್ರಾಜ್ಞರು ಎಂಬರ್ಥದಲ್ಲಿ.

            ಮೆಚ್ಚುಗೆಗೆ ಉಭಯಗಣೇಶರಿಗೂ ಧನ್ಯವಾದಗಳು 🙂

          • ಹೌದು ಪೆಜತ್ತಾಯ ಸರ್,
            “ಎಣೆಯಿಂದೀಗಳ್ …” (ನೀವೂ ಸೇರಿ)

          • UshArige dhanyavAda: -)

  6. ಬದಲಿಸಿಂತುಮನುಕ್ರಮಣಿಕೆಯಂ ಕೇಸರಿಯ-
    ನದಲುಬದಲಾಗೆ ಬಿಳಿ-ಪಚ್ಚೆಯಿಂತುಂ|
    ಒದಗುವುದೆ ಅಂಗರಾಗವು ರಾಷ್ಟ್ರಧ್ವಜಮಾಗಿ
    ಬದಿಯೊಳಿನಿತಿಂತಿರಿಸೆ ದಿಟ್ಟಿಕಪ್ಪಂ||

    • ಕಲ್ಪನೆ ಚೆನ್ನಾಗಿದೆ; ಆದರೆ ಸ್ವಲ್ಪ ಪದ್ಯಗತಿಯ ಹದ-ಹಿತ ತಪ್ಪಿದೆ. ಇದನ್ನು ಪದ್ಯಧಾಟಿಯಲ್ಲಿ ಓದಿಕೊಳ್ಳುವ ಮೂಲಕ ನೀವೇ ಅರಿತು ಸುಲಭದಲ್ಲಿ ಸವರಿಸಬಹುದು.

      • “ರಾಷ್ಟ್ರಧ್ವಜ”ದಲ್ಲಿ ಶಿಥಿಲವಾಗಿದೆಯಲ್ಲ!!!
        ಕೇಸು ಹಾಕಿಸಬಹುದು ನಿಮ್ಮೀ ಕೃತಿಯ ಮೇ-
        ಲಾ ಸಹೃದಯರ್ ಪ್ರಸಾದರೆ ಕೇಳ್ದೊಡಂ

        • Law ಸಹೃದಯರು ಕೇಸ ವ್ಯಾಕರಣದೋಷಕ್ಕೆ
          ಬೀಸುವರೆ ದುಷ್ಟಭಾಷೆಯ plaintಇನಿಂ?
          ಈಸು ನೋಡಾದಿಪಾದದೆ ಕೊನೆಯ ಗಣವ ನೀಂ
          ಏಸಿಹಿದು ಮಾತ್ರೆಯೆಂದೆಣಿಸಿ ಪೇಳೈ 😉
          (ದುಷ್ಟ=ದೋಷಯುಕ್ತ)

      • ಧನ್ಯವಾದಗಳು ಸರ್. ಗತಿಯನ್ನು ತುಸು ಸರಾಗವಗಿಸಿದ್ದೇನೆ. ಸಂಸ್ಕೃತಶಬ್ದದಲ್ಲಿನ ಶಿ.ದ್ವಿ.ಯನ್ನೂ ಸರಿಪಡಿಸಿದ್ದೇನೆ.
        ಬದಲುಗೈಯುತೆ ಪಚ್ಚೆ-ಬಿಳಿ-ಕೇಸರಂಗಳಂ
        ಚದರಿರ್ಪೆ ಬಣ್ಣಗಳನುಕ್ರಮವ ನೀಂ|
        ಒದಗುಗೇಮಂಗರಾಗವು ರಾಷ್ಟ್ರಕೇತುವೊಲ್
        ಬದಿಗಿಷ್ಟನಿಟ್ಟೊಡೇಂ ದಿಟ್ಟಿಕಪ್ಪಂ||

  7. ಅರ್ಧದಾಹಾರ್ಯದೊಳು ನಿನ್ನದೇನೀ ವರಸೆ?
    ಸ್ಫರ್ಧೆಗಾತುರವಿರಲು ಜಯದೂರವೈ
    ವರ್ಧಿಸುವೆ ವರ್ಣಗಳೊಡೆಯ ಬರಿಯ ಮಾತೇಕೆ?
    ಮೂರ್ಧಕೇನಾದರೂ ಧರಿಸಯ್ಯ ನೀ

    ಆಹಾರ್ಯ – ಅಲಂಕಾರ
    ಮೂರ್ಧ – ಮುಂದಲೆ, ತಲೆಗೆ ಸಂಬಂಧಿಸಿದುದು

    • ಪಿಂದೊಂದು ಕಾಲದೊಳ್ ಸ್ವಸ್ಥಾನದಲ್ಲಿದ್ದು
      ಇಂದಿಂತು ಕೇಶರೇಖಾಪಕ್ರಮಂ|
      ಹಿಂದಿನಾ ಸೀಮಾಂತಸ್ಮೃತಿಯು ಮಾಸದವೋಲು
      ಮುಂದೆಲೆಯ ಸಾಕ್ಷಿಯಂ ಮುಟ್ಟದಿಹನೇಂ?

    • ಒಳ್ಳೆಯ ಕಲ್ಪನೆ; ಮತ್ತೂ ಒಳ್ಳೆಯ ಧ್ವನಿ; ಇದನ್ನು ಅನ್ಯೋಕ್ತಿಗೆ ತಕ್ಕ ಉದಾಹರಣೆಯೆನ್ನಬಹುದು. ಮೂರನೆಯ ಸಾಲಿನಲ್ಲಿ “…………ವರ್ಣಂಗಳೊಡೆಯ! ಬರಿಮಾತೇಕೆ?” ಎಂದು ಸವರಿಸಿದರೆ ಗತಿಸುಭಗತೆ ಮತ್ತೂ ಮಿಗಿಲಾದೀತು.

