Jul 202014
 

ಕಣಮಲ್ತೆ ಸಾಗರನ ಸನ್ನಿಧಾನಂ

  85 Responses to “ಪದ್ಯಸಪ್ತಾಹ ೧೧೮: ಸಮಸ್ಯಾಪೂರಣ”

  1. ಹೊಣೆಯೆನ್ನದೀ ಲೋಗರನು ಕಾವುದೆಂದಾ ಕ-
    ರುಣಸಾಗರವು ಕಾಲಕಾಲಕ್ಕೆ ತಾಂ|
    ಉಣಿಸವರಿಗೆಂದು ಸೂರ್ಯಂಗೆ ನೀಡಿರುವಂಬು-
    ಕಣಮಲ್ತೆ ಸಾಗರನ ಸನ್ನಿಧಾನಂ||

  2. ಎಣೆಯಿಲ್ಲ ವಿಸ್ತಾರವರಬಿಸಾಗರಕೆ ಕೇಳ್ (Arabian Sea)
    ಗಣಿಸೆನಿತು ದೇಶಂಗಳದರ ತಟದೊಳ್|
    ಎಣಿಸಲಾ ಆಫ್ರಿಕಾ ಖಂಡದಿಂ ವರೆಗೆ ಕೂಂ-
    ಕಣಮಲ್ತೆ ಸಾಗರನ ಸನ್ನಿಧಾನಂ||

  3. ಇಣುಕಿ ನೋಡಲು ಸಾಗರದ ತಳದೊಳೆಲ್ಲೆಲ್ಲು
    ಬಣಮಲ್ತೆ ಜಲಜೀವರಾಜಿಯದಕೆ|
    ನುಣುಪುಪಾಚಿಗ್ರಾಸವಿಹುದಮಿತವದಕೆ ಚಿ-
    ಕ್ಕಣಮಲ್ತೆ ಸಾಗರನ ಸನ್ನಿಧಾನಂ|| (ಚಿಕ್ಕಣ=slippery)

  4. ಕುಣಿವಲೆಗಳಾಕ್ರಮಕೆ ಸಿಕ್ಕು ನುಣುಪಾಗಿ ಮೇಣ್
    ಮಣಭಾರದಶ್ಮಗಳು ಕಿರಿದಾದವೇಂ|
    ಮಿಣಮಿಣನೆ ಪೊಳೆವ ಕೋಟ್ಯಂತರದ ರಸದೃಷ- (ರಸ=gold. ದೃಷತ್ಕಣ=pebble)
    ತ್ಕಣಮಲ್ತೆ ಸಾಗರನ ಸನ್ನಿಧಾನಂ||

    • ಎಲ್ಲ ಪೂರಣಗಳೂ ಚೆಲುವಾಗಿವೆ. ಕೀಲಕಪದಗಳಿಗಾಗಿ ಆನ್ ಲೈನ್ ಡಿಕ್ಷನರಿ ಚೆನ್ನಾಗಿ ಬಳಕೆಗೆ ಬಂದಿದೆ:-)

  5. ಕುಣಿಪ ಶಿವನೇ ಬಡುಗಣದ ಬೆಟ್ಟಮೆಟ್ಟೆ ತೆಂ-
    ಕಣಮಲ್ತೆ ಸಾಗರನ ಸನ್ನಿಧಾನಂ
    ಅಣುವನಾಣ್ಮಂ ದಾಂಟಿದನ್ನೆಗಂ ಕ್ಷಿತಿವೆತ್ತ
    ಕಣಕಣಂಗಳ್ ಸಂಸ್ಕೃತಿಯ ಪಾಡುಗುಂ

    ಹಿಮಾಲಯದಿಂದ ಹಿಂದೂಮಹಾಸಾಗರದವರೆಗೆ ಪ್ರತಿ ಕಣಕಣವು (ಶಿವ, ರಾಮರ ಆದರ್ಶದ) ಸಂಸ್ಕೃತಿಯನ್ನು ಹಾಡುವುದು

  6. ತೃಣಶೈಲಜಡಚೇತನಂಗಳೊಂದೆಬುವರ್
    ಗಣಿಪರಧ್ಯಾತ್ಮಮಂ ಸೂಜಿಮೊನೆಯೊಳ್
    ಎಣೆಯಿರ್ಪುದೇಂ ದ್ವೈತವಾದಿಗಳ್ಗೆ ಪ್ರತ-
    ರ್ಕಣಮಲ್ತೆ ಸಾಗರನ ಸನ್ನಿಧಾನಂ

    ಪ್ರತರ್ಕಣ – reasoning

    ತೃಣಶೈಲಜಡಚೇತನಂಗಳೊಂದೆಬುವರ್ – ಅದ್ವೈತಿಗಳು

    ಅದ್ವೈತಿಗಳಿಗೆ ಅಧ್ಯಾತ್ಮವು ಸೂಜಿಮೊನೆಯಷ್ಟೆ (ನಿರ್ದಿಷ್ಟವಾದದ್ದು), ದ್ವೈತಿಗಳಿಗೆ (ನಾಮ ರೂಪಭೇದಾದಿಗಳ) ತರ್ಕವು ಸಾಗರದ ಸನ್ನಿಧಾನದಂತೆ (ವಿಸ್ತಾರವದದ್ದು)

  7. ಉಣುವುದುಡುವೆಂಬೆರೆಡ ಸಂಚಯದ ಜೋಗಿಗಂ
    ಮಣಿದಪೆಂ ಮುಕ್ತಚೇತನದಧಿಪಗಂ
    ಗುಣಸತ್ತ್ವಮರಸುತ್ತೆ ಕಾಣಲ್ಕವಂ ರಜ:-
    ಕಣಮಲ್ತೆ ಸಾಗರನ ಸನ್ನಿಧಾನಂ

    ಇಂದಿನ ಊಟ/ಬಟ್ಟೆಯನ್ನಷ್ಟೆ ಸಂಚಯ ಮಾಡುವ ಜೀವನ್ಮುಕ್ತನಾದ ಯೋಗಿಗೆ ನಮಿಸುತ್ತೇನೆ, ಸಾತ್ತ್ವಿಕಗುಣವನ್ನಷ್ಟೇ ಕಾಣವ ಅವನಿಗೆ (ಸಂಪತ್ತಿನ ಆಕರವಾದ) ಸಾಗರನ ಸನ್ನಿಧಾನ(ವೂ ಕೂಡ) ಧೂಳಿನ ಸಮವಲ್ಲವೇ?

