Mar 212015
 

ಎಲ್ಲರಿಗೂ ಮನ್ಮಥನಾಮ ಸಂವತ್ಸರವು ಶುಭವನ್ನೂ ಸೌಖ್ಯವನ್ನೂ ಉಂಟುಮಾಡಲಿ.
ಈ ಬೇವು ಬೆಲ್ಲದ ಸಮಸ್ಯೆಯನ್ನು ಪರಿಹರಿಸಿ 🙂

ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್

  70 Responses to “ಪದ್ಯಸಪ್ತಾಹ ೧೪೩: ಸಮಸ್ಯಾಪೂರಣ”

  1. “ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್?”-
    ಭುಲ್ಲಯಿಸಲ್ ರಸಾಂಗಣದೆ ಮಾಧುರಿ,ತಿಕ್ತಮನೆಂತು ಪಾಡುವರ್ !
    “ತಲ್ಲಣಮನಿತ್ತು ಬಂಧಿಪುದು ಪಾಶವು” ರೂಢಿಯ ಮಾತಂ ತಳ್ಳುತುಂ
    ಮೆಲ್ಲನೆ ಗುಲ್ಲಮಾಡದೆ ಹಬ್ಬಿಯೆ ತಾಂ ಪ್ರೇಮಪುಷ್ಪವೀಯದೆ?

  2. ಬಲ್ಲವ ಬಲ್ಲನೈ ಕಹಿಯಬೇವೊಡೆ ಬೆಲ್ಲದ ಸೀಯ ಸಂಗವಂ
    ತಲ್ಲಣಮೆಂತು ಬಾಳೊಳನಿವಾರ್ಯ ಸಮನ್ವಯ ಸೂತ್ರ ಕಾಣಿದುಂ ।
    ಒಲ್ಲೆನುಮೆಂದು ಕಂದನ ಕೊಳ್ಳದ ನಾರಿಯರೆಂತು ಜೀವಿಪರ್
    ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್ ।।

  3. “ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್”
    ಒಲ್ಲದ ಮಾತ ಬಲ್ಲುದೊಳ ಜಿಹ್ವೆಯು .ಹಸ್ತಕಿದೂ ಅಗೋಚರಂ !
    ಸಲ್ಲಿಸಿ ಪೂಜೆಯಂ ಕುಡಿದು ತೀರ್ಥವ ಗಂಗೆಯ ಪೊಗಳಾಡುವರ್,
    ಸೊಲ್ಲಿರಿ ಯೇನ ತಾಮುಲಿಗು ! ನಿಲ್ಲಿಸೆ ಬಂಧಿಸಿಯಾಕೆಯೊಳ್ ದಿನಂ ?

  4. ಸಲ್ಲುವನಾವಗಂ ಸ್ವಜನಸೌಖ್ಯನಿಯೋಜನಕೆಂದು ಕಷ್ಟದಿಂ-
    ದೊಲ್ಲದ ಕಜ್ಜಮಂ ಕಠಿನಮಾದುದನೆಂತುಟೊ ಗೆಯ್ಯುತಿರ್ದಪಂ
    ಮೆಲ್ಲಗೆ ಪರ್ವದಾ ದೆವಸದೊಳ್ ಮಿಗೆ ಪೇಳದೆ ಪೋಗೆ ಕಜ್ಜಕಂ
    ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೇಕೆ ದೂಷಿಪರ್!!
    (ತನ್ನ ಜನರಿಗೆ ಸೌಖ್ಯವನ್ನು ನಿಯೋಜಿಸಬೇಕೆಂದು ಕಷ್ಟದಿಂದ ಕಠಿನವಾದ ಕಾರ್ಯವನ್ನು ಹೇಗೋ ಮಾಡುತ್ತಿದ್ದವನು ಮೆಲ್ಲಗೆ ಹಬ್ಬದ ದಿನದಂದು ಹೇಳದೆಯೇ ಕೆಲಸಕ್ಕೆ ಹೋಗಿರಲು, ಬೆಲ್ಲವನ್ನು(ಸುಖವನ್ನು) ಬೇಡ ಎಂದು ಬೇವನ್ನೇ(ಕಷ್ಟವನ್ನೇ) ಇಚ್ಛಿಸುವ ಅವನನ್ನು ಅದೇಕೆ ದೂಷಿಸುತ್ತಾರೆ!!-

    • ಅಪ್ಪಟತುಪ್ಪದಂತೆ ಪಳಗನ್ನಡದೊಳ್ ಕವನಂ ಮನೋಹರಂ!!

      • ಸಪ್ಪೆಯ ಬೇವಿಗಂ ಗುಡದ ಲೇಪನಮಿತ್ತವೊಲೆನ್ನ ಪದ್ಯಮಿಂ
        ತೊಪ್ಪುಗುಮೆಂದು ನೀಮ್ ಮಧುರಮಾಗಿಸೆ ವಂದಿಪೆನಿಂತು ಪದ್ಯದಿಂ|

    • ಕೊಪ್ಪಲತೋಟರ೦ ಗಡ ಕಚೇರಿಯ ಭೂತಮೆ ಮೆಟ್ಟಿತೈ ದಿಟ೦!
      ತಪ್ಪಿದೊಡೇ೦ ಯುಗಾದಿಯೊಳೆ ಬೆಲ್ಲಮಿದಲ್ತೆ ಸುಪದ್ಯಮೋದಕ೦!!

  5. ನನ್ನ ಸಿಹಿಮಾತುಗಳ ಸವಿ ಸಾಕಾಗದೇ ಇವರಿಗೆ?! ನನ್ನ ಡಯಾಬಿಟಿಸ್ ಕ೦ಟ್ರೋಲ್ ಮಾಡಲು ಬೆಲ್ಲ ಬೇಡ ಎ೦ದರೆ ಏಕೆ ಕೋಪವೋ?

