Jan 172016
 

ಚಂಪಕೋತ್ಪಲಮಾಲೆಗಳಿಗೆ ಹೊಂದುವ ಈ ಪಾದಾಂತ್ಯವನ್ನು ಬಳೆಸಿ ಪದ್ಯರಚನೆಯನ್ನು ಮಾಡಿರಿ
“ನೆತ್ತರೊಪ್ಪುಗುಂ”

  81 Responses to “ಪದ್ಯಸಪ್ತಾಹ ೧೮೫: ಪದ್ಯಪೂರಣ”

  1. ಕಂಡಿರೆ ಭಂಡದೇವತೆಗಳಾ ರಣಚಂಡಿಗಳಾ ನರರ್ಕಳೊಳ್
    ಚಂಡಪರಾಕ್ರಮಂಮೆರೆವ ಗಂಡರಿರಾ, ಕುರುವಂಶಪಾಂಸುಲಂ-
    ಗಂಡ ವಿಮುಕ್ತಿಯಂ, ಹರಿಹರರ್ಗಳವೇಂ ಕುಡಲೀ ತೆರಂ, ನಯಂ-
    ಗಂಡುದೆ ಬೊಮ್ಮನಿತ್ತ ಬರೆಹಂ, ಯಮಧರ್ಮನ ಧರ್ಮಮೆತ್ತಣಂ
    ಹಿಂಡುಗಿಡುತ್ತೆ ಸಾರ್ದುದೊ ಗಡೀತನ ಮಾರ್ಗದೊಳಾಂ ದಿಟಂ ಪರಂ
    ದಂಡಧರಂ, ಧರಿತ್ರಿಯ ಖಳರ್ಗಿದೊ ನವ್ಯಮದಪ್ಪ ದಂಡನಂ;
    ತುಂಡು ನೆಲಕ್ಕಿದಲ್ಲಲೆ ಮದೀಯವಿಭೀಷಣಕೃತ್ಯಮೀಗಳೇಂ
    ಕಂಡಿರೆ ಪೆಂಡಿರಂ ಕೆಣಕಿದುದ್ಧಟಚಿತ್ತವಿಕಾರಿಗಂ, ಬಹೂ-
    ದ್ದಂಡಕರಂಗಳಿಂ ಮುಡಿಯನೆತ್ತಿದ ತೊತ್ತಿನ ಕುನ್ನಿಗಂ, ಸ್ವಕರ್
    ಷಂಡರೆನುತ್ತೆ ರಕ್ಕಸನವೋಲೆಳೆಯುತ್ತೆ ಲತಾಂಗಿಯಂಗಮಂ
    ಕಂಡತಿಧನ್ಯರಪ್ಪ ಭರದೊಳ್ ಸೆರಗಂ ಸುಲಿದಾತಗಂ ಗಡಿಂ-
    ದುಂಡತಿಧನ್ಯನಪ್ಪನೆನಲಾನಿದೊ ಕೊಟ್ಟುಣಿಸಂ; ಬಹೂತ್ಸವಂ-
    ಗೊಂಡುಣುವಂತೆ ಮತ್ತುಳಿದ ಗೊಡ್ಡು ಪೆಣಂಗಳನೀ ಪೆಣಂ ಪಣಂ-
    ಗೊಂಡಿರಲೆನ್ನ ಸೇಡಿನೊಳೆ, ಮುಟ್ಟಲದಾಗದಲೇ ಮರುಳ್ಗಳಾ;
    ಕೆಂಡದೊಳಾಳ್ದಿರಲ್ಕುರಮದಂ ತಣಿಸಲ್ ಮಗುಳಂತುಮಾ ಬರಂ-
    ಗಂಡ ಕೃಶಾನುಜಾತೆಯ ಕುರುಳ್ಗೊಳೆ ಸೊಂಪನೆ ನೆತ್ತರೊಪ್ಪುಗುಂ
    …………………………………..

    ದುಶ್ಶಾಸನನ ಎದೆಬಗಿದು ಬೊಗಸೆಯಲ್ಲಿ ರಕ್ತದುಂಬಿ ದ್ರೌಪದಿಯೆಡೆ ಬರುವಾಗ ಚೀರಾಡುತ್ತಿರುವ ಭೀಮ… ದೇವತೆಗಳೇ, ರಣಪಿಶಾಚಿಗಳೇ, ಕೊಳಗುಳದ ಗಂಡರೇ, ಕಂಡಿರಾ ನಾನೀ ದುರುಳನಿಗೆ ಕೊಟ್ಟ ಮುಕ್ತಿಗತಿಯನ್ನು! ಇಂಥದನ್ನು ಹರಿಹರರಾದರೂ ಕೊಟ್ಟಾರೆಯೇ!! ಬ್ರಹ್ಮ ಇಂಥದ್ದನ್ನು ಬರೆದಾನೆಯೇ! ಯಮನ ಧರ್ಮ ಇವನ ಬಗ್ಗೆ ಎಲ್ಲಿ ಓಡಿ ಹೋಯಿತೋ?! ಇದೀಗ ಇವನ ಮಾರ್ಗದಲ್ಲಿ ಮಹಾದಂಡಧರ ನಾನೇ. ನಮ್ಮ ಹೆಂಡಿರನ್ನು ಕೆಣಕಿದ ಖಳರಿಗೆ ಇದು ಹೊಸತಪ್ಪ ದಂಡನೆ.
    ಕಂಡಿರಾ, ಪಾಂಚಾಲಿಯ ಮುಡಿಯನೆತ್ತಿದುದ್ದಂಡಕರಂಗಳಿತನನ್ನು, ರಾಕ್ಷಸನಂತೆ ಅವಳನ್ನು ಎಳೆತಂದವನನ್ನು, ಅವಳಂಗಂಗಳ ನೋಡಿ ಧನ್ಯತೆಯ ಪಡೆಯಲು ಅವಳ ಸೀರೆ ಕಿತ್ತವನನ್ನು?! ಈಗ ಉಂಡು ಧನ್ಯನಾಗಲೆಂದು ನಾನೀತಂಗೆ ಕೊಟ್ಟ ಉಣಿಸನ್ನು ಕಂಡಿರಾ?!! ಪಿಶಾಚಿಗಳಾ, ಇನ್ನುಳಿದ ಹೆಣಗಳನ್ನು ತಿನ್ನುವಂತೆ ಇದನ್ನೂ ತಿನ್ನಬೇಡಿ; ಇದು ನನ್ನ ಸೇಡಿನ ಪಣಕ್ಕಿಟ್ಟದ್ದಿದೆ. ಕೆಂಡದಂತುರಿದ ನನ್ನೆದೆಯನ್ನು ತಣಿಸಲು, ಬರಗಂಡ ಪಾಂಚಾಲಿಯ ಕೇಶಕ್ಕೆ ಸೊಂಪನೀಯಲು ಈ ನೆತ್ತರೊಪ್ಪಿತೀಗ.

