Dec 102019
 
Image result for fall image

  19 Responses to “ಪದ್ಯಸಪ್ತಾಹ ೩೯೦: ಚಿತ್ರಕ್ಕೆ ಪದ್ಯ”

  1. red carpet welcomes you
    spread and gilded to guide your good self to abode
    o deadly winter wouldst thou
    admit not but a minion of mercy within?

    ಎಲೆಗಳು ಹೀಗೆ ಬಣ್ಣ ತಿರುಗುವಲ್ಲೆಲ್ಲ ಚಳಿರಾಯನ ಆರ್ಭಟವೂ ಹೆಚ್ಚು. ಅದಾಗಿ ಒಂದು ಪ್ರಾರ್ಥನೆ. ಇದರ ಉಚ್ಚಾರಣೆಯನನ್ನು ಕನ್ನಡದಲ್ಲಿ ಬರೆದಾಗ ಕಂದಪದ್ಯ ಎದ್ದುಕಾಣುತ್ತೆ.

    ರೆಡ್ಡ್ಕಾರ್ಪೆಟ್ ವೆಲ್ಕಮ್ಸ್ ಯೂ
    ಸ್ಪ್ರೆಡ್ಡಂಡ್ ಗಿಲ್ಡೆಡ್ ಟು ಗೈಡ್ ಯರ್ಗುಡ್ ಸೆಲ್ಫ್ ಟು ಅಬೋ
    ಡೋಡೆಡ್ಲಿ ವಿಂಟರ್ವುಡ್ಸ್ಟ್ ಧೌ
    ಅಡ್ಡ್ಮಿಟ್ ನಾಟ್ ಬಟ್ಟ್ ಅ ಮಿನಿಯನಾವ್ಮರ್ಸಿ ವಿಧಿನ್?

    ರ್ಗು, ರ್ವು ಎಂಬಲ್ಲಿ ಆಂಗ್ಲ ಉಚ್ಚಾರಣೆಗೆ ಅನುವಾಗಿ ಶಿಥಿಲದ್ವಿತ್ವವಾಗಿ ಎಣಿಸಬೇಕು. ಪ್ರಾಸದ ವಿಚಾರದಲ್ಲೂ “wouldst thou not admit but a minion of mercy within” 🙂

    • ರ್ಗು ರ್ಪು ಮಾತ್ರವೇನು, ಇಡಿಯ ಆಂಗ್ಲವಾಙ್ಮಯವೇ ಹಲಂತ/ಗರುಪ್ರಚುರ. ಅದಕ್ಕೇ ಅವರು stressed syllable, unstressed syllable ಎಂದು ಶ್ರಾವ್ಯವಾಗಿ ವರ್ಗೀಕರಿಸುವುದನ್ನುಳಿದು ಇನ್ನೇನೂ ಮಾಡಲಾಗದು. ದೃಶ್ಯವಾಗಿ ಎಲ್ಲವೂ ಗುರ್ವಕ್ಷರವೇ. ಇಲ್ಲಿಯೇ ನೋಡಿ, ಒ ಡೆಡ್ಳಿ, ಓ ಡೆಡ್ಳಿ, ಒ ಡೇಡ್ಳಿ, ಓ ಡೇಡ್ಳಿ, ಒ ಡೆಡ್ಲೀ, ಓ ಡೆಡ್ಳೀ, ಒ ಡೇಡ್ಳೀ, ಓ ಡೇಡ್ಳೀ ಎಂದೆಲ್ಲ ಉಚ್ಚರಿಸಬಹುದು. ಅದರಲ್ಲಿರುವ ಲಘ್ವಕ್ಷರಗಳು ಆಯ್ದು ಇರಿಸಿಕೊಳ್ಳುವಷ್ಟು ಕಡಮೆ: the, very, he, she, a, many, study ಇತ್ಯಾದಿಗಳನ್ನು ಮೇಲಿಂದಮೇಲೆ ಬಳಸಿಕೊಳ್ಳಬೇಕು. a, the, veryಗಳು ಚ-ವೈ-ತು-ಹಿ-ಗಳೇ! Multisyllablic ಪದಗಳಲ್ಲಿ ಕ್ವಚಿತ್ತಾಗಿ ಸಿಗುತ್ತದಾದರೂ ಸೂಕ್ತವಾಗಿರುವಂಥವು ಕಡಮೆಯೇ.

