Jan 232017
 

  83 Responses to “ಪದ್ಯಸಪ್ತಾಹ ೨೩೯: ಚಿತ್ರಕ್ಕೆ ಪದ್ಯ”

  1. ಗೋವರ್ಧನನಂ ಪಿಡಿಯುತೆ
    ಗೋವಳರಂ ಕಾಯ್ದವಂಗೆ ಪಿಡಿದಿರೆ ಕೊಡೆಯಂ
    ನೋವಂ ಕಳೆಯುತೆ ತನ್ನನೆ
    ಕಾವನಿವನದಾರೆನ್ನುತೆ ಕೃಷ್ಣಂ ನೋಳ್ಪಂ

    • ಚೆನ್ನಾಗಿದೆ ಅನಂತರೆ .

    • ಚೆನ್ನಾಗಿದೆ. (ಗೋವರ್ಧನವಂ. ನಾಲ್ಕನೆಯ ಪಾದದ ಮಧ್ಯಗಣ – ರೆನುತ್ತೆ).

      • ಧನ್ಯವಾದಗಳು ಸರ್_/_..ತಿದ್ದಿದ ಪದ್ಯ ಇಲ್ಲಿದೆ

        ಗೋವರ್ಧನಮಂ ಪಿಡಿಯುತೆ
        ಗೋವಳರಂ ಕಾಯ್ದವಂಗೆ ಪಿಡಿದಿರೆ ಕೊಡೆಯಂ
        ನೋವಂ ಕಳೆಯುತೆ ತನ್ನನೆ
        ಕಾವನಿವನದಾರೆನುತ್ತೆ ಕೃಷ್ಣಂ ನೋಳ್ಪಂ

    • ಚೆನ್ನಾಗಿದೆ. ಗೋವರ್ಧನಮಂ

  2. ಎಲೆಯೊ , ಹೂವೋ ,ಹಣ್ಣು ,ನೀರೋ
    ಸಲಿಸಿ ಮನದೊಳು ವಿಮಲನಾರೋ
    ಸಲುವೆ ನಾನಾ ಸರಳ ಭಕ್ತಿಗೆ ಸಗುಣ ರೂಪದೊಳು
    ಎಳೆಯ ಮಗುವಿನ ನಿಷ್ಕಳಂಕದ
    ಚೆಲುವ ಛತ್ರಿಯ ತೆರದಿ ಮನವದು
    ನಿಲಲು ಯೋಗ್ಯವು ರಾಜಿಸುವೆ ನಾ ಸಕಲ ಭೋಗದೊಳು II

    ಭಗವದ್ಗೀತೆಯ ೯ ನೇ ಅಧ್ಯಾಯದ ೨೬ ನೇ ಶ್ಲೋಕವನ್ನು ನಾನು ಅರ್ಥ ಮಾಡಿಕೊಂಡಂತೆ ಚಿತ್ರದೊಂದಿಗೆ ಜೋಡಿಸಿರುವುದು . (ಪದ್ಯದಲ್ಲಿ ‘ನಾನು’ ಎನ್ನುವ ನಾನು ನಾನಲ್ಲ )

    • ಬಾಲ(ಭಾಲ)ಗೀತಾ ಚೆನ್ನಾಗಿದೆ 🙂

      • ಧನ್ಯವಾದಗಳು ನೀಲಕ೦ಠರೇ . ‘ಬಾಲಗೀತಾ ‘ ಎನ್ನುವಿರಾದರೆ ಗೀತಾಚಾರ್ಯನ ಅನುಗ್ರಹ 🙂

  3. ವಿಠ್ಠಲನು ಗರ್ಭಗುಡಿಯನ್ನು ತೊರೆದು ಬಯಲಿಗೆ ಬಂದಿದ್ದಾನೆ! ಬಾಲಸಹಜವಾದ ಚತುರ್ಮಾತ್ರಾಗಣದಲ್ಲಿ ಆ ಹುಡುಗನು ಕೇಳುತ್ತಾನೆ:
    ಗುಡಿಯಂ ತೊರೆದೊಡೆ ಮಳೆ-ಬಿಸಿಲನ್ನುಂ
    ತಡೆಯುವ ಮಾರ್ಗವು ಕೊಡೆಯಲ್ತೆ|
    ಗಡಗಡ ನಡುಗಿಪ ಛಳಿಯೊಳ್ ಕೈಯ-
    ನ್ನುಡಿಪಿನ ಜೇಬೊಳ್ ಹುಗಿಸಿಹೆಯೇಂ||

  4. ಪಟ್ಟೆ ಪೀತಾಂಬರಮನುಟ್ಟೂರೊಳೆಲ್ಲ ಬಲು
    ದಿಟ್ಟಡಿಯನಿಟ್ಟು ತಿರುತಿರುಗೆ ಪೊರಮಟ್ಟೊಡನೆ
    ಬೆಟ್ಟಮಂ ತರ ಮರೆತೆಯೇನೊ ನಿನ್ನೊಡನೆ ಅಯ್ಯೋಮಂಕು ಸಖನೆ ತಾಳೈ |
    ನೆಟ್ಟ ನಿಲುವೊಳ್ ನಿಂದ ಪೌರುಷಮನೀಗಳೇ
    ಬಿಟ್ಟು ಸನಿಹಕೆ ಬಾರ ಕೊಟ್ಟೆನಿದಿಗೋ ಕೊಡೆಯ
    ನೊಟ್ಟು ನಿಂದೊಡೆ ನನೆಯೆಮೊಬ್ಬರುಂ ಬೈಯರಾರೋಗ್ಯಮುಂ ಕೆಡದು ಕೇಳೈ ||

  5. ಜಾರುsವs ಪಂಚೆsಯನ್ನೇರಿsಸಿs ಕಟ್ಟೇನುs
    ಬಾರಯ್ಯs ತಮ್ಮಾ ಕೊಡೆಯನ್ನs – ಪಿಡಿದುs ನೀ
    ತೋರಯ್ಯs ನಿನ್ನs ಭಕುತಿsಯs

    [ ಅದು ವಿಠಲನದ್ದೇ ಕೊಡೆ ಎಂದು ತಿಳಿಯತಕ್ಕದ್ದು 🙂 ]

  6. ಬಾಲೆಯ ಮಾನವ ಕಳೆವಾ
    ಕಾಲದೆ ಕಾದಿರ್ದ ಪುಣ್ಯಕರ್ಮಗಳೀಗಳ್
    ಬಾಲನ ರೂಪಿಂ ಕಾಯ್ದುದು
    ಮೇಲಣ ಕಾರ್ಮುಗಿಲ ಕಾರ ಪಾಳ್ದೆಸೆಯಿಂದಂ

