Jul 062015
 

ಆಷಾಢಮಾಸವನ್ನು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ವರ್ಣಿಸಿರಿ

  62 Responses to “ಪದ್ಯಸಪ್ತಾಹ ೧೫೮: ವರ್ಣನೆ”

  1. “ಲಿವಿಂಗ್ ಟುಗೆದರ್ ” ಆಳಿರಲ್, ವಿಮತರಾಗಿ ವಿಚ್ಛೇದನ-
    ಪ್ರವಾಹದೊಳೆ ಸಿಲ್ಕಿರಲ್ ಸತಿಯು ತೌರಿಗೆಂದೇಗುವೊಂ-
    ದವಾರ್ಯತೆಯ ಕಾಲಮಂ ವಿರಹವಿಗ್ನತಾಜಾಲಮಂ
    ನವೀನಕವನಾರ್ಥಮೆಂತಮಮ! ಬಣ್ಣಿಪೆಂ ಸುಣ್ಣಿಪೆಂ?

  2. ಆಷಾಢರೂಢಾಂಬುದರಾಜಿಯೆಲ್ಲಂ
    ಯೋಷಾಸಮೀಹೋಪಮಮಾಗಿ ಪಾರಲ್ |
    ಕಾಷಾಯಮೇ ಲೇಸಲ ಕರ್ಷಕರ್ಗಂ
    ಘೋಷಂ ಗಡಂ ಡಾಮರಡಾಮರೀಯಂ ||

  3. ಹಬ್ಬಗಳಿರದಾಷಾಡದೆ
    ತಬ್ಬುವವೊಲ್ ಗಾಳಿ ಸುಯ್ಯೆನುತಲೆಲ್ಲೆಡೆಯಿಂ-
    ದಬ್ಬರಿಸುತೆ ಮನದಾಳದ
    ಮಬ್ಬನಳಿಸೆ ಪೊಸತು ಕಲ್ಪನೆಯನೆಬ್ಬಿಸಿತೈ

  4. ನೇಸರನುಗ್ರಕಿರಣಮಂ
    ಸೂಸುತೆ,ಭೂಜೀವಿಗಳನೆ ದೆಸೆಗೆಡಿಸುತಿರಲ್,
    ಶ್ವಾಸಮನೀಯಲ್ಕೆಸುರಿವ
    ನಾಸಡಿಯುಂ ವೃಷ್ಟಿರೂಪದೊಳ್ ಭರವಸೆಯಂ
    ಆಸಡಿ=ಆಷಾಢ

    • ಮೊದಲ ಪಾದದಲ್ಲಿ ಒಂದು ಮಾತ್ರೆಯಷ್ಟು ಹೆಚ್ಚಾಗಿದ್ದು ಛಂದಸ್ಸು ತಪ್ಪಿದೆ. ದಯಮಾಡಿ ಸವರಿಸಿಕೊಳ್ಳಿರಿ. ಉಳಿದಂತೆ ಹಲವೆಡೆ ನನಗೆ ಅರ್ಥಸ್ಪಷ್ಟತೆಯಾಗುತ್ತಿಲ್ಲ.

      • ಮಾತ್ರೆಯೊಂದನ್ನು ತೆಗೆದಿದ್ದೇನೆ. ಧನ್ಯವಾದಗಳು.
        ಸೂರ್ಯನು ತನ್ನ ಕರಗಳಿಂದ ಜೀವಿಗಳಿಗೆ ತೊಂದರೆಯನ್ನು ನೀಡುತ್ತಿರುವಾಗ, ಅವರಲ್ಲಿ ಶಕ್ತಿಯನ್ನು ತುಂಬಲೋ ಎಂಬಂತೆ ,ಮಳೆಯರೂಪದಲ್ಲಿ ಭರವಸೆಯನ್ನು ಆಷಾಡನು ಸುರಿಯುವನು

  5. ನೋಡುನೋಡುತುಮೆಲ್ಲ ಕಡೆಗುಂ
    ಕೋಡಿವರಿದಿರೆ ನೀರಿನೊನಪಿಂ
    ತೀಡಿ ಹಾಸುತೆ ಪಸುರನಂದದೆ,ಕಳೆದು ಕಲ್ಮಷಮಂ |
    ಬಾಡುತಿರ್ದಿರೆ ಕೆಸರಿನೊರತೆಯೆ,
    ಮೋಡಿಗೈದಳೆ ಶುಭ್ರಧರೆತಾಂ
    ಜಾಡಿಸುತೆ ಕಳ್ತಲೆಯನೆಸೆವಾ ಹೃದಯವಂತರವೊಲ್! ||

    • ಹಲವಾರು ಶಬ್ದದೋಷಗಳಿವೆ; ಪದ್ಯದ ಸಾಮಾನ್ಯತಾತ್ಪರ್ಯ ತಿಳಿಯಿತಾದರೂ ಎಲ್ಲ ಪದಗಳ ಆಶಯವು ಎಟುಕಲಿಲ್ಲ. ಪ್ರಾಯಶಃ ನಾಳಿನ ನಾಟ್ಯಶಾಸ್ತ್ರದ ತರಗತಿಯಲ್ಲಿ ಚರ್ಚಿಸಬಹುದು.

