May 042015
 

ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

  117 Responses to “ಪದ್ಯಸಪ್ತಾಹ ೧೪೯: ಸಮಸ್ಯಾಪೂರಣ”

  1. भिक्षार्थमभ्यागतदेवताना-
    मजस्य वैकुण्ठपतेर्हरस्य |
    माता भवामीति तदात्रिपत्नी (तदा + अत्रिपत्नी = अनसूया)
    दुकूलपातेन सती ननन्द ||

    pUraNa based on purANa

    • ಪೂರಣವು ಸಲೆಸೊಗಸಾಗಿದೆ.ನಸೂಯಾದೇವಿಯ ಪ್ರಸ್ತಾವದ ಕಾರಣ “ಸತೀ” ಎಂಬ ಸಮಸ್ಯಾವಾಕ್ಯದ ಪದಕ್ಕೆ ಸರ್ವಸಾರ್ಥಕ್ಯವೂ ಸಂದಿದೆ. ಮೊದಲ ಸಾಲಿನಲ್ಲಿ “ಅಭ್ಯಾಗತ” ಎಂದು ಟಂಕಿಸಬೇಕು. ಅದು ಅಧ್ಯಾಗತ ಆಗಿದೆ.

      • ದೋಷವನ್ನು ಸರಿಪಡಿಸಿದ್ದೇನೆ . ಧನ್ಯವಾದಗಳು 🙂

    • Good one Raghav.

  2. ದೂರಕ್ಕೆ ಸಾರ್ದುಂ ತುಸು ಪೊಳ್ತು ಸಂದೊಡಂ,
    ಮೀರಿರ್ಪುದೇ, ಕಂದನ ದಾಹಮೆನ್ನುತುಂ
    ಸಾರಲ್ಕೆ ಪಾಲ್ನೀಡೆ ತೊಡರ್ವ ಕಂದನಿಂ
    ಜಾರಲ್ ಸೆರಂಗಾಗಳೆ, ಸಾಧ್ವಿ ಹರ್ಷಿಪಳ್

  3. ತಾರುಣ್ಯಮೆಂಬಾ ಸೊಗಮಾದ ಕಾಂತಿಯಂ
    ಬೀರುತ್ತಲಿರ್ಪಾಗಳೆ, ಕಾಂತೆಸಂಧ್ಯೆತಾಂ
    ಸೂರಂತೆಯೇವೋಲ್ ಹಿತಮೀಯೆ, ರಾತ್ರಿಯೀ
    ಜಾರಲ್ ಸೆರಂಗಾಗಳೆ, ಸಾಧ್ವಿ ಹರ್ಷಿಪಳ್

    (ಅನ್ವಯ-ತಾಂ ತಾರುಣ್ಯಮೆಂಬಾ ಸೊಗಮಾದ ಕಾಂತಿಯಂ ಬೀರುತ್ತಲಿರ್ಪಾಗಳೆ,ಸೂರಂತೆಯೇ ವೋಲ್ ಹಿತಮೀಯೆ, ರಾತ್ರಿಯೀ ಸೆರಂಗು ಜಾರಲ್ ಆಗಳೆ ,ಸಾಧ್ವಿ ಕಾಂತೆ, ಸಂಧ್ಯೆ ಹರ್ಷಿಪಳ್)

    • ಮೊದಲಪೂರಣವು ತನ್ನ ಕಲ್ಪನೆ ಮತ್ತು ರಚನಾಸ್ಪಷ್ಟತೆಗಳ ಕಾರಣ ಸೊಗಸಾಗಿದೆ. ಆದರೂ ಅಲ್ಲಲ್ಲಿ ಶೈಥಿಲ್ಯ ತೋರಿದೆ. ಈರಡನೆಯ ಪದ್ಯದಲ್ಲಿ ಕಲ್ಪನೆಯ ಸ್ಪಷ್ಟತೆ ಇಲ್ಲ. ಪದಪದ್ಧತಿಯೂ ನಯವಾಗಬೇಕು. ಇಲ್ಲಿರುವ ಹಲಕೆಲವು ವ್ಯಾಕರಣಸ್ಖಾಲಿತ್ಯಗಳನ್ನು ಮುಖತಃ ತಿಳಿಸಿ ತಿದ್ದುವೆ.

      • ಆಗಬಹುದು ಸರ್,ಧನ್ಯವಾದಗಳು.

        • ಮೊದಲನೆಯ ಪದ್ಯವನ್ನು ತಿದ್ದಿಕೊಂಡಿದ್ದೇನೆ ಮತ್ತು ಎರಡನೆಯದನ್ನು ಬದಲಾಯಿಸಿದ್ದೇನೆ, ಧನ್ಯವಾದಗಳು 🙂

  4. ನೀರೇ ಇದೋ ಕೊಳ್ ಪೊಸವಟ್ಟೆಯೆನ್ನುತುಂ
    ನೀರಂ ತೊಡುತ್ತುಂ ಪುಸಿಯಿಂದೆ ಬೀಗಲಾ
    ಚೀರಂ ಪೆಗಲ್ಗಟ್ಟಿಯನಪ್ಪುಗಯ್ಯದೇ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    • ಕಲ್ಪನೆಯೂ ಪೂರಣಶೈಲಿಯೂ ಸೊಗಸಾಗಿವೆ. ಅಭಿನಂದನೆಗಳು. ಪ್ರಿಯ ಸೋಮಾ! ಇದೇನು ಸ್ವಾನುಭವವೋ? 🙂

  5. ಕ್ರೂರಂ ಸಭಾಮಧ್ಯದೆ ಗೈದ ಕೃತ್ಯದಿಂ
    ಕೋರಲ್ ಸದಾಕಾವನೆ ಕಾಯೊ ಎನ್ನುತುಂ|
    ಪೇರೊಲ್ಮೆಯಿಂ ಕೃಷ್ಣನು ನೀಡೆ ಚೀರಮಂ
    ಜಾರಲ್ ಸೆರಂಗಾಗಳೆ, ಸಾಧ್ವಿ ಹರ್ಷಿಪಳ್||
    (ಜಾರಲ್ ಸೆರಂಗಾಗಳೆ ಪೇರೊಲ್ಮೆಯಿಂ ಕೃಷ್ಣನು ನೀಡೆ ಚೀರಮಂ ಸಾಧ್ವಿ ಹರ್ಷಿಪಳ್)
    ಸದಾಕಾವನೆ – ಇದು ಅರಿಸಮಾಸವೆ?