    • ವೀರರಸವು ಝಲ್ಲೆನಿಸುವಂತಿದೆ. ಪದಪ್ರೌಢಿಯು ಬೋಧಪ್ರದವಾಗಿದೆ. ಧನ್ಯವಾದಗಳು.

      • ಧನ್ಯವಾದಗಳು! ರೌದ್ರವಲ್ಲವೇ, ಅಥವಾ ನಾನು ರೌದ್ರ ಎಂದು ಬರೆದದ್ದು ವೀರವಾಯಿತೇ?

        • “ಎಲ್ಲ ಮುಗಿಯಿತು. ಈಗ ’ಶಾಂತ’ವಲ್ಲವೇ?” ಎಂದೂ ಹೇಳುತ್ತೀರಿ! ನೀವು ಹೇಳಿದ್ದೇ ಸರಿಯಾಗಲಿ ಬಿಡಿ 😉 Well yes, it is raudra.

    • ನೀಲಕಂಠರೆ, ಓದುವಾಗ ನನ್ನ ಉಸಿರು ಕಟ್ಟಿತು 🙂 . “ಸೆರಗಂ ಸುಲಿದಾತಗಂ “- “ಸೆರಗಂ ಸೆಳೆದಾತಗಂ ” ಎಂದಾಗಬೇಕೆ ?

      • ಉಸಿರುಗಟ್ಟಿಸಿದ್ದಕ್ಕಾಗಿ ಕ್ಷಮಿಸಬೇಕು!! ಸುಲಿ ಎಂಬುದಕ್ಕೆ ಬಿಚ್ಚು, ಕಿತ್ತುಕೊ ಎಂಬ ಅರ್ಥದಲ್ಲಿ ಹಲವು ಕಡೆ ಓದಿರುವ ನೆನಪು. ಮೊದಲು ಸೆಳೆದಾತ ಎಂದೇ ಬತೆದಿದ್ದೆ. ಈ ಸಂದರ್ಭಕ್ಕೆ ಸುಲಿ ಎಂಬುದು ಹೆಚ್ಚು ಸೂಕ್ತವಾದೀತು ಎಂದು ತಿದ್ದಿದೆ.

      • ’ಸುಲಿದಾತಗಂ’ ಪ್ರಯೋಗವನ್ನು ನಾನು ಒಡನೆಯೇ ಮೆಚ್ಚಿದ್ದೆ. ಹೀಗೆ ಪ್ರಮೀಳೆಯರಿಂದ ಪುಕಾರುಬರಬಹುದೆಂದು ಅನುಮಾನಿಸಿ, ಮಾಡಿದವನ ಪಾಪ ಆಡಿದವನಿಗೇಕೆ, ಕವಿಯ ಅಪಖ್ಯಾತಿ ವ್ಯಾಖ್ಯಾತೃವಿಗೇಕೆ ಎಂದು ಸುಮ್ಮನಿದ್ದುಬಿಟ್ಟೆ. ಈಗ ಬರಿಯ vote ಹಾಕುತ್ತಿದ್ದೇನಾಗಿ ಹಿಂಜರಿಕೆಯಿಲ್ಲ 😉

        • ಎಂದರೋ (ನಿಮ್ಮಂತಹ) ಸಹೃದಯರಸಿಕುಲು ಅಂದರಕಿ ವಂದನಮು … 🙂

  2. ಬಾರೆಲೆ ಕಾಂತೆಯೋಕುಳಿಯ ಕೇಳಿಗೆ ಬಾ ರುಧಿರಾಭಿಷೇಕಕೊ-
    ಯ್ಯಾರದ ಮುಕ್ತಕೇಶಿಯಿದೊ ಬಾ, ಮುಡಿಗಟ್ಟುವೆನಾನಿದೀಗಳಿ-
    ನ್ನಾರದವೊಲ್ ಕೆದರ್ದ ಮುಡಿ ಬಿಚ್ಚದವೊಲ್ ಮುಡಿಗೊಂದು ಸುತ್ತಲಂ-
    ಕಾರದವೊಲ್ ಕರುಳ್ಗಳುಪಹಾರಮಿದೊಪ್ಪುಗು ನೆತ್ತರೊಪ್ಪುಗುಂ

    ಭೀಮ ದ್ರೌಪದಿಯನ್ನು ಕೂಗುವುದು.

    • ಓಹೋ, ಖಂಡಪ್ರಾಸ ತುಂಬ ಚೆನ್ನಾಗಿದೆ.

      • ನೋಡಿ ನನ್ನ ಪದ್ಯದ ಧ್ವನ್ಯಾತ್ಮಕತೆ! ದುಶ್ಶ್ಯಾಸನನ ಸಿಗಿದಿಟ್ಟ ಮಾಂಸಖಂಡಗಳನ್ನು ಸೂಚಿಸಲು ಖಂಡಪ್ರಾಸ ತಂದಿದ್ದೇನೆ 😉

    • ’ಕರುಳ್ಗಳುಪಹಾರಮಿದೊಪ್ಪುಗು ನೆತ್ತರೊಪ್ಪುಗುಂ’
      ಅರರೆ ಕೇಳೀ ಸೊಗದ ಕಾಂಬಿನೇಶನ್ನು ಪ್ರ-
      ಚುರಮಾದ ತಿನಿಸಹುದುಮಿಂದುಮಂದುಂ|
      ಕರುಳ ನೂಡಲ್ಸಿನೊಡಗೂಡಿ ರಕ್ತದ ಸಾಸೊ- (Sauce)
      ಸರಿಸದೇಂ ನೀರ ನಾಲಗೆಯೊಳೆಂದುಂ||

  3. Soma,
    ವಿಯೋಗಿನೀ|| ಮೊದಲೆಂದಿಹೆ ’ಸಖ್ಯಮೊಪ್ಪುಗುಂ’ (ಪದ್ಯಸಪ್ತಾಹ ೧೮೪)
    ಮುದದಿಂ ನಾಮದನೊಪ್ಪಿಬಾೞ್ದೆವೈ|
    ಹೆದರಿರ್ಪೆವು ನಾಮಿದೀಗಳೈ
    ಮದದಿಂ ನೀನೆನೆ ’ನೆತ್ತರೊಪ್ಪುಗುಂ’!!