    ರಜ:ಕಣ – dust

  8. ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ
    ಚಣಮಿರ್ಪುದೆಮಗೆ ಮನ್ವಂತರಂಗಳ್
    ಮಣಿದಪೆಂ ಗಡ ವಿರಾಟ್-ಪುರುಷಂಗೆ ಕಾಲ್ವೆರಳ
    ಕಣಮಲ್ತೆ ಸಾಗರನ ಸನ್ನಿಧಾನಂ

    ಮೊಣಕೈಗಳಿಂದೆ ಪಾಲ್ವಟ್ಟೆಯಂ ಪೇಳ್ಗುಮಾ – ಕ್ಷೀರಪಥವನ್ನು (milkyway) ತನ್ನ ಮೊಣಕೈಗಳಿಂದ (ಅಳೆದು) ಹೇಳುವನು, ಅವನ ಕ್ಷಣವು ನಮಗೆ ಮನ್ವಂತರವು, ಅವನ ಕಾಲ ಬೆರಳ ಧೂಳಿಯು ಸಾಗರನ ಸನ್ನಿಧಾನವು, ಅಂತ ವಿರಾಟ್ ಪುರುಷನಿಗೆ ನಮಿಸುತ್ತೇನೆ

    • ಭವ್ಯವಾದ ಪರಿಹಾರ

    • ನನ್ನ ಸವರಣೆಯನ್ನು ಪರಿಶಿಲಿಸಿ:

      ———— ಪಾಲ್ವಟ್ಟೆಯನ್ನಳೆವನೈ
      ಚಣಮಿರ್ಪುದವಗೆಮ್ಮ ಮನ್ವಂತರಂ
      ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
      ——

      • ಸವರಣೆ ಯುಕ್ತವಾಗಿದೆ, ಧನ್ಯವಾದಗಳು ಪ್ರಸಾದು 🙂

        ಮೊಣಕೈಗಳಿಂದೆ ಪಾಲ್ವಟ್ಟೆಯನ್ನಳೆವನೈ
        ಚಣಮಿರ್ಪುದವಗೆಮ್ಮ ಮನ್ವಂತರಂ
        ಮಣಿದಿರ್ಪೆನಾ ವಿರಾಟ್-ಪುರುಷಗಾತನ ಪಾದ-
        ಕಣಮಲ್ತೆ ಸಾಗರನ ಸನ್ನಿಧಾನಂ

  9. ಋಷ್ಯಾಶ್ರಮಗಳಲ್ಲಿ ಜಿಂಕೆಗೆ ವಿಶೇಷ ಮಾನ್ಯತೆ. ಅವು ಆಶ್ರಮದ ಒಳಾಂಗಣಗಳಲ್ಲೆಲ್ಲ ಓಡಾಡಿಕೊಂಡಿರುತ್ತವೆ.

    ಗಣಿಪುದೊಳ್ಳಿತು ಸೃಷ್ಟಿಯೊಳಗೆಲ್ಲ ಸಮರೆಂದು
    ಗಿಣಿ-ಸಿಂಹ-ಪಾವಾನೆ-ಮನುಜರೆಂದುಂ| (As it happens in Rishyashramas)
    ನುಣುಪುಬಗೆಯಿಂ ಹೃದ್ಯ! ತಾಪಸಾಶ್ರಮಗಳಂ-
    ಕಣಮಲ್ತೆ ಸಾಗರನ (ಜಿಂಕೆಯ) ಸನ್ನಿಧಾನಂ||

    ಕನ್ನಡದಲ್ಲಿ ’ಜಿಂಕೆ’ ನಪುಂಸಕಲಿಂಗವೇ. ಇಲ್ಲಿ ಪುಲ್ಲಿಂಗವಾಗಿ ಗಣಿಸಿದ್ದೇನೆ. ಮನ್ನಿಸಿ.

    • ನುಣುಪುಭಾವ ಎಂಬುದು ಅರಿಸಮಾಸ; ಸಾಗರ ಎಂದರೆ ಜಿಂಕೆಯೇ?

    • ಅರಿಸಮಾಸವನ್ನು ಸರಿಪಡಿಸಿದ್ದೇನೆ.
      ಮೊದಲ ೪ ಪದ್ಯಗಳಲ್ಲಿ ನನ್ನ ಕೈಹಿಡಿದ ನಿಘಂಟು ಇಲ್ಲಿ ನನ್ನ ಕೈಬಿಟ್ಟಿತೆ! http://www.spokensanskrit.de ಇಲ್ಲಿ ಹಾಗೆಂದು ಅರ್ಥೈಸಿದ್ದಾರೆ.