  6. शेते विष्णुः सदाषाढे कार्तिके प्रतिबोध्यते|
    ಜ್ಞಾನಮೂರ್ತಿಯು ನಿದ್ರಿಸಿರಲೇನು ಸ್ಫುರಿಪುದೈ?
    ನಾನೇನನುಂ ಬರೆಯೆನಾಷಾಢದೊಳ್|
    ಸೋನೆ ನಿಲ್ಲುತೆ ತೋರೆ ಬಾನು ಶುಭ್ರವದಾಗ
    ಐನಾತಿ ಕವನಿಪೆಂ ಕಾರ್ತಿಕದೊಳು||

    • ಕಾಳಿದಾಸನೆ ಬರೆದನಾಷಾಢದೊಳ್ ವಚಃ –
      ಕೇಳೀವಿಪಂಚಿಯೆನೆ ಮುಗಿಲಂಚೆಯಂ|
      ಕೀಳುಗರೆಯುವಿರೇತಕೀ ಗಾಳಿಗಾಲಮಂ?
      ಹೇಳಿರಿದಕುತ್ತರವ ಹಾದಿರಂಪ !!

      ಹರಿ ಮಲಗಿದಾಗಲೇ ಸಿರಿ ಕೂಡ ಮಲಗುವಳು;
      ಸಿರಿ ಮಲಗಿರಲ್, ವಾಣಿ ಎಳ್ಚರಿರುವಳ್ |
      ಒರೆವುದಾಗಲೆ ಕವಿತೆ, ಸುರಿವುದಾಗಲೆ ಒರತೆ
      ಭರದಿಂದ ಕೊರೆಯಿರಯ್ ಹಾದಿರಂಪ !!

      • ಒರೆಯದಿರ್ದೊಡಮೇನು ಕವನಂಗಳಂ ನಾನು
        ಪೆರಿಗೆಗಾದೆನು ನಿಮ್ಮ ಪದ್ಯಂಗಳ|
        ಬರೆವುದೋ, ಅನ್ಯರಿಂ ಬರೆಯಿಸುವುದೋ ಮೇಲು
        ಶಿರವಿಡುವ ನಿಮ್ಮಡಿಗೆ ಹಾದಿರಂಪಂ||

  7. ಮೊರೆವಾಷಾಢದ ಗಾಳಿಯೊಳ್ ಚದುರೆ ಮೇಘಂಗಗಳ್ ನಭೋವೀಥಿಯೊಳ್
    ಮರೆಯಾದಂ ಗಡ ’ಸೋಮ’ನಂತೆಯೆ ’ರವೀಂದ್ರಂ’ ’ಶ್ರೀಶ’ನುಂ ಶಯ್ಯೆಯೊಳ್ |
    ಸೆರೆಯಾದಂ; ಪ್ರಭು ’ರಾಮಚಂದ್ರ’ನೊ ವಿಷಣ್ಣಂ ತನ್ನ ನಾಮಾಂಕದೊಳ್
    ಸರಿಯರ್ಧಂ ಮಿಗೆ ’ಚಂದ್ರ’ನಿಂತು ಮುಗಿಲೊಳ್ ಜಾರಲ್; ಕವಿತ್ವಂ ಹತಂ || 🙂 🙂

  8. ಕಾಯಾ-ವಾಚಾ-ಮನಸಾ…
    ಗೈಯಾಳಿಯಳ ವಾಙ್ಮನಸ್ಸುಗಳು ಪಾವನಮೆ (ಗಾಳಿಯಲ್ಲಿ ತೂರಿಹೋಗುವಂಥದು)
    ಕಾಯಮಿದಕಪವಾದಮಲ್ಲ ನೋಡಲ್|
    ಗೈಯಲಾಷಾಢದೊಳ್ ಮದುವೆಯಂ ಹಾರುವಳು (ಗಾಳಿಯಲ್ಲಿ)
    ಕಾಯವಿರಲೇಳು ಮಲ್ಲಿಗೆಯ ತೂಕಂ|| (All brides are sleek and elegant)

    • ಕಾಯಾ ಎಂಬುದು ವ್ಯಾಕರಣದೋಷ. ಕಾಯೇನ ಎಂದಾಗಬೇಕು.

