Mar 132017
 

ತ್ರಿವಿಕ್ರಮನಾದ ವಾಮನನನ್ನು ವರ್ಣಿಸಿ ಪದ್ಯ ರಚಿಸಿರಿ

  52 Responses to “ಪದ್ಯಸಪ್ತಾಹ ೨೪೬: ವರ್ಣನೆ”

  1. ಗಗನಮದಾಯ್ತು ದಲ್ ಪಳದಿ ಬಣ್ಣದಿ ಕಟ್ಟಿದ ವಸ್ತ್ರಮಾಗಳಾ
    ಮುಗಿಯದ ಲೋಕಸಂಕುಲಗಳೇ ವಟುವಾಮನ ಕೇಶಪಕ್ಷಮೈ//
    ಮುಗಿಲಸಮೂಹಮಾತನುಪವೀತಕೆ ಬಿಳ್ಪಿನವೋಲಿರಲ್ ಮಹಾ
    ತ್ಮಗೆ ನರರೂಪಿನಾ ಪಸದನಂಗಳವೆಂತುಟು ಸಾಲ್ಗುಮಲ್ಪಮೈ//

    ವಾಮನ, ವಟುವಿನ ರೂಪದಲ್ಲೇ ತ್ರಿವಿಕ್ರಮನಾದದ್ದು ಎಂದು ಕಲ್ಪಿಸಿ: ಆತನಿಗೆ ಸಂಜೆಯ ಹಳದಿ ಬಣ್ಣದ ಆಕಾಶವೇ ಪೀತಾಂಬರವಾಯಿತು. ಮುಗಿಯದ ಬ್ರಹ್ಮಾಂಡಗಳೇ ಕೂದಲಾದವು . ಮೋಡಗಳೇ ಜನಿವಾರವಾದವು. ಅಷ್ಟು ದೊಡ್ಡ ದೇಹದವನಿಗೆ(ಮಹಾತ್ಮ) ಮನುಷ್ಯಾಕೃತಿಗೆ ಮಾಡಿದ ಅಲಂಕಾರ ಸಾಲುವುದೇ?

  2. ಕರದಿ ಕೊಡೆಯಂ ಪಿಡಿದ ತರಳಗೆ
    ವರವ ಕೊಡುವೆನೆನುತ್ತೆ ಬಲಿನೃಪ
    ಮೆರೆಯೆ ದರ್ಪವನದನು ಮುರಿಯುತೆ ಮೆರೆದನಿವನಾರೈ?
    ಎರಡು ಪೆಜ್ಜೆಯಲಳೆದು ಜಗವನೆ
    ಶಿರದಮೇಲಿರಿಸುತ್ತಲಂಘ್ರಿಯ-
    -ನರಿಯ ಪಾತಾಳಕ್ಕೆ ಕಳುಹಿದ ಮುರಹರನು ಕೇಳೈ

  3. ಮೂರಡಿಯ ಬಾಲಕನೆ ಬೀಜವು
    ಮೂರು ಜಗವನು ಹಬ್ಬಿ ಹರಡುತೆ
    ಮೇರುವನೆ ಮೀರುತಲಿ ಬೆಳೆದಾ ಧರ್ಮವೃಕ್ಷಕ್ಕೆ
    ವೀರ ಬಲಿನೃಪನನ್ನು ಹರಸುತೆ
    ತೋರಿ ಮುಕುತಿಯ ಪಥವನವನಿಗೆ
    ಬೀರಿಹುದು ತಾನಭಯಮೆನ್ನುವ ನೆಳಲನೆಮಗೆಲ್ಲ

    • ಇನ್ನೂ ವ್ಯಾಪಕವಾಗಿ ಉಪಮಾನವಾಗಿಸಬಹುದು: ಕೃಷಿಕವಾಮನ, ಬಲಿಬೀಜ, ಧರ್ಮೋತ್ಪನ್ನ(crop) ಎಂದು ರೂಪಕವಾಗಿಸಿ ಪುನಾರಚಿಸಿ. (ಧರ್ಮವು ಹುಟ್ಟಬೇಕಾದ್ದು ಅಧರ್ಮದ ಮಧ್ಯದಿಂದಲೇ ಆದ್ದರಿಂದ, ಅಧರ್ಮಿಬೀಜವನ್ನು ಬಿತ್ತಿ ಧರ್ಮಕೃಷಿಯನ್ನು ಮಾಡುವುದರಲ್ಲಿ ತಪ್ಪೇನಿಲ್ಲ. ಅದು ಕೃಷಿಕನ ಕ್ಷಮತೆಯನ್ನೇ ದ್ಯೋತನವಾಗಿಸುತ್ತದೆ.)

