Mar 252018
 

ಪದ್ಯಸಪ್ತಾಹದ ೩೦೦ನೇ ಕಂತನ್ನು ತಲುಪಿದ್ದೇವೆ, ನಿಮ್ಮೆಲ್ಲರ ಬೆಂಬಲದಿಂದಲೇ ಇದು ಸಾಧ್ಯವಾಯಿತು. ಧನ್ಯವಾದಗಳು, ಅಭಿನಂದನೆಗಳು!

ಪದ್ಯಪಾನಿಗಳ ಸಹಕಾರವನ್ನು ಕೋರುತ್ತಾ ಈ ವಾರದ ಸಮಸ್ಯಾಪೂರಣದ ಸಾಲುಗಳನ್ನು ಕೊಡುತ್ತಿದ್ದೇನೆ:

೧. ಕಂದಪದ್ಯದ ಸಾಲು
ಆನೆಗಳೇ ನಾಯ ಕಂಡು ಬೆದರೋಡಿರ್ಕುಂ

೨. ಪಂಚಮಾತ್ರಾ ಚೌಪದಿಯ ಸಾಲು
ಕಾಂಸ್ಯಮೌನಂ ಮನೋಹರಮೆನಿಕ್ಕುಂ
ಕಾಂಸ್ಯ – ಕಂಚು (ಕಂಚಿನ ಕಂಠ)

  33 Responses to “ಪದ್ಯಸಪ್ತಾಹ ೩೦೦: ಸಮಸ್ಯಾಪೂರಣ”

  1. ಶ್ವಾನದವೊಲ್ ಬೆಂಬಿಡೆವೆನೆ
    ದೀನರ ಮುಖವಾಡದಿಂದೆ ಬೇಡಲ್ ಧನಮಂ
    ದಾನವ್ರತಮಂ ಮೆಯ್ವೆ-
    ತ್ತಾನೆಗಳೇ ನಾಯ ಕಂಡು ಬೆದರೋಡಿರ್ಕುಂ

    • ಬೆಂಬಿಡದೆನೆ=ಬೆಂಬಿಡದು+ಎನೆ. ಬೆಂಬಿಡದೆನೆ=ಬೆಂಬಿಡದೆಲೆ ಎಂಬರ್ಥದಲ್ಲಿ ಪ್ರಯೋಗಿಸಿರುವಿರ? ಕಲ್ಪನೆ ಚೆನ್ನಾಗಿದೆ.

      • ಪ್ರಸಾದು ಧನ್ಯವಾದ, ನನ್ನ ಉದ್ದೇಶ ಬೆಂಬಿಡೆವು ಎನೆ ಎಂದಿತ್ತು. ಬೆಂಬಿಡದೆಲೆಯೂ ಸರಿ ಹೊಂದುತ್ತದೆ.. ಟೈಪೋ ಸವರಿಸಿದ್ದೇನೆ

  2. ಶ್ವಾನರ್ ದುರ್ಜನರೆಲ್ಲರ್
    ಮಾನಧನರ್ಕಳೆ ಗಜೋಪಮರ್ ಲೋಕದೊಳಂ
    ಮಾನಮೆ ಮುಖ್ಯಮೆನುತ್ತೀ
    ಆನೆಗಳೇ ನಾಯ ಕಂಡು ಬೆದರೋಡಿರ್ಕು೦

    ಹಾಂಸ್ಯತೇಜಂ ಬುವಿಗೆ ಬಂದಿಳಿದು ಕೃಷ್ಣನೊಲ್
    ಧ್ವಂಸ್ಯಧರ್ಮಾಧರ್ಮಿಜನರನಿರಿಯಲ್
    ಹೈ೦ಸ್ಯಜನಗಣಕಾಗಳೋಸರಿಸಿ ಸಂದಿರ್ಪ
    ಕಾಂಸ್ಯಮೌನಂ ಮನೋಹರಮೆನಿಕ್ಕು೦//

    • ಆದ್ಯಕ್ಷರಪ್ರಾಸದಲ್ಲಿ ವೃಷಭ-ಶರಭಗಳೆರಡನ್ನೂ ಹೊಂದಿಸಿರುವುದು ಸ್ವಾರಸ್ಯಕರವಾಗಿದೆ. ಆದರೆ, ಕಂದಪದ್ಯಕ್ಕೆ ಸೋಮರಿಂದಲೂ ಪಂಚಮಾತ್ರಕ್ಕೆ ನನ್ನ ಮನಸ್ಸಿನಿಂದಲೂ ಕಲ್ಪನೆಯನ್ನು ಕದ್ದಿದ್ದೀರಿ 😉