      • ತಿದ್ದುಗೆಗೆ ಕೃತಜ್ಞತೆಗಳು. ಆದರೆ ಅಲ್ಲಿಗೇ ನಿಂತುಬಿಟ್ಟಿರೆ? ಮುಂದಕ್ಕೆ ನೋಡಲಿಲ್ಲವೆ!

  9. ಬೀಸಿಂ ಹಡಿಗಾಳಿಯ ತಾ
    ನೀಸಲ್ ಶೂನ್ಯದನುಭವವನಾಷಾಢವದುಂ ।
    ಮಾಸಾಂತ್ಯಕಂತು ಕಾಯ್ವುದು
    ಲೇಸೈ ಪತಿಪೂಜೆಗೈಯೆ ಸದಮಾಸೆಯೊಳುಂ ।।

    *ಸದ್ + ಅಮಾಸೆ
    ನೀರಸವಾದ ಆಷಾಢದ ಕೊನೆಯಲ್ಲಿ “ಗಂಡನಪೂಜೆ” ಹಬ್ಬಕ್ಕಾಗಿ ಕಾಯುತ್ತಾ

    • ಸೇವೆಯ ಪತಿಪಾದಂಗಳ
      (ನೀರು)ಜೀವನವನೆರಚಿ ಪ್ರಸೂನ(ಹೂವು) ಮೇಣಕ್ಷತೆಯಿಂ|
      (in thousands)ಸಾವಿರದೆ ಗೈವಳಿಂಗಂ
      ದೇವನು ಸತ್ಪತಿಯನೀವ ಬಹಜನ್ಮದೊಳಂ|| 😀

      • Sameಪತಿಯನೀವನೋ ಸತ್ಪತಿಯನ್ಯರನೀವನೋ?

      • ಸತ್ಕವಿಯ ಆಶಯದ ವಿಶ್ಲೇಷಣೆ ಸಲ್ಲದು ನೀಲಕಂಠ !!
        ನನ್ನನ್ನು ಪ್ರಶ್ನಿಸುವುದಾದರೆ, sameಪತಿ ಇಂಗ್ಲಿಷ್ ಆಯಿತು, someಪತಿ ~ ಸಂಪ್ರತಿ ಅಂದರೆ ಸುಸಂಸ್ಕೃತವಾದೀತು ?!!

        ಪ್ರಸಾದ್ ಸರ್, ನಾನೂ ಈ ರೀತಿ (ಆಷಾಢದ) “ಗಾಳಿ”ಬಿಡಿಸುವ ಪೂಜೆ ಬಗ್ಗೆಯೇ ಬರೆದದ್ದು, ಧನ್ಯವಾದಗಳು

        • ತಮಾಷೆಗೆ ಬರೆದೆ ಎಂದುಕೊಂಡಿರ! 😉

          • ಇಲ್ಲ ಪ್ರಸಾದ್ ಸರ್, ಬೇಸರಪಟ್ಟುಕೊಳ್ಳಬೇಡಿ, ಪದ್ಯ ತುಂಬಾ ಚೆನ್ನಾಗಿದೆ. ಆದರೆ ಪದ್ಯದ ಕೊನೆಯ ನಿಮ್ಮ “ನಗುಮೊಗ” – ನೀಲಕಂಠನ “ನಡವಳಿ” ಎರಡೂ ನನ್ನನ್ನು ದಾರಿತಪ್ಪಿಸಿತು !!

    • ಚೆನ್ನಾಗಿದೆ. ಸದಮಾಸೆ ಎಂಬ ಅರಿಸಮಾಸಕ್ಕೆ ಬದಲಾಗಿ
      ಲೇಸಿಂ……………….ಗೆಯ್ಯಲಮವಸೆವಗಲೊಳ್ (ಅಮಾವಾಸ್ಯೆಯ ಹಗಲಿನಲ್ಲಿ) ಎಂದು ಸವರಿಸಬಹುದು.

      • ಧನ್ಯವಾದಗಳು ಗಣೇಶ್ ಸರ್,
        “ಅಮಾವಾಸ್ಯೆ” ಕೊನೆಪಾದದಲ್ಲಿ ತರಲು ತುಂಬಾ ಪ್ರಯತ್ನಪಟ್ಟಿದ್ದೆ.ಈಗ ಚೆನ್ನಾಯಿತು.

