Apr 162018
 

ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಪಿರಮಿಡ್

೨. ಕುಂಚ

೩. ಪ್ರವಾಹ

೪. ಬಳ್ಳ (ಅಳತೆಯ ಬಳ್ಳ)

  21 Responses to “ಪದ್ಯಸಪ್ತಾಹ ೩೦೩: ವರ್ಣನೆ”

  1. (ಕುಂಚ)
    ಮುಗ್ಧ ಮನಪಟಂ ಪೂರ್ಣಾ
    ಹಾಸ ಪಟಂ ಅಂದ ಚಂದ ಪಟಂ ಶುಭ ಶ್ವೇ-
    ತ ಪಟಮದರೊಳ್ ನಿಯತಿ ವ-
    ರ್ಣ ಚಿತ್ರ ಗೀಚಲುಂ ವಿಧಿಕುಂಚವಿಡಿದಿಹಳ್

    (ಪಿರಮಿಡ್)
    ಹೆಬ್ಬಂಡೆಗಳಿಂ ಕಿರಿಕ-
    ಲ್ಲುಗಳಿಂ ಮರ ದಿಮ್ಮಿಗಳಿಂ ಮೇಣ್ ಬಡ ಧನಿಕಂ
    ಪಂಡಿತ ಪಾಮರ ಸಾಧಾ-
    ರಣರ್ಕೃಪೆಯೊಳೆದ್ದಿತೀ ಮಹಾಂತಂ, ಪಿರಮಿಡಮ್

    (ಬಳ್ಳ)
    ಜ್ಞಾನವಳೆಯಲುಂ ಸಾಧನ-
    ವನಳೆಯಲುಂ ಮಾನ ಸಮ್ಮಾನಗಳನಳೆಯಲುಂ
    ಬಳ್ಳೆಯ ಬಳಸಿತು ಈ ಪಿರ-
    ಮಿಡಮ್ ನೆರೆಹೊರೆ ಪಿರಾಮಿಡಿನಾಲೋಚನೆಯೊಳ್

    (ಪ್ರವಾಹ)
    ಎಲ್ಲೋ ಮಳೆ ಮತ್ತದೆಲ್ಲೋ
    ಎಲರಾವುದೋ ಮರಳ್ಮತ್ತಿನ್ನಾವುದೋ ಈ
    ವೃಕ್ಷಮ್ ಕೊಚ್ಚಿಹುದೀ ಜೀ-
    ವನ ಪ್ರವಾಹದೊಳದ್ವೈತ ಭಾವದಿಂದೊಳ್

    (ಪ್ರಸ್ತುತ ಜಾಲತಾಣದಲ್ಲಿ ಇದು ನನ್ನ ಮೊದಲ ಪ್ರಯತ್ನ. ಕಂದ ಪದ್ಯದಲ್ಲಿ ಬರೆಯುವ ಸಾಹಸ ಮಾಡಿದ್ದೇನೆ. ದಯವಿಟ್ಟು ನನ್ನ ತಪ್ಪುಗಳನ್ನು ತಿದ್ದಿಕೊಡಿ.)

  2. ಒಳ್ಳೆಯ ಪ್ರಯತ್ನ ಶ್ರೀಹರಿಯವರೇ.. ಕಂದದ ಲಕ್ಷಣಗಳನ್ನು ಇದೇ ಜಾಲತಾಣದ ಪಾಠಗಳಲ್ಲಿ ಒಮ್ಮೆ ಓದಿಕೊಳ್ಳಿ. ಕಂದವೇ ಇರಲಿ ಅಥವಾ ಮತ್ತಾವುದೇ ಛನ್ದಸ್ಸೇ ಆಗಿರಲಿ ಕರ್ಣಾಟಾಂಧ್ರ ಭಾಷೆಗಳಲ್ಲಿ ಆದಿಪ್ರಾಸದ ನಿಯಮವನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನೂ ಸಹ ವಿಡಿಯೋ ಪಾಠಗಳಲ್ಲಿ ಶ್ರೀಯುತ ರಾ.ಗಣೇಶರು ಚೆನ್ನಾಗಿ ವಿವರಿಸಿದ್ದಾರೆ, ಗಮನಿಸಿಕೊಳ್ಳಿ.ನಿರಂತರವಾಗಿ ಕವನಿಸುತ್ತಿರಿ… ಅಭಿನಂದನೆಗಳು.