    • ಹೌದು ಯಾಕೋ ಸೋಮರು ರಕ್ತತೆಯನ್ನು ಇಷ್ಟಪಡುತ್ತಿದ್ದಾರೆ. ರಕ್ತವರ್ಣದ ಬೆಂಕಿಯುಗುಳ್ವ ಜ್ವಾಲಾಮುಖಿಯ ಪರ್ವತ, ಶಕುಂತಲೆಯನುರಕ್ತಿ, ವಿಧುಮಾಂಭ, ಈಗ ನೆತ್ತರಿನೊಪ್ಪು… 🙂

    • ನೀಲಕಂಠ , prasAdu 🙂

  4. ರುಚಿರಾ|| ಅಖಾಡದೊಳ್ ಸರಸವನಾಡುವರ್ ಗಡಾ
    ಅಖಂಡಮರ್ದನಪಟುವಲ್ಲಮೊಬ್ಬನುಂ|
    ಅಖಿದ್ರದಿಂ(unwearied) ಹರಿಸಿರೆ ನೆತ್ತರೊಪ್ಪುಗುಂ (ನೆತ್ತರು, ಒಪ್ಪುಗುಂ)
    ಶಿಖಂಡಿಯೀರ್ವರೊಳಿರರಾರುಮೆನ್ನುತುಂ||

    • Enartha?
      Yati?

      • ಕುಸ್ತಿಪಂದ್ಯಗಳೆಲ್ಲ ಬರಿಯ ನಾಟಕ; wwf ಕೂಡ. ಪರಸ್ಪರ ನೆತ್ತರುಕಾರುವಷ್ಟು ಕಾದರೆ ಆಗ ಇಬ್ಬರಲ್ಲಿ ಯಾರೂ ಶಿಖಂಡಿಯಲ್ಲವೆಂದು ಸಾಬೀತಾಗುತ್ತದೆ.
        ಇದು ಯತಿಪ್ರಚುರಛಂದಸ್ಸೆ? ಸರಿಪಾದಗಳ ಆಂತರಿಕಯತಿಯುಳಿದು ಇತರೆಡೆ ಪಾಲಿಸಿದ್ದೇನೆ.

  5. ಕಿರುಗರಿಯಿರ್ದೊಡಂ ಸನಿಹಸಾರುತೆ ಪಾರುತೆ ಬರ್ಪ ಸೊಳ್ಳೆಗುಂ,
    ಬರಿದುರೆ ಕಾಯಮಂ ಬೆಳೆಸುತೊಪ್ಪುವ ದಾನವವರ್ಗಕುಂ, ದಿಟಂ
    ಸುರಿಯುತೆ ಸಂಭ್ರಮಂಬಡುತುಮೀಜಗದೊಳ್ ಸಮೆಸಲ್ಕೆ ಕಾಲಮಂ,
    ವರಮನುಜರ್ಗೆ ಜೀವಕಳೆಯೀವೆಳೆಗೆಂಪಣ ನೆತ್ತರೊಪ್ಪುಗುಂ!

  6. ಕಷ್ಟಪಟ್ಟು ಚಂಪಕಮಾಲೆ ಕಟ್ಟಿದ್ದೇನೆ. ಉದುರಿದ ಮತ್ತು ಬಾಡಿದ ಹೂಗಳ ಜಾಗದಲ್ಲಿ ಸುಂದರ ಹೂಗಳನ್ನು ದಯವಿಟ್ಟು ಪೋಣಿಸಿಕೊಡಿ.

    ಮರಿಯೊಡೆ ತನ್ನಯಂ ದುರುಳ ಜೀವಿಗಳಿಂದಲಿ ರಕ್ಷಿಸಲ್ ಗಜಂ
    ಮರುಗದೆ ದುಷ್ಟರಂ ಮಡಿವ ಹಾಗೆಯೆ ಮಾಡ್ವುದು ಕೊಲ್ವದುಂ ಕರೀ
    ಕರುಣೆಯ ಬಿಟ್ಟಿರಲ್ ಗಜಂ ಸಸ್ಯಗಳಾ ಪಸಿರನ್ನು ಸೇವಿಸಲ್
    ಕರಿಯದು, ಬಾಯಿಗಂ ಪಸಿರ ಚೆಂದವ ಬಿಟ್ಟರೆ ನೆತ್ತರೊಪ್ಪುಗುಂ?

    ( ತನ್ನನ್ನು ಮತ್ತು ಮರಿಯನ್ನು ಕೆಟ್ಟ ಜೀವಿಗಳಿಂದ ರಕ್ಷಿಸಲು ಆನೆಯು ಆಕ್ರಮಿಸಲು ಬಂದ ಪ್ರಾಣಿಗಳನ್ನು ಕೊಂದಿದೆ.ಆನೆಯ ಬಾಯಿಗೆ ಹಸಿರಲ್ಲದೇ ರಕ್ತ ಒಪ್ಪುವುದೇ?

    • ಆಹಾ, ಸುಂದರವಾದ ಕಲ್ಪನೆ. ತಿದ್ದುಗೆಗಳು ಇಂತಿವೆ, ತನ್ನಯಂ ತನ್ನನುಂ, ಮಾಡ್ವುದು ಕೊಲ್ವುದುಂ – ಮಾಡುತೆ ಕೊಲ್ವುದಯ್, ಕರೀ ಕರಿ, ಪಸಿರನ್ನು ಪಸಿರನ್ನೆ.
      ಇನ್ನು ಸಾಮಾನ್ಯವಾಗಿ ತಿದ್ದುಗೆಗಳು ಭಾಷೆಯ ಬಳಕೆಯಲ್ಲಿ, ಹೊಸಗನ್ನಡ ಹಳಗನ್ನಡ ಪದಗಳ ಪ್ರಯೋಗದಲ್ಲಿ ಆಗಬೇಕು. ಜೊತೆಗೆ ಕರಿ, ಗಜ ಇತ್ಯಾದಿ ಪುನರುಕ್ತಿ ಆಗಿವೆ. ಇದನ್ನೂ ತಪ್ಪಿಸಬೇಕು.