        ಬೀಸಿಂ ಹಡಿಗಾಳಿಯ ತಾ
        ನೀಸಲ್ ಶೂನ್ಯದನುಭವವನಾಷಾಢವದುಂ ।
        ಮಾಸಾಂತ್ಯಕಂತು ಕಾಯ್ವುದು,
        ಲೇಸಿಂ ಪತಿಪೂಜೆಗೆಯ್ಯಲಮವಸೆವಗಲೊಳ್ ।।

  10. ಮುಸುಕುತುಮಿರ್ದ ಮೋಡದ ಮುಸು೦ಕಡರಿರ್ದ ಮೊಗ೦ ಬಿಡುತ್ತುಮಾ
    ಬೆಸೆದಿರುತಿರ್ದ ಬೇಸಗೆಯ ಸಖ್ಯಮಿರಲ್ಕೊಗೆದ ಬೇಸರ೦ ಮಗುಳ್
    ಪೊಸತನದಿ೦ ಸೊಗ೦ಗುಡುವ ನೀರ್ವಸೆಯು೦ ಪಸರುತ್ತುಮಿರ್ದವೋ-
    ಲೆಸೆಯುತುಮಿರ್ದುದಾಗಸದ ಚರ್ಯೆ ವಿಷಾದಸುಖ೦ಗಳಳ್ಕಿನೊಳ್

    ಬಹಳ ಕಾಲದ ಮೈತ್ರಿಯ ಬೇಸಗೆ ಹೊರಟು ನಿ೦ತಿರುವ ವಿಷಾದವೂ, ಹೊಸತನದ ಸುಖ ಕೊಡುವ ನೀರ್ಪಸೆಯ ಸಖ್ಯದ ಸ೦ತೋಷವೂ ಜೊತೆಸೇರಿ ಆಗಸದ ಮುಖ ಮೋಡದ ಮುಸುಕು ಮುಸುಕಿದ ಇಬ್ಬಗೆಯ ಚರ್ಯೆಯಲ್ಲಿತ್ತು.

  11. ಮೇಘರಾಜನು ಬಸುರಿಯಾಗಿಯೂ, ಗುಡುಗು-ಸಿಡಿಲುಗಳೇ ಪ್ರಸವವೇದನೆಯ ಆರ್ತನಾದವಾಗಿಯೂ, ವಾಯುದೇವನು ಸೂಲಗಿತ್ತಿಯಾಗಿಯೂ, ನೀರೆಂಬ ಕೂಸನ್ನು ಧರೆಗೆ ತರುವ ವಿಲಕ್ಷಣ ಚಿತ್ರಣವುಳ್ಳ ಮಾಸವು ಆಷಾಢಮಾಸವಾಗಿದೆ…

    ಧೃತಗರ್ಭಂ ಜಲದೇಶನುಂ ಪ್ರಸವಪೀಡಾಕ್ರಾಂತನಾಗಿರ್ದು ಮೇಣ್
    ಹತಶಕ್ತ್ಯಾಕುಲತಾವೃತಂ ಘನರವಾರ್ತಪ್ರಸ್ವನಂ ಗೆಯ್ದೊಡಂ
    ಕ್ಷತಿಯಾಗಲ್ಕೆಡೆ ನೀಡಲೊಲ್ಲೆನೆನುತುಂ ಧಾತ್ರೀವಪುರ್ಧಾರನಾ
    ತತನುಂ ತಂದಿರಲಪ್ಪುವನ್ನಿಳೆಗಮಾಯ್ತಾಷಾಢಮುಂ ಮೋದದಂ

    ಧಾತ್ರೀ – ಸೂಲಗಿತ್ತಿ
    ತತ – ವಾಯು

    • ನೀನು ತೀರ ಆಧುನಿಕಯುಗದವನು ಎಂದು ಸಾಬೀತಾಯಿತು. ’ಮೇಘಾವತಿ’ ಎನ್ನಬಾರದೆ!

      • ಹಾಗೇನಿಲ್ಲ. ಮಾ೦ಧಾತೃ ರಾಜ ಹುಟ್ಟಿದ್ದು ಅವರಪ್ಪನ ಗರ್ಭದಿಂದಲ್ಲವೆ? 🙂

        • ಹೌದೌದು…ಮಾಂಧಾತನು ಅವನ ತಂದೆ ಚರುವನ್ನು ಕುಡಿದ ಕಾರಣದಿಂದಾಗಿ ಜನಿಸಿದ್ದಲ್ಲವೇ…ಇಲ್ಲಿಯೂ ಮೇಘರಾಜನು ಎಲ್ಲ ಜಲನಿವಾಸಗಳ ನೀರನ್ನು ಕುಡಿದು ಗರ್ಭವಂತನಾಗಿದ್ದಾನೆ…ದಯಮಾಡಿ ನನ್ನನ್ನು ಮಳೆಬಿಲ್ಲಿನ ವರ್ಣಗಳಿಂದ (rainbow flag) ಚಿತ್ರಿಸದಿರಿ… _/_ 😛