      • ಬಾಲನಂಕುರದಿಂದೆ ಪುಟ್ಟಿತೈ ಧರ್ಮತರು
        ಕಾಲಮಣಮಿಲ್ಲದೆಲೆ ತಾಂ ಬೆಳೆಯಿತೈ
        ಮೂಲೋಕದೊಳ್ ಹರಡಿ ಬಲಿರಾಜ ದರ್ಪಮಂ
        ಸೋಲಿಸುತೆ ಸೊಗದ ನೆಳಲಂ ಬೀರಿತೈ

        ತಾರೆಗಳೆ ಪರ್ಣಗಳು ಸೂರ್ಯಚಂದ್ರರೆ ಫಲವು
        ಧಾರಿಣಿಯೆ ವೃಕ್ಷಕ್ಕೆ ಕಾಂಡಮಾಯ್ತೈ
        ಹೀರುತಲಿ ಬಲಿಯಹಂಕೃತಿಯ ಗೊಬ್ಬರವನ್ನೆ
        ಬೇರ ತಾಂ ಬಿಟ್ಟಿತೈ ಪಾತಾಳದೊಳ್

        ಮೇಲಿನ ಪದ್ಯವನ್ನೇ ವಿಸ್ತರಿಸುವ ಪ್ರಯತ್ನವಿದು..ವಾಮನನೆಂಬ ಮೊಳಕೆಯಿಂದ ಕ್ಷಣಮಾತ್ರದಲ್ಲಿ ಬಲಿಯ ಅಹಂಕಾರವೆಂಬ ಗೊಬ್ಬರವನ್ನು ಹೀರಿ ಬೆಳೆಯಿತು.ಅದಕ್ಕೆ ತಾರೆಗಳೇ ಎಲೆಗಳು,ಸೂರ್ಯಚಂದ್ರರೇ ಫಲಗಳು(ಮರದ ಮೇಲ್ಭಾಗ), ಭೂಲೋಕವೇ ಕಾಂಡ, ಪಾತಾಳವೇ ಬೇರು ಎಂಬ ಕಲ್ಪನೆಯೊಂದಿಗೆ ಬರೆಯಲು ಪ್ರಯತ್ನಿಸಿದೆ.

        • ಕಾಲಮಣಂ ~ ಕಾಲಣಮಂ. ಹೇಗಿದ್ದರೂ ಇದು ಅರಿಸಮಾಸ.

        • ತುಂಬಾ ಸೊಗಸಾದ ಕಲ್ಪನೆ. ಒಳ್ಳೆಯ ಪದ್ಯ. ಮೊದಲಿನ ಭಾಮಿನಿಗಿಂತ ಈ ಚೌಪದಿದ್ವಿತಯವೇ ಸೊಗಸಾಗಿದೆ.
          @ಹಾದಿರಂಪ- ಕಾಲಂ+ಅಣಂ- ಅರಿಸಮಾಸವೇನೂ ಆಗುವುದಿಲ್ಲವಲ್ಲ!

  4. ವಿನೋದವಾಗಿ :

    ಭುಜವೆಟುಕಿಲ್ಲ ಮೇಣ್ ಬಿಗಿವ ಮೋಡಿಯ ಮಾತಲೆ ಹಸ್ತಪಾದವಂ
    ನಿಜಗಣಿತಜ್ಞ ತಾಂ ಬಗೆವ ಜೇಬಿಹ ಜಾಲದ ಜೀವಭಾಗವಂ
    ಅಜಶಿರಕಂತು ಟೊಪ್ಪರಮನಿಟ್ಟಿಹ ಟಿಪ್ಪರಮೊಡ್ದುತಾತನುಂ
    ಗಜಗುಣವಂತನುಂ ವಣಿಜ ವಾಮನನಿಂತು ತ್ರಿವಿಕ್ರಮಂ ಗಡಾ !!