      • ಪ್ರಸಾದು – ಅದು ಒಂದು ಬಗೆಯ ಜಿಂಕೆಯ ಬದಲಿಗೆ, ಒಂದು ಜಿಂಕೆಯಾಗಿರಬಹುದು 🙂

  10. ಸೋಮ ಪ್ರಸಾದರ ಈ ಭಾರೀ ಪದ್ಯಗಳ ಮಳೆಯಲ್ಲಿ ನನ್ನದೊಂದು ಪನಿ

    ಗಣಿಕೆಗೂ ಮೀರಿರ್ದ ಜಗದವಿಸ್ತಾರವನು
    ಪಣದಿಂದ ಮಾನವನಳೆವ ಮೂಢನು|
    ಚಣದೆ ಮೂರ್ಲೇಕಮನ್ನಾಡಿಸುವ ದೇವನಿಗೆ
    ಕಣಮಲ್ತೆ ಸಾಗರನ ಸನ್ನಿಧಾನಂ|

    • ಒಳ್ಳೆಯ ಪರಿಹಾರ.”ಮೂರ್ಲೋಕವನ್ನಾಡಿಸುವ…’ ಎಂಬುದಕ್ಕಿಂತ ಮೂಜಗಮನಾಡಿಸುತಿರ್ಪ ಎನ್ನುವ ಸವರಣೆ ಯುಕ್ತ.

    • (ಇ)ದೇನೆಂಬೆ ಚೀದಿ ನೀ, ಜಗದವಿಸ್ತಾರವದು
      ಪೀನಮೇಂ ಮೀರ್ವವೋಲ್ ಗಣಿಕೆಯರನುಂ!
      ಐನಾತಿ ಕಸುಬದೈ ದೇಶ-ಕಾಲಾತೀತ
      ಮಾನಪ್ರಚುರೆ ಸಲ್ವಳೆಲ್ಲೆಲ್ಲಿಯುಂ!! 😉
      —–
      ಸೋಮನೀವರೆಗೆ ಕಬ್ಬವ ನಾಲ್ಕ ರಚಿಸಿಹನ್
      ನಾಮಾಂಕ ಹಾದಿರಂಪನುಮೈದನುಂ|
      ಪೂಮಾಲೆಯಂ ಸಲ್ಲಿಸಿಹೆ ಕಕ್ಕುಲತೆಯಿಂದೆ
      ಜಾಮಿಯಂಗಿದು ನ್ಯಾಯಮೇನು ಚೀದಿ?|
      (ಜಾಮಿ = ಅಣ್ಣ/ ತಮ್ಮ/ ಕಸಿನ್)

  11. ಪಣತೆಯೊಲ್ ಬೆಳಗುತಿರಲಂಧಕಾರವನು ಸ
    ದ್ಗುಣಿಗಳೊಪ್ಪದ ಸಂಗಮಿಂದು ಬಾಳೊಳ್
    ಚಣಗಾಲಮೆಂಬೆಣಿಕೆಯೇಂ?ಸಖಿಯೆ,ಕಾವ ಕಂ-
    ಕಣಮಲ್ತೆ?ಸಾಗರನ ಸನ್ನಿಧಾನಂ!
    (ದೊಡ್ಡವರ ಸಾಮಿಪ್ಯವು ಬದುಕಿನಲ್ಲಿ ಚಣಕಾಲ ದೊರೆತರೂ,ಅದು ಕಾಯುವ ಕಂಕಣ)
    ಸಾಗರ=ದೊಡ್ಡವ,ಗುಣಸಾಗರ)

    • ತುಂಬ ಸೊಗಸಾದ ಪೂರಣ. ” ಅಂಧಕಾರವನು…” ಎಂದು ತಿದ್ದಿದಲ್ಲಿ ನಡುಗನ್ನಡಕ್ಕೆ ಹೆಚ್ಚು ಸಹಜವಾಗುವುದು.

  12. ಇಣುಕಿತೇಂ ತನಿವೆಳಕು ದಿನನಿತ್ಯ ಬದುಕಿನೊಳ್
    ಕುಣಿಕೆ ಮೀಂಗಳಿರದಿರೆ ಬೆಸ್ತಕುಲದಾ?
    ತಣಿಸುತಲೆ ಬಯಕೆಯಂ,ಸಂತೈಸೆ,ಜೀವನದ
    ಕಣಮಲ್ತೆ?ಸಾಗರನ ಸನ್ನಿಧಾನಂ?
    ಕಣ=ಕಿಡಿ

  13. ಗುಣವಂತರಿಂಗಾವ ಕಾಯಕಮಸಾಧ್ಯಮಯ್
    ಗಣಿಸಲ್ಕೆ ಸಿಗದೊಂದುಮೀ ಧರಾತಳದೊಳ್ |
    ಚಣದೊಳ್ ಸಮಂತು ಪೀರಿದಗಸ್ತ್ಯಗಂ ನೀರ
    ಕಣಮಾಯ್ತು ಸಾಗರನ ಸನ್ನಿಧಾನಂ ||

  14. ಒಣಭೂಮಿಯೊಳ್ವಾಸಿಪರ್ಗೆ ತೋಷವಹುದುಂ
    ಪಣಸಿಕ್ಕವೊಲ್ ರಾಶಿಯಂಬುವಿಂದಂ
    ತೊಣೆಯೊಳಿರ್ಪಮರಿಗೇಂ ಬೆಲೆಯಿದರ? ಮತ್ತವಗೆ
    ಕಣಮಲ್ತೆ ಸಾಗರನ ಸನ್ನಿಧಾನಂ?
    ತೊಣೆ=ಒಡನಾಟ
    (ಸಮುದ್ರದ ನೆರೆಯಲ್ಲಿರುವವರಿಗೆ ಅದರ ಸಾಮಿಪ್ಯವು ತೀರಾ ಸಣ್ಣ ವಿಷಯ)