    ಸೊಲ್ಲಿರಲು೦ ಗುಡ೦ ಸಿಹಿಯೊಳು೦ ಸುಮದೊಲ್ ಮೃದುವಾಗಿರಲ್ ಮನ೦-
    ಗೊಳ್ಳುತಲೇ೦ ನಿಬ೦ಧನೆಯೊ ಮೇಣ್ ಮಧುಮೇಹಮಿರಲ್, ಯುಗಾದಿಯು೦!
    ಕೊಳ್ಳಿಮೆನುತ್ತೆ ತ೦ದು ಕುಡುವರ್ ತಿನಲೆ೦ದೆನೆ ಬೇವುಬೆಲ್ಲಮ೦
    ಬೆಲ್ಲಮನೊಲ್ಲೆನೆ೦ದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್!

  6. ನಿಲ್ಲದೆ ಸೌಧದೊಳ್, ಸಿರಿಯನೊಲ್ಲದೆ ಸಾಗಿರೆ ಯೋಗಮಾರ್ಗದೊಳ್
    ಸಲ್ಲಲಿತಾತ್ಮನೊರ್ವನೆ ಶಿವಂ ಪತಿಯಕ್ಕೆನಗೆಂದು ಗೌರಿಯು-
    ತ್ಫುಲ್ಲನಿಜಾಸ್ಯೆ; ಶರ್ವನೊಲಿಯಲ್ಕವಳಂ; ಜಗಮೊಪ್ಪಿ ಪಾಡದೇಂ?
    ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೋಕೆ ದೂಷಿಪರ್??

    • ಸರ್, ಕೃತಿಚೌರ್ಯಕ್ಕಾಗಿ ಕ್ಷಮಿಸಬೇಕು 🙂

      ನಿಲ್ಲದೆ ವೃತ್ತಿಯೊಳ್, ಸತಿಯನೊಲ್ಲದೆ ಸಾಗಿರೆ ಕಾವ್ಯಮಾರ್ಗದೊಳ್
      ಸಲ್ಲಲಿತಾ೦ಗಿಯಿರ್ಪೊಡೆ ಕಲಾಮಯಿಯೆನ್ನಯ ಮಾತೆಯೆ೦ದೆನು-
      ತ್ತುಲ್ಲಸಿತರ್ ಗಣೇಶರವಳ೦ ಭಜಿಸಲ್ಕೊಲಿಸಲ್ಕೆ ಪಾಡೆವೇ೦?
      ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೇಕೆ ದೂಷಿಪರ್??

    • ಪದ್ಯಮಿದೊಪ್ಪುಗುಂ ರಸಿಕ ಕಬ್ಬಿಗರೋದುಗರೆಲ್ಲರುಂ ಗಡಂ 🙂

  7. ತಲ್ಲಣಿಸುತ್ತೆ ವಿಶ್ವಮಿರಲು೦ ಮಹದುಗ್ರತೆಯಿ೦ ಸುರಾಸುರರ್
    ಝಲ್ಲೆನುತಿರ್ದ ಜೀವದಿನೆ ಬೇಡೆ ಹರ೦ ಕೊಳೆ ಕಾಲಕೂಟಮ೦
    ಪಲ್ಲವಿಸಿರ್ದ ಭಕ್ತಿಯಳಲಿ೦ದೆ ಶಿವವ್ರತಿಯೋರ್ವನಿ೦ತು ತಾ೦
    ಬೆಲ್ಲಮನೊಲ್ಲೆನೆ೦ದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್! (ಸೋಮರ್ :))

  8. ಗೆಲ್ಲುವರಾದೊಡಂ ಬಳಿಗೆ ಸಾರ್ಚುತೆ ಮಂದೆಯ ಮೆತ್ತ ಕೂಡುವರ್
    ಸಲ್ಲಿಸೆ ಹಾರವಂ ನಗುತೆ ಪಾದಕೆ ಬೀಳುವ ಸೋಗನಾಡುವರ್
    ಕಲ್ಲನು ರತ್ನವೆಂದೆ ಪೊಗಳಾಡುತೆ ಮಂಡೆಯ ಮೇಲೆ ಪೊಂದುವರ್
    ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್?

    • ಉಲ್ಲಸಿತಂ ಸಿತಂ ನವಲಕಲ್ಪನೆ; ಪದ್ಯದ ಬಂಧದೊಳ್ ಸಮು-
      ತ್ಫುಲಮಿರಲ್ಕೆ ತಾಂ ಪಳೆಯ ಕನ್ನಡದೊಳ್ನುಡಿ ಚೆಲ್ವು ಗೆಲ್ವುದೌ!!

  9. ಮಲ್ಲಿಗೆಯಂತ ಪತ್ನಿಯಿರಲಾತಳ ನೋಯಿಸುತಿರ್ಪನಿತ್ಯಮುಂ
    ಸಲ್ಲದ ಮಾತಿನಿಂ ತಿವಿದು ತನ್ನಯ ದರ್ಪಮತೋರ್ವನೀತ ಕೇಳ್
    ಗೆಲ್ಲಲು ಮತ್ತದಾರೊ ಪಣವೆಣ್ಣಿನ ಪಿಂದೆಯೆ ಪೋಪನೇತಕೀ
    ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್

    • ಸಲ್ಲುವ ಕಲ್ಪನೆ ಪ್ರಥಿತಮಯ್; ಪಳಗನ್ನಡಮೊಂದೆ ಶಾಶ್ವತಂ

  10. ಕ೦ದ, ಯುಗಾದಿಯ ದಿನಮಿ೦-
    ದೆ೦ದು ಕುಡುವೆನೊ೦ದು ಕಜ್ಜಮ೦, ತ೦ದು ಕುಡೈ
    ಚೆ೦ದದ ಬೇವ ಚಿಗುರನು೦
    ನಿ೦ದರೆಘಳಿಗೆಯೊಳೆ ಮೆಲ್ಲುವೆಲೆ ಬೆಣ್ಣೆಯನು೦

