Oct 302016
 

Rama_Seete-Deepawali

  36 Responses to “ಪದ್ಯಸಪ್ತಾಹ ೨೨೬: ಚಿತ್ರಕ್ಕೆ ಪದ್ಯ”

  1. This is not Ayodhya. It is some hamlet on Rama’s exile path. Aware that Rama would pass by there some day, the people of the town thus light the leading path every day so that it would serve as a ‘welcome’ to him on the unknown eventual day. By default there would be no Reception Committee!
    ಇಂದುನಂದನ/ ವನಮಯೂರ||
    ಅಲ್ಲವಿದಯೋಧ್ಯೆ, ವನಮಾರ್ಗದೊಳಿಪೊಂದುಂ
    ಕಿಲ್ಲೆಯದರೆಲ್ಲಜನರಾದರದೆ ರಾಮಂ-|
    ಗುಲ್ಲಸದ ನಲ್ಬರವನಿಂತೆನುವರ್ನಿಚ್ಚಂ(ಶಿ.ದ್ವಿ.)
    ಚೆಲ್ಲಿದಡೆ ಪಾದಮನುಮಿತ್ತಮೊಳಗೈದಲ್||

  2. ಮಾವಿಲ್ಲ ಬೇವಿಲ್ಲ ಸಂಪಗೆಯು ಮೇಣಿಲ್ಲ-
    ಮಾವೆಡೆಗೆ ನೋಡೆ ತೆಂಗೊಂದೆ ಮರನು|
    (ತೆಂಗಿನ ಮರದಲ್ಲಿ ಯಾವ ಹಕ್ಕಿಯೂ ಗೂಡುಕಟ್ಟದು)
    ಯಾವ ಪಕ್ಕಿಯುಮಿಲ್ಲದೀವೂರಿಗೇಕೆ ನೀಂ
    ಗಾವುದಂಗಳ ಸಮೆಸಿ ಬಂದೆ ರಾಮಽಽಽ!!

  3. Rama is placating Seeta by patting her shoulders
    ರಥೋದ್ಧತ|| ದೀಪಮಾತ್ರಮಿರುತೊಂದುಮಿಲ್ಲಮೌ
    ಭಾಪಿನಾನನಮಿದಲ್ತೆ ಮಾಯೆಯೌ!
    ಕೋಪದಿಂದೆರಗೆ ರಕ್ಕಸರ್ ಪ್ರಿಯೇ
    ತಾಪಗೊಳ್ಳದಿರು ಕೊಲ್ವೆನೆಲ್ಲರಂ||

  4. ಮರಳಿರೆ ಜಾಯೆಯಂಬಡೆದು ಪೆರ್ಚಿದ ಕೂರ್ಮೆಯೊಳಂದು ಬಾಲ್ಯದೊ
    ಳ್ಗೆರೆದೆರೆದೆಲ್ಲಮಂ ಮುದದೆ ಪೋಷಿಸುತಾಡಿಸಿದಬ್ಬೆ ನಾಡಿಗಂ,
    ಸುರಪುರಮೇ ಕಣ್ಣಿಂಗೆ ಸಲೆ ಗೋಚರಮಾದುದೆ ರಾಮಗಂ!ದಿಟಂ
    ಸರಿವುರೆ ವಟ್ಟೆಯಂ ಸೊಡರದೀಪಮೆ ತೋರಿರೆ ಸಾಲುಸಾಲ್ಗಳೊಳ್!!

  5. ಮರಳಲ್ ಕೋಸಲಕಂ ಸತಿ
    ವೆರಸು ಶ್ರೀರಾಮಸೂರ್ಯ ಯುದ್ಧದ ಬಳಿಕಂ /
    ಕಿರುಪಣತೆಗಳಂ ಬೆಳಗಿಹ
    ಮರುಳು ಜನರೆ ರವಿಗೆ ದೀಪ ತೋರ್ಪುದೆ ಪಥವಮ್ ?//

