Sep 192016
 

ಉಪೇಂದ್ರವಜ್ರದ ಸಮಸ್ಯೆಯ ಸಾಲನ್ನು ಪರಿಹರಿಸಿ:

ಸಮುದ್ರದೊಳ್ ಸಂಧಿಯನೊಲ್ದು ಗೆಯ್ದಂ

  61 Responses to “ಪದ್ಯಸಪ್ತಾಹ ೨೨೦: ಸಮಸ್ಯಾಪೂರಣ”

  1. ಸುಮೋದ್ಭವಂ, ಸೃಷ್ಟಿಸಲೆಂದು ಲೋಕಂ,
    ಸಮಾಹಿಸಲ್ ಲೋಗರನೊರ್ಮೆಗಂ ,ಹಾ!
    ಸಮಾಜದೆ ಸ್ತ್ರ್ರೀ,ಪುರುಷರ್ಕಳೊಳ್,ಭೂ
    ಸಮುದ್ರದೊಳ್ ಸಂಧಿಯನೊಲ್ಡು ಗೈದಂ!!
    (ಗಂಡು ಹೆಣ್ಣಿನ ನಡುವೆ ,(ಈ ಭೂ ಸಮುದ್ರದಲ್ಲಿ ಜನರನ್ನು ಸೃಷ್ಟಿಸಲು )ಸಂಧಿಯನ್ನು ಮಾಡಿದನು,ದೇವನು)

    • ದಯವಿಟ್ಟು ಅರ್ಥ ಹಾಕಿ ಎಲ್ಲದಕ್ಕೂ. ಕುಮುದಭವ ಅಲ್ಲವೇ? ಕುಮುದ್ಭವ ಅಂದರೇನು?

      • ಹಾಗಾದರೆ ತಪ್ಪೇ ಆಯಿತು 🙂 ಸರಿ ಪಡಿಸಿದ್ದೇನೆ.
        ಸುಮೋದ್ಭವ ಎಂದರೆ ಆಗಬಹುದೆಂಬ ದೃಷ್ಠಿಯಿಂದ.

        • ಸುಮೋದ್ಭವ ಸರಿಹೋಯಿತು, ಆದರೆ ದೃಷ್ಟಿಗೆ ದೃಷ್ಟಿ ತಾಗಿತೇನೋ 🙂

  2. ಸಮೇಳಗೈದಂತರೆ! ಜೀವಜೀವಂ,
    ವಿಮುಕ್ತಿಗೆಂದೊಂಟಿಯ ಜೀವನಂ ತಾಂ
    ಸುಮಾಂಗಿಯಾದೀ ನದಿಯನ್ನೆ ದೇವಂ
    ಸಮುದ್ರದೊಳ್ ಸಂಧಿಯನೊಲ್ಡು ಗೈದಂ!
    (ಜೀವ ಜೀವವನ್ನು ಒಂದುಗೂಡಿಸಿದಂತೇ,ಒಂಟಿಜೀವನದ ಮುಕ್ತಿಗಾಗಿ, ಸುಮದಂತ ಕೋಮಲವಾದ ನದಿಯನ್ನು ಸಮುದ್ರದೊಂದಿಗೆ ಸೇರಿಸಿದ)

  3. ಸಮರ್ಪಿಸಲ್ ಸಂಧ್ಯೆಯ ರಾಗಮಂ ತಾಂ
    ಸಮಸ್ತ ಭೂರಾಶಿಯದಾಶಿಸಿರ್ಪಾ;
    ನಿಮಿತ್ತಮಾತ್ರಂ ದಿಟಮಾಗೆ ಸೂರ್ಯಂ
    ಸಮುದ್ರದೊಳ್ ಸಂಧಿಯನೊಲ್ಡು ಗೈದಂ!
    (ಸಮಸ್ತ ಭೂರಾಶಿಗೆ ಸಂಧ್ಯಾರಾಗವನ್ನು ಸಮರ್ಪಿಸಲೋ ಎಂಬತೇ ಸೂರ್ಯನು ..)

