Feb 142016
 

Stanstead-ice-sculpture

  98 Responses to “ಪದ್ಯಸಪ್ತಾಹ ೧೮೯: ಚಿತ್ರಕ್ಕೆ ಪದ್ಯ”

  1. ತರಂಗಯುಗಪಕ್ಷದಿಂ ಶರಸಮಾಕುಲಾಂಗಂಗಳಿಂ
    ಶರೀರದೆರಕಂಗೊಳಲ್ ಶರಧಿ ಮೈಯನಾನುತ್ತುಮೀ
    ಧರಾಂಗನೆಗೆ ವಂದಿಸಲ್ಕಲೆತನೇಂ ತದೀಯಾತ್ಮಜಾ-
    ವರತ್ವದ ಮಹತ್ತಿನಿಂ ಸಲಿಸೆ ಧನ್ಯತಾಭಾವಮಂ

    ಧರಿತ್ರಿಗೆ ಅವಳ ಪುತ್ರಿಯರನ್ನೆಲ್ಲ (ನದಿಗಳು) ತಾನು ವರಿಸಿದ್ದರ ಧನ್ಯತಾಸೂಚಕವಾಗಿ ವಂದಿಸಲು ತರಂಗದ ರೆಕ್ಕೆವೊತ್ತು, ಜಲವೇ ಮೈಯಾದ ಸಮುದ್ರನು ಬಂದನೇ?

    • ತುಂಬ ಚೆನ್ನಾದ ಕಲ್ಪನೆ

    • ಸೊಗಸಾದ ಕಲ್ಪನೆ ನೀಲಕಂಠರೆ. ಚಿತ್ರದ ಹಿನ್ನೆಲೆಯಲ್ಲಿ ಗೋಡೆ,ಕಿಟಕಿಗಳನ್ನು ನೆನಪಿಸುವಂಥ ರೇಖೆಗಳಿಲ್ಲದಲ್ಲಿ ಚೆನ್ನಾಗಿತ್ತು. ಮೂರನೇ ಪಾದದಲ್ಲಿ “ವಂದಿಸಲ್ಕಲೆತನೇಂ”- “ವಂದಿಸಲ್ಕಲೆದನೇಂ” ಎಂದಾಗಬೇಕೆ ?

      • ಧನ್ಯವಾದಗಳು, ಚೇದಿಯವರೆ, ಮೇಡಮ್ ಅವರೆ.
        ಕಲೆ – ಒಂದುಗೂಡು ಎಂಬರ್ಥದಲ್ಲಿ ಬಳಸಿದ್ದೇನೆ. ನಿಜ, ನಾನೂ ಅಂದುಕೊಂಡೆ, ಕಿಟಕಿಗಳಿಲ್ಲದಿದ್ದರೆ ಚೆನ್ನಾಗಿತ್ತು. ಆದರೂ, ಅತ್ತೆಯ ‘ಮನೆಗೆ’ ಬಂದಿದ್ದಾನೆ ಎಂದುಕೊಂಡರಾಯಿತು, ಬಿಡಿ 🙂

    • Very Nice Neelakanta. ninna makkalu nannannu seri nanna baalella uppaayitu anta bevaru suristidaanaa? 🙂

    • ಸಾಮಾನ್ಯವಾಗಿ ಶರೀರ’ವೆ’ರಕಂಗೊಳಲ್ ಎಂದುಬಿಡುತ್ತೇವೆ. ಶರೀರ’ದೆ’ರಕಂಗೊಳಲ್ ಎಂದಿರುವುದು ಪ್ರೌಢಿಯಿಂದಿದೆ.

      • Yes 🙂 because “I” am not this body, am someone who bears this body, and so I have objectified the body.

        • ಶರೀರದೆರಕಂಗೊಳಲ್ ಎಂಬುದು passive voiceನಲ್ಲಿದೆ ಎಂಬುದಷ್ಟೇ ನನ್ನ ಗ್ರಹಿಕೆಯಾಗಿತ್ತು. ಇಷ್ಟೆಲ್ಲ ತತ್ತ್ವವು ಅಲ್ಲಿದೆ ಎಂದು ತಿಳಿಸಿಕೊಟ್ಟುದಕ್ಕಾಗಿ ಧನ್ಯವಾದಗಳು. ಸನ್ಯಾಸಕ್ಕೆ ನನ್ನ ಮನಸ್ಸು ಸಜ್ಜಾದಕೂಡಲೆ, ಬುದ್ಧಂ (you) ಶರಣಂ ಗಚ್ಛಾಮಿ.

    • ಪದ್ಯಭಾವವು ಚೆನ್ನಾಗಿದೆ; ಬಂಧವೂ ಸೊಗಸಾಗಿದೆ. ಅಭಿನಂದನೆಗಳು. ಆದರೆ ಒಂದು ಪದಪ್ರಯೋಗ ಚಿಂತ್ಯ. ವಂದಿಸಲ್ಕೆಳಪನೇಂ? ಅಥವಾ ವಂದಿಸಲ್ಕೆಸವನೇಂ? ಎಂಬಿತ್ಯಾದಿ ಸವರಣೆಯನ್ನದಕ್ಕೆ ಮಾಡಬಹುದು.

  2. ಅಮೂರ್ತತೆಯ ಮೂರ್ತತಾವರಣಮಂ ನೆಗಳ್ದೀ ಕಲಾ-
    ಭಿಮಾನಿನಿಯ ಪೂಜಕಂ ವರಕಲಾವಿದಂ ರೂಪಿಸು-
    ತ್ತುಮಾ ಶ್ರಮದ ಸಂಯಮವ್ರತದ ನಿತ್ಯಸಂಕೇತಮಿಂ-
    ತುಮೀ ಬೆಮರ ಬಿಂದುವಂ ರಚಿಸಿ ತೋರ್ದನೇಂ ತನ್ನನೇ

    ಈ ತೆರನಾದ ಕಲೆಯ ಆವರಣದಲ್ಲಿ ಅಮೂರ್ತತೆಯನ್ನು ತುಂಬಿಡಲು ಕಲೋಪಾಸಕನೊಬ್ಬ ಎಷ್ಟು ಶ್ರಮದಿಂದ ಎಷ್ಟು ತಪಸ್ಸುಗೈಯಬೇಕು! ಅದರ ಸೂಚಕವಾಗಿಯೇ ಒಂದು ಬೆವರ ಹನಿಯನ್ನು ರಚಿಸಿ ಈ ಕೃತಿಗೆ ಅಂಟಿಸಿ ತನ್ನತನವನ್ನು ತೋರಿದನೇನೊ…!