    • 1. ಸತಿವೆರಸು: ವೆರಸಿ ಎಂದಾಗಬೇಕು.
      2. ಶ್ರೀರಾಮಸೂರ್ಯ, ಮರುಳು ಹಾಗೂ ದೀಪ: ಈ ಪದಗಳು ಪ್ರತ್ಯಯರಹಿತವಾಗಿವೆ. ನೀವು ದೀಪ=ದೀಪವು ಎಂದು ವಾದಿಸುವಿರಿ; ನಾನು ದೀಪ=ದೀಪವನ್ನು ಎಂದು ಚಂಡಿಹಿಡಿಯುತ್ತೇನೆ. ಹರಿಯುವುದಿಲ್ಲ! ಹೊಸಗನ್ನಡದಲ್ಲಿ ಇದು ಮಾನ್ಯ (ಈ ವಾಕ್ಯದಲ್ಲಿ ’ಮಾನ್ಯ’ವು ಪ್ರತ್ಯಯರಹಿತವಿರುವಂತೆ), ಹಳಗನ್ನಡದಲ್ಲಲ್ಲ.
      3. ‘ಜನರೆ,’ ಎಂಬುದು ಸಂಬೋಧನೆಯಾದ್ದರಿಂದ ಅಲ್ಪವಿರಾಮಚಿಹ್ನೆಯನ್ನು(comma) ಬಳಸುವುದೊಳ್ಳೆಯದು. ಇಲ್ಲವಾದರೆ ’ಜನರು ತಾವೇ’ ಎಂದು ಬೋಧೆಯಾಗುತ್ತದೆ.
      4. ಮರುಳು ಜನರೆ: ಹೀಗೆ ಬಿಡಿಸಿಬರೆದರೂ, ’ಮರುಳು’ಶಬ್ದಕ್ಕೆ ಪ್ರತ್ಯಯವಿಲ್ಲದಿರುವುದರಿಂದ, ಮರುಳುಜನರೆ ಎಂದು ಸಮಾಸವಾಗಿಯೇ ಪರಿಗಣಿಸಲಾಗುವುದು. ಇದು ಅರಿಸಮಾಸವೆನಿಸುತ್ತದೆ (ಕನ್ನಡಪದ+ಸಂಸ್ಕೃತಪದ)
      5. ಹೀಗೊಂದು ಸವರಣೆ:
      ಮರಳಲ್ ರಣವಿಕ್ರಮಿ ತಾಂ
      ವೆರಸುತೆ ಪತ್ನಿಯ ದಿವಾಕರಸುಕುಲಸೂರ್ಯಂ|
      ಕಿರುಪಣತೆಗಳಂ ಬೆಳಗಿಹ
      ಮರುಳರೆ, ತೋರ್ಕುಮೆ ಇನಂಗೆ ಪಥಮಂ ದೀಪಂ?|

  6. ಸವರಣೆಗಳಿಗಾಗಿ ಧನ್ಯವಾದಗಳು ಹಾದಿರಂಪರೇ. ಹಾಗೆಯೇ ನಿಮ್ಮ ಪದ್ಯ ಸರಳ ಸುಂದರವಾಗಿದೆ 🙂

    • ನನ್ನ ’ಪದ್ಯ’ ಚೆನ್ನಾಗಿದೆ ಎಂದದ್ದಕ್ಕಾಗಿ ಧನ್ಯವಾದಗಳು. ಮೂರು ಪದ್ಯಗಳನ್ನು ರಚಿಸಿದ್ದೇನೆ. ಯಾವೆರಡು ಪದ್ಯಗಳು ಚೆನ್ನಾಗಿಲ್ಲ? 😉

      • ಅಯ್ಯೋ! ನಾನು ಹೇಳಿದ್ದು ಸವರಣೆಯ ಪದ್ಯ. ಹೋಗಲಿ ಬಿಡಿ. ನಮ್ಮಿಬ್ಬರಲ್ಲೇಕೆ ಸುಮ್ಮನೆ ಮನಸ್ತಾಪ. “ನಿಮ್ಮ ನಾಲ್ಕೂ ಪದ್ಯಗಳೂ ಚೆನ್ನಾಗಿವೆ(Seriously)” 🙂

  7. ದುರುಳ ರಾವಣ ಸರಸಿಜಾಕ್ಷಿಯ
    ಸೆರೆಯಲಿಡುತಲಿ ಮೆರೆದಿರಲು ತಾ
    ಮರದ ಕೆಳಗಡೆ ಕನಸ ಕಂಡಳು ವಿರಹಿಸುತಲವಳು
    ಮುರಹರನುತಾ ದಶಶಿರನ ಸಂ
    ಹರಿಸಿ ಬಾಳಲಿ ಹರಿಸಿ ಬೆಳಕನು
    ಕರವ ಭುಜದಲ್ಲಿರಿಸಿ ತನ್ನನು ಪೊರೆದನೆಂಬಂತೆ