  4. ದಯವಿಟ್ಟು ಸಮಸ್ಯೆಯ ಸಾಲಿನ ಅರ್ಥವೇನೆಂದು ತಿಳಿಸುವಿರಾ ?ಒಲ್ದು ಎಂಬುದರ ಅರ್ಥ ಸ್ಪಷ್ಟವಾಗಲಿಲ್ಲ 🙁

    • ಸಮುದ್ರದ ಜೊತೆ ಸಂಧಿ ಮಾಡಿಕೊಂಡ, / ಸಮುದ್ರದಲ್ಲಿ ಮನೆ ಮಾಡಿಕೊಂಡ, ಅವಕಾಶ ಮಾಡಿಕೊಂಡ.
      ಒಲ್ದು, ಒಲಿದು, ಪ್ರೀತಿಯಿಂದ

  5. ಮೊನ್ನಿನ ಗೋಷ್ಠಿಯಲ್ಲಿ ನನ್ನ ಪರಿಹಾರ,

    ಅಮೇಯದುಗ್ಧಾಂಬುಧಿಯಲ್ಲಿ ವಾಣಿ
    ಪ್ರಮೋದಮಂ ನೀಳ್ವಳೆನಲ್ ಕವೀಂದ್ರಂ
    ಕ್ರಮಾಗತಛ್ಛಂದದೊಳಂತು ಸದ್ವಾಕ್-
    ಸಮುದ್ರದೊಳ್ ಸಂಧಿಯನೊಲ್ದು ಗೈದಂ

    ಕ್ಷೀರಸಾಗರದಲ್ಲಿರುವ ವಾಣಿ, (ಅವಳ ಹತ್ತಿರ ಹೋದರೆ) ತನಗೆ ಸಂತೋಷವನ್ನು ಕೊಡುತ್ತಾಳೆಂದು ಕವಿವರನೊಬ್ಬ ಕ್ರಮಾಗತವಾದ ಛಂದಸ್ಸಿನಿಂದ (ಅಥವಾ ದಾರಿಯಿಂದ) ವಾಕ್ಸಮುದ್ರದ ಜೊತೆ ಸಂಧಿ ಮಾಡಿಕೊಂಡ (ಒಂದು ಕಾವ್ಯವನ್ನು ಬರೆದ).

    • ಚೆನ್ನಾಗಿದೆ ನೀಲಕಂಠರೆ. ಆದರೆ ಮೊದಲನೆಯ ಪಾದದಲ್ಲಿ ಸವರಣೆ ಬೇಕಾಗಬಹುದು. “ಅಮೇಯದುಗ್ಧಾಂಬುಧಿಯೊಳ್ ……….” ಎಂದು ಪ್ರತ್ಯಯವನ್ನು ಹಳಗನ್ನಡವಾಗಿಸಿ ಮುಂದಿನದನ್ನು ಸವರಬಹುದು.

      • ಅದರ ಬಗ್ಗೆ ಚರ್ಚೆಯೂ ಆಯಿತು ಗೋಷ್ಠಿಯಲ್ಲಿ. ಅಲ್ಲಿ ಎಂಬ ಪ್ರತ್ಯಯವೂ ಹಳಗನ್ನಡದ ಸಾಧುರೂಪವೇ ಅಂತೆ. ಗಣೇಶ ಸರ್ ತಿಳಿಸಿದರು. ಪಂಪಾದಿಗಳು ಬಳಸಿದ್ದಾರಲ್ಲ. 🙂

        • ಮಾಹಿತಿಗಾಗಿ ಧನ್ಯವಾದಗಳು.

  6. ತನ್ನ ತಾಯಿಯನ್ನು ಕಳೆದುಕೊಂಡ ಬಾಲಕನೊಬ್ಬ ತಾರಾ ಸಮುದ್ರದಲ್ಲಿ ಅವಳನ್ನು ಕಾಣುವ ಬಗ್ಗೆ ಬರೆಯಲು ಯತ್ನಿಸಿದ್ದೇನೆ. ಹಳೆಗನ್ನಡ ನನಗೆ ಇನ್ನೂ ಸರಿಯಾಗಿ ಬಾರದ ಕಾರಣಬಹಳಷ್ಟು ತಪ್ಪುಗಳಾಗಿರುವ ಸಾಧ್ಯತೆಗಳಿವೆ. ದಯವಿಟ್ಟು ತಿಳಿಸಿ, ತಿದ್ದಿ.