  3. The first three lines refer to an earlier sculpture that has thawed and disintegrated into its stellar elements; the sculpture in the last line is the given pic.
    ದ್ರುತಪದ|| ತನುವ(ತೆಳ್ಳಗಿನ) ರೆಂಕೆಗಳುಮಾದಿಯೊಳುಂ ಮೇಣ್ (ಸುಲಭದಲ್ಲಿ ಮುಕ್ಕಾಗುವಂಥ ಬಿಂಕಬಿಗುಮಾನಗಳು)
    (ನಂತರ) ಮೊನಚುದೋಳ್ವೆರಳು ವಿದ್ರವಗೊಂಡುಂ (ಅಹಂಕಾರಾದಿಗಳು)|
    ತನುವಿಲೀನಗೊಳುತಂತ್ಯದೆ(ಪ್ರಾಣ) ಆತ್ಮಂ(ಕಲಾವಂತಿಕೆ)
    ಕೊನರಿತೇನರಸಿ ಶಿಲ್ಪಮನನ್ಯಂ (ಅನ್ಯಂ. Not ಅನನ್ಯಂ)||

  4. ಕರಟಿಯೊಣಂಗುತಿರ್ಪ ಮರನೊಳ್ ಪಸುರಿಂದರೆ!ಮುಂದೆ ತೋರಿರಲ್,
    ನರಪದಘಾತದಿಂ ಬಳಲುತುಂ ಭುವಿ,ರಾಗಮನೊಂದನುರ್ಕಿಸಲ್,
    ಧರಣಿಯಿನೆತ್ತರಂ ಬಳೆದೊಡಂ ,ಕರಗುತ್ತುಮೆ ಬರ್ಪೊಡಂಬರಂ,
    ಬೆರಗದೆ? ಭಾವದಶ್ರು ಪೊರ ಪೊಣ್ಮಿರೆ ಶಿಲ್ಪಿಯನಾಂತ ಶಿಲ್ಪದೊಳ್!

    (ಒಣಗಿದ ಮರವೇ ಚಿಗುರುವಾಗ, ಕಾಲ್ತುಳಿತಕ್ಕೊಳಗಾದರೂ ಭುವಿಯು ಪ್ರೀತಿಯನ್ನೇ ಉಕ್ಕಿಸುತ್ತಿರುವಾಗ, ಧರಣಿಗೂ ಉನ್ನತವಾದ ಸ್ಥಾನದಲ್ಲಿದ್ದೂ ಕರಗಿ ನೀರಾಗಿ ಅಂಬರವು ಬರುವಾಗ, ಶಿಲ್ಪಿಯಿಂದಾದ ಶಿಲ್ಪದಲ್ಲಿ ಭಾವನೆಯು ಜಾಗೃತವಾಗಿರೆ ಬೆರಗೇನು?)

    • Good expression. (’ಮುರು’ಟಿಯೊಣಂಗು, ಧರಣಿ’ಗಿಮೆ’ತ್ತರಂ, ’ಬೆ’ಳೆದೊಡಂ)

      • ತುಂಬ ಸೊಗಸಾದ ಕವಿತೆ! ಪೊರವೊಣ್ಮಿರೆ ಎಂದು ಸವರಿಸಿದರೆ ಮತ್ತೂ ಉತ್ತಮ. ಒಳ್ಳೆಯ ಭಾವ-ಬಂಧಗಳ ಚಂಪಕಮಾಲಿಕೆ. ಅಭಿನಂದನೆಗಳು.

  5. ಇದು ದಲ್ ಕಾವ್ಯಮನಂ ಕರಂಗಿ ಕವಿತಾವಾರಾಶಿಯಾಗಿ ಪ್ರವಾ-
    ಹದ ರೂಪಂದಳೆಯುತ್ತುಮಿರ್ಪ ಸಮಯಂ, ತತ್ಪ್ರೀತಿಸಂಕಲ್ಪಕಾ-
    ಸ್ಪದಮೆಂಬೊಲ್ ಮೊದಲೊಂದು ಬಿಂದು ಪನಿಸಿತ್ತೇನೀ ತೆರಂ, ರೆಂಕೆಗ-
    ಳ್ಗೆದರುತ್ತುಂ ಗಗನಕ್ಕೆ ಪಾರ್ವ ಮೊದಲೊಳ್, ವಾಲ್ಮೀಕಿಗಂತಾದವೋಲ್

    ಸುಪ್ತವಾಗಿದ್ದ ಕಾವ್ಯಮನಸ್ಸು ಕರಗಿ ಹರಿವ ಮುನ್ನ ಅದಕ್ಕೆ ಪೂರ್ವಸೂಚಕವಾಗಿ ಒಂದು ಹನಿಯುದುರುವ ರೀತಿಯಿದು, ರೆಕ್ಕೆಗೆದರಿ ಭೂಮಕ್ಕೆ ಪಾರ್ವ ಮೊದಲ್ಗೆ. ಕ್ರೌಂಚಪ್ರಸಂಗದಿಂದ ವಾಲ್ಮೀಕಿಗಾದಂತೆ.

    • Two days into the week, and just six verses?
      ಅಂದು ಲೋಗರ ರೀತಿಯಂ ಕಾಣುತಾದಿಕವಿ
      ನೊಂದಿರ್ಪ, ಕರಗಿರ್ಪ, ಕವನಿಸಿರ್ಪಂ|
      ಇಂದು ಕರಗಿರ್ದೊಡಂ ಕಲೆಯ ವಸ್ತುವೆ ಇಲ್ಲಿ
      ಮಂದದಿಂದಾಧುನಿಕಶಿಲ್ಪಿ(ಪದ್ಯಪಾನಿ)ಯಿರ್ಪಂ||

    • ಪದ್ಯ ಚೆನ್ನಾಗಿದೆ; ವಿಶೇಷತಃ ಕಲ್ಪನೆ ಸೊಗಸಾಗಿದೆ. ಆದರೆ ಕಾವ್ಯಮನಂ ಎಂಬ ರೂಪ ಅಸಾಧು.ಇದು ಕಾವ್ಯಮಂ ಎಂದೇ ಆಗಬೇಕು. ಅಂತೆಯೇ ಎಂಬೊಲ್ ಎನ್ನುವ ರೂಪವೂ ಅಯುಕ್ತ. ಇದು ಎಂಬವೊಲ್ ಎಂದಾಗಬೇಕು. ಸಂಸ್ಕೃತಪದಗಳೊಡನೆ ಬಂದಾಗ ಮಾತ್ರ ಎಂಬೋಲ್ ಆಥವಾ ಎಂಬೊಲ್ ಎನ್ನುವ ರೂಪಗಳೂ ಬರಬಹುದು. ಉದಾ: ಇಂದ್ರಂಬೊಲ್, ಇಂದ್ರಂಬೋಲ್ ಇತ್ಯಾದಿ.
      ಇವೆಲ್ಲ ಹಳಗನ್ನಡಕ್ಕೆ ಸಲ್ಲುವ ನಿಯಮಗಳು. ಹಳಗನ್ನಡವನ್ನೇ sideline ಮಾಡುವಂಥವರಿಗೆ ವೃತ್ತ-ಕಂದಗಳನ್ನೂ avoid ಮಾಡಿರಿ ಎನ್ನಬೇಕಾದೀತು! 🙂

      • ಧನ್ಯವಾದಗಳು ಸರ್. ಅದು ಕಾವ್ಯ-ಮನಂ, ಕವಿಯ ಮನಸ್ಸು 🙂

  6. The spot is someplace in the Himalayas, and the person in the pic is the sculptor. The sculpture is opposite of him (not in pic) and it is yet incomplete, the reason being that the sculptor is encrusted by ice while he was half way through the work.
    ರಥೋದ್ಧತ|| ಶಿಲ್ಪಮಿರ್ಪುದೆದುರೊಳ್ ನಸಂಪದಂ (incomplete)
    ಶಿಲ್ಪಿಯಾದನೆ ತುಷಾರಲೇಪಿತಂ|
    ನಾಲ್ಪದೈನ್ಯತೆಯೊಳೆಂಬ ದೇವಗಂ
    ಕಲ್ಪಿಸೈ ವರವ ಗೈಯೆ ಪೂರ್ಣಮಂ||