  7. ರೂಪಾಲಂಕಾರಕ್ಹಾಕಿದ್ದs ವಡ್ವೆವಸ್ತ್ರಗ್ಳೆಲ್ಲs
    ಈ ಪಾಟ್ಯಾದs ಮಳ್ಯಲ್ ನೆನ್ದುs ಹಾಳಾಗ್ಹೋಗಾಕಿಲ್ವs?
    ಪಾಪs ವಿಟ್ಲs ಚಿಂತೆs ಮಾಡ್ಕಂಡ್ ಸುಮ್ಕೆs ನಿತ್ಕಂಡವ್ನೆs
    ಸೈಪಾಯ್ತೀಗs ನಾನಿಲ್ಲಿವ್ನಿs ಕೊಡ್ಯೂ ನನ್ತಾಕೈತೆs

    [ರಾಜರತ್ನಂ ಅವರ “ಬ್ರಹ್ಮ ನಿಂಗೆ ಜೋಡುಸ್ತೀನಿ …” ಗತಿಯ, 7 ಬ್ರಹ್ಮಗಣಗಳ ಪಾದವಿರುವ, ಅಂಶ ಛಂದಸ್ಸಿನ ಪದ್ಯ]

  8. ಕೇಳು ಕೇಳೆಲೊ ಪುಂಡರೀಕನೆ
    ಇಳೆಗೆ ಬಂದಿವೆ ಮೊದಲ ಹನಿಗಳು
    ಮಳೆಯ ನೀರಲಿ ಹರಿದು ಹೋಗವೆ ನಿನ್ನ ಬಣ್ಣಗಳೂ ?
    ಅಳುವ ನಿಲ್ಲಿಸೊ ಕೃಷ್ಣ ವರ್ಣನೇ
    ಕಳಕಳಿಸುತಲಿ ನಿನ್ನ ರೀತಿಯೆ
    ಉಳಿಸಲೆಂದೇ ಓಡಿಬಂದೆನು ನಿನ್ನ ಬಣ್ಣಗಳಾ !

    • ಚೆನ್ನಾಗಿದೆ. (ಕೃಷ್ಣವರ್ಣನೆ)

    • ಚೆನ್ನಾಗಿದೆ! ಪುಂಡರೀಕ ಎಂದು ಕೃಷ್ಣನಿಗೆ / ಹರಿಗೆ ಬಳಸುತ್ತಾರೆಯೇ? ಪುಂಡರೀಕಾಕ್ಷ ಎನ್ನಬಹುದು. ಬಣ್ಣ ಪದ ಪುನರುಕ್ತಿಯಾಗಿದೆ. ಸವರಬೇಕು.

      • ‘ಬಣ್ಣ’ಪದ ಪುನರುಕ್ತಿಯಾದರೂ ಅದು ಅಲ್ಲಿ ಅನಿವಾರ್ಯವಲ್ಲವೇ ? ಅಲ್ಲಿ ಕಾಂತಿಯನು , ಹೊಳೆತವನು ಎಂದೆಲ್ಲಾ ಬಳಸಬಹುದು ( ಬಣ್ಣದಿಂದ ದೊರೆಯುವ ಪರಿಣಾಮ ) . ಆದರೆ ಅದು ‘ಬಣ್ಣಗಳ ‘ ಎಂದು ಬರೆದಷ್ಟು ಸೊಗಸಾಗಿರುತ್ತದೆಯೇ ?

        • ಅನಿವಾರ್ಯತೆಯ ಮೇಲೆ ಪುನರುಕ್ತಿಯನ್ನು ಸಾಧಿಸಲಾಗುವುದಿಲ್ಲ. ಅದು ರಸಪೋಷಕವಾಗಿದ್ದರೆ ಮಾತ್ರ ಸ್ವೀಕೃತ. ಇಲ್ಲಿ “ನಿನ್ನ ಬಣ್ಣಗಳು ಹರಿದು ಹೋಗವೇ? …ನಿನ್ನ ಬಣ್ಣಗಳನ್ನು ಉಳಿಸಬಂದೆನು” ಎಂದು ಓದಿಕೆ ಆಗುತ್ತದೆ. ಅದರ ಬದಲು…
          …..
          ….
          …… ಬಣ್ಣಗಳು
          ಉಳಿಸಲವುಗಳನೋಡಿಬಂದೆನು
          ಅಳುವ ನಿಲ್ಲಿಸೊ…

          ಹೀಗೇನಾದರೂ ಪೂರಿಸಬಹುದು.

          • ”ರಸಪೋಷಕವಾದರೆ ” ಮಾತ್ರ ಸ್ವೀಕೃತ ಅನ್ನುವುದಾದರೆ ಪದ್ಯವನ್ನು ಬಾಲಕನ ದೃಷ್ಟಿಯಿಂದ ನೋಡಬೇಕೆ ? ಕವಿಯದೃಷ್ಟಿಯಿಂದ ನೋಡಬೇಕೆ ಅಥವಾ ವಿಮರ್ಶಕನ ದೃಷ್ಟಿಯಿಂದಲೇ ? ಅಲ್ಲಿ ಆಶ್ಚರ್ಯ ಸೂಚಕ ಚಿನ್ಹೆ ಯಾಕಾಗಿ ಇದೆ ?

          • ಬಾಲಕನ ದೃಷ್ಟಿ ಏಕೆ ಬರುತ್ತದೆ ಇಲ್ಲಿ? ವಸ್ತುವಿನಲ್ಲಿ ಅವರಿವರ ದೃಷ್ಟಿ ಬಂದೀತು. ಪದ್ಯ ಮಾತ್ರ ಕವಿಯದೇ 🙂

          • ಬಾಲಕನ ದೃಷ್ಟಿ ಬಂದರೂ ಅದು ಪದ್ಯರಚನೆಯ ಕೆಲವು ಹಿತಾಸ್ಪದವಾದ ನಿಯಮಗಳಿಗೆ ಒಳಪಟ್ಟು ಬರಬೇಕಲ್ಲ 🙂