    • ಚಳಿರಾಯನ ಆರ್ಭಟ ಸುಂದರವಾಗಿ ಮೆರೆದಿದೆ 🙂

  2. ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
    ಕನ್ನೆ ಉಷೆ ರವಿ ಮೂಡೆವೆಡೆ ಬಾಂಬೊಲವ ತೊಳೆಯುವ ಮಾಟದಿ
    ಚೆನ್ನೆಯರು ಮರವೆಣ್ಗಳುದುರಿಸಿ ಪಣ್ತೆಲೆಗಳನು ನೇಸರು
    ಮುನ್ನ ಉತ್ತರದತ್ತ ಮರಳುವ ಬಳಿಯನೀಗಲೆ ತೊಳೆದರು

  3. ನೇರ್ಪಿಂ ಸಾಸಿರದೀವೆಗೆ-
    ಯೇರ್ಪಡಿಸಿದನಾರ್ ಬಳುಂಕ ಬತ್ತಿಗಳೆನುವೊಲ್
    ಕರ್ಪಿನೊಡಲವಕ್ರತೆಯಿಂ
    ತೋರ್ಪುದು ಪಳದಿಯೆಲೆವೆತ್ತ ಬಂಧುರದೃಶ್ಯಂ

    • ಚೆನ್ನಾಗಿದೆ. ವಕ್ರತೆಯಿಂದಲೇ ಶೋಭೆ ಎಂದಲ್ಲವೆ ಕಂತಿಕೋಕ್ತಿ? 🙂

      • ಧನ್ಯವಾದ, ಹೌದು ವಕ್ರವಾದ ಕಾಂಡವೆಂಬ ಬತ್ತಿಗಳಿಂದ ಹಳದಿಯ ದೀಪವೆಂಬ ಎಲೆಗಳು ಎಂಬುದು ಆಶಯ

  4. ಬೆಂಕಿಯ ದಳ್ಳುರಿಯಿಂ ಬನ-
    ದಂಕಣಮಾದುದನುಮಾನಿಸಲ್ ಪೊಗೆ-ಧಗೆಯುಂ
    ಸಂಕಟಮುಂ ಕಾಣದಿರಲ್
    ಮಂಕಾದೆಂ ಪ್ರಕೃತಿವೆತ್ತ ಕೈತವದಿಂದಂ

    • ಯತ್ರಧೂಮಸ್ತತ್ರಾಗ್ನಿಃ ಬಿಟ್ಟು ಅಗ್ನಿಶ್ಚೇತ್ ಕುತ್ರ ಧೂಮಃ ಎಂದೀರೋ? ಚನ್ನಾಗಿದೆ 🙂 ವಿನೋಕ್ತಿ ತಾನೆ?

      • ಧನ್ಯವಾದ ಜೀವೆಂ, ಭ್ರಾಂತಿಮದಲಂಕಾರವಿರಬಹುದೇನೋ ಎನಿಸುತ್ತದೆ

  5. ಒಂದೆಽಡೆಽಗಿದ್ದೊಽಡೆಽ ಏಕಽತಾನತೆಯಲ್ತೆಽ
    ಒಂದೇ ತಽಳಿಗಳೆಂತೊಽ, ಅದಕೆಽ|
    ತಂದುಽಕೊಳ್ಳುವರಲ್ತೆಽ ಹೆಣ್ಣುಽ-ಗಂಡುಗಳನ್ನಿ-
    ನ್ನೊಂದುಽ ಗೋತ್ರದೆ ನೋಡೆಂದೆಂದುಂ|| ಸಾಂಗತ್ಯ

    • ಹೆಚ್ಚಾದರೆ ಅಮೃತವೂ ವಿಷವಲ್ಲವೆ, ಚೆನ್ನಾಗಿದೆ ಪ್ರಸಾದು

  6. ದಾರಿಹೋಕನಿಗೆ ಮರ ಹೇಳಿದ್ದು:
    ರಸ್ತೆಽಯುಽ ನೆಟ್ಗೈತೆಽ ಗಸ್ತುಽ ತಿಽರುಗದೆಽಲೆಽ
    ಶಿಸ್ತಿಂದೆಽ ಒಂಟುಽ ಓಗಯ್ಯಽ| ವಾರ್ದಾಗೆಽ
    ಜಾಸ್ತಿಽನೆಽ ನಗ್ನಽ ಆಗೇವುಽ||

  7. ಸಂತಮಹಂತರ್ ಸಾಲೊಳ್
    ನಿಂತಾಗಿರ್ಪ ಪರಿಯೊಳ್ ಪ್ರಭೆಯದರಿವಿಂ ಮೇಣ್
    ಮುಂತಾದ ತಣ್ಪದಿರವಿಂ
    ಅಂತರ್ಮುಖ ಸಾಧಕರ್ಗೆ ನೆರವಾಗಲ್ ಕಾಣ್ ||

    (ಕಾಷಾಯ ಧಾರಿ) ಸಂತರು ಸಾಲಾಗಿ ನಿಂತು – ತಮ್ಮ ಅರಿವಿನ ಪ್ರಭೆಯಿಂದ – ಇರವಿನ ತಂಪಿನಿಂದ – ಧ್ಯಾನನಿರತ ಸಾಧಕರಿಗೆ ಅಂತರಾನ್ವೇಷಣೆಗೆ ನೆರವಾಗುತಿದ್ದಾರೆ – ದಾರಿ ತೋರಿಸುತ್ತಿದ್ದಾರೆ – ಎಂಬ ಕಲ್ಪನೆಯ ಪದ್ಯ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)