    • What a punch! Permit me to rephrase it:
      ಒಣಭೂಮಿಯೊಳು ವಾಸಿಪರ್ಗಂಬುರಾಶಿ ತಾಂ
      ಪಣಸಿಕ್ಕವೊಲ್ ತೋಷ ನೀಡುಗೆಂದುಂ|
      ತೊಣೆಯಂಗೆ ವಾರ್ತ್ತವದರಸ್ತಿತ್ವವವನಿಂಗೆ (ವಾರ್ತ್ತ=ordinary)
      ಕಣಮಲ್ತೆ ಸಾಗರನ ಸನ್ನಿಧಾನಂ||

  15. ರಣರಣಕದಿಂದಿಕ್ಕೆಲದೆ ದೇವದಾನವರ
    ಗಣಮಂಬುನಿಧಿಮಥನಲೀಲೆಗಂ ತೊಡಗಲ್ |
    ಗುಣಮಾದನಾ ಶೇಷ ಗಿರಿಯೆ ಕಡೆಗೋಲಾಯ್ತು
    ಕಣಮಾಯ್ತು ಸಾಗರನ ಸನ್ನಿಧಾನಂ ||

    ಕಣ = ಕ್ರೀಡಾಂಗಣ.
    ರಣರಣಕ = ಅತ್ಯುತ್ಸಾಹ.

    • ಛೆ! ನಾನು ರೈತ. ’ಕಣ’ ಎಂಬುದನ್ನು ಅಂಗಣ ಎಂಬ ಅರ್ಥದಲ್ಲಿ ಸದಾ ಕೇಳಿಬಲ್ಲವನು. ಆದರೂ ಇಲ್ಲಿ ಹಾಗೆ ಬಳಸಲು ಹೊಳೆಯಲಿಲ್ಲ. ಛೆ!

  16. ಪ್ರಣಮಿಸುತೆ ರಾಮಗಂ ಕಡುಪಿಂದೆ ಮುನ್ನೀರ್ಗೆ
    ಗುಣಿಸಲ್ಕೆ ಸೇತುವಂ ಸೇರ್ದ ಮಂಗಗಳಾ |
    ಗಣದ ಲೋಕಕಮಕ್ಕಜಮನೀವ ಸಾಸಕಂ-
    ಕಣಮಾಯ್ತು ಸಾಗರನ ಸನ್ನಿಧಾನಂ |
    ಸಾಸಕೆ ( ಸಾಹಸಕ್ಕೆ ) ಅಂಕಣ ( ಸ್ಥಳ )

    • ಪೆಜತ್ತಾಯರೆ – ಎಲ್ಲ ಪೂರಣಗಳೂ ಇಷ್ಟವಾಯಿತು. ಸಾಸಕಂಕಣಮಾಯ್ತು ಎಂಬ ಪ್ರಯೋಗ ಬಹಳ ಚೆನ್ನಾಗಿದೆ.

    • ಹೌದು ರಾಮ್. ಇವರ ಎಲ್ಲ ಪೂರಣಗಳೂ ಪ್ರಶಸ್ತವಾಗಿವೆ.

    • Ramachandra-PrasAdarige DhanyavAdagaLu 🙂

  17. ತೃಣಮಾಗೆ ಜೀವನವು ಗ್ರಹಚಾರದಿಂ ಬಿದಿಯು
    ಹಣಿದಿರ್ದು ಕಾಡಿರ್ದುದೈ ಪಾಪಿಯಂ
    ಗಣಿಸುವನ್ನೆಗು ಬರಿಯ ಜಲಮಾದ ದುರ್ದಶೆಗೆ
    ಕಣಮಲ್ತೆ ಸಾಗರನ ಸನ್ನಿಧಾನಂ

    [ಸಾಗರದಲ್ಲಿ ಕಳೆದು ಹೋದವನ ದುರ್ದಶೆಯ ಬಗೆಗೆ]

  18. ಭಣಭಣಿಪ ರತ್ನಂಗಳಾಕರಂ ಪೊರೆಯುವಂ
    ಗುಣಗಾತ್ರದಾ ತಿಮಿಂಗಳನಿಕರಮಂ
    ಅಣುವ ಪೋಲುವ ಜೀವರಾಶಿಗಳಿಗಿರ್ಕೆ ಕಣ-
    ಕಣಮಲ್ತೆ ಸಾಗರನ ಸನ್ನಿಧಾನಂ

  19. ಪಣಮಿರ್ದೊಡೇಂ ಗೆಯ್ಮೆಯೌದ್ಯೋಗಮುತ್ಕರಿಸು-
    ತಣಿಗೊಳಿಸಲಾ ಬೃಹಜ್ಜಲಯಾನಮಂ
    ಚಣದ ವಿಧಿಯಾಟಕ್ಕೆ ವಿಪ್ಲವಮೆ ದಿಟವು ಕಣ-
    ಕಣಮಲ್ತೆ ಸಾಗರನ ಸನ್ನಿಧಾನಂ

    ಟೈಟಾನಿಕ್ ಹಡಗು ಮುಳುಗಿದಬಗ್ಗೆ ಪೂರಣ

  20. ಗುಣವಂತ ರಾಮನೊಡೆ ಸಾನ್ನಿಧ್ಯ ಬೇಡಲ್ ಕ-
    ರುಣಿಸಿರ್ದನೈ ಬಿಚ್ಚುಹೃದಯದಿಂದೆ
    ಋಣದಿ ಗುಂಡಿಗೆಯಲ್ಲೆ ಬಂಧಿಸಿದ ಹನುಮಂಗೆ
    ಕಣಮಲ್ತೆ ಸಾಗರನ ಸನ್ನಿಧಾನ

    [ಸಾಗರ = ಸಗರ ವಂಶಜ = ರಾಮ]
    [ಹನುಮ ರಾಮನ ಸಾನಿಧ್ಯವನ್ನು ಮಾತ್ರ ಕೇಳಿದ. ಅದನ್ನು ರಾಮ ಬಿಚ್ಚುಹೃದಯದಿಂದ ಕರುಣಿಸಿದ. ಆದರೆ, ತಾನು ಗಳಿಸಿದ ಋಣದಿಂದ ರಾಮನನ್ನೇ ಗುಂಡಿಗೆಯಲ್ಲಿ ಬಂಧಿಸಿದ ಹನುಮನಿಗೆ ಸಾಗರನ (ರಾಮನ) ಸನ್ನಿಧಾನ ಕಣಮಾತ್ರವಲ್ತೆ?]