    ಎ೦ತೆ೦ದಾ ಯಶೋದೆ ಬೆಸಗೊ೦ಡಿರಲ್ಕೆ, ಮನೆಯ೦ಗಳದ ಕೈಗೆಟುಕುತ್ತಿರ್ಪ ಕೊ೦ಬೆಗಳ ಪೊಸಚಿಗುರೊಡೆರ್ದ ಬೇವಿನ ಮರದೆಡೆಗಮುಲ್ಲಸಿತ ಮೊಗದಿ೦ ಸಾರ್ದು ಕೈಚಾಚಿ ತುದಿಗಾಲ್ಬೆರಳ್ಗಳನೂರಿ ಚಿಗುರಿನೆಸಳ೦ ತುದಿಬೆರಳ್ಗಳಿ೦ ಚಿವುಟಿ ತೆಗೆತೆಗೆದುತ್ತರೀಯದೊಳಿಟ್ಟು ಲಗುಬಗೆಯಿನೈತ೦ದ ಕೃಷ್ಣನ೦ ಕ೦ಡೋರ್ವ ಗೋಪಿ ತಾನಾ ಬೇವಿನೊಳೆ ಮೋಹ೦ಗೊ೦ಡು ಬೇರೆಲ್ಲ ಬೇಡ, ಸಾಕು ತನಗದೊ೦ದೆನೆ, ಮನೆಯವರೆಲ್ಲರದ ಹಳಿಯೆ, ಮುಳಿದಿವಳು ಖೇದದಿನೆ ಮನದೊಳಗಿ೦ತೆ೦ದಳ್,

    ಸಲ್ಲಲಿತ೦ ವರಾ೦ಗಚಲಿತ೦ ವದನ೦ ವರಮ೦ದಹಾಸಮ೦
    ಚೆಲ್ಲುತಲಿರ್ಕೆ ಚೆಲ್ವ ಕರಪಲ್ಲವದಿ೦ ಪಿಡಿತ೦ದ ಪೂವಿನೊಳ್
    ಸೊಲ್ಲ ಸುಧಾರಸ೦ ತುಳುಕಿರಲ್, ತೆಗೆ ಗಾಣಿಗನೆತ್ತು ಮೂಸಿದೀ
    ಬೆಲ್ಲಮನೊಲ್ಲೆನೆ೦ದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್

    • ಸಲ್ಲಲಿತಂ ಗಡಾ ಭವದಮೋಘಮನೋಹರಚಂಪುವಿಂಪಿನಿಂ!!

      • ಉಲ್ಲಸಿತ೦ ದಿಟ೦ ಸಹೃದಯರ್ ಮಿಗೆ ಮೆಚ್ಚಿರೆ ನೀಲಕ೦ಠನೆ-
        ಲ್ಲಿಲ್ಲದ ಧನ್ಯತಾನುಭವಮ೦ ಸವಿಯುತ್ತೆ ಸಹರ್ಷಮಾನಸ೦!

  11. ವಿನೋದವಾಗಿ :
    ಒಲ್ಲೆವುಮೆನ್ನರುದ್ದಿನೊಡೆಯಾಂಬೊಡೆ, ಹಾಗಲಕಾಯ ಗೊಜ್ಜೊಡಂ,
    ಪುಲ್ಲಣೆ-ಪಾಲು ಪಲ್ಲೆ ಪುಳಿಯೋಗರೆ ಪಾಯಸ ಮೇಣ್ ಪಳದ್ಯವಂ ।
    ನಿಲ್ಲಿಸರಲ್ಲ ತಾಮುಣುವುದಂ, ಬಗೆಭಕ್ಷ್ಯದೆ ಷಡ್ರಸಂಗಳೆಂ-
    ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್ !!

    ಪುಲ್ಲಣೆ = ಹೋಳಿಗೆ ಬೇವು = ಕಹಿ (ಹಾಗಲಕಾಯ ಗೊಜ್ಜು!)

    • ಝಲ್ಲನೆ ಮಿಂಚದೇಕೆ ಪಳಗನ್ನಡದುಜ್ಜ್ವಲದೀಪ್ತಿ ಸೋದರೀ! 🙂

      • ಗಣೇಶ್ ಸರ್ ,
        “ಮಿಂಚಿದೇಕೆ” ಎಂದು ತಪ್ಪಾಗಿ ಓದಿಕೊಂಡು ಝಲ್ಲೆಂದುಬಿಟ್ಟಿತ್ತು !!
        “ಷಡ್ರಸಂಗಳೆಂ – ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್ !?”
        ಈ “ಕೀಲಕ”ದ ಬಳಕೆ ಸರಿಯಿದೆಯೇ ಸರ್ ?

        • ಈ ಕೀಲಕವನ್ನು ನಾನು ಪೇಟೆಂಟ್ ಮಾಡುವವನಿದ್ದೆ. ಅಷ್ಟರಲ್ಲೇ ಅಪಹರಿಸಿಬಿಟ್ಟಿರಿ. ನಾನು ಈ ಸಮಸ್ಯೆಯನ್ನು ಬಿಡಿಸುತ್ತೇನೆಯೋ 🙁 ಇಲ್ಲವೋ 🙁

          • ರ೦ಪರೆ, ಕೈಗೆ ಸಿಕ್ಕಿಹುದು ಬಾಯ್ಗದು ದಕ್ಕದೆ ಪೋಯ್ತಲಾ, ಲಲಾ-
            ಟ೦ ಪಡೆದಿರ್ಪುದೇನಿದನೆ! ಬೊಮ್ಮನ ಕೈಬರೆಹ೦ ಗಡಾ, ಗುಡ೦
            ಕ೦ಪನೆ ಬೀರುತು೦ ದೊರೆವುದಾರಿಗೊ, ಬೇವದು ಬೇರೆಯಾರಿಗೋ
            ಗು೦ಪೊಳೆ ರ೦ಗನಾಥಕೃಪೆಯಿ೦ ದೊರೆಕೊ೦ಬುದು ದಲ್ ಪ್ರಸಾದಮೈ!!