    ಕುಮಾರನಿಂ ತಾಯಿಯು ದೂರವಾಗಲ್
    ವಿಮಾನದೊಳ್ ಮೇಲಕೆ ಪೋದಳೆನ್ನಲ್
    ಸ್ವಮಾತೆಯಂ ಕಾಣುತಲೊಮ್ಮೆ ತಾರಾ-
    -ಸಮುದ್ರದೊಳ್ ಸಂಧಿಯನೊಲ್ದು ಗೈದಂ

    • ಚೆನ್ನಾಗಿದೆ, ಒಳ್ಳೆಯ ಕಲ್ಪನೆ. ಅರ್ಥಸ್ಪಷ್ಟತೆಗಾಗಿ ಸ್ವಮಾತೆಗೆಂದಕ್ಷಿಯಿನೊಮ್ಮೆ ತಾರಾ-
      ……
      ಎಂದು ಮಾಡಬಹುದು, ಕಣ್ಣಿಂದ ಆಕಾಶದೆಡೆಯಲ್ಲಿ ಸಂಧಿ ಮಾಡಿದ ಎಂದು.

      • ಧನ್ಯವಾದಗಳು:) ನಿಮ್ಮ ಸಲಹೆಯಂತೆ ತಿದ್ದಿದ ಪದ್ಯ ಇಲ್ಲಿದೆ.

        ಕುಮಾರನಿಂ ತಾಯಿಯು ದೂರವಾಗಲ್
        ವಿಮಾನದೊಳ್ ಮೇಲಕೆ ಪೋದಳೆನ್ನಲ್
        ಸ್ವಮಾತೆಗೆಂದಕ್ಷಿಯಿನೊಮ್ಮೆ ತಾರಾ-
        -ಸಮುದ್ರದೊಳ್ ಸಂಧಿಯನೊಲ್ದು ಗೈದಂ

  7. ಪ್ರಮಾಣವಂ ಮೀರದ ಚಾಲಕಂ ತಾ-
    ನಮಾಯಕಂ ಸಂಚರಕೊಂಡುದಾಗಲ್
    ಪ್ರಮಾದಮೆತ್ತಲ್ಕೊಡನಂ ಗಡಾ ಹಾ-
    ಸ “ಮುದ್ರ”ದೊಳ್ ಸಂಧಿಯನೊಲ್ದುಗೈದಂ !!

    “ನಕ್ಕರೆ ಜಗಳವೆ ಇಲ್ಲ” – ಹೌದೋ? ಅಲ್ಲವೋ ?!!

    • ಒಳ್ಳೆ ಕಲ್ಪನೆ ಮೇಡಮ್. ಆದರೆ ಅದು ಹಾಸಮುದ್ರೆ, ಮುದ್ರ ಅಲ್ಲ. ಹೀಗಾಗಿ ಇಲ್ಲಿ ಅನ್ವಯ ತಪ್ಪುತ್ತದೆ. 🙂

      • ಧನ್ಯವಾದಗಳು ನೀಲಕಂಠ, ಸ್ವಾನುಭವದ ಪದ್ಯ!! ಪತ್ರ / ಪತ್ರೆ ಥರ ಮುದ್ರ / ಮುದ್ರೆ ಸರಿಯಿರಬಹುದೆಂದು ಭಾವಿಸಿದ್ದೆ.