    • ಆಹಾ, ಸುಂದರವಾಗಿದೆ 🙂

    • ಕಲ್ಪನೆ ಚೆನ್ನಾಗಿದೆ. ಆದರೆ ಪೂರ್ವಪೀಠಿಕೆಯೂ ಪದ್ಯದೊಳಗೇ ಇರುವಂತಿದ್ದಲ್ಲಿ ಒಳಿತು. ಏಕೆಂದರೆ ಇದು ಮುಕ್ತಕವಷ್ಟೆ!
      ನಸಂಪದಂ ಎಂಬಂಥ ರೂಪಗಳು ಅಸಾಧು. ಅಸಂಪದಂ ಎಂಬುದು ಯುಕ್ತ. ಆಗ ಸಂಧಿ ಅನಿವಾರ್ಯ. ಇಲ್ಲಿ ಹಾಗೆ ಮಾಡಿದರೆ ಛಂದಸ್ಸು ಕೆಟ್ಟೀತು. ಲೇಪಿತಂ ಎಂದರೆ ಮತ್ತಾರಿಂದಲೋ ಲೇಪಿಸಲ್ಪಟ್ಟವನೆಂಬ ಅರ್ಥ ಬರುತ್ತದೆ. ಲಿಪ್ತ ಎಂದರೆ ಸ್ವಯಂ ಲೇಪಿಸಲ್ಪಟ್ಟವನೆಂದು ಆರ್ಥ ಬರುವುದು. ಇದು ನಿಮ್ಮ ಸಂದರ್ಭಕ್ಕೆ ಹೆಚ್ಚು ಯುಕ್ತಾರ್ಥ, ತತ್ಪ್ರತಿಪಾದಕಪದವೂ ಹೌದು.

  7. ಗಾಜಗೊಂಬೆ ನೀ ರಂಭೆಯು, ನಿನಗೆ ಮನಸೋತ
    ರಾಜನೇ ಕವನಿಸಲು ಬಂದಿರಲೊಡೆಯುವೆ ನೀ !
    ಗಾಜಿನಾ ಕನ್ಯೆ ಮನ – ಸುಖದುಃಖ ಕಾಂಬುದೇ?
    ಮೋಜಿಗಂ ಸಂತೈಸ ಪೋಗೆ ಒಡೆವುದು ತನುವು

    • ಯಾವ ಛಂದಸ್ಸು?

      • ಲಲಿತ ರಗಳೆ
        ಗದ್ಯದಂತೆ ಕಾಣುತ್ತಿದೆ ಅಲ್ಲವೇ? ದೋಷ ನಿವಾರಣೆ ಹೇಗೆ?

        • ಓಹೋ.. ನನಗೆ ರಗಳೆಗಳ ಪರಿಚಯ ಇಲ್ಲ. ಮತ್ತಾರಾದರೂ ತಿದ್ದಬಹುದು 🙂

    • ಬೆ ನೀ ರಂ – ಲಗಾದಿಯಾಯಿತು

    • ಗಾಜಗೊಂ –ಬೆ ನೀ – ರಂಭೆಯು, ನಿನಗೆ ಮನಸೋತ
      ಇಲ್ಲಿ ಲಗಮ್(ಲಘು ನಂತರ ಗುರು ಗಣದ ಆರಂಭದಲ್ಲಿ) ಬಂದಿದೆ. ಮಾತ್ರಾ ರಗಳೆ ಐದು ಮಾತ್ರೆಗಳ ಗಣಗಳದ್ದಾದ್ದರಿಂದ, ಪ್ರತಿಗಣದ ಆರಂಭದಲ್ಲಿ ಲಗಮ್ ಬರುವಹಾಗಿಲ್ಲ.

      ರಾಜನೇ ಕವನಿಸಲು ಬಂದಿ – ರಲೊಡೆಯುವೆ – ನೀ !
      ಹಲವು ಲಘುಗಳಿಂದ ಬಂಧದ ಗಟ್ಟಿತನ ಕಡಿಮೆಯಾಗಿದೆ ಮತ್ತು ಎರಡುಗಣಗಳ ಸೇರುವಿಕೆಯಲ್ಲಿ ಲಘುಗಳೇ ಹೆಚ್ಚಾದ್ದರಿಂದ ಅಷ್ಟು ಶ್ರುತಿಹಿತವಿಲ್ಲ.

      ಮೋಜಿಗಂ ಸಂತೈಸ – ಪೋಗೆ ಒಡೆವುದು – ತನುವು
      ವಿಸಂಧಿದೋಷವಿದೆ. ಪೋಗೊಡೆವುದು ಎಂದು ಸಂಧಿ ಮಾಡಲೇಬೇಕು. ಸಂತೈಸವೋಗಲೊಡೆವುದು ಎಂದು ಮಾಡಿದರೆ ಉತ್ತಮ.

      • ಧನ್ಯವಾದ ಶ್ರೀಶ. ನಿನ್ನ ಸಕಾಲಿಕ ಸಾಹಾಯ್ಯಕ್ಕೆ, ತಿದ್ದುಗೆ, ಮಾರ್ಗದರ್ಶನಗಳಿಗಾಗಿ ಧನ್ಯವಾದ.

  8. ವಿಷಮಛ್ಛಾಯೆಯ ಚಿತ್ರದಂತೆಸಗಿರಲ್ಕೀ ಶಿಲ್ಪಭಾವಂ, ಮನಂ
    ವಿಷದಿಂ ತುಂಬಿರೆ ನೌಮಿ ನೌಮಿ ಎನುತುಂ ಬಾಹ್ಯಾಂಗದೊಳ್ ಲೋಗರಾ-
    ಮಿಷಚಿತ್ತರ್ ವ್ಯವಹಾರಪೂರಕುಟಿಲರ್ ಸಂಪ್ರಾಪ್ತಪಕ್ಷದ್ವಯರ್
    ತೃಷೆಯಿಂ ಜಾಡ್ಯಮನಾಂತವರ್ ದ್ರವಿಸುವರ್ ಮೇಣ್, ಸಲ್ಗುಮೀ ವರ್ಗಕಂ

    ವಿಷಮಛ್ಛಾಯೆಯ ಚಿತ್ರ – negative photocopy
    ಸಂಪ್ರಾಪ್ತಪಕ್ಷದ್ವಯರ್ – ಬುದ್ಧಿಯಲ್ಲಿ ದ್ವಂದ್ವವನ್ನು ಹೊಂದಿದವರು

    • ತುಂಬ ಪ್ರೌಢವಾದ ಗಂಭೀರವಿಡಂಬನೆ!!…..ಬಲುಸೊಗಸಾಗಿದೆ ನೀಲಕಂಠ!…ಧನ್ಯವಾದಗಳು.

  9. This sculpture has no heart, no mind and no intellect. But its face owns up an expression. It serves as a model for those heartless human beings who don masks.
    ಪ್ರಭದ್ರಕಮ್|| ಹೃದಯಮಿರದೀ ಶಿಲ್ಪಕ್ಕಿರದೊ ಬುದ್ಧಿಯುಂ ಮನಂ
    ವದನದೊಳು ಹೊಮ್ಮಿರ್ಕುಂ ಬಗೆಯ ಭಾವಮೆಂತುಟೋ|
    ಎದೆಯೊಳಗಮೆಂದುಂ ಪೊಂದಿರದೆ ಭಾವಮೇನನುಂ
    ರದನಗಳ ಗಿಂಜಿರ್ಪರ್ಗಮುಪಮಾನಮಪ್ಪುದೈ||

    • ಆಹಾ ತುಂಬ ಚೆನ್ನಾಗಿದೆ. ಹಾಗೆಯೇ ಹೊಸ ಛಂದಸ್ಸಿನ ಪರಿಚಯಕ್ಕಾಗಿ ಧನ್ಯವಾದಗಳು.