    ಗಜ (= ಮೂರಡಿ) ಎತ್ತರದ “ವಾಮನ” ವ್ಯಾಪಾರಿ – ಅಜ (=ಜೀವಿಯ) ಗ್ರಾಹಕನನ್ನು ೧. ಮಾತಿನಿಂದ ಕೈಕಾಲು ಕಟ್ಟಿಹಾಕಿ ೨. ಎದೆಯ ಮೇಲಿನ ಜೇಬು ಬಗೆದು ೩. (ಟಿಪ್ಪರ=ಮೋಸದಿಂದ) ತಲೆಗೆ ಟೋಪಿ ಹಾಕಿ
    ಈ ಮೂರು ರೀತಿಯ ನಡೆಯಿಂದ “ತ್ರಿವಿಕ್ರಮ”ನಾಗುವ ಅಲ್ಲವೇ ?!!

    • ಅಮೋಘವಾದ ಪುರಾಣೇತರವಾದ ಕಲ್ಪನೆ!

      • ಧನ್ಯವಾದಗಳು ಪ್ರಸಾದ್ ಸರ್, “ಸಮಸ್ಯಾ ಪೂರಣ”ದಂತೆ ಮಾಡಿಬಿಟ್ಟಿದ್ದೇನೆ !
        ಎಲ್ಲರ ಪ್ರೌಢ ಪದ್ಯಗಳನ್ನು ಗಮನಿಸಿದರೆ – “ನಿಜಗುಣವಂತನಾ ವಟುಕ ವಾಮನನಲ್ತೆ ತ್ರಿವಿಕ್ರಮಂ ಗಡಾ” !!

        ನಿಜಗುಣಿಯ ಗುಣಿಸಿರೆನೆ । ಗಜಗುಣಿಯನೆಣಿಸಿರಲು
        ಮುಜುಗರದೆ ಮನವು ಮುದುಡಿಹುದು । ಮಹನೀಯ
        ಅಜಗಜಾಂತರವ ಮನ್ನಿಸಿರಿ ।।

        • ಅಂಶದಲ್ಲಿ ಸರ್ವಲಘುಗಣ (೫ ಮಾತ್ರೆಗಳು) ನಿಷಿದ್ಧ.

          • ಪ್ರಸಾದ್ ಸರ್, ಇದು “ಮಾತ್ರಾ ತ್ರಿಪದಿ”ಯಲ್ಲಿ ಬರೆಯುವ ಪ್ರಯತ್ನ.
            ೫+೫+೫+೫
            ೫+೩+೫+೫
            ೫+೩+೫
            (ಸರ್ವಜ್ಞ ವಚನಗಳ ಧಾಟಿಯಲ್ಲಿ) ಇಲ್ಲಿಯೂ ಸರ್ವಲಘುಗಣ ನಿಷಿದ್ಧವೇ? ತಿಳಿಯದು. ( ಅಂಶ ಛಂದಸ್ಸಿನಬಗ್ಗೆ ಹೆಚ್ಚು ತಿಳಿಯಬೇಕಿದೆ)

  5. ರವಿಬಿಂಬಂ ಮೊದಲಾಯ್ತು ಛತ್ರಮೆ ಬಳಿಕ್ಕಂ ದಲ್ ಶಿರೋರತ್ನಮುಂ
    ಶ್ರವಣಾಲಂಕೃತಿಯುಂ ಗಳಾಭರಣಮುಂ ಸೌವರ್ಣಕೇಯೂರಮುಂ
    ಛವಿಮತ್ಕಂಕಣಮುಂ ಕಟಿಸ್ಥಲದೊಳಿರ್ಪಾ ಘಂಟೆಯುಂ ನೂಪುರ-
    ಪ್ರವರಂ ಮೇಣ್ ಪದಪೀಠದಂತೆ ವಟುವೇ ಬ್ರಹ್ಮಾಂಡಮಂ ವ್ಯಾಪಿಸಲ್ ||