    • ಪೂರಣವೂ ರಚನಾವೈಶದ್ಯವೂ ಸೊಗಸಾಗಿವೆ. ಅಭಿನಂದನೆಗಳು. “ಸದಾ ಕಾವನೆ” ಎಂಬುದು ಅರಿಸಮಾಸವೇನಲ್ಲ. ಏಕೆಂದರೆ ಅಲ್ಲಿ ಸಮಾಸವೇ ಇಲ್ಲ:-)

  6. ಊರೊಳ್ ದಲಾಗಿರ್ಪುದದೃಷ್ಟಪೂರ್ವಮೀ
    ಚೀರ೦ ಸುಶೋಭ೦, ತನಗ೦ ಪ್ರಿಯ೦ ತರಲ್
    ಮೀರಿರ್ದ ನುಣ್ಪಿ೦ದರರೇ! ವೆರಲ್ಗಳೊಳ್
    ಜಾರಲ್ ಸೆರ೦ಗಾಗಳೆ ಸಾಧ್ವಿ ಹರ್ಷಿಪಳ್

    ಗ೦ಡ ತ೦ದಿದ್ದ ಸೀರೆಯನ್ನು ಹೆಮ್ಮೆಯಿ೦ದ ನೋಡುತ್ತಿದ್ದಾಗ ಬಲು ನುಣ್ಪಾದ ಅದರ ಸೆರಗು ಕೈಬೆರಳುಗಳಲ್ಲಿ ಜಾರುತ್ತಿರಲು, ಸಾಧ್ವಿ ಬಲು ಹರ್ಷಪಟ್ಟಳು 🙂

    • ಕಲ್ಪನೆ ತುಂಬ ಅಭಿರಾಮವೂ ಅಭಿನವವೂ ಆಗಿದೆ. ಅಭಿನಂದನೆಗಳು. ಆದರೆ ಊರೊಳ್ಗೆ ಎಂಬ ರೂಪವು ಅಯುಕ್ತ. ಊರೊಳ್ ಅಥವಾ ಊರೊಳಗಂ….ಇತ್ಯಾದಿ ಯುಕ್ತ. ಅಂತೆಯೇ ಎರಡನೆಯ ಪಾದದಲ್ಲಿ ಛಂದಸ್ಸು ಕೆಟ್ಟಿದೆ (“……….ತನಗಂ ಪ್ರಿಯಂ ತರಲ್” ಎಂದರೆ ಸರಿಯಾದೀತು). ದಯಮಾಡಿ ಸವರಿಸಿಕೊಳ್ಳಿರಿ.

    • ಆಹಾ! ತುಂಬಾ ಸುಂದರ ಕಲ್ಪನೆ ನೀಲಕಂಠ. ಸ್ವಾನುಭವದಂತೆ ಭಾಸವಾಯಿತು. ಧನ್ಯವಾದಗಳು.

      • ಧನ್ಯವಾದಗಳು. ತಮಗೆ ಭಾಸವಾಗಬೇಕು ಎ೦ದಿಲ್ಲ. ಅನುಭವವೇ ಆಗಿರುತ್ತದೆ.. 🙂

        • ಪತಿಯಿತ್ತ ಸೀರೆಯೊಪ್ಪುವ
          ಸತಿನಾಂ ಸಾದ್ವಿ ದಿಟ, ಮೇಣ್ ಮಣಿಯಿಸುದಸಾಧ್ಯಂ !!

    • ನೂತ್ನ! ಬೆರಳ್ಗೆ ಕೊರಳ್ (ಸೆರಗು) 😉

  7. ಮೊನ್ನೆಯ ಆಶುಕವಿತಾಗೋಷ್ಠಿಯಲ್ಲಿ ಮಾಡಿದ ನನ್ನ ಪೂರಣವಿಂತಿದೆ:

    ಸಾರಲ್ ಜಗಚ್ಚಕ್ಷು ನಭೋಂsತರಾಳದೊಳ್
    ತೂರಲ್ ನಿಶಾನಾಶಕತಿಗ್ಮರಶ್ಮಿಯಂ|
    ನೀರೇಜಿನೀಯೋಷೆ ತುಷಾರಮಾತ್ರದೀ
    ಜಾರಲ್ ಸೆರಂಗಾಗಳೇ ಸಾಧ್ವಿ ಹರ್ಷಿಪಳ್||

    {ತುಷಾರಮಾತ್ರದೀ ಸೆರಂಗು ಜಾರಲ್ ನೀರೇಜಿನೀಯೋಷೆ (ಕಮಲವೆಂಬ ಹೆಣ್ಣು)
    ಸಾಧ್ವಿ ಹರ್ಷಿಪಳ್ ಎಂದು ಅನ್ವಯ. ಇದು ಪ್ರಕೃತಿಯ ಒಂದು ಆತ್ಮೀಯಚಿತ್ರ. ಉದಯರವಿಯು ಮೂಡಿದಾಗ ಕತ್ತಲೆ ಕಳೆದು, ಹಿಮದ (ತುಷಾರ) ತೆರೆಯೆಂಬ ಸೆರಗು ಜಾರಿದ ಪರಿ ಇಲ್ಲಿದೆ.}

    • ಸರ್, ತು೦ಬ ತು೦ಬ ಹಿಡಿಸಿತು… 🙂

      ಸಾರಸ್ವತ೦ ಲೋಕಮಿದಲ್ತೆ, ಕಾವ್ಯದೀ
      ಸಾರ೦ ಸುಧಾ೦ಶುಪ್ರಭೆಯ೦ತೆ ಚೆಲ್ವಿನಿ೦
      ಬೀರಲ್, ಕುಕಾವ್ಯ೦ಗಳ ಜಾಡ್ಯಮಾತ್ರದೀ
      ಜಾರಲ್ ಸೆರ೦ಗಾಗಳೆ ವಾಣಿ ಹರ್ಷಿಪಳ್

      • ಧನ್ಯವಾದಗಳು. ಆದರೆ ನಿಮ್ಮ ಪದ್ಯದ ಮೂರನೆತ ಸಾಲಿನಲ್ಲಿ ಛಂದಸ್ಸಿನ ’ಸೆರಗು’ ಜಾರಿದೆ. ಸ್ವಲ್ಪ ಸರಿಪಡಿಸಿರಿ:-)

        • ಇಂತಹ (ಮ.ಹಾ.) ಸಲಹೆಯನ್ನು ನೀಡಲಾಗದು. ಇಲ್ಲಿ ’ಸರಿಪಡಿಸುವುದು’ ಎಂದರೆ (ಅಕ್ಷರಗಳನ್ನು~ಸೆರಗನ್ನು) ಇನ್ನೂ ಅಷ್ಟು ಕಡಿತಮಾಡುವುದು!