      • ಧನ್ಯವಾದಗಳು. ಧ್ವನಿ,ಅನ್ಯೋಕ್ತಿಗಳು ಅನುದ್ದೇಶಿತ. ಇಂತಹ ‘ತರಲೆ’ ಪದ್ಯಗಳನ್ನು ಹೆದರಿಕೊಂಡೇ ಪೋಸ್ಟ್ ಮಾಡುತ್ತೇನೆ.

        • ಅನುದ್ದಿಷ್ಟವಾದರೇನು? ಒಳ್ಳೆಯ ಕವಿತೆಯಲ್ಲಿ ಸಲ್ಲಕ್ಷಣಗಳು ತಾವಾಗಿ ಹೆಣೆದುಕೊಂಡಿರುತ್ತವೆ. ಅಲ್ಲದೆ ಇಂಥ “ತರಲೆ’ ಪದ್ಯಗಳನ್ನು ಸದಾ ರಚಿಸಿ ನಮಗೆಲ್ಲ ಪ್ರಸ್ತುತಿಸಿರಿ:-)

    • ಚೆನ್ನಾದ ಪದ್ಯವಿದು ಅರ್ಧಮಾದೀ ವರ್ಣ-
      ಮಂ ನೋಡದೆಯೆ ಪೋದರೆಲ್ಲರಲ್ತೇ!!

      • ನನ್ನ ‘ದೃಷ್ಟಿ’ ದೋಷವೇ ಇದಕ್ಕೆ ಕಾರಣವಿರಬಹುದೆ ಕೊಪ್ಪಲತೋಟ?

  8. ಏನಿದೇನಿದು ಸದ್ಯ ಚಿತ್ರವು ಯಕ್ಷಲೋಕದ ದುಂಬಿಯೋ ?
    ತಾನೆ ಸಿಂಗರಗೊಂಡುದೀಪರಿ ಯಕ್ಷಗಾನದ ಭಂಗಿಯೋ ?
    ಲೀನವಾಗದುದಿಂತು ವರ್ಣವು ಯಕ್ಷವಿದ್ಯೆಯ ಮುದ್ರೆಯೋ ?
    ಮೌನಮೀರಿದ ಮಂದಹಾಸವು ಯಕ್ಷಪ್ರಶ್ನೆಯ ಮುದ್ದೆಯೋ ?!

    • ವ್ಯಥೆಯ ವಾರ್ತೆಯನೊಂದನಾಂ ಕಥನಿಪ್ಪುದಾದುದೆ ಸೋದರೀ!
      ಕಥಕಳಿ ಪ್ರಕಟಂಗೊಳಲ್ ಪ್ರಕೃತಸ್ಫುಟೋಜ್ಜ್ವಲಚಿತ್ರದೊಳ್|
      ಪೃಥೆಯ ಪೋಲ್ತಿರೆ ಕಾತರಂ, ವರಯಕ್ಷಗಾನಮನಿಲ್ಲಿ ನೀಂ
      ಪೃಥುಲಭಾವದೆ ಕಂಡಿರೇಂ? ಮಗುದೊಂದು ಪದ್ಯಮನೀವುದೌ:-)

      • ಯಕ್ಷ=ಕಲಿ(ಳಿ). ಗಾನ=ಕಥೆ. ಯಕ್ಷಗಾನ=ಕಥಕಲಿ
        ಯಕ್ಷಗಾನಮದೇನು? ಕಥಕಳಿ-
        ಲಕ್ಷಣಂಗಳೆ ಅಲ್ಲಿರಲ್ ಗಡ|
        ಯಕ್ಷ ತಾ ಕಲಿಯಲ್ಲಮೇಂ, ಕಥೆ(ಯು)
        ದಕ್ಷಗಾನಮದಲ್ಲಮೇಂ|| 🙂

      • ಗಣೇಶ್ ಸರ್,
        ಮೊದಲಿಗೆ ನನ್ನೀ ಅಚಾತುರ್ಯಕ್ಕೆ ಕ್ಷಮೆ ಕೋರುವೆ.
        ಸ್ಪುರಿಸಿದ ಪದಪುಂಜಗಳು ವೃತ್ತಕ್ಕೆ ಹೊಂದಿದ ಭರದಲ್ಲಿ ಬಂದ ಪದ್ಯಗಳು !!.
        (ಮೊದಲ ಪದ್ಯದಲ್ಲಿ) ಇಂದ್ರಿಯ ಪ್ರಧಾನ ಶಿರಸ್ಸಿನಲ್ಲಿ – ಪಂಚವರ್ಣಗಳಲ್ಲಿ ವ್ಯಕ್ತವಾಗಿರುವ ಪಂಚೇಂದ್ರಿಯಗಳನ್ನು, ಪಂಚಮಹಾಭೂತಗಳೊಂದಿಗೆ ಗುರುತಿಸಲು ಪ್ರಯತ್ನಿಸಿದ್ದು. ಸ್ಪಷ್ಟತೆ ತರಲು ಸಾಧ್ಯವಾಗಿಲ್ಲ. ಸರಿಪಡಿಸಲು ಪ್ರಯತ್ನಿಸುತ್ತೇನೆ.

        • ಸಹೋದರು ಉಷಾ ಅವರು ನನ್ನ ವಿನೋದವನ್ನು ಮನ್ನಿಸುವುದು; ನಾನು ಕೇವಲ ಹಗುರವಾಗಿ ಮಾಡಿದ ಪ್ರತಿಕ್ರಿಯೆಯದು. ಇದನ್ನು ಗಂಭೀರವಾಗಿ ಗ್ರಹಿಸಬೇಕಿಲ್ಲ.

        • ಗಣೇಶ್ ಸರ್.
          ಗಂಭೀರವಾಗೇ ಪರಿಗಣಿಸಿದ್ದೇನೆ. ಎಂತಹ ಒಳ್ಳೆಯ ಪದ್ಯ, ಪ್ರುಥುಲ ಪದಸಂಪತ್ತು ನನಗೆ ದೊರೆತಿದೆ. ಧನ್ಯವಾದಗಳು.