    (ಪೋತನಭಾಗವತದ “ರವಿಬಿಂಬಂಬುಪಮಿಂಪ” ಎಂಬ ಪದ್ಯದ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ.ಇದರಲ್ಲಿ ನನ್ನ ಶ್ರಮವೇನೂ ಇಲ್ಲ. ಏಕೆಂದರೆ ಪ್ರಾಸದಿಂದ ಮೊದಲಾಗಿ ಎಲ್ಲವೂ ಪೋತನಕವಿಯದೇ ಆಗಿವೆ. ಕನ್ನಡದ ವಿಭಕ್ತಿಗಳನ್ನು ಅಳವಡಿಸಿದ್ದಷ್ಟೇ ಆಗಿದೆ.
    ಕನ್ನಡದಲ್ಲಿ ಅವಧಾನಕಲೆ ಪುಸ್ತಕದಲ್ಲಿ ಗಣೇಶರು ಮಾಡಿದ ಒಂದು (ಬಹುಶಃ ಮಹಾಸ್ರಗ್ಧರೆಯ) ಅನುವಾದವೂ ಇದೆ. ಅವಲೋಕಿಸಬಹುದು. ಪದ್ಯಪಾನದ ಇನ್ನೊರ್ವ ಮಿತ್ರ ಮೌರ್ಯನೂ ಈ ಪದ್ಯದ ಅನುವಾದ ಮಾಡಿದ್ದಂತೆ ನೆನೆಪು.)

  6. ವಾಮನನೀತನೇಂ ಕಿರಿದು ಬೇಡಿದನೆಂದು ಬೆಸಂಗೊಳುತ್ತಿರ
    ಲ್ಕೀ ಮಹಿಯಂ ಸ್ವಯಂ ಪದದಿನಾಕ್ರಮಿಪಂ ಮಿಗಲೂರ್ಧ್ವಲೋಕಮಂ
    ವ್ಯೋಮಮುಮಂ ಕೊಳಲ್ಕೆ ಬೆಳೆಯುತ್ತಿರಲಾ ಕಿರಿದಾದ ಮೂರ್ತಿಯೊಳ್
    ಭ್ರಾಮಕಶಕ್ತಿಯಿರ್ಪುದದಗಣ್ಯಮೆನುತ್ತುರೆ ಕಂಡರೆಲ್ಲರುಂ ||
    ಮಾನವರೂಪದಿಂದೆ ನೆಗಳ್ದಂ ಬಲಿಯೊಳ್ ತಿರಿಯಲ್ಕೆ ಬಂದಪಂ
    ದಾನವನಿತ್ತುದಂ ಕೊಳುತುಮೆಂತು ತ್ರಿವಿಕ್ರಮರೂಪಮಾಂತನೋ
    ಮಾನಿಸಲಿಂತು ವರ್ಧಿಸಿತೆ ರಾಕ್ಷಸಕೀರ್ತಿಯ ಮೂರ್ತಿಯೆಂದು ಸ-
    ರ್ವಾನತಲೋಕಮೇ ಪೊಗಳುತಿರ್ದುದದೇನವನಗ್ಗಳಂ ಗಡಾ||
    ಕುಂದಿರೆ ಕಾಂತಿ ಸೂರ್ಯನದು ಕಾವಳಮೆಯ್ದುದು ಮತ್ತಮಾಕ್ಷಣಂ
    ಬಂದುದು ವಿಕ್ರಮಾಕೃತಿಯಿನೊಪ್ಪುವ ತೇಜಮೆ ಕೋಟಿಸೂರ್ಯರೆ-
    ಯ್ದಂದದೆ ವಿಶ್ವಮೇ ಅನಿಮಿಷತ್ವಮನೊಂದಿದ ಪಾಂಗಿದಾದುದೇ
    ಚಂದದೊಳಾತನಂ ದಿಟದೆ ಕಂಡವರೇ ಮಿಗೆ ಸೈಪನಾಂತವರ್ ||