    • ಅದು ’ಸಾನ್ನಿಧ್ಯ’ ಎಂದಾಗಬೇಕು.

      • ಸರಿಪಡಿಸಿದ್ದೇನೆ. ಧನ್ಯವಾದ.

        • ಇದೀಗ ಸರಿಯಾಯಿತು. ಇನ್ನು ಟೈಪೊ ಸರಿಪಡಿಸಿಧ 😉 ರಾಯಿತು ಅಷ್ಟೆ!

    • ಗುಣವಂತ ಎಂಬುದು ಸಾಧುರೂಪ. ಇದರಂತೆಯೇ ಧನವಂತ, ಬಲವಂತ, ಯಶೋವಂತ ಇತ್ಯಾದಿ. ಅಕಾರಾಂತೇತರವಾದ ಪದಗಳು ಮಾತ್ರ ಮತ್ವವನ್ನು ಹೊಂದುತ್ತವೆ. ಉದಾ: ಶ್ರೀಮಂತ, ಧೀಮಂತ ಇತ್ಯಾದಿ. ಆದರೆ ಕನ್ನಡದಲ್ಲಿ ಎಷ್ಟೋ ಬಾರಿ ಇವೂ ವತ್ವವನ್ನೇ ತಳೆಯುತ್ತವೆ. ಉದಾ: ಸಿರಿವಂತ, ಮತಿವಂತ, ನೀತಿವಂತ ಇತ್ಯಾದಿ.

  21. ಪೆಜತ್ತಾಯರ ಪರಿಹಾರಗಳು ನಿಜಕ್ಕೂ ತುಂಬ ಸೊಗಸಾಗಿವೆ. ಅಂತೆಯೇ ಸೋಮ, ಪ್ರಸಾದು, ಕಾಂಚನಾ ಮುಂತಾದವರ ಅನರ್ಗಳಪದ್ಯಪ್ರವಾಹವೂ ಇತ್ತೀಚೆಗೆ ಕುದುರಿಕೊಂಡ ಮುಂಗಾರು ಮಳೆಯನ್ನು ನೆನಪಿಸಿವೆ. ರಾಮ್ ಸಹ ಬಹುದಿನಗಳ ಬಳಿಕ ಪದ್ಯಪಾನಕ್ಕಾಗಿ ಚಷಕವನ್ನು(goblet) ಚಾಚಿರುವುದು ಮುದಾವಹ:-)
    ಇದೀಗ ನನ್ನದೂ ಒಂದು ಪರಿಹಾರ; ಇದಕ್ಕೆ ನಿಮ್ಮೆಲ್ಲರದೇ ಪ್ರೋತ್ಸಾಹ:

    ಗಣಿಸಲಿನ್ನೂ ಸೋಮವಾರಮಿಂದಾಗಳೇ
    ಗಣನೆಗೆಟುಕದ ಪದ್ಯಪಾನದಾನ !
    ಗುಣಗಣ್ಯಕಾವ್ಯಾಮೃತಾಬ್ಧಿಯೆದುರೆಂದಿಗಂ
    ಕಣಮಲ್ತೆ ಸಾಗರದ ಸಂನಿಧಾನ ||

    • ಪ್ರೋತ್ಸಾಹ ದೊರೆತ ನೆಪವೊಡ್ಡಿ, ಪದ್ಯಪಾನಿಗಳಿಗೆ ಪ್ರೋತ್ಸಾಹಸಾಗರವನ್ನೇ ಕರುಣಿಸಿದ ಬಗೆ..ಚೆನ್ನಾಗಿದೆ.

    • DhanyavAdagaLu sir 🙂 meccuge sUsuva padyavannE pUraNavannAgisida rIti tumbA iShTavAyitu 🙂

  22. ಗಣಿಸುವರೆ ಗಾತ್ರಗಳ ಹಿರಿಕಿರಿಯ ಭೇದ ನಿ –
    ರ್ಗುಣಿಗಳ್ಗೆ ಸಮವೆಲ್ಲವೀ ವಿಶ್ವದೊಳ್
    ಅಣುಮೇಣು ಬ್ರಹ್ಮಾಂಡದಂತರವ ಕಾಣದಗೆ
    ಕಣಮಲ್ತೆ ಸಾಗರನ ಸನ್ನಿಧಾನ

  23. ಪಣತೊಟ್ಟು ಬಿಜ್ಜೆಯಂ ಕಲಿಯುತ್ತುಮನುದಿನಂ,
    ತೃಣಮೆಂದು ತೊರೆಯುತ್ತೆ ಭೋಗಂಗಳಂ,|
    ಮಣಿದೆಂಬೆನೀ ಜ್ಞಾನಶರಧಿಯಿದಿರೊಳ್ ಸದಾ,
    ಕಣಮಲ್ತೆ ಸಾಗರನ ಸನ್ನಿಧಾನಂ ||

  24. ಮಂಜುಭಾಷಿಣಿವೃತ್ತಕ್ಕೆ ಅಳವಡಿಸಿಕೊಂಡಿದ್ದೇನೆ:

    ಸೆಣಸುತ್ತುಮಾಕ್ರಮಿಪರನ್ನು ಕಾವೆವೌ
    ಹಣೆಯಿಟ್ಟು ವಂದಿಪೆವು ಭಾರತೀಕ್ಷಿತೀ|
    ಭಣಿತಂ ಹಿಮಾಲಯವದುತ್ತರಕ್ಕೆ ತೆಂ-
    ಕಣಮಲ್ತೆ ಸಾಗರನ ಸನ್ನಿಧಾನ ತಾಂ|

    ‘ಭಾರತೀಕ್ಷಿತೀ’ ಸರಿಯೆ?