          • ನೀಲಕಂಠರೇ , ನಾನೂ ಕವಿಯ ದೃಷ್ಟಿಯಿಂದಲೇ ಅನಿವಾರ್ಯ ಅಂದಿರುವುದು . ಬಾಲಕನ ದೃಷ್ಟಿಯಿಂದಲೂ ಅದು ಸರಿಯೇ ಅನಿಸುತ್ತದೆ ನನಗೆ . ( ಚಿಕ್ಕಂದಿನಲ್ಲಿ ಬಣ್ಣದ ಪುಗ್ಗೆಗೊ , ಬಣ್ಣದ ಅಂಗಿಗೊ ರಂಪ ಮಾಡಿದ ನೆನಪು ಮಾಡಿಕೊಳ್ಳಿ. ಪ್ರತಿಯೊಂದು ವಸ್ತುವಿನಲ್ಲೂ , ಅಂಗಡಿಯಲ್ಲಿ ನಮಗೆ ಬೇಕಾದ ಬಣ್ಣಕ್ಕಾಗಿ ಈಗಳೂ ತಡಕಾಡುತ್ತೇವೆ . )
            ಆರನೆಯ ಚರಣದಲ್ಲಿ ಆಶ್ಚರ್ಯ ಸೂಚಕ ಚಿಹ್ನೆ ಹಾಕುವ ಸ್ವಾತಂತ್ರ್ಯ ಕವಿಗಷ್ಟೇ ಇದೆ . ಬಾಲಕನಿಗಿಲ್ಲವಲ್ಲಾ . ಆದ್ದರಿಂದ ಅಲ್ಲಿ ಶ್ಲೇಷಾರ್ಥ ಇದೆಯೆಂದು ನನ್ನ ಭಾವನೆ . ಬಣ್ಣ ಬಯಲಾಗುವುದು ಅನ್ನುವ ನುಡಿಗಟ್ಟು ಇದೆಯಲ್ಲವೇ- ಆ ನುಡಿಗಟ್ಟಿನ ಅರ್ಥ ಬರುವಂತೆ .. ”ಅಂದರೆ , ಜಗದ್ರಕ್ಷಕನಾದರೇನಂತೆ ? ನಿನ್ನ ಮೂರ್ತಿಯ ಬಟ್ಟೆಯ ಬಣ್ಣ ಉಳಿಸ ಬೇಕಾದರೆ ನನ್ನ೦ತ ಹುಲುಮಾನವನೇ ಆಗಬೇಕಷ್ಟೇ ” ಎನ್ನುವ ಅಣಕದ ಮಾತು ಕವಿಯಷ್ಟೇ ಹೇಳಬಲ್ಲನಲ್ಲವೇ ? ಅದು ರಸಪೋಷಕವಾಗಿಯೇ ಇದೆಯಲ್ಲವೇ ? ಇದು ನಾನು ಆ ಪದ್ಯವನ್ನು ಸಮರ್ಥಿಸುವ ಬಗೆಯಷ್ಟೇ . ನಮ್ಮಿಬ್ಬರ ಮಧ್ಯದ ಚರ್ಚೆಯಲ್ಲಿ ಮೂರನೆಯವರಾದ ಕವಿ ಬಂದು ಏನು ಹೇಳುತ್ತಾರೊ ಕಾಯೋಣ 🙂 . ನಾವು ಯಾಕೆ ತೀರ್ಮಾನಿಸಬೇಕು ?

    • ಶ್ರೀನಾಥರೇ , ಷಡ್ಪದಿಗಳಲ್ಲಿ ಪೂರ್ವಾರ್ಧದ ಮತ್ತು ಉತ್ತರಾರ್ಧದ ನಿಲುಗಡೆಯನ್ನು ಹೃಸ್ವಾಕ್ಷರವಾದರೂ ಧೀರ್ಘಾಕ್ಷರವಾಗಿ (ಗುರುವಾಗಿ )ಪರಿಗಣಿಸಲಾಗುತ್ತದೆ . ಆದ್ದರಿಂದ ಅತೀ ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ದೀರ್ಘಾಕ್ಷರ ಬಳಸಿದಾಗ ಮಾತ್ರ ಚೆನ್ನಾಗಿರುತ್ತದೆ . ಮೇಲಿನ ಪದ್ಯದಲ್ಲಿ ‘ ಬಣ್ಣಗಳ ‘ ಎನ್ನುವ ‘ಳ’ಕಾರ ಹೃಸ್ವಾಕ್ಷರವೇ ಸರಿಯೆಂದು ತೋರುತ್ತದೆ .

      ಚಿತ್ರದಲ್ಲಿ ಪ೦ಢರಪುರ ಎಂದು ಬರೆದಿರುವುದರಿಂದ ಸಂದರ್ಭಕ್ಕೆ ಉಚಿತವಾಗುವಂತೆ ಮತ್ತು ಮುಂದಿನ ಪ್ರಾಸಕ್ಕೆ ಅನುಕೂಲವಾಗುವಂತೆ ಪ೦ಢರಪುರದಿಳೆಗೆ ಎಂದು ಹೊಂದಿಸಿಕೊಳ್ಳಬಹುದು .ಚಿತ್ರದಲ್ಲಿ ಅವನು ಯಾರೆನ್ನುವುದು ವಿದಿತವಾಗುವುದರಿಂದ ಸಂಭೋದನೆ ಅನಿವಾರ್ಯವೇನಲ್ಲ . ”ಕೃಷ್ಣ ವರ್ಣನೇ” ಎನ್ನುವಲ್ಲಿ ‘ನೇ ‘ ದೀರ್ಘವಾದಾಗ ಒಂದು ಮಾತ್ರೆ ಜಾಸ್ತಿಯಾಗುತ್ತದೆ .

      • ನಿಮಗೆಲ್ಲರಿಗೂ ಅನಂತ ಧನ್ಯವಾದಗಳು.
        ನನ್ನ ಪದ್ಯವನ್ನು ಇಷ್ಟು ಚರ್ಚೆ ಮಾಡಿದ್ದಕ್ಕೆ ಸಲಹೆಗಳಿಗೆ ಋಣಿ.
        1) ಕೃಷ್ಣವರ್ಣನೆ – ಶಿಥಿಲದ್ವಿತ್ವದ ಅರಿವು ಸರಿಯಿಲ್ಲದುದರಿಂದ ನೇ ದೀರ್ಘ ಮಾಡಿದ್ದೆ. ಬದಲಿಸಿದ್ದೇನೆ.