    • ಬಹಳ ಚೆನ್ನಾಗಿದೆ

      • ಧನ್ಯವಾದಗಳು ಸೋಮಣ್ಣ. ಹಾದಿರಂಪರೇ, ಬೇರೆಯವರ ಮನಸ್ಸಿನಿಂದ ಕದಿಯುವ ಕಲೆ ನನ್ನಲ್ಲಿದೆಯೆಂದು ಇಂದೇ ತಿಳಿದಿದ್ದು. ಎಷ್ಟೇ ಆದರೂ ಒಬ್ಬ ಕವಿಯ ಕೈ ಇನ್ನೊಬ್ಬ ಕವಿಯ ಕಿಸೆಯಲ್ಲಿಯೇ ತಾನೇ 😛

  3. ಅಂದಹಾಗೇ ಸೋಮಣ್ಣ,ಕಾಂಸ್ಯ ಅಂದರೇನೇ ಕಂಚು ಎಂದರ್ಥ. ಕಂಸ ಅಂದರೆ ನೀರು ಕುಡಿಯುವ ಪಾತ್ರೆ.

  4. ಗುರು – ಸಿಂಹ. ಛಾತ್ರರು – ಆನೆಗಳು. ಪಾಠವಿಷಯ – ಮನುಜನೊಬ್ಬನ ಮನೆಯಲ್ಲಿ ಇಲಿಗಳ ಕಾಟ.
    ಏನೆಂಬಿರೋ ಇಲಿಗಳಿಂ
    ಬೇನೆ! ಬಿಡಾಲಗಳನೈದ ತರಲವನಾಗಳ್|
    “ಬೋನಕೆಮಗಾಯ್ತೆ”ನಲು ನಾಯ್
    ಆನೆಗಳೇ (ಕೇಳಿ), ನಾಯ ಕಂಡು ಬೆದರೋಡಿರ್ಕುಂ (ಬೆಕ್ಕುಗಳು)||

  5. ಮೀನಿಗಾಗಿ ಬಂದ ಕೊಕ್ಕರೆಗಾಗಿ ಬಂದು, ನೀರಿನ ಮರೆಯಲ್ಲಿ ಕಳ್ಳನಂತೆ ಹೊಂಚುಹಾಕುತ್ತಿದ್ದ ಮೊಸಳೆಯನ್ನು ನೋಡಿ ಕೊಕ್ಕರೆಯು ಬೆದರಿ ಓಡಿತು. ನೆಗೞೇನಾಯ = ಮೊಸಳೆಯು ಅದೆಂಥ ಆಯಕಟ್ಟಾದ ಸ್ಥಾನದಲ್ಲಿದೆ!
    ಮೀನಿಂಗೆ ಬರ್ಪ ಕೊಂಜಂ,
    ಬೋನಕರಸಿ ಚೋರನೊಲ್ ಪ್ರತೀಕ್ಷಿಸುತುಂ ಮೇಣ್|
    ಮೌನದೆ ನೀರೊಳಡಂಗಿ-
    ರ್ಪಾ ನೆಗೞೇನಾಯ! ಕಂಡು ಬೆದರೋಡಿರ್ಕುಂ (ಕೊಕ್ಕರೆ)||

    • ಗಣೇಶ್ ಸರ್ ಕೂಡಾ ಮೊಸಳೆಯ ಪರಿಹಾರವನ್ನ ಕೊಟ್ಟಿದ್ದರು… ನನ್ನ ಬಳಿ ಅವರ ಪದ್ಯವಿಲ್ಲ… ಚೆನ್ನಾಗಿದೆ ಪ್ರಸಾದು

      • ಮಾತ್ರಮಿನಿತಲ್ಲ ಪೋಪುದು ಪಿಂತಕಿನ್ನಷ್ಟು
        ಚಿತ್ರಪರಿಹಾರೇತಿಹಾಸಮಿದು ಕೇಳ್|
        ಪುತ್ರನಂ ಸನ್ಯಾಸಕಾರ್ಯಾಂಬೆಯಿತ್ತುದುಂ
        ಕೃತ್ರಿಮದ ನಕ್ರಪರಿಹಾರಮಲ್ತೆ||