          ಹರಿತಮಯ ಪಾಂಸೆ ಪತ್ತಿರೆ
          ಶರೀರಮಂ ತೊಡೆವು ದೆಂತುಮೆನೆ ಕಳಕಳಿಯುಂ ।
          ಮೊರದಗಲ ಬಿಣ್ಪುಂ ಸುತ್ತಿರೆ
          ಕೊರಳಂಕಾಣ್ ತೊಡುವುದಿಂತುಮದೆ ಕಥಕಳಿಯೇಂ?

          ಇದು ನಿಮ್ಮ ಆಣತಿಯಂತೆ “ಚಿತ್ರಕ್ಕೆಪದ್ಯ”ವೂ ಆದೀತೆ ?!

  9. ಸೊಗಸಾದ ಚಿತ್ರ.. ಇದರ ಬಗ್ಗೆ ಒಂದು ಸೀಸಪದ್ಯವನ್ನೇ ಹಾಕಿಬಿಡುತ್ತೇನೆ 😉

    ಪುರ್ವುಗಳೊಳೇಂ ಬೀರಮೆಯ್ದುದೋ ಕಂಗಳೊಳ್ ಕರುಣೆಯಾರ್ದ್ರತೆಯಿಂದೆ ಪರಿದಿರ್ದುದೋ
    ರಾಗಮಂತಡರಿರ್ಪ ತುಟಿಗಳೊಳ್ ಶೃಂಗಾರಮುಂ ಲಾಸ್ಯದಿಂ ಹಾಸ್ಯಮದರಂಚಿನೊಳ್
    ದಿಟ್ಟಿಯೊಳಗದ್ಭುತಂ ಪಾಚಿಗಟ್ಟಿದ ಕದಪು ಭೀಭತ್ಸಶೈವಲಿನಿಯಾಯ್ತೆ ಮುಖದೊಳ್
    ಪಕ್ಷಂಗಳೆರಡು ಗರಿಗೆದರೆ ಭಯಜನಕಮೇ ರೌದ್ರಮಾದತ್ತೇ ಸಮಷ್ಟಿಯಿಂದಂ! ||
    ಇಂತು ನವರಸಂಗಳನಿಲ್ಲಿ ತೋರ್ಪನೊಳ್ಪಿಂ
    ಬಣ್ಣಮಂ ತೊಳೆದು ರಾಜಿಸಲ್ಕೊರ್ಮೆ ಬೆಳ್ಪಿಂ
    ಕಂಡುದಾತನಾಸ್ಯದೆ ಶಾಂತಿ ಮತ್ತೆ ಚಿತ್ತಂ
    ನಿತ್ಯಮಿರ್ಪ ರಸದಾನಂದದಿಂದೆ ಮತ್ತಂ||

    • ಗೆಳೆಯಾ! ಕೊಪ್ಪಲತೋಟಾ!
      ಬೆಳೆಯಿದನೇಂ ಬಳೆದೆಯಣ್ಣ! ನವರಸಮೊಗುವಾ|
      ಪಳಗಿದ ಕೈಯಡುಗೆಯಲಾ!!
      ಬಳಸಿರ್ಪೀ ಸೀಸಮುಂ ಸುವರ್ಣಮೆನಿಕ್ಕುಂ||

      • ಸರಸತಿ ನೀಳ್ದಳ್ ನಿಮಗಂ
        ವರಮಂ ಮೇಣೆನ್ನ ನಾಮಮಂತಿರ್ದಪುದೆಂ
        -ದರಿಯದೆಯದರಿಂದೆನ್ನೀ
        ಕರಿಸೀಸಂ ತಾಂ ಸುವರ್ಣಶೀರ್ಷಕಮಾಯ್ತೇ!!

        • clap clap

        • …ಮರ್ತೆ ಪದ್ಯಪಾನದ ಮೆರಗು ನೂರ್ಮಡಿಯಾಯ್ತೇ!!!

          • ಇಲ್ಲ. ಈಗಿನ್ನೂ 68 ಪೋಸ್ಟಿಂಗ್ಗ್ಳು ಸಂದಿವೆ ಅಷ್ಟೆ. ಇನ್ನು 32 ಆದಮೇಲೆ ನೂರ್ಮಡಿ ಮೆರುಗು!

          • ಇದೀಗ 100ಮಡಿಯಾಯಿತು.

          • ನಾನು ಅದನ್ನು ಪೋಸ್ಟ್ ಮಾಡಿದಾಗ ೧೦೧ ಆಗಿತ್ತು. ಯಾರೋ ಕಿಡಿಗೇಡಿಗಳು ಎರಡನ್ನು ಡಿಲೀಟ್ ಮಾಡಿ ೯೯ ಮಾಡಿದ್ದಾರೆ!

  10. ಅಚ್ಚರಿಯ ಕಣ್ಗಳಿಂಗೆಲೆ
    ತುಚ್ಛತರಮದಾಯ್ತೆ ಸುತ್ತಣ ಸರಳ ಲೋಕಂ?
    ಪೆಚ್ಚಿರ್ದಾಡಂಬರದಿಂ
    ಮೆಚ್ಚದೆ ಬರಿವಿಳಿಯ ವಣ್ಣಮಾದನೆ ಮೂಕಂ?
    (ಬಿಳಿಯ ಬಣ್ಣ= ಸರಳವಾದ ,ಸಹಜವಾದ ಜೀವನ)
    (ಆಡಂಬರದ ಜೀವನ ಮಾಡುತ್ತಿದ್ದಾತಂಗೆ ಸುತ್ತಲಿನ ಪ್ರಪಂಚ ಕೀಳಾಯಿತೆ?)

  11. || ಕಂದಪದ್ಯ||

    ಬಣ್ಣಂಗಳಂ ಮೊಗಕೆ ಬಳಿ-
    ದಣ್ಣನಿರುತ್ತಾಡೆ ಜೀವನದೆ ನಾಟಕಮಂ,|
    ಕಣ್ಣಂ ಪಿರಿದಾಗಿಸುತುಂ,
    ಬಣ್ಣಿಪುದೆಂತೆಂಬೆನೀ ಕಠಿನಸತ್ಕಲೆಯಂ?||

    • ಆಹಾ! ತುಂಬ ಸೊಗಸಾದ ಕಲ್ಪನೆ; ಕಥಕಳಿಯ ರಸಮಾರಕನಾಟ್ಯಧರ್ಮಿಯ ಬಗೆಗೆ ಮಾರ್ಮಿಕವಿಮರ್ಶೆಯೂ ಇಲ್ಲಿದೆ!!