          • ಸ್ತ್ರೀಲಿಂಗರೂಪದಲ್ಲಿ ಕಾದಂಬಿನಿ ಎಂಬ ಪದವು ಸಂಸ್ಕೃತದಲ್ಲಿದೆ. ಇಂಥ ಸಂದರ್ಭದಲ್ಲಿ ಅದನ್ನು ಬಳಸಬಹುದು. ಅಲ್ಲದೆ ಮುಗಿಲ್ವೆಣ್ಣ್ ಎಂಬಂತೆ ಅಚ್ಚಗನ್ನಡದ ರೂಪಕವೂ ಸಾಧ್ಯ.

          • ಆಹ್! ನನಗದು ತಿಳಿದಿರಲಿಲ್ಲ ಸರ್…ನನ್ನ ಕಲ್ಪನೆಯಂತೆ ಗಂಡೇ ಹೆರುವಂತಹ ವಿಲಕ್ಷಣವಾದ ಸಂದರ್ಭವನ್ನು ತರಬೇಕಿತ್ತು..ಇಲ್ಲಿ ಹೆರುವವರೂ, ಹೆರಿಗೆ ಮಾಡಿಸುವವರೂ ಗಂಡೇ ಆದ್ದರಿಂದ, “ಭಾವಮೆಂತೋ, ಕಬ್ಬಮಂತೇ” ಎಂಬ rule ಪ್ರಕಾರ ತಪ್ಪಾಗದು ಎಂದುಕೊಂಡಿದ್ದೇನೆ… 😛

  12. ಗಗನಂ ನೀಲದೆ ಭಾಸಿಸಿರ್ಕುಮೆನುವರ್ಗಾಘಾತಮಂ ನೀಡುತುಂ,
    ಜಿಗಿದಾಡುತ್ತಿರುವೆಲ್ಲ ಬಾಲಕರಿಗಂ ದಿಗ್ಭಂಧನಂಹೇರುತುಂ,
    ನಗುತುಂ ಪ್ರೀತಿಯಿನೊಂದುಸೇರ್ದ ಜೊತೆಯಂ ಬೇರ್ಮಾಡಿ ಸಂದುಂ,ದಿಟಂ
    ಸೊಗಸಿಂ ತೋರ್ಗೆಮಗಲ್ತೆ ಸೋಜಿಗಮನೀ ಆಷಾಢಮಾಸಂ ಮಹಾನ್!

    • ಪದ್ಯ ಚೆನ್ನಾಗಿದೆ. ಆಘಾತಮಂ ನೀಡುತುಂ ಎಂದು ತಿದ್ದಿದರೆ ಒಳಿತು. ಏಕೆಂದರೆ ಆಘಾತಮನ್ನೀಯುತುಂ ಎಂಬುದು ಸರಿಯಾಗಿ ಸಂಧಿಯಾದರೆ ಅಘಾತಮನೀಯುತುಂ ಎಂದಾಗುತ್ತದೆ. ಆಗ ಛಂದಸ್ಸು ಕೆಡುತ್ತದೆ.ಇಂಥ ದುಷ್ಟಸಂಧಿಗಳನ್ನು ಅನೇಕಸಹಪದ್ಯಪಾನಿಗಳು ಆಗೀಗ ಮಾಡುತ್ತಿರುತ್ತಾರೆ. ಇದು ಹೊಸಗನ್ನಡದ ಬಗೆಯನ್ನು ವಿವಕ್ಷೆಯಿಲ್ಲದೆ ಹಳಗನ್ನಡಕ್ಕೆ ಜೋಡಿಸುವಾಗ ಆಗುವ ತಪ್ಪು.

      • ತಿದ್ದಿರುವೆನು , ತುಂಬಾ ಧನ್ಯವಾದ,ಸರಿಯಾದ ಸಂಧಿಯ ಬಗೆಯನ್ನು ತಿಳಿಸಿದ್ದಕ್ಕಾಗಿ,

      • ಅಯ್ಯೋ, ನಾನೂ ಮೊದಲು ಈ ತೆರನಾಗಿ ಆಘಾತಮನೀಯುತು೦ ಎ೦ಬ೦ತೆ ನಿಯಮ ಪಾಲಿಸುತ್ತಿದ್ದೆ. ಅಮೇಲೆ ಒ೦ದು ಬಾರಿ ಪ್ರಸಾದರು ಆಘಾತಮನ್ನೀಯುತು೦ ಎ೦ಬ೦ತೆ ಸ೦ಧಿ ಮಾಡಿರುವುದನ್ನು ನೋಡಿ ನಾನೂ ದಾರಿ ತಪ್ಪಿದೆ 🙁