  7. ರಾಕ್ಷಸನಾದೊಡಂ ಬಲಿಯು ಸಜ್ಜನನಲ್ತೆ ಸುಕರ್ಮದಿಂದಲೈ
    ರಕ್ಷಿಸಿ ಧಾತ್ರಿಯಂ ಗಡ ಭವಾಭವರೊಳ್(ಜನ-ದೇವ) ಸಮದಿಂದೆ ಪ್ರೀತನೈ|
    ಭಿಕ್ಷುಕರೂಪದೊಳ್ ವರವನೀಯುಗೆ ವಿಕ್ರಮನಾಗುತಚ್ಯುತಂ
    ಮೋಕ್ಷಮೆ ಮಾತ್ರಮಿನ್ನು (ಭೂಮಿ)ಭವ-ನಾಕ(ಆಕಾಶ)ಗಳಿಲ್ಲ ಬಲೀಂದ್ರಗೆಂದಿಹಂ||

  8. ಮೊದಲೇನೂ ಹೊಳೆಯಲಿಲ್ಲ. ಆದರೂ ಇಲ್ಲಿ ಎಲ್ಲರೂ ಬರೆದ ಒಳ್ಳೊಳ್ಳೆಯ ಪದ್ಯಗಳನ್ನು ನೋಡಿ ಬರೆಯುವ ಆಸೆಯಾಯಿತು 🙂

    ಪುಟುಪುಟು ಪಜ್ಜೆಯಿಕ್ಕಿ ಬರುತಿರ್ದವನಂ ನೆರೆ ನೋಡಿ ನಕ್ಕರು-
    ದ್ಧಟರಸುರರ್ ಬಲೀಂದ್ರನ ಮಹಾಮಖದೊಳ್ ಗಡನಾವ ಕಜ್ಜಮೀ
    ವಟುವಿಗೆನುತ್ತೆ ಬಾಯ್ಗಿಡುವೊಡಿಂತುಟು ಪಣ್ಗಳೊ ಗಂಟಲೊಳ್ ಮಗುಳ್
    ಗುಟುಕರಿಸಲ್ಕೆ ಪಾಲಿನಿತೊ ಆಟಕೆ ಮೇಣ್ ಪುಟಿಚೆಂಡೊ ಬೊಂಬೆಯೋ
    ಸುಟಿಯಿವನೆಯ್ದನೇತಕೊ ಎನಲ್, ತರಲಂ ಬೆಳೆಸುತ್ತುಮಿರ್ದ ವಾ-
    ಕ್ಚಟುಲಲತಾವಿತಾನದೊಳೆ ಕಟ್ಟಿದನಾ ದಿತಿಪುತ್ರನಂ, ಮಹ-
    ತ್ಕುಟಿಲವಿಚಾರಚಾರುಮತಿ ಶುಕ್ರನ ಕಣ್ಣೊಡೆದಾಗುತಿರ್ಕೆ ಪ-
    ಲ್ಲಟಮೆನೆ ರಕ್ಕಸರ್ಕಳ ಜಗಂ, ಬೆಳೆದಂ ಗಗನಾಂತಕಂ, ನಭ-
    ಸ್ತಟವಿರಿದಂ ಸಿತಚ್ಛವಿಯ ಛತ್ರದ ಚೂಣಿಯಿನತ್ತಲಿತ್ತಲಿಂ
    ಕುಟುಕಿನ ಜೀವಮಂಬಿಡಿದರಿಲ್ಗಳ ರಾಶಿ ಕರಂ ಬೆದರ್ದು ಬಾ-
    ನಟವಿಯೊಳಾಳ್ವ ಮಿಂಚ ಪುದುಗಳ್ಗೆಣೆಯೆನ್ನೆ, ದಿಶಾಂಗನಾಜನ-
    ಕ್ಕಟಕಟಿಸಲ್ಕುರಸ್ಸು, ಬಿರುಗಂಗಳಿನೀಕ್ಷಿಸುತಿರ್ಪ ನೇಸರೆ-
    ಕ್ಕಟೆಯೊಳಗಾಳೆ, ತಮ್ಮೆಡೆಯನೊಪ್ಪವಿಡಲ್ ಕಳಿಸಿರ್ದುಪೇಂದ್ರನೇ
    ಕುಟುಕುವನೆಮ್ಮ ನಾಕಮನೆನಲ್ಕನಿಮೇಷಚಯಂ, ಗ್ರಹಂಗಳು-
    ರ್ಬಟೆಯೊಳಗೆದ್ದು ಬಿದ್ದಿವನ ಕಾಲ್ಕೆಳಗಾಡುವ ಚೆಂಡಿನಂದದಿಂ
    ಪುಟಿಯುತಿರಲ್ ವಿರಿಂಚಿ ನಿಜಸೃಷ್ಟಿಯನೋರಣದಿಂದಿಡಲ್ಕದೆಂ-
    ತುಟೊ ಶ್ರಮದಿಂದೆ ಸುಯ್ದಿರೆ, ಹರಂ ಭಯದಿಂದುರೆ ಎದ್ದು ತನ್ನ ಮು-
    ಚ್ಚಟೆಯುಮೆಯಂ ಕರದ್ವಯದಿನೊಮ್ಮೆಗೆ ತಬ್ಬಿರಲುರ್ಬಿನಿಂ, ಮಹೋ-
    ತ್ಕಟಘಟನಕ್ಕಿದೇಂ ಪ್ರಕಟಮಾದುದೊ ಲೀಲೆಯೆನಲ್, ಪ್ರಪಂಚಸಂ-
    ಪುಟಮನೆ ತೀವುತೀರಡಿಗಳಿಂದಳೆದಂ ಕ್ರಮದಿಂ ತ್ರಿವಿಕ್ರಮಂ;
    ಘಟಿತಮಿದಾಯ್ತು ಸತ್ಕವಿ ಪದದ್ವಯದಿಂದೆ ಮಹಾರ್ಥಮಂ ವಚಃ-
    ಪಟುತೆಯಿನೊಲ್ದು ಸಾರ್ವ ತೆರನಾ ಅದಿತಿಪ್ರಭವಂಗೆ ವಂದಿಪೆಂ!