      • ಸಹೋದರರೆ,ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು:-)

    • ಬಣ್ಣಿಪುದೇಕೊ ವಿಮರ್ಷಕ
      ತಣ್ಣನೆ ಮಾತಿಂದೆನುತ್ತುಮೀತಂ ತಾನೇ|
      ಬಣ್ಣವ ಪರ್ಚುತೆ, ಬಿರುಕೆಂ-
      ಗಣ್ಣಿಂದವರಂ ವಿಷಾದ(ಭೀತಿ)ಗೊಳಿಸಿರ್ದಿಹನೇಂ||

  12. ಬಣ್ಣಗಳ ಲೇಪದಲಿ
    ಕಣ್ಣುಗಳೆ ದನಿಯಾಗೆ
    ತಣ್ಣನೆಯ ಛಳಿಯೆಲ್ಲ ಧೂಳಿಪಟವೆ
    ಬಣ್ಣನೆಗೆ ದಂಡವದು
    ಹುಣ್ಣಿಮೆಯೆ ಕಂದಿರಲು
    ನುಣ್ಣನೆಯ ಹಾಳೆಯಿದು ಚಿತ್ರಪಟವೆ?

    • ಕುಸುಮಷಟ್ಪದಿಯಲ್ಲಿ
      ರಸಮಯವಿಧಾನದಿಂ
      ಪಸರಿಸಿದಿರೌ ನಿಮ್ಮ ಕವಿತೆಯನ್ನು|
      ಅಸಮಲೀಲೆಯ ಲಯದೆ
      ಮಸೆದಿಟ್ಟ ಕತ್ತಿಯೊಲ್
      ಹಸಿತಮಾದುದು ಸುಖಪ್ರಾಸಕಲನಂ||

  13. ಇಳೆಯೊಳ್ ವ್ಯಾಪಾರಕೆಂದಾಂ ಬಹುವಿಧಕಪಟಾಲಿಪ್ತವರ್ಣಂಗಳಂ ಕೆಂ-
    ಬಿಳಿ ವಕ್ತ್ರಕ್ಕೆನೆ ತೀಡಿ ಛದ್ಮಮೆಸಗಲ್ ನಾನಾರ್ಥಸಂವೃದ್ಧಿಯಂ
    ಗಳಿಸಿರ್ಪೆಂ ಗಡ, ದರ್ಪಣಕ್ಕೆ ಮೊಗಮೊಡ್ಡಲ್ಕೆನ್ನದೇ ಬಿಂಬಮೇ
    ಮುಳಿಗುಂ ‘ನೈಜತೆ ತೋರ್ಪದಂತೆ ನಿನಗುಂ ನಿನ್ನಿರ್ಕೆಯಯ್ ಹಾ ವಿಧಿs’

    ಇಳೆಯ ಸೌಖ್ಯದ ವ್ಯವಹಾರದಲ್ಲಿ ಬೇಕಾದಷ್ಟು ಕಪಟ ವೇಷಗಳನ್ನು ಹಾಕಿ… ಹಾಕಿ… ಆರ್ಥಿಕ ಸಂವೃದ್ಧಿಯನ್ನು ಹೋದಿದವನೊನಬ್ಬನಿಗೆ… ಕನ್ನಡಿಯಲ್ಲು ತನ್ನಯ ನೈಜತೆ ಕಾಣದೆ ಕಪಟತೆಯೇ ಕಂಡು, ಅಯ್ಯೋ ನಿನ್ನ ನೈಜತೆ ನಿನಗೂ ಕಾಣದೆ ಹೋಯಿತೆ ಎಂದು ತನ್ನ ಪ್ರತಿಬಿಂಬವೆ ಕೋಪಗೊಂಡಿದೆ

    • ಇದೇನು ಮೊದಲಪಾದವು ಮಹಾಸ್ರಗ್ಧರಾ, ಉಳಿದವು ಮತ್ತೇಭ!

      • ಶಾರ್ದೂಲವಿಕ್ರೀಡಿತ ಸ್ರಗ್ಧರೆಗಳ ಉಪಜಾತಿಯೊಂದುಂಟು ಆದರೆ ಅದರಲ್ಲಿ ವೃತ್ತಗಳನ್ನು ೨+೨ ರಂತೆ ಹಂಚಿದ್ದಾರೆ.

        • ಹಾಗೊಂದು ಉಪಜಾತಿಪ್ರಕಾರವನ್ನೇನೂ ಲಾಕ್ಷಣಿಕರು ಹೇಳಿಲ್ಲ; ಕೇವಲ ಕೆಲವೆಡೆ ಮಾತ್ರ ಇಂಥ ಯಾದೃಚ್ಛಿಕಮಿಶ್ರಣಗಳುಂಟು. ಉದಾಹರಣೆಗೆ ಹೇಳುವುದಾದರೆ ಶ್ರೀಮಧ್ವಾಚಾರ್ಯರು ತಮ್ಮ ನಖಸ್ತುತಿಯಲ್ಲಿ ಈ ತೆರನಾದ ವಿನೂತನಪ್ರಯೋಗವನ್ನು ಮಾಡಿದ್ದಾರೆ. ಅಲ್ಲಿ ಈ ಬಗೆಯ ಮಿಶ್ರಣಕ್ಕೆ ಔಚಿತ್ಯವನ್ನು ಕಲ್ಪಿಸಬಹುದು. ಆದರೆ ಇಲ್ಲಿ ಅಂಥ ವಿಶೇಷಸಂಗತಿಯೇನೂ ಕಾಣುತ್ತಿಲ್ಲ ಈ ಪರಿಯ ರ್ನಿವಿಶಿಷ್ಟಪ್ರಯೋಗವನ್ನು ಅಜ್ಞಾತಕವಿಯೊರ್ವನ ಶೀರಾಮಕರ್ಣಾಮೄತದಲ್ಲಿಯೂ ನೋಡಬಹುದು.