        2) ಪುಂಡರೀಕ – ಹೇಗೋ ಕೃಷ್ಣನ ಹೆಸರೇ ಎಂದು ತಪ್ಪಾಗಿ ತಿಳಿದಿದ್ದೆ. ನಿಮ್ಮ ಮಾತಿನಿಂದ ತಿಳಿಯಿತು ಅವನ ಹೆಸರು ಪುಂಡರೀಕಾಕ್ಷನೆಂದೋ, ಪುಂಡರೀಕವರದನೆಂದೊ ಆಗಬೇಕು ಅಂತ. ಆದರೆ ಈ ಚಿಕ್ಕ ಹುಡುಗ ಸಲಿಗೆಯಿಂದ ಕೃಷ್ಣನ ಹೆಸರನ್ನು ಮೊಟಕುಗೊಳಿಸಿದ್ದಾನೆಂದು ತಿಳಿಯಬಹುದೆ? (ನನಗೆ ಪ್ರಿಯವಾದ ಹೆಸರು. ಆದ್ದರಿಂದ 🙂 . ನನ್ನ ಚಿಕ್ಕಂದಿನ ಸ್ನೇಹಿತನ ಹೆಸರು. )

        3) ಬಣ್ಣಗಳು: ಧನ್ಯನಾದೆ ನಿಮ್ಮ ಚರ್ಚೆಯಿಂದ. ಬಣ್ಣಗಳು ಹರಿದು ಹೋದಾವು, ಅದನುಳಿಸಲೆಂದು ಬಂದೆ ಎಂದು ಸಣ್ಣ ಹುಡುಗನು ಮುಗ್ಧತೆಯಿಂದ ಹೇಳಿದ ಎಂದು ಮಾತ್ರ ವಿಚಾರ ಮಾಡಿದ್ದೆ. ಸಣ್ಣ ಹುಡುಗನಾದ್ದರಿಂದ ಬಣ್ಣ ಎರಡು ಬಾರಿ ಹೇಳಬಹುದು ಅಂತ ಪದಗಳನ್ನು ಉದ್ದೇಶಪೂರ್ವಕ ಉಳಿಸಿಕೊಂಡಿದ್ದೆ. ರಸ ಮತ್ತು ಅದರ ಪೋಷಣೆ ಚರ್ಚಾಸ್ಪದ ವಿಷಯ. ಒಬ್ಬರಿಗೆ ರಸ, ಇನ್ನೊಬ್ಬರಿಗೆ ಅನ್ನಿಸದಿರಬಹುದು. (ಗೊಲ್ಗೊಥಾ ಓದಿ, ಗಣೇಶರ ವ್ಯಾಖ್ಯಾನ ಕೇಳಿ, ಕಣ್ಣಲ್ಲಿ ನೀರು ಬಂತು. ಆದರೆ ಇನ್ನೊಬ್ಬ ಕ್ರೈಸ್ತಮತದ ಸ್ನೇಹಿತನಿಗೇ ಅಷ್ಟೊಂದು ಉತ್ಕಟ ಭಾವನೆಗಳು ಬರಲಿಲ್ಲ.) ನಾನು ಮತ್ತೆ ಮತ್ತೆ ಓದಿಕೊಂಡಾಗ ಈ ಬಣ್ಣ ಶಬ್ದದ ಎರಡು ಪ್ರಯೋಗಗಳು ತುಂಬಾ ಹಿತವೆನಿಸಿದ್ದರಿಂದ ಉಳಿಸಿಕೊಂಡೆ.

        4) ಮೂರು ಆರನೇ ಸಾಲುಗಳ ಕೊನೆಯ ಗುರು ದೀರ್ಘವಾಗಬೇಕೆಂದಿಲ್ಲವೆಂದು ತಿಳಿದಿದ್ದೇನೆ. ಆದರೆ ಹಾಡಿನಂತೆ ಓದಿದಾಗ ನಿನ್ನ ಬಣ್ಣಗಳೂ ಮತ್ತು ನಿನ್ನ ಬಣ್ಣಗಳಾ ಎಂದು ಮನದಲ್ಲಿ ಎಳೆದು ಹಾಡಿದ್ದೆ. ಹಾಗಾಗಿ ಬರೆದದ್ದು ಅದನ್ನು ಪ್ರತಿನಿಧಿಸಿದೆ.

        ಮತ್ತೊಮ್ಮೆ ಹೇಳುತ್ತೇನೆ. ಸುಧೆಯೆಷ್ಟು ಮಧುರವೋ ತಿಳಿಯದು. ಆದರೆ ನಿಮ್ಮೆಲ್ಲರ ಒಡನಾಟ ಹೆಜ್ಜೇನೆ ಸೈ! (ನಾ ಕಾಣದ ಕೃಷ್ಣನ ಬಣ್ಣ ಬಯಲಾಗುವ ಅಣಕದ ಮಾತಿನ ಅರ್ಥವೂ ಇದೆ ಎಂದು ಭಾಲ ಅವರು ಕಂಡದ್ದು ಸಿಹಿಯೂಟ.)

        ಇನ್ನೊಂದು ವಿಷಯವನ್ನು ಹಂಚಿಕೊಳ್ಳಲಾಸೆ. ನನ್ನ ಹೆಂಡತಿ ಮಕ್ಕಳಿಗೂ ಸ್ವಲ್ಪ ಪದ್ಯದ ಹುಚ್ಚು ಹಿಡಿಸಿದ್ದೇನೆ. ಅವರು ನನ್ನೆರಡು ಪದ್ಯಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. (ಆ ಒಂದು ಗಂಟೆ ಅವರ ಉತ್ಸಾಹಪೂರಿತ ಚರ್ಚೆಯನ್ನು ನೋಡುವುದೇ ರಸದೌತಣ. ಟಿವಿ ಯ ಮುಂದೆಯೊ ಮೊಬೈಲ್ ಮುಂದೆಯೊ ಕಳೆಯುವ ಸಮಯವನ್ನು ಈ ರೀತಿ ಪದ್ಯಕ್ಕಾಗೆ ಬಳಸಿದರೆಂದು ತುಂಬಾ ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ.) ಅವರುಗಳ ಮೊದಲನೆಯ ಪದ್ಯಗಳು (ಅವರು ಇನ್ನೂ ಛಂದಸ್ಸು ಇತ್ಯಾದಿ ಕಲಿತಿಲ್ಲ. ಅದು ಮುಂದಿನ ಹೆಜ್ಜೆ.) :

        Colours of the dark cowherd Krishna
        ______________________
        By Inchara and Aarathi :

        Hear o hear Pundarik
        The first showers kiss the soil
        Won’t the rain wash away you colours?
        Wipe your tears, the one with the shade of storm
        Here I dash with zeal and zest
        To keep you soaked in your colours best

        ಇದು ಕೆಳಗಿರುವ ನನ್ನ ಇನ್ನೊಂದು ಪದ್ಯದ ಅನುವಾದ:

        Years yonder in thy Gokul abode
        Thundering, floundering rains poured
        To shelter the herds and herdsmen soaked
        Adorning a summit on a finger you rushed
        Why, now, in thy hamlet, stalled you stand
        Brimming and shining with colours grand
        Brolly I hasten, while draining you linger
        O Lord the jester of worldly laughter

        • ಶ್ರೀನಾಥರೇ , ನಿಮ್ಮ ಮನೆಯಲ್ಲಿ ಪ(ಮ)ದ್ಯದ ಮಾಲಕತ್ವವನ್ನು ವಹಿಸಿರುವುದಕ್ಕೆ ಅಭಿನಂದನೆಗಳು. :-).
          ನಿಮ್ಮ ಮಕ್ಕಳ ಅನುವಾದ ಪದ್ಯಗಳೂ ಚೆನ್ನಾಗಿವೆ. ವಂದನೆಗಳು .

