Mar 272017
 

  39 Responses to “ಪದ್ಯಸಪ್ತಾಹ ೨೪೮: ಚಿತ್ರಕ್ಕೆ ಪದ್ಯ”

  1. ತಾನು ಬೆಂದರೂ ಜನರಿಗೆ ನೆರಳನೀಡುವುದು ಮರದ ಧರ್ಮ. ತನ್ನ ಜೊತೆಯವರೆಲ್ಲ ಲುಪ್ತವಾಗಿರಲು (ಬಯಲೆಲ್ಲ ಖಾಲಿ), ಉಳಿದಿರುವ ತಾನೊಂದೆ ಈ ರೀತಿ (ಪಾತ್ರನನ್ನು ಅನುಸರಿಸಿ) ನೆರಳನ್ನು ನೀಡುತ್ತಿದೆ.
    ಇಂದ್ರವಂಶ||
    ತಾಂ ಬೆಂದೊಡಂ ಲೋಗರಿಗೀವುದಂತೆ ದಲ್
    ಮುಂಬೈಗಿನಿಂ ಸಂಜೆಯಗುಂಟ ಛಾಯೆಯಂ|
    ತೊಂಭತ್ತುಮಿನ್ನಷ್ಟು ವಿನಾಶಮಾಗಿರಲ್
    ಸಂಭಾಳಿಸಿತ್ತುಂ ತರುವೊಂದೆ ಕಜ್ಜಮಂ||
    (ಸಮೀಪಪ್ರಾಸವನ್ನು ಬಳಸಿಕೊಂಡಿದ್ದೇನೆ)

  2. ನನ್ನನ್ನು ಆರೈಕೆ ಮಾಡಿದರೆ ನಾನು ನಿನ್ನ ಹಿಂದೆ ನೆರಳಾಗಿ ಕಾಪಾಡುವೆ……

    • ಅಯ್ಯಾ ಮನುಜ ನೀನು, ಕೇಳೆನ್ನ ಬಿನ್ನಪವ
      ಮುಯ್ಯಿ ಮಾಡುವೆನಾನು ಪೊರೆದೊಡೆನ್ನಂ|
      ಹೊಯ್ಯಿ ನೀರನ್ನಷ್ಟು ಎನ್ನೊಂದು ಪದಕಾರೆ
      ಒಯ್ಯುವೆನು ನೆಳಲ ನೀ ಪೋದೆಲ್ಲೆಡೆ (propagation by irrigation)||

  3. ಬಲವದ್ದೋರ್ದಂಡಸಾಹಸ್ರಿಕದ ಹರಹಿನಿಂ ಸಾರ್ದು ಸಂಸಾರವೃಕ್ಷಂ
    ಮಲೆತುದ್ದಾಮೋರುಯುಗ್ಮಂ ವೆರಸು ಬಿಡದೆಯೀ ಬಾಲನಂ ತೀವಿ ಬೆಂಬ-
    ತ್ತುಲಿದಿರ್ಕುಂ, “ನಿನ್ನ ಬೆನ್ನೇರ್ದುರುತರಗಹನಂ ಪುಸ್ತಕಗ್ರಂಥಿ ತಾಂ ಬಿ-
    ಟ್ಟಿಳಿದಾಗಳ್ ತತ್ಕ್ಷಣಂ ತ್ವದ್ಭುಜಯುಗಳಮನಾನೇರ್ವೆನೆಂದೆಂದಿಗುಂ ಕೇಳ್”

    ಹರಡಿದ ಕರಸಾಹಸ್ರದಿಂದ, ಮಲೆತ ತೊಡೆಗಳಿಂದ ಕೂಡಿದ ಸಂಸಾರವೃಕ್ಷವು ಈ ಬಾಲಕನನ್ನು ಬಿಡದೆ ಬೆಂಬತ್ತಿ ಹೇಳುತ್ತಿದೆ, “ನಿನ್ನ ಈ ಗಹನವಾದ ಪುಸ್ತಕಗ್ರಂಥಿ ನಿನ್ನ ಬೆನ್ನನ್ನು ಬಿಟ್ಟಿಳಿದ ತತ್ಕ್ಷಣವೇ ನಾನು ನಿನ್ನ ಹೆಗಲೇರುತ್ತೇನೆ”.