    • Nice idea Ankita, 🙂

  7. ಜಗದೊಳೆ ಬಾಲಭಾಸ್ಕರನ ಕಾಂತಿಯನುರ್ಕಿಪ ತೇಜದಂದದಿಂ,
    ಬಗೆಯೊಳಡರ್ದು ಪೂವನೆ ಸುಶೋಭಿತಮಾಗಿಪ ಕೆಂಪಿನಂದದಿಂ,
    ಸೊಗಯಿಸೆ ತೊಂಡೆವಣ್ಣಿನೊಳೊಸರ್ವ ರಸೋಜ್ವಲ ಸೃಷ್ಟಿಯಂದದಿಂ,
    ನಗುವಧರಂಗಳಂ ಭರಿಸಿಚಿಮ್ಮಿಸೆ, ಮಾಯೆಯ ನೆತ್ತರೊಪ್ಪುಗುಂ!
    (ಭಾಸ್ಕರನ ಕಾಂತಿಯನ್ನು ಹೆಚ್ಚಿಪ ತೇಜದಂತೆ,ಹೂವಿನ ಬಗೆಯೊಳಿದ್ದು ಅವುಗಳನ್ನು ಅಂದಗೊಳಿಪ ಬಣ್ಣಗಳಂತೆ,ತೊಡೆಹಣ್ಣನ್ನು ಸೊಗಯಿಪ ರಸಸೃಷ್ಟಿಯಂತೇ,…)

    • ತುಂಬ ಚೆನ್ನಾಗಿದೆ ಮೇಡಮ್, ಕಲ್ಪನೆ ಮತ್ತು ಪದ್ಯ 🙂

    • ಎರಡನೇ ಪಾದದ “…ಪೂವನೆ ಸುಶೋಭಿತ ಗೈವ ಸುವರ್ಣದಂದದಿಂ ” ಎಂಬುದನ್ನು”.. ಪೂವನೆ ಸುಶೋಭಿತಮಾಗಿಪ ಕೆಂಪಿನಂದದಿಂ ” ಎಂದು ಸವರಿದರೆ ಒಳಿತೆ ? ( “ಸುಶೋಭಿತಂಗೈವ ” – ಬಿಂದುಸಹಿತವಾಗಿರಬೇಕಲ್ಲವೆ ? )

      • ಧನ್ಯವಾದಗಳು,ಶಕುಂತಲಾ ನೀವೆಂದಂತೇ ತಿದ್ದಿರುವೆನು.

  8. ನೀಲಕಂಠ ಸರ್ ಕ್ಷಮಿಸಿ. ನಿಮ್ಮ ಕಲ್ಪನೆಯದೇ ಒಂದು ಭಾಗವಾಗಿ ಮುಂದುವರೆಸುವ ಪ್ರಯತ್ನ. . . . . .

    ದ್ರೌಪದಿ ! ಕಾಂತೆ , ನೀನೊಡತಿ ಬಾರಲೆ ಧೂರ್ತನ ರಕ್ತದಿಂದಲೈ
    ಕೋಪದ ಜ್ವಾಲೆಗಂ ಮುಕುತಿ ನೀಡಲದೋಕುಳಿಯಾಟವಾಡುವಾ
    ಶಾಪವ ಕೊಟ್ಟೆನೈ ಸಿಗಿದು ರಕ್ತದೊಳಂ ಮೊಗೆತಂದೆನಲ್ಪವಂ
    ರೂಪಸಿ ನಿನ್ನಯ ಚೆಲುವ ಕೇಶಕೆ ದುಷ್ಟನ ನೆತ್ತರೊಪ್ಪುಗುಂ

    • ತುಂಬ ಚೆನ್ನಾಗಿದೆ 🙂 ಒಳ್ಳೆ ಪ್ರಯತ್ನ. ರಕ್ತದಿಂದಲೈ ಎಂದರೆ ಗಂಡಸಿಗೆ ಹೇಳಿದಂತಲ್ಲವೇ! ರಕ್ತದಿಂದಲೇ ಎನ್ನಬಹುದು. ಜ್ವಾಲೆಗಂ ಎಂಬುದು ಹಿಂದಿನ ಅಕ್ಷರವನ್ನು ಗುರುವಾಗಿಸುವ ಕಾರಣ ವಹ್ನಿಗಂ ಎನ್ನಬಹುದು. ಅಲ್ಪಮಂ. ಶಾಪ ಕೊಡುವುದು ಏನು ಏಕೆ ಅರ್ಥವಾಗಲಿಲ್ಲ 🙂

  9. ಉಳಿದವರ ಪದ್ಯವನ್ನು ಓದಲಿಕ್ಕಾಗಿಲ್ಲ, ಓದುತ್ತೇನೆ, ಈ ಪದ್ಯದ ಆಶಯ ಮರುಕಳಿಸಿದ್ದರೆ revision ಅಂದುಕೊಳ್ಳಿ 🙂

    ಮಲಿನದ ದೋಷೆ ತಾಂ ಕ್ಷಮತೆಯಾಂತು ಜಗುಳ್ದುದು ಯಾಮಮೆಂತೊ ಹಾ
    ನಲುಗಿಪುದಭ್ರಮುಂ ತಿರೆಯುಮಂತೆ ರಜೋಗುಣಮುಂ ನಿಶಾರ್ಭಟ-
    ಪ್ರಲಯದ ಸಾಗರಂಗತದಿವಾಕರನಂ ಸೆರೆಯಿಂ ವಿಮೋಚಿಸಲ್
    ಬಲಿಯೆನೆ ಗೆಯ್ದವೋಲುದಯದಿಕ್ಕಿನ ಬಣ್ಣಕೆ ನೆತ್ತರೊಪ್ಪುಗುಂ

    • ಸೋಮ, ಪದ್ಯವನ್ನು ಓದದೆಯೇ ನೋಡಿದಾಗ ಛಂದಸ್ಸು ಎಡವಿದಂತೆ ಕಾಣುತ್ತಿದೆ (ಸಾಲುಗಳ ಉದ್ದ ಮೊದಲ ಸಾಲಿನಿಂದ ಕೊನೆಯದರವರೆಗೆ ಕಡಿಮೆಯಾಗಿರುವುದರಿಂದ).
      [ಓದಿ ನೋಡಿದಾಗ ಸರಿಯಾಗಿಯೇ ಇದೆ ಎಂದು ಮನವರಿಕೆಯಾಯಿತು :-)]