    ಇದು ಸೀತೆ ಅಶೋಕ ವನದಲ್ಲಿ ಕಂಡ ಕನಸಷ್ಟೇ ಅನ್ನುವ ಭಾವದಲ್ಲಿ. ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ

    • ಕಲ್ಪನೆಯೂ ಪದ್ಯವೂ ಚೆನ್ನಾಗಿದೆ. (ವಿರಹದೆಸೆಯೊಳೆ ಮರನ ನೆಳಲೊಳೆ ಕನಸ ಕಂಡಿಹಳು)

      • ಧನ್ಯವಾದಗಳು ಸರ್ _/\_.
        ನಿಮ್ಮ ಸಲಹೆಯನ್ನೊಳಗೊಂಡ ಪದ್ಯ.

        ದುರುಳ ರಾವಣ ಸರಸಿಜಾಕ್ಷಿಯ
        ಸೆರೆಯಲಿಡುತಲಿ ಮೆರೆದಿರಲು ತಾ
        ವಿರಹದೆಸೆಯೊಳೆ ಮರನ ನೆಳಲೊಳೆ ಕನಸ ಕಂಡಿಹಳು
        ಮುರಹರನುತಾ ದಶಶಿರನ ಸಂ
        ಹರಿಸಿ ಬಾಳಲಿ ಹರಿಸಿ ಬೆಳಕನು
        ಕರವ ಭುಜದಲ್ಲಿರಿಸಿ ತನ್ನನು ಪೊರೆದನೆಂಬಂತೆ

      • ದುರುಳ ರಾವಣನಂಬುಜಾಕ್ಷಿಯ
        ಸೆರೆಯೊಳಿಡುತಲಿ ಮೆರೆಯುತಿರ್ದಿರೆ
        ವಿರಹದೆಸೆಯೊಳೆ ಮರನ ನೆಳಲೊಳ್ ಕನಸ ಕಂಡಿಹಳು|
        ಮುರಹರಂ ದಶಶೀರ್ಷನಂ ಸಂ-
        ಹರಿಸುತುಂ ಸಾಂತ್ವನವನೀವೊಲ್
        ಕರವ ಭುಜದೊಳಗಿರಿಸುತಾಕೆಯ ಬಾಳ ಬೆಳಗಿರ್ಪಂ||

        • ಅಬ್ಬಾ! ಭಾಷೆ ಹಳತಾದಂತೆಲ್ಲ ಪದ್ಯದ ಸೌಂದರ್ಯವೂ ಹೆಚ್ಚುತ್ತದೆನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಡ _/\_(ನಿಮ್ಮ ಪಳಗಿದ ಕೈ ಬರೆದದ್ದೂ ಇನ್ನೊಂದು ಕಾರಣವಿರಬಹುದು)

          • ಗುಟ್ಟು:
            ೧) ರಾವಣ ಸರಸಿಜಾಕ್ಷಿಯ: ಸ್ವರಾದಿಯಾದ ಪದವನ್ನು ಬಳಸಿ ಸಂಧಿಯಾಗಿಸಿ – ರಾವಣನಂಬುಜಾಕ್ಷಿಯ
            ೨) ’ತಾ’ ಎಂಬುದು ಮತ್ತೆಮತ್ತೆ ಪ್ರಯುಕ್ತವಾಗಿದೆ. ಅದನ್ನು ತಪ್ಪಿಸಿದರೆ ಬೇರೆ ವಾಗ್ರೀತಿಯು (diction) ಹೊಳೆಯುತ್ತದೆ.
            ೩) ಪದ್ಯರಚನೆಯ ನಂತರ, ಹೊಸ/ನಡುಗನ್ನಡದ ಶಬ್ದಗಳಿವೆಯೇ (ಸೆರೆಯಲಿಡುತಲಿ, ಮೆರೆದಿರಲು, ಬೆಳಕನು, ಭುಜದಲ್ಲಿರಿಸಿ, ತನ್ನನು) ಹಾಗೂ ಪ್ರತ್ಯಯರಹಿತಶಬ್ದಗಳಿವೆಯೇ (ರಾವಣ) ಎಂಬಿತ್ಯಾದಿಗಳನ್ನು ಗಮನಿಸಿಕೊಂಡರೆ, ಅವನ್ನು ಸರಿಪಡಿಸುವುದಾಗುತ್ತದೆ.