          • ಬೇವನದೇಕೆ ದೂಷಿಪರ್ ?!!

            ತಲ್ಲಣಗೊಂಡವಂ ಬದುಕ ಬೇಗುದಿಬೇಸರಮೆಲ್ಲ ಮೀರಲುಂ
            ನಿಲ್ಲದೆ ಸೌಧದೊಳ್, ಸಿರಿಯನೊಲ್ಲದೆ ಸಾಗುತೆ ಯೋಗಮಾರ್ಗದೊಳ್
            ಗೆಲ್ಲುದಕಿಂತುಮಪ್ಪಲು ವಿರಾಗವ, ರಂಜಿಪ ಸೌಖ್ಯಸಂಗಮೆಂ-
            ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ, ಬೇವನದೇಕೆ ದೂಷಿಪರ್ !!

            **ಬೇವನ = ಬೇಯುವವನ = ತಪಿಸುವವನ, ಎಂದಾದೀತೇ?
            (ಕಾವನ = ಕಾಯುವವನ = ಕಾಪಾಡುವವನ ಎನ್ನುವ ಹಾಗೆ)

  12. ಮೆಲ್ಲುತೆ ಸಂತತಂ ಮಧುರಭಕ್ಷ್ಯವ,ರೋಗಿಗಳಾಗೆ ಮಂದಿಗಳ್,
    ತಲ್ಲಣಿಸುತ್ತೆ ವೈದ್ಯರನೆ ಕಂಡಿರೆ, ವರ್ಜಿಸಿ ಸೀಯನೆಂದಿಗುಂ,|
    ಗಲ್ಲಿಯ ಬೇವಿನಿಂ ಫಲವ ಮರ್ದಿನ ರೂಪದೆ ತಿನ್ನಲೆಂದಿರಲ್,
    ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ , ಬೇವನದೇಕೆ ದೂಷಿಪರ್ ?! ||

    ( ಬೆಲ್ಲಮನಿಚ್ಛಿಸೆ ಒಲ್ಲೆನೆಂದೆನುತುಂ , ಬೇವನದೇಕೆ ದೂಷಿಪರ್? )

    • ಮೆಲ್ಲನೆ ಕುಗ್ಗಿತೇಕೊ ಪಳಗನ್ನಡದೊಳ್ನುಡಿಯಿಲ್ಲಿ ಸೋದರೀ! 🙂

      • ಗೆಲ್ಲೆ ಸಮಸ್ಯೆಯಂ ಬರೆದ ಪದ್ಯಕೆ ಸಂದಿರೆ ಶೂನ್ಯಸಮ್ಮತಂ,
        ಪೊಲ್ಲಮೆಯಿಂದಿರಲ್,ಪದದೊಳೊಳ್ನುಡಿ ಕುಗ್ಗಿರಲಾಂ ವಿಷಾದಿಪೆಂ 🙁

  13. ಇಲ್ಲವು ಕಾಲವಿನ್ನಿಳೆಯ ಮೇಗಡೆ, ಪಿಂದಣ ರೀತಿಯೆಂದು ತಾಂ
    ಚೆಲ್ಲುತೆ ಕಾಸ, ಕೊಳುತಲೆಲ್ಲವ ,ತೃಪ್ತಿಯ ಪೊಂದುವಾಸೆಯಿಂ
    ಸಲ್ಲಿಸಿ ಧೂಮಕಂ ಕೊಡುಗೆ ಗಾಡಿಯ,ನೀಲಿಯ ಬಾನ ಬೇಡುವರ್
    ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸಿ ಬೇವನದೇಕೆ ದೂಷಿಪರ್?

    • ಇಲ್ಲದೆ ಪೋದುದೇಕೆ ಪಳಗನ್ನಡಸೊಲ್ಲಿನ ಬಲ್ಮೆ ಸೋದರೀ! 🙂

  14. ಬಲ್ಲೆವದೆಲ್ಲಮೆಂದೆನುತೆ ಬೀಗುವ ನಿರ್ಗತಸತ್ತ್ವಸಾರರೈ
    ಸಲ್ಲದ ಟೀಕೆಯೊಳ್ ಸಲೆ ವಿನೋದಿಪ ಸಂಕಟಚಿತ್ತವೃತ್ತಿಗಳ್ l
    ಗೆಲ್ಲುತುಮಂಗಸಂಭವನ ಪಾಶವ, ಲೋಕಹಿತೈಕದೀಕ್ಷ ತಾಂ
    ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್ ll

    • ಒಂದೆರಡು ಸಣ್ಣ ಪುಟ್ಟ ಹಳಗನ್ನಡದ ಸವರಣೆಗಳನ್ನುಳಿದು ಮಿಕ್ಕೆಲ್ಲವೂ ಅನವದ್ಯ, ಹೃದ್ಯ.

      • ಧನ್ಯವಾದಗಳು ಸರ್
        ಹೊಸ ವರ್ಷದ ಶುಭಾಶಯಗಳು

      • ಆ ಸವರಣೆಗಳೇನೆಂದು ತಿಳಿದುಕೊಳ್ಳುವ ಕುತೂಹಲವಿದೆ.
        ಹಳೆಗನ್ನಡ ಸಾಹಿತ್ಯವನ್ನು ಓದಲು ಈ ವರ್ಷದಿಂದ ಪ್ರಾರಂಭಿಸುತ್ತೇನೆ.