        • Ohh, corrected sir 🙂

  8. ಊರಿಂದಲೂರ್ಗಂ ಪುಗುವಂದು ತಾಪದೊಳ್,
    ಹೈರಾಣಗೊಂಡುಂ ನಡುವೇರ್ದು,ತೆಕ್ಕೆಯಂ
    ಸೇರಿರ್ದ ಬಾಲಂಗೆನೆ ತಂಪನೀಯೆ,ಮುಂ
    ಜಾರಲ್ಸೆರಂಗಾಗಳೆ ಸಾಧ್ವಿ ಹರ್ಷಿಪಳ್

  9. ತೋರಲ್ಕೆ ಕೃಷ್ಣಂ ಬರಲಿರ್ಪ ಮಾರ್ಗಮಂ
    ಮೀರಲ್ ಕರಂಗಳ್ ವರಸತ್ಯಭಾಮೆಯಾ
    ಸಾರುತ್ತೆ ಶೃಂಗಾರರಸ ಪ್ರತಾಪದಿಂ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    [ಕೃಷ್ಣ ಬರಲಿರುವ ದಾರಿಯನ್ನು ನೋಡಿಯೇ, ಶೃಂಗಾರ ರಸದ ಪ್ರತಾಪದಿಂದ ಸತ್ಯಭಾಮೆಯ ಕರಗಳು ಮೀರಿ, ಸೆರಗು ಜಾರಿದಾಗ ಅವಳು ಹರ್ಷಿಸಿದಳು ಎಂಬ ಭಾವ]

    • ಕೃಷ್ಣನು ಬರುವ ಮಾರ್ಗವನ್ನು(ಮಾರ್ಗಮಂ) ಸತ್ಯಭಾಮೆಗೆ ತೋರಿದ ಆ ’ಯಾರೋ’ ಹದಿನಾರುಸಾವಿರದಲ್ಲಿ ಒಬ್ಬಳು ಎಂದಾದರೆ:
      ಅಪರೂಪಕಿನಿಯನೈದಲು ಗೋಪಿಯಳುಮೆಂತೊ
      ಉಪಚರಿಸದೆಲೆ ತಾನೆ ಗೋಪ್ಯಮಾಗಿ|
      ಉಪಕೃತಿಯ ಸ್ಮರಿಸದೆಲೆ ದೇವಕಾರುಣ್ಯದಂ
      ಕುಪಿಪ ಭಾಮೆಯಳಿಂಗೆ ಸೀಯುವಳೆ ಪೇಳ್||

  10. ಬಾರೆನ್ನುತೆತ್ತುತ್ತಲೆ ಚೆಲ್ವ ಮೋರೆಯಂ
    ಬೀರುತ್ತೆ ಮೋದಂ ಸವಿಮುತ್ತನೊತ್ತುತುಂ
    ಮೀರುತ್ತೆ ಕಾಂತಂ ಬಳಸುತ್ತುಮಪ್ಪಿರಲ್
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    • nEra, diTTa, manOhara 🙂

      • _/\_

      • ಪದ್ಯದಲ್ಲಿ ದುಶ್ಶಾಸನಪ್ರಸಂಗವಿದ್ದಿದ್ದರೆ, ಓದುಗರವರು ’ನೇರ ದಿಟ್ಟ ನಿರಂತರ’ ಎಂದು ಹೇಳುತ್ತಿದ್ದರು 🙂

        • ದುಃಶ್ಯಾಸನ ನಿಮ್ಮ ಕಾಮೆಂಟಿಗಾಗಿ ಪದ್ಯದಲ್ಲಿ ಬರಬೇಕಷ್ಟೆ. ಅವನು ಬಂದರೆ, ಸಾಧ್ವಿ ಹರ್ಷಿಸಲಾರಳು. 🙂

          • ಅದ್ಯಾಕ್ಹಾಗನ್ತೀರಿ? ಸಂಖ್ಯೆ ೫ರಲ್ಲಿನ ನನ್ನ ಪದ್ಯವನ್ನು ನೋಡಿ. ದುಶ್ಶಾಸನನನ್ನೂ ದ್ರೌಪದಿಯ ಹರ್ಷವನ್ನೂ ಚಿತ್ರಿಸಿದ್ದೇನೆ – (ಕೃಷ್ಣ)ಚೋರ ಕೊಟ್ಟ ನಿರಂತರ.

  11. ಕೋರೈಸುತಿಂತಾಂ ಮಳೆ ಬಿಲ್ಲ ಪೊತ್ತಲಂ-
    ಕಾರಂಗೊಳಲ್ ಮೇಘವನುಟ್ಟ ನೀರೆ ಕಾಣ್
    ಪೂರೈಸಲುಂ ಜೀವವ ಜೀರಿ ಸೋರಿರಲ್
    ಜಾರಲ್ ಸೆರಂಗಾಗಳೆ ಸಾದ್ವಿ ಹರ್ಷಿಪಳ್ ।।

    ಕಾಮನಬಿಲ್ಲನ್ನು ಮುಡಿದು ಮೆರೆಯಲು, ಮೋಡದ ಸೀರೆಯುಟ್ಟ ನೀರೆ – ಮಳೆಸುರಿಸುತಾಗ (=ಸೆರಗು ಜಾರಿದಾಗ) ಹರ್ಷಿಸುವಳೇ ?!

    • ಇಲ್ಲಿಯ ಸಾಧ್ವಿ ಅಥವಾ ನೀರೆ ಯಾರು? ಪೂರಣದಲ್ಲಿದು ನನಗೆ ಸ್ಪಷ್ಟವಾಗುತ್ತಿಲ್ಲ.

      • ಆಕೆ ಯಾರಾದರೂ ಪರವಾಯಿಲ್ಲ. ಸಾಧ್ವಿಯಲ್ಲವೆ? ಅಷ್ಟು ಸಾಕು.

        • ಧನ್ಯವಾದಗಳು ಪ್ರಸಾದ್ ಸರ್,
          “ಸಾಧ್ವಿ”ಯ “ಮಹಾಪ್ರಾಣ”ದ ಅರಿವಾಯಿತು !!

          • ಇದೇನೂ ಹೊಸತಲ್ಲವಲ್ಲ. ಲಗಾಯ್ತಿನಿಂದಲೂ ಅದು(ಸ್ತ್ರೀಲಿಂಗ) ಹಾಗೆಯೇ 😉

      • ಗಣೇಶ್ ಸರ್, “ಭುವನ ಸುಂದರಿ”ಯ ಕಲ್ಪನೆಯ ಪದ್ಯ.
        “….. ಮೇಘವನುಟ್ಟ ಭೂಮಿ ಕಾಣ್” ಎಂದರೆ ಸರಿಯಾಗುದೇ ? ದಯವಿಟ್ಟು ಸವರಿಸಿ ಕೊಡಿ.

        • ಇದೀಗ ಸರಿಯಾಯ್ತು:-)
          ಅಲ್ಲದೆ ಪದ್ಯದ ಮೊದಲ ಸಾಲಿನಲ್ಲಿರುವುದು ಪೊತ್ತಲವೋ ಪತ್ತಲವೋ? ನಾನು ಬಲ್ಲಂತೆ ಪತ್ತಲ ಎಂಬ ರೂಪ ಸರಿ. ಪೊತ್ತಲ ಎಂಬುದೂ ಇದ್ದಲ್ಲಿ ಅದೂ ಯುಕ್ತವೇ.