  9. ವೈಕುಂಠದಲ್ಲನಂತನ-
    ನೇಕಫಣಾಮಂಡಲಂ ಸಿತಚ್ಛತ್ರಮೆನಲ್
    ಲೋಕದೊಳಂ ಬಾಲಿಕೆಯಿಂ-
    ತೀ ಕೊಡೆಯಂ ಮುಗ್ಧಚಿತ್ತೆ ಪಿಡಿದಿರ್ದಪಳೇ!

    • ಕರ್ಪಿನ ಕೊಡೆ …. ತಿಳಿಯಲಿಲ್ಲ

      • ಕ್ಷಮಿಸಿ. ಏಕೋ ಕೊಡೆ ಕಪ್ಪಾಗಿದೆ ಅಂತ ಭ್ರಮೆದಾಳಿ ಬರೆದಿದ್ದೆ. ತಿದ್ದಿದ್ದೇನೆ.

  10. ಲೋಕಕಲ್ಯಾಣಕ್ಕೆ ರೂವಾರಿ ನೀನಯ್ಯ
    ಈ ಕೊಡೆಯು ಈ ಚಣವು ನಿನಗೆ ತರವು|
    ಸಕಲ ಜೀವಿಗೂ ನೀನೆ ಆಸರೆಯಯ್ಯ
    ನೀ ಕೈಯ್ಯ ಬಿಡದಿರಲು ಮುಗಿವೆ ಕರವು||

    • ಚಣವು~ಚಣಕೆ. ಕರವು~ಕರವ.
      ಸಕಲ ಜೀ/ವಿಗೂ ನೀನೆ ಆ/ಸರೆಯಯ್ಯ:
      1. ಈ ಪಾದವೊಂದುಳಿದು ಇತರೆಲ್ಲ ಪಾದಗಳು ಗಜಪ್ರಾಸದವಾಗಿರುವುದರಿಂದ (ಆದ್ಯಕ್ಷರವು ದೀರ್ಘ) ಇಲ್ಲಿ ಸಿಂಹಪ್ರಾಸವಾಗಿಸಲಾಗದು (ಆದ್ಯಕ್ಷರವು ಹ್ರಸ್ವ). ಪ್ರಾಸ ಎಂಬುದು ಪ್ರತಿಪಾದದ ಮೊದಲ ಎರಡು ಅಕ್ಷರಗಳಲ್ಲೂ ಪಾಲಿತವಾಗಬೇಕು. ಆದ್ಯಕ್ಷರವು ಯಾವುದೇ ವರ್ಗದ್ದಾಗಿರಬಹುದು (ಕಚಟತಪಯ), ಆದರೆ ಏಕಸಮವಾಗಿ ಸಿಂಹ(ಕಿ,ರ,ಟು), ಗಜ(ಯೂ,ವಾ, ರೇ), ವೃಷಭ(ಸ್ವರಾನುನಾಸಿಕ-ಂ), ಅಜ(ವಿಸರ್ಗ-ಃ), ಹಯ(ಮ್ಮ,ರ್ರ,ಜ್ಜ) ಅಥವಾ ಶರಭ(ಕ್ತ,ರ್ಡ,ವ್ಯ) ಆಗಿರಬೇಕು. ಎರಡನೆಯ ಅಕ್ಷರದ ವಿಷಯ ನಿಮಗೆ ತಿಳಿದೇ ಇದೆ.
      2. ಇಲ್ಲಿ ಮಧ್ಯದ ಎರಡು ಗಣಗಳಲ್ಲಿ ಒಟ್ಟು ೮ ಮಾತ್ರೆಗಳಿವೆ. ೧೦ ಇರಬೇಕು. ಸರಿಯಾಗಿ ವಿಂಗಡಿಸುವಂತೆಯೂ ಇರಬೇಕು.
      3. ’ವಿಗೂ’ ಎಂಬಲ್ಲಿ ಲಗಾದಿಯಾಗಿದೆ. ಕೂಡದು.
      4. ’ನೀನೆ ಆ’ ಎಂಬುದನ್ನು ’ನೀನಾ’ ಎಂದು ಸಂಧಿಯಾಗಿಸಲೇಬೇಕು. ಇಲ್ಲದಿದ್ದರೆ ವಿಸಂಧಿದೋಷವೆನಿಸುತ್ತದೆ.
      ಹೀಗೊಂದು ಸವರಣೆ: ಬೇಕಯ್ಯ/ ಸಕಲ ಜೀ/ವಕು ನಿನ್ನ/ಯಾಸರೆಯು.

      • ಇಲ್ಲಿ ವಿಸಂಧಿದೋಷವಿಲ್ಲ. ನೀನು ಆಸರೆ ಎಂದಿದ್ದರೆ ನೀನಾಸರೆ ಆಗುತ್ತದೆ, ಲೋಪಸಂಧಿ. ನೀನೆ ಆಸರೆ ಎಂದಿದ್ದರೆ ನೀನೆಯಾಸರೆ (ಆಗಮಸಂಧಿ) ಆಗುತ್ತದೆ. ಯಕಾರ ವಕಾರ – ಆಗಮಸಂಧಿ ಆಗುತ್ತಿದ್ದಲ್ಲಿ ಬಿಡಿಸಿ ನೀನೆ ಆಸರೆ ಎಂದು ಬರೆಯಬಹುದು. ವಿಶೇಷವಾಗಿ ಸಂಬೋಧನೆ, ಒತ್ತಿ ಹೇಳುವಾಗ (ನೀನೇ ನೀನೆ ಇತ್ಯಾದಿ) ಬಿಡಿಸಿ ಬರೆಯುವ ರೂಢಿ ಇದೆ.