  6. ವೃಷಭ-ಶರಭ(೦ಸ್) ಆದ್ಯಕ್ಷರಪ್ರಾಸವನ್ನು ತಪ್ಪಿಸಿಕೊಳ್ಳಲು ಮತ್ತೇಭಕ್ಕೆ ಅಳವಡಿಸಲು ಸಮಸ್ಯಾಪಾದವನ್ನು ತುಸು ಬದಲಿಸಿಕೊಂಡಿದ್ದೇನೆ
    ಕಿರಿವಾಯ್ ಪೀತಲಪಾತ್ರದಿಂ ಕಿವಿಯ ಮುಚ್ಚುತ್ತಕ್ಷಿಯಂ ಮೇಳಿಸೈ
    ಒರೆವ ಸ್ವಾನಮನಾಲಿಸಲ್ ತಿಳಿಯುವೈ ನೀ ಮೌನನಾದಂಗಳಂ|
    (ಗವ್ವ್ ಎಂಬ)ರವಮೇ ಮೂರ್ತಮೆನಿಪ್ಪ ವಿಸ್ಮಯಕರಂ ತಾಂ ಕಾಂಸ್ಯಮೌನಂ ಮನೋ
    ಹರಮಕ್ಕುಂ ಗಡ ಮತ್ತಮತ್ತಮೆನುವೆಂ ಕೇಳ್ವೆಂ ಸದಾ ಎನ್ನುತುಂ||

  7. ಶಾನೆ ತಿನುವಾನೆಯೊಡಲಿನ
    ಮಾನವರವರಿಂ ಖಜಾನೆಯಂ ಕಾಯುತಿರಲ್
    ಶ್ವಾನದವೋಲ್ ಗಡ ಮಾವಂ*
    ಆನೆಗಳೇ ನಾಯಕಂಡು ಬೆದರೋಡಿರ್ಕುo!!

    *ಮಾವಂ ~ ಮಾವಂತಂ !!

    ರಾಜಕಾರಿಣಿಗಳನ್ನು ಕಾಯುವ ಅಧಿಕಾರಿಗಳ ಕಲ್ಪನೆ !!

  8. ಹಿಂಸ್ಯರೆನೆ ಭಾವಿಸುತೆ ಭಾರತೀಯರನಾಳ್ದ
    ಕಾಂಸ್ಯಬುದ್ಧಿಯ ಮ್ಲೇಚ್ಛಶಾಸ್ತೃವಿಂಗೆ
    ಧ್ವಂಸ್ಯಮೆನೆ ದೇಸಿಗರ ಕಲೆಗಳಂ ಕಾಂಬವಗೆ
    ಕಾಂಸ್ಯಮೌನಂ ಮನೋಹರಮೆನಿಕ್ಕುಂ

  9. ಶಂಸ್ಯನೈ ಪಕ್ಷಪಾತವ ತೊರೆದ ಕೃಷ್ಣಂ, ನೃ-
    ಶಂಸ್ಯನಿರ್ಪ ನಿಜಮಾತುಲನ ಕೊಂದಂ|
    ಕಾಂಸ್ಯಮೌನಂ ಮನೋಹರಮಕ್ಕುಮೆನಗೆ, ಮೀ-
    ಮಾಂಸ್ಯಮಾಪ್ಯಾಯಮಹುದೇನು ನಿಮಗಂ??
    (ಮೀಮಾಂಸ್ಯ – Krishna’s act of killing an elder relative)

  10. ವಿನೋದವಾಗಿ :

    ಏನುಂ, “ಸ್ವಚ್ ಭಾರತ್ ” ಅಭಿ-
    ಯಾನದೆ ದೊರೆಯದೆಲೆ ಕುಪಿತಮಾಗೆ ಶ್ವಾನಂ
    ಶಾನೆ ಪಸಿದಿರಲ್ ಗಡ ಪಾ-
    ಯ್ಖಾನೆಗಳೇ ನಾಯಕಂಡು ಬೆದರೋಡಿರ್ಕುಂ !!

    ಹಸಿದು ಕೋಪಗೊಂಡ ನಾಯಕಂಡು ಹೆದರಿ ಓಡುತ್ತಿರುವ “ಪಾಯಖಾನೆ ” ಗಳ ಕಲ್ಪನೆ !!