    • ಆಹಾ! ತುಂಬ ರಚನಾತ್ಮಕವಾದ ಅಳವಡಿಕೆ. ಸಮಸ್ಯಾಪಾದದ ರೂಪಣವೂ ಪರಿಹಾರವೂ ಚೆನ್ನಾಗಿವೆ. ಭಾರತೀಕ್ಷಿತೀ ಎಂಬ ಸಂಬೋಧನರೂಪವೂ ಸಾಧು. ಸಮಸ್ಯಾಂತದಲ್ಲಿ ’ಸಂನಿಧಾನಮಯ್’ ಎಂದೋ ’ಸಂನಿಧಾನಮೌ’ ಎಂದೋ ಸರಿಸಿಕೊಂಡರೆ ಹಳಗನ್ನಡದ ಚೆಲುವು ಎದ್ದು ತೋರೀತು.

    • ನಿಮ್ಮ ಈ ಮಂಜುಭಾಷಿಣೀಸಮಸ್ಯಾಪಾದವು ವೃತ್ತರಚನಾಪಕ್ಷಪಾತದ ನನ್ನನ್ನು ಸಹಜವಾಗಿಯೇ ಪೂರಣಕ್ಕೆ ತೊಡಗಿಸಿದೆ:

      ಗುಣರಾಗಿಯಪ್ಪ ಸಖನೊಲ್ಮೆ ಸಂದಿದರಲ್
      ಋಣಮುಕ್ತಭಾವಮೆರ್ದೆಯಲ್ಲಿ ಪೊಂಗಿರಲ್ |
      ಘೃಣಿಯಸ್ತಮಾನದೆ ಕೃತಾರ್ಥರಮ್ಯಚಿ-
      ಕ್ಕಣಮಲ್ತೆ ಸಾಗರನ ಸಂನಿಧಾನಮೇ ||

      (ಒಳ್ಳೆಯ ಜೀವನಸಂಗಾತಿ ದಕ್ಕಿರುವಾಗ ಹಾಗೂ ಯಾವುದೇ ಹೊಣೆ-ಋಣಗಳಿಲ್ಲದ
      ಬಾಳು ಸಿದ್ಧಿಸಿರುವಾಗ ಸೂರ್ಯಾಸ್ತದ ಕಾಲದಲ್ಲಿ ಕಾಣಸಿಗುವ ಸಮುದ್ರ ತುಂಬ ಸುಂದರ ಎಂದು ತಾತ್ಪರ್ಯ)

      • ಹೊಣೆ-ಋಣಗಳಿರದ ದಾಂಪತ್ಯದಾಯತನಕ್ಕ-
        ಮಣಿಗೊಳ್ಳುತಮೆರಿಕೆಗೆ ಪೊರಟೆಯೀಗಳ್|
        ಘೃಣಿಯಸ್ತವನ್ನುಮಟ್ಲಾಂಟಿಕೊಳೊ ಪೆಸಿಫಿಕೊಳೊ
        ಗೆಣೆಯ/ಗಣಿಯೆ ನೋಡುವೆ ಯಾರ ಸಾಹಿತ್ಯದೊಳ್?! 😉

    • ’ಕಣ’ವಿಲಕ್ಷಣ ದಕ್ಷಿಣಾಂಕುರಾರ್ಪಣ ಸೊಗಂ !

  25. ತಣಿಪ ತೆರೆನೊರೆ ಮೊರೆಯೆ, ಮರೆಯ ಮಂಥನಕೆ ಕಾ-
    ರಣಮಲ್ತೆ ಸಾಗರನ ಸಂವಿಧಾನಂ ।
    ಚಣಚಣವು ಲವ-ಲವಣ- ಲಾವಣ್ಯ-ಲಾಸ್ಯ ದಂ-
    ಕಣಮಲ್ತೆ ಸಾಗರನ ಸನ್ನಿಧಾನಂ ।।

    • ಬೆಸಪಾದಗಳಲ್ಲಿ ಲಘುಬಾಹುಳ್ಯವಿದ್ದರೂ ಶ್ರವಣಕ್ಲೇಶವಿಲ್ಲ. ಗಣೇಶರು ಹೇಳಿರುವ ‘ಪದಪದ್ಧತಿ’ ಇದೇ ಇರಬೇಕು. ಪದ್ಯ ಚೆನ್ನಾಗಿದೆ. ನಿಮ್ಮ ಛಾಪು ಇದೆ.

    • ಬಣದೊಳುಟ್ಟಂಕಣಿಪ ಚೌಪದೋತ್ಕಣದ ಕಂ
      ಕಣಮತರ್ಕಣಮೆ ಪೂರಣರಣದೊಳೇಂ

    • “ಪ್ರೇರಣದ ಒಕ್ಕಣೆಯೆ ಪೂರಣಕೆ ಕಾರಣವು” – ಎಲ್ಲರಿಗೂ ಧನ್ಯವಾದಗಳು.

  26. ಒಳ್ಳೆಯ ಪದಪದ್ಧತಿಯೊಡವರಿದ ಪೂರಣ.