          • ಗಣೇಶ್ ಸರ್, ಪ್ರಸಾದು, ಜೀವೆಂ,
            ಈ ಆಭಾಸವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಮತ್ತು ಇಂತಹ ಪ್ರಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

            ಆಶ್ಚರ್ಯ!!!, ನಾನು ಮಹಾಸ್ರಗ್ಧರೆಯಲ್ಲೆ ಬರೆಯುತ್ತಿದ್ದೇನೆ(ಬರೆದಿದ್ದೆ) ಎಂಬ ಭ್ರಮೆಯಲ್ಲಿದ್ದೆ, ಮೊದಲನೆಯ ಪಾದವಾದಮೇಲೆ ಮತ್ತೇಭದ ಹಾವಳಿಯನ್ನು ಗುರುತಿಸಲಾಗದಂತಹ ಮಂಕು ಅದು ಹೇಗೆ ಆವರಿಸಿತು ಎಂಬುದು ತಿಳಿಯಲಿಲ್ಲ… 🙂
            ಪದ್ಯವನ್ನು ಇನ್ನೊಮ್ಮೆ ಓದಿಕೊಳ್ಳಬೇಕಿತ್ತು ಪೋಸ್ಟ್ ಮಾಡುವುದಕ್ಕೆ ಮೊದಲು… ಈಗ ಹೇಗಿದ್ದರೂ ಮೂರು ಪಾದಗಳನ್ನು ಮತ್ತೇಭವೇ ಆಕ್ರಮಿಸಿಬಿಟ್ಟಿರುವುದರಿಂದ ಮೊದಲನೆಯದನ್ನು ಮತ್ತೇಭ ಮಾಡುವುದೇ ಒಳಿತು ಎಂದು ಸವರಿಸಿದ್ದೇನೆ 🙂

            ಇಳೆಯೊಳ್ ಕೃತ್ರಿಮವೇಷದಿಂದೆ ಮೆರೆದೆಂ ಬಣ್ಣಂಗಳಂ ಪೊರ್ದು ಕೆಂ-
            ಬಿಳಿ ವಕ್ತ್ರಕ್ಕೆನೆ ತೀಡಿ ಛದ್ಮಮೆಸಗಲ್ ನಾನಾರ್ಥಸಂವೃದ್ಧಿಯಂ
            ಗಳಿಸಿರ್ಪೆಂ ಗಡ, ದರ್ಪಣಕ್ಕೆ ಮೊಗಮೊಡ್ಡಲ್ಕೆನ್ನದೇ ಬಿಂಬಮೇ
            ಮುಳಿಗುಂ ‘ನೈಜತೆ ತೋರ್ಪದಂತೆ ನಿನಗುಂ ನಿನ್ನಿರ್ಕೆಯಯ್ ಹಾ ವಿಧಿs’

          • ಪ್ರಿಯ ಸೋಮಾ! ಪಿರಿದಪ್ಪ ಮಾಲಿಕೆಯವಳ್
            ಮತ್ತೇಭಕಂ ಬೆರ್ಚಿಯುಂ 🙂
            (ಪಿರಿದಪ್ಪಮಾಲಿಕೆಯವಳ್ = ಮಹಾಸ್ರಗ್ಧರೆ)
            ಜಯಮಾಯ್ತಯ್ ನಿನಗಂ ಕವಿತ್ವಕಲೆಗಂ ತ್ವತ್ಪದ್ಯದೀ ಚೆಲ್ವಿನಿಂ||

          • DhanyavAda Sir

          • ಸೋಮ – ಭ್ರಮೆಯಿಂದಾದ ವ್ಯತ್ಯಾಸಕ್ಕೆ ಸಾರ್ಥಕ್ಯ ತಂದುಕೊಡಲು, ಪಾಪ ಗಣೇಶರು ಎಷ್ಟೆಲ್ಲಾ ಕಷ್ಟ ಪಡಬೇಕಾಯಿತು. ಮಧ್ವಾಚಾರ್ಯರಿಂದ ಹಿಡಿದು ಅಜ್ಞಾತ ಕವಿಗಳ ವರೆಗಿನ ಕಾವ್ಯಗಳನ್ನೆಲ್ಲಾ ಜಾಲಾಡಿ ಪೂರ್ವಪ್ರಯೋಗ ತೋರಿಸಬೇಕಾಯಿತು.
            ಆವಾಗಾವಾಗ, ಬೇಕೆಂದೇ, ಹೀಗೇನಾದರೂ ಮಾಡುತ್ತಿದ್ದರೆ, ಇದೇ ರೀತಿ ಸ್ವಾರಸ್ಯಕಾರಿಯದ ಮಾಹಿತಿಗಳು ಹೊರಬೀಳುವುದರಲ್ಲಿ ಸಂಶಯವಿಲ್ಲ.
            😀

          • ರಾಮ್, ಅದೇ ನಾನೂ ಅನ್ಕೊತಿದ್ದೆ 😉 😀

    • ಸೋಮಣ್ಣಂ ಸೊಗದಿಂದೆ ಪೇಳ್ದೊಡದರಿಂ ಸರ್ವರ್ಗೆ ಸಂತೋಷಮೈ!!