  10. ಇನಿಯನ ಜೋಡಿಯೊಳ್ ಪುಗುತಿರಲ್ ಕೆರೆಯೇರಿಯ ಪಕ್ಕ ಬಂದೊಡಂ
    ಸನಿಹದೆ ಕೂರುತುಂ ಪರಮಸೌಖ್ಯವನಾಂತಿರಲೊಬ್ಬರೊಬ್ಬರೊಳ್
    ಮನಸಿಜನಾಟದೊಳ್ ಕಲೆತಿರಲ್ ಪೊಸನಾಚಿಕೆಯೊಂದು ಸಾರ್ಚಿರಲ್
    ತನಿಗೊಳುತಿರ್ಪ ಸಂಧ್ಯೆಯನೆ ಮೀರಿಪ ಮೋರೆಯ ನೆತ್ತರೊಪ್ಪುಗುಂ

    • ಚೆನ್ನಾಗಿದೆ ಸರ್ 🙂 ನನಗೂ ಈ ತೆರನಾದ ಮೋರೆಯ ನೆತ್ತರಿನ ಕಲ್ಪನೆ ಬಂದಿತ್ತು, ಆದರೆ ನಿಮಗೆ ದೊರೆತ ಕೆರೆಯೇರಿ, ಸಂಧ್ಯೆ ಇತ್ಯಾದಿ ವಿವರಗಳು ದಕ್ಕಲಿಲ್ಲ 🙂

    • ಚೆನ್ನಾಗಿದೆ ರಾಮಚಂದ್ರರೆ.

  11. ಕಲಿಗಳು ಯುದ್ಧದೊಳ್ ಮೆರೆದಿರಲ್ ನರನಾಡಿಗಳೊಳ್ ಪ್ರವಾಹಿಪಾ, [ವೀರ]
    ಬಲಿಗಳ ರುಂಡಮಂ ಕಡಿದಿರಲ್ ಕೊರಳಿಂ ಮಿಗೆ ಚಿಮ್ಮಿಪಾರುವಾ, [ಭೀಭತ್ಸ]
    ಬೆಳಗಿನ ಶಾಂತದೊಳ್ ಪರಡಿಪಂದದ ಮೂಡಣ ಬಾನ ರಂಗಿನಾ, [ಶಾಂತ]
    ಲಲನೆಯ ಮೋರೆಯೊಳ್ ತುಟಿಗೊಳ್ ಮೆರೆದಿರ್ಪಹ, ನೆತ್ತರೊಪ್ಪುಗುಂ [ಶೃಂಗಾರ]

    • ಇದನ್ನು ಹಿಂದೊಮ್ಮೆ ಆಶುಕವಿತೆಯಲ್ಲಿ ರಚಿಸಿದ ತ್ರಿಪದಿಯಿಂದ ಹಿಗ್ಗಿಸಿದ್ದು. ತ್ರಿಪದಿ ಹೀಗಿತ್ತು [ಕೆಂಪು ಬಣ್ಣವ ಕುರಿತು] ::
      ಕಲಿಗsಳs ನರದಲ್ಲಿs ಬಲಿಗsಳs ಕೊರಳಲ್ಲಿs
      ಬೆಳಗಿsನs ಬೆರಗs ಬೆಡಗಲ್ಲಿs – ಮಿಗಿಲಾಗಿs
      ಲಲನೆsಯs ಮೊಗದs ಸಿರಿಯಲ್ಲಿs

      • ಆಹಾ, ನಿಮ್ಮ ತ್ರಿಪದಿಯೇ ಚೆನ್ನಾಗಿದೆ, ಚಂಪಕಕ್ಕಿಂತ. ನೆತ್ತsರೊಪ್ಪುಗುಂ ಎಂದಿಟ್ಟುಕೊಂಡು ತ್ರಿಪದಿಪೂರಣವನ್ನೇ ಕೊಡಬಹುದು 🙂

  12. ಯುಕ್ತಚಿಕಿತ್ಸಮಂ ಕುಡುತಿರಲ್ ಗುಣಮಾಗಿಸಲೆಂದೆ ಯೋಗ್ಯರಿಂ
    ಸೂಕ್ತವಿಧಾನದಿಂದಗದವನ್ನನುದಾನಕೆ ಬೇಳ್ಪುದಾದೊಡಂ
    ಶಕ್ತರು ವೈದ್ಯರಾ ಪರಿಜನರ್ ವಿಧವಾದ ಪರೀಕ್ಷೆ ಗೈಯುತುಂ
    ರಕ್ತವಿಭಾಗಗಳ್ ಗುಣಗಳೊಳ್ ಸಮನಾಗಿರೆ ನೆತ್ತರೊಪ್ಪುಗುಂ

    [ಅಗದ = ಆರೋಗ್ಯ, good health]

  13. ಅಂದದ ಭೂಮಿ,ನೊಂದು ,ದಿಟದಿಂ ಸಲೆ ಪೊಂದದಿರಲ್ಕೆ ಶಾಶ್ವತಂ
    ಕುಂದಿಸಿಕೊಲ್ಲುತುಂ ಸಲುವ ,ಬಂಜೆಯ ಪಟ್ಟಮನಕ್ಕಟಾ!ಸದಾ
    ಕಂದರನೀಯುತುಂ,ಹರುಷಮುರ್ಕಿಸಿ, ಬಾಳಿಸೆ ಲೋಕರಾಜಿಯಂ,
    ಮುಂದಣ ಬಂಧಮಂ ಬೆಸೆವ ಕೊಂಡಿಯೊಲಬ್ಬೆಯ ನೆತ್ತರೊಪ್ಪುಗುಂ!

    (ಭೂಮಿಯನ್ನು ಬಂಜೆಯನ್ನಾಗಿಸದೇ,ಹರುಷವನ್ನು ತುಂಬಿ,ಲೋಕರಾಜಿಯನ್ನು ಬಾಳಿಸುವ ಕೊಂಡಿಯಾಗಿ ತಾಯಂದಿರ ನೆತ್ತರೊಪ್ಪುತ್ತಿದೆ)

    • ಚೆನ್ನಾಗಿದೆ ಕಾಂಚನಾ. ಹರುಷಮುರ್ಕಿಸಿ – ಮುದಮನುರ್ಕಿಸಿ- ಆದಲ್ಲಿ ವಿಭಕ್ತಿಪ್ರತ್ಯಯವು ಸರಿಯಾಗುವುದು.