    • ಬಹಳ ಚೆನ್ನಾಗಿದೆ 🙂

  15. ಜನರಿಗೆ ಐಹಿಕ ಸುಖಭೋಗಗಳು ಬೇಕು, ಆದರೆ ಐಹಿಕ ಕಷ್ಟಾವಳಿಯು ಬೇಡವಾಗಿದೆ. ಬೆಲ್ಲದಂತಹ ಮುಕ್ತಿಯನ್ನಂತೂ ಇಚ್ಛಿಸುವುದೇ ಇಲ್ಲ. ಆದರೆ ಬೇವಿನಂತಹ, ಮೋಕ್ಷಕ್ಕೊಯ್ಯದ ವಿಚಾರಗಳನ್ನೇ ಇಚ್ಛಿಸಿ ಕಡೆಗೆ ಅವನ್ನೂ ಕಡು ಸಂಕೀರ್ಣವೆಂದು ದೂಷಿಸುವವರಿಗೆ ಏನೆನ್ನಬೇಕು? ಅಂಥವರಿಗೆ ಅತ್ತಲೂ ತೃಪ್ತಿಯಿಲ್ಲ, ಇತ್ತಲೂ ತೃಪ್ತಿಯಿಲ್ಲ.

    ಬಲ್ಲಳಿಯೊಳ್ಕುಮೀಸುವುದೆ ಸಂಸೃತಿಯಲ್ತೆ ಗಡಾ! ಪೃಥಾಭವರ್
    ಚೆಲ್ಲಿಯೊಳೊಪ್ಪದಿಂ ಪೊಳೆವ ಬಿಂಬಮನೇ ದಿಟಮೆಂಬರಾದೊಡಂ
    ಕಲ್ಲಿಯಿದೆಮ್ಮ ಬಾಳ್ವೆಯೆನೆ ದೂನಿಪರೊಲ್ಲರದೇಕೊ ಮುಕ್ತಿಯಂ
    ಬೆಲ್ಲಮನೊಲ್ಲೆನೆಂದೆನುತಲಿಚ್ಛಿಸೆ ಬೇವನದೇಕೆ ದೂಷಿಪರ್ ?

    ಲಳಿ – ಅಲೆ, ಚೆಲ್ಲಿ – ಕನ್ನಡಿ, ಕಲ್ಲಿ – ಹೆಣೆದ ಬಲೆ, ದೂನಿಸು – ದುಃಖಿಸು

    • ದೂಷಿಪರೇಕೆ ಮೌರ್ಯರೆ ಜನರ್ ಕವಿತಾದಿ ಕಲಾಪ್ರಕಾರಮ೦
      ಪೋಷಿಸಿರಲ್ ಭವತ್ಸಮರಲಾ ರಸ-ಭಾವ-ಸದರ್ಥ-ವಾಕ್ಕಿನಿ೦
      ಭೂಷಣದಿ೦ದಲ೦ಕರಣದಿ೦ದೆಣೆಯಿಲ್ಲದ ಭಕ್ಷ್ಯಭೋಗದಿ೦
      ತೋಷಮನೀವೊಡ೦ ದಿಟ ಯುಗಾದಿಯನಾಚರಿಪ೦ತೆಯಲ್ತೆಯೇ೦

      • ಪದ್ಯವಸ್ತುವನ್ನಾಗಿ ಏನನ್ನಾದರೂ ಆರಿಸಿಕೊಂಡು ಇಷ್ಟು ಸುಂದರವಾಗಿ ಪದ್ಯದ ಕಸೂತಿಯನ್ನು ಹಾಕಬಹುದೆಂದು, ನನ್ನಂಥವನನ್ನು ಕುರಿತಾಗಿಯೂ ಪದ್ಯರಚನೆಯನ್ನು ಮಾಡಬಹುದೆಂದಾದರೆ ಅದು ತಮ್ಮ ಕವಿತಾಪ್ರೌಢಿಮೆಗೆ ಹಿಡಿದ ಕೈಗನ್ನಡಿಯೆಂದು ಹೇಳಬಹುದಷ್ಟೆ….ತಮ್ಮ ಹೊಗಳಿಕೆಗೆ ಸಂಕೋಚಿಸುತ್ತ, ಧನ್ಯವಾದಗಳು…

        ಬಲ್ಲವರಿಂತು ಬಲ್ನುಡಿಯ ವಸ್ತ್ರಮನೊಲ್ಮೆಯೊಳಿತ್ತಿರಲ್ ಗಡಿಂ
        ತಿಲ್ಲವು ತೊಟ್ಟು ಮೈಮರೆವ ಬಲ್ಮೆಯದೆಂದಿಗಮೀ ಕಿಶೋರಗಂ

        • ಕಲ್ಲೆದೆಯೇ೦ ಗಡೆಮ್ಮದಿದುಪೇಕ್ಷಿಸೆ ಪದ್ಯಸುಮ೦ ಮನ೦ಗೊಳ-
          ಲ್ಕೆಲ್ಲೆಡೆಯು೦ ಸಲಲ್ ಪರಿಮಳ೦, ಸಲೆ ನೀ೦ ಕವಿತಾ ವಿಶಾರದ೦!

        • ಕಲ್ಲೆದೆಯು ನಿಮ್ಮದಲ್ಲದೊಡೆ ಮೌರ್ಯಂಗೆ ನೀಂ
          ಸಲ್ಲಿಪುದು ಸ್ಟೋನ್‍ವಾಶ್ಡ್ ಇಜಾರಮೊಂದಂ|
          ಚಲ್ಲಣಮನದನುಡದೆಲಿರ್ಪನೇನಾ ಮಚ್ಚ
          ಸೊಲ್ಲಿಲ್ಲದದನುಡಲ್ ಹಾದಿರಂಪಂ||

          • चड्डी को हाथ क्यों लगा रहे है जनाब ?
            ಹಹ್ಹಹ್ಹ…ಇದು ಅವಧಾನವೂ ಅಲ್ಲ, ಇಲ್ಲಿ ಅವಧಾನಿ- ಪೃಚ್ಛಕರ ಭೇದವೂ ಇಲ್ಲ…ಆದರೂ ನಿಮ್ಮ ಅಪ್ರಸ್ತುತಪೃಚ್ಛಕತ್ವ ಮುಂದುವರೆದಿದೆ… ಒಳ್ಳೆಯ ಮನರಂಜನೆಯನ್ನೇ ನೀಡಿದೆ !!! 🙂 😀

          • ಭಾಷಾದೋಷ ತಿದ್ದುಕೋ ಮೌರ್ಯ: चड्डी कु हाथाँ कैकु लगातीसु जनाब्? 😀

          • ಅಂತೂ ನನ್ನ ಕಾಲೆಳೆಯುವುದರಲ್ಲಿಯೇ ನಿಮಗೆ ಮಹದಾನಂದ….