          • ಮಳೆಬಿಲ್ಲ (ಪೊತ್ತು (ಹೊತ್ತು) + ಅಲಂಕಾರಂ =) ಪೊತ್ತಲಂಕಾರಂಗೊಳಲ್ ಮೇಘವನುಟ್ಟು ಭೂಮಿಕಾಣ್

  12. ಜೋರಾಗಿ ಬೀಸಲ್ ಬಿರುಸಾದ ಮಾರುತಂ,
    ತೂರಾಡುತತ್ತಿತ್ತಲಿರುತ್ತೆ ಬಿಳ್ವವೋಲ್,|
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್,
    ಶ್ರೀರಕ್ಷೆಯೀಯಲ್,ಪತಿ ಮತ್ತೆ ಪೊದ್ದಿಸಲ್ ||

    • ’ಪತಿ ಮತ್ತೆ ಪೊದ್ದಿಸಲ್’ ಎಂಬುದು ಎರಡನೆಯ ಪಾದದಲ್ಲಿದ್ದಿತು. ಅದನ್ನು ನಾಲ್ಕನೆಯ ಪಾದಕ್ಕೆ ತಳ್ಳಿರುವಿರಿ:
      ಹೇಳೋಷ್ಟು ಪೇಳ್ವಂ, ಬಡಿದೇಂ ಪ್ರಯೋಜನಂ
      ನೋಡೋಷ್ಟು ನೋಳ್ಪಂ, ಕಡೆಗಣ್ಣ ಮುಚ್ಚುವನ್|
      ತಾಳೋಷ್ಟು ತಾಳ್ವಂ, ಕಡಿಯುತ್ತೆ ದಂತಮನ್
      ತಳ್ಳೋಷ್ಟು ತಳ್ವನ್, ಕಡೆಗೊಮ್ಮೆ ಪೊದ್ದಿಪನ್|| 😀
      (ಪ್ರಾಸವು ಯತ್ಯುತ್ತರಭಾಗದಲ್ಲಿ ಪಾಲಿತವಾಗಿದೆ)
      ಕೊಸರು: ಬಾಳೋಷ್ಟು ಬಾಳ್ವನ್, ಗಡುವಾಗೆ ಸಾಯುವನ್ 😀

      • ತಳ್ಳುತ್ತುಮಿರ್ದುಂ ಪೆಗಲಿಂದೆ ಜಾರುತುಂ
        ಪಳ್ಳಕ್ಕೆ ಬಿಳ್ವಂತಿರೆ ಚೀರದಗ್ರಮಂ ,|
        ಗೊಳ್ಳೆಂದು ಜೋರಾಗಿ ನಗುತ್ತೆ ನಾಯಕಂ,
        ಕುಳ್ಳಿರ್ದು ಪೊದ್ದಾಣಿಸೆ ಸಾಧ್ವಿ ಹರ್ಷಿಪಳ್ || 🙂

  13. ನೂರಾರು ಗ್ರಾಮಂಗಳನೊರ್ಮೆ ಪಾರ್ವತಾಂ
    ಸಾರುತ್ತೆ ತಂದಂ ಬಲು ದೊಡ್ಡ ಮೊತ್ತಮಂ
    ತೋರಿರ್ದ ಕಷ್ಟಂ ಗಳಿಗಾದ ಗಂಟಿನಿಂ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    (ಬಡಬ್ರಾಹ್ಮಣನು ಹಣಸಂಗ್ರಹಕ್ಕೋಸುಗ ಅಲೆದಾಡಿ ಮನೆಗೆ ಬಂದಾಗ , ಅವನ ಉತ್ತರೀಯದ ಸೆರಗು ,ಕಟ್ಟಿದ ಗಂಟಿನ ಭಾರಕ್ಕೆ ಜಾರಿದ್ದರಿಂದ(ಹೆಚ್ಚಿಗೆ ಸಂಗ್ರಹವಾಗಿದೆಯೆಂದು) ಸಾಧ್ವಿಗೆ ಹರ್ಷವಾಗುತ್ತದೆ.)

    • ಸರಿಯಾಗಿ ಹೇಳಿದಿರಿ. ಹಿಂದಿನಕಾಲದಲ್ಲಿ ಒಬ್ಬ apprentice ಪುರೋಹಿತನು graduate ಆಗಬೇಕಾದರೆ, ಪಂಚೆಯೊಂದರಲ್ಲಿ ಹದಿನಾಲ್ಕು ಬಗೆಯ ಧಾನ್ಯ-ಬೆಲ್ಲ ಇತ್ಯಾದಿಗಳನ್ನು ಗಂಟುಕಟ್ಟುವುದನ್ನೂ, ಅದನ್ನು ಹೆಗಲುಗಳ ಹಾಗೂ ಮುಂಡನಮಾಡಿದ ತಲೆಯ ಮೇಲೆ ಹೊತ್ತು ಹದಿನಾರು ಮೈಲಿ ನಡೆದುಬರುವುದನ್ನು ಸಾಧಿಸಬೇಕಿತ್ತು!

      • ಕಡುಬಡತನದಿಂದಾಗಿ, ಈ ರೀತಿಯಾಗಿ ಮನೆಯನ್ನು ತೊರೆದು ಹೋಗುವ ಅನಿವಾರ್ಯತೆ ಕೆಲವು ಪ್ರದೇಶಗಳಲ್ಲಿ ಇದ್ದುದನ್ನು(ಹಿಂದೆ), ನೋವಿನಿಂದ ಸ್ಮರಿಸುತ್ತಲೇ ಇದನ್ನು ಬರೆದೆ ಪ್ರಸಾದರೇ.

    • ಏ೦ ಸಾಧ್ವಿಯೋ ಗಡ! ಬಹಳೆ
      ಹಿ೦ಸೆಯ ಪಡುತೆ ಪತಿಯೈದಿರಲ್ಕಾತನ ನೋವ್
      ಧ್ವ೦ಸಗೊಳಲುಪಚರಿಸದಲೆ
      ಶ೦ಸನಗೈಯುತವನ ಗಳಿಕೆಯೊಳು೦ ನಲಿವಳ್!!

      • ಸಾಧ್ವಿಯೆಂದೊಡನುಂಟೇಂ ಗಾಳಿಯಂ ಕುಡಿದು ಬಾಳಬೇಕೆಂಬ ನಿಯಮಂ?,
        ಸಾಧ್ವಿಯಾದುದರಿಂದೇ ತಾಂ ಪತಿಯ ಗಳಿಕೆಗಾಗೇ ಕಾದಿರ್ದುದು?(ಕೆಲಸ ದೊರೆಯದಾ ಕಾಲದಲ್ಲೂ..),
        ಹರುಷಮಂ ತೋರ್ದಳೆಂದೊಡಮ್ ,ಬೇರೆಯ ಕಜ್ಜಮನವಳ್ ಗೈದಿಲ್ಲಮೆಂಬರ್ಥಮೇಂ? ನೀಲಕಂಠರೇ! 🙂

  14. ಹಾರಲ್ ವಿಶೇಷಂ ಹೊರದೇಶಯಾತ್ರೆಗಂ
    ಸೇರಲ್ ವಿದೇಶಂ ಬಿಡೆ ಸಂಪ್ರದಾಯವಂ।
    ತೋರಲ್ ಸ್ವರೂಪಂ ತಲೆಮೇಗಳಿಂ ಗಡಾ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ !!