  14. ಬಪ್ಪುದದೇನಲೇ ಬದುಕಿನೊಳ್ ಮನದಾಸೆಗಮಾಸರಿರ್ಪುದೇಂ
    ತಪ್ಪಿದಡೇನಲೇ ನಡೆಯಲಾ ಪಥಮೋ ಇದೊ ಮೇಣೆನುತ್ತುಮೇ
    ತೆಪ್ಪಗೆ ಕುಳ್ಳಿರುತ್ತೆ ದಿನಮಂ ಕಳೆವಾತನಮಿಂತು ದೈನ್ಯದಿಂ
    ತಪ್ಪಿಸಿ ತೋಷದಿಂದಿರಗುಡಲ್ ‘ಬಿ ಧನಾಂಕ’ದ ನೆತ್ತರೊಪ್ಪುಗುಂ

    ಅಯ್ಯೋ, ಮುಂದೆ ಏನಿದೆಯೋ ಏನೋ, ಮನಸ್ಸಿನ ಆಸೆ ನೆರವೇರುತ್ತೋ ಇಲ್ವೋ, ಹೀಗೆ ನಡಕೊಂಡರೆ ಒಳ್ಳೇದೋ ಹಾಗೆ ನಡಕೊಂಡರೆ ಒಳ್ಳೇದೋ ಎಂದೆಲ್ಲ ಚಿಂತಿಸುತ್ತಲೇ ದಿನಗಳೆವ ನಿರಾಶಾವಾದಿಗಳಿಗೆ, ಜಡರಿಗೆ ಬಿ ಪೊಸಿಟಿವ್ ಬ್ಲಡ್‌ ಕೊಟ್ಟರೆ ಸರಿ ಹೋಗ್ತದೆ 🙂

    • Fine imagination.
      ಇತರ ಶೋಣಿತವರ್ಗದವರಿಗೆ
      ಹಿತವಹುದೆ ಬಿಽ ಪಾಸಿಟಿವ್ ಪೇಳ್
      ಗತಿಯು (pause)ಪಾಸಲೆ ಪಾಸಿಟಿಽವಿನ(Positive)!
      ಮೃತಿಯನಪ್ಪುವ(ನು) ಚಣದೊಳೇ|

  15. ಬನದೊಳು ರಾಜನಾಗಿರಲು ಶಾಂತಿಯ ರಕ್ಷಿಸು ,ಕೊಲ್ಲಬೇಡೆನಲ್
    ವನದಲಿ ರಾಜನೇನು ಹಸು- ಜಿಂಕೆಯ ತಿನ್ನದೆ ಹುಲ್ಲ ತಿನ್ವನೇಂ?
    ತನು ಮನ ವೀರನಾ ಮೊಗಕೆ ಮಸ್ತಕ ಮಾಂಸದ ನೆತ್ತರೊಪ್ಪುಗುಂ
    ವನವಿಭುವಾಗಲಂ ಪಸಿರ ಹುಲ್ಲದು ತಿನ್ನಲು ಒಲ್ಲ ಹೇಡಿಯೊಲ್
    (ವನದಲ್ಲಿ ರಾಜನಾಗಿ ಶಾಂತಿ ರಕ್ಷಿಸು ಎಂದರೆ, ವನರಾಜನು ಹಸು-ಜಿಂಕೆಗಳನ್ನಲ್ಲದೇ ಹುಲ್ಲು ತಿನ್ನುವನೇ? ವೀರನ ಬಾಯಿಗೆ ನೆತ್ತರೊಪ್ಪುಗುಂ)

    • 1) ರಾಜನಾಗಿರುತೆ… ಜಿಂಕೆಯನಲ್ಲದೆ… ಹುಲ್ಲ ಮೆಲ್ವನೇಂ… (ಒಂದು ವಾಕ್ಯದಲ್ಲಿ ಒಮ್ಮೆ ಮೆಲ್ವನೇಂ ಬಂದರೆ ಸಾಕು. ಹಾಗಾಗಿ ಜಿಂಕೆಯನಲ್ಲದೆ ಎಂದರೆ ಮೇಲು)
      2) ವೀರನಾ ತಪ್ಪು. ವೀರನ ಸರಿ.
      3) ನಾಲ್ಕನೆಯ ಪಾದದ ವಿಷಯವು ಮೊದಲೆರಡುಪಾದಗಳ ಪುನರಾವೃತ್ತಿ. ಹುಲಿಯು ತಿನ್ನುವ ಪ್ರಾಣಿಯೂ ಮತ್ತೊಂದು ಪ್ರಾಣಿಯನ್ನು ತಿನ್ನುತ್ತದೆ ಎಂಬ ತಿರುವನ್ನು ನಾಲ್ಕನೆಯ ಪಾದದಲ್ಲಿ ಕೊಡಬಹುದು.
      4) ತನುಮನವೀರನ, ಮಸ್ತಕಮಾಂಸದ – ಹೀಗೆ ಸೇರಿಸಿ ಬರೆಯಬೇಕು. ಪ್ರತ್ಯಯರಹಿತಶಬ್ದಗಳು ಒಬ್ಬೊಂಟಿಯಾಗಿ ನಿಲ್ಲವು.

  16. ಭಾವದಲ್ಲಿ ಪರಿಹರಿಸಿದ್ದೇನೆ: Diagnostics labಗೆ ಹೆಚ್ಚುಹೆಚ್ಚು ನೆತ್ತರೊಪ್ಪುಗುಂ.
    ಪ್ರಯೋಗಾಲಯಕ್ಕಂ ಸುಪರ್ಯಾಪ್ತಮಾನಂ (ಪರ್ಯಾಪ್ತOptimum, ಮಾನnumber)
    ಕುಯೋಮುರ್ರೊ ಎಂಬರ್ ಬರೋರಲ್ದೆ ಮೇಣಿಂ|
    (For the lab)ಸುಯೋಗಂ (increase)ಪ್ರಚೀಯಂಗೊಳಲ್ ರೋಗಿವರ್ಯರ್-
    ದಯಾವಂತರಾಧಿಕ್ಯದಿಂದೀಗೆ ನೆತ್ತರ್||
    (ಎರಡನೆಯ ಪಾದದಲ್ಲಿನ ಭಾಷಾಶೈಥಿಲ್ಯವನ್ನು ಮನ್ನಿಸಬೇಕು)

    • ಇದಾವ ನ್ಯಾಯ!! ಭಾವದಲ್ಲಿ ಪರಿಹರಿಸಿದ್ದೇನೆಂದರೆ… ನಾನೂ ನನ್ನ ಮನಸ್ಸಿನಲ್ಲಿ, ಕನಸಿನಲ್ಲಿ, ಕಲ್ಪನೆಯಲ್ಲಿ ಪರಿಹರಿಸಿದ್ದೇನೆಂದರೆ ಒಪ್ಪುತ್ತೀರಾ? ಮನಸ್ಸಿನಲ್ಲೇ ಮಂಡಿಗೆ ತಿನ್ನುವುದೆಂದರೆ ಇದೇನಾ?!!