  4. Brilliant imagination @ Neelakantha sir. Just a continuation of the same imagination:
    ಛಲದಿಂ ಗೆಲ್ಲಲ್ಕಶಕ್ಯಮ್ ಪೆರರ ಪುಡುಕು ಪೋಗೆನ್ನುತುಂ ಧೀರ ಬಾಲಂ
    ಚಲಿಪಂ ವೈರಾಗ್ಯದಿಂ ತಾಂ ಸ್ಥಿರಮನಸಹಿತಂ ಯೋಗಮಾರ್ಗಾನುರಾಗಾ/
    ಕುಲನಾಗಲ್ಕೆಂದು ಕಾಮ್ಯಮ್ಗಳ ಬಿಸುಡುತೆ ಸದ್ವಸ್ತುವಂ ನೇರ್ಚುತಂತೇ
    ಖಲ ಸಂಸಾರದ್ರುಮಕ್ಕಂ ವಿಮುಖ ಗತಿಯೊಳಂ ಸಾಗುತಿರ್ಪಮ್ ನರೇಂದ್ರಂ(ವಿವೇಕಾನಂದ)//

    • ಸುಜ್ಞಾನಮೊಂದ’ನ್ನೆ’ – ಇದರ ಭಾಷೆಯನ್ನು ಹಳತಾಗಿಸು. ಉಳಿದದ್ದೆಲ್ಲ ಚೆನ್ನಿದೆ.

      • ಧನ್ಯವಾದಗಳು. ಮೂಲದಲ್ಲೆ ಸವರಿಕೊಂಡೆ ಹಳತದಾಯಿತೇ?

        • ಪ್ರಸಾದರು ತಿಳಿಸಿದ್ದು …ಮನ್ನೀಗ ಎಂಬುದು ..ಮನೀಗ ಎಂದಾಗಬೇಕೆಂದು. ನೀವು ಮತ್ತೆ ಅದೇ ದೋಷವನ್ನು ಮಾಡಿದ್ದೀರಿ.

    • ರಾಗಮಾರ್ಗಾನುರಕ್ತಾಕುಲ ಎಂಬುದು ನಿಮ್ಮ ಉದ್ದಿಷ್ಟ ಅರ್ಥಕ್ಕೆ ವಿರುದ್ಧವಾದ ಪ್ರಯೋಗವಾಯಿತಲ್ಲ!

      • ಹೌದು, ಆಕುಲ ಶಬ್ದದ ಅರ್ಥವನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದೆ. ತಿದ್ದಿದ್ದೇನೆ. ಸರಿಹೋಗುವುದೇ?

  5. ನರವರನಾರೀ ತರುವಿಂ
    ತು ರಭಸದೆ ಅಡಿಯಿಡುತುಂ ದೊರೆಗೆ ಬಂಟನವೊಲ್ I
    ತರಣಿಯ ತಾಪವ ತಡೆಯಲ್
    ಪರಿಚಾರಕಪಿಡಿದ ಆತಪತ್ರಮೆನುವವೊಲ್ II

    ರಾಜನಿಗೆ ಸೇವಕರು ಆತಪತ್ರವನ್ನು ಹಿಡಿದುಕೊಂಡು ಅವರ ಹಿಂದೆ ಹೋಗುವಂತೆ , ಈ ಮರವು ತನ್ನ ಎಲೆಗಳನ್ನು ಆತಪತ್ರದಂತೆ ಪಸರಿಸಿ ಅವನ ಹಿಂದೆ ಸ್ವಾಮಿ ನಿಷ್ಠೆಯಿಂದ ಹೋಗುತ್ತಿರಲು ಆ ನರ ಶೇಷ್ಠನು ಯಾರು?