        • ಓ! ಸೂಕ್ಷ್ಮವನ್ನು ಗಮನಿಸದೆ ಹೋದೆ. ಧನ್ಯವಾದ ನೀಲಕಂಠ. ಭಾರದ್ವಾಜರೆ ಕ್ಷಮಿಸಿ.

      • ಈವರೆಗೂ ನನ್ನ ಕವನಗಳು ಯಾವುದೇ ಛಂದಸನ್ನು ಹೊಂದಿರಲಿಲ್ಲ. ಅವು ಮುಕ್ತಕಾವ್ಯಗಳಾಗಿದ್ದವು. ಪದ್ಯಪಾನದಲ್ಲಿ ಸದಸ್ಯನಾದಂದಿನಿಂದ ಛಂದೋಬದ್ಧ ಪದ್ಯವನ್ನು ರಚಿಸಲು ಉತ್ಸುಕನಾಗಿದ್ದೇನೆ. ಈಗ ತಮ್ಮೆಲ್ಲರ ಮಾರ್ಗದರ್ಶನದಲ್ಲಿ ನನ್ನ ಬಯಕೆ ಈಡೇರಲಿದೆ ಎಂದು ನಂಬಿದ್ದೇನೆ. ಧನ್ಯವಾದಗಳು.

  11. ಬಾನ ಕೊಡೆಯನ್ನು ಧರೆಗೆ ಪಿಡಿಯುತಲಿ ಕಾವನಂತೆ ನೀನು
    ಸೋನೆ ಮಳೆಯು ಬಾನಿಂದ ಸೋರುತಿರೆ ಬೆದರಿ ನಿಂತೆಯೇನು?
    ಮೀನು ನೀರಿನಲಿ ನೆನೆದರೇನದಕೆ ನೆಗಡಿ ಬರುವುದೇನು?
    ನೀನು ಬೆದರದಿರು ತಮ್ಮ ನಾನು ಹೊಸ ಕೊಡೆಯ ಪಿಡಿಯೆನೇನು?

  12. ಹಿಂದೊಂದು ದಿನವಲ್ಲಿ ನಿನ್ನ ಗೋಕುಲದಲ್ಲಿ
    ಬಂದಿತ್ತು ಭರದಲ್ಲಿ ಬಲುಭಾರಿ ಮಳೆಯು
    ಮಿಂದಿದ್ದ ಗೋಗಳನು ಗೆಳೆಯರನು ರಕ್ಷಿಸಲು
    ಬಂದಿದ್ದೆ ಬೆಟ್ಟಲ್ಲಿ ಗೋ ಬೆಟ್ಟ ಧರಿಸಿ
    ಇಂದೇಕೆ ನಿಂತೆಯೋ ಕಲ್ಲಾಗಿ ಪುರದಲ್ಲಿ
    ಹೊಂದಿರುವೆ ನೀನಿಲ್ಲಿ ನೂರೆಂಟು ಬಣ್ಣ
    ತಂದೆ ನೀ ನೆಂದಿರುವೆ ಛತ್ರಿಯಿದನೋಡೋಡಿ
    ತಂದೆ ನಾ ಜಗನ್ನಾಟಕಸೂತ್ರಧಾರಿ

    • ಗೋಬೆಟ್ಟ ಎಂಬುದು ಅರಿಸಮಾಸವಾಯಿತು. ಬಿಡಿಸಿಬರೆಯುವುದು (ಗೋ ಬೆಟ್ಟ) ಪರಿಹಾರವಲ್ಲ.

    • ಬಂದಿದ್ದೆ ಬೆಟ್ಟಲ್ಲಿ ಬೆಟ್ಟವನೆ ಧರಿಸಿ… ಇದೇ ಸೂಚ್ಯರ್ಥ ಕೊಡುತ್ತದೆ. ಅರಿಯಾದ ಗೋಬೆಟ್ಟ ಬೇಕಿಲ್ಲ 🙂 ಗೋಗಳನು ಸರಿ ಅಲ್ಲ. ಹಸುಗಳನು ಮಾಡಬಹುದು. ನೆನೆದಿರುವೆ. ಕೊನೇ ಪಾದದಲ್ಲಿ ಛಂದಸ್ಸು ತಪ್ಪಿದೆ, ಲಗಾದಿಗಣ ಬಂದಿದೆ.

      • ಧನ್ಯವಾದಗಳು. ಬದಲಿಸಿದ ಪದ್ಯ ಕೆಳಗಿದೆ:

        ಹಿಂದೊಂದು ದಿನವಲ್ಲಿ ನಿನ್ನ ಗೋಕುಲದಲ್ಲಿ
        ಬಂದಿತ್ತು ಭರದಲ್ಲಿ ಬಲುಭಾರಿ ಮಳೆಯು
        ಮಿಂದಿದ್ದ ಹಸುಗಳನು ಗೆಳೆಯರನು ರಕ್ಷಿಸಲು
        ಬಂದಿದ್ದೆ ಬೆಟ್ಟಲ್ಲಿ ಬೆಟ್ಟವನೆ ಧರಿಸಿ
        ಇಂದೇಕೆ ನಿಂತೆಯೋ ಕಲ್ಲಾಗಿ ಪುರದಲ್ಲಿ
        ಹೊಂದಿರುವೆ ನೀನಿಲ್ಲಿ ನೂರೆಂಟು ಬಣ್ಣ
        ತಂದೆ ನೀ ನೆಂದಿರುವೆ ಛತ್ರಿಯಿದನೋಡೋಡಿ
        ತಂದೆ ನಾನೆಲೆ! ಜಗನ್ನಾಟಕಸೂತ್ರಧಾರಿ

  13. ಊಹಾಪೋಹಮೆ ಬಾಲಂ-
    ಗಾ ಹರಿ ತೊರ್ಕೆವೊಡೆ ದೇಸೆವೆರುತುಂ ಬಳಿಯೊಳ್
    ಗೋಹುರದ ಹೊರಗಡೆಯೆ ನಿಜ
    ನೇಹದ ಪಾಂಗಿನೊಳು ಸಂದ “ಸೋಹಂ ಭಾವಂ” ।।

    ಗೋಪುರದ ಹೊರಗೆ ಬಾಲನಜೊತೆ ಅಂದವಾಗಿ ತೋರಿರುವ ಹರಿ – ನಾನೇ ಅವನೆನ್ನುವಂತಿರುವ ಈ “ಸೋಹಂ ಭಾವ” – ಇದೇನು ಕೇವಲ ಎಣಿಕೆಯೇ ?!!