      • ಹೌದು. ಮನಸ್ಸಿನ, ಕನಸಿನ, ಕಲ್ಪನೆಯ ಪರಿಹಾರಗಳೆಲ್ಲ ಮನಸ್ಸಿನಲ್ಲೇ ಮಂಡಿಗೆ ತಿನ್ನುವಂಥವು ಏಕೆಂದರೆ ಅವು ಲಿಪಿಯಲ್ಲಿ ವ್ಯಕ್ತವಾಗವು – noncommunicable. ನನ್ನ ಭಾವಪರಿಹಾರವಾದರೋ ಕೇವಲ ಸಮಸ್ಯೋಕ್ತಿಯನ್ನು ಮಾರ್ಪಡಿಸಿಕೊಂಡ ಲಿಪಿರೂಪ – communicable 😉

  17. ಜೀವಿಯಸಂಕುಲಕ್ಕೊಳಿತ ಮಾಡಲು ಪೋಗುತೆ ಯುದ್ಧರಂಗಕಂ
    ಸಾವನು ಕಂಡಿರಲ್ ಭಯದಿ ,ಹೇಡಿಯ ಬೆನ್ನಿಗೆ ರಕ್ತಮೊಪ್ಪುಗಂ
    ನೋವನು ನುಂಗುತಲ್ ಮರಣಕಂಜದೆ ತನ್ನಯ ದೇಶ ರಕ್ಷೆಗಂ
    ಜೀವದ ಹಂಗನು ತೊರೆವ ವೀರೆದೆಗಂ ನಿಜ ನೆತ್ತರೊಪ್ಪುಗುಂ
    (ಶತ್ರು ದೇಶದೊಂದಿಗೆ ಹೋರಾಡದೇ ಬೆನ್ನು ಮಾಡಿ ಓಡಿದ ಹೇಡಿಗೆ ,ಬೆನ್ನಲಿ ರಕ್ತ ಕಾಣ್ವುದು. ವೀರ ಮರಣ ಹೊಂದಿದವನ ಎದೆಯಲಿ ನೆತ್ತರೊಪ್ಪುಗುಂ)

    ಎಷ್ಟು ವ್ಯಾಕರಣ ದೋಷಗಳಿವೆಯೋ…. . . ಭಯವಾಗುತ್ತಿದೆ……

    • ನುಂಗುತುಂ, ಹಂಗನೇ (ಛಂದೋದೋಷಕ್ಕೆ ತಿದ್ದುಗೆ), ವೀರನೆದೆಗಂ ಆಗಬೇಕು. ವೀರನ ವಕ್ಷಕೆ ಎಂದು ತಿದ್ದಬಹುದು. ವೀರ ಎದೆ ವೀರೆದೆ ಎಂದು ಸಂಧಿ ಮಾಡುವಂತಿಲ್ಲ.
      ಕಲ್ಪನೆ ತುಂಬ ಚೆನ್ನಾಗಿದೆ 🙂

    • ಜೀವಚಯಕ್ಕಮೊಳ್ಳಿತನೆ ತಾಂ ಬಯಸುತ್ತೆ ರಣಾಂಗಣಂಬುಗಲ್
      ಸಾವಿನ ಭೀತಿ ಬೆಂಬಿಡದ ಹೇಡಿಯ ಬೆನ್ನಿಗೆ ನೆತ್ತರೊಪ್ಪುಗುಂ
      ನೋವಿನೊಳಾಳ್ದುಮುಚ್ಚಧೃತಿಯಿಂ ನಿಜಕಾರ್ಯಮನಾಂತು ನಿಂತಿರಲ್
      ಜೀವದ ಹಂಗನೇ ತೊಡೆಯೆ ನೆತ್ತರದೊಪ್ಪುಗು ವೀರವಕ್ಷದೊಳ್

      ತಿದ್ದಬೇಕು ಎಂಬ ಉತ್ಸಾಹದಿಂದ ಅಲ್ಲ, ಕಲ್ಪನೆ ತುಂಬ ಹಿಡಿಸಿತು, ಅದಕ್ಕೆ ನಿನ್ನವೇ ಆದಿಪ್ರಾಸಪದಗಳನ್ನು ಬಳಸಿ ಬರೆದೆ. ಹಳಗನ್ನಡೀಕರಣ, ಹೆಚ್ಚು ಹೆಚ್ಚು ಸಂಧಿಸಮಾಸಗಳು, ರಕ್ತಮೊಪ್ಪುಗುಂ, ನೆತ್ತರೊಪ್ಪುಗುಂ ಇವುಗಳ ಸ್ಥಾನದಲ್ಲಿ ಪುನರಾವೃತ್ತಿಯ ತಪ್ಪಿಸುವಿಕೆ, ತನ್ಮೂಲಕ ಏಕತಾನತೆಯ ನಿವಾರಣೆ ಇವುಗಳ ಪ್ರಯತ್ನ.

      • ಧನ್ಯವಾದ ಸರ್. ತಮ್ಮೆಲ್ಲರ ಇಂತಹ ತಿದ್ದುಗೆ ನನ್ನನ್ನು ಸ್ದಲ್ಪ ಸರಿದಾರಿಗೆ ತರುತ್ತಿದೆ. ಈ ಕಲ್ಪನೆ ಮೊನ್ನೆಯಷ್ಟೇ class room ನಲ್ಲಿ ಕಲಿತ ಪಾಠದ್ದು.

      • ರಣಾಂಗಣಂಬುಗಲ್ – ರಣಾಂಗಣಮಂ ಪುಗಲ್ ಎಂದಾಗಬೇಕಲ್ಲವೆ?