    • ಎಂದಿನ ನಿಮ್ಮ ವಿಕಟಕವಿತೆಯ ವೈಶಿಷ್ಟ್ಯ ಬಂದಿದೆ ಪ್ರಸಾದು! 🙂
      ಆದರೆ ಇಲ್ಲಿ ಹತ್ತಾರು ಹಳಗನ್ನಡವಿರುದ್ಧವಾದ ಪದಗಳ ಬಳಕೆಯಾಗಿದೆ. ಮುಖತಃ ತಿಳಿಸಿಯೇನು.

  10. ಈತನು ಹನೂಮಾನ್. ಕೆನ್ನೆಯು ಸ್ವಲ್ಪ ಉಬ್ಬಿದೆ, ಹಾರಲು ರೆಕ್ಕೆಗಳಿವೆ, ರಾಮನಿಗೆ (Not in pic) ನಮಸ್ಕರಿಸುತ್ತಿದ್ದಾನೆ.
    ವಸಂತತಿಲಕ|| ನಾನೀಗಳೈದಪೆನು ದಕ್ಷಿಣದೇಶಕಂ ದಲ್
    ಯಾನಾಂತ್ಯದೊಳ್ ದಹಿಪೆ ಲಂಕೆಯ ನಿರ್ವಿಶೇಷಂ|
    ಮಾನಾಭಿಮಾನಿ ಸತಿಯಂ ಮರಳಿಪ್ಪೆನೆಂದಂ
    ತಾನಲ್ತೆಲಂಜನೆಯ ಪುತ್ರನುಮೀ ಸಮೀರಂ||

    • ಪದ್ಯದಲ್ಲಿ ಮೆಯ್ದೋರದಿರ್ಪೆಲ್ಲಮಂ ನೀಂ
      ಗದ್ಯದೊಳ್ ಪೀಠಿಕಾರೂಪದಿಂದೆ ನೀಡಿ
      ಮಾದ್ಯಮಂಬೊಂದುವೀ ಬಿಜ್ಜೆಗೇನವೇಳ್ವೆಂ?
      ಸ್ವಾದ್ಯಮೆಂತಿದಯ್ ಪೇಳಿಮ್, ಓ! ಹಾದಿರಂಪಾ!!

  11. ವರುಣನುದುರಿಸೆ ಮಳೆಯ ಭೂಮಿಯೊ-
    ಳರರೆ ದೇವರು ನೀರ ಬಿಂದುವ-
    ಲರಳಿಸಿಹನು ಸೂಕ್ಷ್ಮ ಕೆತ್ತನೆಯನ್ನು ಬೇಗದಲಿ
    ಧರೆಯೊಳುಳಿವುದೆ ಚೆಲುವ ಕಲೆಗಳು
    ನರನ ಚಿತ್ರದ ಯಂತ್ರದೊಳಗಿದು (ಕ್ಯಾಮರಾ)
    ಬರದೆ ಕಾಣದೆ ಮುಕ್ತಿ ಪಡೆಯುತ ಸೇರ್ವುದೂರ್ವಿಯನು

    • ಚೆನ್ನಾಗಿದೆ. ಬಿಂದುವಲರಳಿಸಿಹನು ಎಂಬಲ್ಲಿ ಬಿಂದುವೊಳರಳಿಸಿರ್ಪನು ಮಾಡಬಹುದು, ಅರ್ಥಸ್ಪಷ್ಟತೆಗಾಗಿ, ಹಾಗು ಛಂದೋದೋಷನಿವಾರಣೆಗಾಗಿ.
      ಸೇರ್ವುದುರ್ವಿಯನು.

    • khaNDaprAsa is an indication of graduation. It also means that you have freed yourselves from conscious arithmetics of mAtrA to a considerable extent. Congrats.

      • ಮಗೂ ಅಂಕಿತಾ! ನಿನ್ನ ಪದ್ಯಭಾವವು ಸುಬೋಧವಾಗಿದೆ…. ಉದುರಿಸೆ ಎಂಬ ಪದಕ್ಕಿಂತ ಸುರಿಯಿಸೆ ಎಂಬ ಶಬ್ದವು ಹೆಚ್ಚು ಯುಕ್ತ.

  12. ಒಡೆಯಂ ಸೃಷ್ಟಿಗದಾದೊಡಂ ಕಮಲಜಂ,ಕೈಗೊಳ್ಳುತುಂ ಕಾಯಕಂ
    ಪಡಿಯಚ್ಚಂ ನಿಜಮಿರ್ವರೊಳ್ ಸೃಜಿಪವೊಲ್ ತಾನಾಗಿರಲ್ ನಿಷ್ಫಲಂ!
    ಕಡೆದುಂ ತಾ ಕೊಡಬಲ್ಲನೇಂ ಭುವಿಯ ಬಲ್ ಚಾಣಕ್ಷ ಶಿಲ್ಪಾರಕಂ
    ಕಡುವೈಯಾರದೆ ಭಾಸಿಸಿರ್ಪ ನದಿಯಂ ಮೇಣ್ಮೂರ್ತಿಯೊಳ್ ಯತ್ನದಿಂ!

    (ಸೃಷ್ಟಿಯೊಡೆಯನಿಂದಲೇ ,ಒಬ್ಬರಂತೇ ಇನ್ನೊಬ್ಬರನ್ನು ರಚಿಸಲ್ಕಾಗದಿರುವಾಗ,ಭೂಮಿಯ ಶಿಲ್ಪಿಯೊರ್ವನಿಂದ ನದಿಯ ಸೌಂದರ್ಯವನ್ನು ಮೂರ್ತಿಯಲ್ಲಿ ತಂದುಕೊಡಲಾಗುವದೇ?)

    • ಪದ್ಯಭಾವವೂ ಬಂಧವೂ ತುಂಬ ಚೆನ್ನಾಗಿವೆ. ಒಳ್ಳೆಯ ಕಲ್ಪನೆ ಇಲ್ಲಿದೆ. ಆದರೆ ಚಾಣಕ್ಷಶಿಲ್ಪಾರಕಂ ಎಂಬುದರ ಅಥ ತಿಳಿಯಲಿಲ್ಲ.

      • ಧನ್ಯವಾದಗಳು,ಚಾಣಾಕ್ಷಶಿಲ್ಪಾರಕಂ ವನ್ನು ನುರಿತ ಶಿಲ್ಪಿಯೆಂಬರ್ಥದಲ್ಲಿ ಬಳಸಿದ್ದೇನೆ 🙂 ತಪ್ಪಾಗಿರಬಹುದು. ಇನ್ನು ಚಾಣಕ್ಷ ವಾಗಿತ್ತು, ಅದನ್ನು ಸರಿಮಾಡಿದೆ.

