Feb 192012
 

ನಿಮಗಿಷ್ಟವಾದ ಛಂದಸ್ಸಿನಲ್ಲಿ ಯಾವುದಾದರು ಇತರ ಭಾಷೆಯ ನಿಮಗಿಷ್ಟವಾದ ಪದ್ಯವನ್ನು ಅನುವಾದಿಸಿರಿ (ಉದಾ :: ಸಂಸ್ಕೃತದಿಂದ ಕನ್ನಡಕ್ಕೆ, ತೆಲುಗಿನಿಂದ ಸಂಸ್ಕೃತಕ್ಕೆ, ಅಂಗ್ರೇಜಿಯಿಂದ ಕನ್ನಡಕ್ಕೆ, ಇತ್ಯಾದಿ)

ದಯವಿಟ್ಟು ಮೂಲ ಪದ್ಯವನ್ನೂ ಬರೆಯಿರಿ.

  22 Responses to “ಪದ್ಯಸಪ್ತಾಹ – ೮ – ೨೦೧೨ – ಅನುವಾದ”

  1. ಇಂದು ಶಿವರಾತ್ರಿಯಾದ್ದರಿಂದ, ಶಿವನ ಒಂದು ಸ್ತುತಿ – ಭಾಮಿನಿ ಷಟ್ಪದಿಯಲ್ಲಿ.
    ———————————————————————————-

    ಒಳಗೆ ನುಗ್ಗುತ ದಟ್ಟ ಕಾಡಿನ
    ಕೊಳಗಳೊಳಗಡೆ ಮುಳುಗಿ ಪರ್ವತ
    ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
    ತಿಳಿವ ಕಾಣದ ಜಡಮತಿಗಳಿವು
    ತಿಳಿಯರಯ್ಯೋ ಮನದ ಕೊಳದಲ-
    ರಳಿಹ ಕಮಲವೆ ಉಮೆಯರಸನಿಗೆ ಬಹಳ ಮೆಚ್ಚಿಗೆಯು!

    ಸಂಸ್ಕೃತ ಮೂಲ – ಶಿವಾನಂದಲಹರಿಯಿಂದ:
    ========================

    ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
    ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
    ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
    ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

    -ಹಂಸಾನಂದಿ

  2. ಗಾಥಾ ಸಪ್ತ ಶತಿ

    ऊर्ध्वाक्षः पिबति जलं यथा यथा विरलांगुलिः पथिकः
    प्रपापालिकापि तथा तथा धारां तनुकामपि तनू करोति

    ಅನುವಾದ-
    ಮೇಲೆನೋಟವು ಬೆಸೆಯೆ ನೀರ್ಗುಡಿಪ ಬೆರಳುಗಳ್
    ಪಾಲಾಗುತಿರ್ಪ೦ತೆ ಸ೦ಚಾರಿಗೆ
    ನೂಲಿನೊಲು ಸಣ್ಣಗ೦ತೆಯೆ ಮಾಳ್ಪಳು ಪ್ರಪಾ-
    ಪಾಲಿಕೆಯು ತೆಳುವಿರ್ಪಧಾರೆಯನ್ನೂ

  3. ಇದು ಒಂದೆರಡು ತಿಂಗಳ ಹಿಂದೆಯೇ ಮಾಡಿದ್ದ ಅನುವಾದ. ಈ ವಾರದ ಪ್ರಶ್ನೆಗೆ ಸರಿಯಾಗುವುದೆಂದು ಇದನ್ನೂ ಹಾಕುತ್ತಿದ್ದೇನೆ – ಇದರಲ್ಲಿ ಎರಡನೇ ಅಕ್ಷರದ ಪ್ರಾಸವಿಲ್ಲದಿರುವನ್ನು, ಪದ್ಯಪಾನಿಗಳು ಕ್ಷಮಿಸಬೇಕೆಂದು ಕೋರಿಕೆ.

    ಪಂಚಮಾತ್ರಾ ಚೌಪದಿಯಲ್ಲಿ (೫/೫/೫/೫ – ೫/೫/೫/೨) ಮೂಲದ ಒಂದು ಪದ್ಯವು ಇಲ್ಲಿ ಎರಡು ಚೌಪದಿಗಳಾಗಿ ಅನುವಾದವಾಗಿವೆ:

    ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ
    ಮುಂಗೈಯನೀ ಚೆಲುವೆ ಹಿಡಿದೆಳೆವಳು;
    ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ
    ಕಟುನುಡಿದು ಹುಬ್ಬುಗಳ ಕುಣಿಸುತಿಹಳು!