    ವಿದೇಶ ಯಾತ್ರೆಯ ಸಮಯದಲ್ಲಿ ತಲೆಯ ಮೇಲಿನ ಸೆರಗ ಸರಿಸಿ ನಿರುಮ್ಮಳಳಾದ ಸಾಧ್ವಿಯ ಚಿತ್ರಣ

    • ನೇರ-ದಿಟ್ಟ-ಅನಂತರ (ವಿದೇಶಕ್ಕೆ ಹೋದ-)!
      ಹಿಮ್ಮೆಟ್ಟೆ ಕಾಲವದು ಬಂದಾಯ್ತನಿತರೊಳೆ ನಿ-
      ರುಮ್ಮಳದೆ ಸುತ್ತಿರೆ ವಿದೇಶಂಗಳೊಳ್|
      ಗಮ್ಮತ್ತು ತಾನಡದಿ ಮತ್ತೆ ಪೊದ್ದಳು ಸೆರಗ
      ಉಮ್ಮಳಿಸಿದಂತಾಗಿ ಬಾಯಮುಚ್ಚಲ್||

  15. ಸಾರಲ್ಕೆ ಯುದ್ಧಂ ಕಡುವೈರಿಸೈನ್ಯದಿಂ
    ಹೋರಿಂತು ಕಾದಾಡಲು ವೀರನಾರಿತಾಂ |
    ಹೇರಲ್ಕೆ ರಕ್ಷಾಕವಚಂಗಳೆರ್ದೆಗಂ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ||

    ವೀರಾವೇಶದಿಂದ ಹೋರಾಡಿದ ಚರಿತ್ರೆಯ ವೀರನಾರಿಯರ ನೆನಪಿನಲ್ಲಿ

  16. ತೋರನ್ ಗಡರ್ಕಂ ಕರುಣಂ ಬೆಮರ್ದಗಂ
    ಚೀರಂ ತೊಗಲ್ಗಂ ಬಿಗಿದಂಟಿದಾವಗಂ
    ಧೀರಂ ಸಮೀರಂ ಮುದನೀಡುತಾಡಿರಲ್
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

  17. ಬೀರಂ ಗಡಂಗೊಳ್ ಗಡ ಪೀರುತಿರ್ದಪಳ್
    ಮೀರಿರ್ದಳುದ್ರೇಕದತೀವ ಲಾಸ್ಯದೊಳ್
    ಜಾರಂ ಸಮೀಪಂ ಸೆಳೆಯಲ್ಕೆ ಮತ್ತಿನೊಳ್
    ಜಾರಲ್ ಸೆರಂಗಾಗಳೆ “ಸಾಧ್ವಿ” ಹರ್ಷಿಪಳ್

    “ಸಾಧ್ವಿ” ಎಂಬುದನ್ನು ವ್ಯಂಗ್ಯಾರ್ಥದಲ್ಲಿ ಪರಿಗಣಿಸುವುದು ಅಥವಾ ಯಾವುದಾದರೂ ಕುಖ್ಯಾತ ಸಾಧ್ವಿಯೆಂದು ತಿಳಿಯುವುದು. 🙂

    • ಇ೦ತಪ್ಪ ಆ ಸಾಧ್ವಿಗ೦ ಸೆರ೦ಗಿರ್ದುದು ಗಡತೀವ ಚೋದ್ಯ೦!!!
      ಎ೦ತಿರ್ಪೊಡೇ೦, ಕಾ೦ಚನ ಮೇಡಮ್ ಕಲ್ಪಿಸಿರ್ದಾ ಊರೆಲ್ಲಮ೦ ತಿರು-ತಿರುಗಿ ಗಳಿಕೆಯ೦ ಮಾಳ್ಪ ಪತಿಯೆತ್ತಣ೦, ಮತ್ತಮೀ ರಾಮಚ೦ದ್ರರೆತ್ತೆತ್ತಲೇನೇನ೦ ಕ೦ಡು ಬಣ್ಣಿಪುದೆತ್ತಣ೦!!! 😉

      • 😀
        ಭಿನ್ನಂ ವಿಚಾರಂ ರಸಕಲ್ಪನಾವಿಧಂ.
        ಭಿನ್ನಂ ಗಡಾ ದಂಪತಿಗಳ್ ವಿಲೋಕನಂ
        ಚೆನ್ನಂ ವಿಧಾನಂಗಳವನ್ಯ ಮಾರ್ಗಮುಂ

        ಮೇಣಂತೆಯುಂ, ಪ್ರಾಸಾನುಕೂಲಿತಮಾಗಿ ಕವಿಮನದ ಕಲ್ಪನಾವಲೋಕನದೊಳ್ ತೋರ್ದ,
        ಚೆನ್ನಂ ಗಡಂಗೊಳ್ ಸರಿವಾ ಸೆರಂಗುತಾಂ

        • ಹಹ್ಹ.. ಚೆನ್ನ೦ ಗಡ೦ಗೊಳ್ ಸೆರೆಯಾ ಬೆಡ೦ಗು ಕಾಣ್

          • ರಾಮ್! ಎರಡೂ ಕಲ್ಪನೆ ಮತ್ತು ಶಿಲ್ಪನೆಗಳು ಚೆನ್ನಾಗಿವೆ. ಅಭಿನಂದನೆಗಳು.