  8. ಹದಿನಾಲ್ಕು ವರುಷಗಳ ವಿರಹವದು ಸಾಕೆಂದು
    ದಶರಥನ ಸುಕುಮಾರ ಮಡದಿಯೆಡೆ ತಾ ಬಂದು
    “ಹೊಸಬೆಳಕ ಹಾದಿಯಲಿ ಪುರದತ್ತ ಸಾಗುತಲಿ
    ಹೊಸಬಾಳ ನಡೆಸೋಣ ಊರ್ಮಿಳೆಯೆ” ಎಂದುಲಿದ

    • ಇಲ್ಲಿ ಊನಗಣಗಳಿಲ್ಲದಿರುವುದರಿಂದ ರಗಳೆಯೆನಿಸುತ್ತದೆ. ಅದರೆ ರಗಳೆಯಲ್ಲಿ ಅಂತ್ಯಪ್ರಾಸವಿರಬೇಕು – ಮೊದಲೆರಡು ಪಾದಗಳಲ್ಲಿರುವಂತೆ. ಇಲ್ಲವೆ ಮೊದಲ ಪಾದವನ್ನು ’ಸ’ಪ್ರಾಸವಾಗಿಸಿ (ಎರಡನೆಯ ಪಾದದ್ದು ಸಮೀಪಪ್ರಾಸವೆನ್ನೋಣ) ಸಮಪಾದಗಳ ಕೊನೆಯ ಗಣವನ್ನು ಊನವಾಗಿಸಿ ಪಂಚಮಾತ್ರವಾಗಿಸಿ. ಉಳಿದೆಲ್ಲ ಚೆನ್ನಿದೆ.

      • ಸರಿದಾರಿ ತೋರಿದ್ದಕ್ಕೆ ಧನ್ಯವಾದಗಳು! ದೋಷಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ

  9. ಸೊಡರಿನ ಮಣ್ಣದೇಮ್ ಪುಡುಕಿ ತಂದುದೆ ಲೋಗರು ಬ್ರಹ್ಮಭೂಮಿಯಿಂ(ಶಿ.ದ್ವಿ)
    ಪಡೆದರೆ ಪತ್ತಿಯಂ ಸೃಜಿಸೆ ಬತ್ತಿಯ ನಂದನದಿಂದಲೇಂ ವಲಂ/
    ಸುಡುತಿಹ ತೈಲಮಪ್ಪುದು ದಿನೇಶನ ಧಾತುವಿನಲ್ಲದಿದೊರ್ಡಂ
    ಕುಡಲಿಕಶಕ್ಯಮೈ ಪ್ರಭೆಯ ತಾಂ ಸಲೆ ರಾಮನಿಗಂತೆ ಸೀತೆಗಂ //

    ಆ ಹಣತೆಯನ್ನು ತಯಾರಿಸಲು ಬಳಸಿದ ಮಣ್ಣು ಬ್ರಹ್ಮಭೂಮಿಯದ್ದಾಗಿರಬೇಕು, ಅದರ ಬತ್ತಿಯನ್ನು ಮಾಡಲು ಬಳಸಿದ ಹತ್ತಿ ನಂದನವನದ್ದೇ ಇರಬೇಕು, ಹಾಗೆ ಅಲ್ಲಿ ಉರಿಯುತ್ತಿರುವ ಎಣ್ಣೆ ಸೂರ್ಯನಲ್ಲಿರುವ ಧಾತುವೇ ಆಗಿರಬೇಕು. ಅಷ್ಟಲ್ಲದಿದ್ದರೆ ಆ ಹಣತೆಗೆ ರಾಮ-ಸೀತೆಯರಿಗೇ ಬೆಳಕು ಕೊಡುವ ಸಾಮರ್ಥ್ಯವಿರುತ್ತಿತ್ತೇ ?

    ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕಾಗಿ ವಿನಂತಿ.

    • ಚೆನ್ನಾಗಿದೆ. ಧಾತುವಿನ+ಅಲ್ಲ ಎಂಬುದಕ್ಕಿಂತ ಧಾತುವಿನದು+ಅಲ್ಲ ಎಂದರೆ ಸ್ಪಷ್ಟತೆಯಿರುತ್ತದೆ. ಸುಡುತಿರುವೆಣ್ಣೆತಾನದು ದಿನೇಶನ ಧಾತುವದಲ್ಲದಿದೊರ್ಡಂ ಎಂದು ಸವರಬಹುದು.