    ಹುಸಿಯಾಗಿ ಚೀರುತಿಹ ಕೊಂಕಿರುವ ಕಣ್ಣವಳ
    ಮುತ್ತಿಟ್ಟವನಿಗಿಲ್ಲೆ ಅಮೃತವಿಹುದು;
    ಇದನೊಂದು ತಿಳಿಯದಿಹ ತಿಳಿಗೇಡಿಗಳು ತಾನೆ
    ಕಡಲ ಸುಮ್ಮನೆ ಕಡೆದ ದೇವತೆಗಳು!

    ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ):
    ——————————————————–

    ಸಂದಷ್ಟಾಧರಪಲ್ಲವಾ ಸಚಕಿತಮ್ ಹಸ್ತಾಗ್ರಮಾಧುನ್ವತೀ
    ಮಾಮಾಮುಂಚಶಠೇತಿ ಕೋಪವಚನೈರಾನರ್ತಿತಭ್ರೂಲತಾ |
    ಶೀತ್ಕಾರಾಂಚಿತಲೋಚನಾಸರಭಸಂ ಯೈಶ್ಚುಂಬಿತಾಮಾನಿನೀ
    ಪ್ರಾಪ್ತಂತೈರಮೃತಂ ಶ್ರಮಾಯಮಥಿತೋ ಮೂಢೈಃ ಸುರೈಃ ಸಾಗರಃ ||

  4. A PSALM OF LIFE- Henry Wadsworth Longfellow

    ಆಂಗ್ಲಮೂಲ||
    Art is long, and Time is fleeting,
    And our hearts, though stout and brave,
    Still, like muffled drums, are beating
    Funeral marches to the grave.

    (Life is short and accomplishments take time
    each heartbeat brings us closer to death)

    ಕರ್ಣಾಟಭಾಷಾನುವಾದ||
    ದೋಧಕ || ಮೂರ್ತಿಯಕಾಲದನಿರ್ದಯದೋಟಂ|
    ಕೀರ್ತಿಯಹೂವದುದೂರದನೋಟಂ||
    ಪೂರ್ತಿಯಸೂಚಿಪಹಾರ್ದನಿನಾದಂ|
    ಸ್ಫೂರ್ತಿಯಜೀವನನಾಟಕದಂತ್ಯಂ||

    (ಹಾರ್ದನಿನಾದಂ-Heart beat)

    ಆಂಗ್ಲಮೂಲ||
    Lives of great men all remind us
    We can make our lives sublime,
    And, departing, leave behind us
    Footprints on the sands of time ;

    ಸಂಸ್ಕೃತಾನುವಾದ||
    ರಥೋದ್ಧತಾ|| ಜೀವನಮ್ ಸುಮಹತಾಮುದಾಹೃತಮ್|
    ದರ್ಶಯನ್ತಿವರವರ್ತ್ಮಪಾಮರಾನ್||
    ನಿರ್ಗತಾಭುವಿನಿವೇಶ್ಯತೇಸ್ಥಿರಮ್|
    ಕಾಲಸೈಕತಪಥೇಪದಾಂಕಿತಮ್||

    • Excellent ! ಕಾಲಸೈಕತಪಥೇಪದಾಂಕಿತಮ್| is more sonorous than the original. Congrats Bapat.

      • Thanks very much, but

        ಕವಯಃ ಚಂದ್ರಮೌಳ್ಯಾದ್ಯಾಃ ವಯಮ್ ತು ಕವಿನಾಮಕಾಃ|
        ಪರ್ವತೇ ಪರಮಾಣೂಚ ಪದಾರ್ಥತ್ವಮ್ ಪ್ರತಿಷ್ಠಿತಮ್||

        • ಪ್ರಸಾದ್ ಬಾಪಟರ ಕವಿತೆಗಳಷ್ಟೇ, ಅವರ ಪ್ರತಿಕ್ರಿಯೆಗಳೂ ಚೆನ್ನಾಗಿವೆ. ಹಿಂದೆ ಬರೆದ ಸರಸ್ಸು ಹಾಗು ಸರೋವರಗಳ ನಡುವಿನ ಅರ್ಥ ವ್ಯತ್ಯಾಸವು ಕೂಡ ನನಗೆ ಬಹಳ ಮೆಚ್ಚಿಗೆಯಾಯಿತು