  13. ಮೋರೆ ಮೇಲಣ ಹಚ್ಚೆ ಹಂಜರ
    ಹಾರೆ ಹಿಂದಣ ರೆಕ್ಕೆ ರಂಜನ
    ಯಾರ ಕಣ್ಣಿಗದೆಂತು ಕಂಡುದೊ ಗಾಜ ಗೊಂದಲವು !
    ಸೋರುತಿರ್ಕುದದೊಂದು ಕಿರುಹನಿ
    ಸಾರುತಿರ್ದುದು ನೂರು ಮೆಲುದನಿ
    ನೀರ ಬಣ್ಣದ ನೀರೆಯಿಂತಿದು ಸಾಜ ಸುಂದರವು ।।

    • ಪಲ್ಲವ|| ಲಿಂಗಮಾವುದುಮೆಂದುಮೀ ಚಿ-
      ತ್ರಾಂಗಿ*ಯದು ಸಂದಿಗ್ಧಮಿದ್ದೇಂ|
      ಪಾಂಗಿನೆನಿತೋ ಪದ್ಯಪೂರವು
      ಪಿಂಗದೊಲ್ ಪರಿದಿರ್ಪುದೌ||
      *’ಚಿತ್ರಾಂಗಿ’ಯು ಸ್ತ್ರೀಲಿಂಗಶಬ್ದವಲ್ಲ

      • ನೀರ ಬಣ್ಣದ “ನೀರೆ”ಯಂತಿದು ಸಾಜ ಸುಂದರವು !!
        ಎನ್ನಬಹುದೇ? ಪ್ರಸಾದ್ ಸರ್.

    • ಪದ್ಯವೂ ತದ್ಭಾವ-ಬಂಧಗಳೂ ಸೊಗಸಾಗಿವೆ. ಸೋರುತಿರ್ಪುದದೊಂದು… ಎಂದು ತಿದ್ದಿದರೆ ಉತ್ತಮ. ಅಭಿನಂದನೆಗಳು.

  14. On the left temple (near the eyebrow) of the sculpture is a sketch of a face. I can’t make anything of it!
    Panchamātrācaupadi (with a semblance of prāsa)||
    There on the temple o’ the figurine ye(you) see a
    Barely formed sketch of another one’s face|
    Stared enough many a time have I, but can’t really
    Squarely make any sense o’ it birādar(brother)!!
    Transliteration: ದೇರಾನ್ದ ಟೆಮ್ಪಲ್ ಅ ದ ಫಿಗರೀನ್ ಯೇ ಸೀ ಎ
    ಬೇರ್ಲಿ ಫಾರ್ಮ್ಡ್ ಸ್ಕೆಚ್ಚಾಫೆನದ ವನ್ಸ್ ಫೇಸ್|
    ಸ್ಟೇರ್ಡೆನಫ್ ಮೆನಿ ಎ ಟೈಮ್ ಹ್ಯಾವೈ ಬ(ಟ್) ಕಾನ್ಟ್ ರಿಯಲಿ
    ಸ್ಕ್ವೇರ್ಲಿ ಮೇಕ್ ಎನಿ ಸೆನ್ಸ್ ಅ(ಫ್) ಇಟ್ ಬಿರಾದರ್||

  15. ಆವುದೊ ಶಿಲ್ಪಿಯು ಕೆತ್ತಿದೀ ಚೆಂದದ
    ದೇವತಾ ಮೂರ್ತಿಯು ಗಾಜೆ?
    ಸಾವಿಲ್ಲವಿದಕೆಂದು ಮುಟ್ಟಲು ಪುಡಿಯಾಗೆ
    ಜೀವನದ ಚಿತ್ತಾರ ಕ್ಷಣಿಕ !

    • ಪದ್ಯ ತುಂಬ ಚೆನ್ನಾಗಿದೆ. ಒಳ್ಳೆಯ ಗಂಭೀರಭಾವವು ಸರಳಪದಗಳಲ್ಲಿ ಘನವಾಗಿ ಹೆಪ್ಪುಗಟ್ಟಿದೆ. ಆದರೆ ಜೀವನದ ಎಂಬ ಪದದಿಂದಾಗಿ ಸಾಂಗತ್ಯದ ಛಂದಸ್ಸು ಹಳಿತಪ್ಪಿದೆ. ಇದನ್ನು ಜೀವದ ಎಂದು ತಿದ್ದಿದರೆ ಸರಿಯಾಗುವುದು.

  16. ಕೈಬೆಳ್ಳು ಕಡೀತಾ ಐತೆ ಮಚಾ!
    ತ್ರಿಪದಿ|| ನಾಲ್ಕಾದೊ ದಿನ್ಗೋಳು ಹಲ್ಕಿರಿದು ಸುಮ್ಕಿವ್ನಿ
    ಸಿಲ್ಕಿವ್ನಿ ಪೀಡಾನಂದಕ್ಕೆ (Sadism)| ಇನ್ನೀಗ್ಲೆ
    (ಅಲ್ಲಿ ಕಾಂಬ)ಅಲ್ಕಾಂಬ ಹನಿಯ ಮುರಿದೇನು|| 🙂

    • ಹಾದಿರಂಪರೇ! ನಿಮ್ಮ ಪೀಡಾನಂದಪಾರಮ್ಯಕ್ಕೆ ಪ್ರಣಾಮ. ಅದು ಪದ್ಯಪಾನವನದ ವೈನೋದಿಕವಾದ ಸುಂಟರಗಾಳಿ. ಅದಕ್ಕೆ ಸ್ವಾಗತ:-)
      ಆದರೆ ಈ ಪದ್ಯದಲ್ಲಿ ಹಲ್ಕಿರಿದು ಎಂಬ ಪ್ರಯೋಗದಲ್ಲಿ ಗಣಭಂಗವಾಗಿದೆ. ಅದು ಹಲ್ಕಿರ್ದು ಎಂದಾದರೆ ಸರಿಯಾದೀತು.

  17. [ಸಂತುಲಿತ ಮಧ್ಯಾವರ್ತ ಗತಿ]
    ಚೆಲುವೆ ನಿನ್ನ ಸೌಂದರ್ಯ ಕಂಡು ಹೃದಯವನು ಸೋಲ್ತರೆಷ್ಟೋ
    ಹಳಿವರಲ್ತೆ ನಿನ್ನಂದವನ್ನು ಕಲ್ಲೆಂದು ಜರೆದು ಮನವ
    ಮೊಳೆಯೆ ರಾಗ ನಿನ್ನೆದೆಯೊಳಿನಿತು ಹರಿದಾಗ ಭಾವದೂರ್ಮಿ
    ಕಳೆದು ಶೈತ್ಯವನು ಮೂರ್ತರೂಪ ನೀರಾಗಿ ಕರಗದೇನು

  18. ||ರುಚಿರಾ(ಪ್ರಭಾವತೀ)ವೃತ್ತ||

    ಮಂಜಿನ ಬಾಲಕನ ಪ್ರಾರ್ಥನೆ

    ನಿವೇದಿಪೆಂ ಪ್ರಭು, ಕಳಚುತ್ತೆ ಬಂಧಮಂ,
    ಭವಾಭ್ದಿಯಂ ಕ್ರಮಿಸುತೆ ಮುಕ್ತನಾಗೆ,ದೈ-|
    ವವಿದ್ಯೆಯಂ ಕರುಣಿಸಲೆಂದು ಬೇಡುವೆಂ,
    ನಿವಾರಿಸಲ್ ಕರಗುವ ಬಾಳ ಕಷ್ಟಮಂ ||

    • ಪ್ರಭು ಎಂಬ ಸಂಬೋಧನೆಯಿರುವುದರಿಂದ, ’ಕರುಣಿಸಲೆಂದು’ ಬದಲು ’ಕರುಣಿಸೆಂದು’ ಸರಿಯಾದೀತು.