  3. ಪ್ರವಾಹ:
    ಪ್ರಿಯನಂ ಸೇರುವೆನೆನುತುಂ
    ನಯನಾಂಬುವಿನೆತ್ತುತೆಲ್ಲ ತರುಸಂಕುಲಮಂ
    ಪಯಕನ್ಯೆಯುರುಳುತಿರ್ಪಳ್
    ಭಯದಿಂದೋಡುತ್ತೆ ಬಿಳ್ದು ದಾರಿಯೊಳೀಗಳ್

  4. ಪಿರಮಿಡ್! ಮೆರೆಯುವೆಯೇನೈ?
    ಶಿರಮಂ ಮೇಲೆತ್ತುತುನ್ನತಂ ತಾನೆನುತುಂ/
    ಮರೆತೆಯೆ..? ಗೋರಿಯೆ ನೀನೀ
    ಪರಿಯಿಂ ನಿಂತಿರ್ಪುದರ್ಕೆ ಶವ ಕಾರಣಮೈ//

    ಚಾದಗೆಗಳವೋಲ್ ನೋನುತೆ
    ಮೋದಕೆ, ಚಿತ್ರರಸವರ್ಷದತ್ತಣಿಯಿಂದಂ/
    ಕಾದರ ರಸಿಕರ ಭಾವೋ
    ನ್ಮಾದಕೆ ಕಾರಣಮಿದಲ್ತೆ ಕುಂಚಾಭ್ರಂ ತಾಂ//
    ಚಾತಕಗಳಂತೆ ಚಿತ್ರರಸವರ್ಷದಿಂದುಂಟಾಗುವ ಆಹ್ಲಾದಕ್ಕೆ ಕಾಯುತ್ತಿರುವ ರಸಿಕರ ಭಾವೋನ್ಮಾದಕ್ಕೆ ಕಾರಣವಾಗುವುದು ಈ ಕುಂಚವೆಂಬ ಮೋಡವೇ.
    ಪಂಪಾತೀರದೊಳೊರ್ಮೆ ನೀನಳೆಯುತುಂ ವಜ್ರಾದಿ ರತ್ನಂಗಳಂ
    ಸೊಂಪಿದಿರ್ದೆಯೊ ಬಳ್ಳನೇ ಮೆರೆಯುತೇನೀಕಾಲದೊಳ್ ಭಾವಿಸಲ್ /
    ಪಿಂಪೋಗಿರ್ಪೆಯೊ ನಿನ್ನ ನಾಮಮಿದು ದಲ್ ಕೋಶಕ್ಕೆ ತಾಂ ಸೀಮಿತಂ
    ಪೆಮ್ಪಿಂದಿರ್ದೊಡಮಾವನಾದೊಡವನೀ ಕಾಲಾಖ್ಯಗಂ ಸೋಲುವಂ//
    -ಹಿಂದೆ ಬಳ್ಳದಲ್ಲಿ ರತ್ನಾದಿಗಳನ್ನು (ಹಂಪೆಯಲ್ಲಿ ) ಅಳೆದು ಮಾರುತ್ತಿದ್ದರು.ಇಂದು
    ಬಹಳಷ್ಟು ಜನರಿಗೆ ಬಳ್ಳ ಎಂದರೆ ಕೋಶವನ್ನು ತಡಕಬೇಕಾದ ಪರಿಸ್ಥಿತಿಯಿದೆ. ಎಷ್ಟೇ ಮೆರೆದವನಾದರೂ ಅವನು ಕಾಲನಿಗೆ/ಕ್ಕೆ ಸೋಲುತ್ತಾನೆಂಬ ತಾತ್ಪರ್ಯ.

  5. ತಾವರೆಗೆ ಕೆಸರಿನೊಳು ಕೆಂಬಣ್ಣ ಕೊಟ್ಟಿರುವ
    ಕಾವರವಿ ಕಿರಣದೊಳು ಕಾಮಧನುವಡಗಿಸಿಹ
    ಹೂವು ಫಲವನು ಹಸಿರು ತರುಗಳನು ನೆಲದ ಜೊತೆಯಲಿ ಜಲವ ಬೆರೆಸಿ ಬರೆವ |
    ಭಾವನೆಯ ಸುಳಿಗಳೊಳು ಮನವನ್ನು ಬಿಡಿಸುತಿಹ
    ಸಾವಿರದ ಕನಸುಗಳ ಮನದೊಳಗೆ ಹರಡಿಸುವ
    ದೇವನಾ ಕುಂಚದಡಿ ನೂರಾರು ರಂಗಿನಲಿ ಅರಳಿಹುದು ವಸುಂಧರೆಯು ||

    • ಚೆನ್ನಾಗಿದೆ

    • ಪದ್ಯದ ಭಾವ,ಕಲ್ಪನೆಗಳು ತುಂಬ ಇಷ್ಟವಾದುವು..