  5. “ಶಿವಾಪರಾಧ ಕ್ಷಮಾಪಣಾ ಸ್ತೋತ್ರ”ದ ಒಂದು ಶ್ಲೋಕ ಹೀಗಿದೆ:

    ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
    ಶ್ರವಣನಯನಜಂ ವಾ ಮಾನಸಂ ವಾಪರಾಧಂ |
    ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
    ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

    ಇದರ ಭಾವಾನುವಾದವನ್ನು ಕನ್ನಡದಲ್ಲಿ(ಕಗ್ಗದ ಛಂದಸ್ಸಿನಲ್ಲಿ) ಬರೆಯುವ ನನ್ನ ಮೊದಲ ಪ್ರಯತ್ನವಿದು.:
    ನಡೆಯಲ್ಲಿ ನುಡಿಯಲ್ಲಿ ಕಾರ್ಯಕಾರಣದಲ್ಲಿ
    ದುಡಿವಕರದಲ್ಲಿ ಶ್ರವಣಾಲೋಕದಲಿ |
    ಅಡಿಗಡಿಗೆನೆಸಗಿರುವೆನಪರಾಧ ಯಾಚಿಸುವೆ
    ಕೊಡುಮುಕ್ತಿ ತಕ್ಕಂತೆ ಮಹಾದೇವ ||

    • ಸ್ವಾಗತವು ತೆಕ್ಕುಂಜರಿಗೆ ಬನ್ನಿ ನಮ್ಮೊಡನೆ
      ಭಾಗಗೊಳ್ಳಲು ಪದ್ಯಪಾನಂಗಳೊಳ್ |
      ಮಾಗಿಪಳಗುವುದೆಲ್ಲ ಪದ್ಯರಚನಾ ಕ್ರಮವು
      ಬೇಗದಲೆ ನಿಮ್ಮ ಪ್ರಯತ್ನವಿದರೊಳ್ ||

      ಪದ್ಯಪಾನಕ್ಕೆ ನಲ್ಬರವು 🙂
      ನಿಮ್ಮ ಪದ್ಯದಲ್ಲಿ ಒಂದೆರಡು ಕಡೆ ಲಗಂ (ಅಂದರೆ ಪದದ ಶುರುವಿನಲ್ಲಿ ಲಘು-ಗುರು ಬರುವುದು) ::
      ಎರಡನೆ ಸಾಲು – ದುಡಿವಕರ + ದಲ್ಲಿಶ್ರ + ವಣಾಲೋ + ಕದಲಿ
      ನಾಲ್ಕನೆ ಸಾಲು – ಕೊಡುಮುಕ್ತಿ + ತಕ್ಕಂತೆ + ಮಹಾದೇ + ವ
      ಇದರಿಂದ ಧಾಟಿಯಲ್ಲಿ ಓದುವಾಗ ಕೊಂಚ ತೊಡಕಾಗುತ್ತದೆ. ದಯವಿಟ್ಟು ಗಮನಿಸಿ.
      ಹಾಗು, ಮೂರನೆಯ ಸಾಲಿನಲ್ಲಿ, ಅನೇಕ ಲಘುಗಳು ಸಾಲಾಗಿ ಬರುತ್ತವೆ. ಮಧ್ಯದಲ್ಲಿ ಗುರುಗಳ ಸಿಂಪಡಿಕೆಯಿದ್ದರೆ ಪದ್ಯ ಶೈಲಿ ಇನ್ನು ಉತ್ತಮವಾಗುತ್ತದೆ.

      • ನನ್ನೀ ಕಿರು ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೊತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು.ನನ್ನ ಪ್ರಯತ್ನವನ್ನು ಮುಂದುವರಿಸುವೆ.