    • ವೇದಾಂತ ನನಗೆ ಪ್ರಿಯವಾದರೂ ಏಕೋ ಅರ್ಥವಾಗಲಿಲ್ಲ ಮೇಡಮ್ 🙂

      • ಪ್ರಿಯವೂ ಆಗಿರಬೇಕು, ಅರ್ಥವೂ ಆಗಬೇಕು ಎಂದರೆ ಹೇಗೆ ನೀಲಕಂಠ?

    • ಧನ್ಯವಾದಗಳು ನೀಲಕಂಠ, ಪ್ರಸಾದ್ ಸರ್
      ಅದಕ್ಕೇ “ಊಹಾಪೋಹಮೇ?” ಎಂಬ ಪ್ರಶ್ನಾರ್ಥಕ !!
      ಮಕ್ಕಳ ಜೊತೆಯಾಟದಲ್ಲಿ (ಮಮತೆಯಲ್ಲಿ) ತಾಯೇ ಮಗುವಾಗಿ ಮಗುವೇ ತಾಯಾಗಿ – ಅನುಭವಿಸುವ ಸೋಹಂ ಭಾವ – ಚಿತ್ರದಲ್ಲಿನ ಈ ಸ್ನೇಹದಲ್ಲೂ ಇದ್ದಂತೆ ಭಾಸವಾಗಿ ಬಂದ ಕಂದಪದ್ಯ. ಅರ್ಥ ಸಾಲದಾಗಿದೆಯೇ ?

      • Ohh ಅರ್ಥವಾಯಿತು. ತುಂಬ ಚೆನ್ನಾಗಿದೆ. ನಿಜನೇಹ ಅರಿಯಾಯಿತು ಅನಸ್ತದೆ 🙂

  14. ಎನಿತುಂ ಪುರಾತನಂ ಹರಿ
    ಕನಕಾಂಬರಮುಕುಟಹಾರಕೇಯೂರಂಗಳ್
    ತೊನೆದಾಡೆ, ಭೃತ್ಯರತ್ಯಾ-
    ಧುನಿಕರ್ ಜೀನ್ಸ್ ತೊಟ್ಟು, ಭಕ್ತಿಗೇಂ ಸೀಮೆ ಕಣಾ!

    • ಎರಡುಂ ತಾನೊಂದೇ ಕಾಣ್
      ಹರಿಯುಡುಗೆಯು ಮತ್ತುಮಾ ಅಣುಗನುಟ್ಟಿಹುದುಂ|
      ಗರಿಗರಿಯದು(ಹರಿಯುಡುಗೆ)ಮೆಂದೆಂದುಂ.
      ಶರದಿಯೊಳಿದು(jeans) ನೆನೆಯದಿರ್ಪುದೊಣಗದು ಬಿಸಿಲೊಳ್||

  15. ಅಣ್ಣ, ಗುಡಿಯೊಳಗೆ ಕುಳಿತು ಕುಳಿತು ನೀ ರೋಸಿ ಹೋದೆಯೇನೊ?
    ಬಣ್ಣದುಡುಗೆಯನು ತೊಟ್ಟು ಬಯಲಿನೊಳಗಾಡ ಬರುವರೇನೊ?
    ತಣ್ಣಗಿರುವ ನೀರಲ್ಲಿ ನೆನೆಯುತಿರೆ ಮೂಗು ಜಿನುಗದೇನೊ?
    ಗೊಣ್ಣೆ ಸುರಿಸಿದೊಡೆ ದೊಣ್ಣೆ ಪಿಡಿಯುತಲಿ ಬರುವಳಮ್ಮ ಕಾಣೊ

    • ಕೊಡೆ ಎಲ್ಲಿ 🙂

      • ಕೊಡೆಯ ಪಿಡಿಯುತ ಬಾಲಕನು ಜಗ
        ದೊಡೆಯನೆನಿಸಿಹ ವಿಠಲನಿಗಿದೀ
        ನುಡಿಯ ನುಡಿದಿಹನೆಂಬ ಭಾವದಿ ಬರೆದಿಹೆನು ಗುರುವೇ 🙂

        ಕೊಡೆಯನ್ನು ಹಿಡಿಯುತ್ತಾ ಅಣ್ಣನಿಗೆ ಈ ಮಾತನ್ನು ಹೇಳಿದ ಎಂಬ ಭಾವದಲ್ಲಿ ಬರೆದದ್ದು

  16. ಮಳೆಸುರಿಸುತಿಹನು ತಾಂ ಮೇಘರಸು ಧರಣಿಗುಂ
    ತಿಳಿಯದೆಯೆ ಹೊರಬಂದ ದೇವನೀಗ
    ತಳಮಳಿಸಿ ಜಗರಕ್ಷಕಂಗಿತ್ತು ರಕ್ಷೆಯಂ
    ಬಳಲಿಕೆಯದಿಲ್ಲವೋ ಕಂದಮ್ಮಗೆ

    • ಚೆನ್ನಾಗಿದೆ. ಮೇಘರಸು ಸಾಧುವಲ್ಲ. ಮೇಘರಾಜ ಅಥವಾ ಮೇಘದರಸು ಅಥವಾ ಮಳೆಯರಸು ಮಳೆರಾಯ ಇತ್ಯಾದಿ ಮಾಡಬೇಕು. ಜಗರಕ್ಷ ಕೂಡ. ಜಗದ್ರಕ್ಷ ಆಗಬೇಕು.

      • ಆಹಾ! ನೀಲಕಂಠರೇ, ಏನಿದು!ಅರಿಯ ಭೀತಿ, ನಿಮಗೆ!!:-)(ಅರಿಸಮಾಸವೆಂದು ಕರೆಯಲಾರದಷ್ಟು!)

        • Hahhaa.. ಅಂಕಿತಾಳಿಗೆ ಅರಿಸಮಾಸದ ಪರಿಚಯ ಇದೆಯೋ ಇಲ್ಲವೋ ಎಂದು ಸಂಶಯವಾಯಿತು. ಅದಕ್ಕೇ ಹಾಗೆ ಬರೆದೆ 🙂

          • ಅರಿಯ ಅರಿವಿದೆ ಸರ್, ಆದರೂ ತಪ್ಪುಗಳು ಆಗುತ್ತಲೇ ಇವೆ.