    • ತರಣಿ ಎಂದರೆ ಭೂಮಿ. ಪರೋಕ್ಷವಾಗಿ ಹೇಳುವ ಬದಲು, ’ಬಂಟನವೋಲ್ ಅರುಣನ ತಾಪವ’ ಎಂದು ನೇರವಾಗಿಯೇ ಹೇಳಬಹುದು.

      • ಇಲ್ಲ. ತರಣಿ ಎಂದರೆ ಸೂರ್ಯ.

        • Yes. I do not know how I got mixed up. Sorry Bhala.

          • ಪರವಾಗಿಲ್ಲ ಪ್ರಸಾದ್ ಸರ್ .ನೀವು ಇಲ್ಲಿ Monier Williams ರವರ ಪದಕೋಶದ ಮೊರೆ ಹೋಗಿಲ್ಲವೆಂದು ನನಗೆ ವಿಶ್ವಾಸವಿತ್ತು .

    • ಎರಡನೆ ಸಾಲಿನ ಮೊದಲಲ್ಲಿ ಸ್ವಲ್ಪ ಗತಿಸುಭಗತೆ ತಪ್ಪಿದೆ. ಕೊನೆ ಸಾಲಲ್ಲಿ ವಿಸಂಧಿಯಾಗಿದೆ.

      • ಧನ್ಯವಾದಗಳು .

        ನರವರನಾರೀ ತರುವಿಂ
        ತು ರಭಸದೊಳಡಿಯಿಡುತುಂ ದೊರೆಗೆ ಬಂಟನವೊಲ್ I
        ತರಣಿಯ ತಾಪವ ತಡೆಯಲ್
        ಪರಿಚಾರಕ ಬಿಡಿಸಿದಾತಪತ್ರಮೆನುವವೊಲ್ II

  6. ಮಾತೆಯುದರಮಂ ಸೀಳುತೆ
    ನೂತನ ಸೌಧಂಗಳಂ ವಿರಚಿಸುತೆ ನಡೆದೀ
    ಪಾತಕಿಯಂ ಪೊರೆದಿಹಳೀ
    ಯಾತನೆಯಂ ನುಂಗಿ ಮಕ್ಕಳಂ ಪೊರೆಯುವವಳ್

  7. ಬೆಂಬಿಡದೆ ಬರುತಿಹುದು ಪಾಪದ
    ಹುಂಬ ಮರಮಿದು ನಿನ್ನ ಹಿಂದೆಯೆ
    ಹಂಬಲದ ನೂರಾರು ಶಾಖೆಗಳನ್ನು ಗೆದರುತಲಿ
    ಸಿಂಬಳದಿ ಸಿಕ್ಕಿರುವ ನುಸಿವೊಲು
    ನಂಬಿ ಬಲೆಯೊಳು ಬಿದ್ದೆಯಾದೊಡೆ
    ತುಂಬು ಮರಳಿನ ಬಂಜರಹುದೈ ಜೀವನದ ವನವು

  8. ಉರಿವ ಬಿಸಿಲ ಹಾದಿಯೊಳಗೆ
    ನೆರಳಿನೊಳು, ಮರವನು ಕಾಣದೆ ಮರೆತ ತೆರದೊಳ್!
    ಧರೆಯೊಳು ಬದುಕಿನ ಪಯಣದಿ
    ನರನು ಮರೆತಿರುವನು ಕಾರಣವ, ಕಾರ್ಯಗಳೊಳ್!

    • ಕಂದಪದ್ಯದ ಹದ ಸರಿಯಾಗಿ ಬಂದಿಲ್ಲ. ಗಣವಿಂಗಡಣೆಯಲ್ಲಿ ಗೊಂದಲ, ಲಘುಬಾಹುಳ್ಯ ಆಗಿವೆ.