  6. ಕಾವ್ಯ ಬಂಧುಗಳೇ, ನಿಮ್ಮೆಲ್ಲರ ಕವನಗಳ ಕರಾಮತ್ತು ಉತ್ತಮ ಚದುರಂಗದಾಟದಂತಿದೆ; ಸಮಯವಿದ್ದರೆ ’ನಾನು’ ಕಳೆಯಲು ಸೋಪಾನವಾಗುತ್ತದೆ! ನಾನು ಯಾರೆಂಬುದನ್ನು ಅವಲೋಕಿಸ ಹೊರಟ ನನಗೆ ಆದಿಶಂಕರರ ಆತ್ಮಷಟ್ಕ ದೊರೆಯಿತು, ಅದರ ಮೊದಲನೇ ಭಾಗವನ್ನು ಹೀಗೊಮ್ಮೆ ಅರ್ಥವಿಸಿದ್ದೇನೆ, ತಪ್ಪಿದ್ದರೆ ಕ್ಷಮೆಯಿರಲಿ:

    ಶಂಕರರ ಸಂಸ್ಕೃತ ಮೂಲ :

    ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
    ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
    ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
    ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

    ನನ್ನ ಕನ್ನಡ ಬಾಲಿಶ :

    ಮನ ಬುದ್ಧಿ ಚಿತ್ತ ಅಹಂಕಾರ ನಾನಲ್ಲ
    ಅನುಭವಿಪ ಜಿಹ್ವೆ ಕಿವಿ ಮೂಗು ಕಣ್ಣಲ್ಲ |
    ಘನಭೂಮಿ ವಾಯು ಬಾನುವು ಅಗ್ನಿಯೂ ಅಲ್ಲ
    ಅನವರತ ಆನಂದಘನ ಶಿವನೇ ಎಲ್ಲ ||

  7. ಇನ್ನೊಂದು ಅನುವಾದ – ಪಂಚಮಾತ್ರಾ ಚೌಪದಿಯಲ್ಲಿ:

    ಕಿರಿಯರೂ ಒತ್ತಾಸೆ ನೀಡಿಒದಗಲುಬಹುದು
    ಹಿರಿಯರಿಂದಲು ಶಕ್ಯವಿರದಿದ್ದರೇನು;
    ಕಿರಿದಾದ ಬಾವಿಯಲಿ ದಾಹವಾರಿಸಬಹುದು
    ಹಿರಿಕಡಲಿನಿಂದದನು ಮಾಡಬಹುದೆ?

    ಸಂಸ್ಕೃತ ಮೂಲ:

    ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ ।
    ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥

  8. ಹಿಂದೊಮ್ಮೆ ಮಾಡಿದ perpetration.

    ಹಣವಿದ್ದೆಡೆ ಕುಲವಿರುವುದು
    ಹಣವಿದ್ದೊಡೆ ಗುಣದರಿವೂ ತಿಳಿವೂ ಬರುವವು
    ಹಣಕಂಡೆಡೆ ಬಲು ಚೆಲುವೂ ಕಣ್ಣಿಗೆ
    ಹಣವುಳ್ಳಾತನದೇಂ ಗುಣನಿಧಿಯೋ

    यस्यास्ति वित्तं स नरः कुलीनः ।
    स पण्डितॊ स शृतवान् गुणज्ञ्नः ।
    स ऎव वक्ता स च दर्शनीयः |
    सर्वॆ गुणा: काञ्चनमाश्रयंति ॥

  9. ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
    ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ
    ಕದಾಚಿದಪಿ ಪರ್ಯಟನ್ ಶಶವಿಷಾಣಪುಚ್ಛಮಾಸಾದಯೇ
    ನ್ನತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್

    ಪೃಥ್ವೀ – ನನಾನನನ ನಾನನಾ| ನನನ ನಾನನಾನಾನನಾ

    ಸುಸಾಧ್ಯವದು ಶೋಧಿಸಲ್| ಶ್ರಮಿಸೆ ಮಣ್ಣಿನೊಳ್ ತೈಲವಂ|
    ಅಸಾಧ್ಯಮರುಭೂಮಿಯೊಳ್| ಕುಡಿವನಲ್ತೆ ತಾ ನೀರನುಂ|
    ವಸಾಹತುವ ಶೋಧಿಸಲ್| ಮೊಲದ ಕೊಂಬದಾಹಾರ್ಯವೈ|
    ಪ್ರಸಾದದೊಳು ನಿಲ್ಲದೈ| ಮನವು ಮೂರ್ಖನಾತಂದು ತಾ|

    ಕೊಂಬದಾಹಾರ್ಯವೈ – ಅರಿಸಮಾಸವೆ?