  8. ಕುಮಾರರಂ ಪೊಯ್ಯಲಶಕ್ಯನಿರ್ದುಮ್ (ಮಾನಸಿಕವಾಗಿ )
    ವಿಮುಕ್ತನಾಗಲ್ಕೆ ಭವಾಬ್ಧಿಯಿಂದಂ /
    ಚಮೂಪನಾಗಿರ್ದ ನದೀಜ, ಸೇನಾ
    ಸಮುದ್ರದೊಳ್ ಸಂಧಿಯನೊಲ್ದು ಗಯ್ದಂ //

    ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ

    • ದಯವಿಟ್ಟು ಅರ್ಥ / ತಾತ್ಪರ್ಯ ಕೊಡಿ.

      • ಹುಡುಗರನ್ನು (ಪಾಂಡವರನ್ನು ) ಕೊಳ್ಳಲು ಶಕ್ತನಿಲ್ಲದಿದ್ದರೂ ಭವಬಂಧನದಿಂದ ಮುಲ್ತಾನಾಗಲು ಭೀಷ್ಮನು ಸೇನಾ ಸಾಗರದಲ್ಲಿ ಪ್ರೀತಿಯಿಂದ ಸ್ಥಿತನಾದನು

        • ಟೈಪೊಕ್ಕಾಗಿ ಕ್ಷಮೆಯಿರಲಿ -ಕೊಳ್ಳಲು =ಕೊಲ್ಲಲು , ಮುಲ್ತಾನಾಗಲು =ಮುಕ್ತನಾಗಲು _/\_

  9. ವಿಮೋಚಿಸಲ್ ಸೀತೆಯನೊಂದೆ ರಾಮಂ,
    ಸಮೂಹದಿಂ ಸಂದಿರೆ ವಾನರರ್ಕಳ್,|
    ಸಮೀರಜಂ ನಿರ್ಮಿಸೆ, ಸೇತುವಿಂದಂ
    ಸಮುದ್ರದೊಳ್ ಸಂಧಿಯನೊಲ್ದು ಗೆಯ್ದಂ ||

    ( ರಾಮನು ಸೀತೆಯನ್ನು ವಿಮೋಚಿಸಿ ಹೊಂದಲೆಂದು ,ಸಮೂಹದಿಂದ ಸಂದ ವಾನರರೊಡನೆ ಸೇರಿ ನಿರ್ಮಿಸಿದ ಸೇತುವೆಯಿಂದ ಆಂಜನೇಯನು ಸಮುದ್ರದಲ್ಲಿ ಸಂಧಿಯನ್ನು ಒಲವಿನಿಂದ ಮಾಡಿದನು )

    • ಸರಳವಾದ ಸುಂದರ ಪರಿಹಾರ. ಹೊಳೆದೇ ಇರಲಿಲ್ಲ. ಬಹುಕಾಲದ ಮೇಲೆ ನಿಮ್ಮ ಪದ್ಯವನ್ನು ನೋಡಿ ಸಂತೋಷವಾಯಿತು 🙂

      • ಬಹುಕಾಲದ ಬಳಿಕ ನಾನು ಬರೆದ ಪದ್ಯವನ್ನು ಮೆಚ್ಚಿಕೊಂಡಿರುವುದಕ್ಕೆ ತುಂಬ ಧನ್ಯವಾದಗಳು ನೀಲಕಂಠರೆ. 🙂

        • ಬಹುಕಾಲದ ಬಳಿಕ ಅವರು ಒಳ್ಳೆಯ ಪದ್ಯವನ್ನು ರಚಿಸಿದುದಕ್ಕಾಗಿ ಸಂದ ಅಭಿನಂದನೆಯಲ್ಲವೆ ಅದು ನೀಲಕಂಠ 😉

          • ಬಹುಕಾಲದ ಬಳಿಕ ನಾನು ಅವರ ಪದ್ಯವನ್ನು ಮೆಚ್ಚಿದ್ದು!!! 😉

        • ನೀಲಕಂಠರೆ , ಪ್ರಸಾದರ ಬರವಣಿಗೆಯಲ್ಲಿ ಟಂಕನದೋಷಗಳು ಇದ್ದೇ ಇರುತ್ತವೆ. ನೀವು ಚಿಂತಿಸದಿರಿ. 🙂

  10. ಸಮಾನಧರ್ಮಂಗಳಿರುತ್ತೆ ಸಂತೋ-
    ಷಮಾಗಿ,ರಕ್ತಂಗೊಳೆ ಚಾರುಶೀಲಂ, |
    ಪ್ರಮುಗ್ಧೆಯಂ ಕರ್ಷಿಸಿ,ಪೆಣ್ಣ ಸಚ್ಚಿ-
    ತ್ಸಮುದ್ರದೊಳ್ ಸಂಧಿಯನೊಲ್ದು ಗೆಯ್ದಂ ||