  14. ಸಹಪದ್ಯಪಾನಿಗಳೆಲ್ಲ ಸೇರಿ ಹೆಚ್ಚಿನ ಸಾಧ್ಯತೆಗಳನ್ನೆಲ್ಲ ಸೂರೆಮಾಡಿ ನನ್ನಂಥವನಿಗೆ
    ನವಕಲ್ಪನೆಗಾಗಿ ಕಣ್ಣು ಕಣ್ಣು ಬಿಡಿಸುತ್ತಿರುವಾಗ ನನ್ನದೀ ಪುಟ್ಟ ಪ್ರಯತ್ನ:

    ಕಣ್ಣ ಕೊಳಂಗಳೊಳೆನಿತೋ
    ಬಣ್ಣಂಗಳ್ ಭಾವುಕರ್ಗೆ ಧ್ವನಿಸುತ್ತಿರ್ದುಂ|
    ಕಣ್ಣಿಗೆ ಮಾತ್ರಂ ಕಾಂಬೀ
    ಬಣ್ಣಂಗಳ ಬಿಣ್ಪದೇಕೊ? ಬರಿಬೆಡಗೇಕೋ?

    • ಸುಂದರವಾದ ಪದ್ಯ. ಇದಕ್ಕೆ ಉತ್ತರವಾಗಿ ದೊಡ್ಡ ಪದ್ಯವನ್ನೇ ಬರೆಯಬೇಕಾಯಿತು [ಕೆಳಗೆ ನೋಡುವುದು] 🙂

    • ಕಣ್ಣೊಳ್ ಭಾವಂಗಾಣುತೆ
      ಬಣ್ಣಿಸಲೀ ಪದ್ಯಮಾಯ್ತು ವರ್ಣಮಯಂ ವಿಲ್ |

      • ಮೆಚ್ಚುಗೆಗಾಗಿ ಧನ್ಯವಾದ. ರಾಮಚಂದ್ರನ ಪದ್ಯಮಯವ್ಯಾಖ್ಯೆಯೂ ಚೆನ್ನಾಗಿದೆ.

  15. ಕವಿ ತಾಂ ತೋರಿಪನಂತರಂಗಭವಮಂ ಶಬ್ದಾರ್ಥಛಂದಂಗಳೊಳ್
    ಸವಿಸಂಗೀತದ ರಾಗ, ತಾಳ, ಸುರಗಳ್ ಭಾವಕ್ಕು ಸಂವಾಹಕರ್
    ನವಲಾವಣ್ಯದ ಚಿತ್ರ ಶಿಲ್ಪ ತೆರೆಯಲ್ ಸೌಂದರ್ಯದಂತಃಪುರಂ
    ಛವಿಯಿಂ ಮೌನದೆ ತೋರೆ ಭವ್ಯ ನಟನಂ ವರ್ಣಂಗಳಾಭೂಷಣಂ

    • ಇದು ಮತ್ತೇಭದ ನರ್ತನಂ ಕವಿಮನಚ್ಛಾಯಾಮಯಂ ರಂಗದೊಳ್

    • ಪದ್ಯ ಚೆನ್ನಾಗಿದೆ. ಈ ಕೆಲವು ಸವರಣೆಗಳಿಂದ ಮತ್ತಷ್ಟು ಚೆನ್ನಾದೀತು:
      …………………………………………..ಶಬ್ದಾರ್ಥವೃತ್ತಂಗಳೊಳ್
      ……….ರಾಗ-ತಾಲ-ಲಯಗಳ್ ಭಾವಕ್ಕೆ…………………….
      ………………..ಚಿತ್ರಶಿಲ್ಪಮೆಸೆಯಲ್………………………..
      ………………………………………………………………..

  16. ಬಣ್ಣsದs ಮೊಗದೊsಳುs ಕಣ್ಣಿಂದುs ಹಿರಿದಾಯ್ತೆs
    ಹಣ್ಣಾದs ಗಡ್ಡs ಮೊರವಾಯ್ತೆs – ತನುಮsನs
    ಹೆಣ್ಣs ಕರ್ಷಣಕೆs ಬಲಿಯಾಯ್ತೆs

    • ಭೃಂಗಿಯ ನಾಟ್ಯದ ಪಾಂಗಿನಿಂದಾವಗಂ
      ರಿಂಗಣಿಸಲ್ಕೆ ಕಿವಿಗಳೊಳ್| ತ್ರಿಪದಿಯ
      ಗಂಗಾಪ್ರವಾಹಂ ಪರಿದಿರ್ಕುಂ|

      • ಮೊರವಾಗೆ ಗಡ್ಡವು, ಹಿರಿದಾದ ಮೊಗವೆಲ್ಲ|
        ಮೆರೆಯದೆ ಕಸದ ರೂಪವ – ತಾಳುತ್ತ ?
        ಮರಿಯಾದೆ (ಮರ್ಯಾದೆ) ಕಣ್ಣಿಗೇನಾಯ್ತು??

  17. ಪೊಸಪರಿಯ ಜೀವಿಯಂ ಸೃಜಿಸುತುಂ ಲೋಕಮೆಂಬೀ ನೈಜರಂಗಕರ್ಪಿಸಲಾಣ್ಮತಾಂ
    ಕಸುವಿಂದಲಾಡಿಸುತ್ತಿರ್ಪನೇಂ ನಾಟಕವ, ಪರಿಕಿಸಲ್ ನವಸೃಷ್ಠಿಯಳಿವುಳಿವನುಂ|
    ಪಸುರಿಂಬಿನೆಳೆದಳಿರ್,ಪೆಂಪೆಸೆವಲರ್ವರ್ಣ, ಕಣ್ಸೆಳೆವ ಪಣ್ಪ್ಂಕ್ತಿ, ತಂದೈದಿರಲ್-
    ಜಸಮನಾತಂ ಪೇರ್ದನೇಂ ಪಟ್ಟೆ, ,ರಂಗುಗಳ ನವನರಗೆ, ವಿಜಯವಂ ಮರಳಿ ಪೊಂದಲ್|

    ಕರ್ಮಚಾರಿಯೇ ತಾನಾಗಿ ಜಾಣ್ಮೆಯಿಂದಂ
    ಕಂಡ ಸಂತೃಪ್ತಿಯಂ ಸಕಲ ಸೃಷ್ಟಿಯಿಂದಂ
    ತೋರ್ದನಾದರ್ಶ ಮಾರ್ಗಮಂ ದೇವನೆಂದುಂ
    ನಿಷ್ಠೆ ಮೇಣಾಸೆಯಿರ್ದೆಡೆ ಜಯಮದೆಂದುಂ