      • ಇಲ್ಲ, ಪದ್ಯದ ಪದಪ್ರಯುಕ್ತಿ ಯುಕ್ತವಾಗಿಯೇ ಇದೆ.

    • ಆಹಾ! ಒಳ್ಳೆಯ ಕಲ್ಪನೆ!! ಮತ್ತೂ ಒಳ್ಳೆಯ ಬಂಧ-ಭಾಷಾಸೌಂದರ್ಯ!!!

      • ಪದ್ಯವನ್ನು ಮೆಚ್ಚಿರುವುದಕ್ಕಾಗಿ ಧನ್ಯವಾದಗಳು ಸಹೋದರರೆ. ಹಲವು ದಿನಗಳ ಬಳಿಕ ಪದ್ಯಪಾನದಲ್ಲಿ ಕಾಣಿಸಿಕೊಂಡು ನಮ್ಮೆಲ್ಲರ ಪದ್ಯಗಳಿಗೆ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುವುದು ಬಹಳ ಸಂತಸವನ್ನು ನೀಡಿದೆ.ಅಂತೆಯೇ ನನ್ನ ಪದ್ಯದ ಪದಪ್ರಯುಕ್ತಿಯ ಬಗ್ಗೆ ಪ್ರಸಾದರ ಸಂದೇಹವನ್ನು ನಿವಾರಿಸಿರುವುದಕ್ಕೂ ಧನ್ಯವಾದಗಳು.

  19. ಹಿಂಜಿ ನೋಡಿರಲಾಗ। ಮಂಜಿsನ ಮೊಗದಾಗ
    “ನಂಜಿ”ನೆಪ್ಪಾಗದೆs “ರತ್ನ” । ಕರಗೋಗು-
    ವಂಜಿsಕಿಯಲ್ಲಿಯೀ ಕವ್ನ ।।

    • Fine, especially second half. Rajaratnam would have turned in his grave!
      I am very reluctantly offering this suggestion. Instead of dividing the second line thus “ನಂಜಿ”ನೆ/ಪ್ಪಾಗ/ದೆs “ರತ್ನ”, it would be better to say ನಂಜಿಯ/ ನೆಪ್ಪಾ/ಗದೆ ರತ್ನ to improve the gati of the last gaNa therein. ಹಿಂಜಿ ನೋಡಿರಲಾಗ is good enough. Just wanted to share with you that ‘ಗಂಜಿಯ ಕುಡಿವಾಗ’ came to my mind.

      • ಧನ್ಯವಾದಗಳು ಪ್ರಸಾದ್ ಸರ್,
        ಏಕೋ “ನೀನ್ ನನ್ ಅಟ್ಟೀಗ್ ಬೆಳ್ಕಂಗಿದ್ದೆ ನಂಜೂ…” ಸಾಲುಗಳು ನೆನೆಪಾದವು. ನನಗೂ ಎರಡನೇ ಸಾಲಿನ ಧಾಟಿ ಸಮಾಧಾನವಾಗಿರಲಿಲ್ಲ. “ಮಾತ್ರಾ ತ್ರಿಪದಿ”ಗೆ (೫/೩/೫/೫) ಹೊಂದಿಸಲು ಪ್ರಯತ್ನಿಸಿದ್ದು. “ಅಂಶಗಣ”ಗಳಬಗ್ಗೆ ಹೆಚ್ಚು ತಿಳಿಯಬೇಕಿದೆ. “ಚಿತ್ರಕ್ಕೆ ಪದ್ಯ” ಬರೆಯಲು “ಹಿಂಜಿ ನೋಡಲಾಗ”. ಇಲ್ಲವಾದರ “ಗಂಜಿಯ ಕುಡಿವಾಗ” ತುಂಬಾ ಚೆನ್ನಾಗಿದೆ. “ಸಂಜಿಯ ಹೊತ್ತಾಗ” ಅಂತಲೂ ಒಮ್ಮೆ ಅನ್ನಿಸಿತ್ತು.

        ಹಿಂಜಿ ನೋಡಿರಲಾಗ। ಮಂಜಿsನ ಮೊಗವಾಗ
        ನಂಜಿಯ ನೆಪ್ಪಾಗದೆ ರತ್ನ । ಕರಗೋಗು-
        ವಂಜಿsಕಿಯಲ್ಲಿಯೀ ಕವ್ನ ।।

      • thanks a lot for the timely corrections.

  20. ಪಸಿರುಮನೆ ಪರಿಣಾಮದಿಂದೆನ್ನ ಕರಗಿಸುತೆ
    ನಸುನಗುತ ಬಾಳ್ವನೇ ಮನುಜ ತಾನು?
    ಪೊಸದಾಗಿ ಬದುಕುವೆಂ ನಾ ಪೋಗಿ ಬೇರೆಡೆಗೆ
    ಬಿಸಿಲಿನಿಂ ಕಾಪಾಡಿರೆಂದಿತು ಹಿಮಂ

    • ಆಹಾ, ಸುಂದರವಾದ ಕಲ್ಪನೆ, ಪದ್ಯ ಅಂಕಿತಾ!
      ಇದನ್ನೇ ಸ್ವಲ್ಪ ವಿಸ್ತರಿಸಿ ವರ್ಣಿಸುತ್ತಾ ಯಾವುದಾದರೂ ವೃತ್ತವೋ, ಷಟ್ಪದಿಯೋ ಮಾಡಬಹುದು. ಪ್ರಯತ್ನಿಸು. 🙂

    • Clap clap. ನೀಲಕಂಠರ ಮಾತನ್ನು ಅನುಮೋದಿಸುವುದಾದರೆ, ಮೊದಲೆರಡು ಪಾದಾದಿಯಲ್ಲಿ ಲಘುಬಾಹುಳ್ಯವಿರುವುದರಿಂದ ಮಾಲಿನೀವೃತ್ತಕ್ಕೆ ಅಳವಡಿಸಬಹುದು.

      • ಒಳ್ಳೆಯ ಚೌಪದಿ ಮಗೂ!…. ಛಂದಸ್ಸು, ವ್ಯಾಕರಣ, ಕಲ್ಪನೆಗಳೆಲ್ಲ ನಿದುರ್ಷ್ಟವಾಗಿವೆ.

  21. ನೆಲೆನಿಂತುದೇಂ ತ್ರಿವಿಧ ಸ-
    ಮ್ಮಿಲನದೊಳೀ ಪರಿಯೆ ಭೂಮಿತಾಂ ಘನ ಪಟದೊಳ್ ।
    ನೆಲಮಿರ್ಕುದು ಕಾಲ್ಭಾಗಂ
    ಜಲಮೈ ಮುಕ್ಕಾಲು ತೇಲ್ವ ಮುಗಿಲನಿಲಂ ಕಾಣ್ ।।

    ಕಪ್ಪು – ಬಿಳುಪು “ಭೂಪಟ”ದಂತಿರುವ ಚಿತ್ರದಲ್ಲಿ – ನೆಲ /ಜಲ/ಅನಿಲಗಳ ತ್ರಿವಿಧ ಸಮ್ಮಿಲನ !!
    (ತೊಟ್ಟಿಕ್ಕುತ್ತಿರುವ ಹನಿ – “ಶ್ರೀಲಂಕಾ”ದಂತೆ ಕಾಣುತ್ತಿದೆ !!)