          • _/\_

      • 1st line (ಇಂತಪ್ಪ…) is superb

    • ಪೃಥ್ವೀಭರಂ|| ಗಡಂಗಿನಿವರೀರ್ವರುಂ ಪರಿಯ ಕಂಡಿಹರ್ ವೆಗ್ಗಳಂ
      ತಡಂಕುತಲಿ ಮದ್ಯಮನ್ನೆನಿತೊ ಈರ್ವರುಂ ಪೀರಿಯುಂ|
      ಬೆಡಂಗಿನೆಡೆ ದಿಟ್ಟಿಯಂ ರತದೆ ಸಾರ್ಚಿಹೀ ’ರಾಮ’ಗಿಂ
      ತೊಡಂಗೆ ಬರಿಕಳ್ಳಿನೊಳ್ ಸರಳ’ನೀಲ’ ತಾಂ ಶುದ್ಧನೈ|| 🙂

      • ಅಹೋ, ನವನವೀನ ಬ೦ಧಚಷಕ೦ಗಳೊಳ್ ತ೦ದು ಮ೦-
        ದಹಾಸಮುಖದಿ೦ ಪ್ರಸಾದರೆಮಗ೦ ಕುಡಲ್ ಮದ್ಯಮ೦
        ಸುಹೃನ್ಮಧುರಪದ್ಯಮ೦, ಸುರವರರ್ ಸುರಾ-ಸೋಮದಾ
        ಮಹಾರ್ಣವಮನೀಯಲೀಗಳಿವರಿ೦ಗೆ ಪೃಥ್ವೀಭರ೦

        …ಪೃಥ್ವಿಯ ತು೦ಬೆಲ್ಲ ಇವರಿಗೆ ಸುರೆ ಸೋಮಗಳ ಸಮುದ್ರವೇ ದಕ್ಕಲಿ… 🙂 🙂

        • ನಿಮ್ಮ ಪೃಥ್ವೀಪ್ರಯತ್ನವೇನೋ ಚೆನ್ನಾಗಿದೆ. ಆದರೆ ಯತಿವಿಲಂಘನವನ್ನು ಇಂಥ ವೃತ್ತಗಳು ಸಹಿಸವು. ಇದಕ್ಕೆ ಕನ್ನಡವಾಗಲಿ, ತೆಲುಗಾಗಲಿ ಯಾವುದೇ ವಿನಾಯತಿಯನ್ನು ವೈಜ್ಞಾನಿಕವಾಗಿ ಕಲ್ಪಿಸಲಾಗದಲ್ಲವೇ! ನಮ್ಮಲ್ಲಿ ವಾಡಿಕೆ, ಪದ್ಧತಿ, ನಮ್ಮನುಡಿಗಳ ಛಂದಶ್ಶಾಸ್ತ್ರಕಾರರು ಹೇಳಿರುವ ಬೆಂಬಲದ ಮಾತುಗಳೇ ಮುಂತಾದುವು ಏನೇ ಸಮಜಾಯಿಷಿ ನೀಡಿದರೂ ಯತಿಪ್ರಬಲವೃತ್ತಗಳು ಆಯಾ ಯತಿಸ್ಥಾನವನ್ನು (ಮುಖ್ಯವಾಗಿ ಪಾದಮಧ್ಯದಲ್ಲಿ) ಮೀರಿದಾಗ ಶ್ರುತಿಕಟುವೆಂಬ ತಥ್ಯವನ್ನು ಮಾತ್ರ ಮಾರ್ಪಡಿಸಲಾಗದು. ಹೀಗಾಗಿ ಪ್ರತಿಪಾದದಲ್ಲಿಯೂ ಎಂಟನೆಯ ಅಕ್ಷರದ ಬಳಿಕ ಬರುವ ಯತಿಸ್ಥಾನವನ್ನು ಪಾಲಿಸಿದರೆ ಒಳಿತು.

        • ಅಷ್ಟು ಪ್ರಮಾಣದಲ್ಲಿ ಸುರೆ-ಸೋಮಗಳನ್ನುಳ್ಳವನು ತುಸುವಾದರೂ ದಾನವನ್ನು ಮಾಡನೆ’ ಎಂಬ ಆಸೆಯನ್ನು ಹೊಂದಿರುವಿರ?

          • ಯತಿಭಂಗದ ಯತ್ನ ಸಲ್ಲದು ಪ್ರಸಾದ್ ಸರ್ !!

          • ’ಎರಡೂ ದದ್ದ, ಹೊರಕ್ ಹಾಕು’ ಎಂದು ಹೇಳಿದ್ದೇನೆ. ಇವರಿಬ್ಬರಲ್ಲಿ ’ಯತಿ’ ಯಾರೋ?

          • ಅಯೋಧ್ಯೆಯರಸ೦ ದಿಟ೦ ಜನಕವಾಕ್ಯಮ೦ ತಪ್ಪದಿ-
            ರ್ದಯೋಮನದೆ ಕಾಡಿಗ೦ ನಡೆದ ‘ರಾಮಚ೦ದ್ರ೦’ ಗಡ-
            ಲ್ತೆಯೇ೦ ಯತಿಯು ಮತ್ತಮಾ ಸತಿಯೆ ವಿಶ್ವಕೈಶ್ವರ್ಯದಾ-
            ತೆಯಿರ್ದು ತಿರಿದು೦ಬುವ೦ ಮಹಿಮ ‘ನೀಲಕ೦ಠ೦’ ವಲ೦!

          • ಒಳ್ಳೆಯ ಪ್ರತಿಕ್ರಿಯಾಪದ್ಯ ನೀಲಕಂಠ. ಹಳಗನ್ನಡದಲ್ಲಿ ’ತಿರಿದುಂಬುವಂ’ ಎನ್ನುವ ಬದಲು ಹೊಚ್ಚಹೊಸಗನ್ನಡದಲ್ಲಿ ’ತಿರಬೋಕಿಯೈ’ ಎಂದಿದ್ದರೆ ಒಳ್ಳೆಯ ಕಿಕ್ ಇರ್ತಿತ್ತು 😉

      • 🙂

  18. ತೋರಲ್ಕೆ ತೊಟ್ಟಿರ್ದರೆ ಚಿಂದಿ ಕುಪ್ಪಸಂ,
    ಜೀರಿಂತು ತಾನುಟ್ಟಿಹ ಸೀರೆಯಂಚನುಂ,
    ಹೋರಾಡಿರಲ್ ಮುಚ್ಚೆನೆ ಮಾನ, ಯುಕ್ತದಿಂ-
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

    ತೊಟ್ಟಿದ್ದ ಹರಿದರವಿಕೆಯನ್ನು ಸೆರಗಿನಿಂದ ಮುಚ್ಚಲು ಸೆಣೆಸಿದ ಬಡ ಸಾಧ್ವಿಯ ಚಿತ್ರಣ . (ಸೆರಗು ಸರಿಯಾಗಿ ಸರಿದು ಸಾಧ್ಯವಾದದ್ದು !! )

  19. ಜೋರಿಂದೆ ತಾನಂತೆಡವಲ್ಕದಂದು ಚೀ-
    ತ್ಕಾರಂಗುಡಲ್ ಮುಗ್ಗರಿಸಲ್ಕೆ ಮೆಟ್ಟಿ ಮೇ-
    ಲೇರಲ್ ಗಡಾ ಜಾರದಿರಲ್ಕದಂತು, ಕಾಲ್-
    ಜಾರಲ್, ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

    ಒಟ್ಟಿನಲ್ಲಿ ತಾನು (ಕಾಲ್)ಜಾರಿದರೂ, ಸೆರಗು ಜಾರಲಿಲ್ಲವಲ್ಲ ಎಂದು ನೋವಿನಲ್ಲೂ ಹರ್ಷಿಸುವ ಸಾಧ್ವಿಯ ಚಿತ್ರಣ

    • ಒಳ್ಳೆಯ ಜಾಣ್ಮೆಯ ಪೂರಣ!….ಶೈಲಿಯೂ ಚೆನ್ನಾಗಿದೆ. ಧನ್ಯವಾದಗಳು.