    • ಚೆನ್ನಾಗಿದೆ. “ಪಜ್ಜೆ” ಎಂಬುದು ಹೆಚ್ಚು ಸೂಕ್ತ. ಹಾಗೆಯೇ ಎರ್ದೆ-ಎರ್ದೆವಾಯ್ ಇಲ್ಲೆಲ್ಲ ಯಾವಾಗಲೂ ಶಿಥಿಲದ್ವಿತ್ವವನ್ನೇ ಗಣಿಸಬೇಕೆಂಬುದು ಕೇಶಿರಾಜಾದಿಗಳ ನಿಯಮ ಮತ್ತು ಪೂರ್ವಕವಿಗಳ ಮತ.

  9. ನಭದೊಳ್ ಚಂದನಮಾದುದೈ ಅರುಣನಿಂ ತೇದಿಟ್ಟ ಗಂಧಂ ಮಹಾ
    ಪ್ರಭೆಯಿಂ ಪೆರ್ಚಿದ ತಾರೆಗಳ್ ಮೆರೆದುವೈ ಕಾಲ್ಗೆಜ್ಜೆಯೋಲಿಂದ್ರನೇ|
    ಸಭೆಯೊಳ್ ತಾಂ ತವೆ ಮುರ್ಚಿದಂ ನಯನಮಂ ಪೊಣ್ಮಿರ್ಪುಗುರ್ಗಾಂತಿಯಿಂ
    ಶುಭಮಂ ಗಯ್ಗೆಮಗೀಗಲಿಂತಿನ ಲಸಚ್ಛ್ರೀವಾಮನಾಂಘಿ್ರದ್ವಯಂ||

    ಬೆಳೆದ ವಾಮನನ ಪಾದದ ಕುರಿತು : ಅದಕ್ಕೆ ಅರುಣಮಂಡಲದ ಕೆಂಪೇ ಚಂದನವಾಯಿತು,ಹೊಳೆವ ತಾರೆಗಳೇ ಕಾಲ್ಗೆಜ್ಜೆಗಳಾದವು , ಆ ಉಗುರುಗಳಿಂದ ಹೊರಬಂದ ಕಾಂತಿಗೆ ಸಭೆಯಲ್ಲಿ ಕುಳಿತ ಇಂದ್ರನೇ ಕಣ್ಮುಚ್ಚಿದ. ಇಂತಿರುವ ವಿಕ್ರಮನ ಪಾದಗಳು ನಮಗೆ ಶುಭವನ್ನುಂಟು ಮಾಡಲಿ.