  11. ಎಲ್ಲಾ ಮಾನ್ಯ ಏವಂ ಗಣ್ಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.

    ನನ್ನ ಮಾತೃಭಾಷೆ ಕನ್ನಡವಲ್ಲ.ನನಗೆ ಹಳೇಗನ್ನಡ ‘ಚ’ಕಾರನೂ ಬರುವುದಿಲ್ಲ.
    ಹೀಗಾಗಿ, ನಿಮ್ಮ ಸಮಸ್ಯೆ ಪೂರಣವನ್ನು ಬಂದು ಬರದ ಸಂಸ್ಕೃತ ದಲ್ಲಿ ಆದಷ್ತು ನೀವು ಕೊಟ್ಟ ಸಮಸ್ಯೆಗೆ ಹೊಂದು ಕೊಳ್ಲುವಂತೆ ಪೂರೈಸಿದ್ದೀನಿ.

    ಮಾನ್ಯರು ತಿದ್ದಿ ನನಗೆ ಸರಿ ದಾರಿ ತೋರ್ಸುವರೆಂದು ಹಾರೈಸ್ತೀನಿ.

    ನಿಮ್ಮ ಮಾರ್ಗದರ್ಶನಕ್ಕೆ ನಾ ಚಿರ ಋಣಿ.
    ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ವಾಸ.

    ವಿಮುಂಚಿತುಂ ಪತ್ನಿ ವಿಯೋಗ ದುಃಖಾತ್
    ಸಮೇಪ್ಸಿತಂ ವಾಲಿ ಸಹೋದರಂ ಪ್ರಾ
    ಪ್ಯ, ಮುಕ್ಷಿತುಂ ಲಂಕ ಗತಿತ್ವ ಸೀತಾಂ
    ಸಮೀಕೃತಾ ಸಂಧಿ ಸಮುದ್ರ ರಾಜಾತ್

    • ಸ್ವಾಗತ! ತಮ್ಮ ಪ್ರಯತ್ನ ಸರ್ವಥಾ ಸ್ತುತ್ಯ. ಆದರೆ ಸಂಸ್ಕೃತ ವ್ಯಾಕರಣದೋಷಗಳನ್ನು ತಾವು ತುಂಬ ತುಂಬ ತಿದ್ದಿಕೊಳ್ಳಬೇಕು. ಅದಲ್ಲದೇ ಸಂಸ್ಕೃತದಲ್ಲಿ ಕವನಿಸುವಾಗ ಅದರಲ್ಲಿಯ ಕೆಲವು ವಿಶೇಷ ಛಂದೋನಿಯಮಗಳನ್ನು ಪಾಲಿಸಬೇಕು, ಉದಾ. ಯತಿಯ ಬಗ್ಗೆ. ಅಷ್ಟೂ ಅಲ್ಲದೇ ಕನ್ನಡ ಸಂಸ್ಕೃತ ಪ್ರತ್ಯಯಗಳನ್ನು ಬೆರೆಸಿ ವಿಚಿತ್ರವಾಗಿಸಿದ್ದೀರಿ. ದಯವಿಟ್ಟು ಇವೆಲ್ಲಕ್ಕೆ ಗಮನ ಕೊಟ್ಟು ಮುಂದುವರಿಯಿರಿ.

    • ರೆಡ್ಡಿಯವರಿಗೆ ಪದ್ಯಪಾನಕ್ಕೆ ಸ್ವಾಗತ. ತಪ್ಪುಗಳನ್ನು ತಿದ್ದಿಕೊಂಡುನಡೆಯುವುದೇ ಸರಿಯಾದ ಕಲಿಕೆಯ ಮಾರ್ಗ. ಬಿಡದೆ ಮುಂದುವರಿಸಿ.