          • ಹಾಗೆ ಮಾಡುತ್ತಿರುವವನು ನಾನಲ್ಲ, ನೀನು. ತಿದ್ದಿಹೇಳುವ ಗುರುವನ್ನೇ ಅನ್ನುವ ನೀನು ’ಆಚಾರ್ಯಾತ್ (ತಸ್ಯ) ಪಾದಮಾದತ್ತೇ’ ಎಂಬುದಕ್ಕೆ ನಿದರ್ಶನಪ್ರಾಯನಾಗಿದ್ದೀಯೆ 😉

          • దయముల్ జేసి కటాక్షవీక్షణముతోనజ్ఞాపరాధంబులన్
            ప్రియపుత్రుండని జూచుతర్భకుడుపైనాశీస్సు వర్షింపుము

            మీమ్మల్ని సంతోషపరచుటకై ఇదే మొదటి సారి తెలుగులో ప్రయత్నం చేస్తున్నాను…తెలుగు నా మాతృభాష కాదు…అయినా మీమ్మల్ని మెప్పించడానకి కష్టపడి రెండు పాదాలు రచించాను …నాదే తప్పండి..దయం చేయండి గురుగారు…

          • పుత్రుడు మరియు అర్భకుడు! దానికే అలా బరువు ఉండావురా వె.. 🙂

          • ನೀಮೀರ್ವರ್ ಗಡಮೆನ್ನನು೦ ಹಳಿವುದೇನಾ೦ಧ್ರಾಖ್ಯದೀ ಭಾಷೆಯೊಳ್?

          • ಸಾರ್ಥಕಮೆಮ್ಮ ಯತ್ನಂ ನೀಮೆಮ್ಮ ಭಾಷೆಯನರ್ಥೈಸುವನ್ನೆಗಂ ಗಡ 😉

  16. ಮಲ್ಲಿಗೆಯೊಂದಿರಲ್ ಪರಮೆಯೋಳಿಗಳಲ್ಲಿಯೆ ಸಾರ್ದು ನಿಲ್ವವೊಲ್
    ಗಲ್ಲವು ತುಂಬಿರಲ್ ನಗುವನೋಟದ ಸಂತೆಯಸಂತೆ ಸೇರ್ವುದೈ
    ಚೆಲ್ಲುವ ಕಾಂತಿಗಿಂ ಭುವನದೊಳ್ ದಿಟಪೆರ್ಮೆಯದಿಲ್ಲವೆಂಬರೈ
    ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್?

    • ಕಾ೦ಚನ ತಾಯೆ ಸೋತೆನಿದರರ್ಥಮನಾನರಸುತ್ತೆ, ಪಾಲಿಸೌ,
      ವ೦ಚಿಸಿರಲ್ಕೆ ನಿಮ್ಮ ಕವನ೦, ಕೊನೆಸಾಲಿಗೆ ಪೊ೦ದಿಸಲ್ಕೆ ಮೇಣ್
      ಮು೦ಚಿನ ಮೂರನು೦ ಬೆರೆಸಿದ೦ತಿರಲಾದುದು ಬೇವುಬೆಲ್ಲಮ೦
      ಕು೦ಚಿಸಿರಲ್ ವಿಚಿತ್ರಮಹ ಚಿತ್ರಮನೇನಿದು ಪೂರಣ೦ ಪಣ೦?!

      • ಯೌವನದ ಸೌಂದರ್ಯದ ದಾಸರೇ ಎಲ್ಲ;ಹೊರಗಣ ಕಾಂತಿಗೆ ಶರಣಾಗಿ ಆಮೇಲೆ ….)(ಒಲ್ಲೆಯೆಂದರೂ ಯಾರನ್ನು ತಾನೇ ಅದು ಆಕರ್ಷಿಸುವದಿಲ್ಲ?,ಅದೇ ಹೆಚ್ಚಿನದು ಎಂದು ಅನ್ನಿಸುವದಿಲ್ಲ?)
        (೩ನೇ ಸಾಲನ್ನು ಸ್ವಲ್ಪ ಬದಲಿಸಿದೆ)

        • ಹ೦ಚಿಕೆಯಲ್ತಿದೆಮ್ಮ ಯುವರ೦ ಪರಿಹಾಸದೊಳದ್ದಿ ತೇಲಿಸಲ್!

  17. ಬಲ್ಲಿದನಪ್ಪೆನೆಂದನಿಶಮುಂ ಕಲಿಯುತ್ತಿರೆ ಯೋಗವಿದ್ಯೆಯಂ,
    ಮೊಲ್ಲೆಯ ಬಳ್ಳಿಯಿಂದೆಸೆವ ಮಂಟಪದೊಳ್ ದೃಢಚಿತ್ತಸಾಧಕಂ,|
    ಗಲ್ಲಕೆ ಕೈಯನಿಟ್ಟು ಬೆರಗಪ್ಪ ಜನಂಗಳಿದಕ್ಕೆ ಮೆಚ್ಚಿರಲ್,
    ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೇಕೆ ದೂಷಿಪರ್ ? ||