      • ಜಗರಕ್ಷ ಎಂದರೆ ಲೋಗರ ಕಣ್ಣು ಎಂದರ್ಥವಲ್ಲವೆ 😉

  17. ಕೆಳಬಗ್ಗಿ ನೋಡಿನಿತು ಯಾರಿಹರು ಭಗವಂತ
    ಬಳಿಯಲ್ಲಿ ತಾನಿಹನು ಕಿರಿದೇವನು
    ಚೆಲುವಿಂದೆ ಬಣ್ಣದಾ ಛತ್ರವನು ಪಿಡಿದ ಮಗು
    ಬಳಲಿಕೆಯ ಮರೆಯುತ್ತ ನಿಂದಿರುವುದು

    • ಚೆನ್ನಾದ ಸರಳ ಪದ್ಯ. ಅಭಿನಂದನೆಗಳು

    • ಚೆನ್ನಾಗಿದೆ! ಸರಳವಾದ, ಮಾರ್ಮಿಕವಾದ ಪದ್ಯ 🙂 ಕಿರಿದೇವ ಅರಿ 🙂

  18. “ಪುರಜನರೆ ನಿಲ್ಲಿರೈ ಬೆದರೋಡದಿರಿ ಮಳೆಗೆ
    ಮುರವೈರಿ ಬಂದಿಹನು ಬೀದಿಯಲ್ಲಿ”
    “ಇರುಕಂದ ! ಬರರವರು ಸೌಭಾಗ್ಯವಿಲ್ಲದೆಯೆ
    ಬರಿಯ ಮೂರುತಿಯೆಂಬರೆನಗೆಲ್ಲರು”

  19. ಹರಿ ನಿನ್ನ ಬಾವನ್ನ, ಭೃಂಗಾರ, ಸಿಂಗಾರ
    ಬರುವ ಮಳೆಯಲಿ ತೊಯ್ಯಬಾರದೆಂದೆಳಸುತಾ-
    ನುರದಿ ಕೊಡೆಯಿತ್ತಳೈ ಪೆರ್ಮೆಯೀಕೆಗುಂ ನೆರೆಮಿಂದೆನೆಂದು ನಂದಸುತಗೆ
    ನರಳುತಾಂ ಸಹಕರಿಸೆ ವಂದನೆಯ ಪೇಳೆಯೇ?
    ಧರಣಿಯೊಳ್ ಭಾವನೆಯ ಪುಟ್ಟಿಸಿದೆ, ಬಿತ್ತರಿಸು
    ಪರಮಾತ್ಮ ಗರ್ವತೋರದೆಯೆ ಗೌರವಿಸದಿರಲ್ ಮನ್ನಿಪರೆ ಹರಿಭಕುತರು

    ಬಾವನ್ನ-ಶ್ರೀಗಂಧ
    ಉರದಿ-ಕೂಡಲೆ
    ಭೃಂಗಾರ- ಬಂಗಾರ

    • ಆಹಾ!!! ಏನೊಳ್ಳೆ ಕವ್ಯಾಂಶವಿರುವ ಪದ್ಯ.. ಅಭಿನಂದನೆಗಳು ಅಂಕಿತಾ!
      ಮೂರನೇ ಸಾಲಿನಲ್ಲಿ ಗಣ ಮಾತ್ರೆಗಳ ವ್ಯತ್ಯಾಸ ಆಗಿದೆ, ಲಗಾದಿಗಣ ಬಂದಿದೆ. ನಿನಗೆ ತಿದ್ದುವುದೇನೂ ಕಷ್ಟದ್ದಲ್ಲ.

      • ಧನ್ಯವಾದ ಸರ್,
        ಮೂರನೆಯ ಸಾಲನ್ನು ಈರೀತಿ ತಿದ್ದಿದ್ದೇನೆ. ಸರಿಯಾಗಿದೆಯೇ?

        ಹರಿ ನಿನ್ನ ಬಾವನ್ನ, ಭೃಂಗಾರ, ಸಿಂಗಾರ
        ಬರುವ ಮಳೆಯಲಿ ತೊಯ್ಯಬಾರದೆಂದೆಳಸುತಾ-
        ನುರದಿ ಕೊಡೆಕರುಣಿಸಿರ್ಪಳು ಪೆರ್ಮೆಯೀಕೆಗುಂ ನೆರಮೀಯೆ ಘನಚೋರಗುಂ
        ನರಳುತಾಂ ಸಹಕರಿಸೆ ವಂದನೆಯ ಪೇಳೆಯೇ?
        ಧರಣಿಯೊಳ್ ಭಾವನೆಯ ಪುಟ್ಟಿಸಿದೆ, ಬಿತ್ತರಿಸು
        ಪರಮಾತ್ಮ ಗರ್ವತೋರದೆಯೆ ಗೌರವಿಸದಿರಲ್ ಮನ್ನಿಪರೆ ಹರಿಭಕುತರು

  20. ವಿನೋದವಾಗಿ:
    (ಚಿತ್ರದಲ್ಲಿನ ಮುಗ್ಧತೆಯನ್ನ “ಕೊಡೆ”ಯಿಂದ ಮರೆಮಾಚಿ)

    ಗುಡಿಯ ಹೊರಗಡೆ ನಡೆದು ನಡುಬೀದಿಗಿಳಿದಂದು
    ಜಡಿಮಳೆಯೆ ನೆನೆದು ಪಡೆ ಪಾಡು ರಂಗಂ !
    ಕೊಡೆಯ ಹಿಡಿದಿಹನವನ “ನಾಮ”ಧರಿಸಿಹ ಪೋರ !! (“ಪಾಂಡುರಂಗ” ಎಂಬ ಹೆಸರಿನ ಹುಡುಗ)
    “ಕೊಡೆಯ-ಬಿಡೆ”ನೆನುವಾಟ ನೆನೆದು ಪದ್ಯಂ ।।

    ಕೊಡದ(ನಾಮಹಾಕಿದ) – ಭಗವಂತ / ಬಿಡದೆ(ಛತ್ರಿಹಿಡಿವ) – ಭಕ್ತ !!

  21. ಈ ತಾಣದಲ್ಲಿ ಮೊದಲ ಪ್ರಯತ್ನ :

    ಅಡಿಯಲಿ ಚೆಲ್ಲಿದ ಬಿಡಿ ಬಿಡಿ ಹೂಗಳ
    ಕೊಡೆಯಲಿ ಹರಡಿಹ ಛಾಯೆಗಳೇ
    ಹುಡುಗನ ಚೆಲ್ವಿಕೆ ಸೂಸುವ ಕಂಗಳ
    ಕಡೆದಿಹ ನೋಟದಿ ಕಾಣುವಿರೇ?

    -ಪ್ರಭು

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)