        • Thanks

        • ಕಥೆಯನರಿತಿರೆನಗಾಗಲ್
          ವ್ಯಥೆ, ಪೇಳ್ವೆಂ,ತಿಳಿದು ನೀತಿಯಂ, ಕನಿಕರದಿಂ |
          ಪಥಮಂ ತಪ್ಪಿ ಕೆಡುವರತಿ-
          ರಥರಂ ಕುರುಡಾಗಿ ನಂಬಿ ಮನುಜರ್ ಧರೆಯೊಳ್ || 🙂

  13. ಚಲನೆ ಮರೆಯದ ಗಾಳಿ ತನ್ನಯ-
    ವಲನ ತೋರಲು ಮೇಘ ಮಾಲೆಗೆ
    ವೊಲಿವುದಾಗಸ ತುಲನೆಯಿಲ್ಲದ ವಾರಿ ಸಿಂಚನದಿ I
    ಉಳುಮೆಗೈಯಲು ಸಲಿಲದಸ್ತ್ರವು
    ಸಲುಗೆಯಾಗದು ಮಿತಿಯೊಳಿರದಿರೆ-
    ಯೊಲುಮೆ ತನಗಿರಲೆಂದು ಕೃಷಿಯವ ನೆನೆವ ದಿನಮಣಿಯ II

    ಗಾಳಿಯ ಚಲನ -ವಲನವು, ಹಿ೦ಡು ಹಿಂಡಾದ ಮೋಡಕ್ಕೆ ದೊರೆತಾಗ ಆಗಸವು ಮಳೆಯನ್ನು ಸಿಂಪಡಿಸಿ ತನ್ನ ಸಂತಸವನ್ನು ಸೂಚಿಸುತ್ತದೆ . ಕೃಷಿ ಚಟುವಟಿಕೆಯು ಈ ಸಮಯದಲ್ಲಿ ಬಿರುಸಿನಿ೦ದ ಸಾಗ ಬೇಕಾಗಿರುವುದರಿಂದ ,ಮಳೆಯು ವಿಪರೀತವಾದಾಗ ಭೂಮಿಯೊಡೆಯನಾದ ಕೃಷಿಕನು ಸೂರ್ಯನನ್ನು ಕಾಣಲು ಹಾತೊರೆಯುತ್ತಿರುತ್ತಾನೆ . ( ಕರಾವಳಿ ಮತ್ತು ಮಲೆನಾಡಿನ ಚಿತ್ರಣ )

    • ಪದ್ಯ ಚೆನ್ನಾಗಿದೆ. ಒಂದೇ ಸಣ್ಣ ತಿದ್ದುಗೆ; ಸಿಂಚನ ಎಂಬ ಪದಪ್ರಯೋಗವು ಅಸಾಧು. ಅದು ಸೇಚನ ಎಂದಾಗಬೇಕು. ಈಚಿನ ದಶಕಗಳಲ್ಲಿ ಈ ಅಪಶಬ್ದವು ತುಂಬ ವಾಡಿಕೆಯಲ್ಲಿದೆ. ಇದು ಸಂಸ್ಕೃತದಲ್ಲಿ ಕ್ರಿಯಾಪದರೂಪದಲ್ಲಿದ್ದಾಗ ಮಾತ್ರ ಸಿಂಚತಿ ಎಂಬತೆ ರೂಪವನ್ನು ತಾಳುತ್ತದೆ. ಕೃದಂತವಾಗಿ ಇದು ಸದಾ ಸೇಚನವೇ ಹೌದು. ಅಭಿಷೇಚನ, ಸುಧಾಸೇಚನ, ಸೇಕ ……ಹೀಗೆ ಸಾಧುರೂಪಗಳು.