  9. ಭರದ ನಾಗಾಲೋಟದಲಿ ಅಡಿ-
    ಯಿರಿಪ ಮನುಜನ ಪಯಣ ನೋಡುತ
    ಮರವು ತನ್ನ ಸ್ಥಿರತೆ ಮರೆಯುತ ಹೆಜ್ಜೆಯೆತ್ತಿಹುದೊ!
    ಗುರಿಯನರಿಯದ ಬರಿದೆ ವೇಗದ
    ನರನ ಓಡಾಟವನು ತಡೆಯಲು
    ಹರಿಯ ಸಂಕಲ್ಪದೊಳ್ ಪ್ರಕೃತಿಯು ಬೆನ್ನು ಬಿದ್ದಿಹುದೊ!

    • ಒಳ್ಳೆ ಕಲ್ಪನೆ. ವಿಸಂಧಿ ದೋಷ, ಲಗಂ ಗಳನ್ನು ಸರಿಪಡಿಸಿ.

      • ನಮಸ್ತೆ,
        ಅಭಿಪ್ರಾಯ ತಿಳಿಸಿದುದಕ್ಕೆ ವಂದನೆಗಳು. ನೀವಂದಂತೆಯೆ ಹೀಗೆ ತಿದ್ದುಪಡಿ ಮಾಡಲು ಪ್ರಯತ್ನಿಸಿದೆ.

        ಭರದ ನಾಗಾಲೋಟದಲಿ ಅಡಿ-
        ಯಿರಿಪ ಮನುಜನ ಪಯಣ ನೋಡುತ
        ಮರವು ತನ್ನ ಸ್ಥಿರತೆ ಮರೆಯುತ ಪದವನೆತ್ತಿಹುದೊ!
        ಗುರಿಯನರಿಯದ ಬರಿದೆ ವೇಗದ
        ನರನ ಓಡಾಟವನು ತಡೆಯಲು
        ಹರಿಯ ಸಂಕಲ್ಪದಿ ನಿಸರ್ಗವೆ ಬೆನ್ನು ಬಿದ್ದಿಹುದೊ!

  10. ಪಾದಪಮೋಡುತುಮಿರ್ಪೊಡೆ
    ಪಾದಂಗಳ ಸಾಯದಿಂದಲಚ್ಚರಿಯೇಕೈ?
    ಕಾದೊಡನುಂ,ಮೊದಲಿಂದಂ
    ಪಾದಪದಾಶ್ರಯಕೆ ಸೋಲ್ಡವರ್ ,ಮರೆಯಾಗಲ್!

    (ಹಿಂದೆ,ಮರದ ಆಶ್ರಯಕ್ಕೆ ಮನಸೋತವರು(ಜನರು), ಮರೆಯಾಗುತ್ತಿರಲು, ಪಾದಪಗಳೇ ಪಾದವನ್ನು ಬಳಸಿ ಹಿಂಬಾಲಿಸಿರುವದರಲ್ಲಿ ಅಚ್ಚರಿಯೇ?!)

  11. ಅರೆ! ಮರುಳೆ ಮಾನವನೆ ವೃಕ್ಷಗಳ ಕೊಲ್ಲಿಸಿದೆ
    ಮರುಭೂಮಿಯೊಳಗೆ ನಡೆಯುವುದೊಂದೆ ಗತಿ ನಿನಗೆ
    ಬರಿಸ್ವಾರ್ಥದಾ ಫಲವು ಹಣವೆಲ್ಲಿ? ಜನವೆಲ್ಲಿ?
    ತಿರುಗಿ ನೋಡರಿಯೆನ್ನ ನೆರಳೀವೆನೀಗಲೂ

    • Nice one! We can make ಬರಿಸ್ವಾರ್ಥದಾ -> ಬರಿಯ ಸ್ವಾರ್ಥದ ಫಲವು to avoid ari-samaasa. This is lalita-ragaLe right?