    • ವಿಗ್ರಹದ ಗದ್ದವು ಸೌರಾಷ್ಟ್ರದ ಕಡಲತೀರದಂತಿದೆ.
      ಸೀಮಾಂತದೆ ಲಂಕೆಯದೋ
      (Kanyakumari)ಕೌಮಾರ್ತೆಗೆ ಲಗ್ನಮಾಗಿರದೆನುತ್ತೆಂದುಂ|
      ನೀಮೀಗಳದನ್ನಲ್ಲಿಂ
      ವಾಮಕ್ಕೆಳೆದು ಗಿಡುಗಿರ್ಕೆ ಸೌರಾಷ್ಟ್ರಕ್ಕಂ||

      • ಧನ್ಯವಾದಗಳು ಪ್ರಸಾದ್ ಸರ್,
        ನಿಮಗೆ ಚಿತ್ರದಲ್ಲಿ ಸೌರಾಷ್ಟ್ರ ಕಂಡದ್ದು – ನನ್ನ ಕಲ್ಪನೆಗೆ ಒತ್ತು ನೀಡಿದೆ !!

        ಗಮನಿಸಿರೈ ಭೂಪಟವಂ
        ಶ್ರಮದಿಂ ನೀಂ, ಪಾರದರ್ಶಕ ಪರಿಸ್ಥಿತಿಯೊಳ್
        ಸಮನಿಹುದೈ ಭ್ರಮಮೆನ್ನದು
        “ಹಿಮಶಿರ”ಮಿಂತು ಗಡ ಭಾರತದ ನಿಜಗತಿತಾಂ !!

    • ಚೆನ್ನಾಗಿದೆ ಮೇಡಮ್. ಕಾಲ್ಭಾಗಂ ಅರಿಸಮಾಸವಾಯಿತು. ನೆಲಮಿರ್ಕು ಕಾಲ ಭಾಗಂ ಎಂದು ಮಾಡಬಹುದು.

      • ಧನ್ಯವಾದಗಳು ನೀಲಕಂಠ,
        ಭೂಗೋಳದಲ್ಲಿ ೧/೪ ಭಾಗ ನೆಲ – ೩/೪ ಭಾಗ ಜಲ ಎಂದು ಹೇಳಬಯಸಿದ್ದು.
        “ನೆಲಮಿರ್ಕು ಕಾಲು ಭಾಗಂ” ಎನ್ನಬಹುದಲ್ಲವೇ?

        ನೆಲೆನಿಂತುದೇಂ ತ್ರಿವಿಧ ಸ-
        ಮ್ಮಿಲನದೊಳೀ ಪರಿಯೆ ಭೂಮಿತಾಂ ಘನ ಪಟದೊಳ್ ।
        ನೆಲಮಿರ್ಕು ಕಾಲು ಭಾಗಂ
        ಜಲಮೈ ಮುಕ್ಕಾಲು ತೇಲ್ವ ಮುಗಿಲನಿಲಂ ಕಾಣ್ ।।

        • ಕಾಲ ಭಾಗ ಅಂದರೆಯೇ ಒಂದು ಕಾಲಿನ ಭಾಗ, ನಾಲ್ಕರಲ್ಲಿ; ಕಾಲ್ಭಾಗ, ಕಾಲುಭಾಗ ಎರಡೂ ಅರಿಸಮಾಸಗಳೇ ಎಂಬುದು ನನ್ನ ತಿಳಿವಳಿಕೆ 🙂

          • ದಿಟ, ಅದು ಆರಿಸಮಾಸವೇ. ಆದರೆ ಇಂಥ ಕೆಲವನ್ನು ಪೂರ್ವಕವಿಗಳು ಬಳಸಿ ತುಸುಮಟ್ಟಿಗೆ ಈ ಕೆಲವಕ್ಕೆ ವಿನಾಯಿತಿ ನೀಡಿದ್ದಾರೆ. ಉದಾ: ತಳಿರುತೋರಣ. ಹೀಗಾಗಿ ಕಾಲುಭಾಗ, ಮುಂಭಾಗ ಮುಂತಾದ ಕೆಲವೊಂದು ’ಭಾಗ’ಪದವುಳ್ಳ ಕನ್ನಡಪದಗಳ ಸಮಾಸ ಅಷ್ಟಾಗಿ ಅಹಿತವೆನಿಸವು.

  22. ಅರರೇ ರೆಂಕೆಗಳಿರ್ದರುಂ ಗಗನದೊಳ್ ಸ್ವಾತಂತ್ರ್ಯದಿಂ ಪಾರಲಾ
    ಗಿರದೀ ಜೀವಿಯು ಪಕ್ಕಿಯೋ, ಮನುಜನೋ, ನಾಕಾಣೆನೈ ಮೂರ್ತಿಯೋ
    ಕೊರೆವಾ ಶೀತದೊಳಿರ್ಪ ಮಂಜಿನ ಕಲಾಕಾರಂಗಳೋ ಮೇಣಿದೇಂ
    ಅರಿಯೆಂ ಬಣ್ಣಿಸಲೆಂತುಮಚ್ಚರಿಯೊಳಿಂ ನಾನಾವಿಧಂ ತೋರ್ವುದೈ

    • Cheedi avare, nice one. ಕಲಾಕಾರಂಗಳೋ ಮೇಣಿದೇಂ – sounds somewhat odd with singular and plural mixed. Also ಕಲಾಕಾರಂಗಳೋ is not a phrase that we are used to. kalaakRti is meant here right?

    • Good one. (ರೆಂಕೆಗಳಿರ್ದೊಡಂ, ಕೊರೆವೀ)

    • ಪ್ರಸಾದು ಹಾಗೂ ನೀಲಕಂಠರೇ, ಸವರಣೆಗಳಿಗೆ ಧನ್ಯವಾದಗಳು.

      • ಪದ್ಯ, ಬಂಧ, ಕಲ್ಪನೆ ಮತ್ತು ಭಾಷೆಗಳೆಲ್ಲ ಚೆನ್ನಾಗಿವೆ ಚೀದೀ! ಅಭಿನಂದನೆಗಳು. ತೋರ್ಪುದಯ್ ಎಂದು ಸವರಿಸಿದರೆ ಮತ್ತೂ ಒಳಿತು.