      • ಅಸಾಧು ರೂಪದ ಸಾಧು ರೂಪವನ್ನು ತಿದ್ದಿ ತೋರ್ಪಡಿಸಿರುವುದಕ್ಕೆ ಧನ್ಯವಾದಗಳು ಸರ್ .
        ವಲನ ತೋರಲು ಮೇಘ ಮಾಲೆಗೆ
        ವೊಲಿವುದಾಗಸ ತುಲನೆಯಿಲ್ಲದ ವಾರಿ ಸೇಚನದಿ I
        ಉಳುಮೆಗೈಯಲು ಸಲಿಲದಸ್ತ್ರವು
        ಸಲುಗೆಯಾಗದು ಮಿತಿಯೊಳಿರದಿರೆ-
        ಯೊಲುಮೆ ತನಗಿರಲೆಂದು ಕೃಷಿಯವ ನೆನೆವ ದಿನಮಣಿಯ II

  14. ಪರ್ವದಾಕರಮನಾಟಿಸುತಿಂದೀ
    ಯುರ್ವಿ ಶೃಂಗರಿಸಿಕೊಂಡಿರಲಾಹಾ!
    ಸರ್ವಲೋಕಮೆ ಸೊಗಂಬಡುತಿರ್ಕೇಂ
    ಪರ್ವಭೋಜ್ಯಮನೆ ತಾ ಸವಿದಂತೇ !!
    ಆಟಿಸು=ಬಯಸು
    ((ಮುಂಬರುವ)ಪರ್ವಗಳನ್ನು ಇದಿರುನೋಡುತ್ತ ಉರ್ವಿಯು ಸಿಂಗರಿಸಿಕೊಂಡಿರೆ, ಜನರು ಹಬ್ಬದಡುಗೆಯನ್ನು ಸವಿದಂತೇ ಸಂತಸಪಡುತ್ತಿರುವರೇ!!)

  15. ಸತಿಯಂ ಸಾರುವುದಾಗದೆ
    ಪತಿಯಾಷಾಢದೊಳನೀತಿಸಂಗವನರಸಲ್|
    ವ್ರತಮತ್ತೆಮನೆಯ ತಪ್ಪಿಸಿ
    ಗತಿಯಾಗಿಸಿತವಗೆ ಮಾವಗೇಹದೆ (police station) ವಾಸಂ||

  16. ದೇವತೆಗಳ್ಗೆ ವಿರಾಮವ
    ನೀವುತೆ ಜನರ್ಗಳ್ಗೆ ನೀರಸತೆಯಿಂದಿರಿಸು-
    ತ್ತೀವಿರಹವ ಕೊಡುತುಂ ಸಂ-
    ಭಾವಿತನೊಲ್ ತಂಪಬೀರತಿಹೆ ಸೈಪಿಂದಂ

  17. || ಇಂದ್ರವಜ್ರವೃತ್ತ ||

    ಆಷಾಢದಿಂದಂ ಧರೆಯಾಗೆ ರಮ್ಯಂ,
    ತೋಷಪ್ರಪೂರ್ಣಂ, ಮಳೆಯಿಂದೆ ಶುಭ್ರಂ,|
    ವೇಷಪ್ರಭೂಷಂ , ಪಸಿರುಟ್ಟು ಪೂವಂ,
    ದೂಷಿಪ್ಪರಿಲ್ಲಂ ದಗೆಯೆಂದು ನೋವಿಂ ||

    • ಆಹಾ ಚೆನ್ನಾಗಿದೆ

      • ಚೀದಿಯವರಿಗೆ ಧನ್ಯವಾದಗಳು.

    • ತು೦ಬ ಚೆನ್ನಾಗಿದೆ ಮೇಡಮ್! ಎರಡು ಸ೦ಶಯಗಳು,
      ಪೂವ೦ ಇದಕ್ಕೆ ಪದ್ಯದಲ್ಲಿ ಅನ್ವಯ ಏನು ಎ೦ದು ತಿಳಿಯಲಿಲ್ಲ.
      ದಗೆ – ಧಗೆ ಎ೦ದು ಬಳಸುತ್ತೇವಲ್ಲ. ಎರಡೂ ಸಾಧುವೆ?

      • A nice attempt in deed. perhaps your first indravajraa is this!.. But me too have doubts with the anvaya of ‘puuvaM’…

        @neelakaTha, dage and dhage are same. like dhULi and dULu or talataLa or thaLathaLa

        • Thank you sir for clarification. While shakuntala madam every time comes with a new chhandas, yes, it logically holds that this is her first indravajra 🙂