    • biddaroo moogu mEle embante 🙂

      • ಪೂರ್ತಿ ಬಿದ್ದಿಲ್ಲ ನೀಲಕಂಠ, ಎಡವಿ ಜಾರಿದ್ದಷ್ಟೆ ! ಸೀರೆಯೂ ಮಣ್ಣಾಗಿಲ್ಲ !!

      • ರೇಸಿಮಿಯೊ ಕಾಟನ್ನೊ ಪೇಳಿಂ
        ಪಾಸಿನಿಳಕಲ್ಲಿನದೊ ಕೋಟವೊ
        ಮಾಸದಿಹ ನೈಲೆಕ್ಸೊ ವಾಯ್ಲೋ (voil)
        (ವಸನ)ವಾಸಮದುಮಾ ನಿಮ್ಮದೌ|

        • Wo….manOhara(haraa….) !!

          • ಆರೀ ಮನೋಹರ೦?!!

          • ಅದು “manOhara” ಅಲ್ಲ. ಮ್ಯಾನ್ ಓ “ಹರ” / ಮ್ಯಾನ್ ಓ “ಹರಿ”. ಈಗ ಹೇಳಿ ಯಾರು ಯಾರೆಂದು ?!

        • ರಾಸಿ ಸೀರೆಗಳಿರಲು ರೋಸಿದುದು ರಂಪಣ್ಣ
          ರೇಸಿಮೆಯದಾಗಲದರಂಚು । ಸೆರಗಾಗ
          ಲೇಸೆಂದುಕೊಳುವೆನಡ್ದಿಯಿಲ್ಲ !!

  20. ಆರಂಭಗೊಂಡಾ ಶಿಶುಲೀಲೆಯೊಳ್ ಚಮ-
    ತ್ಕಾರಂಗಳೇಂ! ಬಾಲಳು ಸೀರೆಯುಟ್ಟಲಂ-
    ಕಾರಂಗೊಳಲ್ಕಮ್ಮನವೊಲ್, ತೊಡಂಕಿರಲ್
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

    (ಅಮ್ಮನಂತೆ ಸೀರೆಯುಟ್ಟು ಮನೆಯಾಟವಾಡುತಿದ್ದ (ನನ್ನ/ನನ್ನ ಮಗಳ) ಬಾಲ್ಯದ ಸುಂದರ ನೆನಪಿನಲ್ಲಿ !!)

    • ತು೦ಬ ಚೆನ್ನಾದ ಕಲ್ಪನೆ!! ಬಾಲಳು ಎ೦ಬುದು ಸಾಧುವೆ? ಬಾಲಿಕೆ ಸೊಗಸೀತು. ಅಮ್ಮ ಎ೦ಬುದು ಅಪ್ಪ ಎ೦ದೇನೊ ಅರ್ಥ ಕೊಡುತ್ತದೆ, ಹಳಗನ್ನಡದಲ್ಲಿ. ಅಬ್ಬೆಯವೊಲ್ ಎನ್ನಬಹುದಲ್ಲವೆ?

      • ಧನ್ಯವಾದಗಳು ನೀಲಕಂಠ, ತಿದ್ದಿದ್ದೇನೆ (ಅಮ್ಮನನ್ನೂ/ಮಗಳನ್ನೂ)

        ಆರಂಭಗೊಂಡಾ ಶಿಶುಲೀಲೆಯೊಳ್ ಚಮ-
        ತ್ಕಾರಂಗಳೇಂ! ಬಾಲಿಕೆ ಸೀರೆಯುಟ್ಟಲಂ-
        ಕಾರಂಗೊಳಲ್ಕಬ್ಬೆಯವೊಲ್, ತೊಡಂಕಿರಲ್
        ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

      • Taming them both – mother and daughter?
        ಇದು ವೃಥಾ ಶ್ರಮಮೆಂಬೆ ಕೇಳಿಂ
        ಸದರ ನೀಡದೆ ತಾಯ ತಿದ್ದಿರೆ
        ಹದನುಗೊಳ್ಳಳೆ ಮಗಳು ತಾನೇ
        ರದನವುದುರುವ ಮುನ್ನಮೇ|| 🙂

  21. ತೊಂಬತ್ತೊಂಬತ್ತು ಪದ್ಯ-ಪ್ರತಿಕ್ರಿಯೆಗಳಿಂದ ಸಂತೋಷವಾಗಿ ಪಾಲ್ಗೊಂಡು ಸಂತಸವನ್ನು ಹಂಚಿದ ಎಲ್ಲ ಸಹಪದ್ಯಪಾನಿಗಳಿಗೆ ಧನ್ಯವಾದಪುರಸ್ಸರವಾಗಿ ಈ ನೂರರ ಪ್ರತಿಕ್ರಿಯೆ:

    ಸೇರಲ್ ಸಮಸ್ಯಾಪರಿಪೂರಣಂಗಳಿಂ-
    ತಾರಾಧ್ಯೆ ವಾಗ್ದೇವತೆ ಮಾತೆ ಪೊಂಗುತುಂ
    ಸಾರುತ್ತುಮೆಮ್ಮತ್ತೆರ್ದೆವಾಲನೂಡಿಸಲ್
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    • ಆ ಸಾಧ್ವಿ ಬೇರಾರುಮದಾಗಿರರ್ದೆ ತಾಂ
      ಲೇಸಿಂದೆ ಛಾತ್ರರ್ಗೆ ನಿರಂತರಂ ವಲಂ
      ಸೀಸಂಗಳಂ* ದುಗ್ಧಮನೂಡಿಸಲ್ಕೆ ಚಿ-
      ತ್ತೈಸಿರ್ಪಿಹೀ ಪೌರುಷಶಾರದಾಖ್ಯರೈ(ಪುರುಷಸರಸ್ವತಿ)||
      *ಶ್ಲೇಷ – bottle 😉

      • ನಮೋ ನಮಃ ಪ್ರಸಾದಾಯ ಸುಪ್ರಸಾದಾಯ ಸರ್ವಥಾ|
        ವ್ಯಾಸಂಗಗೋಷ್ಠೀಯಾತ್ರಾಯಾಂ ಸಾರಥ್ಯಾಯ ಸುಹಾಸಿನೇ||

      • ಪ್ರಸಾದ್ ಸರ್,
        ಸೇಸಿಕ್ಕುತುಂ(=ಹರಸಿ) ದುಗ್ಧಮನೂಡಿಸಲ್ಕೆ… ಅಲ್ಲವೇ?
        ನಿಮ್ಮ *ಶ್ಲೇಷವೂ ತುಂಬಾ ಚೆನ್ನಾಗಿದೆ.