    • ಅಂಕಿತಾ, ಒಳ್ಳೆಯ ಕಲ್ಪನೆ. ದೇಶಕ್ಕಾಗಿ ಹೋರಾಡುವ ವೀರಯೋಧನ ನೆತ್ತರಿನ ಬಗ್ಗೆ ಬರೆಯಬೇಕೆಂದು ಯೋಚಿಸಿದ್ದೆ. ನಿನ್ನ ಪದ್ಯವನ್ನು ಓದಿದ ಬಳಿಕ ಬೇರೆ ಕಲ್ಪನೆಯನ್ನು ಮಾಡಬೇಕಾಯಿತು. 🙂

  18. ತಾಯಿಯ ಗರ್ಭದೊಳ್ ಮುದದಿನಾಲಿಸುತಾಕೆಯ ದಿವ್ಯಗಾನಮಂ,
    ನೋಯದೆ ಬಾಳಲೆಂದುಪಕರಿಪ್ಪ ಸುಸಂಸ್ಕೃತಗೀತವಿದ್ಯೆಯಂ,|
    ಮಾಯೆಯ ಮೈಮೆಯಿಂ ಪಡೆದ ಬಾಲಕಿ ಪಾಡುತುಮತ್ಯಮೋಘದಿಂ,
    ಧ್ಯೇಯಮನೊಂದಿರಲ್,ಮೆರೆಯೆ,ಮೈಯೊಳೆ ವಂಶದ ನೆತ್ತರೊಪ್ಪುಗುಂ ||

    • chennaagi madam 🙂

      • ಧನ್ಯವಾದಗಳು ನೀಲಕಂಠರೆ.

        • ಎಂಥ ಹಾಸ್ಯಪ್ರಜ್ಞೆ! “ಚೆನ್ನಾಗಿ ಮೇಡಂ” ಎಂದರೂ ಧನ್ಯವಾದ ನುಡಿದಿರುವಿರಲ್ಲ!

          • ಅಪೂರ್ಣತೆಯಲ್ಲಿ ಪೂರ್ಣತೆಯನ್ನು ಪರಿಭಾವಿಸುವ ಧನ್ಯಜೀವದವರು ಶಕುಂತಲಾ ಮೇಡಮ್ಮವರು. ನೀವಾದರೋ…. (ಬೇಡ ಬಿಡಿ)

          • 🙂

  19. ಎತ್ತರು=ಎತ್ತರ
    ಅಮಿತದಾಕರ್ಷಣೆಯ ಫ್ರಾನ್ಸಿನೀಫೆಲ್ ನೋಡು-
    ಪಮೆಯಿರ್ಪುದೇನೊಪ್ಪಮಿಡಲುಮದಕೆ|
    ಗಮಕವಾರಿತರ ಭೂಕೌತುಕಗಳಿಂಗೆ (six other wonders) ನೀ-
    ಳಮಿನಾರಿನೆತ್ತರೊಪ್ಪುಗುಮೆಂಬೆನಾಂ||
    (ನೀಳಮಿನಾರು – ಅರಿಸಮಾಸವೆ?)

  20. ಚಂದವಾದ ತನ್ನ ಮಗುವ-
    ನೊಂದು ಮುಂಗುಸಿಯೊಡೆ ಬಿಟ್ಟು
    ಬಿಂದಿಗೆಯನು ಹಿಡಿದು ನಾರಿ ನದಿಗೆ ಹೊರಟಳು
    ಬಂದ ತಾಯಿ ಅದನು ನೋಡಿ
    ನಿಂದು ಪೇಳುತಿಹಳು “ಅಕಟಾ
    ಕಂದನನ್ನು ರಕ್ಷಿಸದೇ ನೆತ್ತರೊಪ್ಪುಗುಂ?”

    • bhOga-shaTpadi?
      ಅಕಟಾ – 4 maatras. ರಕ್ಷಿಸದೇ – ಸದೇ, u- pattern should not come.
      Meaning / intent is not clear, though the story is known.
      Appreciate fitting the paada-bhaaga into a SHaTpadi 🙂

  21. Ankita, thanks for showing that this samasyOkti can be adapted to trimAtra. I had a real tough time adapting it to pancamAtra (in 19), that too unsatisfactorily.
    ೧) “ಇತ್ತ ಹೋದ” ಎಂದರೆ, “ಎತ್ತ?” ಎಂದು ಕೇಳಿದ.
    ೨) (ಯಾವನೋ ಇನ್ನಾವನಿಗೋ) ಎತ್ತಿ ’ರೊಪ್’ ಎಂದು ಹೊಡೆದ
    ೩) ಹಾವು ಹುತ್ತದೊಳಗೆ ಸರಸರನೆ ’ಪುಗುಂ’
    ಇತ್ತಪೋದನೆನ್ನೆ ಕೇಳ್ದ-
    ನೆತ್ತಿಪೊಡೆದನಿಂತು ತಾಂ|
    ಹುತ್ತದೊಳಗೆ ಪಾವು ತ್ವರದಿ-
    ನ್“ಎತ್ತ?”, “ರೊಪ್”, “ಪುಗುಂ” ಗಡಾ||

    • ಇದು ಯಾರು ಬರೆದ ಕತೆಯೋ, ನಮಗಾಗಿ ಬಂದ ವ್ಯಥೆಯೋ 🙂

      • ಯಾಕೆ? ಈ ಪರಿಹಾರಕ್ರಮವು ಶಾಸ್ತ್ರಿಯವಾದುದು. ಹೆಸರು ನೆನಪಿಗೆ ಬರುತ್ತಿಲ್ಲ.

        • ಯಾವುದು ಶಾಸ್ತ್ರೀಯ? ಪರಿಹಾರಕ್ರಮವೇ? ಛಂದಸ್ಸೇ? ಪರಿಹಾರಕ್ರಮ ಅತಿಪೃಚ್ಛಪರಿಹಾರ ತಾನೇ? ಕುಂತೀಸುತೋರಾವಣಕುಂಭಕರ್ಣಃ ಎಂಬಂತೆ… ನನಗೂ ಗೊತ್ತಿಲ್ಲ. ಕಾಳಿದಾಸ ಸಿನೆಮಾದಲ್ಲಿ ನೋಡಿದ್ದು 🙂

Leave a Reply to K.B.S Ramachandra Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)