      • ಧನ್ಯವಾದಗಳು. ಧಾತುವಿಂ+ಅಲ್ಲದಿದೊರ್ಡಂ ಎಂದು ಪದವಿಭಾಗ ಮಾಡಿಕೊಂಡರೆ ತಪ್ಪಾಗುತ್ತದೆಯೇ? ಅಂದರೆ ಎಣ್ಣೆ ಆ ಧಾತುವಿನಿಂದಾಗಿದೆ ಎಂಬರ್ಥದಲ್ಲಿ.

        • ಆಗ, ’ತೈಲವು ದಿನೇಶನ ಧಾತುವಿಮಲ್ಲದಿದೊರ್ಡಂ’ ಎಂದರೆ ಸಾಕಾಗುತ್ತದೆ; ’ಅಪ್ಪುದು’ redundant ಆಗುತ್ತದೆ, ಕಾರಣ, ಅನ್ವಯವು ಇಂತು: ತೈಲಂ ದಿನೇಶನ ಧಾತುವಿಂ ಅಪ್ಪುದಲ್ಲದಿದೊರ್ಡಂ

          • ಓಹ್ ! ಹಾಗಾದರೆ ನೀವು ಹೇಳಿದಂತೆಯೇ ತಿದ್ದುತ್ತೇನೆ. ಧನ್ಯವಾದಗಳು.

  10. ಬತ್ತಳಿಕೆಯನೆಡತೋಳ್ಗಂ,
    ಮತ್ತಾ ತಿರುಮುರುಗಿಸಿರ್ಪ ಬಿಲ್ಲುಂ, ಬೆಳಕೊಳ್
    ಪೊತ್ತಿದ ದೀಪದ ಸಾಲಿಂ-
    ದೆತ್ತಲೊ ಕರೆದೊಯ್ವ ಚಿತ್ರಮಕ್ಕಜಮೆನಿಕುಂ

    ಬತ್ತಳಿಕೆಯನ್ನು (ಬಲದೋಳಲ್ಲಿ ತೊಡದೆ) ಎಡತೋಳ್ಗೆ (ತೊಡಿಸಿ), ತಿರುಮುರುಗಿದ ಬಿಲ್ಲು ಕೂಡ, ಬೆಳಕಿನಲ್ಲಿ ದೀಪದ ಸಾಲಿನಿಂದ (ಬೆಳಕಿನಲ್ಲಿ ಅಂತ ಏಕಂದರೆ, ಪುರದ ಕಟ್ಟಡಗಳೂ, ಮರಗಳು ದೀಪದಬೆಳಕಿಂದಲ್ಲದೆಯೂ ಕಾಣುತ್ತಿವೆಯಲ್ಲ) ಎತ್ತಲೋ ಕರೆದೊಯ್ವ (ಪುರದ್ವಾರಕ್ಕೆ ದೀಪದ ಸಾಲು ಕೊನೆಯಾಗದೆ, ಪುರದ ಭಿತ್ತಿಗೆ ಕರೆದೊಯ್ದಿದಿದೆ) ಚಿತ್ರ ಆಶ್ಚರ್ಯವೆನಿಸುತ್ತಿದೆ.

  11. ಚಿತ್ರಕಲಾವಿದನೊರ್ವಂ
    ಮಿತ್ರಂಗರ್ಪಿಸಿದ ಹಬ್ಬದ ಶುಭಾಶಯಮೇ೦?
    ಪತ್ರದ ಛಾಯಾಚಿತ್ರ -ವಿ
    ಚಿತ್ರಮಿದೆಂಬಂತೆ ಕಾಂಬ ಜಾಣ್ಮೆಯ ಕೃತಿಯೇ೦?

    ಒಬ್ಬ ಚಿತ್ರ ಕಲಾವಿದ ತನ್ನ ಮಿತ್ರನಿಗೆ ಪತ್ರದಲ್ಲಿ ಚಿತ್ರ ಬಿಡಿಸಿ ದೀಪಾವಳಿಯ ಶುಭಾಷಯ ಕೋರಿ ಚಿತ್ರ ಬರೆದು ”ಸೆಲ್ಫಿ” ತೆಗೆದಾಗ ಈ ರೀತಿ ಕಂಡಿತೇ ?