  12. ಹಸಿರನು ನಾಶವ ಮಾಡುವೆ ನೀನ್ಯಾಕ?
    ಉಸಿರಿಂದೆ ಬದುಕಿಹುದು ಜೀವ
    ಬಿಸಿಯಿಂದೆ ದೇಹವು ತಣಿವ ಮುನ್ನವೆ ನೀ
    ಬಸಿ ಹೊರಗೆ ತಪ್ಪಿನ ಭಾವ

  13. ಭರದಿಂ ಸಾಗಿರಲ್ ಜಗದೊಳುಂ ನಗರೀಕರಣಂ ನಿವಾಸಕಂ
    ತರುನಾಶಂ ದಿನಂ ಜರುಗುದುo ಕರುಣಾಜನಕಂ ಗಡಾ, ಭಯಂ-
    ಕರ ಸಾಸಂ, ನೆಡಲ್ಕದನು ವೇರೆಡೆ ವೇರೊಡನೊಯ್ಯುತಿರ್ಪ ನೇ-
    ಸರ ಸಂರಕ್ಷಕಂಗದುವೊ ಕಾಲ್ದೆಗೆದೋಡುತೆ ತಣ್ಪನಿತ್ತುದೇo !!

    ನಗರೀಕರಣದಲ್ಲಿ ನಾಶವಾಗುತ್ತಿರುವ ಮರವನ್ನು ರಕ್ಷಿಸಲು, ಬೇರುಸಮೇತ ಅದನ್ನು ಕಿತ್ತು ಬೇರೆಡೆ ನೆಡಲು ಸಾಗಿರುವ ಪರಿಸರ ಪ್ರೇಮಿಯ ಹಿಂದೆ ತಾನೂ ಓಡುತ್ತಾ ನೆರಳನಿತ್ತು ಸಹಕರಿಸುತ್ತಿದೆಯೇ ಮರ ?!!

    • Which meter is this?

      • ಉತ್ಪಲಮಾಲಾ ವೃತ್ತ – ನನನಾ ನಾನ ನಾನನನ ನಾನನ ನಾನನ ನಾನನಾನನಾ

        • How come utpala-maala?!! utpala-maala runs like –
          ನಾನನ ನಾನ ನಾನನನ ನಾನನ ನಾನನ ನಾನನಾನನಾ

      • ಓ.. ಹೌದು, ಚಂಪಕಮಾಲೆಯ ಮೊದಲೆರಡು “ಲಗು” “ಗುರು”ವಾದರೆ ಉತ್ಪಲಮಾಲೆಯಲ್ಲವೇ?
        ಪ್ರಾಸ ಪದಗಳೇ ತಪ್ಪಾಗಿಬಿಟ್ಟಿದೆ. ಈ “ಉಷ್ಪಲಮಾಲೆ” !! ಯನ್ನು ದಯವಿಟ್ಟು ಮನ್ನಿಸಿ. ಸರಿಪಡಿಸಲು ಪ್ರಯತ್ನಿಸುವೆ.

  14. ಭವದೊಳ್ ತಲೆಯೆತ್ತಿರ್ಪುದು
    ಜವದಿಂ ಕಾಲ್ದೆಗೆದುದಿಂತು ನೆಳಲೀಯಲ್ ಮಾ-
    ನವ ಪೋಷಿತ ವಾಮನ ರೂ-
    ಪಿ ವಿಕ್ರಮಂ ಗಡ ಸಯಾಮಿ ಬೋನ್ಸಾಯ್ ವೃಕ್ಷo ।।

    ಎರಡು ಬೇರುಗಳಿಂದ ಒಂದಾದ “ಸಯಾಮಿ” ವೃಕ್ಷ – ನೆರಳಿಗಾಗಿ ಮಾನವ ನಿರ್ಮಿತ (ವಾಮನ = ಬೋನ್ಸಾಯ್) ಮೊಬೈಲ್ ಮರದ ಕಲ್ಪನೆ !!

    • ** ಜವದಿಂ ಕಾಲ್ಕಿತ್ತುದಿಂತು ನೆಳಲೀಯಲ್ ಮಾ-ನವ….. :

Leave a Reply to usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)