  27. ಅಣುಗಳೊಂದುತ್ತೆ ನವನವಸೃಷ್ಟಿಯಾಗೆ,ಕಾ-
    ರಣಮಿರಲ್ ಸೂಕ್ಷ್ಮಮೇ ಸ್ಥೂಲಕೆಂದುಂ,|
    ಋಣದಿಂದೆ ಶರಧಿ ತನ್ನೊಡಲ ಪನಿಪನಿಗೆ,ಜಲ-
    ಕಣಮಲ್ತೆ ಸಾಗರನ ಸನ್ನಿಧಾನಂ ||

    • ಜಲಕಣವನಾಗಸಕ್ಕಿತ್ತವರದಾರೆಂಬೆ
      ಜಲಧಿಯೇ ತಾನಲ್ತೆಲಿನ್ನು ಋಣಮೇಂ|
      ಸಲಿಲವಹುದೇಂ ಕ್ಷಾರವಿಳಿವಾಗ ಮೋಡದಿಂ
      ಸಲೆ ಋಣಿಗಳಾವಲ್ತೆಲರ್ಕನಿಂಗಂ||

  28. ತಣಿಜಗದ ಬೆಣಚಾಗಿ,ಬಿಸಿಲಾಗಿ,ಬೆಮರಿರಲ
    ರುಣ,ಸೌಖ್ಯವಾತನದ ಕಾಯಲೆಂದೇ,
    ಉಣಿಸೆ ತಂಪನು ದೇವ,ರವಿಗಿತ್ತ ವಿರಮದಂ
    ಕಣಮಲ್ತೆ?ಸಾಗರನ ಸನ್ನಿಧಾನಂ?

    • ಪರ್ಸೆಪ್ಶನ್ ಚೆನ್ನಾಗಿದೆ. ಬೆಮರಲ್ಕರುಣ = ಬೆಮರಲ್ಕೆ+ಅರುಣ = ’ಬೆವರುವುದಕ್ಕೋಸ್ಕರ’ ಎಂದಾಗುತ್ತದೆ. ನೀವು ಹೇಳಚಿಚ್ಛಿಸಿರುವುದು ’ಬೆವರುತ್ತಾನಾಗಿ’ ಅಲ್ಲವೆ?

  29. ಋಣಮೆನುವ ಜೀವಾರ್ಥವಂ ಕಾಮದಿನೆ ಪೊಂದಿ
    ಎಣೆಮೀರ್ದು ಧರ್ಮಕಾರ್ಯವನೆ ಗೈದು
    ಕುಣಿದು ಕಡೆಯೊಳ್ ನದಿಯು ಕಾಂಬತೀ ಪುಣ್ಯದಂ
    ಕಣಮಲ್ತೆ?ಸಾಗರನ ಸಂನಿಧಾನಂ?
    ಋಣ=ನೀರು

  30. ಎಣಿಸಲಾಗದ ತೆರೆಯನಳಿಸಲಾರದ ತರವು
    ಗುಣಿಸಲಾ ಹರವ ತಾ ಮಣಿಯೆ ನರನುಂ ।
    ಅಣಿಗೈದುದಾರೋಹದವರೋಧ(ಹ)ವಿದು ವಿಲ-
    ಕ್ಷಣಮಲ್ತೆ ಸಾಗರನ ಸನ್ನಿಧಾನಂ ।।

    • ಸಮಸ್ಯಾಪಾದವನ್ನೇ ಬದಲಾಯಿಸಿಬಿಟ್ಟಿರಿ (ಷಣಮಲ್ತೆ …..)! ಪದ್ಯದ ಒಟ್ಟು ತಾತ್ಪರ್ಯವಾಯಿತು. ಆದರೆ ‘ಆರೋಹದ ಅವರೋಹ’ ಎಂದರೇನು?

      • “ವಿಲಕ್ಷಣ” = “ವಿಲಕ್ಕಣ” ವಾಗಬಹುದೇ ? ಇಲ್ಲದಿದ್ದಲ್ಲಿ ಪದ್ಯವನ್ನೇ ಬದಲಿಸಬೇಕಾದೀತು.
        “ಆರೊಹದವರೋಧ(ಹ)” = ಸಾಗರದ ಅಲೆಗಳ ಏರಿಳಿತವನ್ನು ಸೂಚಿಸಿದ ಬಗೆ – ಸರಿಯಾಗಲಿಲ್ಲವೇ?
        (“ಅಣಿಗೊಳಿಸುತಣಗಿಸಿಹ ತೆರೆತೆರೆಯಬಗೆ ವಿಲ-ಕ್ಷಣ.. ” ಎಂದು ಮೊದಲು ಬರೆದದ್ದು. ಲಘುಬಾಹುಳ್ಯ ತಪ್ಪಿಸಲು ಬದಲಿಸಿದ್ದು.)

  31. ಉಪ್ಪಿನ ಜಾಡಿಯೇ ಸಾಗರನ ಸನ್ನಿಧಾನ …

    ಎಣಿಸಿದೊಳ್ ಸಿಗದ ರುಚಿ ಗುಣಿಸಿದೊಳ್ ಬರದು ಕಡೆ
    ಗಣಿಸಿದೊಳ್ ವ್ಯಂಜನಕೆ ಸವಿರುಚಿಯದಿರದು I
    ಅಣಕಿಸುತ್ತಿರ್ಪಡುಗೆ ಮನೆ ಲವಣ ಷಡ್ರಸದ
    ಕಣಮಲ್ತೆ ಸಾಗರನ ಸನ್ನಿಧಾನಂ II

    ಉಪ್ಪು ವ್ಯಂಜನದಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ (ಎಣಿಸಿದೊಳ್-ಯೋಚಿಸಿದರೆ ) ತಿಳಿಯುವುದಿಲ್ಲ . ಜಾಸ್ತಿಯಾದಾಗ (ಗುಣಿಸಿದೊಳ್ ) ಮತ್ತು ಹಾಕಲು ಮರೆತಾಗ ಸವಿರುಚಿ ಬಾರದು. (ಆ ಸಂದರ್ಭದಲ್ಲಿ ಉಪ್ಪಿನ ಬೆಲೆ ಗುರುತಿಸಲ್ಪಡುತ್ತದೆ). ಪದ್ಯ ಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ 🙂 ಅದಕ್ಕಾಗಿ ಈ ಪೂರಣ.