    • ಸ್ತುತ್ಯಯತ್ನ. ’ಫಲವನು ಹಸಿರು ತರುಗಳನು ನೆಲದ ಜೊತೆಯಲಿ ಜಲವ ಬೆರೆಸಿ ಬರೆ’ ಇಲ್ಲಿನ ಲಘುಬಾಹುಳ್ಯವು ಶ್ರುತಿಕಟು. ಪಂಚ-ಚತುರ್ಮಾತ್ರಾಚೌಪದಿಗಳ ಪರ್ಯಾಯಪಾದಗಲ್ಲಿನ ಊನಗಣಗದಿಂದಾಗಿ ನಿಲುಗಡೆಯ ಸೌಖ್ಯವಿದೆ; ಅನುಕ್ರಮವಾಗಿ ವಾರ್ಧಕ-ಪರಿವರ್ಧಿನೀಷಟ್ಪದಿಗಳಲ್ಲಿ ಇಲ್ಲ. ಇನ್ನು ಲಘುಬಾಹುಳ್ಯವೂ ಏಕೆ?

      • ಮುಂದಿನ ಬಾರಿ ಸರಿಪಡಿಸುತ್ತೇನೆ

  6. ಕೃಷಿಕಂ ಕೃತಜ್ಞತೆಯ ಪರಮದೃಷ್ಟಾಂತನೈ
    ಋಷಿತುಲ್ಯನೆನಿಸಿಹಂ ಭೂದೇವಿಗಂ|
    ಕಷದಿನೊಂದೊಂದು ತಟ್ಟಿಯ ಗೊಬ್ಬರವನೀವ
    ಸುಷಮದೊಂದೊಂದು ಬಳ್ಳದ ಧಾನ್ಯಕಂ||

  7. ಕುಂಚ
    ತ್ರೀಡಿ-ಮುದ್ರಣವೆಂಬ ತಂತ್ರವೀಗಿದೊ ಬಂತು
    ಕ್ರೀಡೆವೊಲ್ ನಿರವಿಸಿದನೆಂದೊ(3D ಕುಂಚದಿಂ) ಬೊಮ್ಮಂ|
    “ಮಾಡುವೆಂ ಸರ್ವಮಂ ದೇವನೊಲ್” ತಾನೆಂದ
    ಖೋಡಿಮಾನಿಸನಿನಿತು ಮಂದನೇಕೋ!!

  8. ‘ಭೂಮಿಗೆ ಭಾರ’ವೆಂದೆನಿಸದಿರುವುದು
    ವಿಸ್ತಾರವಧಿಕವಲ್ತುರೆಭಾಗದೊಳ್ ಶಿಖೆಯ(Pyramid),
    ಜಾಸ್ತಿಯೇನಿಲ್ಲ ಸೂಚ್ಯಗ್ರಭಾರಂ|
    ವಿಸ್ತರಿಸೆ ಮಾನವನ ಜ್ಞಾನವೌನ್ನತ್ಯಕ್ಕೆ
    ದುಸ್ತರಂ ತಾನೆನಿಸನಾಗಳಿಹಕೆ||

  9. ಇಂದ್ರವಜ್ರ|| ಸಾರಿರ್ದುಮದ್ವೈತಮನೆಂತೊ ದೈವಂ
    ಸ್ವಾರಸ್ಯಮಂ ನೋಡದ ಮಾನಿಸರ್ಗಂ|
    ತೋರುತ್ತುಮಾಪ್ಲಾವನಿದರ್ಶದಿಂದಂ(ಆಪ್ಲಾವ=flood)
    “ನೀರೊಳ್ ಗಡೊಂದ್,” ಎಂದಿದೆ(ದೈವವು) “ವಾಹ-ವಾಹ್ಯಂ(carrier and the carried||”

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)