    (ಸೃಷ್ಟಿಕರ್ತನು ಹೊಸಬಗೆಯ ಜೀವಿಯೊಂದನ್ನು ಲೋಕಕ್ಕೆ ಅರ್ಪಿಸಲು ಕಾರ್ಯಪ್ರವೃತ್ತನಾಗಿದ್ದಾನೆ. ಅದಕ್ಕಾಗಿ ನಾಟಕವನ್ನು ಆಡಿಸಿ(ಮತ್ತೆ ಮತ್ತೆ) ಅದರ ಉಳಿವು-ಅಳಿವನ್ನು ಪರೀಕ್ಷಿಸುತ್ತಿದ್ದಾನೆ. ಹಿಂದೆ ಬಣ್ಣ ಬಣ್ಣದ ಹೂ,ಹಣ್ಣಿನ ಸೃಷ್ಟಿಯಿಂದ ಗಳಿಸಿದ ಕೀರ್ತಿಯನ್ನು ಹಿಂಪಡೆಯುವತ್ತ ಆತನ ಅವಿರತ ಶ್ರಮವಿದೆ)

    • ನಿಮ್ಮ (ಪ್ರಾಯಶಃ) ಮೊದಲ ಸೀಸಪದ್ಯಕ್ಕಾಗಿ ಅಭಿನಂದನೆಗಳು. ಆದರೆ ಸೀಸಭಾಗದ ಮೂರು-ನಾಲ್ಕನೆಯ ಪಾದಗಳಲ್ಲಿಯೂ ಗೀತಭಾಗದ ಕಡೆಯ ಸಾಲಿನಲ್ಲಿಯೂ ಛಂದೋದೋಷವಾಗಿದೆ; ಸವರಿಸಿಕೊಳ್ಳಿರಿ.

      • ಧನ್ಯವಾದಗಳು.ತಮ್ಮ ಊಹೆಯಂತೆ ಇದು ನನ್ನ ಮೊದಲ ಸೀಸಪದ್ಯವೂ ಹೌದು . ವ್ಯಾಕರಣ ದೋಷಗಳನ್ನು ಸರಿಪಡಿಸಿಕೊಂಡಿದ್ದೇನೆ .

    • ನಿಮ್ಮ-ನಿಮ್ಮಂಥವರೆಲ್ಲರ ಕ್ಷಮೆಕೋರಿ…
      No, God cannot earn back that fame. Here is a parallel: Decades ago Smt. Jaya Bachchan remarked thus about her hubby – The industry created a monster and now it can’t handle him.
      ಸೃಷ್ಟಿಸಾಧುವದಿತ್ತು ದೇವಂಗೆ ಫಲಪುಷ್ಪ-
      ವಷ್ಟಕ್ಕೆ ನಿಲ್ಲಿಸದೆಲಿರ್ದನೇಕೋ|
      ಚೇಷ್ಟವಾತನದು ಕೈಮೀರಿತೈ ತನಗಿಂತೆ
      ಜ್ಯೇಷ್ಟತರ ಪೆಣ್ಣನ್ನು ಸೃಜಿಸಿ ದಣಿಯಲ್||

  18. ರುಚಿರಾ||
    ಪ್ರಸಂಗಕಂ ತುಸು ತಡೆಯುತ್ತೆ ಬಂದವ-(ದೂರದ ಸಾಲುಗಳಲ್ಲಿ ಕುಳಿತವರಿಗೆ)
    ರ್ಗಸಾಧ್ಯಮೆನ್ನುತೆ ಮುಖಭಾವ ಕಾಣಲೆಂ-|
    ದಸಂಖ್ಯವರ್ಣಗಳನು ಪೂಸಿಕೊಂಡಿರಲ್
    ನಸೀಬ ಮುಂದಿಹರದದೇನದೆಂಬೆಯೋ||

    • ಪ್ರಸಾದರೇ, ಕವಿತೆ ಸುಬೋಧಮಾದುದಯ್
      ಪ್ರಸಂಗಮಂ ಕವನಿಸಿಮ್ ಅಂತೆಯೇ ಪುನಃ|
      ಪ್ರಸಾದರಮ್ಯಮೆನೆ ಪುರಾಣ(ಹಳೆಯ)ಗನ್ನಡ-
      ಪ್ರಸಾರದಿಂ; ರಚನೆ ಕರಂ ಸುಶೋಭಿಕುಂ||

  19. A verse in Sanskrit as their number is very few:

    आहार्यवैभवभवे प्रभविष्णुमेनं
    वर्णाढ्यलोकलटभायितरूपरङ्गम्।
    निर्वर्ण्य सात्त्विकसुखाभिनयप्रशान्तिं
    सीतामिवात्र विचिनोम्यसुरेशपुर्याम्॥

    • ದಯವಿಟ್ಟು ಅರ್ಥವನ್ನೂ ತಿಳಿಸುವಿರಾ? 🙂

      • ಆಹಾರ್ಯವೈಭವದೊಳೆಂತುಟೊ ಶೋಭಿಸಿರ್ಪೀ
        ದೇಹಾಂಗರಾಗಗಳ ಮಾರ್ಜನಮನ್ನು ಗೈದಾಂ|
        ಆ ಹುಣ್ಡ(ರಾಕ್ಷಸ)ಬಂಧಿಯಳ(ಸೀತೆ) ಸಾಜತೆಯೊಳ್ ಗಡಿಂದಾಂ
        ಮೋಹಂಬಡಲ್ ನಿರುಕಿಸಲ್ ತರಮಲ್ತೆಲೇನೈ||

      • ನನ್ನ ಪದ್ಯದ ಕೇವಲ ಛಾಯಾನುವಾದ ಹೀಗಿದೆ:

        ಬರಿಯ ಬಣ್ಣದ ಬೆಡಗಿನೊಳ್ ಜನಿಸಿದೀ ವೇಷ-
        ಕರಿವೆಂತು ಸತ್ತ್ವದೊಂದಾತ್ಮತೇಜಂ?
        ಅರಸಿರ್ಪೆನಯ್ಯೊ ನಾನೀ ಬಿನ್ನಣದೆ ಬಳಲಿ
        ಧರಣಿಜೆಯನಂತೆವೋಲ್ ಲಂಕೆಯಲ್ಲಿ!!