  23. ಪದ್ಯಪಾನದ ಬಟ್ಟಲಿಗೆ ಕೈ ಹಾಕಿ ಸುಮಾರು ದಿನಗಳಾದುವು. ಎಲ್ಲ ಸಹಪದ್ಯಪಾನಿಗಳು ಮನ್ನಿಸಬೇಕು.ಆದರೆ ಕಳೆದ ಸೋಮವಾರ ಈ ಚಿತ್ರವನ್ನು ಕಂಡೊಡನೆಯೇ ಹೊಳೆದ ಕಲ್ಪನೆಯನ್ನು ಪದ್ಯರೂಪದಲ್ಲಿ ಕಾಣಿಸಲು ಬಿಡುವೇ ಆಗಿರಲಿಲ್ಲ. ನನ್ನ ಕಲ್ಪನೆ ತುಂಬ ಸರಳ ಹಾಗೂ ಸುಲಭ ಕೂಡ. ಅದು ಈಗಾಗಲೇ ಯಾರಿಗಾದರೂ ಹೊಳೆದೇ ಇರಬಹುದೆಂಬ ಶಂಕೆಯಲ್ಲಿದ್ದೆನಾದರೂ ವಿಸ್ಮಯಾನಂದಕರವಾಗಿ ಆ ಕಲ್ಪನೆಯು ಯಾರಿಗೂ ಬಂದಂತೆ ತೋರಲಿಲ್ಲ. ಹೀಗಾಗಿ ಅಷ್ಟು ಅಕ್ಷತವಾದ ಆ ಹೊಳಹಿನ ಪದ್ಯವನ್ನೈಲ್ಲಿ ಇದೀಗ ಸಲ್ಲಿಸುವೆ:

    ಹಿಮಶಿಲ್ಪಮಿದಲ್ತು ಮಹೋ-
    ತ್ತಮಕಲ್ಪಂ ಭಕ್ತಿಭಾವಮಾಕೃತಿವೆತ್ತಾ-
    ದಿಮಜಲ್ಪಮರ್ಪಿತಾತ್ಮಂ
    ಶಮತಲ್ಪಂ ತಾಂ ಕರಂಗುತಿರ್ಪ ದ್ವೈತಂ||

    ಇದು ಭಕ್ತಿಭಾವವೇ ಮೂರ್ತಿವೆತ್ತ ಆರಾಧನಕಲ್ಪ(ಆರ್ಷವಾದ ಪೂಜಾವಿಧಾನ)ವಲ್ಲದೆ ಬರಿಯ ಹಿಮದ ಶಿಲ್ಪವಲ್ಲ. ಇದು ಆಕೃತಿವೆತ್ತ ಆದಿಮಜಲ್ಪ(ಮೊದಲ ಮಾತು ಎನಿಸಿದ ವೇದ)ವೂ ಹೌದು.ಅಲ್ಲದೆ ಇದು ಶಾಂತಿಯ ಹಾಸು ಕೂಡ. ಹೆಚ್ಚೇನು, ಇದು ನಿಜಕ್ಕೂ ಕರಗುತ್ತಿರುವ ದ್ವೈತವೇ ಸರಿ.
    ( ಅದ್ವೈತವೆಂದರೆ ಪರಭಕ್ತಿಯ ಪರಾಕಾಷ್ಠಾಫಲವಾದ ಸಾಯುಜ್ಯ. ಸಾಧಕನು ತನ್ನ ಉಪಾಸ್ಯದೈವದಲ್ಲಿ ಅಭೇದಭಾವವನ್ನು ತಳೆಯುವ ಪರಿ. ಇದಕ್ಕೆ ಸೋಪಾನರೂಪದಲ್ಲಿ ಆರಂಭಿಕದಶೆಯ ದ್ವೈತವಿರುತ್ತದೆ. ಇದೇ ತ್ರಿಪುಟಿಯ ಮೂಲ. ಇಂಥ ದ್ವೈತವು ಕ್ರಮಕ್ರಮವಾಗಿ ಕರಗಿ, ಭಕ್ತನು ತಾನು ತನ್ನ ಉಪಾಸ್ಯದೈವಕ್ಕಿಂತ ಪರಮಾರ್ಥತಃ ಬೇರೆಯಲ್ಲವೆಂಬ ಅಭೇದಜ್ಞಾನವನ್ನು ಹೂಂದುವ ಹಂತವೇ ಈ ಶಿಲ್ಪದಲ್ಲಿದೆಯೆಂದು ತಾತ್ಪರ್ಯ. ಈ ಕಲ್ಪನೆಯ ಸ್ಫೂರ್ತಿಯು ಕರಗುತ್ತಿರುವ ಹಿಮಶಿಲ್ಪದಲ್ಲಿದೆ. ನೀರು ಬ್ರಹ್ಮವಸ್ತು. ಅಲ್ಲಿಂದ ಹೊಮ್ಮಿದ ಘನೀಕೃತಜಲವೇ ಆದ ಈ ಶಿಲ್ಪವೇ ಜಗತ್ತು-ಜೀವಗಳ ಸಂಕೇತ. ನಾಮ-ರೂಪಗಳೆಲ್ಲ ಈ ಹೆಪ್ಪುಗಟ್ಟುವಿಕೆಯ ಪರಿಣಾಮ. ತಪಸ್ಸು(ಒಳಗಿನ ಕಾವು) ತೀವ್ರವಾದಾಗ ಈ ಪ್ರತ್ಯೇಕತಾಭಾವದ ಹೆಪ್ಪುಗಟ್ಟುವಿಕೆಯು ಕರಗಿ ಮತ್ತೆ ಎಲ್ಲವೂ ಬ್ರಹ್ಮವಾಗುವುದು. ಇದೇ ಮುಕ್ತಿ.)

    • ಆಹಾ, ವೇದಾಂತಿಮೂರ್ಧನ್ಯಕವಿವರ್ಯರಿಗೆ ನಮನ 🙂

    • ಬಹಳ ಚೆನ್ನಾದ ಪದ್ಯ. ಎಷ್ಟೆಲ್ಲಾ ವಿಷಯಗಳನ್ನು ಅಡಕಗೊಳಿಸಿಕೊಂಡಿದೆ. ಈ ಕಲ್ಪನೆ ಇತರರಿಗೆ ಬರುವುದು ಕಷ್ಟ 😀

    • ಧನ್ಯವಾದಗಳು ಗಣೇಶ್ ಸರ್,
      ಬಹಳ ದಿನಗಳ ಬಳಿಕ ಪದ್ಯಪಾನದಲ್ಲಿ ನಿಮ್ಮನ್ನು ಕಂಡು ಬಹಳ ಸಂತೋಷವಾಯಿತು. (ಇತ್ತೀಚಿಗೆ ನೀವೇಕೋ “ಪದ್ಯಪಾನ ಪಥ್ಯ”ವನ್ನು ಪಾಲಿಸುತ್ತಿಲ್ಲವೆಂಬ ಆತಂಕವಿತ್ತು !!)
      ನಿಮ್ಮ ಈ ಅದ್ಭುತ ಕಲ್ಪನೆಯಪದ್ಯ, (ತನ್ನನರಿಯಲು ಸಾಗರದಾಳಕ್ಕಿಳಿದು ತಾನೇ ಇಲ್ಲವಾಗುವ) ಅದ್ವೈತ ಸಾಧನೆಗೆ ರಾಮಕೃಷ್ಣ ಪರಮಹಂಸರ ದೃಷ್ಟಾಂತದ – “ಉಪ್ಪಿನ ಗೊಂಬೆ”ಯ ನೆನಪು ತಂದಿತು.

      ಆಗಿರ್ಪ್ಪೀ ನರರೂಪಂ
      ಸಾಗರದ ಜಲವೊಡಗೊಂಡ ಬಗೆ ಸಾಕಾರಂ
      ತಾಂ ಗಡ ತನ್ನಿರುವರಿಯ-
      ಲ್ಕೇಗುತದೊ ಕರಂಗುದುಪ್ಪಗೊಂಬೆಯವೋಲ್ ಕಾಣ್ ।।

      • ನೀಲಕಂಠ, ರಾಮಚಂದ್ರ ಮತ್ತು ಉಷಾ ಅವರಿಗೆ ಹಾರ್ದಿಕಧನ್ಯವಾದಗಳು.

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)