  18. ಕಲ್ಲಿನ ರಾಶಿಯೊಳ್ ದೊರೆತ ದುಡ್ಡಿನ ಚೀಲಮನಾರದೆನ್ನುತುಂ
    ಸಲ್ಲಿಸೆ ಕೂಲಿಯಾಳ್ ಧನಿಕನೊರ್ವಗೆ ಪೇಳ್ದಿರಲಾತನೆನ್ನದೆಂ- |
    ದುಲ್ಲಸಿತಂ ಕುಡಲ್ ಧನವನೊಲ್ಲದೆಯೈದಿರೆ ಕಜ್ಜದಾಣಮಂ,
    ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೇಕೆ ದೂಷಿಪರ್? ||

  19. ಕ್ಷುಲ್ಲಕ ಮಾನಸರ್ ಸಹಜದಿಂ ಬಲು ತಲ್ಲಣಗೊಂಡವೇಳೆಯೊಳ್,
    ಕಲ್ಲನೆ ಕಾಣುತುಂ ಮೊಸರಿನೊಳ್ ದಿಟ ಭಾವುಕರಾಗೆ ಬಾಳುವರ್;
    ಸಲ್ಲದೆಯಿರ್ದೊಡಂ ಸುಲಭದೊಳ್ ಕುಣಿದಾಡುವ ನೀಚ ಜಿಹ್ವೆಯುಂ
    ಬೆಲ್ಲಮನೊಲ್ಲೆನೆಂದೆನುತಲಿಚ್ಚಿಸೆ ಬೇವನದೇಕೆ ದೂಷಿಪರ್?
    (ಅವೇಳೆಯಲ್ಲಿ, ಋಣಾತ್ಮಕತೆ ಹೆಚ್ಚಿದಾಗ…)

  20. अजपुत्रात्मजशत्रुसूनुसहजातभ्रातृपुत्रान्तकृ-
    त्सुतपुत्रीजननीधरात्मजसुपुत्रस्रष्टृभार्यासुत- ।
    भरणीयासुतपुत्रवध्यजनकाहारारिभार्याधवा-
    त्मजवैर्यन्तकपुत्रभर्तृदहनः संवत्सरो नः शुभम् ।।

    अजः अयोध्याराजः, तत्पुत्रः दशरथः, तदात्मजो लक्ष्मणः, तच्छत्रुः इन्द्रजित्
    (मेघनादः), स सूनुः यस्य सः रावणः, तत्सहजातः कुम्भकर्णः, तद्भ्राता विभीषणः, तत्पुत्रः तरणिसेनः, तदन्तको रामः, तत्सुतः कुशः, सः पुत्रो यस्याः सा सीता, तज्जननी भूमिः, तद्धरः पर्वतः (हिमवान्), तदात्मजा गङ्गा, तत्सुपुत्रो भीष्मः, तत्स्रष्टा शन्तनुः, तद्भार्या सत्यवती, तत्सुतः विचित्रवीर्यः, तद्भरणीया अम्बिका (अम्बालिका), तत्सुतो धृतराष्ट्रः, तत्पुत्रः सुयोधनः, सः वध्यो येन सः भीमः, तज्जनको वायुः, सः आहारः यस्य सः सर्पः, तदरिः नकुलः, तद्भार्या द्रौपदी, तस्या धवः अर्जुनः, सः आत्मजः यस्य सः इन्द्रः, तद्वैरी तारकः, तदन्तकः स्कन्दः, सः पुत्रो यस्याः सा पार्वती, तद्भर्ता शिवः, सः दहनः (दहतीति कर्तरि ल्युः) यस्य सः मन्मथः, सः संवत्सरः नः शुभं (तनोतु) ।

    • ಶ್ರುತಿಶಾಸ್ತ್ರಾದಿಕದರ್ಶನೇಷು ಚ ಪುರಾಣೇಷು ಪ್ರಬ೦ಧೇಷು ವೈ
      ಇತಿಹಾಸಾದಿ ಮಹತ್ಕಥಾಸು ವಿಹರನ್ ಪ್ರಾಯಾದಿತೋ ಮನ್ಮಥಃ
      ಅತಿವಕ್ರೋsಪಿ ಮನೋಹರೋ ಹಿ ಮದನೋ ಮತ್ತೇಭವಿಕ್ರೀಡಿತೇ!
      ಯತಿಹೀನಃ ಖಲು ಖೇಲನೇ ಸ್ಮರರತೋ ವೈಚಿತ್ರ್ಯಮೇತತ್ ಸ್ತುತ೦!!

    • ಇಷ್ಟೆಲ್ಲ ಆ ನಾಲ್ಕುಸಾಲುಗಳಲ್ಲಿವೆಯೆ ಎಂದು ನಾನು ಹುಡುಕಹೋಗುವುದಿಲ್ಲ – ಇರಲು ಸಾಧ್ಯವಿಲ್ಲ 😉
      ನಿಮ್ಮ ವಿವರಣೆಯ ಒಂದು ಭಾಗವು ’ಇನ್ನೇನು ಒಂದೆರಡು ಶತಮಾನಗಳೊಳಗಾಗಿ ಅಂತಹ ಸಾಮಾಜಿಕ ಬೆಳವಣಿಗೆ ಆಗುವುದಿದೆ’ ಎಂಬಂತಿದೆ: तद्भार्या द्रौपदी, तस्या धवः अर्जुनः,