        • ಸಹೋದರರೆ, ಧನ್ಯವಾದಗಳು. ಇಂದ್ರವಜ್ರವೃತ್ತದಲ್ಲಿ ಇದು ನನ್ನ ಮೊದಲ ಯತ್ನವೆಂಬುದು ನಿಜ.”ಧರೆಯು ಹಸಿರನ್ನುಟ್ಟು” ಎಂದು ಕಲ್ಪಿಸುವಂತೆ ಧರೆಯ ಹಸಿರು , ಹೂವನ್ನುಡುವ ಕಲ್ಪನೆ ನನ್ನ ಮನಸ್ಸಿಗೆ ಬಂದು ತುಂಬ ಇಷ್ಟವಾಯಿತು.” ಪಸಿರ್ (greenness of the Earth) ,ಪೂವಂ ಉಟ್ಟು ಧರೆಯಾಗೆ ವೇಷಪ್ರಭೂಷಂ ” ಎಂದು ಅರ್ಥೈಸಬಹುದು. ಪೂಗಳಂ ಎಂದು ಬಹುವಚನಪ್ರಯೋಗವೇ ಆಗಬೇಕಿಲ್ಲದೆ ಹೂವಿನ ಹಾಸಿಗೆ/ ಹೂವಿನ ತೋಟ ..ಇತ್ಯಾದಿಗಳಲ್ಲಿರುವಂತೆ ಹೂವಿನ ಉಡುಗೆಯೆಂಬುದೂ ಸಾಧುವಾದೀತೆಂದು ಅಂದುಕೊಂಡಿರುವೆ. ನನ್ನ ಕಲ್ಪನೆ,ಊಹನೆಗಳು ತಪ್ಪೇ/ಸರಿಯೇ ತಿಳಿದಿಲ್ಲ.

      • ನೀಲಕಂಠರಿಗೆ ಧನ್ಯವಾದಗಳು.

  18. ಮದುವೆ ಜರುಗಿರ್ದುದಾಶ್ವಯು-
    ಜದಿ, ವೈಶಾಖದೊಳುಮಾಯ್ತು ಸೀಮಂತ ಗಡಾ !
    ಮೊದಲಾಷಾಢಕೆ ಮಡದಿ ಮ-
    ನದನ್ನೆಯಂ ತವರಿಗಟ್ಟಿದನೆ ನಾಸ್ತಿಕ ತಾಂ ?!

    • nanage nimma padyada iMgita arivaagalilla.. dayamaaDi vivarisuviraa…? 🙁

      • ಹೌದು ಗಣೇಶ್ ಸರ್, ಪದ್ಯ ಸರಿಯಾಗಲಿಲ್ಲ. ನಾಸ್ತಿಕ ಗಂಡ – (ಪ್ರತೀತಿಯಂತೆ) ಮೊದಲಾಷಾಢಕ್ಕೆ ಹೆಂಡತಿಯನ್ನು ತವರಿಗೆಕಳುಹಿಸಲೊಲ್ಲದವ – ಆಶ್ವಯುಜದಲ್ಲಿ ವಿವಾಹವಾಗಿರಲು, ಆಷಾಢದಹೊತ್ತಿಗೇ ಮಡದಿಯನ್ನು ಬಾಣಂತನಕ್ಕಾಗಿ ತವರಿಗೆ ಕಳುಹಿಸಬೇಕಾಗಿ ಬಂದ ಪರಿಸ್ಥಿತಿ!! ವರ್ಣಿಸುವ ಪ್ರಯತ್ನ – ಅದೇಕೋ ಇತ್ತೀಚಿಗೆ ಪದ್ಯ ರಚನೆಯೇ ಕಷ್ಟವಾಗುತ್ತಿದೆ.

  19. ಇಳಿಯ ಮಾಡಿನ ಕೆಳಗೆ ಕುಳಿತುಂ
    ಮಳೆಯ ಲೀಲೆಯನೀಕ್ಷಿಸುತಲಾಂ
    ಕಳೆದ ಚಣಗಳ್ ಕಾಡುತಿರ್ಕುಂ ಶ್ರಾವಣಕೆ ಮುನ್ನಂ
    ಬಳಸಿ ನೀಡುತೆ ತಂಪಿನಾಸರೆ
    ಧಳಧಳನೆ ಧರೆಗುರ್ಕಿ ಚಿಮ್ಮುತೆ
    ಹೊಳೆಯತಾಂ ಮನದಲ್ಲೆ ಪರಿಸಿದ ನೆನಪು ಮಗದೊರ್ಮೆ

    ಮನಮನೇ ವಶಮಾಡಿಕೊಂಡಿತೆ
    ಕನಸಿನಿಂಬಿನ ಹೊನಲಿದಾಯಿತೆ
    ಬನದವೊಡನೀ ಕಾಡುದೇಹದೊಳಾಸೆಯಂ ಕೆದರಿ
    ಘನಮೆ ತುಂಬಿದ ದುರ್ದಿನಗಳೇ
    ದಿನದ ಬಾಳ್ತೆಗೆ ಕಳೆಯನಿತ್ತವೆ
    ಕೊನರಿ ತುಂಬುತುಮೊಲುಮೆಯೊಂದನೆ ತರುಣಹೃದಯದಲಿ

Leave a Reply to Usha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)