    • ’ಪದ್ಯಪಾನದಲ್ಲಿ ಈ ಸಮಸ್ಯೆ ನೋಡಿದ ಮೇಲೆ ಅಡುಗೆ ಮನೆಯೊಳಗೆ ಉಪ್ಪಿನ ಜಾಡಿಯೇ ನನಗೊಂದು ಸಮಸ್ಯೆಯಾಗ್ತಾ ಇದೆ’ ಎಂದು ಹೇಳುವ ಮೂಲಕ, ಈ ಸಮಸ್ಯೆಯನ್ನು ಕೊಟ್ಟುದಕ್ಕಾಗಿ:
      ಪಲ್ಲವ|| ಇಷ್ಟು ದಿನಗಳು ಸಹಜ ರುಚಿಯಿಂ
      ಪುಷ್ಟಗೊಳ್ಳುತ್ತಿದ್ದ ಪಾಕವು|
      ಕ್ಲಿಷ್ಟವಾದುದು ಇಂದೆನುತ್ತಲಿ
      ದುಷ್ಟನೆಂಬಿರ ಸೋಮನಂ||

  32. ಎಣೆಯಿಲ್ಲದೆನ್ತೊ ಭೂಖಣ್ಡಗಳ ಬಡಗು-ಪಡು
    ವಣಮೆಲ್ಲಮಾವರಿಸಿ ತೆಙ್ಕು-ಮೂಡಂ|
    ಮಿಣಮಿಣನೆ ಬೆಳ್ಳಿಯೊಲ್ ಪೊಳೆದಿರ್ಪ ಮಿಱುಗುಕ-
    ಙ್ಕಣಮಲ್ತೆ ಸಾಗರನ ಸನ್ನಿಧಾನಂ||

  33. ಪ್ರಣಮಿಪೆ ಪಯೋಧಿಯನ್ನಬ್ಧಿ-ಅಮ್ಬುಧಿ-ಮುತ್ತ-
    ಗಣಿ-ಅರ್ಣವ-ನದೀಶ-ಉದಧಿ-ಜಲಧಿ|
    ಎಣೆಯಿರದ ವಾರಿಧಿ-ಸಮುದ್ರ-ಸಿನ್ಧುವೆನುತೊ-
    ಕ್ಕಣಮಲ್ತೆ ಸಾಗರನ ಸನ್ನಿಧಾನಂ||
    (ಒಕ್ಕಣೆ> ಒಕ್ಕಣಂ)

    • ಅರೆ -ಬರೆ ಹಳೆ ಕನ್ನಡದಲ್ಲಿ ಸಾಗರನ ಸಾಮೀಪ್ಯದಲ್ಲಿ ದಂಡಿ ಯಾತ್ರೆಯ(ಉಪ್ಪಿನ ಸತ್ಯಾಗ್ರಹ ) ಬಗ್ಗೆ ಬರೆಯುಲು ಯೋಚಿಸುತ್ತಿದ್ದೆ . ಅಡುಗೆ ಮನೆಯೊಳಗೆ ಉಪ್ಪಿನ ಜಾಡಿ ” ದಂಡಿ ಯಾತ್ರೆಗೆ ಕಾರಣ ನಾನೆ . ನೀನು ದಂಡ” ಎಂದು ನನ್ನನ್ನು ಅಣಕಿಸ್ತ ಇತ್ತು

      • ವೃಥಾ ಏಕೆ ಉಪ್ಪನ್ನು ಬೈಯುವಿರಿ. ಅದರ ಬಗೆಗೇ ನೀವು ಲೇಖನ ಬರೆದರೆ ನಿಮ್ಮ ಉಪ್ಪಿನಋಣವನ್ನು ಎಂದೂ ನೆನೆಯುತ್ತದೆ ಅದು; ’ದಂಡ’ ಎಂದು ಬೈಯುವುದಿಲ್ಲ.

        ’ಉಪ್ಪಿನ ಋಣ’ಮೆಂಬರು ನಾಣ್ಣುಡಿಯೊಳು
        ಸಪ್ಪೆಯ ಮಾತೇಕೆಂಬಿರಿ ನೀಂ|
        ಒಪ್ಪದೆ ತನ್ನಯ ಬಗೆಗೇ ಬರೆದೊಡೆ?
        ತಪ್ಪೆಣಿಸುವುದೇಂ ನಿಮ್ಮೊಳದು?|

    • sl.no 31 kke -ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೆ .ತಪ್ಪಿ ಇಲ್ಲಿ ಕ್ಲಿಕ್ಕಿಸಿದೆ . ಕ್ಷಮಿಸಿ

      • ನೀವು ಫೋಟೊಗ್ರಾಫರ್ ಅಲ್ಲ ತಾನೆ?

        ಕ್ಲಿಕ್ಕಿಸಿದೊಡಮೆಲ್ಲೆಂದೊಡಮಲ್ಲಿಯೆ,
        ಚಿಕ್ಕದು ದೋಷವು, ಮೌಸಿನೊಳು|
        ಕ್ಲಿಕ್ಕಿಸಿದೊಡೆ ಕ್ಯಾಮರದೊಳಗಂತೆಯೆ
        ಎಕ್ಕುಟ್ಟೋಗ್ವುದು ಚಿತ್ರವು ತಾಂ||

Leave a Reply to ರಾಗ Ganesh R (रागः) Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)