    • ಆಹಾ ಚೆನ್ನಾಗಿದೆ 🙂

    • ಚೆನ್ನಾಗಿದೆ. ಉಗುರ್ಲೇಶ್ಯೆ ಎಂಬುದು ಹೇಗೆ?

      • ಧನ್ಯವಾದಗಳು. ಲೇಶ್ಯೆ=ಕಾಂತಿ=> ಉಗುರಿನ ಕಾಂತಿ .

        • ಲೇಶ್ಯೆ ಸಂಸ್ಕೃತವೇ? ಅರಿಸಮಾಸವಾಗುವುದು.

          • ಉಗುರ್ಗಾಂತಿ ಅಂತಲೇ ಬಳಸಬಹುದಲ್ಲ.

          • ಇಲ್ಲ . ಉಗುರ್ಗಾಂತಿಯೇ ಅರಿಯಾಗುತ್ತದೆ. ಕಾಂತಿ ಸಂಸ್ಕೃತವಲ್ಲವೇ? ‘ಲೇಶ್ಯ’ ಸಂಸ್ಕೃತ. ಲೇಶ್ಯೆ ಕನ್ನಡ.

          • ಕಕಾರವು ಗಗಾರವಾಗಿ ಅರಿಯು ತಪ್ಪಿದೆ ಎಂದು ನೀಲಕಂಠರ ಮತ.
            ’ಲೇಶ್ಯೆ’ ಕನ್ನಡಪದವಾದರೂ ಕೂಡ, ಉಗುರು+ಲೇಶ್ಯೆ=ಉಗುರ್ಲೇಶ್ಯೆ ಎಂದು ಸಂಧಿಯಾಗದು. ಅದನ್ನು ಉಗುರ್+ಲೇಶ್ಯೆ ಎಂದು ವ್ಯಾಖ್ಯಾನಿಸಿ ಸಂಧಿಯೆನಿಸಬೇಕಾಗುತ್ತದೆ.

            ಸಮಾಸವಾಗಿಸೋಣವೆಂದರೆ, ಉಗುರು-ಲೇಶ್ಯೆ ಎಂಬೆರಡೂ ಕನ್ನಡಪದಗಳೇ ಆದರೂ, ಸಂಧಿಸ್ಥಾನದಲ್ಲಿ ಅವು ಅರಿಗಳು.

            ಒಂದೊಮ್ಮೆ ಲೇಶ್ಯೆ+ಉಗುರು ಎಂದು ಅದಲುಬದಲಾಗಿಸಿದರೆ, ಸಂಧಿಸ್ಥಾನದಲ್ಲಿಯೂ ಎರಡೂ ಕನ್ನಡಪದವಾದ್ದರಿಂದ, ಲೇಶ್ಯೆಯುಗುರು ಎಂದು ಸಮಾಸ/ಸಂಧಿಯಾಗಿಸಬಹುದು.

          • ಕೇವಲ ಕೊನೆಯ ಅಕ್ಷರ ಎ ಕಾರವೋ ಇ ಕಾರವೋ ಆಗಿ ಸಮಾಸಕ್ಕೆ ಒಗ್ಗುವುದೋ ಗೊತ್ತಿಲ್ಲ. ಬಹುಶಃ ಆಗದು.

          • ಧನ್ಯವಾದಗಳು. ಮೂಲದಲ್ಲಿಯೇ ತಿದ್ದಿದ್ದೇನೆ.

  10. ಛಲದಿಂದಾಪರಿ ಕೊರ್ವುತೊರ್ಮೆ ಬಳೆದಾ ಭಕ್ತಾತ್ಮಗುಂ ಪಾಠಮಂ
    ಬಲದಿಂದೀವುದು ಕಷ್ಟಮಾಗೆ ಕಡೆಗುಂ ಬಾಲ್ಯಕ್ಕೆ ತಾಂ ಸಂದು ಮೇಣ್
    ನಲವಿಂ ಮೆಲ್ಲನೆ ನೈಜಕಾಯದಿನೆ ಹಾ! ಭೂವ್ಯೋಮಮಂ ಗೆಲ್ದಿರಲ್,
    ಚೆಲುವಂ ಚಿತ್ತದನೊಪ್ಪರೇಂ ಸಕಲರುಂ ಶ್ರೀಲಕ್ಷ್ಮಿಯೊಲ್ ವಿಷ್ಣುವಾ?