  12. ವಿಮೋಹದಿಂ ಪತ್ನಿ ವಿಯೋಗ ಪೂರ್ತೀ
    ಸಮುದ್ರದಿಂ ಛಿಂಧಿಸಲೆಂದು ಖೇದಂ
    ಸಮುದ್ಯದಿಂ ಲಂಕ ತಟೀ ಗಮಯಂತಂ
    ಸಮುದ್ರದೊಳ್ ಸಂಧಿಯ ನೊಲ್ದು ಗೈದಂ

    • ಹೀಗೊಂದು ಸವರಣೆ:
      ವಿಮೋಹಿತಂ ಪತ್ನಿವಿಯೋಗದಿಂ ತಾಂ
      ಸಮೀಪಿಸುತ್ತುಂ ಕಪಿರಾಜನನ್ನುಂ (ಸುಗ್ರೀವ)|
      ಸಮಾಗಮಕ್ಕೆನ್ನುತೆ ಸೀತೆಯಾಣ್ಮಂ
      ಸಮುದ್ರದೊಳ್ ಸಂಧಿಯನೊಲ್ದು ಗೈದಂ||

  13. ಉದ್ರ = Otter (ನೀರು ಬೆಕ್ಕು). It is an amphibian that lives on land and forages in rivers and oceans.
    (Living)ಸಮಾಜಮೆಲ್ಲಂ ನೆಲನೊಳ್ ಗಡೆಂದುಂ
    (To collect)ಜಮಾಯಿಸಲ್ಕಾದುದು ಮಾತ್ರಮುಂ ಮಾಂ-|
    ಸಂ ’ಉದ್ರ’ದೊಳ್(ಉದ್ರವೆಂಬ ಪ್ರಾಣಿಜಾತಿಯೊಳ್) ಸಂಧಿಯನೊಲ್ದು ಗೈದಂ-
    ತೆ ಮೇಣ್ ನದೀ-ವಾರ್ಧಿಯೊಳೆಂದುಮೆಂದುಂ||

    • ಆಹಾ, ಇಷ್ಟು ದಿನ ತಮ್ಮಿಂದ ಪರಿಹಾರ ಸಲ್ಲದೇ ಇದ್ದಾಗಲೇ ಅಂದುಕೊಂಡೆ, ಏನೋ ದೊಡ್ಡ ಸಂಶೋಧನಾಯಜ್ಞ ನಡೆದಿದೆ ಅಂತ 🙂

      • ಇಲ್ಲ, ಈ ಪರಿಹಾರ ಅಂದೇ ಹೊಳೆದಿತ್ತು. ನಿಮ್ಮಂಥವರು ಇಂಥದ್ದನ್ನೇನಾದರೂ ಹಾಕುತ್ತಾರೆಯೇ ನೋಡೋಣ, ನನ್ನದನ್ನು ಕೊನೆಯದಾಗಿ ಮೊಳಗಿಸೋಣ ಎಂದು ಕಾದಿದ್ದೆ. ನಿರೀಕ್ಷಣವು ವಿಫಲವಾಯಿತು! ನನ್ನದು ನಾಯಿಪಾಡು ಎಂದು ಪರೋಕ್ಷವಾಗಿ ಪಲುಕಿದ್ದೀರೇಕೆ? ನನ್ನದು ಸಂಶೋಧ’ನಾಯ’ಜ್ಞವೋ ಸಂಶೋಧ’ನಯ’ಜ್ಞವೆಂಬ ’ನಯ’ವೋ? ಹ್ಹಹ್ಹ. ಧನ್ಯವಾದಗಳು.

        • Hahhaa.. ಶೋಧನೆ ಎಂಬ ಪದ ಬಳಕೆಯಲ್ಲಿದ್ದುದರಿಂದ ಮೂಲಪದ ಶೋಧನಾ ಎಂದುಕೊಂಡಿದ್ದೆ. ಮನಗಾಣಿಸಿದ್ದಕ್ಕೆ ವಂದನೆಗಳು!