  21. ಬೆಲ್ಲಮನೊಲ್ಲೆನೆಂದೆನುತುಮಿಚ್ಛಿಸೆ ಬೇವನದೇಕೆ ದೂಷಿಪರ್ ?
    ಕಲ್ಲರೆಯಾದುದೇಂ? ಹೃದಯಹೀನರ ಪಾಲಿಗದಾದುದೇಂ ಜಗಂ ?
    ಬಲ್ಲಿದರಿಲ್ಲಮೇಂ ತಿಳಿಸೆ ಕೂರ್ಮೆಯ ಪೆರ್ಚುಗೆ ಮೇಣ್ ವಿಜಾತಿಯೊಳ್
    ಸಲ್ಲುಗು ಜೋಡಿ ಕಂದದಲೆಯೊಟ್ಟಿಗೆ ಬಾಳ್ಗುಮದೆಂಬ ಸತ್ಯಮಂ ?
    [ಬೇವು ವಿಜಾತಿಯ ಬೆಲ್ಲವನ್ನು ಮೊದಲು ಒಲ್ಲೆನೆಂದು ನಂತರ ಇಚ್ಛಿಸಿದಾಗ, ದೂಷಿಪರಿಗೆ, ಪ್ರೇಮದ ಹಿರಿಮೆಯನ್ನು ತಿಳಿಸುವ ಬಲ್ಲಿದರಾರು ಇಲ್ಲವೇ ಎಂಬ ಇಂಗಿತ]

    • ವೈರಿಯೊಳು೦ ಗಡೊಲ್ಮೆಯನೆ ತಾಳ್ದನುಭಾವಮೆ ರಾಮಚ೦ದ್ರನಾ
      ಭೋರಿಡುತು೦ ನವೀನತಮಭಾವಮೆ ಸ೦ದುದು ಪೂರಣ೦ಗೊಳಲ್!

  22. ಕಲ್ಲಿನ ದಾರ್ಢ್ಯಮಂ ಪ್ರಿಯನೊಳಾಶಿಪ ಸೌಮ್ಯತೆಗಾವ ಪಾಪಮೈ ?
    ಸೊಲ್ಲಿನ ಕಾವ್ಯಕಂ ಹೃದಯಮಿತ್ತಿರೆ ಗದ್ಯವದೇನ ಬಾಹಿರಂ ?
    ಗೊಲ್ಲರ ಬಾಲನಂ ಸತತ ಚೋದಿಪ ಗೋಪಿಯರಲ್ತೆ ಸಜ್ಜನರ್ ?
    ಬೆಲ್ಲವನೊಲ್ಲೆನೆಂದೆನುತುಮಿಚ್ಛಿಪ ಬೇವನದೇಕೆ ದೂಷಿಪರ್?

    [ಸೌಮ್ಯತೆಗೆ ದಾರ್ಢ್ಯದಾಶೆ, ಗದ್ಯಕ್ಕೆ ಕಾವ್ಯದ ಸೊಲ್ಲಿನಾಶೆ, ಗೋಪಿಯರಿಗೆ ಗೊಲ್ಲರ ಬಾಲನಾಶೆ, ಹಾಗೆ ಬೇವಿಗೆ ಬೆಲ್ಲದಾಶೆಯಲ್ಲಿ ತಪ್ಪಿಲ್ಲವೆಂಬ ಭಾವ]
    [ಹಿಂದಿನ ಪದ್ಯದಂತೆ ಇಲ್ಲಿಯೂ ಬೇವು ಬೆಲ್ಲಕ್ಕೆ ಮನಸೋತಿದೆ ಎಂಬ ಅರ್ಥವನ್ನು ಸಮಸ್ಯೆಯ ಸಾಲಿನಲ್ಲಿ ಕಂಡ ಪೂರಣ]

  23. ಅನುಷ್ಟುಭ್ ಆದ್ದರಿಂದ ಪ್ರಾಸವನ್ನು ಪಾಲಿಸಿಲ್ಲ.
    (ನಿಂಬ)ಬೇವಿನಬೀಜದ ಹಿಂಡಿ (cakes=ಅಪೂಪ), ಅದರ ಸೊಪ್ಪು, ಹಣ್ಣು, ಹೂವು ಎಲ್ಲವೂ ಗೊಬ್ಬರವು, ರೈತನಿಗೆ ಅತಿಪ್ರಿಯವು.
    ನೈಟ್ರೇಟುಂ ಯೂರಿಯಂ ಮೇಣಾ ಫಾಸ್ಫೊರಸ್ಸು ಪೊಟಾಶುಮೆಂ-|
    ಬೆಲ್ಲಮನ್ನೊಲ್ಲೆನೆಂದೆನ್ನುತ್ತಿಚ್ಛಿಸಲ್ ಬೇವನೇತಕೋ||
    ದೂಷಿಪರ್ ರೈತನಂ. ನಿಂಬಾಪೂಪಮಲ್ತಾತಗಂ ಪ್ರಿಯಂ|
    ಬೀಜಂ ಪುಷ್ಪಂ ಫಲಂ ಪತ್ರಂ ಗೊಬ್ಬರಂ ಬೇವಿನೆಲ್ಲಮುಂ||

    • ರ೦ಪಗೀತಾ ಯದುಕ್ತೈಷಾ ರೈತಾನಾ೦ ಚ ಹಿತಾರ್ಥಯೇ
      ರ೦ಗನಾಥ ಪ್ರಸಾದೇನ ರಾಸಾಯನಿಕತತ್ತ್ವಶಃ

      • ಸಂಸ್ಕೃತಭಾಷೆಯನ್ನು ಚೆನ್ನಾಗಿ ತಿಳಿಯೆ. ’ಧನ್ಯವಾದ’ ಹೇಳಬಹುದೋ, ಅರ್ಥವನ್ನು ಅರಸಬೇಕೋ 😉

        • ಸ್ಫೂರ್ತಿಯಿ೦ದ ಬ೦ದದ್ದು ಸರ್!
          ಕ್ರೌ೦ಚವಧಾವಿಕಲ್ಪೇನ ಶೋಕಾಕುಲಮನಸ್ವಿನಾ
          ವಾಲ್ಮೀಕಿಮುನಿನಾ ಪ್ರೋಕ್ತೋ ಯಥಾ ಶ್ಲೋಕೋ ತಥಾ ಮಯಾ

          • ಧನ್ಯವಾದಗಳು. ಕ್ರೌಂಚಿಗೆ ತಿಳಿಸುತ್ತೇನೆ 😉

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)