        • ಒಂದು ಶಬ್ದವನ್ನು ಕಲಿಸಿದ್ದಕ್ಕಾಗಿ ಧನ್ಯವಾದಗಳು.

    • ತೋರಿರ್ದುದಿಂತೀ ಜಗದಂಬೆಯಾಚಮ-
      ತ್ಕಾರಂಗಳಂ ಕಾಣ್ ಮಹದಾಸೆಯಿಂ ಸುಸಂ-
      ಸ್ಕಾರಂಗುಡಲ್ ಪಾಲುಣಿಸಲ್ಕೆ ಜೀವಕಂ
      ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

      ಆನಂದವನ್ನು ನೂರ್ಮಡಿಸಿತ್ತುದಕ್ಕೆ ಧನ್ಯವಾದಗಳು ಗಣೇಶ್ ಸರ್ !!

  22. ಹಳೆಯ ಪೂರಣ ತಡವಾಗಿ ಬಂದದ್ದಕ್ಕಾಗಿ ಕ್ಷಮಿಸಬೇಕು

    ಸೇರಿರ್ಪುದೈ ತಾಯ ಮಡಿಲ್ಲ ಕಂಗಳಿಂ
    ತೋರಿರ್ಪುದೈ ತನ್ನ ಮನೋಭಿಲಾಶೆಯಂ
    ಚೀರುತ್ತಿರಲ್ ಸೀರೆಯ ಜಗ್ಗುತಿರ್ಪುದೈ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್

    • ನವವಿಧಪೂರಣಕ್ಕಾಗಿ ಸ್ವಾಗತ ಚೀದೀ! ಅದರೆ ಮೊದಲ ಪಾದದಲ್ಲಿ
      “…………..ತಾಯ್ಮಡಿಲಂ ನಿಜಾಕ್ಷಿಯಿಂ” ಎಂದು ತಿದ್ದಿದರೆ ವ್ಯಾಕರಣದೃಷ್ಟ್ಯಾ ಒಳಿತು.

    • ಅರೆ! ಇದು ತುಂಬ ಸರಳಸುಂದರವಾದದ್ದು; first five postingಗಳಲ್ಲಿ ಇರಬೇಕಾದದ್ದು. ಏಕೆ ಯಾರಿಗೂ ಹೊಳೆಯಲಿಲ್ಲವೋ ಕಾಣೆ.
      ’ಮಡಿಲ್ಲ’ ಸರಿಯಲ್ಲವೇನೋ. ಹೋಗೊಂದು ಸವರಣೆ – ಏರುತ್ತೆ ಮಾತಾಙ್ಕಮಮಂ ನಿರೀಕ್ಷೆಯಿಂ.

    • ಅಮ್ಮನ ಮಡಿಲಲ್ಲಿ ಹಾಲುಣಲು ಹಪಹಪಿಸುವ ಕಂದನೊಡೆ ಅಮ್ಮನ ಸಹಜ ಹರ್ಷದ ಕಲ್ಪನೆ !!
      ಚೇದಿ, ನಿನ್ನೊಡನೆ ಧ್ವನಿಗೂಡಿಸುವಾಸೆ!!

      ಸೇರಿಂತು ತಾಂ ತಾಯ್ಮಡಿಲಂ, ತವಂಕದಿಂ
      ತೋರಿರ್ದುದೈ ಕಂದ ಮನೋಭಿಲಾಷೆಯಂ ।
      ಚೀರುತ್ತಲುಂ ಸೀರೆಯ ಜಗ್ಗುತಿರ್ದಿರಲ್
      ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್ ।।

  23. ಮೀರುತ್ತೆ ಕಂದಂ ನವಮಾಸಮೂರ್ಮಿಯಿಂ,
    ಚಾರುತ್ವದಿಂದಂ ಪೊರವಂಟು ಗರ್ಭದಿಂ
    ಬೇರಾಗುತಿರ್ದಂತೆ, ಸಮಸ್ತ ಕಷ್ಟದಾ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್!
    (ತಾಯಂದಿರಿಗಾಗಿ..:-) )

    • Good medical pUraNa. Seems like a normal delivery 😀
      ’ತಾಯಂದಿರಿಂಗೆಂ’ದುಮಾದಿರಿ ಬಚಾವು ನೀಂ
      (ಪ್ರಸವ)ಸೂಯಶಮನವು ಮಾತ್ರ ಸಾಧ್ವಿಗೆನೆ ನೀಂ|
      ಗೈಯಾಳಿ-ನಿರುತಮುತ್ತೈದೆಯಾದರ ನೆರಸಿ (ನಿಮ್ಮ ಮನೆಯ ಬಾಗಿಲಲ್ಲಿ)
      (ಅವರ)ಕೈಯಾರ ಸಾಕ್ಷಿಯಂ ಪೇಳಿಸಿರೆನೇಂ (ಇವರಿಗೂ ಕಷ್ಟನಿವಾರಣೆಯಾಯಿತು ಎಂದು)||

      • ಯಾರಿಗಾದರೂ ಹರ್ಷಮಪ್ಪುದು ಸತ್ಯಮಾದೊಡಂ ಸಾಧ್ವಿಯೊಳ್ಗದಲ್ತೇ ಸಾಧುತನದಿಂ ದೊರಕಿದುದು ಮೇಣ್ ಮೌಲ್ಯಮಂ ಪಡೆದು, ಶಾಶ್ವತತೆಯಂ ಕಾಂಬುದು?

    • ಆಹಾ! ಇದು ನಿಜವಾಗಿ ನವವಿಧದ ಸಾರ್ಥಕಸುಂದರಪೂರಣ. ಅಭಿನಂದನೆಗಳು.

  24. ಜಾರೋತ್ತಮಂ ತನ್ನಿನಿಯಂ ಗಡೆನ್ನುತುಂ
    ಕೋರುತ್ತೆ ನೂರ್ಕಲ್ಲ ಮರಂಗಳೆಲ್ಲಮಂ
    ಮಾರಲ್ ಮನಂ ನಲ್ಲನ ಕೈಯಿನಾಕೆಯಾ
    ಜಾರಲ್ ಸೆರಂಗಾಗಳೆ ಸಾಧ್ವಿ ಹರ್ಷಿಪಳ್!

    ಜಾರೋತ್ತಮನಾದ ತನ್ನವನಿಗಾಗಿ ನೂರು ಕಲ್ಲು-ಮರಗಳನ್ನೆಲ್ಲಾ ಕೋರುವ ಸಾಧ್ವಿ, ಕೊನೆಗೊಮ್ಮೆ ಆತನ ಮನ ಬದಲಿಸಿ, ಅವನ ಕೈಯಿಂದ ’ಆಕೆ’ಯ ಸೆರಗು ಜಾರಿ ಹೋದಾಗ ಹರ್ಷಿಸುತ್ತಾಳೆ.

Leave a Reply to Kanchana Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)