  14. ಸಮಂಜಸಂ ಕಾಣ್ ನದಿಪಾತ್ರಮೆಲ್ಲo
    ಸಮಾಗಮಂಗೊಂಡಿರೆ ಕೊಲ್ಲಿಯೊಳ್ ತಾಂ
    ಸಮುನ್ನತರ್ ನರ್ಮದೆ ಸಿಂಧುಗಳ್ ಮೇಣ್
    ಸಮುದ್ರದೊಳ್ ಸಂಧಿಯನೊಲ್ದು ಗೈದರ್ !!

    ನದಿಗಳೆಲ್ಲವೂ (ಬಂಗಾಳ)ಕೊಲ್ಲಿ ಸೇರಿರರಲು, ನರ್ಮದ & ಸಿಂಧು ನದಿಗಳು ಮಾತ್ರ (ಅರಬ್ಬೀ)ಸಮುದ್ರ ಸೇರಿವೆಯಲ್ಲವೇ ?!!

    • ಅದು ಕೇವಲ ಕೊಲ್ಲಿ, ಇದು ಸಮುದ್ರವೆಂಬ ಭೇದವನ್ನು ಗಮನಿಸಿಕೊಂಡಿರುವುದು ಚೆನ್ನಾಗಿದೆ.

    • ಆಹಾ, ಒಳ್ಳೆಯ ಸೂಕ್ಷ್ಮವಾದ ನೋಟ. ಚೆನ್ನಾಗಿದೆ. ನದೀಪಾತ್ರ ಆಗಬೇಕು. ನದಿಗಳ್ ಗಡೆಲ್ಲರ್ ಅಂತೇನಾದರೂ ಮಾಡಬಹುದು.

    • ಧನ್ಯವಾದಗಳು ಪ್ರಸಾದ್ ಸರ್, ನೀಲಕಂಠ
      ತಿದ್ದಿದ ಪದ್ಯ :

      ಸಮಂಜಸಂ ಕಾಣ್ ನದಿಗಳ್ ಗಡೆಲ್ಲರ್
      ಸಮಾಗಮಂಗೊಂಡಿರೆ ಕೊಲ್ಲಿಯೊಳ್ ತಾಂ
      ಸಮುನ್ನತರ್ ನರ್ಮದೆ ಸಿಂಧುಗಳ್ ಮೇಣ್
      ಸಮುದ್ರದೊಳ್ ಸಂಧಿಯನೊಲ್ದು ಗೈದರ್ !!

  15. ಅಮಾನುಷಕ್ಷಾತ್ರಕುಲಾಂತ್ಯದಿಂ ಕೊಂ-
    ಡುಮುರ್ವಿಯಂ ಧಾರೆಗುಡುತ್ತೆ ವಿಪ್ರ-
    ರ್ಗಮಂತುಮಾ ಭಾರ್ಗವರಾಮನಾಗಳ್
    ಸಮುದ್ರದೊಳ್ ಸಂಧಿಯನೊಲ್ದು ಗೈದಂ

    ಪರಶುರಾಮ ಕ್ಷತ್ರಿಯರಿಂದ ಗೆದ್ದುಕೊಂಡರೂ ಭೂಮಿಯನ್ನೆಲ್ಲ ವಿಪ್ರರಿಗೆ ದಾನಮಾಡಿ ಸಮುದ್ರದಲ್ಲಿ ಜಾಗ ಮಾಡಿಕೊಂಡ.

  16. ಅಮರ್ದುವಂ ಪೀರಮರರ್ಗಳೆಂತೋ!
    ಸಮುದ್ರಕುಂದಂ ಪ್ರಕಟಂಗೊಳುತ್ತುಂ;
    ಅಮರ್ಚಿಸಿರ್ದ ಧ್ರುವನಂತು ತಾರಾ
    ಸಮುದ್ರದೊಳ್ ಸಂಧಿಯನೊಲ್ದು ಗೆಯ್ದಂ.