  20. ರಂಗಬಳೆದವಗುಂಟೆ ರಂಗಾದ ಘನಬದುಕು?
    ಹಂಗುಟೆಂ ದೃಶ್ಯಮಂ ಸವಿದಗಿದರ?
    ಅಂಗಳದ ತುಂಬೆಲ್ಲ ತುಂಬಿರಲು ತಂಬೆಳಕು
    ತಿಂಗಳನ ಕರಿಕಲೆಯ ಕಾಂಬರುಂಟೆ?

  21. Neither is this kathakkaLi, nor is the location India…
    ಪೃಧ್ವೀ|| ಕಥಕ್ಕಳಿಯುಮಲ್ಲ ಮೇಣ್, ಭರತದೇಶಮುಂ ದೇಶಮುಂ.
    ಕಥಾನಕವು ಯೇಸುವಿನ್ ಗಡದು ಚಿತ್ರದೊಳ್ ಕಾಣೆಯೇಂ
    ಪೃಥಕ್ ಕದಪಿಗೊಂದು ಮೇಣಿನೆರಡೇಟನುಂ ಕೊಂಡು ತಾಂ
    (ಕೆನ್ನೆಯು ಊದಿಕೊಂಡಿದ್ದರೂ) ಪೃಥಾಶಮದಿನಿರ್ದಿಹನ್, ಮೊಗವು ಪಚ್ಚೆಯೈ! ರಕ್ತಮೇಂ?

    • ಚಮತ್ಕೃತಿಯದೇಂ ಸೊಗಂ! ದಿಟಮಿದೀ ಕವಿತ್ವಂ ವರಂ
      ಸಮಗ್ರಪದಶುದ್ಧಿಯೊಂದಿರೆ ಮನೋಜ್ಞಮಿನ್ನುಂ ಗಡಾ!

      • ಭಾಷೆಯೊಳಗಿನ್ನುಮಾನ್ ಗಡಗಡಾ ಎಂದಿರ್ಪೆ-
        ನಾಷಾಢಬರ್ಪನ್ನೆಗಂ ತಡೆ ಗಡಾ|

    • ಪ್ರಸಾದ್ ಸರ್, ಈ ರೀತಿ ಕಲ್ಪನೆ ನಿಮಗೆ ಮಾತ್ರ ಬರಲುಸಾಧ್ಯ.

      ತಥಾಗತದೆ ಕಂಡುದಾ ಬಳಿಯ ಗೌರವರ್ಣಂ ಗಡಾ !
      ಯಥೋಚಿತದೊಳಾತಗಂ ಬಳಿಕ ಸಂದ”bandagu”ವೇಂ!?

  22. ತಡವಾಗಿ ಬಂದ ನನ್ನೀ ಹಗುರವಾದ ಪದ್ಯಕ್ಕೆ ಕ್ಷಮೆ ಇರಲಿ…

    ಮೆತ್ತಿರೆ ಬಣ್ಣವನೊರ್ಮೆಲೆ
    ಕತ್ತೆತ್ತುತೆ ನೋಡೆ ಕನ್ನಡಿಯೊಳವ ಮನದೊಳ್
    ಥತ್ತಕಧಿಮಿಯೆನ್ನುತಿರ-
    ಲ್ಕತ್ತಿತ್ತಲುಕಣ್ಣನಾಡಿಸಿರ್ಪುದೆ ಚಂದಂ

    • ಚೆನ್ನಾಗಿದೆ. ಕಲ್ಪನೆಯಲ್ಲಿ ಮೊದಲು ಮೂಡಿದ್ದು ಮೂರನೆಯ ಪಾದವಲ್ಲವೆ?

  23. (ಹಾಗೆ ಸುಮ್ಮನೆ 🙂 )

    ಮಿತವಚನ- ಭೋಜನದೆ ಸುಖಖಚಿತವೆಂಬುದಂ
    ಹಿತವಾಗಿ ಸಾರೆ ಕೆಂಬಣ್ಣ ತುಟಿಯು!
    ಜಿತದೃಷ್ಠಿವೈಶಾಲ್ಯದಿಂ! ಪಸರಿತೇಂ ಪಸುರು,
    ಲತೆಯವೊಲ್ ,ಪಡೆದ ಸಂತೃಪ್ತ ಬಾಳಿಂ

    (ತಿನಿಸಿಗೆ,ಮಾತಿಗೆ, ತುಟಿಯ ಕೆಂಬಣ್ಣವು(ಅಪಾಯದ) ಮಿತಿಯನ್ನು ಹೇಳಿದರೆ,. ದೃಷ್ಟಿಯು ವಿಶಾಲವಾಗಲು (ದೊಡ್ಡ,ತೀಡಿದ ಕಣ್ಣು ..ವಿಶಾಲ ಬುದ್ದಿಯನ್ನು ಹೊಂದಿದವ!),ಜೀವನದಲ್ಲಿ ಸಂತೃಪ್ತಿಯನ್ನು ಪಡೆದನು(ಜೀವನವು ಹಸುರಾಯಿತು-ಹಸಿರು ಬಣ್ಣ ಮೂಡಿತು!)

  24. ಬಿಳಿದಳದ ಕುಸುಮದೊಳಗಡಗಿರುವ ಕೇಸರವ
    ನಳಿವಿಂಡುವರಸುತಿಹ ಸೋಜಿಗವೊ ಮೇಣ್
    ತಿಳಕವಿಡದಿಹ ಬರಿಯ ನೊಸಳದುವೆ ತೋರಿದುದು
    ಪೊಳೆಪಿಲ್ಲದಿಹ ಕರಿಯ ಸೊಡರವೋಲ್ ಕಾಣ್ ।।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)