    (ಛಲದಿಂದ ಕೊಬ್ಬಿ ಬೆಳೆದ ಭಕ್ತನಿಗೂ ,ಬಲಾತ್ಕಾರದಿಂದ ತಿಳಿವನ್ನೀವುದು ಕಷ್ಟವಾಗಿ, ಹೀಗೇ ಬಾಲರೂಪದಲ್ಲಿ ಬಂದು ಪ್ರೀತಿಯಿಂದ ತನ್ನ ನೈಜಕಾಯವನ್ನೂ ತೋರಿದ ,ವಿಷ್ಣುವಿನ ಕೋಮಲ ಚಿತ್ತವು ಲಕ್ಷ್ಮಿಗೆ ಪ್ರಿಯವಾದಂತೇ ಯಾರಿಗೆ ತಾನೇ ಪ್ರಿಯವಾಗುವದಿಲ್ಲ?)

    • ಸಿರಿಹೃದಯ, ನಿಜಾಳ್ತಿ ಅರಿಗಳು. ಭೂಪಾರಿ ಎಂದರೆ?

    • ಬಾಲಕನಾಗಿ ಬಂದು ಎಲ್ಲರ ಪ್ರೀತಿ ಗಳಿಸಿದವನನ್ನು ಯಾರು ತಾನೇ ಮೆಚ್ಚುವುದಿಲ್ಲ ಎಂಬುದು ಚೆನ್ನಾಗಿದೆ. ಭಕ್ತಾತ್ಮಗಂ, ಕಡೆಗಂ ಎಂದು ಮಾಡಿದರೆ ಹೆಚ್ಚು ಸೂಕ್ತ.

  11. ….

    • ಇದೇನೋ ವಾಮನಾವತಾರದಲ್ಲಿದೆ. ತ್ರಿವಿಕ್ರಮಾವತಾರವನ್ನು ಯಾವಾಗ ತಾಳುವುದೋ ಎಂದು ಕುತುಕವಾಗುತ್ತಿದೆ.

  12. ಅತಿ ಸಣ್ಣ ಹೊಳಹು, ಲಕುಮೀ-
    ಪತಿ ವಾಮನ ಬೆಳೆದು ವಿಕ್ರಮನೆನಿಪ ತೆರದೊಳ್,
    ಮತಿಯೊಳಗೆ ಮಿಂಚಿನಂದದ
    ಗತಿಯೊಳು ಬೆಳೆಯುತಲಿ ಕಾವ್ಯವೆನಿಪುದು ಕೊನೆಯೊಳ್!

    ಲಕ್ಷ್ಮೀಪತಿಯಾದ ವಾಮನನು ತ್ರಿವಿಕ್ರಮನಾಗಿ ಬೆಳೆಯುವಂತೆ ಮತಿಯೊಳಗಿನ ಅತಿ ಸಣ್ಣ ಹೊಳಹೇ ಮಿಂಚಿನಗತಿಯಲ್ಲಿ ಬೆಳೆದು ಕಾವ್ಯವೆನಿಸುವುದು.

  13. ಉರಿವ ಬೇಸಗೆಯೊಳಗೆ ಸೊರಗಿದ
    ಝರಿಯು ವಾಮನ ರೂಪದಲಿ ಬಲು
    ಕಿರಿದು ಗಾತ್ರದೊಳಿಳಿಯುವುದು ಬಂಡೆಗಳ ನಡುವಿನಲಿ!
    ವರುಣ ವೈಭವದೊಡನೆ ಧರಣಿಯೊ-
    ಳೆರಗುತಲೆ ಉಕ್ಕೇರಿ ರೌದ್ರದಿ
    ಭರದಿ “ಬಲಿ” ಬಂಡೆಯನು ತುಳಿವುದು ವಿಕ್ರಮವ ತೋರಿ!

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)