    • ಸೆಲ್ಫಿಚಿತ್ರದೊಳಿರ್ಪ ಸೆಲ್ಲಂ ಪಿಡಿದ ತೋಳ
      (ಮೊಣಕೈ)ಗುಲ್ಫಭಾಗದ ವೋಲು ರಾಮಬಾಹು|
      ಸೆಲ್ಫಿ(sh)ಯಿಲ್ಲಾವುದೆಂಬೆಯೊ? ಪತ್ನಿ ಸೀತೆ her-
      selfಅಲ್ಲದಿನ್ನಾರೊ – ಹಾದಿರಂಪ||

      • ಪ್ರಸಾದ್ ಸರ್, ನಿಮ್ಮ ಪ್ರತಿಕ್ರಿಯಾ ಪದ್ಯ ಅರ್ಥವಾಗಲಿಲ್ಲ .

      • In a selfie pic, a part of the arm of the person who is holding the camera (cellphone) will be visible in the pic. In this pic it is Rama’s arm. The ‘selfie’ person is not Rama himself; it is rather his other self – Seeta.

  12. ಚಂದ್ರಲೋಕವೆ ಭೂಮಿಗಿಳಿಯಿತು
    ಇಂದ್ರಚಾಪವೆ ಹೆಗಲನೇರಿತು
    ಸುಂದರ ಶ್ರೀರಾಮಚಂದಿರ(ಚಂದ್ರನು) ಮರಳಿ ಬರುತಿರಲು
    ಮಂದಗಮನೆಯು ಪತಿಯ ಜತೆಯಲೆ
    ಬಂದಿರಲು ಸಾಕೇತ ನಲಿಯಿತು
    ಸಂದಿರಲು ಹೊಸ ಜೋಡಿ ಸೊಡರಿದು ತನ್ನ ಬೆಳಗಲಿಕೆ

    ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ

  13. ಕಂದ ಗರ್ಭಿತ ಸಾಂಗತ್ಯ //
    ಕಂದ/
    ಮನೆಗೆ ಬರುತುಮಿರುವ ವಿನುತ
    ನೆ,ನರೇಂದ್ರಾ ಜನಕೆ ಪೇಳ್ ದಹಿಸುತಿಪೆರ್ ಮ್ಮೋಲ್|
    ಮನುಜನು ಸಹಿಸಲು ಕಷ್ಟವು
    ಕೊನೆಗೊಂಡೀ ಮನಸಿಗಂ ಪಥವ ತಾಂ ತೋಪರ್ಂ||
    ಸಾಂಗತ್ಯ||
    ಮನೆಗೆ ಬರುತುಮಿರುವ ವಿನುತನೆ,ನರೇಂದ್ರಾ
    ಜನಕೆ ಪೇಳ್ ದಹಿಸುತಿಪೆರ್ ಮ್ಮೋಲ್|
    ಮನುಜನು ಸಹಿಸಲು ಕಷ್ಟವು ಕೊನೆಗೊಂಡೀ
    ಮನಸಿಗಂ ಪಥವ ತಾಂ ತೋಪರ್ಂ||

    ರಾಮನನ್ನು ನೋಡಿ ದೀಪಗಳು ಹೇಳುತ್ತವೆ, ನರೋತ್ತಮನೇ ,ಜನರಿಗೆ ಹೇಳು, ಅವರೂ ಕೂಡ ನಮ್ಮಂತೆ(ದೀಪಗಳಂತೆ,ರಾಮನಂತೆ) ಕಷ್ಟವನ್ನು ಸಹಿಸಿದರೆ ಮನಸ್ಸಿಗೆ(ಇತರರ) ದಾರಿತೋರುವವರಾಗುತ್ತಾರೆ .

    ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು.

  14. ದೀಪಂಗಳೆ ಸ್ವಾ(ಶಿ.ದ್ವಿ)ತಿಸಲ್
    ಭಾಪೆನ ಪುರವೇ ಬೆಡಂಗಿನಿಂದಾಗಮನ-
    ಕ್ಕೀಪರಿಯಿಂ ಕಾತುರದಿಂ
    ದೀಪತಿಪತ್ನಿಯರ ಬಾರೆನುತೆ ಕರೆದಿರ್ಕುಂ

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)