    • hhahha. (ಪ್ರಥಮಪಾದದಲ್ಲಿ ಗಣವಿಭಜನೆ ಸರಿಯಾಗಿ ಆಗಿಲ್ಲ)

      • ಬಿಟ್ಟುಬಿಡಿ ಪ್ರಸಾದ್ ಸರ್ , ಸಂಧಿಕಾರ್ಯ ಮಾಡಲು ಹೋಗಬೇಡಿ !!

      • ಏನುಂ । “ಸ್ವಚ್ ಭಾ । ರತ್” ಅಭಿ । – ಸರಿಯಿದೆ ಅಲ್ಲವೇ ?

      • ಸ್ವಚ್ಭಾರತ್ – ಅಸಾಧು. ತ್+ಅ ವಿಸಂಧಿ. ಏನುಂ ಸ್ವಚ್ಛಭಾರತಾಭಿ- ಎಂದಾಗಬೇಕು.

        • ಪ್ರಸಾದ್ ಸರ್, ಅಂತೂ ನೀವು ಸಂಧಿ-ವಿಸಂಧಿಗಳನ್ನು ತೋರಿಸಿ ಫಸ್ಟ್ ಸ್ಟೆಪ್ ನಲ್ಲಿ “ಸ್ವಚ್ ಭಾರತ್ ಅಭಿಯಾನ”ದ ಹೆಸರುಳಿಸಲು ಬಿಡುತ್ತಿಲ್ಲ !!

          ಏನುಂ ದೊರಕದೆ, ನಡೆದಭಿ-
          ಯಾನಂ ಕಾಣ್ ಸ್ವಚ್ಛಭಾರತದೆ ಶ್ವಾನಂ ತಾಂ
          ಶಾನೆ ಪಸಿದಿರಲ್ ಗಡ ಪಾ-
          ಯ್ಖಾನೆಗಳೇ ನಾಯಕಂಡು ಬೆದರೋಡಿರ್ಕುಂ ||

          • ಈಗ ಎರಡನೇ ಜಗಣ ತೆಗೆದಿದ್ದೀರಿ 😉

            ಪೊರಕೆಯಂ ಪಿಡಿದವರಿಗಿದು ಕಾಲವಲ್ಲವೌ
            ಜರುಗಲೀಯರು ಸಮಾರಾಧನೆ ವಿಸಂಧಿಯೊಳ್

          • ಅವರು ಶಿಥಿಲದ್ವಿತ್ವ ಮಾಡಿದ್ದಾರೆ. (/ತದೆ ಶ್ವಾ/ ಜಗಣವಲ್ಲ, ಯಗಣ)

        • ಪೊರಕೆಯಂ ಪಿಡಿದಾಕೆಯನ್ನೆದುರ್ಗೊಂಡು ನೀಂ
          ನರನೆ ನಿಲ್ ಧೈರ್ಯಮಿದ್ದೊಡೆ, ನೋಡುವೆಂ|
          ಖರೆಖರೆ ’ಸಮಾರಾಧನೆ’ಯದಾವುದೆನ್ನುತಾ-
          ಗರಿಯುವೆಯೊ ಜೀವೆಂಕಟೇಶಜೀಯ||

        • ಸಂಸ್ಕೃತ “ಶ್ವಾನ “ವಾದ್ದರಿಂದ “ಶಿಥಿಲ ದ್ವಿತ್ವ “ದ ಸಮಸ್ಯೆ !!
          ಸಾನ ~ ಶ್ವಾನ (ತ್ಸ ) ?

          ಏನುಂ ದೊರಕದೆ , ನಡೆದಭಿ-
          ಯಾನಂ ಕಾಣ್ ಸ್ವಚ್ಛ ಭಾರತದೆ ಸಾನಂ ತಾಂ
          ಶಾನೆ ಪಸಿದಿರಲ್ ಗಡ ಪಾ-
          ಯ್ಖಾನೆಗಳೇ ನಾಯಕಂಡು ಬೆದರೋಡಿರ್ಕುo||

        • ಜೀವೆಂ , ಅಮಿತ ಬಚ್ಚನ್ ಥರ ಬಂದು “ಬಾಗಿಲು ಬಂದ್ ” ಮಾಡಿಸದೆ …. !!

          • ಕುರಿ ಕೊಬ್ಬಿದಷ್ಟೂ ಕುರುಬನಿಗೆ ಲಾಭ ಅಂತ ಸುಮ್ಮನಿದ್ದೀನಿ ಅಷ್ಟೆ … 🙂

  11. .

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)