    ಅಮೃತವನ್ನು ಹೀರಿ ಅಮರರಾದವರು ಎಷ್ಟೋ ಮಂದಿ. ಆದರೆ ಧ್ರುವರಾಯನು ಅಂಥವರ ಸಾಲಿಗೆ ಸೇರಲು ತಪಸ್ಸು ಮಾಡಿ, ಮುದ್ರೆಗಳೊಡನೆ ಪ್ರಕಟಗೊಂಡ ವಿಷ್ಣುವನ್ನು ಕೋರಿ ತಾರಾಸಮುದ್ರದಲ್ಲಿ ತನ್ನ ಸ್ಥಾನವನ್ನು ನಿಶ್ಚಯಿಸಿಕೊಂಡನು.

  17. ವಿನೋದವಾಗಿ…
    ಸಮಾನ ಸಾಲಾವಳಿ ದಕ್ಕಿರಲ್ಕಂ-
    ತು ಮಾಯಸಂದ್ರಕ್ಕತಿ ಹತ್ತಿರಂ ಮೇಣ್
    ಸಮಸ್ತ ಸಂಬಂಧಿಕರೊಟ್ಟಿಗಂ ರಾಮ್-
    ಸಮುದ್ರದೊಳ್ ಸಂಧಿಯನೊಲ್ದುಗೈಯ್ದಂ ।।

    “ಮಾಯಸಂದ್ರ”ದ ಹತ್ತಿರದ ಹೆಣ್ಣು – “ರಾಂಸಮುದ್ರ”ದಲ್ಲಿ(ಗಂಡಿನ ಊರು) ಮಾತುಕತೆ !!

    • Hahhaa

    • ರಾಂಸಮುದ್ರವು ಗಂಡಿನ ಊರು ಎಂದು ಹೇಳಿ, ಆ ಗಂಡಿನಲ್ಲಿ ’ಸಂಧಿಯನೊಲ್ದುಗೈಯ್ದಂ’ (ಗೈದಳ್ ಅಲ್ಲ!) ಎಂದರೆ, ಸಲಿಂಗಿಗಳ ವಿವಾಹ! ಇತಿಹಾಸವು ಈವರೆಗೆ ಈ ತತ್ಥ್ಯಕ್ಕೆ ವಿಮುಖವಾಗಿದ್ದುದರಿಂದ ಆದ ಅನಾಹುತಗಳನ್ನು ಗಮನಿಸಿದರೆ, ಇದು ಸ್ವಾಗತಾರ್ಹವೇ.

      • :))

      • “Google Map” referಮಾಡಬಹುದೇನೋ ಅಂತ ಅಂದುಕೊಂಡಿದ್ದೆ. ಬೇರೆ Sightನಲ್ಲೇ ನೋಡಿದ್ದೀರಿ, ಇದೊಳ್ಳೆ “ಅರಿ ಸಮಾಸ”ವಾಯಿತಲ್ಲ ನೀಲ ಕಂಠ !!

        • ’ಅರಿ’ ’ಸಮಾಸ’ & ’ನೀಲ’ ’ಕಂಠ’ ಎಂದು ವಿವಿಕ್ತವಾಗಿ ಬರೆದಿರುವುದರಿಂದ ಸಮಾಸವೇ ಆಗಿಲ್ಲವಲ್ಲ!

          • ಇದೇನು ನೀವಿಬ್ಬರೂ ನನ್ನ ಕಂಠಕ್ಕೆ ಕೈಹಾಕಿ ಗಲಾಟೆ ನಡೆಸಿದ್ದೀರಾ!

      • ಇಲ್ಲ ಪ್ರಸಾದ್ ಸರ್, ವೈರತ್ವವೇನು ಇಲ್ಲ. ಮದುವೆ ಮಾತುಕತೆ ಮುಗಿದಿದೆ. ರಾಂಸಮುದ್ರದಲ್ಲೇ ಮದುವೆ, ಇಬ್ಬರೂ ಬರುವಿರಂತೆ !!

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)