    • ಅಲ್ಲಿ ಇಲ್ಲಿ ಸ್ವಲ್ಪ ಸವರಿದ್ದೇನೆ:

      ಸುಸಾಧ್ಯವದು ಶೋಧಿಸಲ್| ಶ್ರಮಿಸಿ ಮಣ್ಣಿನೊಳ್ ತೈಲವಂ|
      ಅಸಾಧ್ಯಮರುಭೂಮಿಯೊಳ್| ಕುಡಿಯಲಪ್ಪುದೈ ನೀರನುಂ|
      ಮಸೂರದೊಳು ವೀಕ್ಷಿಸಲ್| ಮೊಲದ ಕೊಂಬನುಂ ಕಾಂಬೆವೈ|
      ಪ್ರಸೀದಿಸಲು ಬಾರದೈ| ಮನವು ಮೂರ್ಖನಂದೆಂದಿಗುಂ|

      ’ಪ್ರಸೀದಿಸಲು’ – ಸಾಧುರೂಪವೆ?

  10. ಹಿಂದೆ ಮಾಡಿದ್ದ ಒಂದು ಅನುವಾದಕ್ಕೆ ಪ್ರಾಸ ಮೊದಲಾದುವುಗಳನ್ನು ಸೇರಿಸಿ ಹೀಗೊಂದು:

    ಪಾಣಿಗಳಿಗೊಡವೆಯೆಂಬುದು ದಾನವೀಯುವುದು
    ಗೋಣಿಗೊಂದೇ ಒಡವೆ ನನ್ನಿನುಡಿಯುವುದು
    ಜಾಣಕಿವಿಗಳಿಗೊಡವೆ ತತ್ತ್ವಗಳನಾಲಿಪುದು
    ಆಣೆಯಿಟ್ಟೇನಿತರ ಒಡವೆ ಬೇಡೆಂದು!

    ಸಂಸ್ಕೃತ ಮೂಲ:
    ——————

    ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂ
    ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||

    -ಹಂಸಾನಂದಿ

  11. ನಸುನಗುತ ಕೈಗೊಂಡನರ್ಜುನ
    ನೆಸಗಿದನು ರಥವನು ಸಮೀರನ
    ಮಿಸುಗಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು|
    ಹೊಸಬಗೆಯ ಸಾರಥಿಯಲಾ ನಮ
    ಗಸದಳವು ಸಂಗತ ಬರಲೆಂ
    ದುಸುರದುಳಿದುದು ಪಿಂತೆ ಪುರದಲಿ ಚಾತುರಂಗಬಲ||
    Morgan = horse

    Smile he did Arjuna the warrior
    While he took charge of the chariot
    Well, the morgan charged ahead abrisk; the air braced none|
    Dull, the army stayed aback up-
    Hill the task was, and couldn’t
    Gel with the abilities the radical jockey exhibited||

  12. Correction in 5th line: ಗಸದಳವು ಸಂಗಾತ ಬರಲೆಂ

  13. ಇದೂ ಕೂಡ ಹಿಂದೆ ಮಾಡಿದ್ದ ಅನುವಾದವೊಂದನ್ನು ಛಂದಸ್ಸಿಗೆ ಹೊಂದಿಸುವ ಪ್ರಯತ್ನ. ಚೌಪದಿಯಲ್ಲಿ:

    ಕಾರಮೋಡದಸಾಲು ನೆಲಮುಚ್ಚು ಹೂಹಾಸು
    ಸಾರುತಿರೆ ತಂಬೆಲರು ಮಲ್ಲೆಹೂ ಕಂಪು
    ಮಾರುದನಿಸಿಹ ಕೇಕೆ ಕುಣಿಯುತಿರೆ ನವಿಲುಗಳು
    ಬಾರದೇ ಬಯಕೆ ಹಿಗ್ಗಲ್ಲು ಕೊರಗಲ್ಲು!

    ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)
    ————————————————————

    ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ
    ನವಕುಟಜ ಕದಂಬಾಮೋದಿನೋ ಗಂಧವಾಹಾಃ |
    ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ
    ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||

    (ಅನುವಾದದಲ್ಲಿ ಮೂಲಪದ್ಯದ ಕೆಲವು ಪದಗಳು ಬಿಟ್ಟು ಹೋದವು – ಅದಕ್ಕಾಗಿ ಕ್ಷಮೆ ಇರಲಿ)

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)